Homeಕರ್ನಾಟಕಸಂಪತ್ತು ಅನುಭವಸಿದವರೇ ಮೀಸಲಾತಿ ವಿರೋಧಿಸುತ್ತಿದ್ದಾರೆ: ಸಿದ್ದರಾಮಯ್ಯ ವಿಷಾದ

ಸಂಪತ್ತು ಅನುಭವಸಿದವರೇ ಮೀಸಲಾತಿ ವಿರೋಧಿಸುತ್ತಿದ್ದಾರೆ: ಸಿದ್ದರಾಮಯ್ಯ ವಿಷಾದ

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ 'ಜನ ಪ್ರಕಾಶನ' ವತಿಯಿಂದ ಭಾನುವಾರ ಜಸ್ಟೀಸ್‌ ಎಚ್.ಎನ್‌.ನಾಗಮೋಹನ್ ದಾಸ್ ಅವರ 'ಮೀಸಲಾತಿ; ಭ್ರಮೆ ಮತ್ತು ವಾಸ್ತವ' ಪುಸ್ತಕ ಬಿಡುಗಡೆ ಮಾಡಲಾಯಿತು.

- Advertisement -
- Advertisement -

ಈ ದೇಶದ ಸಂಪತ್ತನ್ನು ಆರಾಮಾಗಿ ಕುಳಿತು ಅನುಭವಿಸಿದವರು ಇಂದು ಮೀಸಲಾತಿಯನ್ನು ವಿರೋಧಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದರು.

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ‘ಜನ ಪ್ರಕಾಶನ’ ವತಿಯಿಂದ ಭಾನುವಾರ ಆಯೋಜಿಸಿದ್ದ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನದಾಸ್ ಅವರ ‘ಮೀಸಲಾತಿ: ಭ್ರಮೆ ಮತ್ತು ವಾಸ್ತವ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

“ಬಹುಸಂಖ್ಯಾತ ಶೂದ್ರರನ್ನು ಅಕ್ಷರದಿಂದ ವಂಚಿಸಿ, ಅವರು ಸಂಪತ್ತನ್ನು ಅನುಭವಿಸಿದ್ದು ಮೀಸಲಾತಿ ಅಲ್ಲವೇ? ಈಗ ಮಾತ್ರ ಮೀಸಲಾತಿ ಯಾಕೆ? ಇನ್ನೆಷ್ಟು ದಿನ ಮೀಸಲಾತಿ ಬೇಕು ಎಂದು ಪ್ರಶ್ನಿಸುತ್ತಿದ್ದಾರೆ. ಇದು ಸರಿಯಲ್ಲ” ಎಂದು ತಿಳಿಸಿದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಜಾತಿ ಕಾರಣಕ್ಕಾಗಿ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆ ಉಂಟಾಗಿದೆ. ಇದು ಯಾಕಾಯಿತು? ಕೆಲ ಪಟ್ಟಭದ್ರ ಹಿತಾಸಕ್ತಿಗಳು ಅವರ ಒಳಿತಿಗೆ ಜಾತಿ ವ್ಯವಸ್ಥೆಯನ್ನು ಗಟ್ಟಿಗೊಳಿಸಿದರು. 12ನೇ ಶತಮಾನದಲ್ಲಿ ಬಸವಾದಿ ಶರಣರು ಕಾಯಕ ಮಾಡಿ ಅಂತ ಹೇಳಿದ್ದರು. ಶ್ರಮ ಜೀವಿಗಳು ದುಡಿಯುತ್ತಿದ್ದರೆ, ಆ ಒಂದು ಸಮುದಾಯ ಮಾತ್ರ ಕುಳಿತುಕೊಂಡು ಮಜಾ ಮಾಡುತ್ತಿತ್ತು. ಆಗ ಅವರು ಅನುಭವಿಸಿದ್ದು ಅಲಿಖಿತ ಮೀಸಲಾತಿ ಅಲ್ಲವೇ? ಈಗ ಅವರೇ ಮೀಸಲಾತಿ ಯಾಕೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಸಮಾಜದಲ್ಲಿ ಅಸಮಾನತೆಗೆ ಕಾರಣರಾದವರು ಈಗ ಮೀಸಲಾತಿಯನ್ನು ಪ್ರಶ್ನೆ ಮಾಡುತ್ತಾರೆ” ಎಂದು ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.

ಭಾರತದಲ್ಲಿ 4635 ಜಾತಿಗಳಿವೆ. ಇವನ್ನೆಲ್ಲ ಹುಟ್ಟು ಹಾಕಿದವರು ಯಾರು? ಈಗ ಅವರೇ ಪ್ರಶ್ನೆ ಕೇಳುತ್ತಾರೆ. ನಾನೇದಾರೂ ಈ ಬಗ್ಗೆ ಪ್ರಶ್ನೆ ಕೇಳಿದರೆ ಎಲ್ಲರೂ ನನ್ನ ಮೈಮೇಲೆ ಬೀಳುತ್ತಾರೆ. ನಮ್ಮವರು ಒಬ್ಬರೂ ಮಾತನಾಡಲ್ಲ. ಇದು ವಾಸ್ತವ ಎಂದು ಸಿದ್ದರಾಮಯ್ಯ ಬೇಸರ ಹೊರಹಾಕಿದರು.

ಇದನ್ನೂ ಓದಿರಿ: ಗುಬ್ಬಿ ದಲಿತ ಮುಖಂಡ ನರಸಿಂಹಮೂರ್ತಿ ಕೊಲೆ ಪ್ರಕರಣ: 13 ಮಂದಿ ಅರೆಸ್ಟ್‌

ಭಾರತಕ್ಕೆ ಸ್ವಾತಂತ್ರ್ಯ ಬಂದ 21 ವರ್ಷಗಳ ನಂತರ ಹಿಂದುಳಿದ ಜಾತಿಗಳಿಗೆ (ಒಬಿಸಿ) ಮೀಸಲಾತಿ ನೀಡಲಾಯಿತು. ನಾವು ಎಲ್ಲವನ್ನೂ ಸಹಿಸಿಕೊಂಡು ಸುಮ್ಮನಿದ್ದೇವೆ. ಸಂವಿಧಾನ ಜಾರಿಯಾದಾಗ ಪರಿಶಿಷ್ಟರಿಗೆ ಮೀಸಲಾತಿ ಸಿಕ್ಕಿತು. ಆದರೆ, ಕೇಂದ್ರದಲ್ಲಿ ವಿ ಪಿ ಸಿಂಗ್ ಅಧಿಕಾರಕ್ಕೆ ಬರುವವರೆಗೆ ಹಿಂದುಳಿದ ವರ್ಗಕ್ಕೆ ಮೀಸಲಾತಿ ಸಿಗಲಿಲ್ಲ ಎಂದು ಇತಿಹಾಸ ಮೆಲುಕು ಹಾಕಿದರು.

ನಾವೀಗ ಚಲನರಹಿತವಾದ ಸಮಾಜದಲ್ಲಿದ್ದೇವೆ. ಸಮಾಜಕ್ಕೆ ಚಲನೆ ಇಲ್ಲದಿದ್ದರೆ ಬದಲಾವಣೆ ಸಾಧ್ಯವಿಲ್ಲ. ಶಿಕ್ಷಣ, ಅಧಿಕಾರ ಮತ್ತು ಸಂಪತ್ತಿನಲ್ಲಿ ಸಮಾನತೆ ಬಂದಾಗ ಬದಲಾವಣೆ ಸಾಧ್ಯ. ಸಮಾಜಕ್ಕೆ ಚಲನಶೀಲತೆ ಬಂದಾಗ ಬದಲಾವಣೆ ಸಾಧ್ಯ. ಇದರ ಬಗ್ಗೆ ನಾವು ಗಂಭೀರವಾಗಿ ಯೋಚಿಸಬೇಕು. ಕೇವಲ ರಾಜಕೀಯ ಸ್ವಾತಂತ್ರ್ಯ ಇದ್ದರೆ ಸಾಲದು. ಅದರ ಜತೆಗೆ ಆರ್ಥಿಕ ಸ್ವಾತಂತ್ರ ಇದ್ದಾಗ ಮಾತ್ರ ನಾವು ಸ್ವಾತಂತ್ರ ಪಡೆದುಕೊಂಡಿದ್ದು ಸಾರ್ಥಕವಾಗುತ್ತದೆ ಎಂದು ಎಚ್ಚರಿಸಿದರು.

“ಸವರ್ಣೀಯ ಬಡವರಿಗೆ ಮೋದಿ ಶೇ.10ರಷ್ಟು ಮೀಸಲಾತಿ ನೀಡಿದ್ದಾರೆ. ಇದಕ್ಕೆ ಸಂವಿಧಾನದಲ್ಲಿ ಅವಕಾಶ ಇದೆಯಾ? ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಬೇಕೆಂಬ ಕಾನೂನಿದೆಯಾ? ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಒಂದೇ ದಿನದಲ್ಲಿ ಮೀಸಲಾತಿ ಜಾರಿಗೆ ತಂದರು. ಅಂಬೇಡ್ಕರ್ ಮೀಸಲಾತಿ ಬಗ್ಗೆ ಸಾಕಷ್ಟು ಸ್ಪಷ್ಟನೆ ಕೊಟ್ಟಿದ್ದರೂ ಮೀಸಲಾತಿ ಇನ್ನೂ ಎಷ್ಟು ವರ್ಷ ಎಂದು ಕೇಳುತ್ತಾರೆ. ಹಾಗಾಗಿ ಇಂತಹ ಒಂದು ಪುಸ್ತಕ ಬೇಕಾಗಿತ್ತು. ಈ ಪುಸ್ತಕ ಸಂಗ್ರಹ ಯೋಗ್ಯವಾಗಿದೆ‘” ಎಂದು ಜಸ್ಟೀಸ್ ದಾಸ್‌ ಅವರ ಕಾರ್ಯವನ್ನು ಶ್ಲಾಘಿಸಿದರು.

“ಮೀಸಲಾತಿ ಕುರಿತಾದ ಈ ಪುಸ್ತಕ ಚಿಕ್ಕದಾಗಿ, ಚೊಕ್ಕವಾಗಿದೆ. 136 ಪುಟಗಳ ಈ ಪುಸ್ತಕದಲ್ಲಿ ಸಾಕಷ್ಟು ಮಾಹಿತಿ ಇದೆ. ನಾಗಮೋಹನ್ ದಾಸ್ ಅವರ ‘ಸಂವಿಧಾನ ಓದು’ ಕಿರು ಹೊತ್ತಿಗೆಯನ್ನು ಕೂಡ ನಾನು ಓದಿದ್ದೇನೆ. ನನ್ನ ಪ್ರಕಾರ ಈ ದೇಶದ ಪ್ರತಿಯೊಬ್ಬ ಪ್ರಜೆ ಕೂಡ ಸಂವಿಧಾನ ಓದಿಕೊಳ್ಳಬೇಕು” ಎಂದು ಸಲಹೆ ನೀಡಿದರು.

ವಿಚಾರಣೆ ಇಲ್ಲದೆ ಬಂಧನವಾಗುತ್ತಿದೆ: ಜಸ್ಟೀಸ್‌ ನಾಗಮೋಹನ ದಾಸ್‌

ಜಸ್ಟೀಸ್ ನಾಗಮೋಹನ ದಾಸ್ ಅವರು ಮಾತನಾಡಿ, “ಮುಕ್ತವಾದ ಚರ್ಚೆಗಳು ಇಲ್ಲದ ಕಡೆ ಪ್ರಗತಿ ಸಾಧ್ಯವಿಲ್ಲ. ನಮ್ಮ ಕಾಲದ ಸಮಸ್ಯೆಗಳು ಮತ್ತು ಅದಕ್ಕಿರುವ ಪರಿಹಾರ ಎನು ಎಂಬ ಬಗ್ಗೆ ನಾವು ಯೋಚಿಸಬೇಕು. ಇಂದು ದೇಶದಲ್ಲಿ ವಿಮರ್ಶೆ, ಟೀಕೆ ಮಾಡುವಂತಿಲ್ಲ. ಟೀಕೆ, ವಿಮರ್ಶೆ ಮಾಡಿದರೆ ವಿಚಾರಣೆ ಇಲ್ಲದೆಯೇ ಬಂಧಿಸಲಾಗುತ್ತಿದೆ. ಲೇಖಕಿ ತೀಸ್ತಾ ಸೆಟಲ್ವಾಡ್‌ ಬಂಧನವಾಗಿರುವುದೂ ಕೂಡ ಇದೇ ಕಾರಣದಿಂದ” ಎಂದು ವಿಷಾದಿಸಿದರು.

ನಾವು ಈ ಹಿಂದೆ ಮುದ್ರಣ ಮಾಡಿದ್ದ ಸಂವಿಧಾನ ಓದು ಪುಸ್ತಕ ವಿದ್ಯಾವಂತರಿಗೆ ತಲುಪುತ್ತಿದೆ. ಸಂವಿಧಾನ ಓದು ಜಾಥಾ ಸಂದರ್ಭದಲ್ಲಿ ಹಲವು ವಿದ್ಯಾರ್ಥಿಗಳು ನನಗೆ ಮೀಸಲಾತಿ ಯಾಕೆ ಬೇಕು ಎಂಬ ಪ್ರಶ್ನೆ ಕೇಳಿದ್ದಾರೆ. ಸಮಾನತೆಯನ್ನು ಬಯಸುವ ನಾವು ಕೆಲವೊಂದು ಜಾತಿಗೆ ಮಾತ್ರ ಯಾಕೆ ಮೀಸಲಾತಿ ನೀಡಬೇಕೆಂದು ಪ್ರಶ್ನಿಸಿದ್ದಾರೆ. ಮೀಸಲಾತಿ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ನಿವಾರಿಸಲು ನಾನು ಈ ಪುಸ್ತಕ ಬರೆದಿದ್ದೇವೆ ಎಂದರು.

“ಪ್ರಸ್ತುತ ದೇಶದಲ್ಲಿ ತೊಡುವ ಬಟ್ಟೆ ತಿನ್ನುವ ಆಹಾರದ ಬಗ್ಗೆ ವಿರೋಧ ಮಾಡಲಾಗುತ್ತಿದೆ. ಇದು ನನ್ನ ದೇಶವಲ್ಲ. ನನ್ನ ದೇಶದಲ್ಲಿ ಎಲ್ಲ ಧರ್ಮದ ಜನರು ಒಬ್ಬರನ್ನೊಬ್ಬರು ಗೌರವಿಸುತ್ತಾರೆ, ಪ್ರೀತಿಸುತ್ತಾರೆ” ಎಂದು ತಿಳಿಸಿದರು.

“ಸಂವಿಧಾನಾತ್ಮಕವಾಗಿ ಮೀಸಲಾತಿ ಪಡೆಯುತ್ತಿರುವವರೂ ಕೂಡ ಮೀಸಲಾತಿ ವಿರೋಧಿಸುತ್ತಾರೆ. ಈ ದೇಶದ ಎಲ್ಲ ಜಾತಿ ಧರ್ಮದ ಜನರಿಗೆ ಮೀಸಲಾತಿ ಸಿಗುತ್ತಿದೆ. ಒಂದು ವರ್ಗದ ಜನರು ಮೀಸಲಾತಿ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಆ ಭ್ರಮೆಗಳನ್ನು ನಾವು ಒಡೆಯಬೇಕು” ಎಂದು ಅಭಿಪ್ರಾಯಪಟ್ಟರು.

ತಲೆಬಾಗಿಲು ಬೇರೆಯವರಿಗೆ ಕೊಟ್ಟು ನಾವು ಬಾಗಿಲು ಕಾಯುತ್ತಿದ್ದೇವೆ: ಹಂಸಲೇಖ

ಸಂಗೀತ ನಿರ್ದೇಶಕ ಹಂಸಲೇಖ ಮಾತನಾಡಿ, “ನಮ್ಮಮನೆಯ ತಲೆಬಾಗಿಲನ್ನು ಬೇರೆಯವರಿಗೆ ಕೊಟ್ಟು ನಾವೀಗ ನಮ್ಮ ಮನೆಯ ಬಾಗಿಲು ಕಾಯುವ ಸ್ಥಿತಿ ಬಂದಿದೆ” ಎಂದು ವಿಷಾದಿಸಿದರು.

ಇದನ್ನೂ ಓದಿರಿ: ಕನಕದಾಸರ ಪಠ್ಯ ಕಡಿತಕ್ಕೆ ಆಕ್ರೋಶ: ಹೋರಾಟದ ಎಚ್ಚರಿಕೆ ನೀಡಿದ ನಿರಂಜನಾನಂದಪುರಿ ಸ್ವಾಮೀಜಿ

“ಜಗತ್ತಿನಲ್ಲಿ ಪರಿವರ್ತನೆ ಆದಾಗ ಮಹಾಕಾವ್ಯ ಹುಟ್ಟುತ್ತದೆ. ದೇಶದ ಈಗಿನ ಸಂದರ್ಭಕ್ಕೆ ಇದು ಒಂದು ಮಹಾಕಾವ್ಯ. ನಾವು ಹಾಡಬೇಕಾಗಿರುವುದು ಹರಿಕಥೆ ಗಿರಿಕತೆ ಅಲ್ಲ. ಸಂವಿಧಾನ ಗೀತೆಯನ್ನು ಹಾಡಬೇಕು. ಆ ಕೆಲಸ ನಾವು ಮಾಡಲೇಬೇಕು” ಎಂದು ಎಚ್ಚರಿಸಿದರು.

“ಮೀಸಲಾತಿಗೆ ಶಾಶ್ವತ ಪರಿಹಾರ ಎಂದರೆ ಸುಸ್ಥಿತಿಯಲ್ಲಿರುವ ದಲಿತರು ತನ್ನ ಸಮುದಾಯದ ಅಭಿವೃದ್ಧಿಗೆ ಶ್ರಮಿಸಬೇಕು. ಅಂದರೆ, ತಿಂದ ಮೇಲೆ ಋಣ ತೀರಿಸಬೇಕು ಎಂದರ್ಥ. ಆಗ ಮಾತ್ರ ಅದು ಹಂಗಿಲ್ಲದ ಮೀಸಲಾತಿ ಆಗುತ್ತದೆ” ಎಂದು ಕಿವಿಮಾತು ಹೇಳಿದರು.

“12ನೇ ಶತಮಾನದಲ್ಲಿ ಈ ಪ್ರಯೋಗ ಆಗಿದೆ. ಶರಣರು ಬಸವಣ್ಣನವರನ್ನು ಮುಂದಿಟ್ಟುಕೊಂಡು ಮೀಸಲಾತಿಯನ್ನು ದಾಸೋಹವಾಗಿ ಪರಿವರ್ತನೆ ಮಾಡಿದ್ದರು. ನಂತರ ಅಕ್ಷರ ದಾಸೋಹ ಮಾಡಿದ್ದರು. ಆ ಅಕ್ಷರ ಮಂಟಪ ನಮಗೆ ಹಂಗಿಲ್ಲದ ಮೀಸಲಾತಿ ಹೇಳಿಕೊಟ್ಟಿದೆ. ಹಂಗಿಲ್ಲದ ಮೀಸಲಾತಿಯನ್ನು ಸಮಾಜಕ್ಕೆ ಕೊಡಬೇಕು” ಎಂದು ಆಶಿಸಿದರು.

ಮೀಸಲಾತಿ ಪುಸ್ತಕವನ್ನು ಇಂಗ್ಲಿಷ್ ಭಾಷೆಗೆ ಭಾಷಾಂತರ ಮಾಡಿದ ಪ್ರೊ.ಟಿ.ಆರ್.ಚಂದ್ರಶೇಖರ್, ಚಿಂತಕ ಬಂಜಗೆರೆ ಜಯಪ್ರಕಾಶ್, ಹಿರಿಯ ಪತ್ರಕರ್ತರಾದ ಬಿ.ಎಂ.ಹನೀಫ್, ಜನ ಪ್ರಕಾಶನದ ರಾಜಶೇಖರ ಮೂರ್ತಿ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರತ್ಯೇಕ ರಾಜ್ಯದ ಬೇಡಿಕೆ: ನಾಗಾಲ್ಯಾಂಡ್‌ನ 6 ಜಿಲ್ಲೆಗಳಲ್ಲಿ ಶೂನ್ಯ ಮತದಾನ

0
ನಾಗಾಲ್ಯಾಂಡ್‌ನ ಏಕೈಕ ಲೋಕಸಭಾ ಸ್ಥಾನಕ್ಕೆ ಶುಕ್ರವಾರ ಒಂದೇ ಹಂತದಲ್ಲಿ ಮತದಾನ ನಡೆದಿದೆ. ಆದರೆ, ಈಶಾನ್ಯ ರಾಜ್ಯದ ಆರು ಜಿಲ್ಲೆಗಳಲ್ಲಿ ಪ್ರತ್ಯೇಕ ರಾಜ್ಯದ ಬೇಡಿಕೆ ಮುಂದಿಟ್ಟುಕೊಂಡು ಜನರು ಮತದಾನದಿಂದ ದೂರ ಉಳಿದಿದ್ದಾರೆ ಎಂದು 'ಇಂಡಿಯಾ...