ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ನೀಟ್-ಸ್ನಾತಕೋತ್ತರ (ಪಿಜಿ) ವೈದ್ಯಕೀಯ ಪ್ರವೇಶ ಪರೀಕ್ಷೆ ಮುಂದೂಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ತಿಳಿಸಿದ್ದಾರೆ.
ಅಂದಾಜು 1.7 ಲಕ್ಷ ಎಂಬಿಬಿಎಸ್ ವಿದ್ಯಾರ್ಥಿಗಳು ಮತ್ತು ವೈದ್ಯರು ಈ ಪ್ರಕ್ರಿಯೆಗೆ ನೋಂದಾಯಿಸಿಕೊಖಡಿದ್ದು, ಏಪ್ರಿಲ್ 18 ರಂದು ಪರೀಕ್ಷೆ ನಿಗದಿಪಡಿಸಲಾಗಿತ್ತು. ಆದರೆ ಕೊರೊನಾ ಎರಡನೇ ಅಲೆಯ ಕಾರಣಕ್ಕೆ ಮುಂದೂಡಲಾಗಿದೆ.
“ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಈ ಹಿಂದೆ ನಿರ್ಧರಿಸಿದಂತೆ ಏಪ್ರಿಲ್ 18 ರಂದು ನಡೆಯಬೇಕಿದ್ದ ನೀಟ್-ಪಿಜಿ 2021 ಪರೀಕ್ಷೆಯನ್ನು ಮುಂದೂಡಲು ಭಾರತ ಸರ್ಕಾರ ನಿರ್ಧರಿಸಿದೆ. ಮುಂದಿನ ದಿನಾಂಕವನ್ನು ನಂತರ ನಿರ್ಧರಿಸಲಾಗುವುದು. ನಮ್ಮ ಯುವ ವೈದ್ಯಕೀಯ ವಿದ್ಯಾರ್ಥಿಗಳ ಯೋಗಕ್ಷೇಮವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ” ಎಂದು ಆರೋಗ್ಯ ಸಚಿವರು ಟ್ವೀಟ್ ಮಾಡಿದ್ದಾರೆ.
In light of the surge in #COVID19 cases,GoI has decided to postpone #NEETPG2021 exam which was earlier scheduled to be held on Apr 18
Next date to be decided laterDecision has been taken keeping wellbeing of our young medical students in mind.@PMOIndia @MoHFW_INDIA #NEETPG
— Dr Harsh Vardhan (@drharshvardhan) April 15, 2021
ಇದಕ್ಕೂ ಮುನ್ನವೇ ದೇಶಾದ್ಯಂತ ಹೊಸ ಕೋವಿಡ್ ಪ್ರಕರಣಗಳ ಹಿನ್ನೆಲೆಯಲ್ಲಿ ನೀಟ್-ಸ್ನಾತಕೋತ್ತರ (ಪಿಜಿ) ವೈದ್ಯಕೀಯ ಪ್ರವೇಶ ಪರೀಕ್ಷೆಯನ್ನು ಮುಂದೂಡಬೇಕೆಂದು ಕೋರಿ ವಿದ್ಯಾರ್ಥಿ- ವೈದ್ಯರ ಗುಂಪೊಂದು ಗುರುವಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ.
ಮೇ 4 ರಿಂದ ಪ್ರಾರಂಭವಾಗಬೇಕಿದ್ದ ಸಿಬಿಎಸ್ಇ 10 ನೇ ತರಗತಿ ಪರೀಕ್ಷೆಗಳನ್ನು ರದ್ದುಗೊಳಿಸುವ ಮತ್ತು 12 ನೇ ತರಗತಿ ಪರೀಕ್ಷೆಗಳನ್ನು ಮುಂದೂಡುವ ಕೇಂದ್ರದ ನಿರ್ಧಾರವನ್ನೂ ಅವರು ಉಲ್ಲೇಖಿಸಿದ್ದಾರೆ.
ಇಂದು ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ನೀಟ್ ಪರೀಕ್ಷೆ ಈಗ ನಡೆಸುವುದನ್ನು ತೀವ್ರವಾಗಿ ಟೀಕಿಸಿದ್ದಾರೆ. “ಕೊರೊನಾ ಎರಡನೇ ಅಲೆಯಿಂದಾಗಿ ಸಿಬಿಎಸ್ಇ ಪರೀಕ್ಷೆಗಳು ಈಗ ರದ್ದಾಗಿವೆ. ಹೆಚ್ಚುತ್ತಿರುವ ಪ್ರಕರಣಗಳು ಮತ್ತು ಸಾವು ನೋವುಗಳೊಂದಿಗೆ, ನಮ್ಮ ವೈದ್ಯರು ರೋಗದ ವಿರುದ್ಧ ತೀವ್ರವಾಗಿ ಹೋರಾಡುತ್ತಿರುವಾಗ, ಪಿಜಿ ಕೋರ್ಸ್ಗಳಿಗೆ ನೀಟ್ ಪರೀಕ್ಷೆ ನಡೆಸಲು ಇದು ಸರಿಯಾದ ಸಮಯವೆ?” ಎಂದು ಅವರು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ನ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಸೇರಿದಂತೆ ಪ್ರತಿಪಕ್ಷ ನಾಯಕರು ನೀಟ್ ಪರೀಕ್ಷೆಗಳನ್ನು ಮುಂದೂಡಬೇಕೆಂದು ಅಥವಾ ಆನ್ಲೈನ್ನಲ್ಲಿ ನಡೆಸಬೇಕೆಂದು ಕರೆ ನೀಡಿದ್ದರು.
ಆತಂಕಕ್ಕೊಳಗಾದ ವಿದ್ಯಾರ್ಥಿಗಳು ಮತ್ತು ಪೋಷಕರು ಸಹ ಇದೇ ರೀತಿಯ ಕರೆಗಳನ್ನು ನೀಡಿದ್ದರು, ಅವರು 18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕಲು ಸಹ ಅವಕಾಶವಿಲ್ಲ ಎಂಬುದನ್ನು ಒತ್ತಿ ಹೇಳಿದ್ದರು.
ಇದನ್ನೂ ಓದಿ: ಇದು ನೀಟ್ ಪರೀಕ್ಷೆ ನಡೆಸಲು ಸರಿಯಾದ ಸಮಯವೆ?: ಕೇಂದ್ರಕ್ಕೆ ಎಂ. ಕೆ. ಸ್ಟಾಲಿನ್


