Homeಮುಖಪುಟಸಂಭಾಷಣೆಯ ಚಾಟಿ, ವಾಸ್ತವ ಮೆಲೋಡ್ರಾಮದ ಧಾಟಿ; ಕೆ.ವಿ.ರಾಜು ಗರಿಮೆ

ಸಂಭಾಷಣೆಯ ಚಾಟಿ, ವಾಸ್ತವ ಮೆಲೋಡ್ರಾಮದ ಧಾಟಿ; ಕೆ.ವಿ.ರಾಜು ಗರಿಮೆ

- Advertisement -
- Advertisement -

‘ನಾನು ಹುಟ್ಟಿದ್ದು ಸತ್ಯ ಸತ್ತು ಕೊಳೆತು ನಾರುತ್ತಿರೋ ಈ ಇಪ್ಪತ್ತನೇ ಶತಮಾನದಲ್ಲಿ… ಗಲ್ಲಿಗಲ್ಲಿಗಳಲ್ಲಿ ಸೂರ್ಯನ ಬೆಳಕಿಗೆ ಫಳಫಳನೇ ಹೊಳಿತಿರೋ ಚಾಕು, ಚೂರಿ, ಮಚ್ಚು, ಪಿಸ್ತೂಲುಗಳ ಮಧ್ಯೆ…’

‘ಧರ್ಮದ ಹೆಸರಲ್ಲಿ ನೀವಿಟ್ಟಿರೋ ಕುಂಕುಮ ನಿಮ್ಮದಲ್ವೋ! ನೀವಿಟ್ಟ ದಿನದಿಂದ ನಮಗೆ ಈ ಸೌಭಾಗ್ಯ ಸಿಗಲಿಲ್ಲ..’

‘ಉಚ್ಚಿ ಹುಯ್ಯೋ ಹುಡುಗರಾಂಗ ಮಾತಾಡಿದ್ರ ಕಚ್ಚಿ ಹರ್ದು ಚಲ್ಲಾಡ್ತಾನಾಂವ… ಅವುನ್ ತಲಿ ಜ್ವತ ಅವುನ್ ತಲಿಮಾರ ನಾಶ ಆಗ್ಬೇಕಾ…ಆಗ ಈ ಅರಮನಿ ಉಳಿತಾದ..!

‘ಸಮಾಜದ ಹಿತಕ್ಕೋಸ್ಕರನೇ ಕಾನೂನು ಸೃಷ್ಟಿ ಆಗಿರೋದು ಅಂದ್ಮೇಲೆ ಸಮಾಜಕ್ಕೆ ಸರಿ ಅನ್ಸಿದ್ದು ಕಾನೂನಿನ ದೃಷ್ಟೀಲಿ ಹ್ಯಾಗೆ ಸಾರ್ ತಪ್ಪಾಗುತ್ತೆ?’

90ರ ದಶಕದ ಆರಂಭದಲ್ಲಿ ಇಂತಹ ಸಿನಿಮಾ ಸಂಭಾಷಣೆಗಳ ಮೂಲಕ ಚಾಲ್ತಿಗೆ ಬಂದವರು ಕೆ.ವಿ.ರಾಜು. ತಮ್ಮ ಸಿನಿಮಾಗಳ ಮೂಲಶಕ್ತಿ ಪ್ರೇಕ್ಷಕರನ್ನು ಬಡಿದೆಬ್ಬಿಸುವ ಚಾಟಿ ಏಟಿನಂತಹ ಸಂಭಾಷಣೆಗಳಲ್ಲಿದೆ ಎಂಬುದನ್ನು ರಾಜು ನಂಬಿದಂತಿತ್ತು.

ಕೆ.ವಿ.ರಾಜು ಅವರಿಗೆ 2017ರಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಬಿ.ಆರ್.ಪಂತುಲು ಪ್ರಶಸ್ತಿಯನ್ನು ಘೋಷಿಸಿದಾಗ ಅದನ್ನು ನಿರಾಕರಿಸಿ ರಾಜು ಅವರು ಅಕಾಡೆಮಿಗೆ ಬರೆದ ಪತ್ರದಲ್ಲಿ ಒಂದು ಮಾತು ಹೀಗಿತ್ತು: ‘ನನ್ನ ಸಿನಿಮಾ ಪ್ರಯಾಣದ ಗುರಿ ಜನಮನರಂಜನೆಯೇ ಹೊರತು ಪ್ರಶಸ್ತಿಗಳಲ್ಲ. ಮನರಂಜಿಸಲು ಸಂಬಳ ಪಡೆದಿರುವುದರಿಂದ ಪ್ರಶಸ್ತಿಗೆ ಅರ್ಹನಲ್ಲ..’ (ಒಂದೆರಡು ತಿಂಗಳ ನಂತರ ಸರ್ಕಾರ ನೀಡಿದ ಪುಟ್ಟಣ್ಣ ಕಣಗಾಲ್ ಪ್ರಶಸ್ತಿಯನ್ನು ಅವರು ಮರುಮಾತಿಲ್ಲದೆ ಸ್ವೀಕರಿಸಿದ್ದು ಅನೇಕರ ಅಚ್ಚರಿಗೆ ಕಾರಣವಾಗಿತ್ತು; ಅದು ಬೇರೆ ಮಾತು). ರಾಜು ತಮ್ಮ ಸಿನಿಮಾಗಳಿಗೆ ಆಯ್ದುಕೊಂಡ ಕತೆಗಳಿಗೂ ಈ ಮಾತುಗಳಿಗೂ ಸಂಬಂಧವಿದ್ದಂತಿದೆ.

ತಮ್ಮ ಸಹೋದರ ಕೆ.ವಿ.ಜಯರಾಂ ಗರಡಿಯಲ್ಲಿ ಸಿನಿಮಾ ಕಸುಬು ಕಲಿತ ರಾಜು, ಜಯರಾಂ ಅವರ ಸಿನಿಮಾಗಳ ದಾಂಪತ್ಯ, ಪ್ರೇಮಕಲಹ, ಸ್ತ್ರೀವಾದಿ ನೆಲೆಗಳ ಕಥನಗಳಿಗಿಂತ ಭಿನ್ನ ಹಾದಿಯನ್ನು ಆಯ್ದುಕೊಂಡರು. ಸಮಾಜದ ಅಸಮಾನತೆ, ಭ್ರಷ್ಟ ರಾಜಕಾರಣ, ಜನಸಾಮಾನ್ಯರ ಅಸಹಾಯಕತೆ-ಇಂತಹ ಸಾಮಾನ್ಯ ವಸ್ತುಗಳಿಗೆ ತಮ್ಮದೇ ವಿಭಿನ್ನ ಶೈಲಿಯ treatment ನೀಡಿ ಪ್ರೇಕ್ಷಕರ ಮನ ಗೆದ್ದವರು ರಾಜು.

‘ಸಂಗ್ರಾಮ’ದಂತಹ ಸಾಮಾನ್ಯ ರೀಮೇಕ್ ಮೂಲಕ ನಿರ್ದೇಶನಕ್ಕಿಳಿದ ರಾಜು, ಗುರುತಿಸಿಕೊಂಡಿದ್ದು ‘ಇಂದ್ರಜಿತ್’ ಚಿತ್ರದ ಮೂಲಕ. ಏಕತಾನತೆಯ ರೆಬೆಲ್ ಪಾತ್ರವಾಗಿದ್ದರೂ ಅಂಬರೀಶ್‌ ಅವರಿಗೆ ಬೇರೆ ಇಮೇಜ್ ಕೊಟ್ಟ, ಖಳನಾಯಕರಾಗಿ ಗುರುತಿಸಿಕೊಂಡಿದ್ದ ದೇವರಾಜ್ ಅವರಿಗೆ ವಿಶೇಷ ಪಾತ್ರ ನೀಡಿದ ‘ಇಂದ್ರಜಿತ್’ ಗೆದ್ದಿದ್ದೇ ಅದರ ಖಡಕ್ ಸಂಭಾಷಣೆಗಳ ಮೂಲಕ. ‘ನವಭಾರತ’, ‘ಕದನ’, ‘ಯುದ್ಧ’, ‘ಪೊಲೀಸ್ ಲಾಕಪ್’, ‘ಸುಂದರ ಕಾಂಡ’, ‘ಯುದ್ಧಕಾಂಡ’, ‘ಹುಲಿಯಾ’ ಚಿತ್ರಗಳ ಸಂಭಾಷಣೆಗಳನ್ನೂ ಇಲ್ಲಿ ಗಮನಿಸಬಹುದು.

ಅಂದಿನ ದಿನಗಳ ಕಮರ್ಷಿಯಲ್ ಸಿನಿಮಾ ಸಂಭಾಷಣೆಗಳ ಏಕತಾನತೆಯನ್ನು ಮುರಿದು, ಅವುಗಳಿಗೆ ಹೊಸ ಹೊಳಪು ಕೊಟ್ಟವರಲ್ಲಿ ರಾಜು ಪ್ರಮುಖರು. ಜನಪ್ರಿಯ ಸಿನಿಮಾಗಳಿಗೆ ಬೇಕಾದ ಬಿಗಿ ಚಿತ್ರಕಥೆ, ಕ್ಷಿಪ್ರ ನಿರೂಪಣೆ, ಚುರುಕು ಸಂಕಲನವನ್ನು ಸಮರ್ಥವಾಗಿ ದುಡಿಸಿಕೊಂಡ ರಾಜು, extreme closeup shotಗಳನ್ನು , moving shotಗಳನ್ನು ಪಾತ್ರಗಳ ಸಂಭಾಷಣೆಯ ಸಂದರ್ಭಗಳಲ್ಲಿ ಆಕರ್ಷಕವಾಗಿ ಅಳವಡಿಸಿದರು. ಅವರೊಂದು ರೀತಿಯಲ್ಲಿ extreme closeup shotಗಳ ಕಡುಮೋಹಿ. ರಾಜು ಅವರ ಈ ಜನಪ್ರಿಯತೆ ಅವರಿಗೆ ಹಿಂದಿ ಚಿತ್ರರಂಗದಲ್ಲಿಯೂ ಅವಕಾಶ ಕಲ್ಪಿಸಿತು. ಮೇರುನಟ ಅಮಿತಾಭ್ ನಾಯಕನಟರಾಗಿದ್ದ ‘ಇಂದ್ರಜಿತ್’ ಚಿತ್ರವನ್ನು ರಾಜು ನಿರ್ದೇಶಿಸಿದರು(ಇದು ಅವರದೇ ನಿರ್ದೇಶನದ ‘ಬಂಧಮುಕ್ತ’ ಸಿನಿಮಾದ ರೀಮೇಕ್).

‘ಸಂಗ್ರಾಮ’, ‘ಕದನ’, ‘ಯುದ್ಧ’, ‘ಯುದ್ಧಕಾಂಡ’, ‘ನವಭಾರತ’, ‘ರಾಷ್ಟ್ರಗೀತೆ’-ಈ ಶೀರ್ಷಿಕೆಗಳನ್ನು ಗಮನಿಸಿದರೆ ರಾಜು ಅವರ ಕಥಾವಸ್ತುಗಳ ಒಲವು ಅರ್ಥವಾಗುತ್ತದೆ. ಸ್ವಾತಂತ್ರ್ಯೋತ್ತರ ಭಾರತದ ಭ್ರಷ್ಟ ವ್ಯವಸ್ಥೆಯನ್ನು ಕಟು ವಾಸ್ತವ, ಸಂಘರ್ಷಗಳ ಮೆಲೋಡ್ರಾಮದ ಮೂಲಕ ತೋರಿಸಿದ ರಾಜು, ಅದಕ್ಕಾಗಿ ಜಡಸಮಾಜವನ್ನು ಎಚ್ಚರಿಸುವಂತಹ ಚುಚ್ಚುಮಾತುಗಳನ್ನು ಬಳಸಿದರು. ಕೆಲವೊಮ್ಮೆ ಇದು ‘ದೇಶಕ್ಕೆ ಮಕ್ಕಳು ಬೇಕು; ಆದರೆ ನಿಮ್ಮಂಥ ಸೂಳೆಮಕ್ಕಳಲ್ಲ!’ ಎಂಬಂತಹ ಅಗ್ಗದ ಮಟ್ಟಕ್ಕೂ ಇಳಿದದ್ದಿದೆ. ಆದರೆ ‘ಚಕ್ರವ್ಯೂಹ’, ‘ಗಜೇಂದ್ರ’ ಮಾದರಿಯ activism ಅನ್ನು ರಾಜು ಅವರ ಸಿನಿಮಾಗಳು ಬೇರೊಂದು ರೀತಿಯಲ್ಲಿ ವಿಸ್ತರಿಸಿದವು. ಉದಾಹರಣೆಗೆ ‘ರಾಷ್ಟ್ರಗೀತೆ’ ಚಿತ್ರದ ಆರಂಭದಲ್ಲಿ ರಾಜಕಾರಣಿಯೊಬ್ಬ ಹಾರಿಸಬೇಕಿದ್ದ ರಾಷ್ಟ್ರಧ್ವಜವನ್ನು ‘ಭಾರತಿ’ ಎಂಬ ಹೆಸರಿನ ಶಿಕ್ಷಕಿಯೊಬ್ಬಳು ಅಪಹರಿಸಿ ಸುಟ್ಟುಹಾಕಲು ಹೊರಡುವ ದೃಶ್ಯವೊಂದಿದೆ. ಸ್ವಾತಂತ್ರ್ಯ, ದೇಶಪ್ರೇಮಗಳನ್ನು ರಾಜು ಸಿನಿಮಾಗಳು ಕಟುವಾಸ್ತವ, ವ್ಯಂಗ್ಯದೊಂದಿಗೆ ಮುಖಾಮುಖಿಯಾಗುತ್ತವೆ; ಅವರ ಯಾವೊಂದು ಸಿನಿಮಾದಲ್ಲೂ ಅನವಶ್ಯಕವಾದ ಹಾಸ್ಯಪಾತ್ರಗಳು ಒಂದೂ ಇಲ್ಲ ಎಂಬುದನ್ನು ಗಮನಿಸಬಹುದು.

ತಮ್ಮ ಈ ಶೈಲಿಗೆ ಒಗ್ಗದ ‘ಬೊಂಬಾಟ್ ಹುಡ್ಗ’ ಎಂಬ ಕೆಟ್ಟ ಚಿತ್ರಕ್ಕೆ ಕೈ ಹಾಕಿ ರಾಜು ಸೋತಿದ್ದಾರೆ. ಆದರೆ ರೀಮೇಕ್ ಸಿನಿಮಾಗಳನ್ನೂ ಮೆಚ್ಚುವಂತೆ ರಾಜು ಮರುನಿರೂಪಿಸಿ ‘ಯುದ್ಧಕಾಂಡ’ (ಹಿಂದಿಯ ‘ಮೇರಿ ಜಂಗ್’), ‘ಬೆಳ್ಳಿ ಮೋಡಗಳು’ (ತೆಲುಗಿನ ‘ಸೀತರಾಮಯ್ಯಗಾರಿ ಮನವರಾಲು’) ಗೆದ್ದಿದ್ದಾರೆ.

1996ರಲ್ಲಿ ತೆರೆಕಂಡ ‘ಹುಲಿಯಾ’ ಕೆ.ವಿ.ರಾಜು ಅವರ ಶೈಲಿಯನ್ನು ಹೆಚ್ಚು ತಿದ್ದಿದ ಚಿತ್ರ. ಶೋಷಣೆ, ಕ್ರೌರ್ಯ, ಭ್ರಷ್ಟತೆಯ ತಮ್ಮ ಎಂದಿನ ವಸ್ತುವಿಗೆ ಹೊಸ ಸ್ಪರ್ಶ ಕೊಟ್ಟ ರಾಜು ತಮ್ಮೆಲ್ಲ ಸೃಜನಶೀಲತೆಯನ್ನು ‘ಹುಲಿಯಾ’ಗಾಗಿ ಧಾರೆ ಎರೆದರು. ಬರಗಾಲದಲ್ಲಿ ನಲುಗುವ ಹಳ್ಳಿಯೊಂದರ ಹಾಹಾಕಾರ, ಪಾಳೇಗಾರಿ ಶಕ್ತಿಗಳ ಧೂರ್ತತನ, ಕ್ರೂರ ವ್ಯವಸ್ಥೆಯ ಪಿತೂರಿಯಿಂದಾಗಿ ‘ಬಲವಂತದ ಗುಳೆ’ ಹೊರಟುಬಂದು ನಾಶವಾಗುವ ಅಮಾಯಕರ ದುರಂತವನ್ನು ‘ಹುಲಿಯಾ’ ಸಶಕ್ತವಾಗಿ ಚಿತ್ರಿಸುತ್ತದೆ. ದೇವರಾಜ್ ಅವರ ನಟನಾಪ್ರತಿಭೆಯನ್ನು ತೆರೆದಿಟ್ಟ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ನೆಲಕಚ್ಚಿತು.

ತಮ್ಮ ಜಾಯಮಾನದ್ದೇ ಅಲ್ಲದ ವಸ್ತುವಿನ ‘ಓ ಗಂಡಸರೇ ನೀವೆಷ್ಟು ಒಳ್ಳೆಯವರು?’ ಸಿನಿಮಾವನ್ನೂ ಕೂಡ ರಾಜು ಪರಿಣಾಮಕಾರಿಯಾಗಿ ನಿಭಾಯಿಸಿದರೂ ಸಿನಿಮಾ ಯಶಸ್ಸು ಕಾಣಲಿಲ್ಲ. ಸಂಗೀತ-ಹಾಡುಗಳಿಂದಾಗಿ ಜನಪ್ರಿಯವಾದರೂ ‘ಬೆಳ್ಳಿ ಕಾಲುಂಗುರ’ ಪೇಲವ ಕತೆಯ ಮೂಲಕ ಸೋತಿತು. ಕುತೂಹಲಕಾರಿ ಹಂದರವಿದ್ದರೂ ‘ನಂ.1’, ‘ನಿಜ’ ಚಿತ್ರಗಳು ಹೆಚ್ಚೇನೂ ಗೆಲುವು ಕಾಣಲಿಲ್ಲ. ಮಲಯಾಳಂ, ತೆಲುಗು, ಹಿಂದಿ ಭಾಷೆಗಳನ್ನು ಬಳಸಿ ಕನ್ನಡಕ್ಕೆ ಬಂದ ‘ಪಾಂಡವರು'(2006) ಎಂಬ ಸಿನಿಮಾ ರಾಜು ಅವರ ದಣಿವನ್ನು ತೋರಿಸುತ್ತದೆ. ಕೆಲವಾದರೂ ಒಳ್ಳೆಯ ಚಿತ್ರಗಳನ್ನು ಕನ್ನಡಕ್ಕೆ ಕೊಟ್ಟ ಕೆ.ವಿ.ರಾಜು ಅವರ ಕ್ರಿಯಾಶೀಲತೆ ಇತ್ತೀಚಿನ ದಿನಗಳಲ್ಲಿ ಅವರ ಬಳಿಯೇ ಸಹಾಯಕರಾಗಿದ್ದವರ ಕಳಪೆ ಸಿನಿಮಾಗಳಿಗೆ ಚಿತ್ರಕಥೆ, ಸಂಭಾಷಣೆ ಬರೆಯುವುದಕ್ಕೆ ವ್ಯಯವಾಗಿದ್ದುಂಟು.

(‘ತೆರೆಯ ಹಿಂದೆ ಸರಿದರೆ ಸೃಜನಶೀಲರು?’ ಅಂಕಣ ಸರಣಿಯಲ್ಲಿ ಕಥೆಗಾರ ಮಂಜುನಾಥ್ ಲತಾ ಅವರು ಹಿಂದೊಮ್ಮೆ ಬರೆದಿದ್ದ ಲೇಖನದ ಪರಿಷ್ಕೃತ ರೂಪ)

  • ಮಂಜುನಾಥ್ ಲತಾ
’ಮಂಜುನಾಥ್ ಲತಾ’ ಅವರು ಹಿರಿಯ ಪತ್ರಕರ್ತರು. ತೆಂಕಲಕೇರಿ, ಕತೆ ಎಂಬ ಇರಿವ ಅಲಗು (ಕಥಾ ಸಂಕಲನಗಳು), ಪರದೇಸಿ ಮಗನ ಪದವು, ಆಹಾ ಅನಿಮಿಷ ಕಾಲ, ಸೋಜಿಗದ ಸೂಜಿ (ಕವನ ಸಂಕಲನಗಳು), ಪಲ್ಲಂಗ (ಕಾದಂಬರಿ), ಮಾತಿನ ಓದು (ಲೇಖನಗಳ ಸಂಗ್ರಹ) ಅವರ ಪ್ರಕಟಿತ ಕೃತಿಗಳು. ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಯಲ್ಲಿ ಅವರ ಕಥೆಗಳು ನಾಲ್ಕುಬಾರಿ ಬಹುಮಾನ ಗಳಿಸಿವೆ.

ಇದನ್ನೂ ಓದಿರಿ: ಚಲನಚಿತ್ರ ನಿರ್ದೇಶಕ ಕೆ.ವಿ.ರಾಜು ನಿಧನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನ ಬದಲಿಸಿ ಮನುಸ್ಮೃತಿ ತರಲು SIR ಷಡ್ಯಂತ್ರ: ನಟ ಕಿಶೋರ್

ದೇಶದ ಬಹುಕೋಟಿ ಉದ್ಯಮಿ ಗೌತಮ್ ಅದಾನಿಯದ್ದೇ ಇರಲಿ ಅಥವಾ ಒಬ್ಬ ಬಡ ರೈತನದ್ದೇ ಇರಲಿ, ಪ್ರಜಾಪ್ರಭುತ್ವದಲ್ಲಿ ಎಲ್ಲರ ಮತವೂ ಒಂದೇ ಸಮ. ಪ್ರಜೆಗಳನ್ನೆಲ್ಲ ಸಮಾನವಾಗಿ ಕಾಣುವ ಏಕೈಕ ಅಸ್ತ್ರ ಎಂದರೆ ಅದು ಮತದಾನದ...

Nepal: ಭೀಕರ ಪ್ರವಾಹಕ್ಕೆ ಸವಾಲೆಸೆದು ನಿಂತ ‘ಗ್ರೀನ್ ಹೌಸ್’ ಸ್ಟೋರಿ

'ನಮ್ಮ ಬದುಕು ಇಷ್ಟಕ್ಕೇ ಅಂತ್ಯವಾಯಿತು ಎನಿಸುವ ಕ್ಷಣಗಳು ಎದುರಾದಾಗ ಮನಸ್ಸಿನಲ್ಲಿ ಏನು ಓಡಬಹುದು? ಪ್ರವಾಹ ಬಂದಾಗ ನನಗೂ ಅದೇ ಅನಿಸಿತ್ತು' ಇದು ನೇಪಾಳದ ನುವಾಕೋಟ್ ಜಿಲ್ಲೆಯ ತ್ರಿಶೂಲಿ ನದಿಯಲ್ಲಿ ಹರಿದುಬಂದ ಭೀಕರ ಪ್ರವಾಹದಿಂದ...

NEET: ದೇಶಾದ್ಯಂತ ಪ್ರತಿಭಟನಾಕಾರರ ವಿರುದ್ದ ದಾಖಲಾಗಿದ್ದ ಎಲ್ಲಾ FIRಗಳನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ಮರುಪರೀಕ್ಷೆ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ಯ (CJP) ಪ್ರತಿಭಟನಾಕಾರರ ವಿರುದ್ಧ ದಾಖಲಾಗಿದ್ದ ಎಲ್ಲಾ FIR ಗಳನ್ನು ಸುಪ್ರೀಂ ಕೋರ್ಟ್ ಮಂಗಳವಾರ ರದ್ದುಗೊಳಿಸಿದೆ. ಕೇಂದ್ರ ಸರ್ಕಾರವು ಈ...

ಚುನಾವಣಾ ಆಯೋಗ ಚಲೋ: ನಟ ಪ್ರಕಾಶ್ ರಾಜ್ ಸೇರಿದಂತೆ ನೂರಾರು SIR ಸಂತ್ರಸ್ತರು, ಹೋರಾಟಗಾರರನ್ನು ವಶಕ್ಕೆ ಪಡೆದ ಪೊಲೀಸರು

ಕರ್ನಾಟಕ ರಾಜ್ಯದ ಅರ್ಹ ಮತದಾರರ ‘ಮತಹರಣ’ ಖಂಡಿಸಿ ‘ಎಸ್‌ಐಆರ್ ವಿರೋಧಿ ಒಕ್ಕೂಟ’ ಹಮ್ಮಿಕೊಂಡಿದ್ದ ‘ಚುನಾವಣಾ ಆಯೋಗ ಚಲೋ’ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಬಹುಭಾಷಾ ನಟ ಪ್ರಕಾಶ್ ರಾಜ್, ಕಿಶೋರ್ ಹಾಗೂ ಪ್ರಮುಖ ನಾಯಕರು ಸೇರಿದಂತೆ...

‘ಚುನಾವಣಾ ಆಯೋಗ ಚಲೋ’: ‘ಮುಚ್ಚಿದ ಬಾಗಿಲಿನ ಮಾತುಕತೆ ಬೇಡ, ಎಲ್ಲವೂ ಸಾರ್ವಜನಿಕರ ಮುಂದೆಯೇ ಇತ್ಯರ್ಥವಾಗಬೇಕು’: ನೂರ್ ಶ್ರೀಧರ್ ಆಗ್ರಹ

ಬೆಂಗಳೂರು: ಕರ್ನಾಟಕದಲ್ಲಿ ನಡೆದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ರಾಜ್ಯದ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಬೃಹತ್ ಕಳವಳವನ್ನು ಸೃಷ್ಟಿಸಿದೆ. ಕೇಂದ್ರ ಚುನಾವಣಾ ಆಯೋಗವು ಬಿಡುಗಡೆ ಮಾಡಿರುವ ನೂತನ ಕರಡು ಮತದಾರರ...

SIR ಎಂಬುದು ಪ್ರಜಾಪ್ರಭುತ್ವವನ್ನು ಹಾಳುಮಾಡುವ ದೊಡ್ಡ ಸಂಚು ಮತ್ತು ಮೋಸ: ಪ್ರಕಾಶ್ ರಾಜ್

"ನಾನು ಸಣ್ಣವನಿದ್ದಾಗ ಮುಕ್ಕೂಟಿ ಕನ್ನಡಿಗರು ಎನ್ನುತ್ತಿದ್ದರು. ದಶಕಗಳ ನಂತರ ಪಂಚಕೋಟಿ ಕನ್ನಡಿಗರಾಗಿ, ಈಗ ಶತಕೋಟಿ ಆಗಬೇಕಿತ್ತು. ಆದರೆ ಮತದಾರರ ಪಟ್ಟಿ ವಿಶೇಷ ಸಾಂದ್ರ ಪರಿಷ್ಕರಣೆ (SIR) ಹೆಸರಿನಲ್ಲಿ ಮತ್ತೆ ಮುಕ್ಕೂಟಿಗೆ ತಂದು ನಿಲ್ಲಿಸಲಾಗುತ್ತಿದೆ....

‘ಚುನಾವಣಾ ಆಯೋಗ ಚಲೋ’: ಎಸ್ಐಆರ್ ಅನ್ಯಾಯವನ್ನು ಪ್ರಶ್ನಿಸಲು ನಾವು ಚುನಾವಣಾ ಆಯೋಗಕ್ಕೆ ಮುತ್ತಿಗೆ ಹಾಕುತ್ತಿದ್ದೇವೆ: ಯೂಸುಫ್ ಕನ್ನಿ

ಬೆಂಗಳೂರು: ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಹೆಸರಿನಲ್ಲಿ ಅರ್ಹ ನಾಗರಿಕರ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ‘ಎಸ್‌ಐಆರ್ ವಿರೋಧಿ ಕರ್ನಾಟಕ’ ವೇದಿಕೆಯು 2026 ಸೆಪ್ಟಂಬರ್ 01, ಮಂಗಳವಾರ ಹಮ್ಮಿಕೊಂಡಿದ್ದ...

SIR:‘ನಾವು ಕಳ್ಳರಲ್ಲ, ಈ ದೇಶದ ಮೂಲ ನಿವಾಸಿಗಳು’ SIR ಸಂತ್ರಸ್ತರ ಜೊತೆ ಪ್ರಕಾಶ್ ರಾಜ್ ಸಂವಾದ

"ನಾವು ಈ ದೇಶದ ನಾಗರಿಕರು, ಕಳ್ಳರಲ್ಲ. ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ ಮಾಡಿ ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ತರಲಾಗುತ್ತಿದೆ. ನಮ್ಮ ಹಕ್ಕನ್ನು ಉಳಿಸಿಕೊಳ್ಳಲು ನಾವು ಹೋರಾಟ ನಡೆಸುತ್ತಿದ್ದೇವೆ," ಎಂದು ಬಹುಭಾಷಾ ನಟ ಹಾಗೂ...

‘ವಿದೇಶದಲ್ಲಿ ಚಿನ್ನ ಖರೀದಿಸಬೇಡಿ, ವಿವಾಹವಾಗಬೇಡಿ’: ಭಾರತೀಯರಿಗೆ ಮೋದಿ ಮನವಿ

ಭಾರತೀಯರು ಅನಗತ್ಯವಾಗಿ ವಿದೇಶಿ ಪ್ರವಾಸ ಕೈಗೊಳ್ಳುವುದನ್ನು, ವಿದೇಶಗಳಲ್ಲಿ ವಿವಾಹವಾಗುವುದನ್ನು ಹಾಗೂ ಅಗತ್ಯವಿಲ್ಲದಿದ್ದರೆ ವಿದೇಶದಿಂದ ಚಿನ್ನ ಖರೀದಿಸುವುದನ್ನು ಸಂಪೂರ್ಣವಾಗಿ ತಪ್ಪಿಸಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. ಸ್ವಾವಲಂಬನೆಗೆ ಉತ್ತೇಜನ ನೀಡುವುದರ...

ಧಾರವಾಡ | ಪ್ರಕಾಶ್ ರಾಜ್ ಭಾಗವಹಿಸಿದ್ದ ಸಮುದಾಯ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನ : ದೂರು ದಾಖಲು

ಭಾನುವಾರ (ಆ.30) ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾ ಭವನದಲ್ಲಿ ಆಯೋಜಿಸಿದ್ದ ಸಮುದಾಯ ಸಂಘಟನೆಯ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನಿಸಿ ಗಲಾಟೆ ಎಬ್ಬಿಸಿದ ಬಿಜೆಪಿ-ಸಂಘಪರಿವಾರದ ಬೆಂಬಲಿಗರ ವಿರುದ್ಧ ದೂರು ದಾಖಲಿಸಲಾಗಿದೆ. ಸಮುದಾಯ ಸಂಘಟನೆಯ ಧಾರವಾಡದ...