Homeಅಂಕಣಗಳುಮಾತು ಮರೆತ ಭಾರತ; ಕಾರಂಚೇಡು ಫೈಲ್ : ದಲಿತರ ಮೇಲೆ ಶೂದ್ರರ ಅಟ್ಟಹಾಸ

ಮಾತು ಮರೆತ ಭಾರತ; ಕಾರಂಚೇಡು ಫೈಲ್ : ದಲಿತರ ಮೇಲೆ ಶೂದ್ರರ ಅಟ್ಟಹಾಸ

- Advertisement -
- Advertisement -

ಅದು ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿನ ಕಾರಂಚೇಡು ಎಂಬ ಊರು. ಈ ಊರಿನ ಹೆಸರು ಕೇಳಿದರೆ ಸಾಕು ಇಡೀ ಆಂಧ್ರಪ್ರದೇಶದ ದಲಿತರು ಹಾಗೂ ಮೇಲ್ಜಾತಿ ಭೂಮಾಲೀಕರು ಇಬ್ಬರೂ ಬೆಚ್ಚಿ ಬೀಳುತ್ತಾರೆ. ಅದಕ್ಕೆ ಕಾರಣ ಜುಲೈ 17, 1985ರಲ್ಲಿ ಕಾರಂಚೇಡುವಿನಲ್ಲಿ ನಡೆದಿದ್ದ ಭೀಕರ ನರಮೇಧ ಹಾಗೂ ನಂತರದ ಬೆಳವಣಿಗೆಗಳು.

ಈ ಘಟನೆ ನಡೆದು 23 ವರ್ಷಗಳ ನಂತರ ಸುಪ್ರೀಂಕೋರ್ಟ್ ಈ ನರಮೇಧಕ್ಕೆ ಕಾರಣರಾದ ಹಲವರಲ್ಲಿ ಒಬ್ಬನಿಗೆ ಜೀವಾವಧಿ ಶಿಕ್ಷೆ ನೀಡಿ, ಉಳಿದಂತೆ 30 ಅಪರಾಧಿಗಳಿಗೆ ಮೂರು ವರ್ಷ ಜೈಲು ಶಿಕ್ಷೆಯನ್ನು ವಿಧಿಸಿತು. ದಲಿತ ಭಾರತದ ಇತಿಹಾಸದಲ್ಲಿ ಕಾರಂಚೇಡು ಅಚ್ಚಳಿಯದಂತೆ ನಿಲ್ಲಲು ಮುಖ್ಯ ಕಾರಣವೇ ಕನಿಷ್ಟಪಕ್ಷ ದಲಿತರನ್ನು ಕೊಂದ ಕೆಲವರಿಗಾದರೂ ಶಿಕ್ಷೆಯಾದದ್ದಾಗಿದೆ.

1960ರ ದಶಕದಲ್ಲಿ ಆಂಧ್ರಪ್ರದೇಶದ ಪ್ರಮುಖ ರೈತಾಪಿ ಜಾತಿಯವರಾದ ಕಮ್ಮಾಗಳು ಕೃಷಿ ಗೇಣಿದಾರರಾಗಿದ್ದರು. ಜೊತೆಗೆ ಕೃಷಿ ಕೂಲಿಗಳೂ ಆಗಿದ್ದರು. ಈ ಕಾರಣದಿಂದ ಸಹಜವಾಗಿ ಕೂಲಿಗಳ ಪರವಾಗಿ ವರ್ಗ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಕಮ್ಯುನಿಸ್ಟ್ ಪಕ್ಷದೊಂದಿಗೆ ಈ ಕಮ್ಮಾಗಳು ಗುರುತಿಸಿಕೊಂಡಿದ್ದರು. ಮತ್ತೊಂದು ಕಡೆ ರೆಡ್ಡಿಗಳು ಆಡಳಿತ ಪಕ್ಷವಾದ ಕಾಂಗ್ರೆಸ್ಸಿನೊಂದಿಗೆ ಗುರುತಿಸಿಕೊಂಡಿದ್ದರು. ಇಲ್ಲಿನ ಪ್ರಮುಖ ದಲಿತ ಜಾತಿಗಳಾದ ಮಾಲ ಮತ್ತು ಮಾದಿಗರೂ ಸಹ ರಾಜಕೀಯವಾಗಿ ಕಮ್ಯುನಿಸ್ಟ್ ಹಾಗೂ ಕಾಂಗ್ರೆಸ್ಸಿನಲ್ಲಿ ಹಂಚಿಹೋಗಿದ್ದರು. ಆದರೆ 70-80ರ ದಶಕದ ಭೂಸುಧಾರಣೆ ಹಾಗೂ ಇನ್ನಿತರ ಆರ್ಥಿಕ ಪಲ್ಲಟಗಳ ಕಾರಣವಾಗಿ ಕಮ್ಮಾ ಜಾತಿಗಳ ಕೈಗೆ ಭೂಮಿ ದಕ್ಕಿತು. ಸದಾ ಮೇಲ್ಮುಖ ಚಲನೆಗೆ ಹಾತೊರೆಯುತ್ತಿದ್ದ ಕಮ್ಮಾ ಕೃಷಿಕರು ಕೊನೆಗೂ ಜಮೀನುಗಳನ್ನು ಪಡೆದುಕೊಂಡರು. ಇದು ಅವರನ್ನು ಭೂಮಾಲೀಕ ಜಾತಿಯನ್ನಾಗಿ ಮಾಡಿತು. ಇದೇ ಕಾರಣದಿಂದ 80ರ ದಶಕದಲ್ಲಿ ಪ್ರಮುಖವಾಗಿ ಕಮ್ಮಾ ಮುಂಚೂಣಿ ನಾಯಕರೆಲ್ಲ ಸೇರಿ ’ತೆಲುಗು ದೇಶಂ’ ಪಕ್ಷವನ್ನು ಸ್ಥಾಪಿಸುವಂತಾಯಿತು. ತೆಲುಗು ನಾಡಿನ ಪ್ರಖ್ಯಾತ ನಟ ಎನ್.ಟಿ.ರಾಮರಾವ್ ಇದರ ಮುಖ್ಯಸ್ಥ. ಇವರೇ 1983ರಲ್ಲಿ ಮುಖ್ಯಮಂತ್ರಿಯೂ ಆದರು. ಈ ರಾಮರಾವ್‌ರವರ ಮಗಳಿಗೆ ಕಾರಂಚೇಡುವಿನ ಕಮ್ಮಾ ಭೂಮಾಲೀಕ ದಗ್ಗುಬಾಟಿ ಚೆಂಚುರಾಮಯ್ಯನ ಮಗ ದಗ್ಗುಬಾಟಿ ಚೆಂಚು ವೆಂಕಟೇಶ್ವರರಾವ್ ಜೊತೆ ವಿವಾಹವಾದಾಗಿನಿಂದ ಕಾರಂಚೇಡುವಿನ ಕಮ್ಮಾ ಭೂಮಾಲೀಕರ ಕಾಲುಗಳು ನೆಲದ ಮೇಲೆ ನಿಲ್ಲಲಿಲ್ಲ. ಇದರ ಜೊತೆಗೆ ದಗ್ಗುಬಾಟಿ ಚೆಂಚು ವೆಂಕಟೇಶ್ವರ ರಾವ್ 1983ರಲ್ಲಿ ನಡೆದ ಚುನಾವಣೆಯಲ್ಲಿ ಶಾಸಕನಾಗಿ ಆಯ್ಕೆಯಾಗಿಬಿಟ್ಟ. ಇದರಿಂದ ಅಲ್ಲಿನ ಕಮ್ಮಾ ಭೂಮಾಲೀಕರ ಆಟಾಟೋಪಗಳಿಗೆ ತಡೆ ಇಲ್ಲದಂತಾಯಿತು. ಅವರ ಹೊಲಗಳಲ್ಲಿ ಕೃಷಿಕೂಲಿಗಳಾಗಿ ಕೆಲಸ ಮಾಡುತ್ತಿದ್ದ ದಲಿತರಿಗೆ ಅದರಲ್ಲೂ ಮಾದಿಗರಿಗೆ ಕಿರುಕುಳ ನೀಡಲು ಆರಂಭಿಸಿದರು. ಕೂಲಿಯನ್ನೂ ಕಡಿಮೆ ಮಾಡಿದರು. ಇದರ ಜೊತೆಗೆ ಆ ಕಾಲದ ಹಿಂದಿನ ಚುನಾವಣೆಯಲ್ಲಿ ದಲಿತರು ಕಾಂಗ್ರೆಸ್ ಪಕ್ಷಕ್ಕೆ ಓಟು ಹಾಕಿದ್ದನ್ನು ಕಂಡಿದ್ದ ಕಮ್ಮಾ ಭೂಮಾಲೀಕರು ಚೆಂಚುರಾಮಯ್ಯನ ಮುಖಂಡತ್ವದಲ್ಲಿ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದ್ದರು. ಆ ದಿನ ಬಂದೇಬಿಟ್ಟಿತು.

ಅಂದು ಜುಲೈ 16, 1985ರ ಸಂಜೆಯ ಸಮಯ. ಕಾರಂಚೇಡುವಿನ ದಲಿತರ ನೀರಿನ ತೊಟ್ಟಿಯ ಬಳಿ ಕಮ್ಮಾ ಜಾತಿಯ ರೈತನೊಬ್ಬ ತನ್ನ ಎಮ್ಮೆಗಳನ್ನು ತೊಳೆಯುತ್ತಿದ್ದ. ಆ ಕೊಳಕು ನೀರು ನೇರವಾಗಿ ದಲಿತರ ನೀರಿನ ತೊಟ್ಟಿಗೆ ಹರಿಯುತ್ತಿತ್ತು. ಇದನ್ನು ಕಂಡ ದಲಿತನೊಬ್ಬ ಪ್ರಶ್ನಿಸಿದನು. ಇದನ್ನೇ ನೆಪ ಮಾಡಿಕೊಂಡು ಕಮ್ಮಾ ರೈತ ಕೈಲಿದ್ದ ಹಗ್ಗದಿಂದಲೇ ದಲಿತ ಯುವಕನನ್ನು ಹೊಡೆಯಲು ಆರಂಭಿಸಿದನು. ಇದನ್ನು ಕಂಡ ದಲಿತೆ ಮುನ್ನಂಗಿ ಸುವಾರ್ತ ತನ್ನ ಕೈಯಲ್ಲಿದ್ದ ಬಿಂದಿಗೆಯಿಂದಲೇ ಆ ಕಮ್ಮಾ ರೈತನನ್ನು ಹೊಡೆದು ಓಡಿಸಿದಳು. ಆ ಕಮ್ಮಾ ರೈತನೊಬ್ಬನಿಗಾದ ಶಾಸ್ತಿಯನ್ನು ಇಡೀ ಕಮ್ಮಾ ಜಾತಿ ತನಗಾದ ಅವಮಾನವೆಂದು ಭಾವಿಸಿತು. ಈ ಹಿಂದಿನ ಚುನಾವಣೆಯ ಘಟನೆಗೆ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದವರಿಗೆ ತತ್‌ಕ್ಷಣದ ಕಾರಣ ದೊರಕಿತು.

ನೀರಿನ ತೊಟ್ಟಿಯ ಬಳಿ ನಡೆದಿದ್ದ ಗಲಾಟೆ ಸಂಬಂಧಿಸಿ ರಾಜಿ ಸಂಧಾನ ಮಾಡಿಕೊಳ್ಳೋಣವೆಂದು ದಲಿತ ಹಿರಿಯರನ್ನು ಕಮ್ಮಾ ಭೂಮಾಲೀಕರು ಒಪ್ಪಿಸಿದರು. ಜುಲೈ 17ರಂದು ಎರಡೂ ಕಡೆಯವರು ಪಂಚಾಯಿತಿ ಕಟ್ಟೆಯ ಬಳಿ ನೆರೆದರು. ಇದೇ ಸಮಯಕ್ಕೆ ಕಾಯುತ್ತಿದ್ದ ಕಮ್ಮಾ ಭೂಮಾಲೀಕರ ತಂಡ ಹಾಗೂ ಸುತ್ತಮುತ್ತಲಿದ್ದ ಅವರ ಸಂಬಂಧಿಕರು ಕತ್ತಿ, ಪಿಕಾಸಿ, ದೊಣ್ಣೆ, ಚೂರಿ, ಕುಡುಗೋಲುಗಳನ್ನು ಹಿಡಿದು ದಲಿತರ ಮೇಲೆರಗಿದರು. ನಿರಾಯುಧರಾದ ದಲಿತರು ಜೀವ ಉಳಿಸಿಕೊಳ್ಳಲು ಹೊಲಗದ್ದೆಗಳ ಹಾದಿಯನ್ನು ಹಿಡಿದರು. ಆದರೆ ಅವರನ್ನು ಬಿಡದಂತೆ ಹಿಂಬಾಲಿಸಿದ ಕಮ್ಮಾ ಸಮುದಾಯದ ಜಾತಿವಾದಿ ಕ್ರೂರಿಗಳು ಬೈಕು, ಟ್ರ್ಯಾಕ್ಟರ್, ಸೈಕಲ್ಲುಗಳ ಮೇಲೆ ಹತ್ತಿ ಬೆನ್ನತ್ತಿ ಒಬ್ಬೊಬ್ಬರನ್ನು ಪತ್ತೆ ಹಚ್ಚಿ ಕೊಲ್ಲುತ್ತಾ ಹೋದರು. ಸಿಕ್ಕಸಿಕ್ಕವರ ಮೇಲೆ ಹಲ್ಲೆ ಮಾಡಿದರು. ಈ ನರಮೇಧದಲ್ಲಿ ಕಮ್ಮಾಗಳು 6 ಜನ ಮಾದಿಗ ಯುವಕರನ್ನು ಕೊಂದುಹಾಕಿದರು. ಮೂವರು ಮಹಿಳೆಯರ ಮೇಲೆ ಅತ್ಯಾಚಾರವೆಸಗಿ ಅಟ್ಟಹಾಸ ಮೆರೆದರು. ಗರ್ಭಿಣಿಯರನ್ನೂ ಬಿಡದೆ ದೊಣ್ಣೆಯಿಂದ ಥಳಿಸಿದರು. ಹಲವರು ಪ್ರಾಣವನ್ನು ಉಳಿಸಿಕೊಳ್ಳಲು ಪಕ್ಕದ ಚಿರಾಲ ಪಟ್ಟಣಕ್ಕೆ ಓಡಿಹೋದರು. ಅಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಇಬ್ಬರು ಯುವಕರೂ ತೀರಿಕೊಂಡರು. ಈ ಸಮಯದಲ್ಲಿ ದಲಿತರನ್ನು ಕಾಪಾಡಿದ್ದು ಚಿರಾಲ ಪಟ್ಟಣದ ಒಂದು ಕ್ರೈಸ್ತ ಚರ್ಚ್. ವಾರವಿಡೀ ಅನ್ನವಿಟ್ಟು ಅವರನ್ನು ಪ್ರಾಣ ಭಯದಿಂದ ದೂರ ಮಾಡಿತು. ಆದರೆ ಈ ವಿಷಯ ತಿಳಿದ ಪೊಲೀಸರು ಚರ್ಚಿನಲ್ಲಿ ಪ್ರಾಣ ಭಯದಿಂದ ಬದುಕುತ್ತಿದ್ದ ದಲಿತರನ್ನೇ ಬಂಧಿಸಿತು. ಅಷ್ಟೊತ್ತಿಗೆ ಈ ನರಮೇಧ ಇಡೀ ಭಾರತದಾದ್ಯಂತ ಮನೆಮಾತಾಗಿತ್ತು. ಆಂಧ್ರಪ್ರದೇಶದ ದಕ್ಷ ಹೋರಾಟಗಾರರಾದ ಬೊಜ್ಜಾ ತಾರಕಂ ಮತ್ತು ಕಟ್ಟಿ ಪದ್ಮರಾವ್ ಇಬ್ಬರೂ ಸ್ಥಳೀಯವಾಗಿ ಎಚ್ಚೆತ್ತ ದಲಿತರನ್ನು ಸಂಘಟಿಸಿ ಕಾರಂಚೇಡು ದಲಿತರಿಗೆ ನ್ಯಾಯ ಕೊಡಿಸಲೋಸುಗ ಆಂಧ್ರಪ್ರದೇಶ ದಲಿತ ಮಹಾಸಭಾ ಸಂಘಟನೆ ಕಟ್ಟಿದರು. ಅದರ ಮೂಲಕ ದಲಿತರಿಗೆ ಧೈರ್ಯ ತುಂಬಲು ನೂರಾರು ಕಾರ್ಯಕ್ರಮ ರೂಪಿಸಿದರು. ಪ್ರಕಾಶಂ ಜಿಲ್ಲೆಯಲ್ಲಿ ಜಾಥಾ ಹಮ್ಮಿಕೊಂಡರು.

ಈ ಮೇಲಿನ ಹೋರಾಟದಿಂದಾಗಿ ಸೆಷನ್ ನ್ಯಾಯಾಲಯವು 159 ಕಮ್ಮಾ ಜಾತಿಯ ಜಾತಿವಾದಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತು. ಆದರೆ ಪ್ರಮುಖ ಸಾಕ್ಷಿಯಾಗಿದ್ದ ದಲಿತ ಮಹಿಳೆಯ ಕೊಲೆಯೊಡನೆ ಪ್ರಕರಣ ಬೇರೆಯದೇ ಜಾಡು ಹಿಡಿಯಿತು. ಆಂಧ್ರಪ್ರದೇಶ ಹೈಕೋರ್ಟ್ ಅನುಮಾನಾಸ್ಪದ ವಿಚಾರಣೆ ಎಂಬ ನೆಪವೊಡ್ಡಿ ಅಪರಾಧಿಗಳಿಗೆ ಶಿಕ್ಷೆಯನ್ನು ತಡೆಹಿಡಿಯಿತು. ಆದರೆ ಬೊಜ್ಜಾ ತಾರಕಂರವರ ಸತತ ಪ್ರಯತ್ನದಿಂದ 2008ರಲ್ಲಿ ಸುಪ್ರೀಂ ಕೋರ್ಟ್, ಪ್ರಕರಣದ ಆರೋಪಿ ಒಬ್ಬನಿಗೆ ಜೀವಾವಧಿ ಶಿಕ್ಷೆಯನ್ನೂ ಉಳಿದ 30 ಮಂದಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿ ಉಳಿದವರನ್ನು ಖುಲಾಸೆಗೊಳಿಸಿತು. ಈ ಪ್ರಕರಣದ ಮುಖ್ಯ ರೂವಾರಿ ಚೆಂಚುರಾಮಯ್ಯ ನ್ಯಾಯಾಲಯದ ಕಣ್ಣುಗಳಿಂದ ತಪ್ಪಿಸಿಕೊಂಡನು. ಆದರೆ ಪೀಪಲ್ಸ್ ವಾರ್ ತಂಡವು ಕಾರಂಚೇಡುವಿನ ಮನೆಗೆ ನುಗ್ಗಿ ಚೆಂಚುರಾಮಯ್ಯನನ್ನು ಹಾಡುಹಗಲೇ ಕೊಂದುಹಾಕಿತು. ಈ ನಡೆಯನ್ನು ದಲಿತ ಮಹಾಸಭಾ ಖಂಡಿಸಿತು. ನಿಜವೆಂದರೆ ಅಲ್ಲಿಂದ ಇಲ್ಲಿಯವರೆಗೂ ಪ್ರಕಾಶಂ ಜಿಲ್ಲೆಯಲ್ಲಿ ಇಂತಹ ಭೀಕರ ಘಟನೆ ಮತ್ತೊಂದು ನಡೆದಿಲ್ಲ.

ಆದರೂ ಇಂದಿಗೂ ಕಾರಂಚೇಡು ಗ್ರಾಮವನ್ನು ತೊರೆದು ಬಂದಿರುವ ಮಾದಿಗ ಕುಟುಂಬಗಳು ಮತ್ತೆ ಅಲ್ಲಿಗೆ ಹೋಗುವ ಮನಸ್ಸು ಮಾಡಿಲ್ಲವೆಂದರೆ ಅವರ ಮನಸ್ಸಲ್ಲಿ ಆ ಭೀಕರ ಹತ್ಯಾಕಾಂಡ ಮೂಡಿಸಿರುವ ಭಯವನ್ನು
ಅಂದಾಜಿಸಬಹುದಾಗಿದೆ. ಕಾರಂಚೇಡುವಿನಿಂದ ಓಡಿಬಂದ ಸುಮಾರು 500ಕ್ಕೂ ಹೆಚ್ಚು ಮಾದಿಗರು ಇಂದಿಗೂ ಪ್ರಕಾಶಂ ಜಿಲ್ಲೆಯಾದ್ಯಂತ ಅಲ್ಲಲ್ಲಿ ಬದುಕುಕಟ್ಟಿಕೊಂಡು ಜೀವಿಸುತ್ತಿದ್ದಾರೆ.

ಒಟ್ಟಾರೆ ಜಾತಿ ಅಸಮಾನತೆ ಹಾಗೂ ಜಾತಿಯ ದರ್ಪ ಶೂದ್ರ ಜಾತಿಗಳನ್ನೂ ಬಿಟ್ಟಿಲ್ಲ. ಮೇಲ್ಜಾತಿಗಳು ಶೂದ್ರರನ್ನು ಹಿಂದೆ ಹೇಗೆ ನಡೆಸಿಕೊಂಡು ಶೋಷಿಸಿದವೋ ಹಾಗೆಯೇ ಇಂದು ಶೂದ್ರ ಜಾತಿಗಳು ದಲಿತರನ್ನು ನಡೆಸಿಕೊಳ್ಳುತ್ತಿವೆ. ಜಾತಿ ವೈರಸ್ ಭಾರತೀಯರನ್ನೇ ಬಲಿ ತೆಗೆದುಕೊಂಡಿದೆ.


ಇದನ್ನೂ ಓದಿ: ಮಾತು ಮರೆತ ಭಾರತ; ಬೆಲ್ಚಿ ಫೈಲ್: ಭಾರತವನ್ನು ಬೆಚ್ಚಿ ಬೀಳಿಸಿದ ದಲಿತರ ನರಮೇಧ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಕೆಲವೇ ಕೆಲವರು ನಡೆಸುವ ಇಂಥಾ ಕೃತ್ಯಗಳಿಗೆ ಇಡೀ ಶೂದ್ರರೇ ಹೀಗೆ ಎಂಬಂತೆ ಬಿಂಬಿಸುವುದು ಸರಿಯಲ್ಲ. ಸುಳ್ಳು ದಲಿತ ದೌರ್ಜನ್ಯ ಕೇಸುಗಳಲ್ಲಿ ಅತೀ ಹೆಚ್ಚು ಕಷ್ಟನಷ್ಟಗಳನ್ನು ಅನುಭವಿಸಿದವರು ನಾವು ಶೂದ್ರರೇ…

LEAVE A REPLY

Please enter your comment!
Please enter your name here

- Advertisment -

‘ನುಡಿಯು ಸಿರಿಯಲ್ಲ ಬದುಕು’ ಕರಾವಳಿಯಲ್ಲಿ ಮತ್ತೆ ಪ್ರತಿರೋಧದ ಧ್ವನಿ: ನವೆಂಬರ್ 28-29ಕ್ಕೆ ‘ಜನನುಡಿ-2026’

"ನವೆಂಬರ್ ಕೊನೆಯ ಶನಿವಾರ ಮತ್ತು ಭಾನುವಾರ ಮಂಗಳೂರಿನಲ್ಲಿ ಕೇವಲ ವಿಚಾರ ಸಂಕಿರಣ ಮಾತ್ರವಲ್ಲ, ಹರಟೆ, ಚರ್ಚೆ, ಸೌಹಾರ್ದತೆಯ ಮೀನೂಟ ಹಾಗೂ ಪ್ರೀತಿಯೊಂದಿಗೆ ಸಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯುವ ಹೊಸ ಬೆಳಕನ್ನು ಕಂಡುಕೊಳ್ಳಲಿದ್ದೇವೆ," ಎಂದು 'ಅಭಿಮತ...

‘ಟ್ರಂಪ್’ ಗಾಗಿ ಭಾರತದ ಹಿತವನ್ನು ಬಲಿ ಕೊಟ್ಟ ಕೇಂದ್ರ: E20 ಎಥೆನಾಲ್ ನೀತಿ ಹಿಂಪಡೆಯಲು ಕೇಜ್ರಿವಾಲ್ ಪಟ್ಟು

ವಾಹನಗಳ ಎಂಜಿನ್‌ಗೆ ಹಾನಿಯುಂಟುಮಾಡುತ್ತಿದೆ ಎಂದು ಆರೋಪಿಸಲಾದ ಇ20 (E20) ಎಥೆನಾಲ್ ಮಿಶ್ರಿತ ಪೆಟ್ರೋಲ್ ನೀತಿಯನ್ನು ಹಿಂಪಡೆಯುವಂತೆ ಆಗ್ರಹಿಸಿ, ದೇಶಾದ್ಯಂತ ಸಂಗ್ರಹಿಸಲಾಗಿದ್ದ 2.30 ಲಕ್ಷಕ್ಕೂ ಅಧಿಕ ಸಾರ್ವಜನಿಕ ಸಹಿಗಳ ಮನವಿ ಪತ್ರದೊಂದಿಗೆ ಪ್ರಧಾನಿ ನರೇಂದ್ರ...

ಗಾಝಾ | ಇಸ್ರೇಲ್ ನರಮೇಧಕ್ಕೆ ಬಲಿಯಾದ ಎರಡು ಕುಟುಂಬಗಳ 112 ಸದಸ್ಯರ ಸಾಮೂಹಿಕ ಅಂತ್ಯಸಂಸ್ಕಾರ: ಸಾವಿರಾರು ಜನರಿಂದ ಕಣ್ಣೀರ ವಿದಾಯ

ಇಸ್ರೇಲ್ ಬಾಂಬ್ ದಾಳಿಯಿಂದ ಧ್ವಂಸಗೊಂಡಿದ್ದ ಮನೆಗಳ ಅವಶೇಷಗಳ ಅಡಿಯಲ್ಲಿ ಇತ್ತೀಚೆಗೆ ಪತ್ತೆಯಾದ ಗಾಝಾದ ಹಸಾಯ್ನ ಮತ್ತು ಅಬು ಶರಿಯಾ ಕುಟುಂಬಗಳ 112 ಸದಸ್ಯರ ಮೃತದೇಹಗಳ ಅಂತ್ಯ ಸಂಸ್ಕಾರ ಮಂಗಳವಾರ (ಆ.4) ನಡೆಯಿತು. ಸಾವಿರಾರು...

E20 ಇಂಧನ ರಾದ್ಧಾಂತ: ನಾಗ್ಪುರದಲ್ಲಿ ಗಡ್ಕರಿ ಮನೆಗೆ ಮುತ್ತಿಗೆ ಯತ್ನ, ಯುವ ಕಾಂಗ್ರೆಸ್ ಕಾರ್ಯಕರ್ತರ ಬಂಧನ

ಎಥೆನಾಲ್ ಮಿಶ್ರಿತ ಇ20 (E20) ಇಂಧನದಿಂದ ದೇಶದ ಲಕ್ಷಾಂತರ ವಾಹನ ಮಾಲೀಕರು ಎಂಜಿನ್ ಹಾನಿ ಮತ್ತು ಮೈಲೇಜ್ ಅಭಾವ ಎದುರಿಸುತ್ತಿದ್ದಾರೆ ಎಂಬ ಆಕ್ರೋಶದ ನಡುವೆಯೇ, ನಾಗ್ಪುರದಲ್ಲಿ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್...

ರಾಜ್ಯದಲ್ಲಿ ‘SIR’ ಅವಾಂತರ: 1.ಕೋಟಿಗೂ ಹೆಚ್ಚು ಮತದಾರರನ್ನು ಹೊರಗಿಡಲು ಸಂಚು, ‘SIR ವಿರೋಧಿ ಕರ್ನಾಟಕ’ ಆಕ್ರೋಶ

ಕರ್ನಾಟಕದಲ್ಲಿ ಜಾರಿಯಲ್ಲಿರುವ ಬೂತ್ ಮಟ್ಟದ ಮತದಾರರ ಪಟ್ಟಿ ಸರಿಪಡಿಸುವ 'ಎಸ್‌ಐಆರ್' (SIR) ಪ್ರಕ್ರಿಯೆಯಲ್ಲಿ ಭಾರೀ ಅವ್ಯವಹಾರ ಮತ್ತು ಕಪಟತನ ನಡೆದಿದ್ದು, ರಾಜ್ಯದ ಶೇ. 20 ರಷ್ಟು (ಆಗಸ್ಟ್ 2026ರ ಹೊತ್ತಿಗೆ ಸುಮಾರು 1.10...

‘ಜನರು ಬಿಜೆಪಿಯಿಂದ ಅತೃಪ್ತರಾಗಿದ್ದಾರೆ…’: ದಾಟಿಯಾ ಉಪಚುನಾವಣೆಯಲ್ಲಿ ಗೆಲುವಿನ ನಂತರ ಆಡಳಿತ ಪಕ್ಷದ ವಿರುದ್ಧ ಘನಶ್ಯಾಮ್ ಸಿಂಗ್ ವಾಗ್ದಾಳಿ

ಭೋಪಾಲ್ (ಮಧ್ಯಪ್ರದೇಶ): ಮಧ್ಯಪ್ರದೇಶದ ದಾಟಿಯಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾಗಿರುವ ಕಾಂಗ್ರೆಸ್ ಶಾಸಕ ಘನಶ್ಯಾಮ್ ಸಿಂಗ್ ಅವರು, ತಮ್ಮ ಅಭೂತಪೂರ್ವ ಗೆಲುವನ್ನು ಬಿಜೆಪಿಯ 'ಭ್ರಷ್ಟಾಚಾರ'ಕ್ಕೆ ಸಾರ್ವಜನಿಕರು ನೀಡಿದ ತಕ್ಕ ಹಾಗೂ ಸೂಕ್ತ...

ಇಂದಿನ ವಿಚಾರಣೆ ಬಳಿಕ ಉದಯನಿಧಿ ಬಿಡುಗಡೆಗೆ ಮದ್ರಾಸ್ ಹೈಕೋರ್ಟ್ ನಿರ್ದೇಶನ

ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ಬಂಧಿತರಾದ ತಮಿಳುನಾಡು ವಿಧಾನಸಭೆಯ ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ಅವರನ್ನು, ವಿಚಾರಣೆಯಯ ಬಳಿಕ ಸ್ಟೇಷನ್ ಬೇಲ್ (ಠಾಣಾ ಜಾಮೀನು) ಮೇಲೆ ಬಿಡುಗಡೆ ಮಾಡುವಂತೆ ಮದ್ರಾಸ್ ಹೈಕೋರ್ಟ್...

ರಾಜೀನಾಮೆ ನೀಡಿದರೆ ಕೆಲವೇ ನಿಮಿಷಗಳಲ್ಲಿ ಅಂಗೀಕರಿಸುವೆ, ಸಚಿವ ಸ್ಥಾನ ವಂಚಿತರ ಬೆದರಿಕೆಗೆ ಸಿಎಂ ಡಿ.ಕೆ. ಶಿವಕುಮಾರ್ ವಾರ್ನಿಂಗ್

ಪಕ್ಷದ ಹಿತವೇ ಎಲ್ಲಕ್ಕಿಂತ ಮುಖ್ಯ. ಸಚಿವ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ಯಾರಾದರೂ ರಾಜೀನಾಮೆ ಸಲ್ಲಿಸಿದರೆ, ಕೆಲವೇ ನಿಮಿಷಗಳಲ್ಲಿ ಅದನ್ನು ನಾನು ಅಂಗೀಕರಿಸುತ್ತೇನೆ" ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಶಾಸಕರ...

ನಮಗೆ ಚುನಾವಣಾ ರಾಜಕೀಯದ ಉದ್ದೇಶವಿಲ್ಲ, ಜನಾಂದೋಲನವೇ ನಮ್ಮ ಗುರಿ: ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ

ಕಾಕ್ರೋಚ್ ಜನತಾ ಪಾರ್ಟಿ (CJP) ಚುನಾವಣಾ ರಾಜಕೀಯಕ್ಕೆ ಪ್ರವೇಶಿಸುವ ಯಾವುದೇ ಉದ್ದೇಶವನ್ನು ಹೊಂದಿಲ್ಲ, ಬದಲಾಗಿ ದೇಶದ ಪ್ರಜಾಸತ್ತಾತ್ಮಕ ಸಂಸ್ಥೆಗಳ ಮೇಲಿನ ಜನರ ನಂಬಿಕೆಯನ್ನು ಮರುಸ್ಥಾಪಿಸಲು ಬೃಹತ್ ಜನಾಂದೋಲನವನ್ನು ಕಟ್ಟುವುದೇ ನಮ್ಮ ಮೂಲ ಗುರಿ...

ನೀಟ್ ಪ್ರತಿಭಟನೆ: ಮಧ್ಯಪ್ರದೇಶ ಪೊಲೀಸರು ಧರ್ಮದ ಕಾರಣಕ್ಕೆ ನನ್ನ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದಾರೆ: ಜೆಎನ್‌ಯು ವಿದ್ಯಾರ್ಥಿ ನಾಯಕಿ ಡ್ಯಾನಿಶ್ ಅಲಿ ಆರೋಪ

ದೇಶದ ಶಿಕ್ಷಣ ವ್ಯವಸ್ಥೆಯ ಜವಾಬ್ದಾರಿಯನ್ನು ಪ್ರಶ್ನಿಸಿ ನಡೆದ ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಕ್ಕಾಗಿ, ಮಧ್ಯಪ್ರದೇಶ ಪೊಲೀಸರು ತಮ್ಮ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದಾರೆ ಎಂದು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ...