ಪಿಎಂ ಕೇರ್ಸ್ ಫಂಡ್ನ ಪ್ರಸ್ತುತ ಸ್ಥಿತಿ ಮತ್ತು ಭಾರತ ಸರ್ಕಾರದೊಂದಿಗಿನ ಸಂಬಂಧಗಳ ಬಗ್ಗೆ ವಿವರಗಳನ್ನು ಬಹಿರಂಗ ಪಡಿಸುವಂತೆ ನಿರ್ದೇಶನ ಕೋರಿ ಉನ್ನತ ನ್ಯಾಯಾಲಯಕ್ಕೆ ಸಾಮಾಜಿಕ ಕಾರ್ಯಕರ್ತ, ಮಾಜಿ ಪತ್ರಕರ್ತ ಸಾಕತ್ ಗೋಖಲೆ ಪಿಐಎಲ್ ಸಲ್ಲಿಸಿದ್ದಾರೆ.
ಅರ್ಜಿದಾರ ಸಾಕೇತ್ ಗೋಖಲೆ, ಪಿಎಂ ಕೇರ್ಸ್ ಫಂಡ್ಗಳ ಹಂಚಿಕೆ ಮತ್ತು ಕೊರೊನಾ ಪರಿಹಾರ ಮತ್ತು ಪ್ರಗತಿಯ ಅನುಮೋದಿತ ಯೋಜನೆಗಳ ಸ್ಥಿತಿಗತಿಗಳ ಬಗ್ಗೆ ವಿವರಗಳನ್ನು ನೀಡುವಂತೆ ಅವರ ಅರ್ಜಿಯಲ್ಲಿ ನಿರ್ದೇಶನ ಕೋರಿದ್ದಾರೆ.
ಪಿಎಂ ಕೇರ್ಸ್ ಫಂಡ್ ಸರ್ಕಾರೇತರ ಪಾಲುದಾರರಾಗಿದ್ದು, ಕೊರೊನಾ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಭಾರತ ಸರ್ಕಾರದೊಂದಿಗೆ ಅಗತ್ಯ ವಸ್ತುಗಳ ವಿತರಣೆ ಮತ್ತು ಸರಬರಾಜಿಗೆ ನಿಕಟ ಸಂಬಂಧ ಹೊಂದಿರುವ ನಿರ್ಧಾರಗಳು ಮತ್ತು ಯೋಜನೆಗಳಲ್ಲಿ ನಿಕಟವಾಗಿ ತೊಡಗಿಸಿಕೊಂಡಿದೆ. ಹೀಗಾಗಿ ಇದರ ಮಾಹಿತಿಯನ್ನು ಬಹಿರಂಗ ಪಡಿಸಿ ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಪಿಎಂ ಕೇರ್ಸ್, ಕಾರ್ಪೋರೇಟ್ ಜವಾಬ್ದಾರಿಯ CSR ಮತ್ತು ಖಾಸಗಿ ಲಾಬಿ: ನಾವು ತಿಳಿದುಕೊಳ್ಳಲೇಬೇಕಾದ ಸಂಗತಿಗಳಿವೆ
“PM CARES ನಿಧಿಯಿಂದಾಗುವ ಹಂಚಿಕೆಗಳ ಬಗ್ಗೆ ಸಾರ್ವಜನಿಕರು ತಿಳಿದುಕೊಳ್ಳಬೇಕೆಂದರೇ, ಅದಕ್ಕೆ ಪ್ರಧಾನ ಮಂತ್ರಿಗಳ ಕಚೇರಿ (PMO) ಹೊರಡಿಸಿದ ಹೇಳಿಕೆಗಳು ಮತ್ತು ಪತ್ರಿಕಾ ಪ್ರಕಟಣೆಗಳನ್ನು ಅವಲಂಬಿಸಬೇಕಾಗುತ್ತದೆ. ಸಾರ್ವಜನಿಕವಾಗಿ ಘೋಷಿಸಲಾದ ಹಂಚಿಕೆಗಳ ಜೊತೆಗೆ, ಇತರ ಕೊರೊನಾ ಸಂಬಂಧಿತ ವೆಚ್ಚಗಳಿಗೂ ಹಂಚಿಕೆಗಳನ್ನು ಮಾಡಲಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ” ಎಂದು ಗೋಖಲೆ ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ.
ಲಸಿಕೆಗಳ ವಿಷಯದಲ್ಲಿ, ಕೋವಿಡ್ ಲಸಿಕೆ ಅಭಿವೃದ್ಧಿಗೆ ಭಾರತ ಸರ್ಕಾರವು ಯಾವುದೇ ಹಣವನ್ನು ವಿನಿಯೋಗಿಸಿಲ್ಲ ಅಥವಾ ಖರ್ಚು ಮಾಡಿಲ್ಲ ಎಂದು ಯೂನಿಯನ್ ಆಫ್ ಇಂಡಿಯಾ (ಯುಒಐ) ಸುಪ್ರೀಂ ಕೋರ್ಟ್ಗೆ ಸಲ್ಲಿಸಿದೆ. ಹೀಗಾಗಿಯೇ ಕೊರೊನಾ ಲಸಿಕೆಗಳ ಬೆಲೆಯನ್ನು ನಿರ್ಧರಿಸುವಲ್ಲಿ ಸರ್ಕಾರಕ್ಕೆ ಯಾವುದೇ ನಿಯಂತ್ರಣವಿಲ್ಲ ಎಂದು ಗೋಖಲೆ ಹೇಳಿದ್ದಾರೆ.
“ಇನ್ನು, ಪಿಎಂ ಕೇರ್ಸ್ ಫಂಡ್ ಸ್ವತಃ ಲಸಿಕೆ ಅಭಿವೃದ್ಧಿಗೆ ಸುಮಾರು 100 ಕೋಟಿ ರೂ.ಗಳ ಹಂಚಿಕೆಯನ್ನು ಘೋಷಿಸಿದೆ. ಆದರೆ ಇದಕ್ಕೆ ಯಾವುದಾದರೂ ಹೆಚ್ಚುವರಿ ಹಣವನ್ನು ವಿನಿಯೋಗಿಸಲಾಗಿದೆಯೆ ಎಂಬುದು ಸ್ಪಷ್ಟವಾಗಿಲ್ಲ, ಯಾವ ಮಾಹಿತಿಗಾಗಿ ಸಾರ್ವಜನಿಕ ವಲಯದಲ್ಲಿ ಲಭ್ಯವಿಲ್ಲ” ಎಂದು ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ.
ಪ್ರಸ್ತುತ ಪರಿಸ್ಥಿತಿಗಳಲ್ಲಿ, ಪಿಎಂ ಕೇರ್ಸ್ ಫಂಡ್ ಕೊರೊನಾ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಮಾಡಿದ ವಿವಿಧ ಹಂಚಿಕೆಗಳು ಮತ್ತು ಯೋಜನೆಗಳ ಪ್ರಗತಿಯನ್ನು ಹೇಗೆ ಮೇಲ್ವಿಚಾರಣೆ ಮಾಡಿದೆ ಎಂಬುದರ ಕುರಿತು ಸುಪ್ರೀಂ ಕೋರ್ಟ್ಗೆ ಎಲ್ಲಾ ಮಾಹಿತಿಯನ್ನು ಲಭ್ಯವಾಗುವಂತೆ ಮಾಡುವುದು ಮುಖ್ಯ ಅರ್ಜಿಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಎರಡು ವಾರಗಳಲ್ಲಿ ಪಿಎಂ ಕೇರ್ಸ್ ವಿವರ ನೀಡಿ: ಕೇಂದ್ರಕ್ಕೆ ಬಾಂಬೆ ಹೈಕೋರ್ಟ್ ತಾಕೀತು