ನೇಪಾಳದ ರಸುವಾ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಜಲಪ್ರಳಯಕ್ಕೆ ಬಲಿಯಾದವರ ಸಂಖ್ಯೆ 700ರ ಗಡಿ ದಾಟಿದೆ. 2,000ಕ್ಕೂ ಹೆಚ್ಚು ಜನರು ಇಂದಿಗೂ ನಾಪತ್ತೆಯಾಗಿದ್ದು, ರಕ್ಷಣಾ ಪಡೆಗಳು ಅವಿಶ್ರಾಂತವಾಗಿ ಶೋಧ ಕಾರ್ಯ ನಡೆಸುತ್ತಿವೆ. ಪ್ರಕೃತಿ ತನ್ನ ರೌದ್ರರೂಪವನ್ನು ತೋರಿ ಇಡೀ ಊರನ್ನೇ ನುಂಗಿಹಾಕುತ್ತಿದ್ದ ಆ ಭೀಕರ ಕ್ಷಣದಲ್ಲಿ, ನೈಜ ಪ್ರಪಂಚದ ನಾಯಕನೊಬ್ಬನ ಸಮಯೋಚಿತ ನಿರ್ಧಾರ ನೂರಾರು ಕುಟುಂಬಗಳ ದೀಪ ಆರಿಹೋಗದಂತೆ ಕಾಪಾಡಿದೆ. ಶಿಕ್ಷಕನೊಬ್ಬ ತಳೆದ ಒಂದು ದಿಟ್ಟ ನಿರ್ಧಾರದಿಂದ ಬರೋಬ್ಬರಿ 1,643 ಮಕ್ಕಳ ಪ್ರಾಣ ಉಳಿದಿದ್ದು, ಅವರಿಗೆ ದೇಶಾದ್ಯಂತ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ.
ಶಿಕ್ಷಕನೊಬ್ಬನ ನಿರ್ಧಾರ, ಉಳಿಸಿತು 1643 ಮಕ್ಕಳ ಪ್ರಾಣ
ತ್ರಿಶೂಲಿ ಕಣಿವೆಯಲ್ಲಿರುವ ‘ತ್ರಿಭುವನ್ ತ್ರಿಶೂಲಿ ಪ್ರೌಢಶಾಲೆ’ಯ ಮುಖ್ಯೋಪಾಧ್ಯಾಯ ರಾಜೇಂದ್ರ ದಾವಾಡಿ ಅವರಿಗೆ ಆಗಸ್ಟ್ 26, ಬುಧವಾರ ಬೆಳಿಗ್ಗೆ 9:20ಕ್ಕೆ ಗೆಳೆಯನೊಬ್ಬ ಕರೆ ಮಾಡಿ ಜಲಪ್ರಳಯದ ಮುನ್ಸೂಚನೆ ನೀಡಿದ್ದ. ಬಂಡೆ, ಹಿಮ, ಕೆಸರು ಮತ್ತು ಮಣ್ಣಿನ ರಾಶಿಯೊಂದಿಗೆ ಅಪ್ಪಳಿಸಿದ ಆ ಭೀಕರ ಪ್ರವಾಹವು ಕಟ್ಟಡಗಳು, ಸೇತುವೆಗಳು ಮತ್ತು ಜಲವಿದ್ಯುತ್ ಕೇಂದ್ರಗಳನ್ನು ತೃಣಮಾತ್ರದಲ್ಲಿ ಕೊಚ್ಚಿಹಾಕುತ್ತಿತ್ತು.

ತ್ರಿಭುವನ್ ತ್ರಿಶೂಲಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ರಾಜೇಂದ್ರ ದಾವಾಡಿ
47 ವರ್ಷದ ಇಂಗ್ಲಿಷ್ ಶಿಕ್ಷಕ ದಾವಾಡಿ ಅವರ ಹೆಗಲ ಮೇಲೆ ಆ ಶಾಲೆಯ ನೂರಾರು ಮುದ್ದು ಮಕ್ಕಳ ಹೊಣೆ ಇತ್ತು. ನದಿಯಿಂದ ಸುಮಾರು 60 ಮೀಟರ್ ಎತ್ತರದಲ್ಲಿ, ಗಟ್ಟಿಯಾದ ಕಾಂಕ್ರೀಟ್ನಿಂದ ನಿರ್ಮಿಸಲಾಗಿದ್ದ ಶಾಲೆಯು ಸುರಕ್ಷಿತವಾಗಿದೆ ಎಂದೇ ಅವರು ಆರಂಭದಲ್ಲಿ ಭಾವಿಸಿದ್ದರು.
1,643 ಮುದ್ದು ಮಕ್ಕಳ ಜೀವ ಪಾರಾಗಿದ್ದು ಹೇಗೆ?
ಆದರೆ, ಮರುಕ್ಷಣವೇ ಓಡಿಬಂದ ಮಗುವಿನ ಪೋಷಕರೊಬ್ಬರು “ನೀರು ಅತ್ಯಂತ ವೇಗವಾಗಿ ಏರುತ್ತಿದೆ!” ಎಂದು ಗಾಬರಿಯಿಂದ ಚೀರಿದಾಗ ಪರಿಸ್ಥಿತಿಯ ತೀವ್ರತೆ ದಾವಾಡಿ ಅವರಿಗೆ ಅರ್ಥವಾಯಿತು. ಕ್ಷಣವೂ ತಡಮಾಡದೆ ಅವರು ಶಾಲೆಯ ಗಂಟೆಯನ್ನು ಜೋರಾಗಿ ಬಾರಿಸಿ, ತರಗತಿಗಳನ್ನು ತಕ್ಷಣವೇ ಖಾಲಿ ಮಾಡಿಸುವಂತೆ ಶಿಕ್ಷಕರಿಗೆ ಆದೇಶಿಸಿದರು. ಶಾಲೆಗೆ ಬರುತ್ತಿದ್ದ ಬಸ್ಗಳ ಚಾಲಕರಿಗೆ ಕರೆ ಮಾಡಿ ವಾಪಸ್ ತೆರಳಲು ಸೂಚಿಸಿದರು. ಆದರೆ, ಸಂಪರ್ಕಕ್ಕೆ ಸಿಗದ ಬಸ್ಸೊಂದು ಸೇತುವೆಯ ಮೇಲೆಯೇ ಪ್ರವಾಹದ ನೀರಿಗೆ ಸಿಲುಕಿ ಕೊಚ್ಚಿಹೋಯಿತು.

ಶಾಲೆ ಇದ್ದ ಜಾಗವನ್ನು ಕೆಂಪು ಬಣ್ಣದ ವೃತ್ತದಲ್ಲಿ ಗುರುತಿಸಲಾಗಿದೆ.
ಆಪತ್ತು ಎದುರಿಗೇ ಇದೆ ಎಂದು ಅರಿತ ಮಕ್ಕಳು ದಿಕ್ಕೆಟ್ಟು ಕಂಗಾಲಾದರು. ಪ್ರಾಣಭಯದಿಂದ ತೀವ್ರ ಆತಂಕಕ್ಕೊಳಗಾಗಿ (Panic attack) ಕುಸಿದು ಬಿದ್ದ ಬಾಲಕಿಯೊಬ್ಬಳನ್ನು ತಕ್ಷಣವೇ ಬೈಕ್ನಲ್ಲಿ ಎತ್ತರದ ಪ್ರದೇಶಕ್ಕೆ ಕರೆದೊಯ್ಯಲಾಯಿತು. ಇನ್ನು ಶಾಲೆಯಲ್ಲಿದ್ದರೆ ಅಪಾಯ ನಿಶ್ಚಿತ ಎಂದು ಅರಿತ ದಾವಾಡಿ, ಮಕ್ಕಳನ್ನು ತಕ್ಷಣವೇ ಬೆಟ್ಟದ ಎತ್ತರದ ಕಡೆಗೆ ಓಡುವಂತೆ ಗಟ್ಟಿಯಾಗಿ ಕಿರುಚಿದರು. ಮಕ್ಕಳೆಲ್ಲರೂ ಬೆಟ್ಟದ ಮೇಲಿದ್ದ ಅಶ್ವತ್ಥ (ಬೋಧಿ) ಮರದ ಕೆಳಗೆ ಆಶ್ರಯ ಪಡೆದು ಉಸಿರು ಬಿಡುತ್ತಿದ್ದಂತೆಯೇ, ಪ್ರವಾಹದ ನೀರು ಆ ಶಾಲೆಯ ಇಡೀ ಕಟ್ಟಡವನ್ನೇ ನುಂಗಿಹಾಕಿತು.
ಎದೆ ಒಡೆಯುವ ಎರಡು ಸಾವುಗಳು
ದಾವಾಡಿ ಅವರ ಆ ಒಂದು ನಿರ್ಧಾರ 1,643 ಮಕ್ಕಳ ಪ್ರಾಣ ಉಳಿಸಿತಾದರೂ, ದುರದೃಷ್ಟವಶಾತ್ ಇಬ್ಬರು ಶಾಲಾ ಸಿಬ್ಬಂದಿ ಈ ದುರಂತಕ್ಕೆ ಬಲಿಯಾದರು. ಬೆಳಗಿನ ಉಪಹಾರ ತಯಾರಿಸಲು ನದಿ ದಂಡೆಯಲ್ಲಿದ್ದ ತಮ್ಮ ಕೊಠಡಿಗೆ ತೆರಳಿದ್ದ 32 ವರ್ಷದ ಸಮಾಜ ವಿಜ್ಞಾನ ಶಿಕ್ಷಕ ಸಂತೋಷ್ ಪರಿಯಾರ್ ಮತ್ತು ಶಾಲೆಯ ಬಾಗಿಲುಗಳನ್ನು ಮುಚ್ಚಲು ಹಿಂತಿರುಗಿದ್ದ ಸೇವಕ ಸುಲ್ತಾನ್ ಲಾಮಾ ಅವರು ಪ್ರವಾಹದ ಅಲೆಗಳಿಗೆ ಸಿಲುಕಿ ದುರಂತ ಅಂತ್ಯ ಕಂಡರು.
ಶಿಕ್ಷಕನಿಗೆ ಹರಿದುಬಂತು ಮೆಚ್ಚುಗೆಯ ಮಹಾಪೂರ
ಮಕ್ಕಳನ್ನು ಸಾಕ್ಷಾತ್ ಕಾಲನ ದವಡೆಯಿಂದ ಪಾರುಮಾಡಿದ ದಾವಾಡಿ ಅವರನ್ನು ಸ್ಥಳೀಯರು ‘ ರಿಯಲ್ ಹೀರೋ’ ಎಂದು ಕೊಂಡಾಡುತ್ತಿದ್ದಾರೆ. ಆದರೆ, ಒಂದು ಕಾಲದಲ್ಲಿ ಶಾಲೆ ನಿಂತಿದ್ದ ಜಾಗದಲ್ಲಿ ಈಗ ಹರಡಿರುವ ಕೆಸರಿನ ರಾಶಿಯನ್ನು ಕಣ್ಣೀರಿನಿಂದ ನೋಡುತ್ತಾ ನಿಂತಿರುವ ದಾವಾಡಿ, “ನನ್ನ ಕಣ್ಣೆದುರು ಮಕ್ಕಳಿದ್ದರು. ಆ ಕ್ಷಣದಲ್ಲಿ ಒಬ್ಬ ಶಿಕ್ಷಕನಾಗಿ ಇದಕ್ಕಿಂತ ಬೇರೆ ಏನು ಮಾಡಲು ಸಾಧ್ಯವಿತ್ತು?” ಎಂದು ಭಾವುಕರಾಗಿ ನುಡಿಯುತ್ತಾರೆ.
ಲಾಂಗ್ಟಾಂಗ್ ಲಿರುಂಗ್ ಪರ್ವತ ಶಿಖರದಿಂದ ಬೃಹತ್ ಹಿಮದ ಬಂಡೆ ಕುಸಿದು, ಟಿಬೆಟ್ ಗಡಿಯ ಸನಿಹದ ಲ್ಹೆಂಡೆ ಖೋಲಾ ನದಿಯ ಪ್ರಪಾತಕ್ಕೆ ಬಿದ್ದಿದ್ದರಿಂದ ಈ ಭೀಕರ ಜಲಪ್ರಳಯ ಸಂಭವಿಸಿತ್ತು. ಕೆನಡಾದ ಕ್ಯಾಲ್ಗರಿ ವಿಶ್ವವಿದ್ಯಾಲಯದ ಭೂವಿಜ್ಞಾನಿ ಡೇನಿಯಲ್ ಶೂಗರ್ ಅವರ ಪ್ರಕಾರ, ಕುಸಿದುಬಿದ್ದ ಹಿಮದ ರಾಶಿಯು ಸುಮಾರು 50 ಎಕರೆ ಪ್ರದೇಶದಷ್ಟಿತ್ತು! ಪ್ರಕೃತಿ ಕರುಣೆಯಿಲ್ಲದೆ ಇಡೀ ಊರನ್ನೇ ನುಂಗಿದರೂ, ಒಬ್ಬ ಶಿಕ್ಷಕನ ಸಮಯಪ್ರಜ್ಞೆ ಮತ್ತು ಕರ್ತವ್ಯ ಪ್ರಜ್ಞೆ ನೂರಾರು ತಾಯಂದಿರ ಮಡಿಲು ಬಾಲಿಯಾಗದಂತೆ ಕಾಯ್ದಿದೆ. ಒಬ್ಬ ಶಿಕ್ಷಕನ ವಾತ್ಸಲ್ಯ ಮತ್ತು ಸಾಹಸ ನೂರಾರು ಕುಟುಂಬಗಳ ದೀಪ ಆರಿಹೋಗದಂತೆ ಕಾಪಾಡಿದೆ.
ಇನ್ನೊಂದೆಡೆ, ಪ್ರವಾಹದ ರಭಸಕ್ಕೆ ಪ್ರಮುಖ ನದಿ ಸೇತುವೆಗಳು ಮತ್ತು ಪರ್ವತ ರಸ್ತೆಗಳು ಕೊಚ್ಚಿಹೋಗಿದ್ದು, ದುರಂತ ಪೀಡಿತ ದುರ್ಗಮ ಪ್ರದೇಶಗಳಿಗೆ ರಸ್ತೆ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ. ವಿದ್ಯುತ್ ಕಂಬಗಳು ಮತ್ತು ಮೊಬೈಲ್ ಟವರ್ಗಳು ಹಾನಿಗೊಳಗಾಗಿರುವುದರಿಂದ ಸಂತ್ರಸ್ತ ಪ್ರದೇಶಗಳ ಜೊತೆ ಸಂಪರ್ಕ ಸಾಧಿಸುವುದು ಕಷ್ಟಕರವಾಗಿದೆ.
ಸಾವಿರಾರು ಜನರು ಇಂದಿಗೂ ನಾಪತ್ತೆಯಾಗಿದ್ದು, ದಪ್ಪನೆಯ ಕೆಸರು ಮತ್ತು ಕಲ್ಲು-ಬಂಡೆಗಳ ರಾಶಿಯ ಅಡಿಯಲ್ಲಿ ಮೃತದೇಹಗಳನ್ನು ಶೋಧಿಸುವುದು ಅತ್ಯಂತ ವಿಳಂಬವಾಗುತ್ತಿದೆ. ತಾತ್ಕಾಲಿಕ ಶಿಬಿರಗಳ ನಿರ್ಮಾಣ ಮತ್ತು ಅಗತ್ಯ ಸಾಮಗ್ರಿಗಳ ವಿತರಣೆಗೆ ಸ್ಥಳೀಯ ಆಡಳಿತ ಹಾಗೂ ಅಂತಾರಾಷ್ಟ್ರೀಯ ನೆರವು ಸಂಸ್ಥೆಗಳು ಶ್ರಮಿಸುತ್ತಿದ್ದರೂ, ಹಿಮಾಲಯದ ಕಠಿಣ ವಾತಾವರಣವು ರಕ್ಷಣಾ ಕಾರ್ಯದ ವೇಗಕ್ಕೆ ಅಡ್ಡಿಯಾಗಿದೆ


