ಕಾಂಗ್ರೆಸ್ ನೇತೃತ್ವದ ರಾಜಸ್ಥಾನ ಸರ್ಕಾರವನ್ನು ಉರುಳಿಸುವ ಬಿಜೆಪಿಯ ಪ್ರಯತ್ನಗಳನ್ನು ಪ್ರಧಾನಿ ನರೇಂದ್ರ ಮೋದಿ ಕೊನೆಗಾಣಿಸಬೇಕು ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಒತ್ತಾಯಿಸಿದ್ದಾರೆ.
“ಮೋದಿಜಿ ದೇಶದ ಪ್ರಧಾನ ಮಂತ್ರಿ. ದೇಶದ ಜನರು ಅವರಿಗೆ ದೇಶವನ್ನು ಮುನ್ನೆಡೆಸಲು ಎರಡು ಬಾರಿ ಅವಕಾಶ ನೀಡಿದ್ದಾರೆ. ಅವರು ಜನರನ್ನು ಚಪ್ಪಾಳೆ ತಟ್ಟುವಂತೆ ಮಾಡಿದರು, ಪಾತ್ರೆಗಳನ್ನು ಬಡಿಯುವಂತೆ ಮಾಡಿದರು. ಜನರು ಅವನನ್ನು ನಂಬಿದ್ದರು. ಇದು ಒಂದು ದೊಡ್ಡ ವಿಷಯ. ಮೋದಿಯವರು ರಾಜಸ್ಥಾನದ ನಾಟಕಕ್ಕೆ ಅಂತ್ಯ ಹಾಡಬೇಕು. ಬಿಜೆಪಿಯು ಅಸೆಂಬ್ಲಿ ಅಧಿವೇಶನಕ್ಕೆ ಮುಂಚಿತವಾಗಿ ಕುದುರೆ ವ್ಯಾಪಾರದ ದರವನ್ನು ಹೆಚ್ಚಿಸಿದೆ. ಈ ನಾಟಕ ಯಾವುದು?” ಎಂದು ಗೆಹ್ಲೋಟ್ ಪ್ರಶ್ನಿಸಿದ್ದಾರೆ.
ಮಾಯಾವತಿಯವರು ಸಿಬಿಐ ಮತ್ತು ಇಡಿ ಒತ್ತಡದಲ್ಲಿದ್ದಾರೆ. ರಾಜ್ಯದ ಬಿಎಸ್ಪಿ ಶಾಸಕರು ಕಾನೂನಿನ ಪ್ರಕಾರ ಕಾಂಗ್ರೆಸ್ನಲ್ಲಿ ವಿಲೀನಗೊಂಡರು. ರಾಜ್ಯಸಭೆಯಲ್ಲಿ 4 ಟಿಡಿಪಿ ಸಂಸದರು ಬಿಜೆಪಿಯೊಂದಿಗೆ ವಿಲೀನಗೊಂಡಾಗ ಯಾರೂ ಅದನ್ನು ಪ್ರಶ್ನಿಸಲಿಲ್ಲ, ಈಗೇಕೆ ಪ್ರಶ್ನೆ ಎಂದು ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.
ಸಂಜೀವಿನಿ ಕೋಆಪರೇಟಿವ್ ಸೊಸೈಟಿ ಹಗರಣದಲ್ಲಿ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರ ಹೆಸರು ಬಂದಿದೆ. ನ್ಯಾಯಾಲಯವು ಈ ವಿಷಯದಲ್ಲಿ ನಿರ್ದೇಶನ ನೀಡಿದೆ. ನೈತಿಕ ಆಧಾರದ ಮೇಲೆ ಅವರು ರಾಜೀನಾಮೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಸದನದಲ್ಲಿ ಭಾಗವಹಿಸುತ್ತೇವೆ
ರಾಜಸ್ಥಾನದಲ್ಲಿ ಕಾಂಗ್ರೆಸ್ ಶಾಸಕರಿಗೆ ವಿಪ್ ನೀಡಿದರೆ ಆಗಸ್ಟ್ 14ರಂದು ನಡೆಯಲಿರುವ ವಿಧಾನಸಭೆ ಅಧಿವೇಶನಕ್ಕೆ ಹಾಜರಾಗುತ್ತೇವೆ ಎಂದು ಬಂಡಾಯ ಶಾಸಕರೊಬ್ಬರು ಹೇಳಿದ್ದಾರೆ ಎನ್ನಲಾಗಿದೆ.
ನಾವು ಸಚಿನ್ ಪೈಲಟ್ ಜೊತೆಗಿದ್ದೇವೆ. ಅವರು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ದರಾಗಿದ್ದೇವೆ. ನಾವು ಕಾಂಗ್ರೆಸ್ ಪಕ್ಷವನ್ನು ತೊರೆಯುವ ಬಗ್ಗೆ ಯಾವುತ್ತೂ ಮಾತನಾಡುವುದಿಲ್ಲ. ಕಾಂಗ್ರೆಸ್ ವಿಪ್ ನೀಡಿದ್ದರೆ ನಾವು ವಿಧಾನಸಭೆ ಅಧಿವೇಶನಕ್ಕೆ ಖಂಡಿತವಾಗಿ ಭಾಗವಹಿಸುತ್ತೇವೆ. ನಾವು ನಮ್ಮ ಧ್ವನಿಯನ್ನು ಸದನದಲ್ಲಿ ಎತ್ತುತ್ತೇವೆ ಎಂದು ಅವರು ಹೇಳಿದ್ದಾರೆ.
‘ನಾವು ನಾಯಕತ್ವ ಬದಲಾವಣೆ ಬಯಸುತ್ತಿದ್ದೇವೆ. ರಾಜಸ್ಥಾನ ಮುಖ್ಯಮಂತ್ರಿ ನಮ್ಮ ಗೌರವಕ್ಕೆ ಧಕ್ಕೆ ತಂದಿದ್ದಾರೆ. ನಮ್ಮ ಬಗ್ಗೆ ಕೇವಲವಾಗಿ ಮಾತನಾಡಿದ್ದಾರೆ. ನಮಗೂ ಆತ್ಮಗೌರವ ಇದೆ. ಗೆಹ್ಲೋಟ್ ತನ್ನ ಕುಟುಂಬದ ಸದಸ್ಯರನ್ನೇ ನಿಂದಿಸಿದ್ದಾರೆ. ಈ ಸಮಯದಲ್ಲಿ ನಾವು ಬಿಜೆಪಿ ಬಗ್ಗೆ ಮಾತನಾಡುವುದಿಲ್ಲ. ಕಾಂಗ್ರೆಸ್ ಪಕ್ಷ ತೊರೆಯುವ ಪ್ರಶ್ನೆಯೇ ಇಲ್ಲ ಎಂದು ಬಂಡಾಯ ಕಾಂಗ್ರೆಸ್ ಶಾಸಕರು ತಿಳಿಸಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ನಡೆಸಿ
ಕೋವಿಡ್ ಪರಿಸ್ಥಿತಿ ಕುರಿತು ಈ ಹಿಂದೆ ಪ್ರಧಾನಮಂತ್ರಿಯವರು ವಿಡಿಯೋ ಕಾನ್ಫರೆನ್ಸ್ ನಡೆಸಿ ಬಹಳ ಸಮಯವಾಗಿದೆ. ಕೊನೆಯದಾಗಿ ಅವರು ಜೂನ್ 17 ರಂದು ಮುಖ್ಯಮಂತ್ರಿಗಳೊಡನೆ ಮಾತನಾಡಿದ್ದರು. ಹಾಗಾಗಿ ಕೂಡಲೇ ವಿಡಿಯೋ ಕಾನ್ಫರೆನ್ಸ್ ನಡೆಸಲು ಅವರಿಗೆ ಪತ್ರ ಬರೆಯುತ್ತಿದ್ದೇನೆ. ವಿಡಿಯೋ ಕಾನ್ಫರೆನ್ಸ್ ಎರಡು ದಿನಗಳವರೆಗೆ ನಡೆದರೆ ಒಳ್ಳೆಯದು. ಆಗ ಪ್ರತಿಯೊಬ್ಬ ಸಿಎಂಗೆ ಮಾತನಾಡಲು ಅವಕಾಶ ಸಿಗುತ್ತದೆ ಎಂದು ಗೆಹ್ಲೋಟ್ ತಿಳಿಸಿದ್ದಾರೆ.
ಸಭೆಯನ್ನು ಒಂದು ದಿನ ಮಾತ್ರ ನಡೆಸಿದರೆ, ಅರ್ಧದಷ್ಟು ಜನರು ಮಾತ್ರ ಮಾತನಾಡಲು ಸಾಧ್ಯವಾಗುತ್ತದೆ. ಅರ್ಧದಷ್ಟು ಜನರು ಮಾತನಾಡಲು ಸಾಧ್ಯವಾಗುವುದಿಲ್ಲ. ನಾವು ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ಮಾತನಾಡಲು ಬಯಸುತ್ತೇವೆ. ಆ ರಾಜ್ಯಗಳಲ್ಲಿನ ಪರಿಸ್ಥಿತಿ ಏನು ಮತ್ತು ಅವರಿಗೆ ಕೇಂದ್ರದಿಂದ ಏನು ಬೇಕು ಎಂಬುದರ ಕುರಿತು ಅವರ ಪ್ರತಿಕ್ರಿಯೆಯನ್ನು ಪಡೆಯಲು ನಾವು ಬಯಸುತ್ತೇವೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ; ಬಿಜೆಪಿ ವಿಲೀನ ಮಾಡಿದ್ರೆ ಸರಿ, ಕಾಂಗ್ರೆಸ್ ಮಾಡಿದರೆ ತಪ್ಪೆ?: ಅಶೋಕ್ ಗೆಹ್ಲೋಟ್ ಪ್ರಶ್ನೆ


