ದೇಶದ ಬಹುಕೋಟಿ ಉದ್ಯಮಿ ಗೌತಮ್ ಅದಾನಿಯದ್ದೇ ಇರಲಿ ಅಥವಾ ಒಬ್ಬ ಬಡ ರೈತನದ್ದೇ ಇರಲಿ, ಪ್ರಜಾಪ್ರಭುತ್ವದಲ್ಲಿ ಎಲ್ಲರ ಮತವೂ ಒಂದೇ ಸಮ. ಪ್ರಜೆಗಳನ್ನೆಲ್ಲ ಸಮಾನವಾಗಿ ಕಾಣುವ ಏಕೈಕ ಅಸ್ತ್ರ ಎಂದರೆ ಅದು ಮತದಾನದ ಹಕ್ಕು. ಆದರೆ ಇವತ್ತು ಅಂತಹ ಪವಿತ್ರವಾದ ಹಕ್ಕನ್ನೇ ಕಸಿದುಕೊಳ್ಳುವ ಬೃಹತ್ ಹುನ್ನಾರ ನಡೆಯುತ್ತಿದೆ, ಎಂದು ಬಹುಭಾಷಾ ನಟ ಕಿಶೋರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ವಿರೋಧಿಸಿ ‘SIR ವಿರೋಧಿ ಕರ್ನಾಟಕ’ ವೇದಿಕೆ ನೇತೃತ್ವದಲ್ಲಿ ನಗರದ ಫ್ರೀಡಂ ಪಾರ್ಕ್ನಲ್ಲಿ ಆಯೋಜಿಸಲಾಗಿದ್ದ ಬೃಹತ್ ‘ಎಲೆಕ್ಷನ್ ಕಮಿಷನ್ ಚಲೋ’ ಪ್ರತಿಭಟನಾ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
‘ಶಾಶ್ವತ ಅಧಿಕಾರಕ್ಕಾಗಿ ಮನುಸ್ಮೃತಿ ಜಾರಿಯ ಷಡ್ಯಂತ್ರ’
ಆಡಳಿತಾರೂಢ ವ್ಯವಸ್ಥೆ ಮತ್ತು ಆರ್ಎಸ್ಎಸ್ ವಿರುದ್ಧ ನೇರ ವಾಗ್ದಾಳಿ ನಡೆಸಿದ ನಟ ಕಿಶೋರ್, ಎಸ್ಐಆರ್ ಹಿಂದಿರುವ ಪ್ರಮುಖ ಸಂಚನ್ನು ನಾವೆಲ್ಲರೂ ಮೊದಲು ಅರ್ಥಮಾಡಿಕೊಳ್ಳಬೇಕು. ಆರ್ಎಸ್ಎಸ್ ಮತ್ತು ಬಿಜೆಪಿ ಮನುವಾದಿ ಸಿದ್ಧಾಂತವನ್ನು ಹೇರಿ, ನಮ್ಮ ದೇಶದ ಸಂವಿಧಾನವನ್ನು ಬದಲಾಯಿಸಿ ಮನುಸ್ಮೃತಿಯನ್ನು ತರಲು ದೊಡ್ಡ ಷಡ್ಯಂತ್ರ ರೂಪಿಸುತ್ತಿವೆ, ಎಂದು ಗಂಭೀರವಾಗಿ ಆರೋಪಿಸಿದರು.
“ದೇಶದ ನಿಜವಾದ ಅರ್ಹ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕಿತ್ತುಹಾಕಿ, ಅವರ ಹಕ್ಕನ್ನು ಇಲ್ಲದಂತೆ ಮಾಡಲಾಗುತ್ತಿದೆ. ತನ್ಮೂಲಕ ತಮ್ಮದೇ ಆದ ಸ್ವಂತ ವೋಟ್ ಬ್ಯಾಂಕ್ ಅನ್ನು ಮಾತ್ರ ಉಳಿಸಿಕೊಂಡು, ದೇಶದಲ್ಲಿ ಶಾಶ್ವತವಾಗಿ ಅಧಿಕಾರದಲ್ಲಿ ಉಳಿಯಲು ಇಂತಹ ಕೃತ್ಯ ನಡೆಸಲಾಗುತ್ತಿದೆ,” ಎಂದು ಅವರು ವಿವರಿಸಿದರು.
ಸಂವಿಧಾನ ಹಾಗೂ ಮತದಾರರ ಹಕ್ಕುಗಳ ರಕ್ಷಣೆಗೆ ಎಲ್ಲರೂ ಒಂದಾಗಬೇಕೆಂದು ಕರೆ ನೀಡಿದ ಅವರು, “ನಟ ಪ್ರಕಾಶ್ ರಾಜ್ ಅವರು ಈ SIR ಪ್ರಕ್ರಿಯೆಯ ಹಿಂದಿರುವ ಸಂಚನ್ನು ಎಲ್ಲರಿಗೂ ಸರಳವಾಗಿ ಮನದಟ್ಟಾಗುವಂತೆ ವಿವರಿಸಿದ್ದಾರೆ. ನಮ್ಮ ಕಣ್ಣೆದುರೇ ನಡೆಯುತ್ತಿರುವ ಈ ಪ್ರಜಾಪ್ರಭುತ್ವದ ವಿರೋಧಿ ಹುನ್ನಾರದ ವಿರುದ್ಧ ನಾವೆಲ್ಲರೂ ಒಂದಾಗಿ ಧ್ವನಿ ಎತ್ತಬೇಕಿದೆ,” ಎಂದು ಹೇಳಿದರು.


