Homeಮುಖಪುಟಸಂಭಾಷಣೆಯ ಚಾಟಿ, ವಾಸ್ತವ ಮೆಲೋಡ್ರಾಮದ ಧಾಟಿ; ಕೆ.ವಿ.ರಾಜು ಗರಿಮೆ

ಸಂಭಾಷಣೆಯ ಚಾಟಿ, ವಾಸ್ತವ ಮೆಲೋಡ್ರಾಮದ ಧಾಟಿ; ಕೆ.ವಿ.ರಾಜು ಗರಿಮೆ

- Advertisement -
- Advertisement -

‘ನಾನು ಹುಟ್ಟಿದ್ದು ಸತ್ಯ ಸತ್ತು ಕೊಳೆತು ನಾರುತ್ತಿರೋ ಈ ಇಪ್ಪತ್ತನೇ ಶತಮಾನದಲ್ಲಿ… ಗಲ್ಲಿಗಲ್ಲಿಗಳಲ್ಲಿ ಸೂರ್ಯನ ಬೆಳಕಿಗೆ ಫಳಫಳನೇ ಹೊಳಿತಿರೋ ಚಾಕು, ಚೂರಿ, ಮಚ್ಚು, ಪಿಸ್ತೂಲುಗಳ ಮಧ್ಯೆ…’

‘ಧರ್ಮದ ಹೆಸರಲ್ಲಿ ನೀವಿಟ್ಟಿರೋ ಕುಂಕುಮ ನಿಮ್ಮದಲ್ವೋ! ನೀವಿಟ್ಟ ದಿನದಿಂದ ನಮಗೆ ಈ ಸೌಭಾಗ್ಯ ಸಿಗಲಿಲ್ಲ..’

‘ಉಚ್ಚಿ ಹುಯ್ಯೋ ಹುಡುಗರಾಂಗ ಮಾತಾಡಿದ್ರ ಕಚ್ಚಿ ಹರ್ದು ಚಲ್ಲಾಡ್ತಾನಾಂವ… ಅವುನ್ ತಲಿ ಜ್ವತ ಅವುನ್ ತಲಿಮಾರ ನಾಶ ಆಗ್ಬೇಕಾ…ಆಗ ಈ ಅರಮನಿ ಉಳಿತಾದ..!

‘ಸಮಾಜದ ಹಿತಕ್ಕೋಸ್ಕರನೇ ಕಾನೂನು ಸೃಷ್ಟಿ ಆಗಿರೋದು ಅಂದ್ಮೇಲೆ ಸಮಾಜಕ್ಕೆ ಸರಿ ಅನ್ಸಿದ್ದು ಕಾನೂನಿನ ದೃಷ್ಟೀಲಿ ಹ್ಯಾಗೆ ಸಾರ್ ತಪ್ಪಾಗುತ್ತೆ?’

90ರ ದಶಕದ ಆರಂಭದಲ್ಲಿ ಇಂತಹ ಸಿನಿಮಾ ಸಂಭಾಷಣೆಗಳ ಮೂಲಕ ಚಾಲ್ತಿಗೆ ಬಂದವರು ಕೆ.ವಿ.ರಾಜು. ತಮ್ಮ ಸಿನಿಮಾಗಳ ಮೂಲಶಕ್ತಿ ಪ್ರೇಕ್ಷಕರನ್ನು ಬಡಿದೆಬ್ಬಿಸುವ ಚಾಟಿ ಏಟಿನಂತಹ ಸಂಭಾಷಣೆಗಳಲ್ಲಿದೆ ಎಂಬುದನ್ನು ರಾಜು ನಂಬಿದಂತಿತ್ತು.

ಕೆ.ವಿ.ರಾಜು ಅವರಿಗೆ 2017ರಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಬಿ.ಆರ್.ಪಂತುಲು ಪ್ರಶಸ್ತಿಯನ್ನು ಘೋಷಿಸಿದಾಗ ಅದನ್ನು ನಿರಾಕರಿಸಿ ರಾಜು ಅವರು ಅಕಾಡೆಮಿಗೆ ಬರೆದ ಪತ್ರದಲ್ಲಿ ಒಂದು ಮಾತು ಹೀಗಿತ್ತು: ‘ನನ್ನ ಸಿನಿಮಾ ಪ್ರಯಾಣದ ಗುರಿ ಜನಮನರಂಜನೆಯೇ ಹೊರತು ಪ್ರಶಸ್ತಿಗಳಲ್ಲ. ಮನರಂಜಿಸಲು ಸಂಬಳ ಪಡೆದಿರುವುದರಿಂದ ಪ್ರಶಸ್ತಿಗೆ ಅರ್ಹನಲ್ಲ..’ (ಒಂದೆರಡು ತಿಂಗಳ ನಂತರ ಸರ್ಕಾರ ನೀಡಿದ ಪುಟ್ಟಣ್ಣ ಕಣಗಾಲ್ ಪ್ರಶಸ್ತಿಯನ್ನು ಅವರು ಮರುಮಾತಿಲ್ಲದೆ ಸ್ವೀಕರಿಸಿದ್ದು ಅನೇಕರ ಅಚ್ಚರಿಗೆ ಕಾರಣವಾಗಿತ್ತು; ಅದು ಬೇರೆ ಮಾತು). ರಾಜು ತಮ್ಮ ಸಿನಿಮಾಗಳಿಗೆ ಆಯ್ದುಕೊಂಡ ಕತೆಗಳಿಗೂ ಈ ಮಾತುಗಳಿಗೂ ಸಂಬಂಧವಿದ್ದಂತಿದೆ.

ತಮ್ಮ ಸಹೋದರ ಕೆ.ವಿ.ಜಯರಾಂ ಗರಡಿಯಲ್ಲಿ ಸಿನಿಮಾ ಕಸುಬು ಕಲಿತ ರಾಜು, ಜಯರಾಂ ಅವರ ಸಿನಿಮಾಗಳ ದಾಂಪತ್ಯ, ಪ್ರೇಮಕಲಹ, ಸ್ತ್ರೀವಾದಿ ನೆಲೆಗಳ ಕಥನಗಳಿಗಿಂತ ಭಿನ್ನ ಹಾದಿಯನ್ನು ಆಯ್ದುಕೊಂಡರು. ಸಮಾಜದ ಅಸಮಾನತೆ, ಭ್ರಷ್ಟ ರಾಜಕಾರಣ, ಜನಸಾಮಾನ್ಯರ ಅಸಹಾಯಕತೆ-ಇಂತಹ ಸಾಮಾನ್ಯ ವಸ್ತುಗಳಿಗೆ ತಮ್ಮದೇ ವಿಭಿನ್ನ ಶೈಲಿಯ treatment ನೀಡಿ ಪ್ರೇಕ್ಷಕರ ಮನ ಗೆದ್ದವರು ರಾಜು.

‘ಸಂಗ್ರಾಮ’ದಂತಹ ಸಾಮಾನ್ಯ ರೀಮೇಕ್ ಮೂಲಕ ನಿರ್ದೇಶನಕ್ಕಿಳಿದ ರಾಜು, ಗುರುತಿಸಿಕೊಂಡಿದ್ದು ‘ಇಂದ್ರಜಿತ್’ ಚಿತ್ರದ ಮೂಲಕ. ಏಕತಾನತೆಯ ರೆಬೆಲ್ ಪಾತ್ರವಾಗಿದ್ದರೂ ಅಂಬರೀಶ್‌ ಅವರಿಗೆ ಬೇರೆ ಇಮೇಜ್ ಕೊಟ್ಟ, ಖಳನಾಯಕರಾಗಿ ಗುರುತಿಸಿಕೊಂಡಿದ್ದ ದೇವರಾಜ್ ಅವರಿಗೆ ವಿಶೇಷ ಪಾತ್ರ ನೀಡಿದ ‘ಇಂದ್ರಜಿತ್’ ಗೆದ್ದಿದ್ದೇ ಅದರ ಖಡಕ್ ಸಂಭಾಷಣೆಗಳ ಮೂಲಕ. ‘ನವಭಾರತ’, ‘ಕದನ’, ‘ಯುದ್ಧ’, ‘ಪೊಲೀಸ್ ಲಾಕಪ್’, ‘ಸುಂದರ ಕಾಂಡ’, ‘ಯುದ್ಧಕಾಂಡ’, ‘ಹುಲಿಯಾ’ ಚಿತ್ರಗಳ ಸಂಭಾಷಣೆಗಳನ್ನೂ ಇಲ್ಲಿ ಗಮನಿಸಬಹುದು.

ಅಂದಿನ ದಿನಗಳ ಕಮರ್ಷಿಯಲ್ ಸಿನಿಮಾ ಸಂಭಾಷಣೆಗಳ ಏಕತಾನತೆಯನ್ನು ಮುರಿದು, ಅವುಗಳಿಗೆ ಹೊಸ ಹೊಳಪು ಕೊಟ್ಟವರಲ್ಲಿ ರಾಜು ಪ್ರಮುಖರು. ಜನಪ್ರಿಯ ಸಿನಿಮಾಗಳಿಗೆ ಬೇಕಾದ ಬಿಗಿ ಚಿತ್ರಕಥೆ, ಕ್ಷಿಪ್ರ ನಿರೂಪಣೆ, ಚುರುಕು ಸಂಕಲನವನ್ನು ಸಮರ್ಥವಾಗಿ ದುಡಿಸಿಕೊಂಡ ರಾಜು, extreme closeup shotಗಳನ್ನು , moving shotಗಳನ್ನು ಪಾತ್ರಗಳ ಸಂಭಾಷಣೆಯ ಸಂದರ್ಭಗಳಲ್ಲಿ ಆಕರ್ಷಕವಾಗಿ ಅಳವಡಿಸಿದರು. ಅವರೊಂದು ರೀತಿಯಲ್ಲಿ extreme closeup shotಗಳ ಕಡುಮೋಹಿ. ರಾಜು ಅವರ ಈ ಜನಪ್ರಿಯತೆ ಅವರಿಗೆ ಹಿಂದಿ ಚಿತ್ರರಂಗದಲ್ಲಿಯೂ ಅವಕಾಶ ಕಲ್ಪಿಸಿತು. ಮೇರುನಟ ಅಮಿತಾಭ್ ನಾಯಕನಟರಾಗಿದ್ದ ‘ಇಂದ್ರಜಿತ್’ ಚಿತ್ರವನ್ನು ರಾಜು ನಿರ್ದೇಶಿಸಿದರು(ಇದು ಅವರದೇ ನಿರ್ದೇಶನದ ‘ಬಂಧಮುಕ್ತ’ ಸಿನಿಮಾದ ರೀಮೇಕ್).

‘ಸಂಗ್ರಾಮ’, ‘ಕದನ’, ‘ಯುದ್ಧ’, ‘ಯುದ್ಧಕಾಂಡ’, ‘ನವಭಾರತ’, ‘ರಾಷ್ಟ್ರಗೀತೆ’-ಈ ಶೀರ್ಷಿಕೆಗಳನ್ನು ಗಮನಿಸಿದರೆ ರಾಜು ಅವರ ಕಥಾವಸ್ತುಗಳ ಒಲವು ಅರ್ಥವಾಗುತ್ತದೆ. ಸ್ವಾತಂತ್ರ್ಯೋತ್ತರ ಭಾರತದ ಭ್ರಷ್ಟ ವ್ಯವಸ್ಥೆಯನ್ನು ಕಟು ವಾಸ್ತವ, ಸಂಘರ್ಷಗಳ ಮೆಲೋಡ್ರಾಮದ ಮೂಲಕ ತೋರಿಸಿದ ರಾಜು, ಅದಕ್ಕಾಗಿ ಜಡಸಮಾಜವನ್ನು ಎಚ್ಚರಿಸುವಂತಹ ಚುಚ್ಚುಮಾತುಗಳನ್ನು ಬಳಸಿದರು. ಕೆಲವೊಮ್ಮೆ ಇದು ‘ದೇಶಕ್ಕೆ ಮಕ್ಕಳು ಬೇಕು; ಆದರೆ ನಿಮ್ಮಂಥ ಸೂಳೆಮಕ್ಕಳಲ್ಲ!’ ಎಂಬಂತಹ ಅಗ್ಗದ ಮಟ್ಟಕ್ಕೂ ಇಳಿದದ್ದಿದೆ. ಆದರೆ ‘ಚಕ್ರವ್ಯೂಹ’, ‘ಗಜೇಂದ್ರ’ ಮಾದರಿಯ activism ಅನ್ನು ರಾಜು ಅವರ ಸಿನಿಮಾಗಳು ಬೇರೊಂದು ರೀತಿಯಲ್ಲಿ ವಿಸ್ತರಿಸಿದವು. ಉದಾಹರಣೆಗೆ ‘ರಾಷ್ಟ್ರಗೀತೆ’ ಚಿತ್ರದ ಆರಂಭದಲ್ಲಿ ರಾಜಕಾರಣಿಯೊಬ್ಬ ಹಾರಿಸಬೇಕಿದ್ದ ರಾಷ್ಟ್ರಧ್ವಜವನ್ನು ‘ಭಾರತಿ’ ಎಂಬ ಹೆಸರಿನ ಶಿಕ್ಷಕಿಯೊಬ್ಬಳು ಅಪಹರಿಸಿ ಸುಟ್ಟುಹಾಕಲು ಹೊರಡುವ ದೃಶ್ಯವೊಂದಿದೆ. ಸ್ವಾತಂತ್ರ್ಯ, ದೇಶಪ್ರೇಮಗಳನ್ನು ರಾಜು ಸಿನಿಮಾಗಳು ಕಟುವಾಸ್ತವ, ವ್ಯಂಗ್ಯದೊಂದಿಗೆ ಮುಖಾಮುಖಿಯಾಗುತ್ತವೆ; ಅವರ ಯಾವೊಂದು ಸಿನಿಮಾದಲ್ಲೂ ಅನವಶ್ಯಕವಾದ ಹಾಸ್ಯಪಾತ್ರಗಳು ಒಂದೂ ಇಲ್ಲ ಎಂಬುದನ್ನು ಗಮನಿಸಬಹುದು.

ತಮ್ಮ ಈ ಶೈಲಿಗೆ ಒಗ್ಗದ ‘ಬೊಂಬಾಟ್ ಹುಡ್ಗ’ ಎಂಬ ಕೆಟ್ಟ ಚಿತ್ರಕ್ಕೆ ಕೈ ಹಾಕಿ ರಾಜು ಸೋತಿದ್ದಾರೆ. ಆದರೆ ರೀಮೇಕ್ ಸಿನಿಮಾಗಳನ್ನೂ ಮೆಚ್ಚುವಂತೆ ರಾಜು ಮರುನಿರೂಪಿಸಿ ‘ಯುದ್ಧಕಾಂಡ’ (ಹಿಂದಿಯ ‘ಮೇರಿ ಜಂಗ್’), ‘ಬೆಳ್ಳಿ ಮೋಡಗಳು’ (ತೆಲುಗಿನ ‘ಸೀತರಾಮಯ್ಯಗಾರಿ ಮನವರಾಲು’) ಗೆದ್ದಿದ್ದಾರೆ.

1996ರಲ್ಲಿ ತೆರೆಕಂಡ ‘ಹುಲಿಯಾ’ ಕೆ.ವಿ.ರಾಜು ಅವರ ಶೈಲಿಯನ್ನು ಹೆಚ್ಚು ತಿದ್ದಿದ ಚಿತ್ರ. ಶೋಷಣೆ, ಕ್ರೌರ್ಯ, ಭ್ರಷ್ಟತೆಯ ತಮ್ಮ ಎಂದಿನ ವಸ್ತುವಿಗೆ ಹೊಸ ಸ್ಪರ್ಶ ಕೊಟ್ಟ ರಾಜು ತಮ್ಮೆಲ್ಲ ಸೃಜನಶೀಲತೆಯನ್ನು ‘ಹುಲಿಯಾ’ಗಾಗಿ ಧಾರೆ ಎರೆದರು. ಬರಗಾಲದಲ್ಲಿ ನಲುಗುವ ಹಳ್ಳಿಯೊಂದರ ಹಾಹಾಕಾರ, ಪಾಳೇಗಾರಿ ಶಕ್ತಿಗಳ ಧೂರ್ತತನ, ಕ್ರೂರ ವ್ಯವಸ್ಥೆಯ ಪಿತೂರಿಯಿಂದಾಗಿ ‘ಬಲವಂತದ ಗುಳೆ’ ಹೊರಟುಬಂದು ನಾಶವಾಗುವ ಅಮಾಯಕರ ದುರಂತವನ್ನು ‘ಹುಲಿಯಾ’ ಸಶಕ್ತವಾಗಿ ಚಿತ್ರಿಸುತ್ತದೆ. ದೇವರಾಜ್ ಅವರ ನಟನಾಪ್ರತಿಭೆಯನ್ನು ತೆರೆದಿಟ್ಟ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ನೆಲಕಚ್ಚಿತು.

ತಮ್ಮ ಜಾಯಮಾನದ್ದೇ ಅಲ್ಲದ ವಸ್ತುವಿನ ‘ಓ ಗಂಡಸರೇ ನೀವೆಷ್ಟು ಒಳ್ಳೆಯವರು?’ ಸಿನಿಮಾವನ್ನೂ ಕೂಡ ರಾಜು ಪರಿಣಾಮಕಾರಿಯಾಗಿ ನಿಭಾಯಿಸಿದರೂ ಸಿನಿಮಾ ಯಶಸ್ಸು ಕಾಣಲಿಲ್ಲ. ಸಂಗೀತ-ಹಾಡುಗಳಿಂದಾಗಿ ಜನಪ್ರಿಯವಾದರೂ ‘ಬೆಳ್ಳಿ ಕಾಲುಂಗುರ’ ಪೇಲವ ಕತೆಯ ಮೂಲಕ ಸೋತಿತು. ಕುತೂಹಲಕಾರಿ ಹಂದರವಿದ್ದರೂ ‘ನಂ.1’, ‘ನಿಜ’ ಚಿತ್ರಗಳು ಹೆಚ್ಚೇನೂ ಗೆಲುವು ಕಾಣಲಿಲ್ಲ. ಮಲಯಾಳಂ, ತೆಲುಗು, ಹಿಂದಿ ಭಾಷೆಗಳನ್ನು ಬಳಸಿ ಕನ್ನಡಕ್ಕೆ ಬಂದ ‘ಪಾಂಡವರು'(2006) ಎಂಬ ಸಿನಿಮಾ ರಾಜು ಅವರ ದಣಿವನ್ನು ತೋರಿಸುತ್ತದೆ. ಕೆಲವಾದರೂ ಒಳ್ಳೆಯ ಚಿತ್ರಗಳನ್ನು ಕನ್ನಡಕ್ಕೆ ಕೊಟ್ಟ ಕೆ.ವಿ.ರಾಜು ಅವರ ಕ್ರಿಯಾಶೀಲತೆ ಇತ್ತೀಚಿನ ದಿನಗಳಲ್ಲಿ ಅವರ ಬಳಿಯೇ ಸಹಾಯಕರಾಗಿದ್ದವರ ಕಳಪೆ ಸಿನಿಮಾಗಳಿಗೆ ಚಿತ್ರಕಥೆ, ಸಂಭಾಷಣೆ ಬರೆಯುವುದಕ್ಕೆ ವ್ಯಯವಾಗಿದ್ದುಂಟು.

(‘ತೆರೆಯ ಹಿಂದೆ ಸರಿದರೆ ಸೃಜನಶೀಲರು?’ ಅಂಕಣ ಸರಣಿಯಲ್ಲಿ ಕಥೆಗಾರ ಮಂಜುನಾಥ್ ಲತಾ ಅವರು ಹಿಂದೊಮ್ಮೆ ಬರೆದಿದ್ದ ಲೇಖನದ ಪರಿಷ್ಕೃತ ರೂಪ)

  • ಮಂಜುನಾಥ್ ಲತಾ
’ಮಂಜುನಾಥ್ ಲತಾ’ ಅವರು ಹಿರಿಯ ಪತ್ರಕರ್ತರು. ತೆಂಕಲಕೇರಿ, ಕತೆ ಎಂಬ ಇರಿವ ಅಲಗು (ಕಥಾ ಸಂಕಲನಗಳು), ಪರದೇಸಿ ಮಗನ ಪದವು, ಆಹಾ ಅನಿಮಿಷ ಕಾಲ, ಸೋಜಿಗದ ಸೂಜಿ (ಕವನ ಸಂಕಲನಗಳು), ಪಲ್ಲಂಗ (ಕಾದಂಬರಿ), ಮಾತಿನ ಓದು (ಲೇಖನಗಳ ಸಂಗ್ರಹ) ಅವರ ಪ್ರಕಟಿತ ಕೃತಿಗಳು. ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಯಲ್ಲಿ ಅವರ ಕಥೆಗಳು ನಾಲ್ಕುಬಾರಿ ಬಹುಮಾನ ಗಳಿಸಿವೆ.

ಇದನ್ನೂ ಓದಿರಿ: ಚಲನಚಿತ್ರ ನಿರ್ದೇಶಕ ಕೆ.ವಿ.ರಾಜು ನಿಧನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಗಳ ವಿಚ್ಛೇದನ: ಸಿಹಿ ಹಂಚಿ, ಮೆರವಣಿಗೆಯಲ್ಲಿ ಆಕೆಯನ್ನು ಮನೆಗೆ ಕರೆತಂದ ನೀವೃತ್ತ ನ್ಯಾಯಾದೀಶ ಮತ್ತು ಕುಟುಂಬ

ಮೀರತ್: ಕೌಟುಂಬಿಕ ನ್ಯಾಯಾಲಯದಲ್ಲಿ ಮಗಳ ವಿಚ್ಛೇದನ ಅಂತಿಮವಾದ ನಂತರ ಆಕೆಯನ್ನು ಡೋಲು, ನೃತ್ಯಗಳ ಮೆರವಣಿಗೆಯಲ್ಲಿ ಸಂಭ್ರಮದಿಂದ ತಂದೆ ಮನೆಗೆ ಕರೆತಂದ ಘಟನೆ ಮೀರನ್ ನಲ್ಲಿ ನಡೆದಿದೆ.  ಪೋಷಕರ ಬೆಂಬಲದ ಅಪರೂಪದ ಮತ್ತು ಹೃದಯಸ್ಪರ್ಶಿ ಪ್ರದರ್ಶನದಲ್ಲಿ,...

“ನೀನು ನಿಜವಾಗಿಯೂ ಅಂಬೇಡ್ಕರ್ ಮಗಳಾ ಎಂದು ತಿಳಿಯಲು ನಾವು ನಿನ್ನ ಡಿಎನ್‌ಎ ಟೆಸ್ಟ್ ಮಾಡುತ್ತೇವೆ” ದೆಹಲಿ ಸಭೆಯಲ್ಲಿ ದಲಿತ ಟ್ರಾನ್ಸ್ ಹೋರಾಟಗಾರ್ತಿ ಗ್ರೇಸ್ ಬಾನುಗೆ ಜಾತಿ ನಿಂದನೆ ಆರೋಪ

ಕೇಂದ್ರ ಸರ್ಕಾರದ ವಿವಾದಾತ್ಮಕ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಕಾಯ್ದೆ, 2026ರ ವಿರುದ್ಧ ಕಳೆದ ಕೆಲ ವಾರಗಳಿಂದ ಇಡೀ ಟ್ರಾನ್ಸ್‌ಜೆಂಡರ್ ಮತ್ತು ಪ್ರಗತಿಪರ ಸಮುದಾಯ ಪ್ರತಿಭಟನೆ ನಡೆಸುತ್ತಿದೆ. ಈ ನಡುವೆ ಶುಕ್ರವಾರ...

‘ಮೋದಿ ಕ್ರಿಶ್ಚಿಯನ್ ಸಂಸ್ಥೆಗಳಲ್ಲಿ ಭಯ ಹುಟ್ಟಿಸಲು ಪ್ರಯತ್ನಿಸುತ್ತಿದ್ದಾರೆ’: ಎಫ್‌ಸಿಆರ್‌ಎ ತಿದ್ದುಪಡಿ ಕುರಿತು ಮಲ್ಲಿಕಾರ್ಜುನ ಖರ್ಗೆ

ಇಡುಕ್ಕಿ (ಕೇರಳ): ಸಾರ್ವಜನಿಕ ಮತ್ತು ಸಾಮಾಜಿಕ ಕಲ್ಯಾಣ ಕ್ಷೇತ್ರದಲ್ಲಿ ಕೆಲಸ ಮಾಡುವ ಕ್ರಿಶ್ಚಿಯನ್ ಸಂಸ್ಥೆಗಳು, ಎನ್‌ಜಿಒಗಳು ಮತ್ತು ನಾಗರಿಕ ಸಮಾಜದ ಮೇಲೆ ದಾಳಿ ಮಾಡಲು ಪ್ರಧಾನಿ ನರೇಂದ್ರ ಮೋದಿ ಎಫ್‌ಸಿಆರ್‌ಎ (ವಿದೇಶಿ ದೇಣಿಗೆ...

ವೈದ್ಯಕೀಯ, ತಾಂತ್ರಿಕ ಶಿಕ್ಷಣದಲ್ಲಿ ಎಸ್‌ಸಿ/ಎಸ್‌ಟಿ ಮೀಸಲಾತಿ ಹೆಚ್ಚಿಸಿದ ಒಡಿಶಾ ಸರ್ಕಾರ, ಒಬಿಸಿ ವಿದ್ಯಾರ್ಥಿಗಳಿಗೆ ಹೊಸ ಕೋಟಾ

ಮಹತ್ವದ ನಿರ್ಧಾರ ಕೈಗೊಂಡಿರುವ ಒಡಿಶಾ ಸರ್ಕಾರ, ವೈದ್ಯಕೀಯ, ಇಂಜಿನಿಯರಿಂಗ್ ಮತ್ತು ಇತರ ತಾಂತ್ರಿಕ ಹಾಗೂ ವೃತ್ತಿಪರ ಶಿಕ್ಷಣ ಕೋರ್ಸ್‌ಗಳಲ್ಲಿ ಪರಿಶಿಷ್ಟ ಪಂಗಡ (ಎಸ್‌ಟಿ), ಪರಿಶಿಷ್ಟ ಜಾತಿ (ಎಸ್‌ಸಿ) ಅಭ್ಯರ್ಥಿಗಳಿಗೆ ಮೀಸಲಾತಿಯನ್ನು ಗಣನೀಯವಾಗಿ ಹೆಚ್ಚಿಸಿದೆ....

ಶಾಲಾ ವಾರ್ಷಿಕೋತ್ಸವದಲ್ಲಿ ಲವಲವಿಕೆಯಿಂದ ಭಾಗವಹಿಸಿದ್ದ 6 ಮಕ್ಕಳು, ತಡರಾತ್ರಿ ಹೊತ್ತಿಗೆ ಶವವಾದರು : ಮಹಾರಾಷ್ಟ್ರದಲ್ಲೊಂದು ಹೃದಯ ವಿದ್ರಾವಕ ಘಟನೆ

ಶಾಲಾ ವಾರ್ಷಿಕೋತ್ಸವದಲ್ಲಿ ಬಹಳ ಉತ್ಸಾಹದಿಂದ ಭಾಗವಹಿಸಿದ್ದ ಆರು ಮಂದಿ ಮಕ್ಕಳು, ತಡ ರಾತ್ರಿ ಹೊತ್ತಿಗೆ ಶವವಾದ ಹೃದಯ ವಿದ್ರಾವಕ ಘಟನೆಯೊಂದು ಮಹಾರಾಷ್ಟ್ರದ ದಿಂಡೋರಿಯಲ್ಲಿ ಶುಕ್ರವಾರ (ಏ.3) ನಡೆದಿದೆ. ನಾಸಿಕ್‌ ನಗರದಿಂದ 20 ಕಿಲೋ...

ಕೇರಳ: ಕೊಲ್ಲಂನಲ್ಲಿ ಟಿವಿ ಚಾನೆಲ್ ಕಚೇರಿ ಮೇಲೆ ಸ್ಫೋಟಕ ವಸ್ತು ಎಸೆತ

ಕೊಲ್ಲಂ: ಇಲ್ಲಿನ ಟಿವಿ ಚಾನೆಲ್ ಒಂದರ ಕಚೇರಿಯ ಮೇಲೆ ಭಾನುವಾರ ಬೆಳಿಗ್ಗೆ ಸ್ಫೋಟಕ ವಸ್ತು ಎಸೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಆ ಪ್ರದೇಶ ಮತ್ತು ಚಾನೆಲ್ ಕಚೇರಿಯ ಸಿಸಿಟಿವಿ ದೃಶ್ಯಗಳಲ್ಲಿ ಇಬ್ಬರು...

ಹತ್ಯೆಯಾದ ಇರಾನ್ ಕಮಾಂಡರ್ ಖಾಸಿಮ್ ಸುಲೈಮಾನಿ ಅವರ ಸೊಸೆ, ಮೊಮ್ಮಗಳನ್ನು ಬಂಧಿಸಿದ ಅಮೆರಿಕ

ನವದೆಹಲಿ: ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಶುಕ್ರವಾರ ತಮ್ಮ ಶಾಶ್ವತ ನಿವಾಸಿ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ನ ದಿವಂಗತ ನಾಯಕ ಖಾಸಿಮ್ ಸೊಲೈಮಾನಿ ಅವರ...

ಇರಾನ್ ಮೇಲೆ ಬೃಹತ್ ದಾಳಿ: ಹಲವು ಉನ್ನತ ನಾಯಕರನ್ನು ಕೊಲ್ಲಲಾಗಿದೆ ಎಂದು ವಿಡಿಯೋ ಹಂಚಿಕೊಂಡ ಟ್ರಂಪ್

ಟೆಹ್ರಾನ್ ಮೇಲೆ ನಡೆದ ದಾಳಿಯ ವೀಡಿಯೊವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಂಚಿಕೊಂಡಿದ್ದು, ಹಲವಾರು ಇರಾನ್ ಮಿಲಿಟರಿ ನಾಯಕರ ಸಾವಿಗೆ ಅದು ಕಾರಣ ಎಂದು ಹೇಳಿಕೊಂಡಿದ್ದಾರೆ. "ಟೆಹ್ರಾನ್‌ನಲ್ಲಿ ನಡೆದ ಈ ಬೃಹತ್ ದಾಳಿಯೊಂದಿಗೆ, ಇರಾನ್‌ನ...

ಅಸ್ಸಾಂ ಚುನಾವಣೆ : ನುಸುಳುಕೋರರಿಂದ ಯುವ ಕಲ್ಯಾಣಕ್ಕೆ ವರಸೆ ಬದಲಿಸಿದ ಬಿಜೆಪಿ

ಅಸ್ಸಾಂ ವಿಧಾನಸಭಾ ಚುನಾವಣೆಗೆ ನಾಲ್ಕು ದಿನಗಳು ಬಾಕಿ ಇರುವಾಗ ಬಿಜೆಪಿ ತನ್ನ ಪ್ರಚಾರದ ವರಸೆಯನ್ನು ಬದಲಿಸಿಕೊಂಡಿದೆ. ನುಸುಳುಕೋರರನ್ನು ಹೊರಹಾಕುತ್ತೇವೆ, ಅಕ್ರಮ ವಲಸೆಗೆ ಕಡಿವಾಣ ಹಾಕುತ್ತೇವೆಂದು ಅಬ್ಬರಿಸುತ್ತಿದ್ದ ಬಿಜೆಪಿಗರು, ಈಗ ನುಸುಳಕೋರರ ವಿಷಯವನ್ನು ಬದಿಗೊತ್ತಿದ್ದಾರೆ....

ಕುಡಿದ ಮತ್ತಿನಲ್ಲಿ ಕಾರು ಚಾಲನೆ: ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ 19ವರ್ಷದ ಯುವಕ ಸಾವು 

ಬೆಂಗಳೂರು: ಕುಡಿದ ಮತ್ತಿನಲ್ಲಿ ಹದಿಹರೆಯದ ಯುವಕನೊಬ್ಬ ಚಲಾಯಿಸುತ್ತಿದ್ದ ಕಾರು, 19 ವರ್ಷದ ಯುವಕನ ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಆತ ಸಾವನ್ನಪ್ಪಿದ್ದಾನೆ. ಮಲ್ಲೇಶಪಾಳ್ಯದ ಮಾರುತಿನಗರದ 10 ನೇ ಮುಖ್ಯ ರಸ್ತೆಯಲ್ಲಿ ಶುಕ್ರವಾರ ತಡರಾತ್ರಿ...