Homeಅಂಕಣಗಳುಗೌರಿ ಕಾರ್ನರ್: ಪ್ರಜಾತಂತ್ರಕ್ಕಾಗಿ ಬೀದಿಗಿಳಿದ ಧರ್ಮ

ಗೌರಿ ಕಾರ್ನರ್: ಪ್ರಜಾತಂತ್ರಕ್ಕಾಗಿ ಬೀದಿಗಿಳಿದ ಧರ್ಮ

- Advertisement -
- Advertisement -

ನೆರೆಯ ಮ್ಯಾನ್ಮಾರ್ (ಬರ್ಮಾ) ದೇಶದಲ್ಲಿ ಯಾವುದೇ ಅಧಿಕಾರದ ದಾಹವಿಲ್ಲದೆ, ಲಾಭ-ಲೋಭದ ಆಶಯವಿಲ್ಲದೆ, ಕಿಂಚಿತ್ತೂ ಸ್ವಾರ್ಥವಿಲ್ಲದೆ ಲಕ್ಷಾಂತರ ಬೌದ್ಧ ಬಿಕ್ಕುಗಳು ಜನಪರವಾಗಿ ಪ್ರತಿಭಟಿಸುತ್ತಿದ್ದಾರೆ. ತಮ್ಮ ದೇಶದ ಜನರ ಆರ್ಥಿಕ ಬಿಕ್ಕಟ್ಟಿಗೆ ಪ್ರಜಾತಂತ್ರದ ದಮನಕ್ಕೆ ಕಾರಣವಾಗಿರುವ ’ಜನವೈರಿ’ ಮಿಲಿಟರಿ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುವವರೆಗೂ ತಮ್ಮ ಹೋರಾಟವನ್ನು ಕೈಬಿಡುವುದಿಲ್ಲ ಎಂದು ಪಣ ತೊಟ್ಟಿದ್ದಾರೆ. ಅಷ್ಟೇ ಅಲ್ಲ, ಹೀಗೆ ಜನಪರವಾಗಿ ನಿಲ್ಲುವುದು ತಮ್ಮ ಧಾರ್ಮಿಕ ಕರ್ತವ್ಯ ಎಂದು ಭಾವಿಸಿದ್ದಾರೆ.

ನಮ್ಮ ದೇಶದಲ್ಲಿನ ರಾಮಭಕ್ತರಿಗೂ, ಮ್ಯಾನ್ಮಾರ್‌ನಲ್ಲಿರುವ ಬೌದ್ಧ ಧರ್ಮದ ಬಿಕ್ಕುಗಳಿಗೂ ಎಷ್ಟು ವ್ಯತ್ಯಾಸವಿದೆಯಲ್ಲವೇ? ಇಲ್ಲಿ ಸ್ವಾರ್ಥಕ್ಕಾಗಿ ರಾಮ, ಅಲ್ಲಿ ಜನರಿಗಾಗಿ ಧರ್ಮ. ಇದಕ್ಕೆ ಕಾರಣವಿದೆ. ಬಹಳಷ್ಟು ಧರ್ಮಗಳಲ್ಲಿ ಅನುಷ್ಠಾನದಲ್ಲಿದಿದ್ದರೂ ಆಶಯದಲ್ಲಾದರೂ ಮಾನವೀಯತೆಗೆ ಪ್ರಧಾನ ಸ್ಥಾನವಿದೆ. ಆದರೆ ’ಹಿಂದೂ’ ಎಂಬುದು ಒಂದು ಧರ್ಮವೇ ಅಲ್ಲದಿರುವುದರಿಂದ, ತಾರತಮ್ಯ ವ್ಯವಸ್ಥೆ ಅದಾಗಿರುವುದರಿಂದ ಅದರಿಂದ ಜನಪರವಾದ ನಿಲುವನ್ನಾಗಲಿ, ಮಾನವೀಯ ಕಾಳಜಿಯನ್ನಾಗಲೀ ನಿರೀಕ್ಷಿಸುವುದು ತಪ್ಪು.

ಜನರ ಹಿತಕ್ಕಾಗಿಯೇ ಧಾರ್ಮಿಕ ಗುರುಗಳು ಆಡಳಿತಾರೂಢ ಸರಕಾರಗಳ ವಿರುದ್ಧ ಪ್ರತಿಭಟನೆಗಿಳಿದಿರುವುದು ಇದೇ ಮೊದಲಲ್ಲ. ದಕ್ಷಿಣ ಆಫ್ರಿಕಾದಲ್ಲಿ ಧಾರ್ಮಿಕ ಗುರು ಡೆಸ್ಮೆಂಟ್ ಟುಟು, ಥೈಲ್ಯಾಂಡ್‌ನಲ್ಲಿ ಕಾರ್ಡಿನಲ್ ಸಿನ್, ದಕ್ಷಿಣ ಅಮೆರಿಕಾ ಖಂಡದಲ್ಲಿ ಹಲವಾರು ಹೋರಾಟಗಳಲ್ಲಿ ಫಾದರ್‌ಗಳು ಭಾಗವಹಿಸಿದ್ದಾರೆ. ಈಗ ಮ್ಯಾನ್ಮಾರ್‌ನ ಬೌದ್ಧ ಬಿಕ್ಕುಗಳ ಸರದಿಯಷ್ಟೇ. ಅಂದಹಾಗೆ ಅಲ್ಲಿ ಪ್ರಸ್ತುತ ಹೋರಾಟಕ್ಕೆ ಕಾರಣವಾಗಿದ್ದು ಯಾವ ಹೊಸ ಕಾನೂನೂ ಅಲ್ಲ. ಅಧಿಕಾರ ಹಿಡಿದಿರುವ ಸೈನ್ಯಾಧಿಕಾರಿಗಳ ಕೂಟದ ದೌರ್ಜನ್ಯವೂ ಅಲ್ಲ, ಬದಲಾಗಿ ಅಲ್ಲಿನ ಸರಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಹೆಚ್ಚಿಸಿದ್ದು ಮತ್ತು ಈ ಕ್ರಿಯೆಯಿಂದಾಗಿ ಬಸ್ ದರಗಳಿಂದ ಹಿಡಿದು ಎಲ್ಲಾ ಆಗತ್ಯವಸ್ತುಗಳ ಬೆಲೆಗಳು ಗಗನಕ್ಕೇರಿದ್ದು.

ಆಗಲೇ ಬಡತನದಲ್ಲಿ ಬೆಂದು ಬಸವಳಿದಿರುವ ಜನ ಈ ಬೆಲೆ ಏರಿಕೆಯಿಂದ ಕಂಗಾಲಾದರು. ಸೈನ್ಯಾಧಿಕಾರಿಗಳ ದಮನಕಾರಿ ಧೋರಣೆ ಗೊತ್ತಿದ್ದರೂ ಹಲವರು ಧೈರ್ಯ ಮಾಡಿ ಪ್ರತಿಭಟಿಸಿದರು. ಅವರೊಂದಿಗೆ ಕೆಲ ಬಿಕ್ಕುಗಳೂ ಕೈಜೋಡಿಸಿದರು. ಆದರೆ ಕಳೆದ 17 ವರ್ಷಗಳಿಂದ ಜನಸಾಮಾನ್ಯರು ತುಟಿಪಿಟಿಕ್ ಎನ್ನದಂತೆ ನೋಡಿಕೊಂಡಿರುವ ಸೈನ್ಯಾಧಿಕಾರಿಗಳಿಗೆ ಇದನ್ನು ಸಹಿಸಲಾಗಲಿಲ್ಲ. ಕೂಡಲೇ ಪ್ರತಿಭಟನಾಕಾರರನ್ನು ಮಟ್ಟ ಹಾಕಿದರಲ್ಲದೆ ಅವರೊಂದಿಗೆ ದನಿಗೂಡಿಸಿದ್ದ ಬಿಕ್ಕುಗಳನ್ನು ರಸ್ತೆ ಬದಿಯ ಕಂಬಗಳಿಗೆ ನಾಯಿಗಳನ್ನು ಕಟ್ಟಿಹಾಕುವಂತೆ ಬಿಗಿದು ಥಳಿಸಿದರು.

ಸೈನ್ಯದ ಈ ಕ್ರಮವನ್ನು ವಿರೋಧಿಸಲೆಂದು ಹಲವು ಬಿಕ್ಕುಗಳು ಕೆಲ ಸರಕಾರಿ ನೌಕರರನ್ನು ತಮ್ಮ ಮಠದಲ್ಲಿ ಬಂಧಿಸಿದರು; ಸರಕಾರ ಕ್ಷಮೆ ಕೇಳಿದರೆ ಮಾತ್ರ ಅವರನ್ನು ಬಿಡುಗಡೆಗೊಳಿಸುವುದಾಗಿ ಹೇಳಿದರು. ಬಿಕ್ಕುಗಳು ಸರಕಾರಕ್ಕೆ ನೀಡಿದ್ದ ಕಾಲಾವಧಿ ಅಂತ್ಯಗೊಂಡರೂ ಸರಕಾರ ಕ್ಷಮೆಯಾಚಿಸಲಿಲ್ಲ. ತಮ್ಮ ತೋಳ್ಪಲದ ಮುಂದೆ ಕೆಲ ಬಿಕ್ಕುಗಳದ್ದೇನೂ ನಡೆಯುವುದಿಲ್ಲ ಎಂಬ ಧೋರಣೆ ಅಧಿಕಾರದಲ್ಲಿರುವವರದಾಗಿತ್ತು. ಕೊನೆಗೆ ಅಪಹರಣಕ್ಕೊಳಗಾಗಿದ್ದವರನ್ನು ಬಿಕ್ಕುಗಳು ಬಿಡುಗಡೆ ಮಾಡಿದರು. ಆದರೆ ಜನಪರವಾದ ಹೋರಾಟವನ್ನು ಮುಂದುವರಿಸಬೇಕೆಂಬ ಅವರ ನಿರ್ಧಾರ ಇನ್ನೂ ಗಟ್ಟಿಯಾಗಿತ್ತು.

ಮಾರನೆ ದಿನದಿಂದ ನೂರಾರು, ಸಾವಿರಾರು ಬಿಕ್ಕುಗಳು ಬೀದಿಗಿಳಿದು ಪ್ರತಿಭಟಿಸಲಾರಂಭಿಸಿದ್ದಲ್ಲದೆ, ಸೈನ್ಯದಲ್ಲಿರುವವರಿಗೆ ಮತ್ತು ಅವರ ಕುಟುಂಬಗಳಿಗೆ ಧಾರ್ಮಿಕ ಸಂಸ್ಕಾರಗಳನ್ನು ನಿರಾಕರಿಸಿದರು. ಅವರೆಲ್ಲರಿಂದ ಭಿಕ್ಷೆಯನ್ನು ಸ್ವೀಕರಿಸುವುದಿಲ್ಲ ಎಂದು ಘೋಷಿಸಿದರು. ಬೌದ್ಧ ಧರ್ಮಿಯರೇ ಹೆಚ್ಚಿನ ಸಂಖ್ಯೆಯಲ್ಲಿರುವ ಮ್ಯಾನ್ಮಾರ್‌ನಲ್ಲಿ ಬಿಕ್ಕುಗಳಿಗೆ ಭಿಕ್ಷೆ ನೀಡುವುದು ಒಂದು ಶ್ರದ್ಧೆ ಮತ್ತು ದೈನಂದಿನ ಕರ್ತವ್ಯ. ಅಂತಹ ಸನ್ನಿವೇಶದಲ್ಲಿ ಸೈನ್ಯದಲ್ಲಿರುವವರಿಂದ ಭಿಕ್ಷೆ ಸ್ವೀಕರಿಸುವುದಿಲ್ಲ, ಅವರಿಗೆ ಧಾರ್ಮಿಕ ಸಂಸ್ಕಾರಗಳನ್ನು ನೀಡುವುದಿಲ್ಲ ಎಂದು ಹೇಳುವುದೆಂದರೆ ಅದು ಸಾಮಾಜಿಕ ಬಹಿಷ್ಕಾರಕ್ಕೆ ಸಮ.

ಈ ಸೂಕ್ಷ್ಮತೆಯನ್ನರಿತ ಜನಸಾಮಾನ್ಯರು ಬಿಕ್ಕುಗಳ ಹೋರಾಟದೊಂದಿಗೆ ಸ್ಪಂದಿಸಲಾರಂಭಿಸಿದರು. ಮೊದಮೊದಲು ಮೆರವಣಿಗೆಯಲ್ಲಿ ಸಾಗುತ್ತಿದ್ದ ಬಿಕ್ಕುಗಳ ಮೇಲೆ ಪೊಲೀಸರಾಗಲಿ, ಸೈನ್ಯದವರಾಗಲಿ ದಾಳಿ ನಡೆಸದಂತೆ ಮಾನವ ಸರಪಳಿಯನ್ನು ನಿರ್ಮಿಸಿದ ಜನರು ದಿನಗಳು ಕಳೆದಂತೆ ಅಪಾರ ಸಂಖ್ಯೆಯಲ್ಲಿ ಬಿಕ್ಕುಗಳ ಪ್ರತಿಭಟನೆಗಳಲ್ಲಿ ಭಾಗವಹಿಸಲಾರಂಭಿಸಿದರು.

ಆಂಗ್ ಸ್ಯಾನ್ ಸೂಕಿ

ಕಳೆದ ವಾರ ಬಿಕ್ಕುಗಳ ಹೋರಾಟಕ್ಕೆ ಒಂದು ರಾಜಕೀಯ ತಿರುವೂ ಸಿಕ್ಕಿತು. ಕಳೆದ ಎರಡು ದಶಕಗಳಿಂದ ಮ್ಯಾನ್ಮಾರ್‌ನಲ್ಲಿ ಪ್ರಜಾತಂತ್ರ ವ್ಯವಸ್ಥೆ ಬರಲೆಂದು ಹೋರಾಡುತ್ತಿರುವ, ಆದ್ದರಿಂದಲೇ 12 ವರ್ಷಗಳಿಂದ ಗೃಹಬಂಧನದಲ್ಲಿರುವ ಆಂಗ್ ಸ್ಯಾನ್ ಸೂಕಿಯವರ ಮನೆ ಮುಂದೆ ವಿಧಿಸಿರುವ ನಿರ್ಬಂಧಗಳನ್ನು ಮುರಿದು ಪ್ರತಿಭಟನಾನಿರತ ಹಲವರು ಮೆರವಣಿಗೆಯಲ್ಲಿ ಸಾಗಿದರು. ಅವರನ್ನು ಕಂಡು ಹೊರಬಂದ ಸೂಕಿಯವರು ಕೆಲಕ್ಷಣ ಗೇಟ್ ಹತ್ತಿರ ನಿಂತರು. ಬೌದ್ಧ ಧರ್ಮದ ವಾಕ್ಯಗಳನ್ನು ಪಠಿಸುತ್ತಾ ಸಾಗುತ್ತಿದ್ದ ಜನರನ್ನು ಕಂಡು ಸೂಕಿ ಕಣ್ಣೀರಿಟ್ಟರು.

ಆಕೆಯ ಕಣ್ಣೀರಿನಲ್ಲಿ ಮ್ಯಾನ್ಮಾರ್ ಜನರ ಸಂಕಷ್ಟಗಳು, ಹೋರಾಟದ ಛಲ. ಎಲ್ಲವೂ ಬೆರೆತಿದ್ದವು.
ಇವತ್ತು ಜಗತ್ತಿನಾದ್ಯಂತ ಎಲ್ಲಿ ಪ್ರಜಾತಾಂತ್ರಿಕವಾದಿಗಳ ಗಮನ ಮ್ಯಾನ್ಮಾರ್ ಮೇಲಿರುವಾಗ, ಆ ದೇಶದ ಸಾಕ್ಷಿಪ್ರಜ್ಞೆಯಂತಿರುವ ನಾಯಕಿ ಸೂಕಿ ಮಾತ್ರ ಇನ್ನೂ ಗೃಹಬಂಧನದಲ್ಲಿದ್ದಾರೆ. ಈಕೆಗೆ ನೊಬೆಲ್ ಶಾಂತಿ ಪ್ರಶಸ್ತಿ ದೊರಕಿದಾಗ ಅಪ್ಪ ಬರೆದಿದ್ದ ಲೇಖನವನ್ನು ಯಾರೂ ಮರೆತಿಲ್ಲ. ಆ ಲೇಖನಕ್ಕಿಂತಲೂ ಆಕೆಯ ವ್ಯಕ್ತಿತ್ವದ ಬಗ್ಗೆ, ಆಕೆಯ ಹೋರಾಟದ ಬಗ್ಗೆ ಹೇಳಲು ಹೆಚ್ಚೇನಿಲ್ಲ, ಆದರೂ ಹಲವು ಅಂಶಗಳನ್ನು ಇಲ್ಲಿ ದಾಖಲಿಸಬಹುದು.

ಸೂಕಿ ತನ್ನ ಲೇಖನವೊಂದನ್ನು ಪ್ರಾರಂಭಿಸುವುದು ಈ ಮಾತುಗಳೊಂದಿಗೆ; “ಅಧಿಕಾರಕ್ಕಿಂತಲೂ ಜನರನ್ನು ಭ್ರಷ್ಟಗೊಳಿಸುವುದು ಭೀತಿ”. ಈ ಮಾತುಗಳನ್ನು ಆಕೆ ಮ್ಯಾನ್ಮಾರ್‌ನ ಸರ್ವಾಧಿಕಾರಿಗಳನ್ನು ಉದ್ದೇಶಿಸಿ ಹೇಳಿದ್ದಾರಲ್ಲದೆ, ಜನರ ಬಗೆಗಿನ ಭೀತಿಯಿಂದಾಗಿಯೇ ಅವರು ಭ್ರಷ್ಟರಾಗಿದ್ದಾರೆ ಎಂದು ಸಾಬೀತುಪಡಿಸಿದ್ದಾರೆ. ಆಕೆಯ ಮಾತು ನೂರಕ್ಕೆ ನೂರು ನಿಜ. 1988ರಲ್ಲಿ ಸೂಕಿ ನೇತೃತ್ವದಲ್ಲಿ ಭುಗಿಲೆದ್ದ ಜನಪ್ರತಿಭಟನೆಗಳನ್ನು ತನ್ನ ಸೈನ್ಯದ ಬಲದಿಂದಲೇ ಹತ್ತಿಕ್ಕಿದ ಸರ್ಕಾರ ಆನಂತರ ಜನರ ಆಕ್ರೋಶಕ್ಕೆ ಎಷ್ಟು ಹೆದರಿತೆಂದರೆ ರಾಜಧಾನಿ ರಂಗೂನ್‌ನನ್ನೇ ತೊರದು ಅಲ್ಲಿಂದ ಮುನ್ನೂರು ಕಿಲೋಮೀಟರ್ ದೂರದಲ್ಲಿ ಹೊಸ ರಾಜಧಾನಿಯನ್ನೇ ನಿರ್ಮಿಸಿತು. ಬಂಜರು ಭೂಮಿಯಲ್ಲಿ ತಲೆಯೆತ್ತಿದ ಈ ನಗರಕ್ಕೆ ’ರಾಜಾಧಿರಾಜರ ಬೀಡು’ ಎಂಬ ಅರ್ಥ ಬರುವ ಹೆಸರನ್ನಿಟ್ಟಿತು.

ರಾಜಾಧಿರಾಜರ ಈ ಬೀಡಿನಲ್ಲಿ ಸೈನ್ಯಾಧಿಕಾರಿಗಳು ಮತ್ತವರ ಕುಟುಂಬಗಳು ಮಾತ್ರ ವಾಸಿಸುತ್ತಿದ್ದು ದೇಶದ ಸಾಮಾನ್ಯ ಜನರಿಗೆ ಲಭ್ಯವಿರದ ಸವಲತ್ತುಗಳು ಅವರೆಲ್ಲರಿಗೆ ಕೈಗೆಟುಕುವಂತೆ ಮಾಡಲಾಗಿದೆ. ವಿಶೇಷ ಶಾಲೆಗಳು ಮತ್ತು ಆಸ್ಪತ್ರೆಗಳನ್ನು ನಿರ್ಮಿಸಲಾಗಿದೆಯಲ್ಲದೆ ಟ್ರೇನ್ ಮತ್ತು ವಿಮಾನಗಳಲ್ಲಿ ಅವರಿಗೆಲ್ಲ ಮೊದಲು ಆದ್ಯತೆ ನೀಡಲಾಗುತ್ತದೆ. ಮನೆ ಬಾಡಿಗೆಯಿಂದ ಹಿಡಿದು ಪ್ರತಿಯೊಂದಕ್ಕೂ ಸಬ್ಸಿಡಿ ಪಡೆಯುವ ಸೈನ್ಯದ ಸದಸ್ಯರು ಮ್ಯಾನ್ಮಾರ್‌ನ ಇತರೆ ಜನರೊಂದಿಗೆ ಬೆರೆಯದೇ ಪ್ರತ್ಯೇಕ ಪ್ರದೇಶಗಳಲ್ಲಿ ವಾಸಿಸುತ್ತಾರೆ. ಹೀಗೆ ದೇಶದ ಎಲ್ಲಾ ಸವಲತ್ತುಗಳನ್ನು ತಮ್ಮದಾಗಿಸಿಕೊಳ್ಳುತ್ತಲೇ ಏಷ್ಯಾ ಖಂಡದ ಇತರ ದೇಶಗಳಿಗೆ ಹೋಲಿಸಿದರೆ ಸಾರ್ವಜನಿಕ ವಿದ್ಯೆ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಕನಿಷ್ಠ ವೆಚ್ಚವನ್ನು ಮಾಡಿರುವ ದಾಖಲೆ ಹೊಂದಿದ್ದಾರೆ ಅಲ್ಲಿನ ಸೈನ್ಯಾಧಿಕಾರಿಗಳು.

ಇದು ನಿನ್ನೆ ಮೊನ್ನೆಯ ಪರಿಸ್ಥಿತಿಯಲ್ಲ. ಬದಲಾಗಿ 1962ರಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಸೈನ್ಯಾಧಿಕಾರಿಗಳು ಖಾಸಗಿ ಆಸ್ತಿಗಳನ್ನು ಜಪ್ತಿ ಮಾಡಿ ಅವನ್ನೆಲ್ಲ ಸೈನ್ಯಾಧಿಕಾರಿಗಳು ನಡೆಸುವ ಸಂಸ್ಥೆಗಳಿಗೆ ನೀಡಿದರು. ಅವರ ಯಾವುದೇ ಕ್ರಮವನ್ನು ಟೀಕಿಸಿದವರ ಮೇಲೆ ಹೇಗೆ ಮುಗಿಬಿದ್ದರೆಂದರೆ ಅದೆಷ್ಟೋ ಬುದ್ಧಿಜೀವಿಗಳು ಮ್ಯಾನ್ಮಾರ್‌ಅನ್ನು ತೊರೆದು ಹೊರದೇಶಗಳಿಗೆ ವಲಸೆ ಹೋದರು. 1962ಕ್ಕಿಂತ ಮುನ್ನ ಆಗ್ನೇಯ ಏಷ್ಯಾದಲ್ಲೇ ಅತಿ ಉತ್ತಮ ಜೀವನ ಮಟ್ಟವನ್ನು, ಸಾಕ್ಷರತೆಯನ್ನು ಹೊಂದಿದ್ದ ಮ್ಯಾನ್ಮಾರ್ ಇವತ್ತು ಈ ಪ್ರದೇಶದಲ್ಲಿ ಅತಿ ಬಡತನವನ್ನು ಅನುಭವಿಸುತ್ತಿರುವ ದೇಶವಾಗಿ ಪರಿವರ್ತಿತವಾಗಿದೆ.

ಈ ಎಲ್ಲ ಬೆಳವಣಿಗೆಗಳ ನಡುವೆಯೂ ದಿಟ್ಟವಾಗಿ ನಿಂತಿರುವವರು ಸೂಕಿ. ಅಪ್ಪ ತನ್ನ ಲೇಖನದ ಅಂತ್ಯದಲ್ಲಿ ಹೇಳಿದ್ದಂತೆ “ದುರಂತಮಯ ಮನೋಹರ ಬರ್ಮಾ ದೇಶಕ್ಕೆ ಈಗ ಉಳಿದಿರುವುದು ಸೂಕಿಯ ಅನರ್ಘ್ಯ ವ್ಯಕ್ತಿಚಾರಿತ್ರ್ಯ ಮತ್ತು ಅಲೌಕಿಕ ಸೌಂದರ್ಯ ಮಾತ್ರ. ಆ ಮಾತು ಇವತ್ತಿಗೂ ಅನ್ವಯಿಸುತ್ತದೆ.

ಸೂಕಿ ತಮ್ಮ ಇನ್ನೊಂದು ಬರಹದಲ್ಲಿ ಹೀಗೆ ಹೇಳಿದ್ದಾರೆ: “ಇತಿಹಾಸ ಮುಖ್ಯ. ಆದರೆ ನೀವು ಯಾವ ಪರಂಪರೆಗೆ ಸೇರಿದವರು ಎಂದು ಆಯ್ಕೆ ಮಾಡುವಲ್ಲೇ ನಿಮ್ಮ ಇತಿಹಾಸವೂ ನಿರ್ಧರಿತವಾಗುತ್ತದೆ”. ಇವತ್ತು ಮಾನ್ಮಾರ್‌ನ ಬಿಕ್ಕುಗಳು, ಮತ್ತವರ ಜೊತೆ ನಿಂತಿರುವ ಸಾರ್ವಜನಿಕರು ತಮ್ಮ ಪರಂಪರೆಯ ಆಯ್ಕೆ ಮಾಡಿಕೊಳ್ಳುವ ಮೂಲಕ ತಮ್ಮ ದೇಶದ ಇತಿಹಾಸವನ್ನೇ ಬದಲಿಸಲು ಹೋರಾಟ ನಡೆಸುತ್ತಿದ್ದಾರೆ.

ಎಲ್ಲಾ ಪ್ರಜ್ಞಾವಂತರ ಬೆಂಬಲ ಅವರಿಗಿರಲಿ ಎಂಬ ಆಶಯ ನಮ್ಮದು….

(ಅಕ್ಟೋಬರ್ 10, 2007ರಂದು ಗೌರಿಯವರು ಬರೆದ ಕಂಡಹಾಗೆ ಅಂಕಣದ ಸಂಗ್ರಹ ಭಾಗ ಇದು)


ಇದನ್ನೂ ಓದಿ: ಗೌರಿ ಕಾರ್ನರ್: ಜಾಗತಿಕ ತಾಪಮಾನ ಏರಿಕೆಗೆ ಮನುಷ್ಯನ ಪ್ರತಿಕ್ರಿಯೆ; ನಿಧಾನಕ್ಕೆ ಕುದಿಯುತ್ತಿರುವ ಬಿಸಿ ನೀರಿನೊಳಗಿನ ಕಪ್ಪೆಯಂತೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...