ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 2012ರಲ್ಲಿ ನಡೆದ ನಿರ್ಭಯಾ ಪ್ರಕರಣವನ್ನು ನೆನಪಿಸುವಂತಹ ಆಘಾತಕಾರಿ ಘಟನೆಯೊಂದು ನಡೆದಿದೆ. ಸ್ಲೀಪರ್ ಬಸ್ನಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ.
indiatoday.in ವರದಿಯ ಪ್ರಕಾರ, ಈ ಘಟನೆಯು ಆಗಸ್ಟ್ 4ರ ರಾತ್ರಿ ಗ್ರೇಟರ್ ನೋಯ್ಡಾದ ಪರಿ ಚೌಕ್ನಿಂದ ಓಲ್ಡ್ ದೆಹಲಿಯ ಕಾಶ್ಮೀರಿ ಗೇಟ್ವರೆಗಿನ ಬಸ್ಸಿನ 47 ಕಿಲೋಮೀಟರ್ ಪ್ರಯಾಣದ ಅವಧಿಯಲ್ಲಿ ನಡೆದಿದೆ.
ಪೊಲೀಸರು ಬಸ್ ಚಾಲಕ ಕುಲದೀಪ್ ಮತ್ತು ನಿರ್ವಾಹಕ ಸಂದೀಪ್ ಇಬ್ಬರನ್ನೂ ಬಂಧಿಸಿದ್ದು, ವಾಹನವನ್ನು ಜಪ್ತಿ ಮಾಡಿ ವಿಧಿವಿಜ್ಞಾನ (ಫೋರೆನ್ಸಿಕ್) ಪರೀಕ್ಷೆಗೆ ಕಳುಹಿಸಿದ್ದಾರೆ.
ದೆಹಲಿ ಉತ್ತರ ವಿಭಾಗದ ಪೊಲೀಸ್ ಉಪ ಆಯುಕ್ತೆ (ಡಿಸಿಪಿ) ನಿಹಾರಿಕಾ ಭಟ್ ಅವರು ಇಂದು (ಆ.31) ಅಪರಾಧ ನಡೆದಿರುವುದನ್ನು ಮತ್ತು ಇಬ್ಬರು ಆರೋಪಿಗಳ ಬಂಧನವನ್ನು ಖಚಿತಪಡಿಸಿದ್ದಾರೆ. ಆರೋಪಿಗಳಲ್ಲಿ ಒಬ್ಬನಾದ ಸಂದೀಪ್ (29) ಯಾವುದೇ ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿಲ್ಲ ಎಂಬುವುದಾಗಿ ಪೊಲೀಸರು ತಿಳಿಸಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
ಪೊಲೀಸ್ ಮೂಲಗಳ ಪ್ರಕಾರ, ಉತ್ತರ ಪ್ರದೇಶದ ಮೈನ್ಪುರಿ ಜಿಲ್ಲೆಯ ನಿವಾಸಿಯಾದ 11 ನೇ ತರಗತಿ ವಿದ್ಯಾರ್ಥಿನಿ, ತನ್ನ ಕುಟುಂಬಕ್ಕೆ ತಿಳಿಸದೆ ಮನೆಯಿಂದ ಹೊರಟು ನೋಯ್ಡಾದಲ್ಲಿರುವ ತನ್ನ ಸೋದರಸಂಬಂಧಿಯನ್ನು ಭೇಟಿಯಾಗಲು ಬಸ್ಸೊಂದರಲ್ಲಿ ಪ್ರಯಾಣಿಸುತ್ತಿದ್ದಳು. ಭಾರಿ ಮಳೆ ಮತ್ತು ಕತ್ತಲೆಯ ನಡುವೆ, ಆಕೆ ಆಕಸ್ಮಿಕವಾಗಿ ಗ್ರೇಟರ್ ನೋಯ್ಡಾದ ಪರಿ ಚೌಕ್ನಲ್ಲಿ ಇಳಿದಿದ್ದಾಳೆ.
ಈ ವೇಳೆ ಆ ಪ್ರದೇಶದ ಮೂಲಕ ಹಾದುಹೋಗುತ್ತಿದ್ದ ಖಾಲಿ ಸ್ಲೀಪರ್ ಬಸ್ಸೊಂದಕ್ಕೆ ಬಾಲಕಿ ಕೈ ತೋರಿಸಿದ್ದಾಳೆ. ಹುಡುಗಿ ಚಾಲಕನಿಗೆ ಸನ್ನೆ ಮಾಡಿದ ನಂತರ ಬಸ್ ನಿಂತಿದೆ. ತಾವು ನೋಯ್ಡಾ ಸೆಕ್ಟರ್ 63 ಕಡೆಗೆ ಹೋಗುತ್ತಿರುವುದಾಗಿ ತಿಳಿಸಿದ ಚಾಲಕ ಮತ್ತು ನಿರ್ವಾಹಕ, ಆಕೆಯನ್ನು ಅಲ್ಲಿಗೆ ಬಿಡುವುದಾಗಿ ನಂಬಿಸಿ ಬಸ್ ಹತ್ತಿಸಿಕೊಂಡಿದ್ದಾರೆ.
ನಂತರ, ಬಸ್ಸಿನ ಚಾಲಕ ಮತ್ತು ನಿರ್ವಾಹಕ ಆಕೆಯ ಮೇಲೆ ದೌರ್ಜನ್ಯ ಎಸಗಿದ್ದಾರೆ ಮತ್ತು ಜೀವ ಬೆದರಿಕೆ ಹಾಕಿದ್ದಾರೆ ಎಂದು ಬಾಲಕಿ ದೂರು ನೀಡಿರುವುದಾಗಿ ಡಿಸಿಪಿ ನಿಹಾರಿಕಾ ಭಟ್ ತಿಳಿಸಿದ್ದಾರೆ. ಈ ಘಟನೆಯ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಬಾಲಕಿ ಮೇಲೆ ದೌರ್ಜನ್ಯ ಎಸಗಿದ ಬಳಿಕ ಆರೋಪಿಗಳು, ಆಕೆಯನ್ನು ಕಾಶ್ಮೀರಿ ಗೇಟ್ ಐಎಸ್ಬಿಟಿ ಸಮೀಪದ ರಿಂಗ್ ರೋಡ್ನಲ್ಲಿ ಇಳಿಸಿ ಪರಾರಿಯಾಗಿದ್ದಾರೆ. ನಂತರ ಬಾಲಕಿ ಕಾಶ್ಮೀರಿ ಗೇಟ್ ಪೊಲೀಸರನ್ನು ಸಂಪರ್ಕಿಸಿ ಘಟನೆಯ ಬಗ್ಗೆ ದೂರು ನೀಡಿದ್ದಾಳೆ ಎಂದು ಪೊಲೀಸ್ ಅಧಿಕಾರಿ ವಿವರಿಸಿದ್ದಾರೆ.
ಉತ್ತರ ದೆಹಲಿಯ ತಿಮಾರ್ಪುರದ ಬಸ್ ಪಾರ್ಕಿಂಗ್ ಸ್ಥಳದಿಂದ ಪೊಲೀಸರು ಇಬ್ಬರು ಆರೋಪಿಗಳನ್ನೂ ಬಂಧಿಸಿದ್ದಾರೆ. ಪ್ರಸ್ತುತ ತನಿಖೆ ನಡೆಯುತ್ತಿದ್ದು, ಜಪ್ತಿ ಮಾಡಲಾದ ಸ್ಲೀಪರ್ ಬಸ್ ಅನ್ನು ಪೊಲೀಸರು ವಿಧಿವಿಜ್ಞಾನ (ಫೋರೆನ್ಸಿಕ್) ಪರೀಕ್ಷೆಗೆ ಕಳುಹಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಬಸ್ ತಾಂತ್ರಿಕ ದೋಷಕ್ಕೆ ಒಳಗಾಗಿತ್ತು. ರಿಪೇರಿಗಾಗಿ ಗ್ರೇಟರ್ ನೋಯ್ಡಾದ ಸೂರಜ್ಪುರ ಪ್ರದೇಶದ ವರ್ಕ್ಶಾಪ್ಗೆ ಕೊಂಡೊಯ್ಯಲಾಗಿತ್ತು. ರಿಪೇರಿ ಮುಗಿದ ನಂತರ, ಕುಲದೀಪ್ ಮತ್ತು ಸಂದೀಪ್ ಆ ಖಾಲಿ ಬಸ್ ಅನ್ನು ತಿಮಾರ್ಪುರಕ್ಕೆ ವಾಪಸ್ ಕೊಂಡೊಯ್ಯುತ್ತಿದ್ದಾಗ, ಪರಿ ಚೌಕ್ನಲ್ಲಿ ಅವರಿಗೆ ಆ ಹುಡುಗಿ ಸಿಕ್ಕಿದ್ದಾಳೆ.
ಪೊಲೀಸರ ಪ್ರಕಾರ, ಆ ಸ್ಲೀಪರ್ ಬಸ್ಸಿಗೆ ಪರದೆಗಳಿದ್ದವು. ಈ ಕಾರಣದಿಂದಾಗಿ ಘಟನೆ ನಡೆಯುತ್ತಿದ್ದ ಸಮಯದಲ್ಲಿ ವಾಹನದ ಒಳಗಡೆ ಏನಾಗುತ್ತಿದೆ ಎಂಬುದು ಹೊರಗಿನ ಜನರಿಗೆ ಕಾಣಿಸಿಲ್ಲ.
ಬಿಜೆಪಿ ಸರ್ಕಾರಗಳ ವಿರುದ್ಧ ಕಾಂಗ್ರೆಸ್ ಆಕ್ರೋಶ
ಘಟನೆ ಸಂಬಂಧ ಕಾಂಗ್ರೆಸ್ ಪಕ್ಷವು ಉತ್ತರ ಪ್ರದೇಶ ಮತ್ತು ದೆಹಲಿಯ ಬಿಜೆಪಿ ಸರ್ಕಾರಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಈ ಘಟನೆಯು ‘ದೇಶವನ್ನೇ ನಡುಗಿಸಿದೆ’ ಎಂದು ಹೇಳಿದೆ.
“ಚಲಿಸುತ್ತಿದ್ದ ಬಸ್ಸಿನಲ್ಲಿ ಸುಮಾರು 50 ಕಿಲೋಮೀಟರ್ಗಳವರೆಗೆ ಈ ಕ್ರೌರ್ಯ ಮುಂದುವರಿದಿದ್ದರೂ, ಎರಡು ರಾಜ್ಯಗಳ ಪೊಲೀಸರು ಕಿವುಡರಂತೆ ನಟಿಸಿ ನಿದ್ರಿಸುತ್ತಿದ್ದರು. ಯಾವುದೇ ಗಸ್ತು ಅಥವಾ ತಪಾಸಣೆ ಇರಲಿಲ್ಲ” ಎಂದು ಕಾಂಗ್ರೆಸ್ ಪಕ್ಷ ಟ್ವೀಟ್ ಮಾಡಿದೆ.
“ಡಬಲ್ ಇಂಜಿನ್’ ಸರ್ಕಾರಗಳ ಆಡಳಿತದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ ಮತ್ತು ಮಹಿಳೆಯರ ಸುರಕ್ಷತೆಯ ಬಗ್ಗೆ ಅವರು ಮಾಡುವ ‘ಪೊಳ್ಳು ವಾಗ್ದಾನಗಳು’ ಈ ಘಟನೆಯು ಬಯಲು ಮಾಡಿದೆ ಎಂದು ಕಾಂಗ್ರೆಸ್ ಕಿಡಿಕಾರಿದೆ.
“ಈ ಘಟನೆಯು ಮಹಿಳಾ ಸುರಕ್ಷತೆಯ ಪೊಳ್ಳು ವಾಗ್ದಾನಗಳನ್ನು ಬಯಲು ಮಾಡುವುದು ಮಾತ್ರವಲ್ಲದೆ, ಅಪರಾಧಿಗಳಿಗೆ ಕಾನೂನಿನ ಭಯವೇ ಇಲ್ಲದಂತಾಗಿರುವುದನ್ನು ತೋರಿಸುತ್ತದೆ. ಇಂದು ಅಪರಾಧಿಗಳು ಯಾವುದೇ ಭಯವಿಲ್ಲದೆ ಧೈರ್ಯವಾಗಿ ಅಪರಾಧಗಳನ್ನು ಎಸಗುತ್ತಿದ್ದಾರೆ, ಮತ್ತು ಬಿಜೆಪಿ ಸರ್ಕಾರಗಳು ಜನರ ಸುರಕ್ಷತೆಯ ಬಗ್ಗೆ ಯಾವುದೇ ಕಾಳಜಿ ಇಲ್ಲದೆ ಕೇವಲ ಬಾಯಿಮಾತಿನ, ಹಗಲುಗನಸಿನ ಭರವಸೆಗಳನ್ನು ನೀಡುವುದರಲ್ಲಿ ಬ್ಯುಸಿಯಾಗಿವೆ” ಎಂದು ಕಾಂಗ್ರೆಸ್ ಹೇಳಿದೆ.


