Homeಅಂಕಣಗಳುನಿಜಕ್ಕೂ ಇಂತದ್ದೊಂದು ಪಾರ್ಟಿ ಬೇಕಿತ್ತು ಸಾರ್..

ನಿಜಕ್ಕೂ ಇಂತದ್ದೊಂದು ಪಾರ್ಟಿ ಬೇಕಿತ್ತು ಸಾರ್..

- Advertisement -
- Advertisement -

ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಉದಯವಾದ ಸುದ್ದಿಕೇಳಿ ಗಣಿಮಣ್ಣು ತಿಂದಷ್ಟು ಖುಷಿಯಾಯ್ತಲ್ಲಾ. ಇದಕ್ಕೆ ಕಾರಣರಾದ ಜನಾರ್ಧನ ರೆಡ್ಡಿಯವರಿಗೆ ಪೋನ್ ಮಾಡಿ ಶುಭಾಶಯ ಹೇಳಬೇಕೆನಿಸಿ ಪೋನ್ ಮಾಡಿದರೆ ರಿಂಗಾಯ್ತು. ರಿಂಗ್‌ಟೋನ್: ‘ತಿರುಪತಿ ಗಿರಿವಾಸ ಶ್ರೀ ವೆಂಕಟೇಶ, ನೀನೊಲಿದ ಮನೆ ಮನೆಯು ಲಕ್ಷ್ಮೀನಿವಾಸ….’

“ಹಲೋ ಯಾರು?”

“ನಾನು ಸಾರ್ ಪತ್ರಕರ್ತ ಯಾಹು ಅಂತ.”

“ಯಾವೂ ಅಂದ್ರೆ ಯಾರು?”

“ನಿಮ್ಮತ್ರ ಈ ಹಿಂದೆ ಒಬ್ಬ ವಕೀಲ, ಮತ್ತೊಬ್ಬ ಪತ್ರಕರ್ತ ಕಂ ಪ್ರೊಫೆಸರ್ ಇದ್ರಲ್ಲ ಸಾರ್ ಅವರ ಆತ್ಮೀಯ ಗೆಳೆಯ ಸಾರ್.”

“ಭಾಳ ಒಳ್ಳೆದು. ಏನು ಹೇಳಿ ಇವರೆ.”

“ನಿಮ್ಮನ್ನ ಅಭಿನಂದಿಸೋದಕ್ಕೆ ಪೋನ್ ಮಾಡಿದೆ ಸಾರ್. ಅಂತೂ ನಮ್ಮ ಕರ್ನಾಟಕ್ಕೆ ಇಂತದೊಂದು ಪಾರ್ಟಿ ಬೇಕಿತ್ತು ಸಾರ್.”

“ಅದಕ್ಕಾಗಿ ನಾನು ಪಾರ್ಟಿ ಸ್ಥಾಪನೆ ಮಾಡಿದೆ, ಯಾಕಂದ್ರೆ ಕಲ್ಯಾಣ ಕರ್ನಾಟಕ ಅಂತ ಹೇಳಿ ಬರೀ ನಾಮಕರಣ ಮಾಡಿದ್ರು, ಆದ್ರೆ ಅಭಿವೃದ್ಧಿ ಕೆಲಸಗಳು ಏನೂ ಆಗಿಲ್ಲ.”

“ನಿಜ ಸಾರ್ ಶ್ರೀಕೃಷ್ಣದೇವರಾಯನ ಕಾಲದಿಂದ್ಲೂ ಆಭಿವೃದ್ಧಿ ಆಗಲಿಲ್ಲ. ಕಡೆಗೆ ನಮ್ಮ ಸಂಪತ್ತನ್ನೆಲ್ಲಾ ತುಂಬಿಕೊಂಡು ಆಂಧ್ರಕ್ಕೋದ್ರು.”

“ನಾನು ಕಲ್ಯಾಣ ಕರ್ನಾಟಕನ ಅಷ್ಟೇ ಅಭಿವೃದ್ಧಿ ಮಾಡಲ್ಲ, ಇಡೀ ಕರ್ನಾಟಕನ ಅಭಿವೃದ್ಧಿ ಮಾಡತಕ್ಕಂತ ಕಾರ್ಯಕ್ರಮ ತಯಾರು ಮಾಡಿದ್ದಿನಿ.”

“ಆ ಅಭಿವೃದ್ಧಿಲಿ ಗಣಿ ಗುಡ್ಡಗಳು ಇವೆಯಾ ಸಾರ್?”

“ಇಲ್ಲ, ಜನರ ಮೂಲಭೂತ ಸಮಸ್ಯೆಗಳಿವೆ.”

“ಜನರ ಸಮಸ್ಯೆ ನಿವಾರಿಸಕ್ಕೆ ಹಣ ಬೇಕಲ್ಲವ ಸಾರ್. ಅದನ್ನ ಎಲ್ಲಿಂದ ತರ್ತಿರಿ? ಕೇಂದ್ರ ಸರಕಾರ ಹಣಕೊಡಲಿಲ್ಲ ಅಂದರೆ ಯಂಗೆ ಮಾಡ್ತಿರಿ?”

“ನಾನು ಹ್ಯಾಗೊ ಮಾಡ್ತಿನಿ. ಮೊದಲಿಂದ ನಾನು ನನ್ನ ಗುರಿಲಿ ಸೋತವನಲ್ಲ, ಈಗಲೂ ಸೋಲಲ್ಲ.”

“ಸೋಲಬೇಡಿ ಸಾರ್.. ವಿಧಾನಸೌಧದ ವರಾಂಡದಲ್ಲಿ ನಿಮ್ಮ ಗ್ರೀನ್ ಕಲರ್ ರೋಲ್ಸ್‌ರಾಯ್ ಕಾರ್ ನಿಂತಿರದ್ದನ್ನ ನೋಡಕ್ಕೆ ನನ್ನ ಕಣ್ಣಿಗೆ ಹಬ್ಬ ಸಾರ್.”

“ನಾನು ನನ್ನ ರೋಲ್ಸ್‌ರಾಯ್ ಕಾರಲ್ಲಿ ಬಂದೇ ಬರ್ತಿನಿ ಯಾಹೂ.”

“ನಿಮ್ಮಂತವರ ಕಾರ್ಯಕ್ಷೇತ್ರದ ತಾಣದಂಗಿದ್ದ ಬಿಜೆಪಿ ಯಾಕೆ ಬಿಟ್ರಿ ಸಾರ್?”

“ಬಿಜೆಪಿ ಇವತ್ತು ಕರ್ನಾಟಕದಲ್ಲಿ ಅಧಿಕಾರದಲ್ಲಿ ಇದ್ರೆ ಅದು ನನ್ನಿಂದ. ಮೊದಲು ಕುಮಾರಸ್ವಾಮಿಗೆ ಏನು ಬೇಕೋ ಅದನ್ನ ಕೊಟ್ಟು ಅಧಿಕಾರದಲ್ಲಿ ಪಾಲು ಪಡೆದೆವು. ನಂತರ ಬಹುಮತ ಬರದೇ ಹೋದಾಗ ಶಾಸಕರಿಗೆ ಏನು ಬೇಕೋ ಅದು ಕೊಟ್ಟು, ಅವರಿಂದ ರಾಜಿನಾಮೆ ಕೊಡಿಸಿ ಚುನಾವಣೆ ಮಾಡಿ ಎಡೂರಪ್ಪನ್ನ ಮುಖ್ಯಮಂತ್ರಿ ಮಾಡಿದ್ದು ನಾವು. ಅದಕ್ಕಾಗಿ ನಾವು ಗಣಿಯಿಂದ ಬಂದ ಹಣವನ್ನು ಖರ್ಚು ಮಾಡಿದೆವು.”

“ಆ ನಂತರ ಸರಕಾರ ಬಂದಾಗ ಅಕ್ರಮ ಮಾಡಿ ಹಣ ಮಾಡಿಕಂಡ್ರಲ್ಲ ಸಾರ್. ಗಣಿ ಹಣನ ರಾಜಕಾರಣಕ್ಕೆ ಹಾಕಿದ್ರಿ. ಪವರ್ರಿಗೆ ಬಂದಾಗ ಗೋರಿ ಕಂಡ್ರಿ..”

“ಅದು ಸರಿ, ಪರಿಣಾಮಗಳನ್ನ ಅನುಭವಿಸಿದವರು ನಾವು, ಜೈಲಿಗೆ ಹೋಗಿದ್ದು ನಾನು, ನಮ್ಮ ತಾಯಿ ಸಮಾನರಾಗಿದ್ದ ಸುಷ್ಮಸ್ವರಾಜ್ ಕೂಡ ಅವುರ್ಯಾರೊ ನನಿಗೆ ಗೊತ್ತೆಯಿಲ್ಲ ಅಂದುಬುಟ್ರು. ಇನ್ನ ತಂದೆ ಸಮಾನರಾದ ಎಡೂರಪ್ಪನೂ ನಮ್ಮ ಸಹಾಯಕ್ಕೆ ಬರಲಿಲ್ಲ..”

“ಬರಲಿಲ್ಲ ಅಂದ್ರೆ ಅವರಿಗೂ ನಿಮ್ಮ ಮೇಲೆ ಸಿಟ್ಟಿತ್ತಲ್ಲ ಸಾರ್. ಅವರ ಆತ್ಮೀಯರಾಗಿದ್ದ ಶೋಭ ಕರಂದ್ಲಾಜೆಯವರ್ನ ಸಂಪುಟದಿಂದ ತಗಿಬೇಕು ಅಂದ್ರಿ, ತಗದ್ರು. ಇನ್ನ ನಿಮ್ಮನ್ನ ವಿಚಾರಿಸಿಗಳಕ್ಕೆ ಅಂತ ಕಳಿಸಿದ್ದ ಡಿ.ಸಿನ ಕೂಡಲೇ ವರ್ಗಮಾಡಿ ಅಂದಾಗ ಮಾಡಿದ್ರು. ಒಂದೇ ವಾರಕ್ಕೆ ಎಸ್ಪಿ ಡಿ.ಸಿ ವರ್ಗ ಮಾಡಿಸಿದ್ದು ನೀವೇ ಇರಬೇಕು.”

“ಯಾರು ಸರಕಾರವನ್ನ ತಂದ್ರೋ ಅವರಿಗೇ ಕಿರುಕುಳ ಕೊಡೋ ಅಧಿಕಾರಿಗಳನ್ನ ಹಾಕಿದ್ರೆ ಸುಮ್ಮನಿರಬೇಕಾಗುತ್ತ?”

“ಆಗಲ್ಲ ಸಾರ್. ನೀವು ಬಿಜೆಪಿ ಅನ್ನೋ ಪಾರ್ಟಿನ ಅರ್ಥಮಾಡಿಕೊಬೇಕಾಗಿತ್ತು. ಅವರ ಮೋಸದ ಇತಿಹಾಸ ದೊಡ್ಡದಿದೆ.”

“ನಂಬಿದವರ ಕತ್ತು ಕುಯ್ಯತರೆ ಅಂತ ಗೊತ್ತಿರಲಿಲ್ಲ ಕಂಡ್ರಿ.”

“ಕತ್ತು ಕುಯ್ಯಲ್ಲ ಸಾರ್ ಅವುರು. ನೀವೇ ಪಾಷಣ ತಿಂದು ಸಾಯಂಗೆ ಮಾಡ್ತರೆ. ಇದೇ ಎಡೂರಪ್ಪ ಜೈಲಿಗೋಗಿದ್ದಾಗ ಬೆಂಗಳೂರಿಗೆ ಅಡ್ವಾನಿ ಬಂದಿದ್ರು. ಎಡೂರಪ್ಪನ್ನ ನೋಡಕ್ಕೆ ಹೋಗಿದ್ರಾ? ಅದೇ ಅಡ್ವಾನಿ ಈಗೆಲ್ಯವುರೆ, ಬಾಬರಿ ಮಸೀದಿ ಕೆಡಹಿದ ಕಲ್ಯಾಣಸಿಂಗ ಏನಾದ್ರು, ಹುಬ್ಬಳಿ ಈದ್ಗಾ ಮೈದಾನದಲ್ಲಿ ಬಾವುಟ ಹಾರಿಸಿದ ಉಮಾಭಾರತಿ ಏನಾದ್ರು, ಶಿವಸೇನೆ ಏನಾಗಿದೆ, ಗೋವಾ ಕತೆ ಏನಾಗಿದೆ. ಕುತಂತ್ರದಿಂದ್ಲೆ ಪಾರ್ಟಿ ಕಟ್ಟಿ ಆಡಳಿತ ಮಾಡದು ಅವರ ಹುಟ್ಟುಗುಣ. ನೀವು ನಿಮ್ಮ ಬಗ್ಗೆ ಯೋಚನೆ ಮಾಡಿದ್ರೆ ಇಷ್ಟೊಂದು ಗಣಿ ಲೂಟಿ ಮಾಡೋ ಅಗತ್ಯ ಇರಲಿಲ್ಲ ಅಲ್ಲವ ಸಾರ್?”

“ಹೌದು, ಇವರಿಗೋಸ್ಕರ ಜಾಸ್ತಿ ಮಾಡಬೇಕಾಯ್ತು.”

“ಗಣಿಕಳ್ರು ಅಂತ ಹೆಸರು ಪಡದೋರು ನೀವು. ಅಧಿಕಾರ ಮಾಡ್ತ ಸರಕಾರನೆ ಕೊಳ್ಳೆ ಹೊಡಿತಾಯಿರೋರು ಅವುರು.”

“ಅದಕೆ ನಾನು ಅವರನ್ನ ಸುಮ್ಮನೆ ಬಿಡಬಾರ್ದು ಅಂತ ಕಲ್ಯಾಣ ಪ್ರಗತಿ ಪಕ್ಷ ಮಾಡಿದ್ದಿನಿ.”

“ಪ್ರಾದೇಶಿಕ ಪಕ್ಷ ಮಾಡಿದೋರ್ಯಾರು ಸಕ್ಸಸ್ ಆಗಿಲವಂತಲ್ಲಾ ಸಾರ್?”

“ಆಗಿಲ್ಲ ಅನ್ನದನ್ನ ನಾನು ಕೂಡ ಗಮನಿಸಿದ್ದೀನಿ. ಮಾನ್ಯ ಎಡೂರಪ್ಪನವರು ಮಾಡಿದ್ರು ಬಿಜೆಪಿನ ಅಧಿಕಾರದಿಂದ ದೂರ ಇಟ್ಟರು. ಆ ನಂತರ ಬಿಜೆಪಿಯವರೇ ಕರದು ಅಧಿಕಾರವನ್ನ ಕೊಟ್ರು. ನಾನು ಕೂಡ ಹಾಗೇ ಮಾಡ್ತಿನಿ ನೋಡಿ.”

“ವಿಜಯನಗರ ಸಾಮ್ರಾಜ್ಯ ಆಳಿದೋರು ತೆಲುಗರಂತೆ! ಅವರ ನಂತರ ನೀವೇನಾದ್ರು ಪವರ್ರಿಗೆ ಬಂದ್ರೆ ಮತ್ತೆ ಕಲ್ಯಾಣ ಕರ್ನಾಟಕ ಸಾಮ್ರಾಜ್ಯ ಸ್ಥಾಪನೆ ಆಗುತ್ತಲ್ಲ ಸಾರ್?”

“ಈಗಲೂ ಕಲ್ಯಾಣ ಕರ್ನಾಟಕ ತೆಲುಗರದ್ದೇ ಆಗಿದೆ ಕಂಡ್ರಿ. ಇಲ್ಲಿನ ಜಿಲ್ಲಾಪಂಚಾಯ್ತಿ ಸದಸ್ಯರು, ಗ್ರಾಮಪಂಚಾಯ್ತಿ ಸದಸ್ಯರು, ಎಮ್ಮೆಲ್ಲೆ, ಮಂತ್ರಿಗಳೆಲ್ಲಾ ತೆಲುಗು ಭಾಷಿಕರು. ಅವರಿಗೊಬ್ಬ ಲೀಡರು ಬೇಕು ಆ ಕೊರತೆಯನ್ನ ನಾನು ತುಂಬತೀನಿ.”

“ಮತ್ತೆ ಸಮಗ್ರ ಕರ್ನಾಟಕದ ಮಾತನಾಡ್ತಿರಿ?”

“ಅದು ಕೂಡ ನಿಜ. ಇಡೀ ಕರ್ನಾಟಕ ಅಭಿವೃದ್ಧಿ ನಮ್ಮ ಕನಸು.”

“ನಿಮ್ಮ ಕನಸು ನನಸಾಗದಕ್ಕೆ ಕರ್ನಾಟಕ ಕಾಯ್ತಯಿದೆ ಸಾರ್, ನೀವು ನಿಮ್ಮ ಕಾರ್ಯಕ್ಷೇತ್ರನ ಎಲ್ಲಾ ಜಿಲ್ಲೆಗೂ ವಿಸ್ತರಿಸಿಕೊಳ್ಳೊದಾದ್ರೆ ನಿಧಿ ತರದ ಗುಡ್ಡಗಳು ನಿಂತಿವೆ, ಕನಕಪುರದ ಕಡೆ ಗ್ರಾನೈಟ್ ಬೆಟ್ಟಗಳಿವೆ, ಇನ್ನ ಪಾಂಡವಪುರದ ಕಡೆ ಪುಟ್ಟರಾಜನ ಬೆಟ್ಟಗಳಿವೆ, ಚಿಕ್ಕಮಗಳೂರಿಗೆ ಬಂದ್ರೆ ಗಣಿ ಗಿರಿಗಳ ಸಾಲೇಯಿದೆ, ಶಿವಮೊಗ್ಗದ ಕಡೆ ಕುಂದಾದ್ರಿ ಕೊಡಚಾದ್ರಿ ಬೆಟ್ಟಗಳಿವೆ. ಇನ್ನ ನಿಮ್ಮಲ್ಲೇ ಕಪ್ಪತ್ತ ಗುಡ್ಡ ಸಾಲಿದೆ. ನೀವು ಯಾವುದೇ ಜಿಲ್ಲೆಗೋದ್ರು ಗಣಿಗುಡ್ಡಗಳಿವೆ ಸಾರ್. ಅವನ್ನೆಲ್ಲಾ ನೆಲಸಮ ಮಾಡಿ ಕಲ್ಯಾಣ ರಾಜ್ಯದ ಕೃಷ್ಣದೇವರಾಯನ ಕಾಲ ಮಾಡಬಹುದು. ನಿಮ್ಮ ಖಾಸಗಿ ದರ್ಬಾರಿನಲ್ಲಿರೊ ಕುರ್ಚಿ ಮೇಲೆ ತಿರುಪತಿ ತಿಮ್ಮಪ್ಪನಿಗೆ ಮಾಡಿಸಿ ಕೊಟ್ಟಂತ ಕಿರೀಟ ಧರಿಸಿ ಕೂತಗಬಹುದು. ಆಗ ಬಿಜೆಪಿ ಕಣ್ಣು ತಪ್ಪಿಸಿ ರಾಮುಲು ಬರ್ತರೆ.”

“ರಾಮುಲು ಬಂದ್ರೆ ಅವರನ್ನೆ ಮುಖ್ಯಮಂತ್ರಿ ಮಾಡ್ತಿನಿ.”

“ನೀವು?”

“ನಾನು ಉಪಮುಖ್ಯಮಂತ್ರಿ ಮತ್ತೆ ಗಣಿಕಾತೆ ತಗೊತಿನಿ.”

ಥೂತ್ತೇರಿ.


ಇದನ್ನೂ ಓದಿ: ಉಗ್ರರನ್ನೇ ಬಿಡದ ಮೋದಿ ರೌಡಿಗಳನ್ನು ಬಿಟ್ಟಾರಾ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...