Homeಅಂಕಣಗಳುಮಾತು ಮರೆತ ಭಾರತ; ಕಿಲ್ವೇನ್ಮಣಿ ಫೈಲ್: ಸ್ವತಂತ್ರ ಭಾರತದ ಭೀಕರ ಹತ್ಯಾಕಾಂಡ

ಮಾತು ಮರೆತ ಭಾರತ; ಕಿಲ್ವೇನ್ಮಣಿ ಫೈಲ್: ಸ್ವತಂತ್ರ ಭಾರತದ ಭೀಕರ ಹತ್ಯಾಕಾಂಡ

- Advertisement -
- Advertisement -

1947ರ ಆಗಸ್ಟ್ 15ರಂದು ಭಾರತ ದೇಶವು ಬ್ರಿಟಿಷರಿಂದ ಸ್ವತಂತ್ರವಾಯಿತು. ಭಾರತೀಯರು ಬ್ರಿಟಿಷರ ದಬ್ಬಾಳಿಕೆಯಿಂದ ಮುಕ್ತಿ ಪಡೆದರು. 1950 ಜನವರಿ 26ರಂದು ಭಾರತದ ಸಂವಿಧಾನವು ಜಾರಿಗೊಂಡಿತು. ಅದು ಸಮಸ್ತ ಭಾರತೀಯರಿಗೂ ಮೂಲಭೂತ ಹಕ್ಕುಗಳನ್ನು ಖಾತ್ರಿಗೊಳಿಸಿತು. ಅದು ಸರ್ವ ಭಾರತೀಯರಿಗೂ ಸ್ವಾತಂತ್ರ್ಯ, ಸಮಾನತೆಯನ್ನು ಜಾರಿಗೊಳಿಸುವ ಜವಾಬ್ದಾರಿಯನ್ನು ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗದ ಹೆಗಲ ಮೇಲೆ ಹೇರಿತು. ಬ್ರಿಟಿಷರಿಂದ ರಾಜಕೀಯ ಸ್ವಾತಂತ್ರ್ಯ ಗಳಿಸಿಕೊಂಡ ಭಾರತವು ನಂತರದ ದಿನಗಳಲ್ಲಿ ಸಾಮಾಜಿಕ ಹಾಗೂ ಆರ್ಥಿಕ ಸ್ವಾತಂತ್ರ್ಯವನ್ನು ತನ್ನೆಲ್ಲಾ ಜನತೆಗೆ ಖಾತ್ರಿಗೊಳಿಸಲು ಸೋತಿದೆ. ಅದಕ್ಕೆ ಸ್ಪಷ್ಟ ನಿದರ್ಶನ ಹಿಂದೂ ಮೇಲ್ಜಾತಿಗಳು ದಲಿತರ ಮೇಲೆ ನಡೆಸುವ ದೌರ್ಜನ್ಯಗಳಾಗಿವೆ.

ಸ್ವತಂತ್ರ ಭಾರತಕ್ಕೆ 20 ವರ್ಷಗಳಾಗಿತ್ತು. ಅಷ್ಟರಲ್ಲಿಯೇ ಅತ್ಯಂತ ಭೀಕರ ದಲಿತರ ಹತ್ಯಾಕಾಂಡ ತಮಿಳುನಾಡಿನ ಕಿಲ್ವೇನ್ಮಣಿಯಲ್ಲಿ ನಡೆಯಿತು. ಅದಕ್ಕೂ ಮೊದಲು ಅದೆಷ್ಟು ದೌರ್ಜನ್ಯಗಳಾಗಿದ್ದವೋ ಕಾಣೆ. ಅವುಗಳೆಲ್ಲ ಭಾರತದ ಇತಿಹಾಸದಲ್ಲಿ ಸಮಾಧಿಯಾಗಿ ಹೋಗಿವೆ. ಆದರೆ 1968 ಡಿಸೆಂಬರ್ 25ರಂದು ಕಿಲ್ವೇನ್ಮಣಿಯಲ್ಲಿ ನಡೆದದ್ದು ಅಕ್ಷರಶಃ ನರಮೇಧ.

60ರ ದಶಕ ಭಾರತದ ಭೂಹೋರಾಟಗಳ ಕಾಲಘಟ್ಟ ಎಂದೇ ಹೇಳಬಹುದು. ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಸಿದ್ಧಾಂತದಲ್ಲಿ ನಂಬಿಕೆ ಇಟ್ಟಿದ್ದ ಎಡಪಂಥೀಯ ಸಂಘಟನೆಗಳು ಭೂರಹಿತ ಕೂಲಿ ಕಾರ್ಮಿಕರಿಗೆ
ಭೂಹಂಚಿಕೆ ಮಾಡುವಂತೆ ದೇಶಾದ್ಯಂತ ಹೋರಾಟ ರೂಪಿಸಿದ್ದವು. ಮಹಾರಾಷ್ಟ್ರದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಅನುಯಾಯಿ ದಾದಾಸಾಹೇಬ್ ಗಾಯಕ್ವಾಡ್ ಸಹ ಭೂಹೋರಾಟ ಆರಂಭಿಸಿದ್ದು ಇದೇ ಕಾಲಘಟ್ಟದಲ್ಲಿ. ಬ್ರಿಟಿಷರಿಂದ ಭಾರತ ಸ್ವತಂತ್ರಗೊಂಡು 20 ವರ್ಷಗಳು ಕಳೆದಿದ್ದರೂ ಬೃಹತ್ ದೇವಾಲಯಗಳು ಹಾಗೂ ಮೇಲ್ಜಾತಿ ಭೂಮಾಲೀಕರು ಸಾವಿರಾರು ಎಕರೆಗಟ್ಟಲೆ ಭೂಮಿಯನ್ನು ವಶದಲ್ಲಿಟ್ಟುಕೊಂಡಿದ್ದರು. ಅಂದಿನ ಎಲ್ಲಾ ರಾಜಕೀಯ ಪಕ್ಷಗಳೂ ಭೂಮಾಲೀಕರ ಅಂಗಳವಾಗಿದ್ದ ಕಾರಣ ಅವರ ವಿರುದ್ಧ ತಿರುಗಿ ಬೀಳುವವರಿರಲಿಲ್ಲ. ಆದರೆ ಸೈದ್ಧಾಂತಿಕವಾಗಿ ಕೃಷಿಕೂಲಿಗಳ ಪರವಾಗಿಯೇ ಕೆಲಸ ಮಾಡುತ್ತಿದ್ದ ಕಮ್ಯುನಿಸ್ಟ್ ಸಂಘಟನೆಗಳು ಮಾತ್ರ ಭೂಹೋರಾಟವನ್ನೇ ಪ್ರಮುಖ ಕಾರ್ಯಕ್ರಮವನ್ನಾಗಿ ಮಾಡಿಕೊಂಡವು. ಇದರ ಪರಿಣಾಮವಾಗಿ ಹಳ್ಳಿಗಳಲ್ಲಿ ಕೃಷಿಕೂಲಿಗಳಾಗಿ ದುಡಿಯುತ್ತಿದ್ದ ದಲಿತರನ್ನು ಸಂಘಟಿಸಿದರು. ಇದೇ ರೀತಿಯಲ್ಲಿಯೇ ಅವಿಭಜಿತ ತಂಜಾವೂರು ಜಿಲ್ಲೆಯಲ್ಲಿಯೂ ಹಲವು ಸಂಘಟನೆಗಳಾದವು.

ತಮಿಳುನಾಡಿನ ಕಿಲ್ವೇನ್ಮಣಿ ದಲಿತ ಕೃಷಿಕೂಲಿಗಳೂ ಸಹ ಸಂಘಟನೆಯೊಂದನ್ನು ಸ್ಥಾಪಿಸಿಕೊಂಡರು. ಇದಕ್ಕೆ ತಕ್ಕಂತೆ ಹಸಿರು ಕ್ರಾಂತಿಯೂ ಸಹ ಭಾರತದಲ್ಲಿ ಮನೆಮಾತಾಗಿತ್ತು. ಈ ಸಂಘಟನೆಯ ಮೂಲಕ ಕೂಲಿ ದರವನ್ನು ಹೆಚ್ಚು ಮಾಡಲು ಭೂಮಾಲೀಕರನ್ನು ಆಗ್ರಹಿಸುತ್ತಿದ್ದರು. ಇದಕ್ಕೆ ವಿರುದ್ಧವಾಗಿ ಭೂಮಾಲೀಕರೂ ಸಹ ಭತ್ತ ಉತ್ಪಾದನೆ ಸಂಘಟನೆಯನ್ನು ಸ್ಥಾಪಿಸಿಕೊಂಡು ಒಗ್ಗಟ್ಟಾದರು. ಅಲ್ಲಿಂದ ಈ ಎರಡು ಸಂಘಟನೆಗಳ ನಡುವೆ ಆಗಾಗ ಸಂಘರ್ಷ ನಡೆಯುತ್ತಲೇ ಇತ್ತು. ಕೃಷಿ ಕೂಲಿಕಾರರು ತಮ್ಮ ಕೂಲಿ ದರವನ್ನು ಹೆಚ್ಚು ಮಾಡಿಸಿಕೊಳ್ಳಲು ಸರಿಯಾದ ಸಮಯಕ್ಕಾಗಿ ಕಾಯುತ್ತಿದ್ದರು. ಭೂಮಾಲೀಕರು ಕೃಷಿ ಕೂಲಿಗಳನ್ನು ಹದ್ದುಬಸ್ತಿನಲ್ಲಿಡುವ ಸರಿಯಾದ ಸಮಯಕ್ಕಾಗಿ ಕಾಯುತ್ತಿದ್ದರು.

1968ನೇ ಇಸವಿಯ ನವೆಂಬರ್-ಡಿಸೆಂಬರ್ ತಿಂಗಳಿನಲ್ಲಿ ಬೆಳೆ ಕೊಯ್ಲು ಸಮಯ ಬಂದಾಗ ಕೃಷಿಕೂಲಿಗಳ ಸಂಘಟನೆಯು ಭೂಮಾಲೀಕರು ಕೂಲಿ ದರ ಹೆಚ್ಚು ಮಾಡದಿದ್ದರೆ ಕೆಲಸಕ್ಕೆ ಬರುವುದಿಲ್ಲವೆಂದು ಘೋಷಿಸಿತು. ಎಂದಿನಂತೆ ಭೂಮಾಲೀಕರು ಕೃಷಿಕೂಲಿಗಳನ್ನು ವಿಭಜಿಸಿ ತಮ್ಮ ಆಟವನ್ನು ಆಡಲು ಮುಂದಾದರಾದರೂ ಈ ಬಾರಿ ಸಂಘಟನೆಯ ಕಾರಣಕ್ಕಾಗಿ ಒಬ್ಬ/ಳು ಕೃಷಿಕೂಲಿಯೂ ಅಲ್ಲಾಡಲಿಲ್ಲ. ಈ ಬೆಳವಣಿಗೆ ಭೂಮಾಲೀಕರ ಪಿತ್ತ ನೆತ್ತಿಗೇರಿಸಿತ್ತು. ಆದರೂ ಪಕ್ಕದ ಊರಿನ ಕೃಷಿಕೂಲಿಗಳನ್ನು ಕರೆಸಿ ಕೊಯ್ಲು ಮಾಡಿಸಿಕೊಳ್ಳುವಲ್ಲಿ ಮೇಲ್ಜಾತಿ ಭೂಮಾಲೀಕರು ಯಶಸ್ವಿಯಾದರು. ಈ ಘಟನೆ ಎರಡೂ ಪಾಳೆಯದಲ್ಲಿ ಬೂದಿ ಮುಚ್ಚಿದ ಕೆಂಡದಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಿತ್ತು.

ಇಂತಹ ಪರಿಸ್ಥಿತಿಯಲ್ಲಿ ಕಿಲ್ವೇನ್ಮಣಿಯ ಕಿರಾಣಿ ಅಂಗಡಿಯ ಮಾಲೀಕನೊಬ್ಬನನ್ನು ಭೂಮಾಲೀಕರ ಬೆಂಬಲಿಗರು ಅಪಹರಣ ಮಾಡಿದರು. ಇದಕ್ಕೆ ಮುಖ್ಯ ಕಾರಣ ಭೂಮಾಲೀಕರು ದಲಿತ ಕೃಷಿಕೂಲಿಗಳನ್ನು ಬಹಿಷ್ಕಾರ ಹಾಕಿದ್ದರೂ ಅವರಿಗೆ ಆ ಅಂಗಡಿಯ ಮಾಲೀಕ ದವಸ ಧಾನ್ಯಗಳನ್ನು ನೀಡಿದ್ದು. ಹೀಗೆ ಅಪಹರಣಗೊಂಡ ವ್ಯಕ್ತಿಯನ್ನು ಬಿಡಿಸಿಕೊಂಡು ಬರಲು ತೆರಳಿದ ಕೃಷಿ ಕೂಲಿಗಳ ಹಾಗೂ ಭೂಮಾಲೀಕರ ಗೂಂಡಾಗಳ ನಡುವೆ ಸಂಘರ್ಷವೇರ್ಪಟ್ಟು ಭೂಮಾಲೀಕರ ಬೆಂಬಲಿಗನೊಬ್ಬ ಅದರಲ್ಲಿ ಹತ್ಯೆಯಾದನು. ಈ ಘಟನೆ ಕಿಲ್ವೇನ್ಮಣಿಯ ಹತ್ಯಾಕಾಂಡಕ್ಕೆ ತಕ್ಷಣದ ಕಾರಣವಾಯಿತು. ಆದರೆ ಮೇಲ್ಜಾತಿ ಭೂಮಾಲೀಕರಲ್ಲಿದ್ದ ’ಸ್ವಾಭಿಮಾನಿ ದಲಿತ’ರ ಮೇಲಿನ ಸಿಟ್ಟು ಅದಕ್ಕೆ ಶಾಶ್ವತ ಕಾರಣವಾಗಿತ್ತು.

1968 ಡಿಸೆಂಬರ್ 25ನೇ ತಾರೀಖಿನಂದು ರಾತ್ರಿ ಹತ್ತು ಗಂಟೆಯ ಸಮಯಕ್ಕೆ ಲಾರಿಗಳಲ್ಲಿ ಬಂದ ಸುಮಾರು 200 ಭೂಮಾಲೀಕರ ಗೂಂಡಾಗಳು ದಲಿತ ಕೇರಿಯನ್ನು ಸುತ್ತುವರಿದು ನಿಂತರು. ಕೇರಿಯಿಂದ ಒಂದು ಸೊಳ್ಳೆಯೂ ಹೊರಹೋಗದಂತೆ ದಿಗ್ಭಂಧನ ವಿಧಿಸಿದರು. ಇಬ್ಬರು ಕೃಷಿಕೂಲಿಗಳನ್ನು ಗುರಿಮಾಡಿ ಬಂದೂಕಿನಿಂದ ಸುಟ್ಟು ಗಾಯಗೊಳಿಸಲಾಯಿತು. ಈ ಸದ್ದು ತಿಳಿದು ಹೊರಬಂದ ದಲಿತರ ಕೈಯಲ್ಲಿದ್ದ ಆಯುಧ ಕೇವಲ ಕಲ್ಲುಗಳು ಮಾತ್ರ. ಒಂದೆಡೆ ದಲಿತ ಯುವಕರು ಹಾಗೂ ವಯಸ್ಕರು ಕಲ್ಲುಗಳನ್ನು ತೂರುತ್ತಾ ಭೂಮಾಲೀಕರ ಗೂಂಡಾಗಳನ್ನು ಹಿಂದೆ ಸರಿಸುತ್ತಿದ್ದರೆ ಭೂಮಾಲೀಕರ ಗೂಂಡಾಗಳು ದಲಿತರು ಗುಂಪುಗಟ್ಟಿದ್ದ ಸ್ಥಳವನ್ನು ಹುಡುಕುತ್ತಿದ್ದರು. ಸುರಕ್ಷತೆಗಾಗಿ ಹೆಂಗಸರು, ವಯಸ್ಸಾದ ಮುದುಕ, ಮುದುಕಿಯರು ಹಾಗೂ ಮಕ್ಕಳನ್ನು ತನ್ನೊಡಲಲ್ಲಿ ತುಂಬಿಕೊಂಡಿದ್ದ ಗುಡಿಸಲು ಆ ಪಾಪಿಗಳ ಕಣ್ಣಿಗೆ ಬಿದ್ದೇಬಿಟ್ಟಿತು. ಆ ಗುಡಿಸಿಲಿನ ಸುತ್ತ ನೆರೆದ ದುಷ್ಕರ್ಮಿಗಳು ಗುಡಿಸಲಿಗೆ ಬೆಂಕಿ ಇಟ್ಟೇಬಿಟ್ಟರು. ಬೆಂಕಿಯ ತಾಪ ತಾಳಲಾರದೇ ಹೊರಬಂದ ಇಬ್ಬರು ಮುದುಕರನ್ನು ಕತ್ತರಿಸಿ ಮತ್ತೆ ಗುಡಿಸಿಲಿನೊಳಕ್ಕೆ ಎಸೆದರು. ಮಕ್ಕಳಾದರೂ ಬದುಕಿಕೊಳ್ಳಲೆಂದು ಗುಡಿಸಿಲಿನೊಳಗಿದ್ದ ಹೆಂಗಸರು ಇಬ್ಬರು ಮಕ್ಕಳನ್ನು ಹೊರಹಾಕಿದರು. ಆದರೆ ಒಂದೇ ಕ್ಷಣದಲ್ಲಿ ಮತ್ತೆ ಆ ಮಕ್ಕಳಿಬ್ಬರನ್ನೂ ಧಗಧಗನೆ ಉರಿಯುತ್ತಿರುವ ಗುಡಿಸಿಲಿನೊಳಕ್ಕೆ ಎಸೆಯಲಾಯಿತು. ಕೆಲವೇ ಕ್ಷಣಗಳಲ್ಲಿ ಆ ಗುಡಿಸಲು ಸುಟ್ಟು ಭಸ್ಮವಾಯಿತು. ಅದರಲ್ಲಿದ್ದ 5 ಮುದುಕರು, 16 ಮಹಿಳೆಯರು ಹಾಗೂ 23 ಮಕ್ಕಳೂ ಸೇರಿ 44 ಜನ ದಲಿತರು ಸುಟ್ಟು ಕರಕಲಾಗಿದ್ದರು.

ಇಂತಹ ನರಮೇಧ ನಡೆಸಿದ ಮೇಲೆ ಆ ದುಷ್ಕರ್ಮಿಗಳು ನೇರವಾಗಿ ಹೋದದ್ದು ಪೊಲೀಸ್ ಸ್ಟೇಷನ್ನಿಗೆ. ಅಲ್ಲಿ ತಮಗೆ ರಕ್ಷಣೆ ಬೇಕೆಂದು ಪೊಲೀಸ್ ಸೆಕ್ಯುರಿಟಿ ಪಡೆದರು. ತಮಿಳುನಾಡಿನ ಅಂದಿನ ಮುಖ್ಯಮಂತ್ರಿ ಅಣ್ಣಾದೊರೈ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವುದಾಗಿ ಭರವಸೆ ನೀಡಿದರು. ಭೂಮಾಲೀಕರನ್ನು ಹಾಗೂ ದುಷ್ಕರ್ಮಿಗಳನ್ನು ಜೈಲಿಗೆ ಅಟ್ಟಲಾಯಿತು. 10 ಜನರಿಗೆ 10 ವರ್ಷಗಳ ಕಾಲ ಶಿಕ್ಷೆಯನ್ನು ಸೆಷನ್ ಕೋರ್ಟ್ ವಿಧಿಸಿತು. ಅದರಲ್ಲಿ ಭೂಮಾಲೀಕರ ನಾಯಕ ಗೋಪಾಲಕೃಷ್ಣನ್ ನಾಯ್ಡು ಸಹ ಸೇರಿದ್ದನು. ಆದರೆ 1975ರಲ್ಲಿ ಸಾಕ್ಷಿಗಳ ಕೊರತೆಯ ಕಾರಣ ನೀಡಿ ಮದ್ರಾಸ್ ಹೈ ಕೋರ್ಟ್ ನಾಯ್ಡುಗೆ ವಿಧಿಸಿದ್ದ ಶಿಕ್ಷೆಯನ್ನು ರದ್ದುಗೊಳಿಸಿ ಬಿಡುಗಡೆಗೊಳಿಸಿತು. ನ್ಯಾಯಾಲಯದ ಶಿಕ್ಷೆಯಿಂದ ತಪ್ಪಿಸಿಕೊಂಡ ನಾಯ್ಡುವನ್ನು 1980ರಲ್ಲಿ ಪ್ರತೀಕಾರವಾಗಿ ಕೊಲೆ ಮಾಡಲಾಯಿತು.

ಕಿಲ್ವೇನ್ಮಣಿ ಘಟನೆಯು ಭಾರತದ ಭೂಹೋರಾಟಗಳ ಧಿಕ್ಕನ್ನು ಬದಲಾಯಿಸಿತು. ದೇಶಾದ್ಯಂತ ಹಲವು ಕಡೆ ನೂರಾರು ಭೂಹೋರಾಟಗಳು ನಡೆದವು. ವಿಪರ್ಯಾಸವೆಂದರೆ ಪ್ರತಿ ಬಾರಿಯೂ ಈ ದೇಶದಲ್ಲಿ ಒಂದು ಹುಲ್ಲುಕಡ್ಡಿಯು ಪ್ರಗತಿಪರವಾಗಿ ಅಲುಗಾಡಬೇಕೆಂದರೆ ದಲಿತರ ಮಾರಣ ಹೋಮವೇ ನಡೆಯಬೇಕಲ್ಲ!

ಕಿಲ್ವೇನ್ಮಣಿ ಘಟನೆ ಅಧರಿಸಿ ಹಲವು ಕಾದಂಬರಿಗಳು ಬಂದಿವೆ. ಸಿನೆಮಾಗಳನ್ನು ಮಾಡಲಾಗಿದೆ. ಇತ್ತೀಚೆಗೆ ತಮಿಳಿನಲ್ಲಿ ತೆರೆಕಂಡ ಅಸುರನ್ ಸಿನೆಮಾದಲ್ಲಿ ಕಿಲ್ವೇನ್ಮಣಿ ಹೋಲುವ ಘಟನೆಯೂ ಸೇರಿದೆ. ಅರವಿಂದನ್ ಸಿನೆಮಾದ ಪ್ರಮುಖ ಕಥೆ ಕಿಲ್ವೇನ್ಮಣಿ.

ಕೋಮುವಾದದ ಫೈಲ್ಸ್‌ಗಳೇ ಸದ್ದು ಮಾಡುತ್ತಿರುವ ಈ ಕಾಲಘಟ್ಟದಲ್ಲಿ ದಲಿತ್ ಫೈಲ್ಸ್‌ಗಳನ್ನು ಪರಿಗಣಿಸುವುದೇ ಈ ಮೇಲ್ಜಾತಿ ಹಿಂದೂ ಸಮಾಜ?


ಇದನ್ನೂ ಓದಿ: ಮಾತು ಮರೆತ ಭಾರತ; ದಲಿತ್ ಫೈಲ್ಸ್: ಸ್ವಾತಂತ್ರ್ಯದ ಹೊಸ್ತಿಲಲ್ಲಿ ಸಾಸನೂರು ಹತ್ಯಾಕಾಂಡ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....

ವಿಜಯ್ ಹೇಳಿದ ಭ್ರಷ್ಟಾಚಾರ ನಿರ್ಮೂಲನೆ ಮತ್ತು ಟಿವಿಕೆ ಶಾಸಕರ ಕ್ರಿಮಿನಲ್ ಹಿನ್ನೆಲೆ

ಎರಡು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಟಿವಿಕೆ ಎಂಬ ಪಕ್ಷ, 75 ವರ್ಷಗಳ ಅನುಭವಿ ಪಕ್ಷವಾದ ಡಿಎಂಕೆಯನ್ನು ಸೋಲಿಸಿರುವುದು, ಕಳೆದ ಅರವತ್ತು ವರ್ಷಗಳಲ್ಲಿ ಮೊಟ್ಟ ಮೊದಲ ಬಾರಿಗೆ ದ್ರಾವಿಡ ಚಳುವಳಿ ಹಿನ್ನೆಲೆಯ ಪಕ್ಷವನ್ನು...

ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಬಿಜೆಪಿ ಗೆಲುವು: ಫಲಿತಾಂಶದ ಬಳಿಕ ಭುಗಿಲೆದ್ದ ಹಿಂಸಾಚಾರ, ಕನಿಷ್ಠ ಐದು ಮಂದಿ ಸಾವು

ಕೊಲ್ಕತ್ತಾ, ಮೇ 8: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಮೊದಲ ಬಾರಿಗೆ ಬೃಹತ್ ಗೆಲುವು ಸಾಧಿಸಿದ್ದು, ರಾಜ್ಯದ 294 ಸ್ಥಾನಗಳ ಪೈಕಿ 206 ಸ್ಥಾನಗಳನ್ನು ಗೆದ್ದು ಮುಂದಿನ...

ಪಂಚರಾಜ್ಯ ಚುನಾವಣೆಯ ಗೋಜಲುಗಳು

ವಿವಾದಾತ್ಮಕ ಮತ್ತು ಸಂವಿಧಾನ ವಿರೋಧಿ ವಿಶೇಷ ತೀವ್ರ ಪರಿಷ್ಕರಣೆ (ಎಸ್ ಐಆರ್) ಅಡಿಯಲ್ಲಿ ನಡೆದ 2026ರ ಐದು ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಏಕರೂಪದ ಅಭಿಮತವನ್ನು ವ್ಯಕ್ತಪಡಿಸಲಿಲ್ಲ. ಮತ್ತು ಸಂಕೀರ್ಣವಾದ ಫಲಿತಾಂಶ ಕೊಟ್ಟಿದ್ದಾರೆ. ಪಶ್ಚಿಮ...

ಪ್ರಜಾಸತ್ತೆಯ ಉಳಿವಿಗೆ ಇದು ನಿರ್ಣಾಯಕ ಕ್ಷಣ : ಮಹತ್ವದ ಕಣ್ಣೋಟ

ಚುನಾವಣೆಗಳು ಮತ್ತು ನ್ಯಾಯಾಲಯಗಳು ಇನ್ನು ಪರಿಹಾರವಲ್ಲ ಎಂಬ ಅಭಿಪ್ರಾಯಕ್ಕೆ ಜನರು ಬರಲು ಈ ಬಾರಿಯ ವಿಧಾನಸಭಾ ಚುನಾವಣೆಗಳೇ ಕಾರಣವಾಗಿವೆ. ಇಂದು 'ಭಾರತದ ಪರಿಕಲ್ಪನೆ'ಗೆ (Idea of India) ಸಂಚಕಾರ ಬಂದಿದೆ. ಪ್ರಜಾಪ್ರಭುತ್ವವು ಕೇವಲ...

ಭಾಗ-2: ಎಸ್‌ಐಆರ್ ಜಾರಿಯಿಂದ ಕಾಂಗ್ರೆಸ್‌ ಕಳೆದುಕೊಳ್ಳುವ ಕ್ಷೇತ್ರಗಳೆಷ್ಟು?

30 ಸಾವಿರದಿಂದ ಒಂದು ಸಾವಿರದ ಒಳಗಿನ ಮತಗಳ ಅಂತರದಿಂದ ಗೆದ್ದಿರುವ ಕರ್ನಾಟಕದ 97 ಕ್ಷೇತ್ರಗಳನ್ನು ನಾವು ಪಟ್ಟಿ ಮಾಡಿದ್ದೇವೆ. ಪಶ್ಚಿಮ ಬಂಗಾಳದಲ್ಲಿ ಆದಂತೆಯೇ ರಾಜ್ಯದಲ್ಲಿ ಚುನಾವಣೆ ಸಮೀಪಿಸಿದಾಗ ಎಸ್‌ಐಆರ್ ಜಾರಿಯಾದರೆ ಬಿಜೆಪಿಗೆ ಅನುಕೂಲವಾಗುವ...

ತಮಿಳುನಾಡಿನಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿ ಗೆದ್ದ 60 ನೂತನ ಶಾಸಕರು

ತಮಿಳುನಾಡು ರಾಜಕಾರಣ ಎಂದರೆ ಅದು ಐದು ದಶಕಗಳಿಂದ ಕೇವಲ ಡಿಎಂಕೆ ಮತ್ತು ಎಐಎಡಿಎಂಕೆ ನಡುವಿನ ಜಿದ್ದಾಜಿದ್ದಿ. ಆದರೆ 2026ರ ಫಲಿತಾಂಶವು ಈ "ದ್ವಿಪಕ್ಷೀಯ" ಸಂಪ್ರದಾಯವನ್ನು ಮುರಿದುಹಾಕಿದೆ. ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ...

‘ಪ್ರಜಾತಂತ್ರಕ್ಕೆ ಬೆದರಿಕೆ ಒಡ್ಡುತ್ತಿರುವ ಎಸ್ಐಆರ್’: ಬಿಜೆಪಿಯ (ಕು)ತಂತ್ರ ಫಲಿಸಿದರೇ ಭಾರತವೇ ಇರುವುದಿಲ್ಲ..!

ಪಂಚರಾಜ್ಯ ಚುನಾವಣಾ ಫಲಿತಾಂಶಗಳು 2026 ಮೇ 4ರಂದು ಹೊರಬಿದ್ದಿದ್ದು, ಭಾರತೀಯ ಜನತಾ ಪಾರ್ಟಿ ಪಶ್ಚಿಮ ಬಂಗಾಳವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಆದರೆ ಈ ಗೆಲುವು ಕೇವಲ ಜನರ ಆದರ್ಶವಲ್ಲ, ಬದಲಿಗೆ ಚುನಾವಣಾ ವ್ಯವಸ್ಥೆಯೇ...