Homeಅಂಕಣಗಳುಜೈಲುಗಳಲ್ಲೂ ಜಾತಿಭೇದ ಮೆರೆದಿರುವ ಮನುವಾದ

ಜೈಲುಗಳಲ್ಲೂ ಜಾತಿಭೇದ ಮೆರೆದಿರುವ ಮನುವಾದ

- Advertisement -
- Advertisement -

“ಜಾತಿಗೆ ಇಂದಿಗೂ ಸಮರ್ಥಕರಿದ್ದಾರೆ ಎನ್ನುವ ಸಂಗತಿಯೇ ಕರುಣಾಜನಕ. ಶ್ರಮ ವಿಭಜನೆಗೆ ಮತ್ತೊಂದು ಹೆಸರೇ ಜಾತಿ ವ್ಯವಸ್ಥೆಯಾಗಿದ್ದು, ಶ್ರಮವಿಭಜನೆಯು ನಾಗರಿಕ ಸಮಾಜದ ಹೆಗ್ಗುರುತಾಗಿದ್ದು, ಈ ವ್ಯವಸ್ಥೆಯಲ್ಲಿ ತಪ್ಪೇನೂ ಇಲ್ಲ ಎಂದು ವಾದಿಸಲಾಗುತ್ತದೆ.

ವಾಸ್ತವದಲ್ಲಿ ಜಾತಿವ್ಯವಸ್ಥೆಯು ಶ್ರಮ ವಿಭಜನೆ ಮಾತ್ರವೇ ಅಲ್ಲ, ಶ್ರಮಿಕರ ವಿಭಜನೆಯೂ ಹೌದು. ಈ ಶ್ರಮವಿಭಜನೆಯಲ್ಲಿ ವ್ಯಕ್ತಿಯ ಆಯ್ಕೆಗೆ, ಭಾವನೆಗೆ, ಆದ್ಯತೆಗೆ ಅವಕಾಶವೇ ಇಲ್ಲ. ವಿಧಿವಾದವೇ ಈ ವಿಭಜನೆಯ ಆಧಾರ”.

“ಹಿಂದೂ ಸಮಾಜವು ಏಣಿ ಅಥವಾ ಪ್ರವೇಶದ್ವಾರವೇ ಇಲ್ಲದ ಹಲವು ಅಂತಸ್ತುಗಳ ಗೋಪುರವಿದ್ದಂತೆ. ಕೆಳ ಅಂತಸ್ತಿನಲ್ಲಿ ಹುಟ್ಟಿದ ವ್ಯಕ್ತಿ ಅದೆಷ್ಟೇ ಯೋಗ್ಯನಾದರೂ ಮೇಲಿನ ಅಂತಸ್ತನ್ನು ಪ್ರವೇಶಿಸಲಾರ. ಮೇಲಿನ ಅಂತಸ್ತಿನಲ್ಲಿ ಹುಟ್ಟಿದ ವ್ಯಕ್ತಿ ಅದೆಷ್ಟೇ ಅಯೋಗ್ಯನಾದರೂ ಅವನನ್ನು ಕೆಳ ಅಂತಸ್ತಿಗೆ ಓಡಿಸುವುದು ಸಾಧ್ಯವಿಲ್ಲ. ಈ ಸ್ಪೃಶ್ಯ ಮತ್ತು ಅಸ್ಪೃಶ್ಯ ಜಾತಿಗಳು ಹಿಂದೂ ಸಮಾಜದ ಭಾಗವೇ ಆಗಿದ್ದರೂ, ವಾಸ್ತವದಲ್ಲಿ ಬೇರೆ ಬೇರೆಯೇ ಜಗತ್ತುಗಳಾಗಿ ಜೀವಿಸುತ್ತಿವೆ”.

“ಬೆಕ್ಕುಗಳು ನಾಯಿಗಳು ಅಸ್ಪೃಶ್ಯರ ಎಂಜಲು ತಿನ್ನುತ್ತವೆ. ಮಕ್ಕಳ ಮಲವನ್ನೂ ತಿನ್ನುತ್ತವೆ. ಇದೇ ನಾಯಿ ಬೆಕ್ಕುಗಳು ಸ್ಪೃಶ್ಯರ ಮನೆಯನ್ನು ಪ್ರವೇಶಿಸಬಹುದು. ಹಾಗೆ ಪ್ರವೇಶಿಸಿದರೆ ಮೈಲಿಗೆಯಿಲ್ಲ. ಈ ಪ್ರಾಣಿಗಳನ್ನು ಸ್ಪೃಶ್ಯರು ಮುಟ್ಟುತ್ತಾರೆ, ಅಪ್ಪಿ ಮುದ್ದಾಡುತ್ತಾರೆ. ಅವು ಉಣ್ಣುವ ತಟ್ಟೆಗೆ ಬಾಯಿ ಹಾಕಿದರೂ ಅವರಿಗೆ ತಕರಾರಿಲ್ಲ. ಯಾವುದೋ ಚಾಕರಿಗೆಂದು ಮನೆಯ ಹೊರಗೆ ನಿಲ್ಲುವ ಅಸ್ಪೃಶ್ಯನನ್ನು ಕಂಡ ಸವರ್ಣೀಯ ಗದರುತ್ತಾನೆ- ದೂರ ನಿಲ್ಲು, ಮಗುವಿನ ಮಲವನ್ನು ಬಾಚಿ ಎಸೆಯುವ ಬೋಕಿ ಬಿಲ್ಲೆಯನ್ನು ಅಲ್ಲಿ ಇಡಲಾಗಿದೆ. ಅದನ್ನೂ ಮುಟ್ಟಿ ಮೈಲಿಗೆ ಮಾಡುತ್ತೀಯೇನು?”


ಜಾತಿವ್ಯವಸ್ಥೆ ಮತ್ತು ಅಸ್ಪೃಶ್ಯತೆಯ ಕ್ರೌರ್ಯವನ್ನು ಕುರಿತು ಬಾಬಾಸಾಹೇಬ ಅಂಬೇಡ್ಕರ್ ಚಿತ್ರಿಸಿರುವ ಈ ಸುಡು ವಾಸ್ತವ ಇಂದಿಗೂ ನಿಗಿನಿಗಿ.

ನಾಶವಾಗಲು ಒಲ್ಲದ ಜಾತಿವ್ಯವಸ್ಥೆಯ ಸ್ಥಿತಿಸ್ಥಾಪಕ ಜಿಗುಟು ಗುಣ ಬೆರಗುಬಡಿಸುವಂತಹುದು. ಊಳಿಗಮಾನ್ಯ ವ್ಯವಸ್ಥೆ, ಬಂಡವಾಳಶಾಹಿ ವ್ಯವಸ್ಥೆ, ಕೈಗಾರಿಕೀಕರಣ, ಗಣರಾಜ್ಯ ಸಂವಿಧಾನ, ನವಉದಾರವಾದಿ ಜಾಗತೀಕರಣಗಳೆಲ್ಲವನ್ನು ಜೀರ್ಣಿಸಿಕೊಂಡು ಜೀವಂತ ಉಳಿದಿರುವ ದುಷ್ಟವ್ಯವಸ್ಥೆಯಿದು ಎಂದಿದ್ದಾರೆ ಅಂಬೇಡ್ಕರವಾದಿ ಚಿಂತಕ ಆನಂದ್ ತೇಲ್ತುಂಬ್ಡೆ.

ದಲಿತರು ದಮನಿತರ ಪಾಲಿಗೆ ಜಾತಿವ್ಯವಸ್ಥೆಯ ಈ ಸಮಾಜವೇ ಒಂದು ದೈತ್ಯ ಬಯಲು ಬಂದೀಖಾನೆ. ಜೈಲುಗಳು ಕೂಡ ಈ ದೈತ್ಯ ಬಯಲು ಬಂದೀಖಾನೆಯ ಪುಟ್ಟ ಪ್ರತಿರೂಪಗಳು. ಈ ಕುರಿತು ಕಾಮನ್‌ವೆಲ್ತ್ ಹ್ಯೂಮನ್ ರೈಟ್ಸ್ ಇನಿಶಿಯೇಟಿವ್ (ಸಿ.ಎಚ್.ಆರ್.ಐ) ಸಂಶೋಧನಾ ಪ್ರಬಂಧವನ್ನೇ ಇತ್ತೀಚೆಗೆ ಸಿದ್ಧಪಡಿಸಿತ್ತು. ಪ್ರಬಂಧದ ಎಲ್ಲೆಗಳನ್ನು ’ದಿ ವೈರ್’ ಅಂತರ್ಜಾಲ ಸುದ್ದಿತಾಣದ ಸುಕನ್ಯಾ ಶಾಂತಾ ಇನ್ನಷ್ಟು ವಿಸ್ತರಿಸಿದ್ದಾರೆ.

ಸಿ.ಎಚ್.ಆರ್.ಐ. ಸಂಶೋಧನಾ ಪ್ರಬಂಧದ ಪ್ರಕಾರ ರಾಜ್ಯದ ಜೈಲುಗಳನ್ನು ಪ್ರವೇಶಿಸುವ ಪ್ರತಿಯೊಬ್ಬ ಕೈದಿಯನ್ನು ಆತನ ಜಾತಿಯಿಂದ ಗುರುತಿಸಲಾಗುತ್ತಿತ್ತು. ತಳವರ್ಗಗಳ ಕೈದಿಗಳಿಗೆ ಸ್ವಚ್ಛತೆಯ ಕೆಲಸವನ್ನು ವಹಿಸಲಾಗುತ್ತಿತ್ತು. ಮೇಲ್ವರ್ಗಗಳವರಿಗೆ ಅಡುಗೆ ಕೆಲಸ, ಓದು ಬರೆಹದ ಕೆಲಸ ನೀಡಲಾಗುತ್ತಿತ್ತು. ಸಿರಿವಂತರು ಮತ್ತು ಪ್ರಭಾವಿಗಳು ಯಾವ ಕೆಲಸವನ್ನೂ ಮಾಡುತ್ತಿರಲಿಲ್ಲ.

ಜಾತಿ ಆಧಾರಿತ ಚಾಕರಿಗೆ ಬಹುತೇಕ ರಾಜ್ಯಗಳ ಜೈಲು ಕೈಪಿಡಿಗಳ (Jail Manuals) ಮಂಜೂರಾತಿ ಉಂಟು. ಬ್ರಿಟಿಷರ ಕಾಲದ ಈ ಕೈಪಿಡಿಗಳು ಸ್ವಾತಂತ್ರ್ಯಾನಂತರವೂ ತಿದ್ದುಪಡಿಗಳನ್ನು ಕಂಡಿಲ್ಲ. ಜಾತಿ ಆಧಾರಿತ ದೈಹಿಕ ಶ್ರಮದ ಅಂಶವನ್ನು ಮುಟ್ಟಿಯೇ ಇಲ್ಲ. ಪ್ರತಿಯೊಂದು ರಾಜ್ಯವೂ ಪ್ರತ್ಯೇಕ ಜೈಲು ಕೈಪಿಡಿಗಳನ್ನು ಹೊಂದಿದೆ. ಆದರೆ ಇವೆಲ್ಲವುಗಳ ಮೂಲ ಆಧಾರ 1894ರ ಕಾರಾಗೃಹ ಕಾಯಿದೆ. ಜೈಲಿನ ಎಲ್ಲ ಚಟುವಟಿಕೆಗಳು, ನಿಯಮಗಳು, ನಿಷೇಧಗಳು, ಶಿಕ್ಷೆಗಳು, ಕೈದಿಗೆ ನೀಡಲಾಗುವ ಸ್ಥಳಾವಕಾಶ, ಆಹಾರ, ವೈದ್ಯಕೀಯ ಇತ್ಯಾದಿ ಸೌಲಭ್ಯಗಳ ಕುರಿತ ವಿವರಗಳನ್ನು ಈ ಕೈಪಿಡಿಗಳು ಹೊಂದಿರುತ್ತವೆ.

ಜಾತಿಪದ್ಧತಿಯ ನಿರ್ಮೂಲನೆಯನ್ನು ಸಾರುವ ಸಂವಿಧಾನಜಾರಿಯಾಗಿ ಏಳು ದಶಕಗಳೇ ಉರುಳಿವೆ. ಆದರೆ ಜೈಲು ಕೈಪಿಡಿಗಳು ಈಗಲೂ ಜಾತಿಪದ್ಧತಿಯ ಅವಹೇಳನಗಳಿಂದ ಮುಕ್ತವಾಗಿಲ್ಲ.

ಪ್ರಾಚೀನ ಭಾರತದಲ್ಲಿ ಕೆಳಜಾತಿಗಳು ಮತ್ತು ಮೇಲ್ಜಾತಿಗಳಿಗೆ ನೀಡಲಾಗುತ್ತಿದ್ದ ಶಿಕ್ಷೆ ಏಕಪ್ರಕಾರವಾಗಿ ಇರಲಿಲ್ಲ. ಮೇಲ್ಜಾತಿಗಳ ಅಪರಾಧಿಗಳಿಗೆ ಕಡಿಮೆ ಶಿಕ್ಷೆಯನ್ನೂ ಕೆಳಜಾತಿಗಳ ಅಪರಾಧಿಗಳಿಗೆ ತೀವ್ರತರದ ಶಿಕ್ಷೆಯನ್ನೂ ನಿಗದಿಪಡಿಸಿತ್ತು ಕೌಟಿಲ್ಯನ ಅರ್ಥಶಾಸ್ತ್ರ. ಮನುಸ್ಮೃತಿ ಮತ್ತು ಕೌಟಿಲ್ಯನ ದಂಡನೀತಿ ತತ್ವವೇ ಇಂದಿಗೂ ನಮ್ಮ ಜೈಲುಗಳನ್ನು ಆಳುತ್ತಿದೆ.

ದೇಶದ ಇಂದಿನ ಜೈಲುಗಳಲ್ಲಿ ವಿಚಾರಣಾಧೀನ ಕೈದಿಗಳದೇ ಸಿಂಹಪಾಲು. ಅರ್ಥಾತ್ ಅವರ ಮೇಲಿನ ಅಪರಾಧ ಇನ್ನೂ ಸಾಬೀತಾಗದೆ, ಶಿಕ್ಷೆ ವಿಧಿಸದೆ ವಿಚಾರಣೆಯ ಹಂತದಲ್ಲೇ ವರ್ಷಗಟ್ಟಲೆ ಕೊಳೆಯುತ್ತಿರುವವರು. ಪರಿಶಿಷ್ಟ ಜಾತಿ-ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳವರು ಹಾಗು ಅಲ್ಪಸಂಖ್ಯಾತರ ಒಟ್ಟು ಪ್ರಮಾಣ ಶೇ.85. ಗುಣಮಟ್ಟದ ಕಾನೂನು ನೆರವಿನಿಂದ ವಂಚಿತರಾದ ಬಡವರು ಮತ್ತು ಅಸಹಾಯಕರು ಇವರು. ಅಪರಾಧಿಗಳೆಂದು ರುಜುವಾತಾದರೆ ಸಿಗುವ ಶಿಕ್ಷೆಯ ಅವಧಿಗಿಂತಲೂ ಹೆಚ್ಚಿನ ಅವಧಿಯನ್ನು ಈ ಕೈದಿಗಳು ವಿಚಾರಣಾಧೀನ ಕೈದಿಗಳಾಗಿ ಜೈಲಿನಲ್ಲಿ ಸವೆಸಿದ್ದಾರೆ. ಜಾಮೀನಿಗೆ ಅಗತ್ಯವಿರುವ ಹಣವನ್ನು ಹೊಂದಿಸಲೂ ಅಶಕ್ತರಿವರು.

ಈ ವಿಚಾರಣಾಧೀನ ಕೈದಿಗಳ ಪೈಕಿ ಅಪರಾಧ ಸಾಬೀತಾಗಿ ಅಂತಿಮವಾಗಿ ಶಿಕ್ಷೆಗೆ ಗುರಿಯಾಗುವವರ ಪ್ರಮಾಣ ಶೇ.50ಕ್ಕಿಂತ ಕಡಿಮೆ!

2008ರ ಮಾಲೇಗಾಂವ್ ಸ್ಫೋಟಗಳ ಆಪಾದಿತೆಯಾಗಿದ್ದ ಸಾಧ್ವಿ ಪ್ರಜ್ಞಾಸಿಂಗ್ ಠಾಕೂರ್ ಇದೀಗ ಬಿಜೆಪಿ ಸಂಸದೆ. ಈಕೆ ಮುಂಬಯಿಯ ಬೈಕುಲ್ಲ ಕಾರಾಗಾರದಲ್ಲಿದ್ದಾಗ ಆಕೆಗೆ ಸಿರಿವಂತರು ಮತ್ತು ಪ್ರಭಾವಿಗಳಿಗೆ ನೀಡಲಾಗುವ ಪ್ರತ್ಯೇಕ ವಿಐಪಿ ಸೆಲ್ ನೀಡಲಾಗಿತ್ತು. ಆಕೆಯ ಸೇವೆಗಾಗಿ ಮೂರು ಮಂದಿ ಸೇವಕಿಯರನ್ನು ನೇಮಿಸಲಾಗಿತ್ತು. ಈ ಪೈಕಿ ಆಕೆಯ ಊಟತಿಂಡಿಯ ಕಾಳಜಿ ವಹಿಸಲು ಠಾಕೂರ್ ಜಾತಿಗೆ ಸೇರಿದ ಮಹಿಳಾ ಕೈದಿಯನ್ನೇ ನೇಮಿಸಲಾಗಿತ್ತು. ಜಾಟ್ ಜಾತಿಗೆ ಸೇರಿದ ಮತ್ತೊಬ್ಬ ಮಹಿಳಾ ಕೈದಿಯನ್ನು ಅಂಗರಕ್ಷಕಿಯನ್ನಾಗಿ ನೀಡಲಾಗಿತ್ತು. ಪ್ರಜ್ಞಾಸಿಂಗ್ ಪಾಯಿಖಾನೆ ಸ್ವಚ್ಛತೆಗೆ ದಲಿತ ಮಹಿಳಾ ಕೈದಿಯನ್ನು ನಿಯುಕ್ತಿ ಮಾಡಲಾಗಿತ್ತು.

ತಮಿಳುನಾಡಿನ ದಕ್ಷಿಣ ಜಿಲ್ಲೆಗಳಾದ ರಾಮನಾಥಪುರಂ, ತೂತ್ತುಕುಡಿ, ತಿರುನೆಲ್ವೇಲಿ, ಮಧುರೈ ಹಾಗೂ ಧರ್ಮಪುರಿಗಳಲ್ಲಿ ಅಸ್ಪೃಶ್ಯತೆಯ ಪಿಡುಗು ವ್ಯಾಪಕ. ದಲಿತರು ಮತ್ತು ಬಲಿಷ್ಠ ತೇವರ್ ಜಾತಿಯ ನಡುವೆ ಸಾವು ನೋವುಗಳ ತೀವ್ರ ಘರ್ಷಣೆಗಳು ಜರುಗಿವೆ. ತಿರುನೆಲ್ವೇಲಿಯ ಪಾಳಯಂಕೋಟ್ಟೈ ಕೇಂದ್ರ ಕಾರಾಗಾರದಲ್ಲಿ ದಲಿತರು, ತೇವರ್ ಕೈದಿಗಳನ್ನು ಪ್ರತ್ಯೇಕ ಬ್ಲಾಕ್‌ಗಳಲ್ಲಿ ಇಡಲಾಗಿತ್ತು. ದಲಿತರ ಬ್ಲಾಕ್‌ಗೆ ಸರಬರಾಜು ಮಾಡುವ ಊಟ ಅತ್ಯಂತ ಕಳಪೆಯದಾಗಿತ್ತು. ಹೊಟ್ಟೆ ತುಂಬುತ್ತಿರಲಿಲ್ಲ ಕೂಡ. ಕಠಿಣ ಶ್ರಮ ಮಾಡಿಸಲಾಗುತ್ತಿತ್ತು. ಕೂಲಿ ಕೊಡುತ್ತಿರಲಿಲ್ಲ. ವೈದ್ಯಕೀಯ ಸೌಲಭ್ಯ ನೀಡುತ್ತಿರಲಿಲ್ಲ. 1,600 ಕೈದಿಗಳನ್ನು ತೇವರ್, ನಾಡಾರ್ ಹಾಗೂ ದಲಿತರೆಂದು ವಿಭಜಿಸಿ ಪ್ರತ್ಯೇಕ ಬ್ಲಾಕ್‌ಗಳಲ್ಲಿ ಇರಿಸಲಾಗಿತ್ತು ಎಂಬ ಸಂಗತಿಯನ್ನು ಇಂಗ್ಲಿಷ್ ನಿಯತಕಾಲಿಕ ’ದಿ ಓಪನ್’ ವರದಿ ಮಾಡಿತ್ತು. ಇದು ಕೇವಲ ಪಾಳಯಂಕೋಟ್ಟೈ ಜೈಲಿನ ಸಂಗತಿ ಮಾತ್ರವಲ್ಲ, ಬಹುತೇಕ ದಕ್ಷಿಣ ಜಿಲ್ಲೆಗಳಲ್ಲಿ ಕೈದಿಗಳನ್ನು ಜಾತಿಯ ಪ್ರಕಾರ ಬೇರೆಬೇರೆ ಇಡಲಾಗುತ್ತಿದೆ ಎಂದು ತಮಿಳುನಾಡು ಹೈಕೋರ್ಟ್ ವಕೀಲ ಆರ್.ಅಳಗುಮಣಿ ಹೇಳಿದ್ದರು. ದಲಿತ ಬ್ಲಾಕ್‌ಗಳಿಗೆ ತೇವರ್ ಗಾರ್ಡುಗಳನ್ನೂ, ತೇವರ್ ಬ್ಲಾಕ್‌ಗಳಿಗೆ ದಲಿತ ಗಾರ್ಡುಗಳನ್ನೂ ನೇಮಕ ಮಾಡಿ ಎರಡೂ ಸಮುದಾಯಗಳ ನಡುವಣ ವೈಮನಸ್ಯಕ್ಕೆ ಮತ್ತಷ್ಟು ಬೆಂಕಿ ಹೆಚ್ಚಲಾಗುತ್ತಿತ್ತು. ಈ ಜೈಲುಗಳಲ್ಲಿ ದಲಿತರಿಗೊಂದು ಜೈಲು ಕೈಪಿಡಿ, ತೇವರ್‌ಗಳಿಗೆ ಮತ್ತೊಂದು ಕೈಪಿಡಿ ಇರುತ್ತಿತ್ತು. ತೇವರ್‌ಗಳಿಗೆ ಸಿಗುತ್ತಿದ್ದ ಸವಲತ್ತು ಸ್ವಾತಂತ್ರ್ಯ ದಲಿತರಿಗೆ ಸಿಗುತ್ತಿರಲಿಲ್ಲ. ದಲಿತ ಕೈದಿಗಳು ಪುಸ್ತಕ ಓದುವುದನ್ನು ಕೂಡ ಸಹಿಸಲಾಗುತ್ತಿರಲಿಲ್ಲ.

ರಾಜಸ್ತಾನ ಹೈಕೋರ್ಟ್ ಆದೇಶದ ಮೇರೆಗೆ ರಾಜಸ್ತಾನ ಸರ್ಕಾರ ಕಳೆದ ವರ್ಷ ಬಂದೀಖಾನೆ ನಿಯಮಗಳಿಗೆ ಇತ್ತೀಚೆಗೆ ಪ್ರಗತಿಪರ ತಿದ್ದುಪಡಿಗಳನ್ನು ತಂದಿತು. ಅಡುಗೆಯ ಕೆಲಸಕ್ಕೆ ಜಾತಿ ಅಥವಾ ಧರ್ಮವನ್ನು ಆಧರಿಸಿ ಯಾವುದೇ ಕೈದಿಯನ್ನು ಆರಿಸುವಂತಿಲ್ಲ. (ತಿದ್ದುಪಡಿ ಜಾರಿಯಾಗುವ ತನಕ ಬ್ರಾಹ್ಮಣ ಅಥವಾ ಸಾಕಷ್ಟು ಉನ್ನತ ಜಾತಿಯ ಹಿಂದೂ ಕೈದಿಯನ್ನು ಅಡುಗೆ ಕೆಲಸಕ್ಕೆ ನೇಮಿಸಬೇಕು ಎಂದೇ ಜೈಲು ಕೈಪಿಡಿಯಲ್ಲಿ ವಿಧಿಸಲಾಗಿತ್ತು). ಕಸಗುಡಿಸುವ ಮತ್ತು ಪಾಯಿಖಾನೆ ಸ್ವಚ್ಘಗೊಳಿಸುವ ಕೆಲಸಕ್ಕೂ ಜಾತಿಯನ್ನು ಆಧರಿಸಿ ಕೈದಿಯನ್ನು ನೇಮಿಸುವ ರೂಢಿಯನ್ನು ತಪ್ಪಿಸುವ ತಿದ್ದುಪಡಿಯೂ
ಜಾರಿಗೆ ಬಂದಿತು. ರಾಜಸ್ತಾನದ ಈ ಮೇಲ್ಪಂಕ್ತಿಯನ್ನು ಇತರೆ ರಾಜ್ಯಗಳು ಅನುಸರಿಸಬೇಕಿದೆ.

ಒಂದೆಡೆ ಸಂವಿಧಾನವು ಜಾತಿರಹಿತ ಮತ್ತು ಸಮಾನ ಸಮಾಜದ ಆಶಯವನ್ನು ಹೊಂದಿದ್ದು ಮತ್ತೊಂದೆಡೆ ನ್ಯಾಯವ್ಯವಸ್ಥೆ ಮತ್ತು ಪೊಲೀಸ್ ವ್ಯವಸ್ಥೆ ಜಾತಿವ್ಯವಸ್ಥೆಯ ಪಾಪಕೂಪದಲ್ಲಿ ಮುಳುಗೇಳುತ್ತಿರುವುದು ವಿಪರೀತ ವಿಪರ್ಯಾಸ ವಿಡಂಬನೆಯ ಸಂಗತಿ.


ಇದನ್ನೂ ಓದಿ: ಮುಸ್ಲಿಮರ ವಿರುದ್ಧ ದ್ವೇ‍ಷ ಭಾಷಣ: ಕಾನೂನು ಬಾಹಿರ ಎಂದು ಉತ್ತರಖಂಡ ಪೊಲೀಸರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...