ಕಳೆದ ಕೆಲವು ದಿನಗಳಿಂದ ಬೆಂಗಳೂರು ನಗರ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸೋಂಕು ಹರಡುವಿಕೆಯನ್ನು ನಿಯಂತ್ರಿಸಲು ಕೆಲ ಮಾರ್ಗಸೂಚಿಗಳನ್ನು ಜಾರಿ ಮಾಡಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕ. ಸುಧಾಕರ್ ಹೇಳಿದ್ದಾರೆ.
ಕೊರೊನಾ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಗುರುವಾರ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕೊರೊನಾ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿತ್ತು. ಈ ಹಿನ್ನಲೆಯಲ್ಲಿ ಸಚಿವ ಸುಧಾಕರ್ ಸರಣಿ ಟ್ವೀಟ್ ಮಾಡಿದ್ದಾರೆ.
ಟ್ವೀಟ್ನಲ್ಲಿ ಅವರು, “ಮುಖ್ಯಮಂತ್ರಿಯು, ಸಚಿವ ಸಂಪುಟದ ಸದಸ್ಯರು, ತಾಂತ್ರಿಕ ಸಲಹಾ ಸಮಿತಿಯ ತಜ್ಞರು, ಮುಖ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ಎಲ್ಲಾ ಆಯಾಮಗಳನ್ನು ಪರಿಗಣಿಸಿ ರಾಜ್ಯದ ಜನರ ಆರೋಗ್ಯ ಮತ್ತು ಸುರಕ್ಷತೆಯ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿದ್ದಾರೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸಿಡಿ ಪ್ರಕರಣ: ಸಂತ್ರಸ್ತೆ ಪರ ವಕೀಲ ಜಗದೀಶ್ ವಿರುದ್ಧವೇ ದೂರು ನೀಡಿದ ಎಸ್ಐಟಿ!
“ಕಳೆದ ವರ್ಷದ ಲಾಕ್ ಡೌನ್ ಮತ್ತು ನಂತರದ ನಿರ್ಬಂಧಗಳಿಂದ ಚಿತ್ರರಂಗ ಸೇರಿದಂತೆ ಅನೇಕ ಉದ್ದಿಮೆ, ವ್ಯಾಪಾರ, ವಹಿವಾಟುಗಳಿಗೆ ತೊಂದರೆ ಆಗಿರುವುದರ ಬಗ್ಗೆ ಸರ್ಕಾರಕ್ಕೆ ಅರಿವಿದೆ, ಕಳಕಳಿಯೂ ಇದೆ. ಆದರೆ ಒಲ್ಲದ ಮನಸ್ಸಿನಿಂದ ಅನಿವಾರ್ಯವಾಗಿ ಈ ಕಠಿಣ ನಿರ್ಧಾರ ತೆಗೆದುಕೊಳ್ಳುವ ಪರಿಸ್ಥಿತಿ ಮತ್ತೆ ಎದುರಾಗಿದೆ” ಎಂದು ಹೇಳಿದ್ದಾರೆ.
“ಈಗ ಲಸಿಕೆ ಸಹ ಲಭ್ಯವಿರುವುದರಿಂದ ಹೆಚ್ಚು ಹೆಚ್ಚು ಮಂದಿ ಲಸಿಕೆ ಪಡೆದು, ಕೆಲವು ದಿನಗಳ ಕಾಲ ಕಠಿಣ ನಿಯಮಗಳನ್ನು ಪಾಲಿಸಿ ನಿಮ್ಮೆಲ್ಲರ ಸಹಕಾರದಿಂದ ಪ್ರಕರಣಗಳು ಕಡಿಮೆಯಾದರೆ ಮತ್ತೆ ಎಂದಿನಂತೆ ಪೂರ್ಣ ಪ್ರಮಾಣದಲ್ಲಿ ಚಟುವಟಿಕೆಗಳನ್ನು ಪುನರಾರಂಭಿಸಬಹುದು” ಎಂದು ಸಚಿವ ಸುಧಾಕರ್ ತಿಳಿಸಿದ್ದಾರೆ.
“ಈ ನಿರ್ಧಾರ ವೈಜ್ಞಾನಿಕ ನೆಲೆಗಟ್ಟಿಯಲ್ಲಿ ರಾಜ್ಯದ ಜನರ ಆರೋಗ್ಯ ಮತ್ತು ಸುರಕ್ಷತೆಯ ಹಿತದೃಷ್ಟಿಯಿಂದ ತೆಗೆದುಕೊಂಡಿರುವ ಆಡಳಿತಾತ್ಮಕ ನಿರ್ಧಾರವಾಗಿದ್ದು ಇದನ್ನು ರಾಜಕೀಯ ಅಥವಾ ಇನ್ಯಾವುದೇ ದೃಷ್ಟಿಯಿಂದ ಪರಿಗಣಿಸಬಾರದು” ಎಂದು ಸುಧಾಕರ್ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಹೆಣ್ಣು ಮಕ್ಕಳಿಗೆ ದೇವಸ್ಥಾನಗಳಲ್ಲಿ ಸ್ವಯಂ ರಕ್ಷಣಾ ತರಬೇತಿ: ಸರ್ಕಾರದ ಆದೇಶಕ್ಕೆ ಮಹಿಳಾ ಒಕ್ಕೂಟ ಖಂಡನೆ
ಗುರುವಾರ ಕೊರೊನಾ ಮಾರ್ಗಸೂಚಿಯನ್ನು ರಾಜ್ಯ ಸರ್ಕಾರ ಬಿಡುಗಡೆಗೊಳಿಸಿದ್ದು, ಅವುಗಳು ಕೆಳಗಿನಂತಿವೆ.
- ವಿದ್ಯಾಗಮವೂ ಸೇರಿದಂತೆ 6-9 ನೇ ತರಗತಿಗಳನ್ನು ಸ್ಥಗಿತಗೊಳಿಸಲಾಗಿದೆ. 10,11 ಮತ್ತು 12 ತರಗತಿಗಳು ಪ್ರಸ್ತುತ ಇರುವಂತೆ ಮುಂದುವರೆಯುತ್ತವೆ.
- ವಿದ್ಯಾರ್ಥಿಗಳಿಗೆ ಹಾಜರಾತಿ ಕಡ್ಡಾಯವಿಲ್ಲ.
- ಉನ್ನತ ತರಗತಿಗಳನ್ನು ಹೊರತು ಪಡಿಸಿ ಎಲ್ಲ ತರಗತಿಗಳು ಸ್ಥಗಿತ.
- ಧಾರ್ಮಿಕ ಸ್ಥಳಗಳಲ್ಲಿ ವೈಯಕ್ತಿಕ ಪ್ರಾರ್ಥನೆಗೆ ಅವಕಾಶ, ಗುಂಪಿನಲ್ಲಿ ಅವಕಾಶವಿಲ್ಲ.
- ಜಿಮ್, ಪಾರ್ಟಿ ಹಾಲ್ಗಳು, ಈಜು ಕೊಳಗಳು ಮುಚ್ಚಲ್ಪಟ್ಟಿರುತ್ತವೆ.
- ಯಾವುದೇ ಮುಷ್ಕರ, ಧರಣಿ, ರ್ಯಾಲಿಗಳು ನಿಷೇಧಿಸಲಾಗಿದೆ.
- ಸಾರ್ವಜನಿಕ ಸಾರಿಗೆಗಳಲ್ಲಿ ನಿಗದಿಪಡಿಸಿರುವ ಆಸನದ ವ್ಯವಸ್ಥೆ ಮೀರುವಂತಿಲ್ಲ.
- ಕಛೇರಿಗಳು ಹಾಗೂ ಇತರ ಕೆಲಸ ನಿರ್ವಹಿಸುವ ಸ್ಥಳಗಳಲ್ಲಿ ಸಾಧ್ಯವಾದಷ್ಟು ಮನೆಯಿಂದಲೇ ಕರ್ತವ್ಯ ನಿರ್ವಹಿಸಲು ಅಭ್ಯಾಸ/ ವ್ಯವಸ್ಥೆ ಪಾಲಿಸುವುದು.
ಸೇರಿದಂತೆ ಹಲವಾರು ಮಾರ್ಗಸೂಚಿಗಳನ್ನು ಸರ್ಕಾರ ಬಿಡುಗಡೆ ಮಾಡಿತ್ತು.
ಇದನ್ನೂ ಓದಿ: ಮೋದಿಯವರೇ ನನ್ನ ಕ್ಷೇತ್ರದ ಎಐಎಡಿಎಂಕೆ ಅಭ್ಯರ್ಥಿ ಪರ ಪ್ರಚಾರ ನಡೆಸಿ ಎಂದ ಡಿಎಂಕೆ ನಾಯಕರು; ಕಾರಣವೇನು ಗೊತ್ತೆ?
ಇದನ್ನೂ ಓದಿ: ಸಚಿವ ಬಿ.ಸಿ. ಪಾಟೀಲ್ಗೆ ಕೊರೊನಾ ಲಸಿಕೆ ನೀಡಿದ್ದ ವೈದ್ಯಾಧಿಕಾರಿ ಅಮಾನತು!
ಇದನ್ನೂ ಓದಿ: ತೆಲಂಗಾಣ: ಮಾವಿನ ಹಣ್ಣು ಕದ್ದರೆಂದು ಮಕ್ಕಳಿಗೆ ಸಗಣಿ ತಿನ್ನಿಸಿದ ಕಿಡಿಗೇಡಿಗಳು


