Homeಅಂಕಣಗಳುಜೈಲುಗಳಲ್ಲೂ ಜಾತಿಭೇದ ಮೆರೆದಿರುವ ಮನುವಾದ

ಜೈಲುಗಳಲ್ಲೂ ಜಾತಿಭೇದ ಮೆರೆದಿರುವ ಮನುವಾದ

- Advertisement -
- Advertisement -

“ಜಾತಿಗೆ ಇಂದಿಗೂ ಸಮರ್ಥಕರಿದ್ದಾರೆ ಎನ್ನುವ ಸಂಗತಿಯೇ ಕರುಣಾಜನಕ. ಶ್ರಮ ವಿಭಜನೆಗೆ ಮತ್ತೊಂದು ಹೆಸರೇ ಜಾತಿ ವ್ಯವಸ್ಥೆಯಾಗಿದ್ದು, ಶ್ರಮವಿಭಜನೆಯು ನಾಗರಿಕ ಸಮಾಜದ ಹೆಗ್ಗುರುತಾಗಿದ್ದು, ಈ ವ್ಯವಸ್ಥೆಯಲ್ಲಿ ತಪ್ಪೇನೂ ಇಲ್ಲ ಎಂದು ವಾದಿಸಲಾಗುತ್ತದೆ.

ವಾಸ್ತವದಲ್ಲಿ ಜಾತಿವ್ಯವಸ್ಥೆಯು ಶ್ರಮ ವಿಭಜನೆ ಮಾತ್ರವೇ ಅಲ್ಲ, ಶ್ರಮಿಕರ ವಿಭಜನೆಯೂ ಹೌದು. ಈ ಶ್ರಮವಿಭಜನೆಯಲ್ಲಿ ವ್ಯಕ್ತಿಯ ಆಯ್ಕೆಗೆ, ಭಾವನೆಗೆ, ಆದ್ಯತೆಗೆ ಅವಕಾಶವೇ ಇಲ್ಲ. ವಿಧಿವಾದವೇ ಈ ವಿಭಜನೆಯ ಆಧಾರ”.

“ಹಿಂದೂ ಸಮಾಜವು ಏಣಿ ಅಥವಾ ಪ್ರವೇಶದ್ವಾರವೇ ಇಲ್ಲದ ಹಲವು ಅಂತಸ್ತುಗಳ ಗೋಪುರವಿದ್ದಂತೆ. ಕೆಳ ಅಂತಸ್ತಿನಲ್ಲಿ ಹುಟ್ಟಿದ ವ್ಯಕ್ತಿ ಅದೆಷ್ಟೇ ಯೋಗ್ಯನಾದರೂ ಮೇಲಿನ ಅಂತಸ್ತನ್ನು ಪ್ರವೇಶಿಸಲಾರ. ಮೇಲಿನ ಅಂತಸ್ತಿನಲ್ಲಿ ಹುಟ್ಟಿದ ವ್ಯಕ್ತಿ ಅದೆಷ್ಟೇ ಅಯೋಗ್ಯನಾದರೂ ಅವನನ್ನು ಕೆಳ ಅಂತಸ್ತಿಗೆ ಓಡಿಸುವುದು ಸಾಧ್ಯವಿಲ್ಲ. ಈ ಸ್ಪೃಶ್ಯ ಮತ್ತು ಅಸ್ಪೃಶ್ಯ ಜಾತಿಗಳು ಹಿಂದೂ ಸಮಾಜದ ಭಾಗವೇ ಆಗಿದ್ದರೂ, ವಾಸ್ತವದಲ್ಲಿ ಬೇರೆ ಬೇರೆಯೇ ಜಗತ್ತುಗಳಾಗಿ ಜೀವಿಸುತ್ತಿವೆ”.

“ಬೆಕ್ಕುಗಳು ನಾಯಿಗಳು ಅಸ್ಪೃಶ್ಯರ ಎಂಜಲು ತಿನ್ನುತ್ತವೆ. ಮಕ್ಕಳ ಮಲವನ್ನೂ ತಿನ್ನುತ್ತವೆ. ಇದೇ ನಾಯಿ ಬೆಕ್ಕುಗಳು ಸ್ಪೃಶ್ಯರ ಮನೆಯನ್ನು ಪ್ರವೇಶಿಸಬಹುದು. ಹಾಗೆ ಪ್ರವೇಶಿಸಿದರೆ ಮೈಲಿಗೆಯಿಲ್ಲ. ಈ ಪ್ರಾಣಿಗಳನ್ನು ಸ್ಪೃಶ್ಯರು ಮುಟ್ಟುತ್ತಾರೆ, ಅಪ್ಪಿ ಮುದ್ದಾಡುತ್ತಾರೆ. ಅವು ಉಣ್ಣುವ ತಟ್ಟೆಗೆ ಬಾಯಿ ಹಾಕಿದರೂ ಅವರಿಗೆ ತಕರಾರಿಲ್ಲ. ಯಾವುದೋ ಚಾಕರಿಗೆಂದು ಮನೆಯ ಹೊರಗೆ ನಿಲ್ಲುವ ಅಸ್ಪೃಶ್ಯನನ್ನು ಕಂಡ ಸವರ್ಣೀಯ ಗದರುತ್ತಾನೆ- ದೂರ ನಿಲ್ಲು, ಮಗುವಿನ ಮಲವನ್ನು ಬಾಚಿ ಎಸೆಯುವ ಬೋಕಿ ಬಿಲ್ಲೆಯನ್ನು ಅಲ್ಲಿ ಇಡಲಾಗಿದೆ. ಅದನ್ನೂ ಮುಟ್ಟಿ ಮೈಲಿಗೆ ಮಾಡುತ್ತೀಯೇನು?”


ಜಾತಿವ್ಯವಸ್ಥೆ ಮತ್ತು ಅಸ್ಪೃಶ್ಯತೆಯ ಕ್ರೌರ್ಯವನ್ನು ಕುರಿತು ಬಾಬಾಸಾಹೇಬ ಅಂಬೇಡ್ಕರ್ ಚಿತ್ರಿಸಿರುವ ಈ ಸುಡು ವಾಸ್ತವ ಇಂದಿಗೂ ನಿಗಿನಿಗಿ.

ನಾಶವಾಗಲು ಒಲ್ಲದ ಜಾತಿವ್ಯವಸ್ಥೆಯ ಸ್ಥಿತಿಸ್ಥಾಪಕ ಜಿಗುಟು ಗುಣ ಬೆರಗುಬಡಿಸುವಂತಹುದು. ಊಳಿಗಮಾನ್ಯ ವ್ಯವಸ್ಥೆ, ಬಂಡವಾಳಶಾಹಿ ವ್ಯವಸ್ಥೆ, ಕೈಗಾರಿಕೀಕರಣ, ಗಣರಾಜ್ಯ ಸಂವಿಧಾನ, ನವಉದಾರವಾದಿ ಜಾಗತೀಕರಣಗಳೆಲ್ಲವನ್ನು ಜೀರ್ಣಿಸಿಕೊಂಡು ಜೀವಂತ ಉಳಿದಿರುವ ದುಷ್ಟವ್ಯವಸ್ಥೆಯಿದು ಎಂದಿದ್ದಾರೆ ಅಂಬೇಡ್ಕರವಾದಿ ಚಿಂತಕ ಆನಂದ್ ತೇಲ್ತುಂಬ್ಡೆ.

ದಲಿತರು ದಮನಿತರ ಪಾಲಿಗೆ ಜಾತಿವ್ಯವಸ್ಥೆಯ ಈ ಸಮಾಜವೇ ಒಂದು ದೈತ್ಯ ಬಯಲು ಬಂದೀಖಾನೆ. ಜೈಲುಗಳು ಕೂಡ ಈ ದೈತ್ಯ ಬಯಲು ಬಂದೀಖಾನೆಯ ಪುಟ್ಟ ಪ್ರತಿರೂಪಗಳು. ಈ ಕುರಿತು ಕಾಮನ್‌ವೆಲ್ತ್ ಹ್ಯೂಮನ್ ರೈಟ್ಸ್ ಇನಿಶಿಯೇಟಿವ್ (ಸಿ.ಎಚ್.ಆರ್.ಐ) ಸಂಶೋಧನಾ ಪ್ರಬಂಧವನ್ನೇ ಇತ್ತೀಚೆಗೆ ಸಿದ್ಧಪಡಿಸಿತ್ತು. ಪ್ರಬಂಧದ ಎಲ್ಲೆಗಳನ್ನು ’ದಿ ವೈರ್’ ಅಂತರ್ಜಾಲ ಸುದ್ದಿತಾಣದ ಸುಕನ್ಯಾ ಶಾಂತಾ ಇನ್ನಷ್ಟು ವಿಸ್ತರಿಸಿದ್ದಾರೆ.

ಸಿ.ಎಚ್.ಆರ್.ಐ. ಸಂಶೋಧನಾ ಪ್ರಬಂಧದ ಪ್ರಕಾರ ರಾಜ್ಯದ ಜೈಲುಗಳನ್ನು ಪ್ರವೇಶಿಸುವ ಪ್ರತಿಯೊಬ್ಬ ಕೈದಿಯನ್ನು ಆತನ ಜಾತಿಯಿಂದ ಗುರುತಿಸಲಾಗುತ್ತಿತ್ತು. ತಳವರ್ಗಗಳ ಕೈದಿಗಳಿಗೆ ಸ್ವಚ್ಛತೆಯ ಕೆಲಸವನ್ನು ವಹಿಸಲಾಗುತ್ತಿತ್ತು. ಮೇಲ್ವರ್ಗಗಳವರಿಗೆ ಅಡುಗೆ ಕೆಲಸ, ಓದು ಬರೆಹದ ಕೆಲಸ ನೀಡಲಾಗುತ್ತಿತ್ತು. ಸಿರಿವಂತರು ಮತ್ತು ಪ್ರಭಾವಿಗಳು ಯಾವ ಕೆಲಸವನ್ನೂ ಮಾಡುತ್ತಿರಲಿಲ್ಲ.

ಜಾತಿ ಆಧಾರಿತ ಚಾಕರಿಗೆ ಬಹುತೇಕ ರಾಜ್ಯಗಳ ಜೈಲು ಕೈಪಿಡಿಗಳ (Jail Manuals) ಮಂಜೂರಾತಿ ಉಂಟು. ಬ್ರಿಟಿಷರ ಕಾಲದ ಈ ಕೈಪಿಡಿಗಳು ಸ್ವಾತಂತ್ರ್ಯಾನಂತರವೂ ತಿದ್ದುಪಡಿಗಳನ್ನು ಕಂಡಿಲ್ಲ. ಜಾತಿ ಆಧಾರಿತ ದೈಹಿಕ ಶ್ರಮದ ಅಂಶವನ್ನು ಮುಟ್ಟಿಯೇ ಇಲ್ಲ. ಪ್ರತಿಯೊಂದು ರಾಜ್ಯವೂ ಪ್ರತ್ಯೇಕ ಜೈಲು ಕೈಪಿಡಿಗಳನ್ನು ಹೊಂದಿದೆ. ಆದರೆ ಇವೆಲ್ಲವುಗಳ ಮೂಲ ಆಧಾರ 1894ರ ಕಾರಾಗೃಹ ಕಾಯಿದೆ. ಜೈಲಿನ ಎಲ್ಲ ಚಟುವಟಿಕೆಗಳು, ನಿಯಮಗಳು, ನಿಷೇಧಗಳು, ಶಿಕ್ಷೆಗಳು, ಕೈದಿಗೆ ನೀಡಲಾಗುವ ಸ್ಥಳಾವಕಾಶ, ಆಹಾರ, ವೈದ್ಯಕೀಯ ಇತ್ಯಾದಿ ಸೌಲಭ್ಯಗಳ ಕುರಿತ ವಿವರಗಳನ್ನು ಈ ಕೈಪಿಡಿಗಳು ಹೊಂದಿರುತ್ತವೆ.

ಜಾತಿಪದ್ಧತಿಯ ನಿರ್ಮೂಲನೆಯನ್ನು ಸಾರುವ ಸಂವಿಧಾನಜಾರಿಯಾಗಿ ಏಳು ದಶಕಗಳೇ ಉರುಳಿವೆ. ಆದರೆ ಜೈಲು ಕೈಪಿಡಿಗಳು ಈಗಲೂ ಜಾತಿಪದ್ಧತಿಯ ಅವಹೇಳನಗಳಿಂದ ಮುಕ್ತವಾಗಿಲ್ಲ.

ಪ್ರಾಚೀನ ಭಾರತದಲ್ಲಿ ಕೆಳಜಾತಿಗಳು ಮತ್ತು ಮೇಲ್ಜಾತಿಗಳಿಗೆ ನೀಡಲಾಗುತ್ತಿದ್ದ ಶಿಕ್ಷೆ ಏಕಪ್ರಕಾರವಾಗಿ ಇರಲಿಲ್ಲ. ಮೇಲ್ಜಾತಿಗಳ ಅಪರಾಧಿಗಳಿಗೆ ಕಡಿಮೆ ಶಿಕ್ಷೆಯನ್ನೂ ಕೆಳಜಾತಿಗಳ ಅಪರಾಧಿಗಳಿಗೆ ತೀವ್ರತರದ ಶಿಕ್ಷೆಯನ್ನೂ ನಿಗದಿಪಡಿಸಿತ್ತು ಕೌಟಿಲ್ಯನ ಅರ್ಥಶಾಸ್ತ್ರ. ಮನುಸ್ಮೃತಿ ಮತ್ತು ಕೌಟಿಲ್ಯನ ದಂಡನೀತಿ ತತ್ವವೇ ಇಂದಿಗೂ ನಮ್ಮ ಜೈಲುಗಳನ್ನು ಆಳುತ್ತಿದೆ.

ದೇಶದ ಇಂದಿನ ಜೈಲುಗಳಲ್ಲಿ ವಿಚಾರಣಾಧೀನ ಕೈದಿಗಳದೇ ಸಿಂಹಪಾಲು. ಅರ್ಥಾತ್ ಅವರ ಮೇಲಿನ ಅಪರಾಧ ಇನ್ನೂ ಸಾಬೀತಾಗದೆ, ಶಿಕ್ಷೆ ವಿಧಿಸದೆ ವಿಚಾರಣೆಯ ಹಂತದಲ್ಲೇ ವರ್ಷಗಟ್ಟಲೆ ಕೊಳೆಯುತ್ತಿರುವವರು. ಪರಿಶಿಷ್ಟ ಜಾತಿ-ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳವರು ಹಾಗು ಅಲ್ಪಸಂಖ್ಯಾತರ ಒಟ್ಟು ಪ್ರಮಾಣ ಶೇ.85. ಗುಣಮಟ್ಟದ ಕಾನೂನು ನೆರವಿನಿಂದ ವಂಚಿತರಾದ ಬಡವರು ಮತ್ತು ಅಸಹಾಯಕರು ಇವರು. ಅಪರಾಧಿಗಳೆಂದು ರುಜುವಾತಾದರೆ ಸಿಗುವ ಶಿಕ್ಷೆಯ ಅವಧಿಗಿಂತಲೂ ಹೆಚ್ಚಿನ ಅವಧಿಯನ್ನು ಈ ಕೈದಿಗಳು ವಿಚಾರಣಾಧೀನ ಕೈದಿಗಳಾಗಿ ಜೈಲಿನಲ್ಲಿ ಸವೆಸಿದ್ದಾರೆ. ಜಾಮೀನಿಗೆ ಅಗತ್ಯವಿರುವ ಹಣವನ್ನು ಹೊಂದಿಸಲೂ ಅಶಕ್ತರಿವರು.

ಈ ವಿಚಾರಣಾಧೀನ ಕೈದಿಗಳ ಪೈಕಿ ಅಪರಾಧ ಸಾಬೀತಾಗಿ ಅಂತಿಮವಾಗಿ ಶಿಕ್ಷೆಗೆ ಗುರಿಯಾಗುವವರ ಪ್ರಮಾಣ ಶೇ.50ಕ್ಕಿಂತ ಕಡಿಮೆ!

2008ರ ಮಾಲೇಗಾಂವ್ ಸ್ಫೋಟಗಳ ಆಪಾದಿತೆಯಾಗಿದ್ದ ಸಾಧ್ವಿ ಪ್ರಜ್ಞಾಸಿಂಗ್ ಠಾಕೂರ್ ಇದೀಗ ಬಿಜೆಪಿ ಸಂಸದೆ. ಈಕೆ ಮುಂಬಯಿಯ ಬೈಕುಲ್ಲ ಕಾರಾಗಾರದಲ್ಲಿದ್ದಾಗ ಆಕೆಗೆ ಸಿರಿವಂತರು ಮತ್ತು ಪ್ರಭಾವಿಗಳಿಗೆ ನೀಡಲಾಗುವ ಪ್ರತ್ಯೇಕ ವಿಐಪಿ ಸೆಲ್ ನೀಡಲಾಗಿತ್ತು. ಆಕೆಯ ಸೇವೆಗಾಗಿ ಮೂರು ಮಂದಿ ಸೇವಕಿಯರನ್ನು ನೇಮಿಸಲಾಗಿತ್ತು. ಈ ಪೈಕಿ ಆಕೆಯ ಊಟತಿಂಡಿಯ ಕಾಳಜಿ ವಹಿಸಲು ಠಾಕೂರ್ ಜಾತಿಗೆ ಸೇರಿದ ಮಹಿಳಾ ಕೈದಿಯನ್ನೇ ನೇಮಿಸಲಾಗಿತ್ತು. ಜಾಟ್ ಜಾತಿಗೆ ಸೇರಿದ ಮತ್ತೊಬ್ಬ ಮಹಿಳಾ ಕೈದಿಯನ್ನು ಅಂಗರಕ್ಷಕಿಯನ್ನಾಗಿ ನೀಡಲಾಗಿತ್ತು. ಪ್ರಜ್ಞಾಸಿಂಗ್ ಪಾಯಿಖಾನೆ ಸ್ವಚ್ಛತೆಗೆ ದಲಿತ ಮಹಿಳಾ ಕೈದಿಯನ್ನು ನಿಯುಕ್ತಿ ಮಾಡಲಾಗಿತ್ತು.

ತಮಿಳುನಾಡಿನ ದಕ್ಷಿಣ ಜಿಲ್ಲೆಗಳಾದ ರಾಮನಾಥಪುರಂ, ತೂತ್ತುಕುಡಿ, ತಿರುನೆಲ್ವೇಲಿ, ಮಧುರೈ ಹಾಗೂ ಧರ್ಮಪುರಿಗಳಲ್ಲಿ ಅಸ್ಪೃಶ್ಯತೆಯ ಪಿಡುಗು ವ್ಯಾಪಕ. ದಲಿತರು ಮತ್ತು ಬಲಿಷ್ಠ ತೇವರ್ ಜಾತಿಯ ನಡುವೆ ಸಾವು ನೋವುಗಳ ತೀವ್ರ ಘರ್ಷಣೆಗಳು ಜರುಗಿವೆ. ತಿರುನೆಲ್ವೇಲಿಯ ಪಾಳಯಂಕೋಟ್ಟೈ ಕೇಂದ್ರ ಕಾರಾಗಾರದಲ್ಲಿ ದಲಿತರು, ತೇವರ್ ಕೈದಿಗಳನ್ನು ಪ್ರತ್ಯೇಕ ಬ್ಲಾಕ್‌ಗಳಲ್ಲಿ ಇಡಲಾಗಿತ್ತು. ದಲಿತರ ಬ್ಲಾಕ್‌ಗೆ ಸರಬರಾಜು ಮಾಡುವ ಊಟ ಅತ್ಯಂತ ಕಳಪೆಯದಾಗಿತ್ತು. ಹೊಟ್ಟೆ ತುಂಬುತ್ತಿರಲಿಲ್ಲ ಕೂಡ. ಕಠಿಣ ಶ್ರಮ ಮಾಡಿಸಲಾಗುತ್ತಿತ್ತು. ಕೂಲಿ ಕೊಡುತ್ತಿರಲಿಲ್ಲ. ವೈದ್ಯಕೀಯ ಸೌಲಭ್ಯ ನೀಡುತ್ತಿರಲಿಲ್ಲ. 1,600 ಕೈದಿಗಳನ್ನು ತೇವರ್, ನಾಡಾರ್ ಹಾಗೂ ದಲಿತರೆಂದು ವಿಭಜಿಸಿ ಪ್ರತ್ಯೇಕ ಬ್ಲಾಕ್‌ಗಳಲ್ಲಿ ಇರಿಸಲಾಗಿತ್ತು ಎಂಬ ಸಂಗತಿಯನ್ನು ಇಂಗ್ಲಿಷ್ ನಿಯತಕಾಲಿಕ ’ದಿ ಓಪನ್’ ವರದಿ ಮಾಡಿತ್ತು. ಇದು ಕೇವಲ ಪಾಳಯಂಕೋಟ್ಟೈ ಜೈಲಿನ ಸಂಗತಿ ಮಾತ್ರವಲ್ಲ, ಬಹುತೇಕ ದಕ್ಷಿಣ ಜಿಲ್ಲೆಗಳಲ್ಲಿ ಕೈದಿಗಳನ್ನು ಜಾತಿಯ ಪ್ರಕಾರ ಬೇರೆಬೇರೆ ಇಡಲಾಗುತ್ತಿದೆ ಎಂದು ತಮಿಳುನಾಡು ಹೈಕೋರ್ಟ್ ವಕೀಲ ಆರ್.ಅಳಗುಮಣಿ ಹೇಳಿದ್ದರು. ದಲಿತ ಬ್ಲಾಕ್‌ಗಳಿಗೆ ತೇವರ್ ಗಾರ್ಡುಗಳನ್ನೂ, ತೇವರ್ ಬ್ಲಾಕ್‌ಗಳಿಗೆ ದಲಿತ ಗಾರ್ಡುಗಳನ್ನೂ ನೇಮಕ ಮಾಡಿ ಎರಡೂ ಸಮುದಾಯಗಳ ನಡುವಣ ವೈಮನಸ್ಯಕ್ಕೆ ಮತ್ತಷ್ಟು ಬೆಂಕಿ ಹೆಚ್ಚಲಾಗುತ್ತಿತ್ತು. ಈ ಜೈಲುಗಳಲ್ಲಿ ದಲಿತರಿಗೊಂದು ಜೈಲು ಕೈಪಿಡಿ, ತೇವರ್‌ಗಳಿಗೆ ಮತ್ತೊಂದು ಕೈಪಿಡಿ ಇರುತ್ತಿತ್ತು. ತೇವರ್‌ಗಳಿಗೆ ಸಿಗುತ್ತಿದ್ದ ಸವಲತ್ತು ಸ್ವಾತಂತ್ರ್ಯ ದಲಿತರಿಗೆ ಸಿಗುತ್ತಿರಲಿಲ್ಲ. ದಲಿತ ಕೈದಿಗಳು ಪುಸ್ತಕ ಓದುವುದನ್ನು ಕೂಡ ಸಹಿಸಲಾಗುತ್ತಿರಲಿಲ್ಲ.

ರಾಜಸ್ತಾನ ಹೈಕೋರ್ಟ್ ಆದೇಶದ ಮೇರೆಗೆ ರಾಜಸ್ತಾನ ಸರ್ಕಾರ ಕಳೆದ ವರ್ಷ ಬಂದೀಖಾನೆ ನಿಯಮಗಳಿಗೆ ಇತ್ತೀಚೆಗೆ ಪ್ರಗತಿಪರ ತಿದ್ದುಪಡಿಗಳನ್ನು ತಂದಿತು. ಅಡುಗೆಯ ಕೆಲಸಕ್ಕೆ ಜಾತಿ ಅಥವಾ ಧರ್ಮವನ್ನು ಆಧರಿಸಿ ಯಾವುದೇ ಕೈದಿಯನ್ನು ಆರಿಸುವಂತಿಲ್ಲ. (ತಿದ್ದುಪಡಿ ಜಾರಿಯಾಗುವ ತನಕ ಬ್ರಾಹ್ಮಣ ಅಥವಾ ಸಾಕಷ್ಟು ಉನ್ನತ ಜಾತಿಯ ಹಿಂದೂ ಕೈದಿಯನ್ನು ಅಡುಗೆ ಕೆಲಸಕ್ಕೆ ನೇಮಿಸಬೇಕು ಎಂದೇ ಜೈಲು ಕೈಪಿಡಿಯಲ್ಲಿ ವಿಧಿಸಲಾಗಿತ್ತು). ಕಸಗುಡಿಸುವ ಮತ್ತು ಪಾಯಿಖಾನೆ ಸ್ವಚ್ಘಗೊಳಿಸುವ ಕೆಲಸಕ್ಕೂ ಜಾತಿಯನ್ನು ಆಧರಿಸಿ ಕೈದಿಯನ್ನು ನೇಮಿಸುವ ರೂಢಿಯನ್ನು ತಪ್ಪಿಸುವ ತಿದ್ದುಪಡಿಯೂ
ಜಾರಿಗೆ ಬಂದಿತು. ರಾಜಸ್ತಾನದ ಈ ಮೇಲ್ಪಂಕ್ತಿಯನ್ನು ಇತರೆ ರಾಜ್ಯಗಳು ಅನುಸರಿಸಬೇಕಿದೆ.

ಒಂದೆಡೆ ಸಂವಿಧಾನವು ಜಾತಿರಹಿತ ಮತ್ತು ಸಮಾನ ಸಮಾಜದ ಆಶಯವನ್ನು ಹೊಂದಿದ್ದು ಮತ್ತೊಂದೆಡೆ ನ್ಯಾಯವ್ಯವಸ್ಥೆ ಮತ್ತು ಪೊಲೀಸ್ ವ್ಯವಸ್ಥೆ ಜಾತಿವ್ಯವಸ್ಥೆಯ ಪಾಪಕೂಪದಲ್ಲಿ ಮುಳುಗೇಳುತ್ತಿರುವುದು ವಿಪರೀತ ವಿಪರ್ಯಾಸ ವಿಡಂಬನೆಯ ಸಂಗತಿ.


ಇದನ್ನೂ ಓದಿ: ಮುಸ್ಲಿಮರ ವಿರುದ್ಧ ದ್ವೇ‍ಷ ಭಾಷಣ: ಕಾನೂನು ಬಾಹಿರ ಎಂದು ಉತ್ತರಖಂಡ ಪೊಲೀಸರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...