Homeಮುಖಪುಟನ್ಯೂಯಾರ್ಕ್‌ನಲ್ಲಿ ಮೋಹನ್ ಭಾಗವತ್ ಕಾರ್ಯಕ್ರಮ: RSS ಮತ್ತು ಸಂಸ್ಥೆಯ ನಂಟಿನ ರಹಸ್ಯ ಬಯಲು

ನ್ಯೂಯಾರ್ಕ್‌ನಲ್ಲಿ ಮೋಹನ್ ಭಾಗವತ್ ಕಾರ್ಯಕ್ರಮ: RSS ಮತ್ತು ಸಂಸ್ಥೆಯ ನಂಟಿನ ರಹಸ್ಯ ಬಯಲು

- Advertisement -
- Advertisement -

ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಸರಸಂಘಚಾಲಕ ಮೋಹನ್ ಭಾಗವತ್ ಅವರು ಶನಿವಾರ ನ್ಯೂಯಾರ್ಕ್‌ನ ಪ್ರಸಿದ್ಧ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ಆಯೋಜಿಸಲಾಗಿರುವ ‘ಯೂನಿವರ್ಸಲ್ ಒನ್‌ನೆಸ್ ಸೆಲೆಬ್ರೇಷನ್ಸ್’ ಎಂಬ ಬೃಹತ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ವರದಿಗಳ ಪ್ರಕಾರ, ಈ ಕಾರ್ಯಕ್ರಮವನ್ನು ‘ಅಮೆರಿಕನ್ ಹಿಂದೂಸ್ ಫಾರ್ ಎಂಗೇಜ್‌ಮೆಂಟ್ ಅಂಡ್ ಡೈಲಾಗ್’ (AHEAD) ಎಂಬ ಹೊಸ ಹಾಗೂ ಹೆಚ್ಚು ಪರಿಚಿತವಲ್ಲದ ಸಂಸ್ಥೆಯು ಆಯೋಜಿಸುತ್ತಿದೆ ಎಂಬುದಾಗಿ ತಿಳಿದುಬಂದಿದೆ.

ತನ್ನ ವೆಬ್‌ಸೈಟ್‌ನಲ್ಲಿ ಎಎಚ್‌ಇಎಡಿ (AHEAD) ಸಂಸ್ಥೆಯು ತಾನೊಂದು ಲಾಭರಹಿತ, ಪಕ್ಷಪಾತವಿಲ್ಲದ ಧೋರಣೆ ಹೊಂದಿರುವ ಹಾಗೂ ಸರ್ವಸಮ್ಮತ ಭವಿಷ್ಯ ರೂಪಿಸುವ ಉದ್ದೇಶದೊಂದಿಗೆ ಧಾರ್ಮಿಕ ಸೌಹಾರ್ದತೆಯ ಸಂವಾದಗಳನ್ನು ನಡೆಸುವುದು ತನ್ನ ಮುಖ್ಯ ಗುರಿ ಎಂದು ಬರೆದುಕೊಂಡಿದೆ.

ಈ ವೆಬ್‌ಸೈಟ್‌ನಲ್ಲಿ RSS ಹೆಸರು ಅಥವಾ ಈ ಬಲಪಂಥೀಯ ರಾಷ್ಟ್ರೀಯತಾವಾದಿ ಸಂಘಟನೆಯೊಂದಿಗಿನ ಯಾವುದೇ ನೇರ ಸಂಪರ್ಕವನ್ನು ಎಲ್ಲೂ ಉಲ್ಲೇಖಿಸಿಲ್ಲ. ಆದರೆ, ಈ ಎಎಚ್‌ಇಎಡಿ ಸಂಸ್ಥೆಯ ಮೂಲ ಸಂಸ್ಥಾಪಕರನ್ನು ಪರಿಶೀಲಿಸಿದಾಗ, ಇದು RSSನೊಂದಿಗೆ ಮೊದಲಿನಿಂದಲೂ ನಂಟು ಹೊಂದಿರುವುದು ಎದ್ದು ಕಾಣುತ್ತದೆ. ಆರ್‌ಎಸ್‌ಎಸ್ ಕೇವಲ ಭಾರತದಲ್ಲಿ (ಭಾರತ) ಮಾತ್ರ ಕೆಲಸ ಮಾಡುತ್ತದೆ ಮತ್ತು ಸಂಘವು ವಿದೇಶಿ ಸಂಸ್ಥೆಗಳನ್ನು ನೇರವಾಗಿ ಅಥವಾ ಪರೋಕ್ಷವಾಗಿ ನಿಯಂತ್ರಿಸುವುದಿಲ್ಲ ಎಂದು ಆರ್‌ಎಸ್‌ಎಸ್ ಪದೇ ಪದೇ ಪ್ರತಿಪಾದಿಸುತ್ತಾ ಬಂದಿರುವ ಹಿನ್ನೆಲೆಯಲ್ಲಿ ಈ ಅಂಶವು ಮಹತ್ವದ ಸತ್ಯವನ್ನು ಬಯಲಿಗೆಳೆದಿದೆ.

ಎಎಚ್‌ಇಎಡಿ ಸಂಸ್ಥೆಯು ಮೇ 2025 ರಲ್ಲಿ ನೋಂದಣಿಯಾಗಿದ್ದು, ಸೆಪ್ಟೆಂಬರ್ ವೇಳೆಗೆ ತೆರಿಗೆ ವಿನಾಯಿತಿ ಪಡೆದುಕೊಂಡಿದೆ. ‘ದಿ ಕ್ವಿಂಟ್’ ಪಡೆದುಕೊಂಡ ಇದರ ನೋಂದಣಿ ದಾಖಲೆಗಳ ಪ್ರಕಾರ, ಖಂಡೇರಾವ್ ಕಂದ್ ಎಂಬ ವ್ಯಕ್ತಿ ಈ ಸಂಸ್ಥೆಯ ಪ್ರಮುಖ ಸಂಘಟಕರಾಗಿದ್ದಾರೆ.

ಕಂದ್ ಅವರು ‘ಫೌಂಡೇಶನ್ ಫಾರ್ ಇಂಡಿಯಾ ಅಂಡ್ ಇಂಡಿಯನ್ ಡೈಸ್ಪೋರಾ ಸ್ಟಡೀಸ್’ (FIIDS) ಎಂಬ ಮತ್ತೊಂದು ಲಾಭರಹಿತ ಸಂಸ್ಥೆಯ ಸಂಸ್ಥಾಪಕ ಮತ್ತು ಅಧ್ಯಕ್ಷರಾಗಿದ್ದು, ಈ ಸಂಸ್ಥೆಯು ಯುಎಸ್ ಕ್ಯಾಪಿಟಲ್‌ನಲ್ಲಿ ಇತ್ತೀಚೆಗೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರನ್ನು ಒಳಗೊಂಡಂತೆ ಭಾರತ-ಅಮೆರಿಕ ಸಂಬಂಧ ಬಲಪಡಿಸುವ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುತ್ತದೆ.

ಈ ಸಂಸ್ಥೆಯು ಕಳೆದ ವರ್ಷ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದ ಆರ್‌ಎಸ್‌ಎಸ್ ಶತಮಾನೋತ್ಸವ ಕಾರ್ಯಕ್ರಮಕ್ಕೆ ವಾಷಿಂಗ್ಟನ್ ಪೋಸ್ಟ್ ಅಂಕಣಕಾರರೊಬ್ಬರ ಪ್ರವಾಸಕ್ಕೆ ಸಹ-ಪ್ರಾಯೋಜಕತ್ವ ನೀಡಿತ್ತು. ತಮ್ಮ ಜೀವನದ ಬಹುಪಾಲು ಸಮಯ ಆರ್‌ಎಸ್‌ಎಸ್ ಜೊತೆ ನಿಕಟ ಸಂಬಂಧ ಹೊಂದಿದ್ದ ಕಂದ್, 2015 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಭೇಟಿಯ ಆಯೋಜನೆಯಲ್ಲೂ ಭಾಗಿಯಾಗಿದ್ದರು.

ಆರ್‌ಎಸ್‌ಎಸ್‌ನಲ್ಲಿದ್ದ ಜೊತೆಗೆ ಕಂದ್ ಅವರು ಹಿಂದೂ ಸ್ವಯಂಸೇವಕ ಸಂಘದ (HSS) ಅಧಿಕಾರಿಯೂ ಆಗಿದ್ದರು. ಈ ಎಚ್‌ಎಸ್‌ಎಸ್ ಅನ್ನು ಆರ್‌ಎಸ್‌ಎಸ್‌ನ ಅಂತಾರಾಷ್ಟ್ರೀಯ ಘಟಕ ಎಂದೇ ವ್ಯಾಪಕವಾಗಿ ಗುರುತಿಸಲಾಗುತ್ತದೆ. ಆದರೆ ಇದು ಸ್ವತಂತ್ರ ಸ್ವಯಂಸೇವಕ ಗುಂಪು ಎಂದು ಎಚ್‌ಎಸ್‌ಎಸ್ ಪ್ರತಿಪಾದಿಸುತ್ತದೆ. ಇನ್ನು ಎಚ್‌ಎಸ್‌ಎಸ್ ಹಿಂದೆ ಹಲವು ಕಾರ್ಯಕ್ರಮಗಳಿಗೆ ಭಾಗವತ್ ಅವರನ್ನು ಆಹ್ವಾನಿಸಿ ಆಯೋಜಿಸಿತ್ತು. ಹಳೆಯ ವರದಿಗಳ ಪ್ರಕಾರ, ಕಂದ್ ಅವರು ಭಾರತದ ಚುನಾವಣೆಗಳ ಸಂದರ್ಭದಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ತಂತ್ರ ರೂಪಿಸುವ ಚರ್ಚೆಗಳಲ್ಲಿ ಭಾಗಿಯಾಗಿದ್ದರು. ಇತ್ತೀಚೆಗೆ ಸೆಪ್ಟೆಂಬರ್ 2024 ರಲ್ಲಿ ನ್ಯೂಯಾರ್ಕ್‌ನಲ್ಲಿ ಪ್ರಧಾನಿ ಮೋದಿಯವರನ್ನು ಸ್ವಾಗತಿಸಿದ್ದ ಕಂದ್, ಹಲವು ಬಿಜೆಪಿ ನಾಯಕರೊಂದಿಗಿನ ತಮ್ಮ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು.

ನೋಂದಣಿ ದಾಖಲೆಗಳ ಪ್ರಕಾರ, ಈ ವರ್ಷದ ಮಾರ್ಚ್‌ನಲ್ಲಿ ಕಂದ್ ಅವರು ಎಎಚ್‌ಇಎಡಿ ಸಂಸ್ಥೆಯ ಪ್ರಮುಖ ಸಂಘಟಕ ಹುದ್ದೆಯಿಂದನ್ನ ತೊರೆದಿದ್ದು, ಹರೀಶ್ ಕಂದ್‌ಪಾಲ್ ಎಂಬುವವರು ಆ ಹುದ್ದೆಯನ್ನು ವಹಿಸಿಕೊಂಡಿದ್ದಾರೆ. ಆದರೆ ಕಂದ್‌ಪಾಲ್ ಕೂಡ ಎಫ್‌ಐಐಡಿಎಸ್ (FIIDS) ಸಂಸ್ಥೆಯೊಂದಿಗೆ ಸಂಪರ್ಕ ಹೊಂದಿದ್ದಾರೆ.

ತೆರಿಗೆ ಸಲ್ಲಿಕೆಯ ದಾಖಲೆಗಳ ಪ್ರಕಾರ, ಎಎಚ್‌ಇಎಡಿ ಸಂಸ್ಥೆಯು ಸುದೇಶ್ ಅಗರ್ವಾಲ್, ನರೇಶ್ ರಾಜಣ್ಣ ಮತ್ತು ರಸಿತಾ ವಿಷ್ಣುರಾಮ್ ಎಂಬ ಮೂವರು ನಿರ್ದೇಶಕರನ್ನು ಹೊಂದಿದೆ. ವಿಷ್ಣುರಾಮ್ ಅವರು ಬಿಜೆಪಿ ಪದಾಧಿಕಾರಿ ಹಿತೇಶ್ ಜೈನ್ ನೇತೃತ್ವದ, ಮೋದಿ ಪರ ಡಿಜಿಟಲ್ ಕಮ್ಯುನಿಕೇಷನ್ಸ್ ಪ್ಲಾಟ್‌ಫಾರ್ಮ್ ಆದ ಬ್ಲೂಕ್ರಾಫ್ಟ್ ಡಿಜಿಟಲ್ ಫೌಂಡೇಶನ್‌ನ ‘ವಿಕಸಿತ ಭಾರತ ಫೆಲೋಶಿಪ್’ನ ಹಿರಿಯ ಫೆಲೋ ಆಗಿದ್ದಾರೆ. ಈ ಫೆಲೋಶಿಪ್ ಅನ್ನು 2024 ರಲ್ಲಿ ಮೋದಿಯವರ ಹುಟ್ಟುಹಬ್ಬದಂದು ದೇಶ-ವಿದೇಶಗಳ ತಜ್ಞರು ಭಾರತದ ಕುರಿತು ಸಕಾರಾತ್ಮಕ ನಿರೂಪಣೆ ನಿರ್ಮಿಸಲು ಕೊಡುಗೆ ನೀಡುವ ಉದ್ದೇಶದಿಂದ ಪ್ರಾರಂಭಿಸಲಾಗಿತ್ತು. ಈ ಎಲ್ಲಾ ವಿಷಯಗಳ ಕುರಿತು ಪ್ರತಿಕ್ರಿಯೆ ಕೋರಿ ‘ದಿ ಕ್ವಿಂಟ್’ ಸಂಸ್ಥೆಯು ಕಂದ್, ಎಫ್‌ಐಐಡಿಎಸ್, ಕಂದ್‌ಪಾಲ್ ಮತ್ತು ಎಎಚ್‌ಇಎಡಿ ಅವರನ್ನು ಸಂಪರ್ಕಿಸಿದ್ದು, ಅವರಿಂದ ಪ್ರತಿಕ್ರಿಯೆ ಬಂದ ತಕ್ಷಣ ವರದಿಯನ್ನು ನವೀಕರಿಸಲಾಗುವುದು ಎಂದು ತಿಳಿಸಿದೆ.

ಆರ್‌ಎಸ್‌ಎಸ್ ಸಂಸ್ಥೆಯು ಅಮೆರಿಕದ ಕಾಂಗ್ರೆಸ್‌ನಲ್ಲಿ ತನ್ನ ಪರವಾಗಿ ಲಾಬಿ ಮಾಡಲು ವಾಷಿಂಗ್ಟನ್ ಡಿಸಿಯ ಪ್ರಮುಖ ಲಾಬಿಯಿಂಗ್ ಸಂಸ್ಥೆಯೊಂದನ್ನು ನೇಮಿಸಿಕೊಂಡಿದೆ ಎಂದು ‘ಪ್ರಿಸಮ್’ ನಡೆಸಿದ ತನಿಖೆಯಲ್ಲಿ ಬಹಿರಂಗವಾದ ಕೆಲವೇ ತಿಂಗಳುಗಳಲ್ಲಿ ಈ ಕಾರ್ಯಕ್ರಮ ಆಯೋಜನೆಯಾಗಿದೆ. ಈ ವಿಚಾರ ಬಹಿರಂಗಗೊಂಡ ನಂತರವೂ ಆರ್‌ಎಸ್‌ಎಸ್‌ನ ಸುನಿಲ್ ಅಂಬೇಕರ್ ಅವರು ತಾವು ಯಾವುದೇ ಲಾಬಿಯಿಂಗ್ ಸಂಸ್ಥೆಯನ್ನು ನೇಮಿಸಿಕೊಂಡಿಲ್ಲ ಮತ್ತು ತಾವು “ಭಾರತದಲ್ಲಿ ಮಾತ್ರ ಕೆಲಸ ಮಾಡುತ್ತೇವೆ” ಎಂದು ಸ್ಪಷ್ಟನೆ ನೀಡಿದ್ದರು.

ಆದರೆ, ಮೋದಿ ಮತ್ತು ಭಾಗವತ್ ಅವರ ಈ ಕಾರ್ಯಕ್ರಮವು ಜಾಗತಿಕ ಮಟ್ಟದಲ್ಲಿ ಆರ್‌ಎಸ್‌ಎಸ್‌ನ ಅಸ್ತಿತ್ವವನ್ನು ಹಾಗೂ ಅಂತಾರಾಷ್ಟ್ರೀಯ ರಾಜಕೀಯದಲ್ಲಿ ಅದರ ಪ್ರಭಾವವನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿದೆ ಎಂದು ವಿಮರ್ಶಕರು ಕಳವಳ ವ್ಯಕ್ತಪಡಿಸಿದ್ದಾರೆ. ಆರ್‌ಎಸ್‌ಎಸ್ ಮತ್ತು ಬಿಜೆಪಿ ನಿರಂತರವಾಗಿ ಜಾಗತಿಕ ಪ್ರವಾಸಗಳನ್ನು ಮಾಡುತ್ತವೆ ಎಂಬುದು ನಮಗೆ ತಿಳಿದಿದೆ. ಪ್ರಜಾಪ್ರಭುತ್ವವಾದಿ ಭಾರತೀಯರು ಮತ್ತು ಹಿಂದುತ್ವ ಪರ ಭಾರತೀಯರ ನಡುವಿನ ಸದ್ಧಾಂತಿಕ ಸಮರಕ್ಕೆ ಭಾರತಕ್ಕಿಂತಲೂ ಅನಿವಾಸಿ ಭಾರತೀಯರೇ (ಡೈಸ್ಪೋರಾ) ಪ್ರಮುಖ ರಂಗವಾಗಿದ್ದಾರೆ ಎಂದು ಯುಎಸ್ ಮೂಲದ ‘ಹಿಂದೂಸ್ ಫಾರ್ ಹ್ಯೂಮನ್ ರೈಟ್ಸ್’ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕಿ ಸುನಿತಾ ವಿಶ್ವನಾಥ್ ಹೇಳಿದ್ದಾರೆ.

ಇನ್ನು ಕೆಲವರು ಈ ಕಾರ್ಯಕ್ರಮ ಮತ್ತು ಅದರ ಸಂಘಟಕರ ಪಾರದರ್ಶಕತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. “ಆರ್‌ಎಸ್‌ಎಸ್ ‘ಯೂನಿವರ್ಸಲ್ ಒನ್‌ನೆಸ್’ (ಸರ್ವವ್ಯಾಪಿ ಏಕತೆ) ಹೆಸರಿನಲ್ಲಿ ತನ್ನ ಇಮೇಜ್ ಸರಿಪಡಿಸಿಕೊಳ್ಳಲು ಇಂತಹ ವೇದಿಕೆಯನ್ನು ಬಳಸಿಕೊಳ್ಳುತ್ತಿದ್ದರೆ, ಇತ್ತ ಅಲ್ಪಸಂಖ್ಯಾತರು ತಮ್ಮ ಜೀವ ತೆತ್ತು ಬೆಲೆ ತೆರುತ್ತಿದ್ದಾರೆ. ಹೀಗಾಗಿ ಈ ಕಾರ್ಯಕ್ರಮ ಆಕ್ಷೇಪಾರ್ಹವಾಗಿದೆ ಎಂದು ‘ಇಂಡಿಯನ್ ಅಮೆರಿಕನ್ ಮುಸ್ಲಿಂ ಕೌನ್ಸಿಲ್’ ಮಂಡಳಿಯ ಸದಸ್ಯೆ ಸಫಾ ಅಹಮದ್ ಹೇಳಿದ್ದಾರೆ.

ಹಿಂದುತ್ವ ರಾಷ್ಟ್ರೀಯತೆಯ ಬೆಳವಣಿಗೆಯನ್ನು ಎದುರಿಸಲು ಯತ್ನಿಸುತ್ತಿರುವ ಒಕ್ಕೂಟವಾದ ‘ಸವೇರಾ’ದ ಭಾಗವಾಗಿ ಈ ಕೌನ್ಸಿಲ್ ಕೆಲಸ ಮಾಡುತ್ತಿದೆ. ಎಎಚ್‌ಇಎಡಿ ಸಂಸ್ಥೆಯು ಅಮೆರಿಕದಲ್ಲಿ ಆರ್‌ಎಸ್‌ಎಸ್‌ನ ಮತ್ತೊಂದು ಮುಖವಾಡದ ಸಂಸ್ಥೆಯಾಗಿದೆ ಎಂದು ಸವೇರಾ ಬಿಡುಗಡೆ ಮಾಡಿದ ವರದಿ ಸೂಚಿಸಿದೆ. “ಆರ್‌ಎಸ್‌ಎಸ್ ಕೇವಲ ಭಾರತದಲ್ಲಷ್ಟೇ ಕೆಲಸ ಮಾಡುತ್ತದೆ ಎಂದಾದಲ್ಲಿ ಮೋದಿ ಮತ್ತು ಮೋಹನ್ ಭಾಗವತ್ ಇಲ್ಲಿಗೆ ಏಕೆ ಬಂದಿದ್ದಾರೆ? ಅವರ ಸಂಘಟನೆಯು ಮೊದಲು ಅಮೆರಿಕನ್ ಕಾಂಗ್ರೆಸ್‌ನಲ್ಲಿ ರಹಸ್ಯವಾಗಿ ಲಾಬಿ ಮಾಡಲು ಯತ್ನಿಸಿತು, ಮತ್ತು ಈಗ ಅಮೆರಿಕದಲ್ಲಿ ಆರ್‌ಎಸ್‌ಎಸ್‌ನ ಕಾರ್ಯಸೂಚಿಯನ್ನು ಜಾರಿಗೆ ತರಲು ಶೆಲ್ ಸಂಸ್ಥೆಗಳ ಮೂಲಕ ಪ್ರಚಾರ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ ಎಂದು ಅಹಮದ್ ಆರೋಪಿಸಿದ್ದಾರೆ.

ಕಾರ್ಯಕ್ರಮ ನಡೆಯುವ ಕೆಲವೇ ದಿನಗಳ ಹಿಂದೆ ನ್ಯೂಯಾರ್ಕ್ ನಗರದ ಮೇಯರ್ ಝೋಹ್ರಾನ್ ಮಮ್ದಾನಿ ಅವರು ತಾವು ಈ ಕಾರ್ಯಕ್ರಮವನ್ನು ಬೆಂಬಲಿಸುವುದಿಲ್ಲ, ಆದರೆ ಅದನ್ನು ತಡೆಯುವುದು ತಮ್ಮ ಅಧಿಕಾರ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿದ್ದರು. ಬಹಿಷ್ಕಾರ ಮತ್ತು ವಿಭಜಕ ದೃಷ್ಟಿಕೋನವನ್ನು ಹೊಂದಿರುವ ಚಳವಳಿಯ ಬೆಳವಣಿಗೆಯನ್ನು ನೋಡುವುದು ತೀವ್ರ ಕಳವಳಕಾರಿ ಎಂದು ಮಮ್ದಾನಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು. ಇದರ ಮರುದಿನವೇ ಎಕ್ಸ್ (ಟ್ವಿಟರ್) ಸಂಸ್ಥೆಯು ಎಎಚ್‌ಇಎಡಿ ಖಾತೆಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿತ್ತು. ಖಾತೆ ಮರುಸ್ಥಾಪನೆಯಾದ ನಂತರ ಎಎಚ್‌ಇಎಡಿ ಸಂಸ್ಥೆಯು, ನಮ್ಮ ವಿರೋಧಿಗಳು ಎಕ್ಸ್ ಅಲ್ಗಾರಿದಮ್ ದುರ್ಬಳಕೆ ಮಾಡಿಕೊಂಡು ನಮ್ಮ ಖಾತೆಯನ್ನು ಬ್ಲಾಕ್ ಮಾಡಲು ಯತ್ನಿಸಿದ್ದರು ಎಂದು ಪೋಸ್ಟ್ ಮಾಡಿತ್ತು.

ಮತ್ತೊಂದೆಡೆ, ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ಮೇಲಿನ ಅಮೆರಿಕದ ಆಯೋಗವು (USCIRF) ಕೂಡ ಈ ಕಾರ್ಯಕ್ರಮದ ಕುರಿತು ಕಳವಳ ವ್ಯಕ್ತಪಡಿಸಿ ಹೇಳಿಕೆ ಬಿಡುಗಡೆ ಮಾಡಿದೆ. ಭಾರತದಲ್ಲಿ ಬಿಜೆಪಿ ಸರ್ಕಾರವು ಆರ್‌ಎಸ್‌ಎಸ್‌ನ ಹಿಂದುತ್ವ ಸಿದ್ಧಾಂತಕ್ಕೆ ಪೂರಕವಾದ ಹಾಗೂ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧ ತಾರತಮ್ಯ ಮಾಡುವ ನೀತಿಗಳನ್ನು ಜಾರಿಗೆ ತಂದಿದೆ ಎಂದು ಅದು ಹೇಳಿದೆ.

ಯುಎಸ್‌ಸಿಐಆರ್‌ಎಫ್ ಎಂಬುದು ವಿಶ್ವದಾದ್ಯಂತ ಧಾರ್ಮಿಕ ಸ್ವಾತಂತ್ರ್ಯವನ್ನು ಮೇಲ್ವಿಚಾರಣೆ ಮಾಡುವ ಮತ್ತು ಶಿಫಾರಸುಗಳನ್ನು ಮಾಡುವ ಯುಎಸ್ ಕಾಂಗ್ರೇಸ್‌ನ ಸ್ವತಂತ್ರ, ದ್ವಿಪಕ್ಷೀಯ ಸರ್ಕಾರಿ ಸಂಸ್ಥೆಯಾಗಿದೆ. ಸರ್ಕಾರವು ತನ್ನ ಗಡಿಗಳನ್ನು ಮೀರಿಯೂ ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ದಮನಕಾರಿ ಕೃತ್ಯಗಳಲ್ಲಿ ತೊಡಗಿಸಿಕೊಂಡಿದೆ, ಉತ್ತರ ಅಮೆರಿಕದಲ್ಲಿ ಸಿಖ್ ಸಮುದಾಯದ ಸದಸ್ಯರ ಮೇಲಿನ ಹತ್ಯೆ ಮತ್ತು ಹತ್ಯೆಯ ಯತ್ನಗಳು ಇದಕ್ಕೆ ಉದಾಹರಣೆ ಎಂದು ಆಯೋಗವು ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದೆ.

Sourec: The Quint

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಯೆಮನ್ | ಸಂಪೂರ್ಣ ರೆಡ್ ಸೀ ಕರಾವಳಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಹೌತಿ ಪಡೆ : ಮಂದೇಬ್ ಜಲಸಂಧಿ ಮೇಲೆಯೂ ಹಿಡಿತ ಸಾಧಿಸಿರುವುದಾಗಿ ವರದಿ

ಮಹತ್ವದ ಬೆಳವಣಿಗೆಯಲ್ಲಿ, ಹೌತಿ ಬಂಡುಕೋರರು ಯೆಮನ್‌ನ ಇಡೀ ಕೆಂಪು ಸಮುದ್ರದ (ರೆಡ್ ಸೀ) ಕರಾವಳಿಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಇರಾನ್ ಬೆಂಬಲಿತ ಹೌತಿ ಸಶಸ್ತ್ರ ಪಡೆಗಳು ಯೆಮನ್ ಸರ್ಕಾರದ ನಿಯಂತ್ರಣದಲ್ಲಿದ್ದ...

ಭಾರತದ ಚುನಾವಣಾ ಪ್ರಕ್ರಿಯೆಯು ಅತ್ಯಂತ ಪಾರದರ್ಶಕವಾಗಿದೆ: ಸಿಇಸಿ ಜ್ಞಾನೇಶ್ ಕುಮಾರ್

ಭಾರತದ ಚುನಾವಣಾ ಪ್ರಕ್ರಿಯೆಯು ವಿಶ್ವದಲ್ಲೇ ಅತ್ಯಂತ ಪಾರದರ್ಶಕವಾದದ್ದು ಎಂದು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ (ಸೆ.11) ಹೇಳಿದ್ದಾರೆ. ಗುಜರಾತ್ ವಿಶ್ವವಿದ್ಯಾಲಯದ ಅಟಲ್ ಕಲಾಂ ಸಭಾಂಗಣದಲ್ಲಿ ನಡೆದ 'ಮತಗಟ್ಟೆ ಮಟ್ಟದ ಅಧಿಕಾರಿಗಳೊಂದಿಗೆ...

SIR: 43ಲಕ್ಷದಲ್ಲಿ ನೋಟಿಸ್ ತಲುಪಿರುವುದು 25ಲಕ್ಷ ಜನರಿಗೆ ಮಾತ್ರ, ಬಾಕಿ 18ಲಕ್ಷ ಜನರಿಗೆ ಇನ್ನು ನೋಟಿಸ್ಸೇ ತಲುಪಿಲ್ಲ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಆಡಳಿತಾತ್ಮಕ ಗೊಂದಲ ಹಾಗೂ ಯಾಂತ್ರಿಕ ಲೋಪಗಳ ಜಾಲದಲ್ಲಿ ಸಿಲುಕಿಬಿದ್ದಿದೆ. ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಬಿಡುಗಡೆ ಮಾಡಿರುವ ಇತ್ತೀಚಿನ ದತ್ತಾಂಶವೇ ಆಯೋಗದ...

ಕಾಳಿಘಾಟ್‌ನಲ್ಲಿ ‘ಮೀನಿನ ಪ್ರಸಾದ’ ಸ್ವೀಕರಿಸಿದ ಸುವೇಂದು ಅಧಿಕಾರಿ; ಬಾಗೇಶ್ವರ್ ಬಾಬಾ ‘ಮಾಂಸಾಹಾರ’ ವಿವಾದಕ್ಕೆ ಹೊಸ ತಿರುವು!

ದುರ್ಗಾ ಪೂಜೆ ಸಂದರ್ಭದಲ್ಲಿ ಮೀನು–ಮಾಂಸ ಸೇವನೆ ಕುರಿತು ಬಾಗೇಶ್ವರ್ ಧಾಮದ ಧೀರೇಂದ್ರ ಕೃಷ್ಣ ಶಾಸ್ತ್ರಿ ನೀಡಿರುವ ಹೇಳಿಕೆ ಪಶ್ಚಿಮ ಬಂಗಾಳದಲ್ಲಿ ವಿವಾದಕ್ಕೆ ಕಾರಣವಾಗಿರುವ ನಡುವೆಯೇ, ಮುಖ್ಯಮಂತ್ರಿ ಸುವೇಂದು ಅಧಿಕಾರಿ ಕಾಳಿಘಾಟ್ʼನ ಕಾಳಿ ದೇವಸ್ಥಾನದಲ್ಲಿ...

ಎಸ್‌ಐಆರ್‌: ಹೈದರಾಬಾದ್, ಸಿಕಂದರಾಬಾದ್‌ನಲ್ಲಿ ಲಕ್ಷಾಂತರ ಮತದಾರರ ಹೆಸರು ಅಳಿಸುವಿಕೆ; 2029ರ ಚುನಾವಣೆಗೂ ಮುನ್ನ ಗಂಭೀರ ಆತಂಕ

ಹೈದರಾಬಾದ್: ತೆಲಂಗಾಣದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಡಿ ಮತದಾರರ ಪಟ್ಟಿಯಿಂದ ಭಾರೀ ಪ್ರಮಾಣದಲ್ಲಿ ಹೆಸರುಗಳನ್ನು ತೆಗೆದುಹಾಕಲಾಗಿರುವುದು ಮುಂದಿನ ಚುನಾವಣೆಯ ರಾಜಕೀಯ ಲೆಕ್ಕಾಚಾರಗಳ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯನ್ನು ಹುಟ್ಟುಹಾಕಿದೆ....

9/11 ದಾಳಿಗೆ 25 ವರ್ಷ: ‘ಭಯೋತ್ಪಾದನೆ ವಿರುದ್ಧದ ಯುದ್ಧ’ ಮತ್ತು ಕುಸಿದ ಪ್ರಜಾಪ್ರಭುತ್ವದ ಮೌಲ್ಯಗಳು

ನ್ಯೂಯಾರ್ಕ್‌ನ ಪ್ರತಿಷ್ಠಿತ ವರ್ಲ್ಡ್ ಟ್ರೇಡ್ ಸೆಂಟರ್ ಅವಳಿ ಗೋಪುರಗಳ ಮೇಲೆ ನಡೆದ ಭೀಕರ ಭಯೋತ್ಪಾದನಾ ದಾಳಿಗೆ ಇಂದಿಗೆ ಭರ್ತಿ 25 ವರ್ಷಗಳು ತುಂಬಿವೆ. ಈ ಕಾಲು ಶತಮಾನದ ಅವಧಿಯಲ್ಲಿ 'ಭಯೋತ್ಪಾದನೆ ವಿರುದ್ಧದ ಜಾಗತಿಕ...

‘ಈ ಪ್ರಕ್ರಿಯೆಯೇ ಶಿಕ್ಷೆಯಾಗಿದೆ’: ಉಮರ್ ಖಾಲಿದ್ ದೀರ್ಘ ಜೈಲುವಾಸದ ಬಗ್ಗೆ ಮಾಜಿ ನ್ಯಾಯಮೂರ್ತಿ ದೀಪಕ್ ಗುಪ್ತಾ ತೀವ್ರ ಟೀಕೆ

ನವದೆಹಲಿ: ಮಾನವ ಹಕ್ಕುಗಳ ಕಾರ್ಯಕರ್ತ, ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಅವರ ದೀರ್ಘಕಾಲದ ವಿಚಾರಣಾಪೂರ್ವ ಬಂಧನ, ಎಲ್ಗರ್ ಪರಿಷತ್ ಪ್ರಕರಣದ ಆರೋಪಿಗಳ ವರ್ಷಗಳ ಜೈಲುವಾಸ ಹಾಗೂ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ನ್ಯಾಯಾಂಗದ...

‘ದೇಶವಿರೋಧಿ ಮನಸ್ಥಿತಿಯಲ್ಲ’: ಜಿ.ಎನ್. ಸಾಯಿಬಾಬಾ ಸ್ಮರಣೆ ಪ್ರಕರಣದಲ್ಲಿ ‘ಟಿಸ್’ ಮಾಜಿ ವಿದ್ಯಾರ್ಥಿಗೆ ಜಾಮೀನು!

ದೆಹಲಿ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ ದಿವಂಗತ ಜಿ.ಎನ್. ಸಾಯಿಬಾಬಾ ಅವರ ಸ್ಮರಣಾರ್ಥ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (TISS) ಕ್ಯಾಂಪಸ್‌ನಲ್ಲಿ ನಡೆದ ಅನುಮತಿರಹಿತ ಕಾರ್ಯಕ್ರಮಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಂಧಿತರಾಗಿದ್ದ ಮಾಜಿ ವಿದ್ಯಾರ್ಥಿ...

ಜನಾಕ್ರೋಶದ ನಡುವೆಯೇ ಎಸ್ಐಆರ್ ಸಮರ್ಥಿಸಿಕೊಂಡ ಮುಖ್ಯ ಚುನಾವಣಾ ಆಯುಕ್ತ: ‘ರಾಜಕೀಯ ದಾಳಿಗಳಿಂದ ಆಯೋಗ ವಿಚಲಿತವಾಗದು’ ಎಂದ ಜ್ಞಾನೇಶ್ ಕುಮಾರ್

ಅಹಮದಾಬಾದ್: ದೇಶದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತು ರಾಜಕೀಯ ಪಕ್ಷಗಳು, ನಾಗರಿಕ ಸಂಘಟನೆಗಳು ಹಾಗೂ ವಿವಿಧ ವಲಯಗಳಿಂದ ತೀವ್ರ ಟೀಕೆಗಳು ವ್ಯಕ್ತವಾಗುತ್ತಿರುವ ನಡುವೆಯೇ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್...

ಕರ್ನಾಟಕ ಎಸ್ಐಆರ್: ಹೆಸರಿನ ಸಣ್ಣ ವ್ಯತ್ಯಾಸಕ್ಕಾಗಿ ನಿವೃತ್ತ ಐಎಎಸ್ ಅಧಿಕಾರಿ ಎ.ಬಿ. ಇಬ್ರಾಹಿಂ ಅವರಿಗೆ ನೋಟಿಸ್; ‘ಸುಳ್ಳು ಮಾಹಿತಿ ನೀಡಿದರೆ ಜೈಲು’ ಎಂಬ ಬೆದರಿಕೆ

ಮೈಸೂರು: ಸುಮಾರು ಮೂರೂವರೆ ದಶಕಗಳ ಕಾಲ ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಸೇವೆ ಸಲ್ಲಿಸಿ, ಸ್ವತಃ ಚುನಾವಣಾ ಪ್ರಕ್ರಿಯೆಯ ಜವಾಬ್ದಾರಿಯುತ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ್ದ ನಿವೃತ್ತ ಐಎಎಸ್ ಅಧಿಕಾರಿ ಎ.ಬಿ. ಇಬ್ರಾಹಿಂ ಅವರೇ ಇದೀಗ ತಮ್ಮ...