ನೇಪಾಳ-ಟಿಬೆಟ್ ಗಡಿ ಪ್ರದೇಶದಲ್ಲಿ ಉಂಟಾಗಿರುವ ಭೀಕರ ಪ್ರವಾಹದಿಂದಾಗಿ ಕನಿಷ್ಠ 616 ಜನರು ಸಾವನ್ನಪ್ಪಿದ್ದಾರೆ ಎಂದು ನೇಪಾಳ ಪೊಲೀಸರು ಶನಿವಾರ (ಆ.29) ತಿಳಿಸಿರುವುದಾಗಿ ಸುದ್ದಿ ಸಂಸ್ಥೆ ಎಎಫ್ಪಿ ವರದಿ ಮಾಡಿದೆ. ಶುಕ್ರವಾರ (ಆ.28) ಪೊಲೀಸರು ವರದಿ ಮಾಡಿದ್ದ 553 ಮರಣಗಳ ಸಂಖ್ಯೆಯು ಇದೀಗ ಮತ್ತಷ್ಟು ಏರಿಕೆಯಾಗಿದೆ.
ನೇಪಾಳದ ರಾಷ್ಟ್ರೀಯ ವಿಪತ್ತು ಅಪಾಯ ತಡೆ ಮತ್ತು ನಿರ್ವಹಣಾ ಪ್ರಾಧಿಕಾರವು ಎಕ್ಸ್ ಜಾಲತಾಣದಲ್ಲಿ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಭಾರತ, ಮಲೇಷ್ಯಾ, ಆಸ್ಟ್ರೇಲಿಯಾ ಮತ್ತು ಅಮೆರಿಕದಂತಹ ವಿವಿಧ ದೇಶಗಳ ನೂರಾರು ಪ್ರಜೆಗಳು ಸೇರಿ ಒಟ್ಟು 1,924 ಜನರು ಇನ್ನೂ ಪತ್ತೆಯಾಗಿಲ್ಲ. ಈ ಸಂಖ್ಯೆಯು ನಾಪತ್ತೆಯಾದವರ ಬಗ್ಗೆ ಈ ಹಿಂದೆ ನೀಡಲಾಗಿದ್ದ ಅಂದಾಜಿಗಿಂತ ದುಪ್ಪಟ್ಟಾಗಿದೆ.
ಚೀನಾದ ಸರ್ಕಾರಿ ಸ್ವಾಮ್ಯದ ಮಾಧ್ಯಮಗಳು ಏಳು ಜನರು ಸಾವನ್ನಪ್ಪಿರುವುದನ್ನು ಖಚಿತಪಡಿಸಿದ್ದು, ಇದರೊಂದಿಗೆ ಒಟ್ಟು ಮೃತರ ಸಂಖ್ಯೆ ಕನಿಷ್ಠ 623ಕ್ಕೆ ಏರಿಕೆಯಾಗಿದೆ ಎಂದು ಕೆಲ ಮಾಧ್ಯಮ ವರದಿಗಳು ಹೇಳಿವೆ. ಚೀನಾ ಭಾಗದಲ್ಲಿ 554 ಜನರು ನಾಪತ್ತೆಯಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.
ಈ ನಡುವೆ ತುರ್ತು ರಕ್ಷಣಾ ತಂಡಗಳು 623 ಶವಗಳನ್ನು ಹೊರತೆಗೆದಿದ್ದು, ಮೃತರಲ್ಲಿ ಕೆಲವು ಜನರು ನದಿಯ ಹರಿವಿಗೆ ಭಾರತದವರೆಗೆ ಕೊಚ್ಚಿಹೋಗಿರುವ ಸಾಧ್ಯತೆಯಿದೆ ಎಂದು ಎಎಫ್ಪಿ ವರದಿ ಹೇಳಿದೆ. ಇದರಿಂದಾಗಿ ಶುಕ್ರವಾರದ ವೇಳೆಗೆ ನಾಪತ್ತೆಯಾದವರ ಸಂಖ್ಯೆ 2,400ಕ್ಕೂ ಅಧಿಕವಾಗಿದೆ ಎಂದು ಹೇಳಲಾಗಿದೆ. ಮತ್ತೊಂದೆಡೆ, ನೇಪಾಳದಲ್ಲಿ ಇದುವರೆಗೆ 3,700ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ.
ನೇಪಾಳದ ಪುನರ್ನಿರ್ಮಾಣಕ್ಕೆ ಬೇಕಿದೆ ಕನಿಷ್ಠ 4 ಬಿಲಿಯನ್ ಡಾಲರ್
ವಿನಾಶಕಾರಿ ಪ್ರವಾಹಕ್ಕೆ ತುತ್ತಾಗಿರುವ ನೇಪಾಳದ ಪುನರ್ ನಿರ್ಮಾಣಕ್ಕೆ 4 ರಿಂದ 5 ಬಿಲಿಯನ್ ಡಾಲರ್ ಅಗತ್ಯವಿದೆ ಎಂದು ಹಣಕಾಸು ಅಲ್ಲಿನ ಸಚಿವ ಸ್ವರ್ಣಿಮ್ ವಾಗ್ಲೆ ಶನಿವಾರ (ಆ.29) ಹೇಳಿರುವುದಾಗಿ ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.
ಇದು ಕೇವಲ ಒಂದು ಅಂದಾಜು ಮಾತ್ರ. ನಷ್ಟ ಮತ್ತು ಹಾನಿಯ ಮೌಲ್ಯಮಾಪನ ಇನ್ನೂ ನಡೆಯುತ್ತಿದೆ ಎಂದು ವಾಗ್ಲೆ ಅವರು ಎಎಫ್ಪಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಸಮುದಾಯದಿಂದ ಯಾವುದೇ ಸಹಾಯವನ್ನು ನಿರಾಕರಿಸಿಲ್ಲ : ನೇಪಾಳ ಸ್ಪಷ್ಟನೆ
ಸ್ಥಳೀಯ ಪರಿಸರ ಪರಿಸ್ಥಿತಿಗಳು ಮತ್ತು ಕಠಿಣ ಭೂಪ್ರದೇಶಗಳ ಬಗ್ಗೆ ಉತ್ತಮ ಪರಿಚಯವಿರುವ ತನ್ನದೇ ಆದ ಭದ್ರತಾ ಪಡೆಗಳನ್ನು ಗರಿಷ್ಠ ಮಟ್ಟದಲ್ಲಿ ನಿಯೋಜಿಸಲು ಆದ್ಯತೆ ನೀಡಲು ಬಯಸುತ್ತಿರುವುದಾಗಿ ತಿಳಿಸಿರುವ ನೇಪಾಳವು, ತಾವು ಸ್ನೇಹಪರ ದೇಶಗಳು ಮತ್ತು ಅಂತಾರಾಷ್ಟ್ರೀಯ ಸಮುದಾಯದಿಂದ ಯಾವುದೇ ಸಹಾಯವನ್ನು ನಿರಾಕರಿಸಿಲ್ಲ ಎಂದು ಶುಕ್ರವಾರ ಸ್ಪಷ್ಟಪಡಿಸಿದೆ.
ರಾಷ್ಟ್ರೀಯ ಸುದ್ದಿ ಸಂಸ್ಥೆ (ಆರ್ಎಸ್ಎಸ್) ಜೊತೆ ಮಾತನಾಡಿದ ನೇಪಾಳದ ವಿದೇಶಾಂಗ ಸಚಿವ ಶಿಶಿರ್ ಖನಾಲ್, “ಅಂತಾರಾಷ್ಟ್ರೀಯ ನೆರವನ್ನು ತಿರಸ್ಕರಿಸಿಲ್ಲ. ಆದರೆ, ದೇಶದ ಸಾಮರ್ಥ್ಯ, ತಕ್ಷಣದ ಅಗತ್ಯತೆ ಮತ್ತು ನೇಪಾಳದ ವಿಶಿಷ್ಟ ಭೌಗೋಳಿಕ ಪರಿಸ್ಥಿತಿಯನ್ನು ಆಧರಿಸಿ ರಕ್ಷಣಾ ಕಾರ್ಯತಂತ್ರವನ್ನು ನಿರ್ಧರಿಸಲಾಗಿದೆ” ಎಂದು ಹೇಳಿದ್ದಾರೆ.
“ಅಪರಿಚಿತ ಭೂಪ್ರದೇಶದಲ್ಲಿ ವಿದೇಶಿ ರಕ್ಷಣಾ ತಂಡವನ್ನು ನಿಯೋಜಿಸುವುದರಿಂದ ಸಮನ್ವಯ ಮತ್ತು ತಾಂತ್ರಿಕ ನಿರ್ವಹಣೆಯಲ್ಲಿ ಜಟಿಲತೆ ಹೆಚ್ಚಾಗಬಹುದು ಹಾಗೂ ಅನಿರೀಕ್ಷಿತ ಅಪಾಯಗಳು ಎದುರಾಗಬಹುದು. ಈ ಕಾರಣದಿಂದಾಗಿ, ಲಭ್ಯವಿರುವ ರಾಷ್ಟ್ರೀಯ ಸಾಮರ್ಥ್ಯವನ್ನು ಬಳಸಿಕೊಂಡೇ ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸಲಾಗುತ್ತಿದೆ” ಎಂದಿದ್ದಾರೆ.
“ಅತ್ಯಂತ ಸಂಕೀರ್ಣವಾದ ಭೌತಿಕ ರಚನೆಗಳಿರುವ ಕಾರಣಕ್ಕಾಗಿ ವಿಶೇಷ ತಾಂತ್ರಿಕ ಕೌಶಲ್ಯಗಳ ಅವಶ್ಯಕತೆಯಿರುವ ಕಠಿಣ ಸಂದರ್ಭಗಳಲ್ಲಿ, ಅಂತಾರಾಷ್ಟ್ರೀಯ ನೆರವನ್ನು ಪಡೆದುಕೊಳ್ಳಲು ಸರ್ಕಾರವು ಸಿದ್ಧವಿದೆ” ಎಂದು ಖನಾಲ್ ಒತ್ತಿಹೇಳಿದ್ದಾರೆ.


