ಪಶ್ಚಿಮ ಬಂಗಾಳದಲ್ಲಿ ದುರ್ಗಾಪೂಜೆ ಆಚರಣೆಗೆ ಸಂಬಂಧಿಸಿದಂತೆ ಬಲಪಂಥೀಯ ಸಂಘಟನೆ ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಹೊರಡಿಸಿರುವ ಮಾರ್ಗಸೂಚಿಯು ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಪೂಜಾ ಮಂಟಪಗಳ ಸುತ್ತಮುತ್ತ ಸಸ್ಯಾಹಾರಿ ಅಲ್ಲದ ಮಾಂಸ ಮತ್ತು ಮೀನು ಆಹಾರದ ಮಾರಾಟ ಹಾಗೂ ಸೇವನೆಯನ್ನು ನಿರ್ಬಂಧಿಸಬೇಕು ಎಂಬ ವಿಎಚ್ಪಿಯ ‘ಆದೇಶ’ದ ಕುರಿತು ಜೆಡಿಯು, ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳ ನಾಯಕರು ತಮ್ಮ ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
ವಿಎಚ್ಪಿಯ ಮಾರ್ಗಸೂಚಿಗಳಿಗೆ ಪ್ರತಿಕ್ರಿಯಿಸಿದ ಜೆಡಿಯು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ಯಾಮ್ ರಜಾಕ್, ದುರ್ಗಾಪೂಜೆಯ ಸಮಯದಲ್ಲಿ ಮಾಂಸ ಮತ್ತು ಮೀನು ಮಾರಾಟವನ್ನು ತಡೆಯುವುದು ಒಳ್ಳೆಯ ವಿಷಯ. ಆದರೆ ಹಬ್ಬದ ಸಮಯದಲ್ಲಿ ನಡೆಸಲಾಗುವ ಸಾಂಪ್ರದಾಯಿಕ ಪ್ರಾಣಿ ಬಲಿ ಆಚರಣೆಗಳಿಗೆ ಈ ನಿಯಮ ಹೇಗೆ ಅನ್ವಯಿಸುತ್ತದೆ ಎಂದು ಪ್ರಶ್ನಿಸಿದ್ದಾರೆ.
“ದುರ್ಗಾಪೂಜೆಯ ಸಮಯದಲ್ಲಿ ಮಾಂಸ ಮತ್ತು ಮೀನು ಮಾರಾಟವನ್ನು ತಡೆಯುವುದು ಧನಾತ್ಮಕ ಹೆಜ್ಜೆ. ಆದರೆ, ದುರ್ಗಾಪೂಜೆಯ ಸಮಯದಲ್ಲಿ ಜನರು ಪ್ರಾಣಿ ಬಲಿ ನೀಡುತ್ತಾರೆ. ಪ್ರಾಣಿ ಬಲಿಯು ಕೆಲವು ಸಂಪ್ರದಾಯ ಹಾಗೂ ಧಾರ್ಮಿಕ ಆಚರಣೆಗಳ ಭಾಗವೂ ಆಗಿದೆ. ಇಂತಹ ಬಲಿಗಳು ನಡೆದಾಗ, ಆ ಮಾಂಸ ಏನಾಗುತ್ತದೆ? ಅದನ್ನು ಬಳಸಲು ಜನರಿಗೆ ನೀಡಲಾಗುತ್ತದೆಯೇ ಅಥವಾ ಇಲ್ಲವೇ?” ಎಂದು ರಜಾಕ್ ಕೇಳಿದ್ದಾರೆ.
ಈ ವಿಷಯವನ್ನು ವಿಎಚ್ಪಿ ಪರಿಗಣಿಸಬೇಕು ಎಂದಿರುವ ಅವರು, ಮಾಂಸ ಮತ್ತು ಮೀನು ಮಾರಾಟವನ್ನು ನಿಯಂತ್ರಿಸಲು ಬಯಸುವುದಾದರೆ, ಸಂಘಟನೆಯು ಮೊದಲು ಪ್ರಾಣಿ ಬಲಿ ಆಚರಣೆಯನ್ನು ಕೊನೆಗೊಳಿಸುವಂತೆ ಧಾರ್ಮಿಕ ಸಮುದಾಯಗಳಿಗೆ ಮನವಿ ಮಾಡಬೇಕು ಎಂದು ಹೇಳಿದ್ದಾರೆ.
ವಿಎಚ್ಪಿಯ ಈ ನಿಲುವಿಗೆ ವಿಶ್ವ ಹಿಂದೂ ಪರಿಷತ್ತಿನ ಇಂದ್ರಪ್ರಸ್ಥ ಪ್ರಾಂತ್ಯದ ಅಧ್ಯಕ್ಷೆ ಉಪಾಸನಾ ಅರೋರಾ ಬೆಂಬಲ ವ್ಯಕ್ತಪಡಿಸಿದ್ದಾರೆ. ದೆಹಲಿಯಲ್ಲಿ ಮಾತನಾಡಿದ ಅರೋರಾ, ಈ ಮಾರ್ಗದರ್ಶಿ ಸೂತ್ರಗಳನ್ನು ಧನಾತ್ಮಕವಾಗಿ ನೋಡುವುದಾಗಿ ತಿಳಿಸಿದ್ದು, ಇವು ದುರ್ಗಾಪೂಜೆಗೆ ಸಂಬಂಧಿಸಿದ ಸಾಂಪ್ರದಾಯಿಕ ಆಚರಣೆಗಳಿಗೆ ಅನುಗುಣವಾಗಿವೆ ಎಂದು ಬಣ್ಣಿಸಿದ್ದಾರೆ.
“ನಾನು ಇದನ್ನು ಧನಾತ್ಮಕವಾಗಿ ನೋಡುತ್ತೇನೆ. ಏಕೆಂದರೆ ನನ್ನ ಬಾಲ್ಯದಿಂದಲೂ ದುರ್ಗಾಪೂಜೆಯ ಸಮಯದಲ್ಲಿ ಜನರು ಸಾಮಾನ್ಯವಾಗಿ ತಮ್ಮ ಮನೆಗಳಲ್ಲಿ ಮಾಂಸ ಮತ್ತು ಮದ್ಯ ಸೇವನೆಯನ್ನು ನಿಲ್ಲಿಸುವುದನ್ನು ನೋಡಿದ್ದೇನೆ. ಈ ದಿನಗಳಲ್ಲಿ ನಾನು ನನ್ನ ಮನೆಗೆ ಈರುಳ್ಳಿಯನ್ನು ಸಹ ತರುವುದಿಲ್ಲ” ಎಂದು ಅವರು ಹೇಳಿದ್ದಾರೆ.
ಇಂತಹ ಆಚರಣೆಗಳು ಭಾರತೀಯ ಸಂಸ್ಕೃತಿಯ ಭಾಗವಾಗಿದ್ದು, ಆ ಮೌಲ್ಯಗಳನ್ನು ರಕ್ಷಿಸುವ ಮತ್ತು ಪ್ರಚಾರ ಮಾಡುವ ಜವಾಬ್ದಾರಿ ವಿಎಚ್ಪಿಗೆ ಇದೆ ಎಂದು ಅರೋರಾ ಸಮರ್ಥಿಸಿಕೊಂಡಿದ್ದಾರೆ.
ವಿಎಚ್ಪಿ ಅಧಿಕಾರವನ್ನು ಪ್ರಶ್ನಿಸಿದ ಕಾಂಗ್ರೆಸ್
ಕಾಂಗ್ರೆಸ್ ನಾಯಕ ಉದಿತ್ ರಾಜ್, ವಿಎಚ್ಪಿ ಬೇಡಿಕೆಯನ್ನು ತೀವ್ರವಾಗಿ ವಿರೋಧಿಸಿದ್ದು, ಇಂತಹ ಮಾರ್ಗದರ್ಶಿ ಸೂತ್ರಗಳನ್ನು ಹೊರಡಿಸಲು ಸಂಘಟನೆಗೆ ಇರುವ ಅಧಿಕಾರವನ್ನು ಪ್ರಶ್ನಿಸಿದ್ದಾರೆ.
“ಜನರು ಏನು ಮಾಡಬೇಕೆಂದು ನಿರ್ದೇಶಿಸಲು ಇವರಾರು? ಇವರೇನು ಚುನಾಯಿತ ಪ್ರತಿನಿಧಿಗಳೇ? ಇವರು ಗೂಂಡಾಗಳು ಮತ್ತು ಕಿಡಿಗೇಡಿಗಳು, ತಪ್ಪು ನಿರೂಪಣೆಯನ್ನು ಸೃಷ್ಟಿಸುತ್ತಿದ್ದಾರೆ. ಯಾರು ಏನು ತಿನ್ನಬೇಕು ಎಂಬುದು ಸಂವಿಧಾನಾತ್ಮಕ ಹಕ್ಕು. ಇದರ ಮೇಲೆ ಯಾವುದೇ ಸುತ್ತೋಲೆ ಹೊರಡಿಸಲು ಇವರಿಗೆ ಹಕ್ಕಿಲ್ಲ” ಎಂದು ರಾಜ್ ವಾಗ್ದಾಳಿ ನಡೆಸಿದ್ದಾರೆ.
ಬಂಗಾಳದಲ್ಲಿ ದುರ್ಗಾಪೂಜೆಗೂ ಮುನ್ನ ಶುಕ್ರವಾರ ಮಾರ್ಗಸೂಚಿ ಹೊರಡಿಸಿರುವ ವಿಎಚ್ಪಿ, ಆಯೋಜಕರು ಸಾಂಪ್ರದಾಯಿಕ ಆಚರಣೆಗಳಿಗೆ ಮರಳಬೇಕು. ಪೂಜಾ ಪೆಂಡಾಲ್ಗಳ ಸುತ್ತಮುತ್ತ ಮಾಂಸಹಾರ ಮಾರಾಟವಾಗದಂತೆ ಹಾಗೂ ಸೇವನೆಯಾಗದಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದೆ.
ಹಬ್ಬದ ಸಮಯದಲ್ಲಿ ಮಾಂಸಹಾರದ ಮೇಲೆ ಸಂಪೂರ್ಣ ನಿಷೇಧವನ್ನು ತಾನು ಕೋರುತ್ತಿಲ್ಲ ಎಂದು ಸ್ಪಷ್ಟಪಡಿಸಿರುವ ಸಂಘಟನೆಯು, ಬಂಗಾಳದಲ್ಲಿ ದುರ್ಗಾಪೂಜೆಯು ಐತಿಹಾಸಿಕವಾಗಿ ಕಟ್ಟುನಿಟ್ಟಿನ ಸಸ್ಯಾಹಾರವಾಗಿರಲಿಲ್ಲ ಎಂಬುದನ್ನು ಒಪ್ಪಿಕೊಂಡಿದೆ. ಆದರೆ, ದೇವಿಯ ಮೂರ್ತಿಯ ಪವಿತ್ರತೆಯನ್ನು ಕಾಪಾಡಿಕೊಳ್ಳಬೇಕು. ಮೂರ್ತಿಯು ಮಾಂಸಹಾರಿ ಆಹಾರದ ಸಂಪರ್ಕಕ್ಕೆ ಬಾರದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದೆ.
ಈ ಮಾರ್ಗದರ್ಶಿ ಸೂತ್ರಗಳು ಧಾರ್ಮಿಕ ಸಂಪ್ರದಾಯಗಳು, ಆಹಾರದ ಆಯ್ಕೆಗಳು, ಸಾಂಸ್ಕೃತಿಕ ಆಚರಣೆಗಳು ಹಾಗೂ ಸಾರ್ವಜನಿಕವಾಗಿ ನಡೆಯುವ ಧಾರ್ಮಿಕ ಸಂಭ್ರಮಾಚರಣೆಗಳನ್ನು ನಿಯಂತ್ರಿಸುವಲ್ಲಿ ಸಂಘಟನೆಗಳ ಪಾತ್ರದ ಕುರಿತು ವ್ಯಾಪಕ ಚರ್ಚೆಗೆ ಕಾರಣವಾಗಿವೆ.


