Homeಅಂಕಣಗಳುಮಾತು ಮರೆತ ಭಾರತ; ಬೆಲ್ಚಿ ಫೈಲ್: ಭಾರತವನ್ನು ಬೆಚ್ಚಿ ಬೀಳಿಸಿದ ದಲಿತರ ನರಮೇಧ

ಮಾತು ಮರೆತ ಭಾರತ; ಬೆಲ್ಚಿ ಫೈಲ್: ಭಾರತವನ್ನು ಬೆಚ್ಚಿ ಬೀಳಿಸಿದ ದಲಿತರ ನರಮೇಧ

- Advertisement -
- Advertisement -

ದಲಿತರು ಎಚ್ಚೆತ್ತು ತಿರುಗಿಬಿದ್ದರೆ ದಲಿತೇತರರ ದೃಷ್ಟಿಯಲ್ಲಿ ನಾಯಕರಾಗುವುದಿಲ್ಲ. ಖಳನಾಯಕರೋ ಅಥವಾ ಉಗ್ರವಾದಿಗಳೋ ಆಗಿಬಿಡುತ್ತಾರೆ. ಇಂತಹ ಒಂದು ಪ್ರಕರಣಕ್ಕೆ ಮುಖ್ಯ ಉದಾಹರಣೆ ಬೆಲ್ಚಿ. ಬಿಹಾರದ ಗಡಿ ಭಾಗದ ಪುಟ್ಟ ಹಳ್ಳಿಯೇ ಬೆಲ್ಚಿ. ಪಾಟ್ನಾದಿಂದ ಸುಮಾರು 90 ಕಿಮೀ ದೂರದಲ್ಲಿದೆ. ಇಂದಿಗೂ ಸಹ ಕಳೆಕಟ್ಟಿಕೊಳ್ಳದೆ ಕುಗ್ರಾಮವಾಗಿಯೇ ಉಳಿದಿದೆ. ಮೇ 27, 1977ರಂದು ದೇಶವನ್ನೇ ಬೆಚ್ಚಿಬೀಳಿಸಿದ ಘಟನೆಯೊಂದು ಇಲ್ಲಿ ನಡೆದಿತ್ತು. ಅಲ್ಲಿ ನಡೆದ ನರಮೇಧವು ಕರ್ನಾಟಕದ ಚಿಂತಾಮಣಿ ತಾಲ್ಲೂಕಿನ ಗೊಲ್ಲಹಳ್ಳಿ ಶಿವಪ್ರಸಾದ್ ಎಂಬ ಯುವಕನನ್ನೂ ಕಾಡಿತ್ತು. ಬೆಚ್ಚಿ ಬೀಳಿಸಿ ಆಕ್ರೋಶಭರಿತರನ್ನಾಗಿಸಿ ಪ್ರತಿಕ್ರಿಯಿಸುವಂತೆ ಮಾಡಿತ್ತು. ಆಗ ಮೂಡಿದ ಕವಿತೆಯೇ ಮುಂದೆ ಹಾಡಾಗಿ ಕೆಂಡವಾಯಿತು.

ಕಾಶಿ ಕಂಚಿ ಕಾಳಹಸ್ತಿ
ಕಾಣುವಂತ ಕಣ್ಣಿಗೆ
ಬೆಲ್ಚಿ ಪಿಪ್ರ ಕೆಸ್ತಾರ
ಕಾಣಲಿಲ್ಲ ಯಾಕೆ?

ಎಂಬ ಸಾಲುಗಳನ್ನು ಕವಿ ಗೊಲ್ಲಹಳ್ಳಿ ಶಿವಪ್ರಸಾದ್ ಅವರಿಂದ ಬರೆಸಿತ್ತು ಈ ಘಟನೆ. ಹಾಗಾದರೆ ಅಲ್ಲಿ ನಡೆದದ್ದಾದರೂ ಏನು?

ಎಪ್ಪತ್ತರ ದಶಕದಲ್ಲಿ ಹಲವು ರಾಜಕೀಯ ಸ್ಥಿತ್ಯಂತರಗಳು ನಡೆದವು. 1977ರಷ್ಟೊತ್ತಿಗೆ ಇಂದಿರಾಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರವನ್ನು ಕಳೆದುಕೊಂಡಿತ್ತು. ಜನತಾ ಪಕ್ಷದ ಮೊರಾರ್ಜಿ ದೇಸಾಯಿಯವರ ಸರ್ಕಾರ ರಚನೆಯಾಗಿತ್ತು. ಬಿಹಾರದಲ್ಲಿ ಜನತಾ ಪಕ್ಷದ ಕರ್ಪೂರಿ ಠಾಕೂರ್ ಮುಖ್ಯಮಂತ್ರಿಯಾಗಿದ್ದರು. ಬೆಲ್ಚಿಯ ನರಮೇಧದ ನಂತರ ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಹೇಳಲು ಕುಗ್ರಾಮವಾದ ಬೆಲ್ಚಿಯನ್ನು ಆನೆಯ ಮೇಲೆ ಕುಳಿತು ಪ್ರವೇಶಿಸಿದ್ದ ಇಂದಿರಾಗಾಂಧಿಯವರು ದಿನಪತ್ರಿಕೆಗಳ ಮುಖಪುಟದಲ್ಲಿ ರಾರಾಜಿಸಿದ್ದರು.

ಬೆಲ್ಚಿಯಲ್ಲಿ ಎರಡು ಭೂಮಾಲೀಕ ತಂಡಗಳ ನಡುವೆ ವೈಷಮ್ಯವಿತ್ತು. ಒಂದು ಭೂಮಾಲೀಕ ತಂಡದ ನಾಯಕ ಮಹಾವೀರ್ ಹಾಗೂ ಮತ್ತೊಂದರ ನಾಯಕ ಪರಶುರಾಮ್. ಇಬ್ಬರೂ ಕುರ್ಮಿ ಜಾತಿಗೆ ಸೇರಿದವರು. ಇವರಿಬ್ಬರ ನಡುವೆಯೂ ಆಗಾಗ ಕಲಹಗಳು ಏರ್ಪಡುತ್ತಿದ್ದವು. ಇವರಿಬ್ಬರ ಬೆನ್ನಿಗೆ ರಾಜಕೀಯ ನಾಯಕರ ಬಲವೂ ಇತ್ತು. ಇವರಿಬ್ಬರದ್ದು ಭೂಮಾಲೀಕರ ನಡುವಿನ ಸಂಘರ್ಷವಾದರೇ ಬೆಲ್ಚಿಯ ದಲಿತ ಯುವತಿಯನ್ನು ಮದುವೆಯಾಗಿದ್ದ ಸಿದ್ದೇಶ್ವರ ಪಾಸ್ವಾನ್ ದಲಿತ ಕೂಲಿಗಳನ್ನು ಸಂಘಟಿಸುವ ಕೆಲಸಕ್ಕೆ ಇಳಿದು ಈ ಇಬ್ಬರು ಭೂಮಾಲೀಕರ ದ್ವೇಷ ಕಟ್ಟಿಕೊಂಡಿದ್ದನು. ಕಿಲ್ವೇನ್ಮಣಿಯಲ್ಲಿ ನಡೆದಂತೆ ಇಲ್ಲಿಯೂ ಸಹ ಕೃಷಿ ಕೂಲಿಗಳು ಕೂಲಿಯ ಹಣವನ್ನು ಹೆಚ್ಚು ಮಾಡಬೇಕೆಂದು ಆಗ್ರಹಿಸುತ್ತಿದ್ದರು.

ಮಹಾವೀರ್ ಮಹತೋ ಹಾಗೂ ಪರಶುರಾಮ್ ಅವರ ಭೂಮಿಯಲ್ಲಿ ಕೆಲಸ ಮಾಡುತ್ತಿದ್ದ ದಲಿತರನ್ನೂ ಹಾಗೂ ಹಿಂದುಳಿದ ಜಾತಿಯ ಸೋನಾರರನ್ನೂ ಆ ಭೂಮಾಲೀಕರು ಶೋಷಿಸುತ್ತಿದ್ದರು. ಮಹಾವೀರನ ದಬ್ಬಾಳಿಕೆ ಬಹಳವೇ ಹೆಚ್ಚಾದಾಗ ಕೃಷಿ ಕೂಲಿಗಳ ರಕ್ಷಣೆಗೆ ಸಿದ್ದೇಶ್ವರ ಪಾಸ್ವಾನ್ ಧಾವಿಸುತ್ತಿದ್ದನು. ಇದೇ ರೀತಿ ಹಲವು ಸಂಘರ್ಷಗಳು ಏರ್ಪಟ್ಟು ಮಹಾವೀರ್ ಮತ್ತು ಪರಶುರಾಮ್ ಎದುರು ದಿನಬೆಳಗಾಗುವುದರೊಳಗಾಗಿ ಸಿದ್ದೇಶ್ವರ ಪಾಸ್ವಾನ್ ಪ್ರಭಾವ ಬೆಳೆಸಿಕೊಂಡಿದ್ದ. ಕೃಷಿಕೂಲಿಗಳು ಅವನನ್ನು ’ಸಿಂಗ್ವ’ ಎನ್ನುವಷ್ಟು ಎತ್ತರಕ್ಕೆ ಬೆಳೆದನು. ತನ್ನ ವೈರಿಗಳ ಹಿಂದೆ ಬಲಿಷ್ಠ ರಾಜಕಾರಣಿಗಳಿರುವುದನ್ನು ಅರಿತು ತನ್ನದೇ ತಂಡವನ್ನು ಕಟ್ಟಿಕೊಂಡನು. ಹೇಗಿದ್ದರೂ ಪೊಲೀಸ್ ವ್ಯವಸ್ಥೆ ಯಾವಾಗಲೂ ಮೇಲ್ಜಾತಿ ಪರವೇ ಇರುವುದರಿಂದ ಇಲ್ಲಿ ಸಿಂಗ್ವ ಮೇಲೆಯೂ ಕೇಸುಗಳು ದಾಖಲಾದವು. ಹಾಗಂತ ಸಿಂಗ್ವ ಕೈಕಟ್ಟಿ ಕೂತವನೂ ಅಲ್ಲ. ಏಟಿಗೆ ಎದಿರೇಟು ಕೊಟ್ಟವನೇ. ಜಗಳಕ್ಕೆ ಕಾಲು ಕೆರೆದು ನಿಲ್ಲುತ್ತಿದ್ದವನೇ. ಭೂಮಾಲೀಕರ ಬಂದೂಕುಗಳ ವಿರುದ್ಧ ತಾನೂ ಬಂದೂಕಿನ ತಂಡ ಕಟ್ಟಿದವನೇ. ಈ ಹಿಂದೆ ಅವನ ಮೇಲೆ ಎರಡು ಬಾರಿ ಆಕ್ರಮಣವಾಗಿತ್ತಾದರೂ ಎದುರಿಸಿ ನಿಂತಿದ್ದನು. ಹಾಗಾಗಿ ಬಿಹಾರದ ಆಸ್ತಾಮ ತಾಲ್ಲೂಕಿನಲ್ಲಿ ಮೂರನೆಯ ಹೆಸರೂ ಕೇಳಿಬಂದಿತು. ಆ ಹೆಸರೇ ಸಿಂಗ್ವ. ಈತನ ಪ್ರಾಬಲ್ಯ ಅದೆಷ್ಟರ ಮಟ್ಟಿಗೆ ಬೆಳೆಯಿತೆಂದರೆ ಆಸ್ತಾಮದ ಶಾಸಕ ಇಂದ್ರದೇವ್ ಚೌಧರಿ ಹಾಗೂ ಮತ್ತೊಬ್ಬ ರಾಜಕಾರಣಿ ಅರುಣ್ ಚೌಧರಿ ಈತನನ್ನು ತಮ್ಮ ಪರವಾಗಿ ಕೆಲಸ ಮಾಡಲು ಆಹ್ವಾನಿಸುವಷ್ಟು! ಆದರೆ ಈ ಇಬ್ಬರ ಗೆಳೆತನದ ಆಹ್ವಾನವೂ ಅನುಮಾನಾಸ್ಪದವಾದ್ದು ಎಂಬುದು ಸಿಂಗ್ವನಿಗೆ ಅರ್ಥವಾಗದೇ ಹೋದದ್ದು ವಿಪರ್ಯಾಸ.

ಅಂದು ಮೇ 27, 1977. ಸಿಂಗ್ವನ ತಿರುಗಿ ಬೀಳುವಿಕೆಯನ್ನು ತಡೆದುಕೊಳ್ಳಲಾಗದೇ ಪರಿತಪಿಸುತ್ತಿದ್ದ ಮಹಾವೀರ್ ಹಾಗೂ ಪರಶುರಾಮ್ ಆತನನ್ನು ರಾಜಿ ಸಂಧಾನಕ್ಕೆ ಮನೆಗೆ ಕರೆಯುತ್ತಾರೆ. ಇವರ ಸಂಚನ್ನು ತಿಳಿದೇ ಮಹಾವೀರನ ಮನೆಗೆ ಬರುವ ಸಿಂಗ್ವನ ಜೊತೆಗೆ ಹತ್ತು ಮಂದಿ ಕೃಷಿಕೂಲಿಗಳೂ ಇರುತ್ತಾರೆ. ಅವರ ಬಳಿಯೂ ಶಸ್ತ್ರವಿರುತ್ತದೆ. ಆದರೆ ರಾಜಿ ಸಂಧಾನಕ್ಕೆ ಶಸ್ತ್ರಗಳನ್ನು ಕೆಳಗಿಡುವಂತೆ ಮಾತುಕತೆಯಾಗುತ್ತದೆ. ಬಳಿಕ ಸಿಂಗ್ವನ ತಂಡ ನಿಶ್ಯಸ್ತ್ರವಾಗಿ ನಿಲ್ಲುತ್ತದೆ. ಇದೇ ಸಮಯವನ್ನು ಬಳಸಿಕೊಂಡು ಪರಶುರಾಮನ ತಂಡ ತನ್ನ 40 ಬಂದೂಕುಧಾರಿಗಳೊಂದಿಗೆ ಗುಟ್ಟಾಗಿ ಒಳಬಂದು ಸಿಂಗ್ವನನ್ನೂ ಹಾಗೂ ಆತನ ಹತ್ತು ಸ್ನೇಹಿತರನ್ನೂ ಮರಗಳಿಗೆ ಕಟ್ಟಿ ಹಾಕುತ್ತಾರೆ. ಕುರ್ಮಿ ಜನಾಂಗದ ಮಹಿಳೆಯರು ಹಾಗೂ ಮಕ್ಕಳು ಅವರನ್ನು ಸುಡುವ ಸಲುವಾಗಿ ಒಣಗಿದ ಸೌದೆಗಳನ್ನು ಹೆಕ್ಕಿ ತರುತ್ತಾರೆ. ಬಂದೂಕಿನ ನಳಿಕೆಯನ್ನು ತಲೆಯ ಬಳಿ ಇಟ್ಟು ಆ ಹನ್ನೊಂದು ಕೃಷಿ ಕೂಲಿಗಳನ್ನೂ ಕೊಂದುಹಾಕುತ್ತಾರೆ. ನಂತರ ಅವರ ದೇಹಗಳಿಗೆ ಬೆಂಕಿ ಹಚ್ಚುತ್ತಾರೆ. ಸತ್ತ 11 ಕೃಷಿಕೂಲಿಗಳಲ್ಲಿ 9 ಜನ ದಲಿತರೂ ಹಾಗೂ ಮೂವರು ಹಿಂದುಳಿದ ಜಾತಿಯವರೂ ಇರುತ್ತಾರೆ. ಸತತ ಐದು ವರ್ಷಗಳ ಕೃಷಿಕೂಲಿಗಳ ಹೋರಾಟಕ್ಕೆ ಬೃಹತ್ ಹಿನ್ನಡೆಯಾಗುತ್ತದೆ. ಅಂದು ಆ ಘಟನೆ ನಡೆಯುವಾಗ ಇಂದ್ರದೇವ್ ಚೌಧರಿ ಹಾಗೂ ಅರುಣ್ ಚೌಧರಿ ಅಲ್ಲಿಯೇ ಇರುತ್ತಾರೆ.

ಎಂದಿನಂತೆ ಬೇಕಂತಲೇ ತಡವಾಗಿ ಬಂದ ಪೊಲೀಸರು ಮಹಾವೀರ್ ಹಾಗೂ ಪರಶುರಾಮ್ ಮೇಲೆ ಕೇಸು ದಾಖಲಿಸುತ್ತಾರೆ. ಬೇಲ್ ಸಿಗುತ್ತದೆ. ನಂತರ ವಿಚಾರಣೆ ನಡೆದು, ಸೆಷನ್ ಕೋರ್ಟ್ ತೀರ್ಪನ್ನು ಎತ್ತಿಹಿಡಿದ ಹೈಕೋರ್ಟ್ ಮಹಾವೀರ್ ಮತ್ತು ಪರಶುರಾಮನಿಗೆ ಮರಣದಂಡನೆ ವಿಧಿಸುತ್ತದೆ. ಇತರೆ 13 ಜನರಿಗೂ ಜೀವಾವಧಿ ಶಿಕ್ಷೆ ವಿಧಿಸುತ್ತದೆ. ಆದರೆ ಮುಂದೆ ಅವರೆಲ್ಲರಿಗೂ ಸುಪ್ರೀಂ ಕೋರ್ಟ್ ಬೇಲ್ ನೀಡುತ್ತದೆ.

ರಂಗಕರ್ಮಿ ಸಿಜಿಕೆ ಅವರ ನೇತೃತ್ವದಲ್ಲಿ ಕರ್ನಾಟಕದಲ್ಲಿ ’ಬೆಲ್ಚಿ’ ಬೀದಿ ನಾಟಕ ರೂಪುಗೊಂಡು ಬಿಹಾರದ ಬೆಲ್ಚಿ ನರಮೇಧವನ್ನು ಕರ್ನಾಟಕಕ್ಕೆ ಪರಿಚಯಿಸಿತ್ತು. ಬೆಲ್ಚಿಯ ನರಮೇಧದ ವಿರುದ್ಧ ಕರ್ನಾಟಕದಲ್ಲಿಯೂ ದಲಿತ ಸಂಘರ್ಷ ಸಮಿತಿ ಹೋರಾಟ ರೂಪಿಸಿತ್ತು. ನಾಡೋಜ ಸಿದ್ದಲಿಂಗಯ್ಯನವರ ’ದೊಡ್ಡಗೌಡರ ಬಾಗಿಲಿಗೆ ನಮ್ಮ ಮೂಳೆಯ ತ್ವಾರಣ’ ಹಾಡು ಹೋರಾಟದ ಭಾಗವಾಗಿದ್ದು ಈ ನಾಟಕದಿಂದಲೇ ಆಗಿದೆ.


ಇದನ್ನೂ ಓದಿ: ಮಾತು ಮರೆತ ಭಾರತ; ಕಿಲ್ವೇನ್ಮಣಿ ಫೈಲ್: ಸ್ವತಂತ್ರ ಭಾರತದ ಭೀಕರ ಹತ್ಯಾಕಾಂಡ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಬೆಲ್ಚಿಯಂತಹ ದುರ್ಘಟನೆಯ ನಂತರವೂ ಈ ದೇಶದಲ್ಲಿ ದಲಿತರ ಮಾರಣಹೋಮ ನಿಂತಿಲ್ಲ. ಇದು ಈ ದೇಶದ ದುರಂತ.

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...