Homeಅಂಕಣಗಳುಜೈಲುಗಳಲ್ಲೂ ಜಾತಿಭೇದ ಮೆರೆದಿರುವ ಮನುವಾದ

ಜೈಲುಗಳಲ್ಲೂ ಜಾತಿಭೇದ ಮೆರೆದಿರುವ ಮನುವಾದ

- Advertisement -
- Advertisement -

“ಜಾತಿಗೆ ಇಂದಿಗೂ ಸಮರ್ಥಕರಿದ್ದಾರೆ ಎನ್ನುವ ಸಂಗತಿಯೇ ಕರುಣಾಜನಕ. ಶ್ರಮ ವಿಭಜನೆಗೆ ಮತ್ತೊಂದು ಹೆಸರೇ ಜಾತಿ ವ್ಯವಸ್ಥೆಯಾಗಿದ್ದು, ಶ್ರಮವಿಭಜನೆಯು ನಾಗರಿಕ ಸಮಾಜದ ಹೆಗ್ಗುರುತಾಗಿದ್ದು, ಈ ವ್ಯವಸ್ಥೆಯಲ್ಲಿ ತಪ್ಪೇನೂ ಇಲ್ಲ ಎಂದು ವಾದಿಸಲಾಗುತ್ತದೆ.

ವಾಸ್ತವದಲ್ಲಿ ಜಾತಿವ್ಯವಸ್ಥೆಯು ಶ್ರಮ ವಿಭಜನೆ ಮಾತ್ರವೇ ಅಲ್ಲ, ಶ್ರಮಿಕರ ವಿಭಜನೆಯೂ ಹೌದು. ಈ ಶ್ರಮವಿಭಜನೆಯಲ್ಲಿ ವ್ಯಕ್ತಿಯ ಆಯ್ಕೆಗೆ, ಭಾವನೆಗೆ, ಆದ್ಯತೆಗೆ ಅವಕಾಶವೇ ಇಲ್ಲ. ವಿಧಿವಾದವೇ ಈ ವಿಭಜನೆಯ ಆಧಾರ”.

“ಹಿಂದೂ ಸಮಾಜವು ಏಣಿ ಅಥವಾ ಪ್ರವೇಶದ್ವಾರವೇ ಇಲ್ಲದ ಹಲವು ಅಂತಸ್ತುಗಳ ಗೋಪುರವಿದ್ದಂತೆ. ಕೆಳ ಅಂತಸ್ತಿನಲ್ಲಿ ಹುಟ್ಟಿದ ವ್ಯಕ್ತಿ ಅದೆಷ್ಟೇ ಯೋಗ್ಯನಾದರೂ ಮೇಲಿನ ಅಂತಸ್ತನ್ನು ಪ್ರವೇಶಿಸಲಾರ. ಮೇಲಿನ ಅಂತಸ್ತಿನಲ್ಲಿ ಹುಟ್ಟಿದ ವ್ಯಕ್ತಿ ಅದೆಷ್ಟೇ ಅಯೋಗ್ಯನಾದರೂ ಅವನನ್ನು ಕೆಳ ಅಂತಸ್ತಿಗೆ ಓಡಿಸುವುದು ಸಾಧ್ಯವಿಲ್ಲ. ಈ ಸ್ಪೃಶ್ಯ ಮತ್ತು ಅಸ್ಪೃಶ್ಯ ಜಾತಿಗಳು ಹಿಂದೂ ಸಮಾಜದ ಭಾಗವೇ ಆಗಿದ್ದರೂ, ವಾಸ್ತವದಲ್ಲಿ ಬೇರೆ ಬೇರೆಯೇ ಜಗತ್ತುಗಳಾಗಿ ಜೀವಿಸುತ್ತಿವೆ”.

“ಬೆಕ್ಕುಗಳು ನಾಯಿಗಳು ಅಸ್ಪೃಶ್ಯರ ಎಂಜಲು ತಿನ್ನುತ್ತವೆ. ಮಕ್ಕಳ ಮಲವನ್ನೂ ತಿನ್ನುತ್ತವೆ. ಇದೇ ನಾಯಿ ಬೆಕ್ಕುಗಳು ಸ್ಪೃಶ್ಯರ ಮನೆಯನ್ನು ಪ್ರವೇಶಿಸಬಹುದು. ಹಾಗೆ ಪ್ರವೇಶಿಸಿದರೆ ಮೈಲಿಗೆಯಿಲ್ಲ. ಈ ಪ್ರಾಣಿಗಳನ್ನು ಸ್ಪೃಶ್ಯರು ಮುಟ್ಟುತ್ತಾರೆ, ಅಪ್ಪಿ ಮುದ್ದಾಡುತ್ತಾರೆ. ಅವು ಉಣ್ಣುವ ತಟ್ಟೆಗೆ ಬಾಯಿ ಹಾಕಿದರೂ ಅವರಿಗೆ ತಕರಾರಿಲ್ಲ. ಯಾವುದೋ ಚಾಕರಿಗೆಂದು ಮನೆಯ ಹೊರಗೆ ನಿಲ್ಲುವ ಅಸ್ಪೃಶ್ಯನನ್ನು ಕಂಡ ಸವರ್ಣೀಯ ಗದರುತ್ತಾನೆ- ದೂರ ನಿಲ್ಲು, ಮಗುವಿನ ಮಲವನ್ನು ಬಾಚಿ ಎಸೆಯುವ ಬೋಕಿ ಬಿಲ್ಲೆಯನ್ನು ಅಲ್ಲಿ ಇಡಲಾಗಿದೆ. ಅದನ್ನೂ ಮುಟ್ಟಿ ಮೈಲಿಗೆ ಮಾಡುತ್ತೀಯೇನು?”


ಜಾತಿವ್ಯವಸ್ಥೆ ಮತ್ತು ಅಸ್ಪೃಶ್ಯತೆಯ ಕ್ರೌರ್ಯವನ್ನು ಕುರಿತು ಬಾಬಾಸಾಹೇಬ ಅಂಬೇಡ್ಕರ್ ಚಿತ್ರಿಸಿರುವ ಈ ಸುಡು ವಾಸ್ತವ ಇಂದಿಗೂ ನಿಗಿನಿಗಿ.

ನಾಶವಾಗಲು ಒಲ್ಲದ ಜಾತಿವ್ಯವಸ್ಥೆಯ ಸ್ಥಿತಿಸ್ಥಾಪಕ ಜಿಗುಟು ಗುಣ ಬೆರಗುಬಡಿಸುವಂತಹುದು. ಊಳಿಗಮಾನ್ಯ ವ್ಯವಸ್ಥೆ, ಬಂಡವಾಳಶಾಹಿ ವ್ಯವಸ್ಥೆ, ಕೈಗಾರಿಕೀಕರಣ, ಗಣರಾಜ್ಯ ಸಂವಿಧಾನ, ನವಉದಾರವಾದಿ ಜಾಗತೀಕರಣಗಳೆಲ್ಲವನ್ನು ಜೀರ್ಣಿಸಿಕೊಂಡು ಜೀವಂತ ಉಳಿದಿರುವ ದುಷ್ಟವ್ಯವಸ್ಥೆಯಿದು ಎಂದಿದ್ದಾರೆ ಅಂಬೇಡ್ಕರವಾದಿ ಚಿಂತಕ ಆನಂದ್ ತೇಲ್ತುಂಬ್ಡೆ.

ದಲಿತರು ದಮನಿತರ ಪಾಲಿಗೆ ಜಾತಿವ್ಯವಸ್ಥೆಯ ಈ ಸಮಾಜವೇ ಒಂದು ದೈತ್ಯ ಬಯಲು ಬಂದೀಖಾನೆ. ಜೈಲುಗಳು ಕೂಡ ಈ ದೈತ್ಯ ಬಯಲು ಬಂದೀಖಾನೆಯ ಪುಟ್ಟ ಪ್ರತಿರೂಪಗಳು. ಈ ಕುರಿತು ಕಾಮನ್‌ವೆಲ್ತ್ ಹ್ಯೂಮನ್ ರೈಟ್ಸ್ ಇನಿಶಿಯೇಟಿವ್ (ಸಿ.ಎಚ್.ಆರ್.ಐ) ಸಂಶೋಧನಾ ಪ್ರಬಂಧವನ್ನೇ ಇತ್ತೀಚೆಗೆ ಸಿದ್ಧಪಡಿಸಿತ್ತು. ಪ್ರಬಂಧದ ಎಲ್ಲೆಗಳನ್ನು ’ದಿ ವೈರ್’ ಅಂತರ್ಜಾಲ ಸುದ್ದಿತಾಣದ ಸುಕನ್ಯಾ ಶಾಂತಾ ಇನ್ನಷ್ಟು ವಿಸ್ತರಿಸಿದ್ದಾರೆ.

ಸಿ.ಎಚ್.ಆರ್.ಐ. ಸಂಶೋಧನಾ ಪ್ರಬಂಧದ ಪ್ರಕಾರ ರಾಜ್ಯದ ಜೈಲುಗಳನ್ನು ಪ್ರವೇಶಿಸುವ ಪ್ರತಿಯೊಬ್ಬ ಕೈದಿಯನ್ನು ಆತನ ಜಾತಿಯಿಂದ ಗುರುತಿಸಲಾಗುತ್ತಿತ್ತು. ತಳವರ್ಗಗಳ ಕೈದಿಗಳಿಗೆ ಸ್ವಚ್ಛತೆಯ ಕೆಲಸವನ್ನು ವಹಿಸಲಾಗುತ್ತಿತ್ತು. ಮೇಲ್ವರ್ಗಗಳವರಿಗೆ ಅಡುಗೆ ಕೆಲಸ, ಓದು ಬರೆಹದ ಕೆಲಸ ನೀಡಲಾಗುತ್ತಿತ್ತು. ಸಿರಿವಂತರು ಮತ್ತು ಪ್ರಭಾವಿಗಳು ಯಾವ ಕೆಲಸವನ್ನೂ ಮಾಡುತ್ತಿರಲಿಲ್ಲ.

ಜಾತಿ ಆಧಾರಿತ ಚಾಕರಿಗೆ ಬಹುತೇಕ ರಾಜ್ಯಗಳ ಜೈಲು ಕೈಪಿಡಿಗಳ (Jail Manuals) ಮಂಜೂರಾತಿ ಉಂಟು. ಬ್ರಿಟಿಷರ ಕಾಲದ ಈ ಕೈಪಿಡಿಗಳು ಸ್ವಾತಂತ್ರ್ಯಾನಂತರವೂ ತಿದ್ದುಪಡಿಗಳನ್ನು ಕಂಡಿಲ್ಲ. ಜಾತಿ ಆಧಾರಿತ ದೈಹಿಕ ಶ್ರಮದ ಅಂಶವನ್ನು ಮುಟ್ಟಿಯೇ ಇಲ್ಲ. ಪ್ರತಿಯೊಂದು ರಾಜ್ಯವೂ ಪ್ರತ್ಯೇಕ ಜೈಲು ಕೈಪಿಡಿಗಳನ್ನು ಹೊಂದಿದೆ. ಆದರೆ ಇವೆಲ್ಲವುಗಳ ಮೂಲ ಆಧಾರ 1894ರ ಕಾರಾಗೃಹ ಕಾಯಿದೆ. ಜೈಲಿನ ಎಲ್ಲ ಚಟುವಟಿಕೆಗಳು, ನಿಯಮಗಳು, ನಿಷೇಧಗಳು, ಶಿಕ್ಷೆಗಳು, ಕೈದಿಗೆ ನೀಡಲಾಗುವ ಸ್ಥಳಾವಕಾಶ, ಆಹಾರ, ವೈದ್ಯಕೀಯ ಇತ್ಯಾದಿ ಸೌಲಭ್ಯಗಳ ಕುರಿತ ವಿವರಗಳನ್ನು ಈ ಕೈಪಿಡಿಗಳು ಹೊಂದಿರುತ್ತವೆ.

ಜಾತಿಪದ್ಧತಿಯ ನಿರ್ಮೂಲನೆಯನ್ನು ಸಾರುವ ಸಂವಿಧಾನಜಾರಿಯಾಗಿ ಏಳು ದಶಕಗಳೇ ಉರುಳಿವೆ. ಆದರೆ ಜೈಲು ಕೈಪಿಡಿಗಳು ಈಗಲೂ ಜಾತಿಪದ್ಧತಿಯ ಅವಹೇಳನಗಳಿಂದ ಮುಕ್ತವಾಗಿಲ್ಲ.

ಪ್ರಾಚೀನ ಭಾರತದಲ್ಲಿ ಕೆಳಜಾತಿಗಳು ಮತ್ತು ಮೇಲ್ಜಾತಿಗಳಿಗೆ ನೀಡಲಾಗುತ್ತಿದ್ದ ಶಿಕ್ಷೆ ಏಕಪ್ರಕಾರವಾಗಿ ಇರಲಿಲ್ಲ. ಮೇಲ್ಜಾತಿಗಳ ಅಪರಾಧಿಗಳಿಗೆ ಕಡಿಮೆ ಶಿಕ್ಷೆಯನ್ನೂ ಕೆಳಜಾತಿಗಳ ಅಪರಾಧಿಗಳಿಗೆ ತೀವ್ರತರದ ಶಿಕ್ಷೆಯನ್ನೂ ನಿಗದಿಪಡಿಸಿತ್ತು ಕೌಟಿಲ್ಯನ ಅರ್ಥಶಾಸ್ತ್ರ. ಮನುಸ್ಮೃತಿ ಮತ್ತು ಕೌಟಿಲ್ಯನ ದಂಡನೀತಿ ತತ್ವವೇ ಇಂದಿಗೂ ನಮ್ಮ ಜೈಲುಗಳನ್ನು ಆಳುತ್ತಿದೆ.

ದೇಶದ ಇಂದಿನ ಜೈಲುಗಳಲ್ಲಿ ವಿಚಾರಣಾಧೀನ ಕೈದಿಗಳದೇ ಸಿಂಹಪಾಲು. ಅರ್ಥಾತ್ ಅವರ ಮೇಲಿನ ಅಪರಾಧ ಇನ್ನೂ ಸಾಬೀತಾಗದೆ, ಶಿಕ್ಷೆ ವಿಧಿಸದೆ ವಿಚಾರಣೆಯ ಹಂತದಲ್ಲೇ ವರ್ಷಗಟ್ಟಲೆ ಕೊಳೆಯುತ್ತಿರುವವರು. ಪರಿಶಿಷ್ಟ ಜಾತಿ-ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳವರು ಹಾಗು ಅಲ್ಪಸಂಖ್ಯಾತರ ಒಟ್ಟು ಪ್ರಮಾಣ ಶೇ.85. ಗುಣಮಟ್ಟದ ಕಾನೂನು ನೆರವಿನಿಂದ ವಂಚಿತರಾದ ಬಡವರು ಮತ್ತು ಅಸಹಾಯಕರು ಇವರು. ಅಪರಾಧಿಗಳೆಂದು ರುಜುವಾತಾದರೆ ಸಿಗುವ ಶಿಕ್ಷೆಯ ಅವಧಿಗಿಂತಲೂ ಹೆಚ್ಚಿನ ಅವಧಿಯನ್ನು ಈ ಕೈದಿಗಳು ವಿಚಾರಣಾಧೀನ ಕೈದಿಗಳಾಗಿ ಜೈಲಿನಲ್ಲಿ ಸವೆಸಿದ್ದಾರೆ. ಜಾಮೀನಿಗೆ ಅಗತ್ಯವಿರುವ ಹಣವನ್ನು ಹೊಂದಿಸಲೂ ಅಶಕ್ತರಿವರು.

ಈ ವಿಚಾರಣಾಧೀನ ಕೈದಿಗಳ ಪೈಕಿ ಅಪರಾಧ ಸಾಬೀತಾಗಿ ಅಂತಿಮವಾಗಿ ಶಿಕ್ಷೆಗೆ ಗುರಿಯಾಗುವವರ ಪ್ರಮಾಣ ಶೇ.50ಕ್ಕಿಂತ ಕಡಿಮೆ!

2008ರ ಮಾಲೇಗಾಂವ್ ಸ್ಫೋಟಗಳ ಆಪಾದಿತೆಯಾಗಿದ್ದ ಸಾಧ್ವಿ ಪ್ರಜ್ಞಾಸಿಂಗ್ ಠಾಕೂರ್ ಇದೀಗ ಬಿಜೆಪಿ ಸಂಸದೆ. ಈಕೆ ಮುಂಬಯಿಯ ಬೈಕುಲ್ಲ ಕಾರಾಗಾರದಲ್ಲಿದ್ದಾಗ ಆಕೆಗೆ ಸಿರಿವಂತರು ಮತ್ತು ಪ್ರಭಾವಿಗಳಿಗೆ ನೀಡಲಾಗುವ ಪ್ರತ್ಯೇಕ ವಿಐಪಿ ಸೆಲ್ ನೀಡಲಾಗಿತ್ತು. ಆಕೆಯ ಸೇವೆಗಾಗಿ ಮೂರು ಮಂದಿ ಸೇವಕಿಯರನ್ನು ನೇಮಿಸಲಾಗಿತ್ತು. ಈ ಪೈಕಿ ಆಕೆಯ ಊಟತಿಂಡಿಯ ಕಾಳಜಿ ವಹಿಸಲು ಠಾಕೂರ್ ಜಾತಿಗೆ ಸೇರಿದ ಮಹಿಳಾ ಕೈದಿಯನ್ನೇ ನೇಮಿಸಲಾಗಿತ್ತು. ಜಾಟ್ ಜಾತಿಗೆ ಸೇರಿದ ಮತ್ತೊಬ್ಬ ಮಹಿಳಾ ಕೈದಿಯನ್ನು ಅಂಗರಕ್ಷಕಿಯನ್ನಾಗಿ ನೀಡಲಾಗಿತ್ತು. ಪ್ರಜ್ಞಾಸಿಂಗ್ ಪಾಯಿಖಾನೆ ಸ್ವಚ್ಛತೆಗೆ ದಲಿತ ಮಹಿಳಾ ಕೈದಿಯನ್ನು ನಿಯುಕ್ತಿ ಮಾಡಲಾಗಿತ್ತು.

ತಮಿಳುನಾಡಿನ ದಕ್ಷಿಣ ಜಿಲ್ಲೆಗಳಾದ ರಾಮನಾಥಪುರಂ, ತೂತ್ತುಕುಡಿ, ತಿರುನೆಲ್ವೇಲಿ, ಮಧುರೈ ಹಾಗೂ ಧರ್ಮಪುರಿಗಳಲ್ಲಿ ಅಸ್ಪೃಶ್ಯತೆಯ ಪಿಡುಗು ವ್ಯಾಪಕ. ದಲಿತರು ಮತ್ತು ಬಲಿಷ್ಠ ತೇವರ್ ಜಾತಿಯ ನಡುವೆ ಸಾವು ನೋವುಗಳ ತೀವ್ರ ಘರ್ಷಣೆಗಳು ಜರುಗಿವೆ. ತಿರುನೆಲ್ವೇಲಿಯ ಪಾಳಯಂಕೋಟ್ಟೈ ಕೇಂದ್ರ ಕಾರಾಗಾರದಲ್ಲಿ ದಲಿತರು, ತೇವರ್ ಕೈದಿಗಳನ್ನು ಪ್ರತ್ಯೇಕ ಬ್ಲಾಕ್‌ಗಳಲ್ಲಿ ಇಡಲಾಗಿತ್ತು. ದಲಿತರ ಬ್ಲಾಕ್‌ಗೆ ಸರಬರಾಜು ಮಾಡುವ ಊಟ ಅತ್ಯಂತ ಕಳಪೆಯದಾಗಿತ್ತು. ಹೊಟ್ಟೆ ತುಂಬುತ್ತಿರಲಿಲ್ಲ ಕೂಡ. ಕಠಿಣ ಶ್ರಮ ಮಾಡಿಸಲಾಗುತ್ತಿತ್ತು. ಕೂಲಿ ಕೊಡುತ್ತಿರಲಿಲ್ಲ. ವೈದ್ಯಕೀಯ ಸೌಲಭ್ಯ ನೀಡುತ್ತಿರಲಿಲ್ಲ. 1,600 ಕೈದಿಗಳನ್ನು ತೇವರ್, ನಾಡಾರ್ ಹಾಗೂ ದಲಿತರೆಂದು ವಿಭಜಿಸಿ ಪ್ರತ್ಯೇಕ ಬ್ಲಾಕ್‌ಗಳಲ್ಲಿ ಇರಿಸಲಾಗಿತ್ತು ಎಂಬ ಸಂಗತಿಯನ್ನು ಇಂಗ್ಲಿಷ್ ನಿಯತಕಾಲಿಕ ’ದಿ ಓಪನ್’ ವರದಿ ಮಾಡಿತ್ತು. ಇದು ಕೇವಲ ಪಾಳಯಂಕೋಟ್ಟೈ ಜೈಲಿನ ಸಂಗತಿ ಮಾತ್ರವಲ್ಲ, ಬಹುತೇಕ ದಕ್ಷಿಣ ಜಿಲ್ಲೆಗಳಲ್ಲಿ ಕೈದಿಗಳನ್ನು ಜಾತಿಯ ಪ್ರಕಾರ ಬೇರೆಬೇರೆ ಇಡಲಾಗುತ್ತಿದೆ ಎಂದು ತಮಿಳುನಾಡು ಹೈಕೋರ್ಟ್ ವಕೀಲ ಆರ್.ಅಳಗುಮಣಿ ಹೇಳಿದ್ದರು. ದಲಿತ ಬ್ಲಾಕ್‌ಗಳಿಗೆ ತೇವರ್ ಗಾರ್ಡುಗಳನ್ನೂ, ತೇವರ್ ಬ್ಲಾಕ್‌ಗಳಿಗೆ ದಲಿತ ಗಾರ್ಡುಗಳನ್ನೂ ನೇಮಕ ಮಾಡಿ ಎರಡೂ ಸಮುದಾಯಗಳ ನಡುವಣ ವೈಮನಸ್ಯಕ್ಕೆ ಮತ್ತಷ್ಟು ಬೆಂಕಿ ಹೆಚ್ಚಲಾಗುತ್ತಿತ್ತು. ಈ ಜೈಲುಗಳಲ್ಲಿ ದಲಿತರಿಗೊಂದು ಜೈಲು ಕೈಪಿಡಿ, ತೇವರ್‌ಗಳಿಗೆ ಮತ್ತೊಂದು ಕೈಪಿಡಿ ಇರುತ್ತಿತ್ತು. ತೇವರ್‌ಗಳಿಗೆ ಸಿಗುತ್ತಿದ್ದ ಸವಲತ್ತು ಸ್ವಾತಂತ್ರ್ಯ ದಲಿತರಿಗೆ ಸಿಗುತ್ತಿರಲಿಲ್ಲ. ದಲಿತ ಕೈದಿಗಳು ಪುಸ್ತಕ ಓದುವುದನ್ನು ಕೂಡ ಸಹಿಸಲಾಗುತ್ತಿರಲಿಲ್ಲ.

ರಾಜಸ್ತಾನ ಹೈಕೋರ್ಟ್ ಆದೇಶದ ಮೇರೆಗೆ ರಾಜಸ್ತಾನ ಸರ್ಕಾರ ಕಳೆದ ವರ್ಷ ಬಂದೀಖಾನೆ ನಿಯಮಗಳಿಗೆ ಇತ್ತೀಚೆಗೆ ಪ್ರಗತಿಪರ ತಿದ್ದುಪಡಿಗಳನ್ನು ತಂದಿತು. ಅಡುಗೆಯ ಕೆಲಸಕ್ಕೆ ಜಾತಿ ಅಥವಾ ಧರ್ಮವನ್ನು ಆಧರಿಸಿ ಯಾವುದೇ ಕೈದಿಯನ್ನು ಆರಿಸುವಂತಿಲ್ಲ. (ತಿದ್ದುಪಡಿ ಜಾರಿಯಾಗುವ ತನಕ ಬ್ರಾಹ್ಮಣ ಅಥವಾ ಸಾಕಷ್ಟು ಉನ್ನತ ಜಾತಿಯ ಹಿಂದೂ ಕೈದಿಯನ್ನು ಅಡುಗೆ ಕೆಲಸಕ್ಕೆ ನೇಮಿಸಬೇಕು ಎಂದೇ ಜೈಲು ಕೈಪಿಡಿಯಲ್ಲಿ ವಿಧಿಸಲಾಗಿತ್ತು). ಕಸಗುಡಿಸುವ ಮತ್ತು ಪಾಯಿಖಾನೆ ಸ್ವಚ್ಘಗೊಳಿಸುವ ಕೆಲಸಕ್ಕೂ ಜಾತಿಯನ್ನು ಆಧರಿಸಿ ಕೈದಿಯನ್ನು ನೇಮಿಸುವ ರೂಢಿಯನ್ನು ತಪ್ಪಿಸುವ ತಿದ್ದುಪಡಿಯೂ
ಜಾರಿಗೆ ಬಂದಿತು. ರಾಜಸ್ತಾನದ ಈ ಮೇಲ್ಪಂಕ್ತಿಯನ್ನು ಇತರೆ ರಾಜ್ಯಗಳು ಅನುಸರಿಸಬೇಕಿದೆ.

ಒಂದೆಡೆ ಸಂವಿಧಾನವು ಜಾತಿರಹಿತ ಮತ್ತು ಸಮಾನ ಸಮಾಜದ ಆಶಯವನ್ನು ಹೊಂದಿದ್ದು ಮತ್ತೊಂದೆಡೆ ನ್ಯಾಯವ್ಯವಸ್ಥೆ ಮತ್ತು ಪೊಲೀಸ್ ವ್ಯವಸ್ಥೆ ಜಾತಿವ್ಯವಸ್ಥೆಯ ಪಾಪಕೂಪದಲ್ಲಿ ಮುಳುಗೇಳುತ್ತಿರುವುದು ವಿಪರೀತ ವಿಪರ್ಯಾಸ ವಿಡಂಬನೆಯ ಸಂಗತಿ.


ಇದನ್ನೂ ಓದಿ: ಮುಸ್ಲಿಮರ ವಿರುದ್ಧ ದ್ವೇ‍ಷ ಭಾಷಣ: ಕಾನೂನು ಬಾಹಿರ ಎಂದು ಉತ್ತರಖಂಡ ಪೊಲೀಸರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...