Homeಮುಖಪುಟಕನ್ನಡದ ಕಣ್ಮಣಿ ಸಾರಾ

ಕನ್ನಡದ ಕಣ್ಮಣಿ ಸಾರಾ

- Advertisement -
- Advertisement -

ಸಾರಾ ಇನ್ನಿಲ್ಲ ಎನ್ನುವ ಸುದ್ದಿ ತಲುಪಿ ಕೆಲವೇ ಗಂಟೆಗಳಲ್ಲಿ ಅವರ ಮನೆಯಲ್ಲಿ ಅವರ ಕೊನೆಯ ದರ್ಶನಕ್ಕೆ ಗೆಳತಿಯರೊಂದಿಗೆ ತೆರಳಿದ್ದೆ. ಹೀಗೆ ಅವರ ಮನೆಯಲ್ಲಿ ಸೇರುವುದು ಇದು ಮೊದಲೇನಲ್ಲ. ಇತ್ತೀಚೆಗೆ ಅವರಿಗೆ ಬರಗೂರು ಸಾಹಿತ್ಯ ಪ್ರಶಸ್ತಿ ಬಂದಿದ್ದಾಗಲೂ ನಾವು ಕೆಲವು ಗೆಳತಿಯರು ಅಲ್ಲಿದ್ದೆವು. ಮಗು ಮನಸ್ಸಿನ ಮುಗ್ಧತೆಯೊಂದಿಗೆ ಚಂದದ ಸೀರೆ ಉಟ್ಟುಕೊಂಡು ವೀಲ್ ಚೇರಿನಲ್ಲಿ ಕುಳಿತು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಲೇಖಕಿಯ ಜೊತೆ ನಾವೂ ಸಂಭ್ರಮಿಸಿದ್ದೆವು. ನಮ್ಮ ನಡುವಿನ ಸಾಕ್ಷಿಪ್ರಜ್ಞೆಯಾಗಿ ಇಷ್ಟು ದಿನ ನಮ್ಮೊಡನೆ ಇದ್ದ ಸಾರಾ ಅವರ ಕೊನೆಯ ಭೇಟಿ ನಮ್ಮೊಳಗಿನ ದುಗುಡವನ್ನು ಉಲ್ಬಣಿಸಿತ್ತು. ಹೌದು ಕಳೆದೊಂದು ವರ್ಷಗಳಿಂದ ಅವರಿಗೆ ಬದುಕು ಕಷ್ಟವೇ ಆಗಿತ್ತು.

ಸದಾ ಚಟುವಟಿಕೆಯಿಂದಿರುತ್ತ, ಬಾಯಿ ತುಂಬಾ ಮಾತನಾಡುತ್ತಿದ್ದ ಸಾರಾರನ್ನು ಅಸಹಾಯಕ ಸ್ಥಿತಿಯಲ್ಲಿ ನೋಡುವಾಗ ನಮಗೂ ಕಷ್ಟವಾಗುತ್ತಿತ್ತು. ಅವರು ನಮ್ಮ ಒಡನಾಟ ಬಯಸುತ್ತಿದ್ದರಾದರೂ ಅವರಿಗೆ ನಾವು ಯಾರು ಎಂದು ಗುರುತು ಹಚ್ಚಲು ಕಷ್ಟವಾಗುತ್ತಿತ್ತು. ನಾವು ಅವರ ಕರಾವಳಿಯ ಗೆಳತಿಯರು ಎಂದ ಕ್ಷಣ ಅವರ ಮುಖದಲ್ಲಿ ನಗು ಅರಳುತ್ತಿತ್ತು. ಕುಳಿತುಕೊಳ್ಳುವಂತೆ ಒತ್ತಾಯಿಸುತ್ತಿದ್ದರು. ಬಂದವರಿಗೆ ಬಾಯಾರಿಕೆ ಕೊಡುವಂತೆ ಸೊಸೆಯಂದಿರಿಗೆ ಆಜ್ಞಾಪಿಸುತ್ತಿದ್ದರು. ಅವರನ್ನು ಆವರಿಸಿದ್ದ ವಿಸ್ಮೃತಿಯಲ್ಲೂ ನಮ್ಮ ಹೆಸರನ್ನು ಮತ್ತೆಮತ್ತೆ ಕೇಳಿ ಪುನರುಚ್ಚರಿಸುತ್ತಿದ್ದರು.

ಸಾರಾ ಬರೆದಂತೆ ಬದುಕಿದವರು. ದೊಡ್ಡ ಲೇಖಕಿ ಎನ್ನುವ ಯಾವುದೇ ಹಮ್ಮುಬಿಮ್ಮುಗಳಿಲ್ಲದೆ ಕಿರಿಯರನ್ನು ಒಳಗೊಳ್ಳುವ, ಬರೆಯುವಂತೆ ಪ್ರೇರೇಪಿಸುವ ಅವರ ಸರಳತೆ, ಸಜ್ಜನಿಕೆ ನನ್ನನ್ನು ಅವರ ಹತ್ತಿರ ಸೆಳೆದಿತ್ತು. ಬೆರಗುಗಣ್ಣುಗಳಿಂದ ಅವರನ್ನು ನೋಡುತ್ತ ಅವರ ಸಾಹಿತ್ಯವನ್ನಷ್ಟೂ ಓದುವ ಅವಕಾಶ ನನಗೆ ಲಭ್ಯವಾದದ್ದು ಸ್ವಪ್ನ ಬುಕ್ ಹೌಸ್‌ಗಾಗಿ ಕರ್ನಾಟಕ ಲೇಖಕಿಯರ ಸಂಘದ ಶ್ರೀಮತಿ ಇಂದಿರಾ ಶಿವಣ್ಣ ಅವರ ಮೂಲಕ ಸಾರಾ ಅವರ ಬಗ್ಗೆ ಬರೆಯುವ ಅವಕಾಶ ಒದಗಿಬಂದಾಗ. ಕರಾವಳಿ ಲೇಖಕಿಯರ-ವಾಚಕಿಯರ ಸಂಘದ ಆಗಿನ ಅಧ್ಯಕ್ಷರಾಗಿದ್ದ ಖ್ಯಾತ ಲೇಖಕಿ ಶ್ರೀಮತಿ ಚಂದ್ರಕಲಾ ನಂದಾವರ ಅವರು ನನಗೆ ಬರೆದುಕೊಡುವಂತೆ ಹೇಳಿದ್ದರು. ’ಅಪರಿಚಿತರು ನನ್ನ ಬಗ್ಗೆ ಬರೆಯುವುದು ಯಾಕೆ, ನನ್ನ ಜೊತೆ ನಿತ್ಯ ಒಡನಾಡುವವರು, ನನ್ನ ಅಂತರಂಗ ತಿಳಿದವರು ಬರೆಯಬೇಕು’ ಎಂದು ಪಟ್ಟುಹಿಡಿದಿದ್ದರು ಸಾರಾ. ಕನ್ನಡ ಸಾಹಿತ್ಯ ಲೋಕದಲ್ಲಿ ಅಪರಿಚಿತಳಾಗಿದ್ದ ನನ್ನನ್ನು ತನ್ನ ಆಪ್ತ ಬಳಗಕ್ಕೆ ಸೇರಿಸಿಕೊಂಡು ತನ್ನ ಬಗ್ಗೆ ಬರೆಯುವುದಕ್ಕೆ ಹಚ್ಚಿದರು. ಈ ಮೂಲಕ ನನಗೆ ಆಪ್ತರಾದರು. ಅವರ ಬರಹಗಳನ್ನಷ್ಟು ಓದಿ ಭಟ್ಟಿ ಇಳಿಸಿಕೊಳ್ಳುತ್ತಿದ್ದ ಆ ಕಾಲದಲ್ಲಿ ಅವರೊಳಗಿನ ಅಪ್ಪಟ ಗೃಹಿಣಿಯೊಬ್ಬಳು ನನ್ನೊಳಗೆ ಇಳಿದಿದ್ದಳು. ಬರಹ ಬೇರೆ ಬದುಕು ಬೇರೆ ಎಂದು ಭಾವಿಸಿದವರಲ್ಲ ಸಾರಾ. ಈ ಕಾರಣಕ್ಕೆ ಅವರ ಕೃತಿಗಳು ನಮಗೆ ಆಪ್ತವಾಗುತ್ತವೆ. ಅವರೇ ಹೇಳುವಂತೆ, ’ಚಂದ್ರಗಿರಿಯ ತೀರದಲ್ಲಿ’ ಕಾದಂಬರಿಯ ನಾಯಕಿ ನಾದಿರಾ ಅವರ ಬಾಲ್ಯಕಾಲದ ಸಖಿ; ಅವಳ ತಂದೆ ಇರಬಹುದು, ಗಂಡ ರಶೀದನಿರಬಹುದು- ಅವರೆಲ್ಲಾ ಜೀವನದಲ್ಲಿ ಒಡನಾಡಿದ ಪಾತ್ರಗಳೇ, ಆದ್ದರಿಂದ ಇವು ನಮ್ಮ ಅಂತರಂಗಕ್ಕೆ ಆಪ್ತವಾಗುವುದು. ಮಾನವೀಯತೆಗಾಗಿ, ಇಲ್ಲಿರುವ ಜೀವಪರ ದನಿಗಾಗಿ ಪ್ರಸಿದ್ಧವಾಗಿರುವ ’ಚಂದ್ರಗಿರಿಯ ತೀರದಲ್ಲಿ’ ಕೃತಿ ಮಲಯಾಳಂ, ತಮಿಳು, ತೆಲುಗು, ಮರಾಠಿ, ಒರಿಯ, ಹಿಂದಿ ಭಾಷೆಗಳಿಗೆ ಭಾಷಾಂತರವಾಗಿದೆ. ಈ ಕೃತಿಯನ್ನು ಬೆಂಗಳೂರು ವಿವಿ, ಮಂಗಳೂರು ವಿವಿ, ಕುವೆಂಪು ವಿಶ್ವವಿದ್ಯಾನಿಲಯಗಳಲ್ಲಿ ಪಠ್ಯಪುಸ್ತಕವಾಗಿಯೂ ಕಿರಿಯರು ಓದಿದ್ದಾರೆ. ’ಸಹನ’, ’ವಜ್ರಗಳು’, ’ಕದನ ವಿರಾಮ’, ’ಸುಳಿಯಲ್ಲಿ ಸಿಕ್ಕವರು’, ’ತಳ ಒಡೆದ ದೋಣಿಯಲ್ಲಿ’, ’ಪ್ರವಾಹ ಸುಳಿ’, ’ಪಂಜರ’, ’ಇಳಿಜಾರು’, ’ಕಾಣಿಕೆ’ ಇವರ ಇತರ ಕಾದಂಬರಿಗಳು.

’ಧರ್ಮ ಬಲೆ ಬೀಸಿದಾಗ’, ’ನಿಯಮ ನಿಯಮಗಳ ನಡುವೆ’ ಮತ್ತು ’ಚಪ್ಪಲಿಗಳು’ ಸಾರಾ ಅವರ ಸ್ತ್ರೀಪರ ಸಂವೇದನೆ ಇರುವ ಕಥೆಗಳಾಗಿ ನಮ್ಮನ್ನು ಸದಾ ಕಾಡುತ್ತವೆ. ಪುರುಷರ ಅಹಂಕಾರವನ್ನು ಪ್ರಶ್ನಿಸುವುದರ ಜೊತೆಗೆ ಎಲ್ಲಾ ಸಮುದಾಯದೊಳಗೂ ಸ್ತ್ರೀಪರ ಸಂವೇದನೆ ಇರಬಹುದಾದ ಪುರುಷರನ್ನೂ ಇವು ಪರಿಚಯಿಸುತ್ತವೆ. ’ಚಪ್ಪಲಿಗಳು’, ’ಅರ್ಧ ರಾತ್ರಿಯಲ್ಲಿ ಹುಟ್ಟಿದ ಕೂಸು’, ’ಖೆಡ್ಡ’, ’ಸುಮಯ್ಯ’, ’ಗಗನಸಖಿ’ ಸಾರಾ ಅವರ ಕಥಾ ಸಂಕಲನಗಳು

ಮಲೆಯಾಳಿಯಿಂದ ’ಮನೋಮಿ’ (ಕಮಲಾ ದಾಸ್), ’ಬಲೆ’ (ಬಿ.ಎಂ. ಸುಹಾರ), ’ನಾನಿನ್ನು ನಿದ್ರಿಸುವೆ’ (ಪಿ ಕೆ ಬಾಲಕೃಷ್ಣನ್), ’ತುರ್ತು ಪರಿಸ್ಥಿತಿಯ ಕರಾಳ ಮುಖ’ (ಈಚರ ವಾರಿಯರ್), ’ಧರ್ಮದ ಹೆಸರಿನಲ್ಲಿ’ ( ಆರ್.ಬಿ. ಶ್ರೀಕುಮಾರ್), ’ವೈಕಂ ಮಹಮದ್ ಬಶೀರ್’ (ಎಂ ಎನ್. ಕಾರಶೇಂ), ’ಮುಸ್ಲಿಂ ಮಹಿಳೆಯರು ಮತ್ತು ತಲಾಖ್’ (ಸೈಯದ್ ಮೆಹಬೂಬ್ ಶಾ ಖಾದ್ರಿ) ಹೀಗೆ ಹಲವಾರು ಪ್ರಸಿದ್ಧ ಲೇಖಕರ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿರುವ ಸಾರಾ ಅವರು ’ತೇಲಾಡುವ ಮೋಡಗಳು’ ಎಂಬ ನಾಟಕವನ್ನು, ’ಐಷಾರಾಮದ ಆಳದಲ್ಲಿ’ ಎಂಬ ಪ್ರವಾಸ ಕಥನವನ್ನು ಬರೆದಿದ್ದಾರೆ.

ಮುಸ್ಲಿಂ ಸಮುದಾಯದೊಳಗೆ ಸಾಕಷ್ಟು ಸಂಚಲನ ಉಂಟುಮಾಡಿದ ಸಾರಾ ಅವರ ಕೃತಿ ’ಚಂದ್ರಗಿರಿಯ ತೀರದಲ್ಲಿ’ ತಮಿಳು ಭಾಷೆಯಲ್ಲಿ ’ಜಮೀಲ’ ಹೆಸರಿನಲ್ಲಿ ಚಲನಚಿತ್ರವಾಗಿಯೂ ತೆರೆಕಂಡಿದೆ. ಈ ಕೃತಿ ಸಾರ ಅವರಿಗೆ ಸಾಕಷ್ಟು ಪ್ರಸಿದ್ಧಿಯನ್ನು ತಂದುಕೊಟ್ಟದ್ದು ಮಾತ್ರವಲ್ಲದೆ, ತಮ್ಮದೇ ಸಮುದಾಯದ ಮೂಲಭೂತವಾದಿಗಳಿಂದ ವಿರೋಧವನ್ನು ಅವರು ಎದುರಿಸುವಂತಾಯಿತು. ಆದರೆ ಈ ವಿರೋಧವನ್ನು ಅವರು ದಿಟ್ಟವಾಗಿ ಎದುರಿಸಿದ್ದು ಬಹಳ ಮುಖ್ಯವಾದ ಸಂಗತಿಯಾಗಿ ಉಳಿಯುತ್ತದೆ.

ಇದನ್ನೂ ಓದಿ: ಸಾಹಿತ್ಯದ ಮೂಲಕ ಸಾಮಾಜಿಕ ಬದಲಾವಣೆಯ ಕನಸು ಕಂಡಿದ್ದ ಸಾರಾ

ಕನ್ನಡಕ್ಕೊಬ್ಬರೇ ಸಾರಾ ಎನ್ನುವಂತೆ ಬದುಕಿದ ಲೇಖಕಿ ಬಿಟ್ಟುಹೋದ ನಿರ್ವಾತ ದೊಡ್ಡದು. 30.6.1936ರಲ್ಲಿ ಕೇರಳದ ಕಾಸರಗೋಡಿನ ಪುದಿಯಾಪುರ ತರವಾಡು ಮನೆಯಲ್ಲಿ ಪಿ.ಅಹಮದ್ ಹಾಗೂ ಜೈನಾಭಿ ದಂಪತಿಗಳ ಆರು ಗಂಡು ಮಕ್ಕಳ ನಡುವೆ ಮುದ್ದಿನ ಮಗಳಾಗಿ ಜನಿಸಿದವರು ಸಾರಾ. ಮಲೆಯಾಳಂ ಮನೆ ಮಾತಾಗಿದ್ದರೂ ವಕೀಲಿ ವೃತ್ತಿಯಲ್ಲಿದ್ದ ತಂದೆಯ ಪ್ರೇರಣೆಯಿಂದ ಕಾಸರಗೋಡಿನ ಕನ್ನಡ ಶಾಲೆಗೆ ಸೇರಿಕೊಂಡು ಎಸ್.ಎಸ್.ಎಲ್.ಸಿ ಮುಗಿಸಿದರು.

ಇಂಜಿನಿಯರ್ ಪದವೀಧರರಾಗಿ ಸರಕಾರಿ ಕೆಲಸದಲ್ಲಿದ್ದ ಎಂ. ಅಬೂಬಕ್ಕರ್ ಅವರನ್ನು ಮದುವೆಯಾಗಿ ಮಂಗಳೂರು ಸೇರಿದ ಸಾರಾ ಅವರು ತಮ್ಮ ಬಾಲ್ಯದಿಂದಲೂ ಅಭ್ಯಾಸವಾಗಿದ್ದ ವರ್ತಮಾನ ಪತ್ರಿಕೆಯನ್ನು ಓದಲು ಗಂಡನ ಮನೆಯಲ್ಲಿ ಪರದಾಡಬೇಕಾಯಿತು. ಮನೆಯ ಪುರುಷರೆಲ್ಲ ಓದಿ ಎಸೆಯುತ್ತಿದ್ದ ದಿನಪತ್ರಿಕೆಯನ್ನು ಜೋಪಾನ ಕಾದಿಟ್ಟು ನಿತ್ಯದ ಕೆಲಸ ಮುಗಿಸಿ ಬಿಡುವಿನಲ್ಲಿ ಓದುತ್ತಿದ್ದರು. ನಂತರ ಗಂಡನ ವೃತ್ತಿ ಸಂಬಂಧ ಬೇರೆಬೇರೆ ಊರುಗಳಿಗೆ ಹೋದಂತೆಲ್ಲಾ ಬುರ್ಖಾದೊಳಗೆ ಬಂಧಿಯಾಗದೆ ಮನೆ ಕೆಲಸದ ಜೊತೆಜೊತೆಗೆ ಸಾರ್ವಜನಿಕ ವಾಚನಾಲಯದ ಸದಸ್ಯರಾದರು. ತಮ್ಮ ಓದುವ ಅಭಿರುಚಿಗೆ ಆಹಾರ ಒದಗಿಸಿಕೊಂಡರು. ಮಹಿಳಾ ಮಂಡಲದ ಸದಸ್ಯೆಯಾಗಿ, ಅಧ್ಯಕ್ಷರಾಗಿ ಲೋಕದ ವಿದ್ಯಾಮಾನಗಳಿಗೆ ಮುಖಾಮುಖಿಯಾದರು. ಸಾರಾ ಅವರ ಕಥಾ ಪಾತ್ರಗಳಾದರೂ ಅವರೇ ಒಡನಾಡಿದ ವ್ಯಕ್ತಿ ಚಿತ್ರಗಳು. ’ಮುಸ್ಲಿಂ ಹುಡುಗಿ ಶಾಲೆ ಕಲಿತದ್ದು’ ಲಂಕೇಶ್ ಪತ್ರಿಕೆಯಲ್ಲಿ ಮೊದಲು ಬೆಳಕು ಕಂಡ ಅವರ ಆತ್ಮಕಥನದ ತುಣುಕು. ಸಾರಾ ಅವರು ಮುಸ್ಲಿಂ ಸಮುದಾಯದೊಳಗಿನ ಶೋಷಿತ, ದಮನಿತ ಮಹಿಳೆಯರ ಪರವಾಗಿ ಬರೆದರು.

ತಮ್ಮ ಬರಹಗಳು ಮುಸ್ಲಿಂ ಸಮುದಾಯದೊಳಗೆ ಬದಲಾವಣೆಗೆ ಕಾರಣವಾಗುತ್ತದೆ ಎಂದು ಸಾರಾ ನಂಬಿದ್ದರು. 40ರ ಹರೆಯದಲ್ಲಿ ಬರೆಯತೊಡಗಿದವರು ಸಾರಾ, “ಅಣೆಕಟ್ಟೆಯಲ್ಲಿ ಬಂಧಿಯಾದ ಜಲರಾಶಿ ಗೇಟ್ ಎತ್ತಿದೊಡನೆ ಧುಮ್ಮಿಕ್ಕಿ ಹರಿಯುವಂತೆ ನನ್ನೊಳಗೆ ಹೊಗೆಯಾಡುತ್ತಾ ನನಗೆ ಉಸಿರುಗಟ್ಟಿಸುತ್ತಿದ್ದ ನನ್ನ ಭಾವನೆಗಳು ನನ್ನ ಲೇಖನಿಯ ಮೂಲಕ ಸರಾಗವಾಗಿ ಹರಿಯಲಾರಂಭಿಸಿತು” ಎನ್ನುವ ಸಾರಾ, ತಮ್ಮ ಬರವಣಿಗೆಯ ಮೂಲಕ ಅಲ್ಲಿಯವರೆಗೆ ಅಂಧಕಾರದಲ್ಲಿದ್ದ ಮುಸ್ಲಿಂ ಮಹಿಳಾ ಜಗತ್ತನ್ನು ಅನಾವರಣ ಮಾಡಿ ಸದ್ದುಮಾಡಿದರು. ಸಾರಾ ಅವರ ಪ್ರಬಂಧಗಳು ಮತ್ತು ಲೇಖನ ಗುಚ್ಚ, ’ಅನಾವರಣ’, ’ಸಾಹಿತ್ಯ ಸಂಸ್ಕೃತಿ ಮತ್ತು ಮಹಿಳೆ’, ’ಚಿಂತೆ-ಚಿಂತನೆ’. ತಾನು ನಂಬಿದ ಮೌಲ್ಯಗಳಿಗೆ ಬದ್ಧವಾಗಿದ್ದುಕೊಂಡು ಅವುಗಳೊಂದಿಗೆ ಎಂದೂ ರಾಜಿ ಮಾಡಿಕೊಳ್ಳದೆ ತನ್ನ ಆತ್ಮಸಾಕ್ಷಿಗೆ ಅನುಗುಣವಾಗಿ ಬರೆದವರು ಸಾರಾ.

ಮಂಗಳೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್, ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ನಾಡೋಜ ಬಿರುದು, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ಸಾರಾ ಅವರನ್ನು ಡಾ.ಬಿ.ಎ. ವಿವೇಕ ರೈ ಗುರುತಿಸಿರುವುದು ಹೀಗೆ “ಧೈರ್ಯ, ಆತ್ಮವಿಶ್ವಾಸ, ಸತ್ವ ಮತ್ತು ಸತ್ಯದ ಪರವಾಗಿ ಹೋರಾಡುವ ಛಲದ ಬೆಂಕಿ ಕೆಂಡವನ್ನು ಸೆರಗಿನಲ್ಲಿ ಕಟ್ಟಿಕೊಂಡವರು ಸಾರಾ.”

ಕರಾವಳಿ ಲೇಖಕಿಯರ-ವಾಚಕಿಯರ ಸಂಘದ ಹುಟ್ಟು ಮತ್ತು ಬೆಳವಣಿಗೆಯ ವಿವಿಧ ಹಂತಗಳಲ್ಲಿ ಜೊತೆಜೊತೆಯಾಗಿದ್ದುಕೊಂಡು ಸಂಘದ ಅಧ್ಯಕ್ಷರೂ ಆಗಿ ದುಡಿದು ಸಂಘಕ್ಕೊಂದು ಸ್ವಂತ ಕಟ್ಟಡವಾಗಬೇಕೆಂದು ಪರಿಶ್ರಮಪಟ್ಟವರಲ್ಲಿ ಸಾರಾ ಅವರೂ ಒಬ್ಬರು. ಮಂಗಳೂರು ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಇವರನ್ನು ಅರಸಿ ಬಂದದ್ದು 1995ರಲ್ಲಿ.

ಬಹುತ್ವ ಭಾರತದ ಜಾತ್ಯತೀತ ಪ್ರಜ್ಞೆಯಾಗಿ ಬದುಕಿದ್ದ ಸಾರಾ ಇಂದು ನಮ್ಮೊಡನಿಲ್ಲ ಎನ್ನುವುದು ಅರಗಿಸಿಕೊಳ್ಳಲಾಗದ ಸತ್ಯ. ಸಮಕಾಲೀನ ವೈಚಾರಿಕ ಪ್ರಜ್ಞೆಯಾಗಿರುವ ಜಿ. ರಾಮಕೃಷ್ಣ ಅವರು ಹೇಳುವಂತೆ, “ಎಲ್ಲಾ ಧರ್ಮಗಳ ಮತ್ತು ಮತಧರ್ಮೀಯರ ಅಂತರಂಗದ ಮೇಲೆ ಬೆಳಕು ಚೆಲ್ಲಿ ಅಲ್ಲಿ ಬಿತ್ತಲಾದ ವಿಷಬೀಜವನ್ನು ಕಿತ್ತೆಸೆಯಬೇಕಾದ ಅನಿವಾರ್ಯತೆ ಹಿಂದೆಂದಿಗಿಂತಲೂ ಇಂದು ಹೆಚ್ಚಾಗಿದೆ. ಆದ್ದರಿಂದ ಸಾರಾ ಮತ್ತು ಅವರಂಥವರು ಹರಿಸುವ ಬೆಳಕು ಇನ್ನೂ ಪ್ರಖರವಾಗಬೇಕಾಗಿದೆ ಮತ್ತು ಅಂಧಕಾರವನ್ನು ತೊಲಗಿಸಬೇಕಾಗಿದೆ”. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯೆಯಾಗಿ, ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ದೂರದರ್ಶನದ ಪ್ರಿವ್ಯೂ ಸಮಿತಿ ಸದಸ್ಯರಾಗಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಾದೇಶಿಕ ಸಲಹಾ ಸಮಿತಿಯ ಸದಸ್ಯೆಯಾಗಿಯೂ ದುಡಿದವರು ಸಾರಾ.

ಒಟ್ಟಿನಲ್ಲಿ ಸಾರಾ ನಮ್ಮ ನಡುವಿನ ಬೆಳಕಾಗಿದ್ದವರು. ಧರ್ಮದ ಮೇಲಿನ ಶ್ರದ್ಧೆ ಎಂದೂ ಅಂಧಶ್ರದ್ಧೆ ಆಗಬಾರದು; ಜೀವಕ್ಕಿಂತ ಜೀವನ ದೊಡ್ಡದು ಎಂದು ನಂಬಿದವರು ಮತ್ತು ಅದರಂತೆ ಬದುಕಿದವರು ಅವರು.

ದೇವಿಕಾ ನಾಗೇಶ್
ಬರಹಗಾರ್ತಿ ಮಂಗಳೂರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...