ಶಿವಮೊಗ್ಗದ ಆರ್ಎಂಎಲ್ ನಗರದಲ್ಲಿ ಈದ್-ಎ-ಮಿಲಾದ್ ಆಚರಣೆಗಾಗಿ ನಿರ್ಮಿಸಲಾಗಿದ್ದ ಕಟೌಟ್ ಒಂದರ ಮೇಲೆ ಫೆಲೆಸ್ತೀನ್ ಧ್ವಜವನ್ನು ಪ್ರದರ್ಶಿಸಿದ ಆರೋಪದ ಮೇಲೆ ಪೊಲೀಸರು ಮೂವರು ಮುಸ್ಲಿಂ ಯುವಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಆರೋಪಿಗಳನ್ನು ನಿಹಾಲ್ ಉರುಫ್ ಬೆಕ್ಕು, ಉಮರ್ ಮತ್ತು ಅಬ್ರಾಹಾರ್ ಎಂದು ಗುರುತಿಸಲಾಗಿದೆ. ಎಫ್ಐಆರ್ ಪ್ರಕಾರ, ಆಗಸ್ಟ್ 24 ರಂದು ಭಾರತಿ ಸಭಾ ಭವನದ ಬಳಿಯಿದ್ದ ಕಟೌಟ್ ಮೇಲೆ ಈ ಮೂವರು ಹತ್ತಿ, ಪ್ಯಾಲೆಸ್ತೀನ್ ಧ್ವಜವನ್ನು ಪ್ರದರ್ಶಿಸಿ, ಆ ದೃಶ್ಯವನ್ನು ರೆಕಾರ್ಡ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ವಿಡಿಯೋವನ್ನು ನಂತರ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳಲಾಗಿತ್ತು.
ವಿಡಿಯೋ ಗಮನಕ್ಕೆ ಬಂದ ನಂತರ ದೊಡ್ಡಪೇಟೆ ಪೊಲೀಸರು ಸ್ವಯಂಪ್ರೇರಿತ (Suo Motu) ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಾರ್ವಜನಿಕ ಶಾಂತಿಗೆ ಭಂಗ ತರುವ ಹೇಳಿಕೆಗಳು, ಸಮುದಾಯಗಳ ನಡುವೆ ವೈರತ್ವವನ್ನು ಉತ್ತೇಜಿಸುವುದು ಮತ್ತು ರಾಷ್ಟ್ರೀಯ ಭಾವೈಕ್ಯತೆಗೆ ಧಕ್ಕೆ ತರುವ ಆರೋಪಗಳಿಗೆ ಸಂಬಂಧಿಸಿದ ಭಾರತೀಯ ನ್ಯಾಯ ಸಂಹಿತೆಯ (ಬಿಎನ್ಎಸ್) ಸೆಕ್ಷನ್ 353(2), 196(1) ಮತ್ತು 197 ರ ಅಡಿಯಲ್ಲಿ ಪೊಲೀಸರು ದೂರು ದಾಖಲಿಸಿದ್ದಾರೆ. ಈ ಕೃತ್ಯ ಮತ್ತು ವಿಡಿಯೋದ ಹಂಚಿಕೆಯು ಶತ್ರುತ್ವವನ್ನು ಉತ್ತೇಜಿಸುವ ಮತ್ತು ಸಾರ್ವಜನಿಕ ಶಾಂತಿಯನ್ನು ಕದಡುವ ಸಾಧ್ಯತೆಯನ್ನು ಹೊಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುರುವಾರದ ವೇಳೆಗೆ, ವಿಚಾರಣೆಗಾಗಿ ನಿಹಾಲ್ ಉರುಫ್ ಕಟ್ಕುಟ್ ಉರುಫ್ ಬೆಕ್ಕುವನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಉಮರ್ ಮತ್ತು ಅಬ್ರಾಹಾರ್ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಪೊಲೀಸ್ ಕ್ರಮವು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗೆ ವ್ಯಕ್ತವಾಗಿದ್ದು, ಪ್ಯಾಲೆಸ್ತೀನ್ ಧ್ವಜವನ್ನು ಪ್ರದರ್ಶಿಸುವುದು ಕ್ರಿಮಿನಲ್ ಅಪರಾಧ ಹೇಗೆ ಆಗುತ್ತದೆ ಎಂದು ಬಳಕೆದಾರರು ಪ್ರಶ್ನಿಸುತ್ತಿದ್ದಾರೆ.
ಪ್ಯಾಲೆಸ್ತೀನ್ಗೆ ಬೆಂಬಲ ಸೂಚಿಸುವುದು ಭಾರತೀಯ ಕಾನೂನಿನ ಅಡಿಯಲ್ಲಿ ಅಪರಾಧವಲ್ಲ ಎಂದು ಹಲವು ಬಳಕೆದಾರರು ವಾದಿಸಿದ್ದಾರೆ. ಭಾರತವು ಐತಿಹಾಸಿಕವಾಗಿ ‘ದ್ವಿ-ರಾಷ್ಟ್ರ ಪರಿಹಾರ’ವನ್ನು ಬೆಂಬಲಿಸುತ್ತಾ ಬಂದಿದೆ. ಯಾಸರ್ ಅರಾಫತ್ ಅವರ ಕಾಲದಿಂದಲೂ ಪ್ಯಾಲೆಸ್ತೀನ್ನೊಂದಿಗೆ ದೀರ್ಘಕಾಲದ ರಾಜತಾಂತ್ರಿಕ ಸಂಬಂಧಗಳನ್ನು ಹೊಂದಿದೆ ಎಂಬುದನ್ನು ನೆನಪಿಸಿದ್ದಾರೆ.
“ಶೋಷಿತ ಜನರೊಂದಿಗೆ ಐಕ್ಯತೆ ಪ್ರದರ್ಶಿಸುವುದು ಯಾವಾಗ ಅಪರಾಧವಾಯಿತು? ಪ್ಯಾಲೆಸ್ತೀನ್ನರು ನರಮೇಧವನ್ನು ಎದುರಿಸುತ್ತಿರುವಾಗ, ಅವರ ಧ್ವಜವನ್ನು ಎತ್ತಿ ಹಿಡಿಯುವವರನ್ನು ಅಪರಾಧಿಗಳನ್ನಾಗಿ ಮಾಡುವುದು ಕರ್ನಾಟಕ ಪೊಲೀಸರ ಸ್ಪಂದನೆಯೇ?” ಎಂದು ಎಕ್ಸ್ನಲ್ಲಿ ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.
“ಇದು ಯಾವ ಕಾನೂನಿನ ಅಡಿಯಲ್ಲಿ ಅಪರಾಧ? ಭಾರತವು ದೀರ್ಘಕಾಲದಿಂದ ಇಸ್ರೇಲ್ ಮತ್ತು ಪ್ಯಾಲೆಸ್ತೀನ್ಗೆ ದ್ವಿ-ರಾಷ್ಟ್ರ ಪರಿಹಾರವನ್ನು ಪ್ರತಿಪಾದಿಸುತ್ತಿದೆ” ಎಂದು ಮತ್ತೋರ್ವ ಬಳಕೆದಾರರು ಪ್ರಶ್ನಿಸಿದ್ದಾರೆ.


