ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಇದೀಗ ಲಕ್ಷಾಂತರ ನಾಗರಿಕರನ್ನು ಅತಂತ್ರ ಸ್ಥಿತಿಗೆ ತಳ್ಳಿದೆ.ಚುನಾವಣಾ ಆಯೋಗವು ರಾಜ್ಯದಲ್ಲಿದ್ದ ಒಟ್ಟು 5.54 ಕೋಟಿ ಮತದಾರರ ಪೈಕಿ ಸುಮಾರು 1.08 ಕೋಟಿಗೂ ಹೆಚ್ಚು ಜನರನ್ನು ‘ಎಎಸ್ಡಿಡಿಒ’ (ಗೈರುಹಾಜರಿ, ಸ್ಥಳಾಂತರ, ಮರಣ, ನಕಲಿ ಮತ್ತು ಇತರೆ) ವರ್ಗಕ್ಕೆ ಸೇರಿಸಿ ಕಡು ಆತಂಕ ಸೃಷ್ಟಿಸಿದೆ.ಇದರ ಪರಿಣಾಮವಾಗಿ ಕರಡು ಮತದಾರರ ಪಟ್ಟಿಯಲ್ಲಿ ಸಂಖ್ಯೆ 4.46 ಕೋಟಿಗೆ ಇಳಿಕೆಯಾಗಿದ್ದು, ಈ ಪೈಕಿ ಬರೋಬ್ಬರಿ 43.81 ಲಕ್ಷ ಮತದಾರರನ್ನು ಆಯೋಗವು ಅನುಮಾನದ ಕಣ್ಣಿನಿಂದ ನೋಡುತ್ತಿದೆ.
ಶುಕ್ರವಾರದಿಂದಲೇ ಈ 43.81 ಲಕ್ಷ ಮತದಾರರಿಗೆ ನೋಟಿಸ್ ಕಳುಹಿಸುವ ಪ್ರಕ್ರಿಯೆ ಆರಂಭವಾಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಒಟ್ಟು ಕರಡು ಮತದಾರರಲ್ಲಿ ಶೇ. 9.8ರಷ್ಟು ಅಂದರೆ 43.81 ಲಕ್ಷ ಮಂದಿ ನೋಟಿಸ್ ಪಡೆಯಲಿದ್ದಾರೆ.ನೋಟಿಸ್ ಪಡೆಯುವ ಪ್ರತಿಯೊಬ್ಬ ಮತದಾರನೂ ತಾನು ಈ ದೇಶದ ಸಿಂಧುವಾದ ನಾಗರಿಕ ಎಂಬುದನ್ನು ಸಾಬೀತುಪಡಿಸಲು ಸೂಕ್ತ ದಾಖಲೆಗಳ ಸಮೇತ ಚುನಾವಣಾಧಿಕಾರಿಗಳ ಕಚೇರಿ ಅಥವಾ ಅಧಿಕಾರಿಗಳ ಮುಂದೆ ಸರದಿ ಸಾಲಿನಲ್ಲಿ ನಿಲ್ಲಬೇಕಾದ ದುಸ್ಥಿತಿ ಎದುರಾಗಿದೆ.
ರಾಜಧಾನಿ ಬೆಂಗಳೂರೇ ಇಲಾಖೆಯ ಮುಖ್ಯ ಟಾರ್ಗೆಟ್!
ನೋಟಿಸ್ ಪಡೆಯಲಿರುವ ಒಟ್ಟು ಮತದಾರರಲ್ಲಿ ಅರ್ಧಕ್ಕಿಂತ ಹೆಚ್ಚು, ಅಂದರೆ ಶೇಕಡಾ 55ರಷ್ಟು (24,05,717) ಮತದಾರರು ರಾಜಧಾನಿ ಬೆಂಗಳೂರಿನವರೇ ಆಗಿದ್ದಾರೆ.
- ಬೆಂಗಳೂರು ನಗರ:9,45,798 ಮತದಾರರಿಗೆ ನೋಟಿಸ್
- ಬಿಬಿಎಂಪಿ ಉತ್ತರ: 6,12,963 ಮತದಾರರು
- ಬಿಬಿಎಂಪಿ ಕೇಂದ್ರ: 4,29,345 ಮತದಾರರು
- ಬಿಬಿಎಂಪಿ ದಕ್ಷಿಣ: 4,17,611 ಮತದಾರರು
ಇತರ ಜಿಲ್ಲೆಗಳ ಅಂಕಿ-ಅಂಶಗಳ ಚಿತ್ರಣ:
ಬೆಂಗಳೂರು ಹೊರತುಪಡಿಸಿ ರಾಜ್ಯದ ಇತರೆ ಪ್ರಮುಖ ಜಿಲ್ಲೆಗಳಲ್ಲೂ ಸಾವಿರಾರು ಮತದಾರರಿಗೆ ನೋಟಿಸ್ ತಲುಪಲಿದೆ:
- ಮಂಡ್ಯ: 1,50,269
- ದಕ್ಷಿಣ ಕನ್ನಡ: 1,50,144
- ಕೋಲಾರ: 1,42,184
- ಮೈಸೂರು: 1,28,132
- ತುಮಕೂರು: 1,11,874
- ಕಲಬುರಗಿ: 1,05,486
- ಉಡುಪಿ: 97,702
- ಚಿಕ್ಕಮಗಳೂರು: 91,612
- ಬೆಳಗಾವಿ: 84,415
- ಹಾಸನ: 79,772
ಈ ಬೃಹತ್ ನೋಟಿಸ್ ನೀಡಿಕೆ ಮತ್ತು ಪರಿಶೀಲನಾ ಪ್ರಕ್ರಿಯೆಯನ್ನು ನಿರ್ವಹಿಸಲು ರಾಜ್ಯಾದ್ಯಂತ ಒಟ್ಟು 4,262 ಸಹಾಯಕ ಚುನಾವಣಾ ನೋಂದಣಾಧಿಕಾರಿಗಳನ್ನು (AERO) ನಿಯೋಜಿಸಲಾಗಿದೆ. ಇದರಲ್ಲಿ 336 ನಿಯಮಿತ AEROಗಳು ಹಾಗೂ 3,926 ಹೆಚ್ಚುವರಿ AEROಗಳು ಕಾರ್ಯನಿರ್ವಹಿಸಲಿದ್ದಾರೆ. ಮತದಾರರು ಸಲ್ಲಿಸುವ ಆಕ್ಷೇಪಣಾ ಅರ್ಜಿ ಪರಿಶೀಲನೆ, ಹೆಸರು ಸೇರ್ಪಡೆ ಅಥವಾ ಪಟ್ಟಿಯಿಂದ ಅಳಿಸಿಹಾಕುವ ಅಂತಿಮ ಅಧಿಕಾರ ಈ ಅಧಿಕಾರಿಗಳ ಕೈಯಲ್ಲಿದೆ.
ವಿಶೇಷ ಮತದಾರರ ನೋಂದಣಿ ಅಭಿಯಾನ
SIR ಪ್ರಕ್ರಿಯೆಯಲ್ಲಿ ಹೆಸರು ಬಿಟ್ಟುಹೋದವರು, ತಿದ್ದುಪಡಿ ಬಯಸುವವರು ಹಾಗೂ ಹೊಸದಾಗಿ ಹೆಸರು ಸೇರಿಸಬೇಕಾದವರಿಗಾಗಿ ಆಯೋಗವು ವಿಶೇಷ ಜಾಗೃತಿ ಅಭಿಯಾನಗಳನ್ನು ಹಮ್ಮಿಕೊಂಡಿದೆ. ಆಗಸ್ಟ್ 29 ಮತ್ತು 30 ಹಾಗೂ ಸೆಪ್ಟೆಂಬರ್ 19 ಮತ್ತು 20ಸಾರ್ವಜನಿಕರು ಈ ದಿನಗಳಲ್ಲಿ ತಮ್ಮ ವ್ಯಾಪ್ತಿಯ ಬೂತ್ ಮಟ್ಟದ ಅಧಿಕಾರಿಗಳನ್ನು (BLO) ಸಂಪರ್ಕಿಸಿ ಅರ್ಜಿ ಹಾಗೂ ಆಕ್ಷೇಪಣೆಗಳನ್ನು ಸಲ್ಲಿಸಬಹುದು.
ಪ್ರಜಾಪ್ರಭುತ್ವದ ಅತಿ ದೊಡ್ಡ ಹಕ್ಕಾದ ‘ಮತದಾನದ ಹಕ್ಕು’ ಪಡೆಯಲು ಸಾಮಾನ್ಯ ನಾಗರಿಕರು ಅಧಿಕಾರಿಗಳ ಬಾಗಿಲಿಗೆ ಅಲೆಯುವಂತೆ ಮಾಡುತ್ತಿರುವ ಆಯೋಗದ ಈ ಧೋರಣೆ ಸಾರ್ವಜನಿಕರಲ್ಲಿ ತೀವ್ರ ಆತಂಕ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.


