“ನಾವು ಈ ದೇಶದ ನಾಗರಿಕರು, ಕಳ್ಳರಲ್ಲ. ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ ಮಾಡಿ ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ತರಲಾಗುತ್ತಿದೆ. ನಮ್ಮ ಹಕ್ಕನ್ನು ಉಳಿಸಿಕೊಳ್ಳಲು ನಾವು ಹೋರಾಟ ನಡೆಸುತ್ತಿದ್ದೇವೆ,” ಎಂದು ಬಹುಭಾಷಾ ನಟ ಹಾಗೂ ಸಾಮಾಜಿಕ ಹೋರಾಟಗಾರ ಪ್ರಕಾಶ್ ರಾಜ್ ಚುನಾವಣಾ ಆಯೋಗದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಹೆಸರಿನಲ್ಲಿ ಅರ್ಹ ನಾಗರಿಕರ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ‘ಎಸ್ಐಆರ್ ವಿರೋಧಿ ಕರ್ನಾಟಕ’ ವೇದಿಕೆ ಮಂಗಳವಾರ ಆಯೋಜಿಸಿದ್ದ ‘ಚುನಾವಣಾ ಆಯೋಗ ಚಲೋ’ ಪ್ರತಿಭಟನೆಯ ಅಂಗವಾಗಿ ಅವರು ಬೆಂಗಳೂರಿನ ಬಾಪೂಜಿನಗರದಲ್ಲಿ ಸಂತ್ರಸ್ತ ಮತದಾರರೊಂದಿಗೆ ಸಂವಾದ ನಡೆಸಿದರು.
‘ನಾವೇನೂ ಕಳ್ಳರಲ್ಲ’
ಸಂವಾದದಲ್ಲಿ ಸಂತ್ರಸ್ತರ ಅಳಲನ್ನು ಆಲಿಸಿ ಮಾತನಾಡಿದ ಪ್ರಕಾಶ್ ರಾಜ್, “ಆಧಾರ್ ಕಾರ್ಡ್ ಸೇರಿದಂತೆ ಎಲ್ಲಾ ಅಧಿಕೃತ ದಾಖಲೆಗಳನ್ನು ಹೊಂದಿದ್ದರೂ ಜನರನ್ನು ಅನುಮಾನದಿಂದ ನೋಡುವುದು ಅವರ ಸ್ವಾಭಿಮಾನ ಮತ್ತು ಗೌರವಕ್ಕೆ ಧಕ್ಕೆ ತರುತ್ತಿದೆ. ನಾವೇನೋ ಕಳ್ಳರು, ಎಲ್ಲಿಂದಲೋ ಬಂದುಬಿಟ್ಟಿದ್ದೇವೆ, ಮೋಸ ಮಾಡಿಕೊಂಡು ವೋಟರ್ ಕಾರ್ಡ್ ತೆಗೆದುಕೊಂಡಿದ್ದೇವೆ ಎಂಬಂತೆ ನಮ್ಮನ್ನು ನಡೆಸಿಕೊಳ್ಳಲಾಗುತ್ತಿದೆ,” ಎಂದು ಬೇಸರ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗವನ್ನು ನೇರವಾಗಿ ಪ್ರಶ್ನಿಸಿದ ಅವರು, “ಭಾರತ ನಮ್ಮ ಮನೆ, ನಮ್ಮ ದೇಶ, ನಾವು ಇಲ್ಲೇ ಹುಟ್ಟಿದವರು. ಆದರೂ, ಈಗ ನಾವು ಈ ದೇಶದವರು ಎಂದು ಸಾಬೀತುಪಡಿಸಿಕೊಳ್ಳಬೇಕಾದ ದುಸ್ಥಿತಿ ಬಂದಿದೆ. ನಾವಿಲ್ಲಿಯವರಲ್ಲ ಎಂದರೆ ನಮ್ಮನ್ನು ಎಲ್ಲಿಗೆ ಕಳುಹಿಸುತ್ತೀರಿ?” ಎಂದು ಖಾರವಾಗಿ ಪ್ರಶ್ನಿಸಿದರು.
‘ಒಂದೂವರೆ ಕೋಟಿ ಸಂತ್ರಸ್ತರಲ್ಲಿ ನಾನೂ ಒಬ್ಬ’
ಎಸ್ಐಆರ್ ಪ್ರಕ್ರಿಯೆಯ ಅಗತ್ಯವನ್ನೇ ಪ್ರಶ್ನಿಸಿದ ನಟ, “ಅಕ್ರಮವಾಗಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿಕೊಂಡವರನ್ನು ತೆಗೆದುಹಾಕುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ದಶಕಗಳಿಂದ ಇಲ್ಲೇ ವಾಸವಾಗಿರುವ ಅರ್ಹ ನಾಗರಿಕರನ್ನು ಯಾಕೆ ಪಟ್ಟಿಯಿಂದ ಹೊರಗಿಡಬೇಕು? ಈಗಾಗಲೇ ಮತದಾರರಾಗಿರುವವರನ್ನೇ ಮತ್ತೆ ಮತದಾರರೆಂದು ಸಾಬೀತುಪಡಿಸಲು ಒತ್ತಾಯಿಸುತ್ತಿರುವುದು ಏಕೆ?” ಎಂದು ಆಕ್ಷೇಪಿಸಿದರು.
“ಎಸ್ಐಆರ್ನಿಂದ ಕರ್ನಾಟಕದಲ್ಲಿ ದೊಡ್ಡ ಸಂಖ್ಯೆಯ ಜನರು ಸಂತ್ರಸ್ತರಾಗಿದ್ದಾರೆ. ರಾಜ್ಯದ ಸುಮಾರು ಒಂದೂವರೆ ಕೋಟಿ ಕನ್ನಡಿಗರು ತಮ್ಮ ಮತದಾನದ ಹಕ್ಕಿನಿಂದ ವಂಚಿತರಾಗಿದ್ದಾರೆ, ಅವರಲ್ಲಿ ನಾನೂ ಒಬ್ಬ,” ಎಂದರು.
‘ನಮಗಾಗಿ ನಾವೇ ಹೋರಾಡಬೇಕು’
ಸಂತ್ರಸ್ತರಿಗೆ ಧೈರ್ಯ ತುಂಬಿದ ಪ್ರಕಾಶ್ ರಾಜ್, ರಾಜ್ಯದಲ್ಲಿ ಚುನಾವಣೆಗೆ ಇನ್ನು ಎರಡು ವರ್ಷ ಸಮಯವಿದೆ. ಅದಕ್ಕೂ ಮುಂಚೆಯೇ ಈ ರೀತಿಯ ತಪ್ಪುಗಳನ್ನು ಎಸಗಲಾಗಿದೆ. ನಿಮ್ಮ ಜೊತೆ ನಾವೆಲ್ಲರೂ ಇದ್ದೇವೆ. ನಾವು ರಾಜಕಾರಣಿಗಳಲ್ಲ, ನಮಗೆ ರಾಜಕೀಯ ಪಕ್ಷಗಳ ಹಂಗೂ ಬೇಕಿಲ್ಲ. ನಮಗಾಗಿ ನಾವೇ ಹೋರಾಟ ಮಾಡಬೇಕು. ಈ ಹೋರಾಟದಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ, ಎಂದು ಹೇಳಿದರು.


