ಗುಜರಾತ್ನ ಅಹಮದಾಬಾದ್ನಲ್ಲಿ ಸಾಹಿತ್ಯಾಭಿಮಾನಿಗಳ ಮೇಲೆ ಭಜರಂಗದಳ ಕಾರ್ಯಕರ್ತರು ಭೀಕರ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ. ನಗರದ ಸಾರ್ವಜನಿಕ ಉದ್ಯಾನವನವೊಂದರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಮಲಾಲಾ ಯೂಸಫ್ಜೈ ಹಾಗೂ ವಿಶ್ವಪ್ರಸಿದ್ಧ ಲೇಖಕಿ ಆನ್ ಫ್ರಾಂಕ್ ಅವರ ಪುಸ್ತಕಗಳನ್ನು ಓದುತ್ತಿದ್ದ ಯುವಕ-ಯುವತಿಯರ ಗುಂಪಿನ ಮೇಲೆ ಈ ದಾಳಿ ನಡೆದಿದೆ. ಸಾಹಿತ್ಯಿಕ ಚಟುವಟಿಕೆಯಲ್ಲಿ ನಿರತರಾಗಿದ್ದ ಓದುಗರನ್ನು ಗುರಿಯಾಗಿಸಿಕೊಂಡು ನಡೆದ ಈ ಕೃತ್ಯವು ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ವಲಯದಲ್ಲಿ ತೀವ್ರ ಕಳವಳ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಹಿಂಸಾಚಾರ ನಡೆಸಿದ ಗುಂಪು, ಮಲಾಲಾ ಅವರ ಪುಸ್ತಕಗಳು “ಭಾರತ ವಿರೋಧಿ ದೃಷ್ಟಿಕೋನಗಳನ್ನು” ಹೊಂದಿವೆ ಎಂದು ಆರೋಪಿಸಿ ಈ ದಾಳಿಯನ್ನು ಸಮರ್ಥಿಸಿಕೊಳ್ಳಲು ಯತ್ನಿಸಿದೆ.
ಘಟನೆಯ ವಿವರಗಳ ಪ್ರಕಾರ, ಅಹಮದಾಬಾದ್ನ ವಸ್ತ್ರಾಪುರದಲ್ಲಿರುವ ಎಯುಡಿಎ (ಅಹಮದಾಬಾದ್ ನಗರಾಭಿವೃದ್ಧಿ ಪ್ರಾಧಿಕಾರ) ಉದ್ಯಾನವನದಲ್ಲಿ ಯುವಕರು ಮತ್ತು ವಿದ್ಯಾರ್ಥಿಗಳು ಸಾಮಾಜಿಕ ಮಾಧ್ಯಮದ ಮೂಲಕ ಒಗ್ಗೂಡಿ ಪುಸ್ತಕ ಓದುವ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಗುರುವಾರ ಸಂಜೆ 6 ಗಂಟೆಯ ಸುಮಾರಿಗೆ ಓದುಗರು ತಮ್ಮ ಪುಸ್ತಕಗಳೊಂದಿಗೆ ಸಭೆಗೆ ಸಿದ್ಧತೆ ನಡೆಸುತ್ತಿದ್ದಾಗ, ಕೇಸರಿ ಶಾಲು ಧರಿಸಿದ ಮತ್ತು ಕೈಯಲ್ಲಿ ಮರದ ಕೋಲುಗಳನ್ನು ಹಿಡಿದಿದ್ದ ಸುಮಾರು 20ಕ್ಕೂ ಹೆಚ್ಚು ಜನರ ಗುಂಪು ಸ್ಥಳಕ್ಕೆ ಧಾವಿಸಿದೆ. ಓದುಗರ ಬಳಿ ಬಂದ ಆ ಗುಂಪು, ಮಲಾಲಾ ಯೂಸಫ್ಜೈ ಅವರ ಪುಸ್ತಕವನ್ನು ಓದುತ್ತಿರುವುದನ್ನು ಕಂಡು ತೀವ್ರವಾಗಿ ಪ್ರಶ್ನಿಸಲು ಪ್ರಾರಂಭಿಸಿತು. ಮಾತಿನ ಚಕಮಕಿ ಹೆಚ್ಚಾಗುತ್ತಿದ್ದಂತೆ, ಕಾರ್ಯಕ್ರಮದ ಸಂಘಟಕ ಜಯ್ ಥಕ್ಕರ್, ಸ್ನೇಹ್ ಭಾವಸರ್ ಮತ್ತು ಸಾವನ್ ಜಲಾರಿಯಾ ಅವರ ಮೇಲೆ ಗುಂಪು ಏಕಾಏಕಿ ಲಾಠಿಗಳಿಂದ ಹಲ್ಲೆ ನಡೆಸಿದೆ. ಅಷ್ಟಕ್ಕೇ ನಿಲ್ಲದೆ, ಅಲ್ಲಿದ್ದ ಸ್ವಾತಿ ಗೋಸ್ವಾಮಿ ಎಂಬ ಯುವತಿಯ ಕೂದಲನ್ನು ಹಿಡಿದು ಎಳೆದೊಯ್ದು, ಮೈತ್ರೇಯೀ ಛಾಯಾ ಎಂಬ ಮತ್ತೊಬ್ಬ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿ ಬೆದರಿಕೆ ಹಾಕಿದ್ದಾರೆ. ಇಂತಹ ಪುಸ್ತಕಗಳನ್ನು ಓದಿದರೆ ಮುಂದೆಯೂ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಓದುಗರಿಗೆ ಬಹಿರಂಗ ಹೆದರಿಕೆ ಒಡ್ಡಿದ್ದಾರೆ.
ದಾಳಿಯ ನಂತರ ತಕ್ಷಣವೇ ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ವಸ್ತ್ರಾಪುರ ಪೊಲೀಸ್ ಸಿಬ್ಬಂದಿ ಗಾಯಾಳುಗಳನ್ನುರಕ್ಷಿಸಿ ಚಿಕಿತ್ಸೆಗಾಗಿ ಸೋಲಾ ಸಿವಿಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಹಲ್ಲೆಗೊಳಗಾದ ಉದ್ಯಮಿ ಜಯ್ ಥಕ್ಕರ್ ನೀಡಿದ ದೂರಿನ ಆಧಾರದ ಮೇಲೆ ಶುಕ್ರವಾರ ಮುಂಜಾನೆ ವಸ್ತ್ರಾಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ದೂರಿನಲ್ಲಿ ಯಾವುದೇ ಸಂಘಟನೆಯ ಹೆಸರನ್ನು ನೇರವಾಗಿ ನಮೂದಿಸದಿದ್ದರೂ, ಕೇಸರಿ ಸ್ಕಾರ್ಫ್ ಧರಿಸಿದ್ದ ಹಿರೇನ್ ರಬಾರಿ, ಜಿಮಿತ್ ರಬಾರಿ ಹಾಗೂ ಇತರ 18 ಅನಾಮಿಕ ವ್ಯಕ್ತಿಗಳನ್ನು ಆರೋಪಿಗಳೆಂದು ಉಲ್ಲೇಖಿಸಲಾಗಿದೆ.
ಇನ್ನೊಂದೆಡೆ, ಬಜರಂಗದಳದ ಮುಖಂಡ ಜ್ವಾಲಿತ್ ಮೆಹ್ತಾ ಅವರು ವೀಡಿಯೊ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ತಮ್ಮ ಸಂಘಟನೆಯ ಕಾರ್ಯಕರ್ತರು ಮಲಾಲಾ ಪುಸ್ತಕ ಓದುವುದನ್ನು ವಿರೋಧಿಸಿರುವುದು ನಿಜ ಎಂದು ಒಪ್ಪಿಕೊಂಡಿದ್ದಾರೆ. ಮಲಾಲಾ ಯೂಸಫ್ಜೈ ತಮ್ಮ ಕೃತಿಗಳಲ್ಲಿ ವಿಶೇಷವಾಗಿ ಕಾಶ್ಮೀರ ವಿಷಯಕ್ಕೆ ಸಂಬಂಧಿಸಿದಂತೆ “ಭಾರತ ವಿರೋಧಿ” ನಿಲುವುಗಳನ್ನು ವ್ಯಕ್ತಪಡಿಸಿದ್ದಾರೆ, ಹೀಗಾಗಿ ಅಂತಹ ಪುಸ್ತಕಗಳನ್ನು ಸಾರ್ವಜನಿಕವಾಗಿ ಪ್ರಚಾರ ಮಾಡುವುದನ್ನು ತಮ್ಮ ಸಂಘಟನೆ ಸಹಿಸುವುದಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.
ವಿಶೇಷವೆಂದರೆ, ಈ ಹಿಂಸಾತ್ಮಕ ಘಟನೆ ನಡೆಯುವ ಕೆಲವು ದಿನಗಳಷ್ಟೇ ಮುಂಚೆ ಅಹಮದಾಬಾದ್ನ ‘ಆನಂದ್ ನಿಕೇತನ’ ಎಂಬ ಖಾಸಗಿ ಶಾಲೆಯ ಗ್ರಂಥಾಲಯದಲ್ಲಿ ಈ ಪುಸ್ತಕಗಳಿರುವುದಕ್ಕೆ ಕೆಲವು ಪೋಷಕರು ಮತ್ತು ಬಲಪಂಥೀಯ ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದವು. ತಾಲಿಬಾನ್ ಉಗ್ರರ ಗುಂಡೇಟಿನಿಂದ ಬದುಕಿ, ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಹೋರಾಡಿದ ಮಲಾಲಾ ಅವರ ‘ಐ ಆಮ್ ಮಲಾಲಾ: ದಿ ಗರ್ಲ್ ಹೂ ಸ್ಟುಡ್ ಅಪ್ ಫಾರ್ ಎಜುಕೇಶನ್ ಅಂಡ್ ವಾಸ್ ಶಾಟ್ ಬೈ ದಿ ತಾಲಿಬಾನ್’ ಕೃತಿ ಹಾಗೂ ಎರಡನೇ ಮಹಾಯುದ್ಧದ ನಾಜಿ ಹತ್ಯಾಕಾಂಡದ ಸಮಯದಲ್ಲಿ ಕುಟುಂಬದೊಂದಿಗೆ ಅಡಗಿದ್ದು ತಮ್ಮ ಅನುಭವಗಳನ್ನು ದಾಖಲಿಸಿದ್ದ ಆನ್ ಫ್ರಾಂಕ್ ಅವರ ‘ದಿ ಡೈರಿ ಆಫ್ ಎ ಯಂಗ್ ಗರ್ಲ್’ ಪುಸ್ತಕಗಳನ್ನು ಶಾಲೆಯಿಂದ ತೆರವುಗೊಳಿಸಬೇಕೆಂದು ಒತ್ತಾಯಿಸಲಾಗಿತ್ತು. ಶಾಲೆಯ ವಿವಾದದ ಬೆನ್ನಲ್ಲೇ ಈಗ ಸಾರ್ವಜನಿಕ ಉದ್ಯಾನವನದಲ್ಲೂ ಓದುಗರ ಮೇಲೆ ಕಾಯ್ದುಕೊಂಡು ದಾಳಿ ನಡೆಸಿರುವುದು ಗುಜರಾತ್ನಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸಾಹಿತ್ಯಿಕ ಅಭಿರುಚಿಯ ಮೇಲಿನ ದಾಳಿಯಾಗಿದೆ ಎಂಬ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.


