ಜನಾರ್ದನ ರೆಡ್ಡಿಯವರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಸಚಿವ ಬಿ.ಶ್ರೀರಾಮುಲು ಸಹ ಸೇರಿಕೊಳ್ಳುತ್ತಾರೆ ಎಂಬ ಊಹಾಪೋಹಗಳ ನಡುವೆ ಬಿ.ಶ್ರೀರಾಮುಲುರವರು ಜನಾರ್ದನ ರೆಡ್ಡಿಯವರ ಪಕ್ಷಕ್ಕೆ ಸೇರುವಂತೆ ಆಹ್ವಾನಿಸಿ ಟ್ವೀಟ್ ಮಾಡಿ ನಂತರ ಡಿಲೀಟ್ ಮಾಡಿದ ಪ್ರಸಂಗ ನಡೆದಿದೆ.
ಇಂದು ಮಧ್ಯಾಹ್ನ ಸಚಿವ ಬಿ.ಶ್ರೀರಾಮುಲುರವರ ಅಧಿಕೃತ ಟ್ವಿಟರ್ ಖಾತೆಯಿಂದ “ಜನವರಿ 17ನೇ 2023ರಂದು ಗಾಲಿ ಜನಾರ್ದನ ರೆಡ್ಡಿಯವರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮಕ್ಕೆ ಸಿಂಧನೂರಿನ ಮಹಾ ಜನತೆಯನ್ನು ಹೃದಯ ಪೂರ್ವಕವಾಗಿ ಆಹ್ವಾನಿಸುತ್ತಿದ್ದೇನೆ” ಎಂದು ಟ್ವೀಟ್ ಮಾಡಲಾಗಿತ್ತು. ಜೊತೆಗೆ #sriramulu #sriramulubellary #Bjp #karntakapolitics #bjpgovernment #modi #bjpkarnataka #sriramulubjp ಹ್ಯಾಷ್ಟ್ಯಾಗ್ಗಳನ್ನು ಬಳಸಲಾಗಿತ್ತು. ಈ ಬರಹದೊಂದಿಗೆ ಕೃಷ್ಣದೇವರಾಯ ಜಯಂತಿಯ ಫೋಟೊವನ್ನು ಟ್ವೀಟ್ ಮಾಡಲಾಗಿತ್ತು.
ಆದರೆ ಒಂದು ಗಂಟೆಯ ನಂತರ ಆ ಟ್ವೀಟ್ ಅನ್ನು ಡಿಲೀಟ್ ಮಾಡಲಾಗಿದೆ. ಬಹುಶಃ ಕೈತಪ್ಪಿನಿಂದ ಟ್ವೀಟ್ ಮಾಡಿ, ಹಲವರು ಆಕ್ಷೇಪದ ನಂತರ ಡಿಲೀಟ್ ಮಾಡಿರಬಹುದು ಎನ್ನಲಾಗಿದೆ. ಆದರೆ ಶ್ರೀರಾಮುಲುರವರ ಖಾತೆಯಿಂದ ಜನಾರ್ದನ ರೆಡ್ಡಿ ಪಕ್ಷದ ಪರ ಟ್ವೀಟ್ ಮಾಡಲು ಹೇಗೆ ಸಾಧ್ಯ? ಅಥವಾ ಒಬ್ಬರೆ ವ್ಯಕ್ತಿ ಈ ಇಬ್ಬರೂ ನಾಯಕರ ಟ್ವಿಟರ್ ಹ್ಯಾಂಡಲ್ಗಳನ್ನು ನೋಡಿಕೊಳ್ಳುತ್ತಿದ್ದಾರೆಯೇ ಎಂಬ ಪ್ರಶ್ನೆಗಳು ಎದ್ದಿವೆ.
https://twitter.com/sriramulubjp/status/1615253544399163393
ನಾನು ಕರ್ನಾಟಕ ರಾಜ್ಯದಲ್ಲಿ ಕಟ್ಟಿ ಬೆಳೆಸಿದ ಬಿಜೆಪಿ ಪಕ್ಷದವರೆ ನನಗೆ ತೊಂದರೆ ಕೊಡುತ್ತಿದ್ದಾರೆ ಎಂದಿದ್ದ ಗಣಿ ಉದ್ಯಮಿ ಜನಾರ್ದನ ರೆಡ್ಡಿ ‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ ಎಂಬ ಹೊಸ ರಾಜಕೀಯ ಪಕ್ಷದ ಘೋಷಿಸಿದ್ದಾರೆ. ಕೊಪ್ಪಳ ಜಿಲ್ಲೆಯ ಗಂಗಾವತಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ. ಈ ಪಕ್ಷಕ್ಕೆ ತಮ್ಮ ಆಪ್ತ ಬಿ.ಶ್ರೀರಾಮುಲುರನ್ನು ಸೇರಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಆ ನಡುವೆಯ ಈ ಟ್ವೀಟ್ ಬಂದಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ನಿಜಕ್ಕೂ ಇಂತದ್ದೊಂದು ಪಾರ್ಟಿ ಬೇಕಿತ್ತು ಸಾರ್..
ಇದನ್ನೂ ಓದಿ: ಜನಾರ್ದನ ರೆಡ್ಡಿ ಆಸ್ತಿ ಮುಟ್ಟುಗೋಲು ವಿಳಂಬ: ರಾಜ್ಯ ಸರ್ಕಾರದ ವಿರುದ್ಧ ಹೈಕೋರ್ಟ್ ಕಿಡಿ