ಸದ್ಯದ ಬಿಜೆಪಿ ಪಾರ್ಟಿಯೊಳಗೆ ರೌಡಿಗಳ ನೂಕುನುಗ್ಗಲು ನೋಡಿದ ಪ್ರತಾಪ ಸಿಮ್ಮ, ರೌಡಿಗಳು ಹೆದರಿ ಬಿಜೆಪಿಯೊಳಕ್ಕೆ ಬರಲುಕಾರಣ ನಮ್ಮ ಮೋದಿಯವರೇ ಎಂದರಂತಲ್ಲಾ; ಮೋದಿ ಉಗ್ರರನ್ನೇ ಅಟ್ಟಾಡಿಸಿಕೊಂಡು ಲಾಠಿ ಬೀಸುತ್ತಿದ್ದಾರೆ, ಆ ಲಾಠಿಗೆ ಸಿಕ್ಕ ಉಗ್ರರ ಕೆನ್ನೆ ಸಿಗಿದು ಹಲ್ಲು ಮುರಿದಿವೆ, ಕಣ್ಣು ಗೋಲಿಯಂತೆ ಆಕಾಶಕ್ಕೆ ಹಾರಿವೆ, ಕಿವಿ ತೂತುಬಿದ್ದು ಕೋಳ ತೊಡಿಸುವಂತಾಗಿವೆ; ಇದನ್ನ ನೋಡಿದ ಕೇಳಿದ ಊರ ರೌಡಿಗಳು, ಸದ್ಯಕ್ಕೆ ನಮ್ಮ ಅಂಗಾಂಗಗಳು ಆರೋಗ್ಯವಾಗಿರಬೇಕಾದರೆ, ಇದ್ದಂತೆಯೇ ಇರಬೇಕಾದರೆ ಮೋದಿ ಪಾರ್ಟಿಗೆ ಹೋಗಿ ಜೈಕಾರ ಹಾಕುವುದು ಬಿಟ್ಟು ಬೇರೆ ದಾರಿಯೇ ಕಾಣುತ್ತಿಲ್ಲ ಆದ್ದರಿಂದ ಬಿಜೆಪಿ ದಾರಿಯೇ ನಮಗೆ ಸೂಕ್ತವೆಂದು ತೀರ್ಮಾನಿಸಿದ್ದಾರೆ ಎಂದರಂತಲ್ಲಾ. ಇದಕ್ಕೆ ಒಂದು ಕಾರಣ ಸೇರಿಸುವುದಾದರೇ ಮೋದಿ ಸರಕಾರದ ಸಮಯದಲ್ಲಿ ಸಾವಿರಾರು ಮುಸ್ಲಿಮರನ್ನು ಸದೆಬಡಿದವರು ದೊಡ್ಡದೊಡ್ಡ ಹುದ್ದೆಗೆ ಏರಿದರು; ಇನ್ನು ಅವರ ಪಾರ್ಟಿಯ ರಾಜಕಾರಣಿಯೊಬ್ಬ ಕೇಸೊಂದರಲ್ಲಿ ಗಡಿಪಾರಾಗಿ ಕೊನೆಗೆ ಗೃಹಮಂತ್ರಿಯಾಗಿ ತನಗಾಗದವರ ಪಟ್ಟಿ ತಯಾರಿಸುತ್ತ ಕುಳಿತಿದ್ದಾರಂತಲ್ಲ. ಇಂತಹ ಜನ ಮುಂದೆ ಏನಾದರೂ ಮಾಡಬಲ್ಲರಾದ್ದರಿಂದ, ಆಡಳಿತ ನಡೆಸುತ್ತಿರುವ ಪಾರ್ಟಿಗೆ ಹೋಗಿ ಅಡಗಿಕೊಳ್ಳುವುದು ಸೂಕ್ತ ಎಂದು ಆಲೋಚಿಸುತ್ತಿರುವಾಗ ಫೈಟರ್ ರವಿ ಎಂಬಾತ ನಾಗಮಂಗಲದ ಕಡೆ ಹೊರಟನಂತಲ್ಲಾ, ಥೂತ್ತೇರಿ.
*****
ಈ ನಾಗಮಂಗಲಕ್ಕೂ ರಾಜಕಾರಣ ಕುಖ್ಯಾತಿಗೂ ಒಂದು ಇತಿಹಾಸವಿದೆ. ಈ ಹಿಂದೆ ಇಲ್ಲಿ ಶಾಸಕ, ಮಂತ್ರಿ ಮತ್ತು ವಿರೋಧ ಪಕ್ಷದ ನಾಯಕರಾಗಿದ್ದ ಹೆಚ್.ಟಿ ಕೃಷ್ಣಪ್ಪನವರು, ಹಿಂದೆ ಬಂದರೆ ಒದೆಯದ ಮುಂದೆ ಬಂದರೆ ಹಾಯದ ಗೋವಿನ ರೀತಿಯ ವ್ಯಕ್ತಿ; ಇದನ್ನು ತಮ್ಮ ಬದುಕಿನುದ್ದಕ್ಕೂ ಪಾಲಿಸಿದ್ದ ಮತ್ತು ವಕೀಲರಾಗಿದ್ದ ಇವರು ರಾಜಕಾರಣಕ್ಕೆ ಬಂದಿದ್ದು ಕೊಲೆಗಾರ ಅಪರಾಧಿಗಳನ್ನು ಬಿಡಿಸಿದ ಕಾರಣಕ್ಕೆ. ಗುಳುಕಾಯಿ ಹೊಸಳ್ಳಿ ಜನ ಶಾನುಭೋಗರನ್ನೇ ಕೊಲೆ ಮಾಡಿ ಜೈಲಿಗೆ ಹೋದರು. ಅವರನ್ನೆಲ್ಲಾ ನಿರಪರಾಧಿಗಳೆಂದು ತಾಂತ್ರಿಕ ಕಾರಣಗಳ ಮುಖಾಂತರ ಖುಲಾಸೆಗೊಳಿಸಿದರು. ಕೊಲೆಗಾರರನ್ನು ಬಿಡಿಸಿದ ವ್ಯಕ್ತಿ ನಮ್ಮನ್ನ ರಕ್ಷಿಸುತ್ತಾನೆಂದು ಭಾವಿಸಿದ ಜನ ಚುನಾವಣೆಯಲ್ಲಿ ಗೆಲ್ಲಿಸಿ ಶಾಸಕನನ್ನಾಗಿ ಮಾಡಿದರು. ಇವರ ನಂತರ ಬಂದ ಶಿವರಾಮೇಗೌಡ, ಗಂಗಾಧರಮೂರ್ತಿಯ ಕೊಲೆ ಕೇಸಿನಲ್ಲಿ ಸಿಲುಕಿ ಅಂತೂ ಆರೋಪಮುಕ್ತರಾಗಿ ಬಚಾವಾದರು. ಇವರ ನಂತರ ಬಂದ ಚಲುವರಾಯಸ್ವಾಮಿ ಬಳಿಯಿದ್ದ ಕೆಲ ರೌಡಿಗಳು ನಿಷ್ಠಾವಂತ ನಾಯಿಗಳಂತೆ ಬಾಲ ಅಲ್ಲಾಡಿಸಿದರೆ ಹೊರತು ಯಾರ ಮೇಲೂ ದಾಳಿ ಮಾಡಲಿಲ್ಲ. ಇವರ ನಂತರ ಬಂದ ಸುರೇಶ್ಗೌಡ ಹೆಚ್ಎಎಲ್ನ ವಸತಿ ನಿರ್ಮಾಣದ ಸೊಸೈಟಿ ಹಣದ ಅವ್ಯವಹಾರದ ಜೊತೆಗೆ ರೌಡಿಗಳಿಂದಲೂ ಹಣ ಪಡೆದು ಅದನ್ನು ಹಿಂದಿರುಗಿಸದೇ ಇರುವುದರಿಂದ ಆತನನ್ನ ಸೋಲಿಸಲೆಂದೇ ಫೈಟರ್ ರವಿ ಎಂಬ ರೌಡಿ ಬಂದು ಇಡೀ ತಾಲೂಕಿನ ತುಂಬ ಕಟೌಟ್ ಹಾಕಿದ್ದನಂತಲ್ಲಾ. ಏನು ಮಾಡಿದರೂ ರೌಡಿಯಂತೆ ಕಾಣದೆ ಮಠದ ಮೃತ ಸ್ವಾಮಿಯಂತೆ ಕಾಣುತ್ತಿದ್ದಾನೆ ಎಂದು ಜನ ನಗುತ್ತಿದ್ದಾರಲ್ಲಾ, ಥೂತ್ತೇರಿ.
*****
ಹಿಂದೆ ಹೆಚ್ಚು ಯುದ್ಧಗಳಾಗುತ್ತಿದ್ದವು; ದೈಹಿಕವಾಗಿ ಭಲಾಢ್ಯವಾಗಿದ್ದ ಮತ್ತು ತೋಳು ತಿಮಿರಿನ ಜನ ಸೈನ್ಯಕ್ಕೆ ಸೇರಿ ಹತರಾಗುತ್ತಿದ್ದರು. ಅವರ ಹೆಂಡತಿಯರು ಅನಿವಾರ್ಯವಾಗಿ ಸಮಸ್ಯೆಗಳಿಗೆ ತುತ್ತಾಗುತ್ತಿದ್ದರು. ಇವರೆಲ್ಲಾ ಹೆಚ್ಚಿನ ಸಂಖ್ಯೆಯಲ್ಲಿ ಶೋಷಿತ ಸಮುದಾಯಗಳ ಜನ. ಸ್ವಾತಂತ್ರ್ಯಾನಂತರ ರಾಜಗುರುಗಳು ನಿರ್ನಾಮವಾಗಿ ಸೈನಿಕರು ಇಲ್ಲವಾದ ಕಾರಣ ಆ ಮನಸ್ಥಿತಿಯವರು ಊರುಗಳಲ್ಲೇ ರೌಡಿಗಳಾದರು; ಅವರು ಆ ತರಹ ಆಗಲು ಒಂದು ಸಣ್ಣ ಕಾರಣ ಸಾಕು, ಮುಂದೆ ಪೊಲೀಸರೇ ಬೆಳೆಸಿ ಭೂಗತಲೋಕ ಸೇರಿಸುತ್ತಾರೆ. ಈ ಭೂಗತ ಲೋಕದ ಕೃತ್ಯಗಳು ಭಯಾನಕ. ರೌಡಿಗಳ ಆಯಸ್ಸು ಮುಗಿದು ಸತ್ತ ಉದಾಹರಣೆ ವಿರಳ. ಭೂಗತ ಲೋಕದ ರಾಜ-ಡಾನ್ ದೈತ್ಯ ದೇಹಿಯಾಗಿರುತ್ತಾನೆ. ಜಯರಾಜ್, ಬಲರಾಮ್, ಫಯಾಜ್, ಕೊತ್ವಾಲ, ಶಿವರಾಂ, ಸುನಿಲ್ ಇತ್ಯಾದಿ ವ್ಯಕ್ತಿಗಳ ಆಕಾರ ನೋಡಿದರೆ ನಿಮಗೆ ತಿಳಿಯುತ್ತದೆ. ಆದರೆ ದೇಹಾಕೃತಿಯಲ್ಲ ದುರ್ಬಲವಾಗಿದ್ದ ಮುತ್ತಪ್ಪ ರೈ ಬುದ್ಧಿವಂತಿಕೆ ಉಪಯೋಗಿಸಿ ಭೂಗತಲೋಕಕ್ಕೆ ಪಿಸ್ತೂಲು ತಂದ ವ್ಯಕ್ತಿ. ಅದನ್ನ ಆತನೇ ಉಪಯೋಗಿಸಬೇಕಿಲ್ಲ; ಕಾಸುಕೊಟ್ಟು ನಿರ್ದೇಶನ ನೀಡಿದರೆ ಸಾಕು; ಯಾವ ಹುಡುಗನಾದರೂ ಆ ಕೆಲಸ ಮಾಡಿ ತಲೆಮರೆಸಿಕೊಳ್ಳಬಲ್ಲ. ಇಂತಹ ಕೆಲಸವನ್ನ ದುಬಾಯಿಯಲ್ಲಿ ಕುಳಿತು ಮಾಡಿ ಯಾವ ಕೇಸುಗಳನ್ನು ಕಡಿಮೆ ಅಂಟಿಸಿಕೊಂಡು ಬದುಕಿದವನು ಈ ಮುತ್ತಪ್ಪ ರೈ. ಅಂತಹ ರೈಗೂ ನಾಗಮಂಗಲದ ಕಡೆ ಚಿಲ್ಲರೆ ರಾಜಕಾರಣಿಯೊಬ್ಬ ಕೋಟ್ಯಂತರ ರೂಪಾಯಿಗಳ ನಾಮ ಎಳೆದು, ನಾಳೆ ಕೊಡುತ್ತೇನೆ ನಾಡಿದ್ದು ಗ್ಯಾರಂಟಿ ಎಂದು ಹೇಳುತ್ತಿರುವಾಗಲೇ ಮುತ್ತಪ್ಪ ರೈ ದೇಹ ತ್ಯಜಿಸಿದ. ಅಂತಹ ಮುತ್ತಪ್ಪನಿಗೆ ಮಣ್ಣು ತಿನ್ನಿಸಿದವರು ಈ ನಾಗಮಂಗಲದ ಮಣ್ಣಿನವನು ಅನ್ನುವುದಾದರೆ ಇನ್ನ ಬಿಜೆಪಿ ರೌಡಿಗಳು ಇಲ್ಲಿ ಉದ್ಧಾರವಾಗುವುದುಂಟೆ, ಥೂತ್ತೇರಿ.
*****
ಬೆಂಗಳೂರಿಂದ ಎರಡೂವರೆ ಗಂಟೆ ಪ್ರಯಾಣದಷ್ಟು ದೂರವಿರುವ ನಾಗಮಂಗಲ ಕೆಲ ರೌಡಿಗಳಿಗೆ ಸುರಕ್ಷಿತ ಜಾಗ. ದರೋಡೆ ಕೇಸೊಂದರಿಂದ ಪರಾರಿಯಾಗಿ ಎಲ್ಲಿ ಅಡಗಿಕೊಳ್ಳಬೇಕೆಂದು ರೌಡಿಗಳೆಲ್ಲಾ ಚರ್ಚಿಸುತ್ತಿರುವಾಗ ಇವರಿಗೆ ಕಾಫಿ, ಸಿಗರೇಟು ತಂದುಕೊಡುತ್ತಿದ್ದ ಹುಡುಗನೊಬ್ಬ ,”ಸಾರ್ ನಾಗಮಂಗಲದತ್ರ ಇರೋ ನಮ್ಮೂರಲ್ಲಿರಿ, ಅಲ್ಲಿಗೆ ಯಾರೂ ಬರಕ್ಕಾಗಲ್ಲ” ಎಂದ. ಮರು ಮಾತನಾಡದ ರೌಡಿಗಳು ಆ ಮುಗ್ದ ಹುಡುಗನ ಹಿಂದೆ ಬಂದು ಅವನ ಮನೆಯೊಳಗೆ ಇಸ್ಪಿಟ್ ಆಡುತ್ತ, ಮಾಂಸ ಮದ್ಯದ ಅಮಲಲ್ಲಿ ತೇಲಾಡುತ್ತಿರುವಾಗ ಹುಡುಗನ ಅಪ್ಪ “ಮಗ ಯಾರ್ಲ ಇವುರು” ಅಂದ. “ಇವುರ್ಯೆಲ್ಲ ಬೆಂಗಳೂರು ರೌಡಿಗಳು ಕಣಪ್ಪ, ಯಾವ ಕ್ಯಲಸ ಮಾಡಕ್ಕೂ ಹೇಸದಿಲ್ಲ. ಅದೇನೊ ಮಾಡಿ ಇಲ್ಲಿ ಬಂದವುರೆ ಯಾರಿಗೂ ಹೇಳಬ್ಯಾಡ” ಅಂದ. ಕೂಡಲೇ ಆ ಅಪ್ಪ ರೌಡಿಯೊಬ್ಬನ ಜುಬ್ಬ ಹಾಕಿಕೊಂಡ; ಅದಾಗಲೇ ರೌಡಿಗಳೇ ಕೊಟ್ಟ ವಿಸ್ಕಿ ಕುಡಿದಿದ್ದರಿಂದ, ಊರಮುಂದಿನ ಕಟ್ಟೆಮೇಲೆ ಕುಳಿತು “ಅದ್ಯಾವನನ್ನ ಮಗ ಬತ್ತಿರೋ ಬರ್ಲಿ, ಏನಂತ ತಿಳಕಂಡಿದ್ದಿರಿ ಈ ನನ್ನ? ಬಂದು ಮುಟ್ಟಿ ನೋಡಿ ನಿಮ್ಮ ಕತೆ ಏನಾಯ್ತದೆ ಅಂತ ಗೊತ್ತಾಯ್ತದೆ. ಯಂಥಾ ಜನ ತಂದು ನನ್ನ ಮನಿಲಿ ಮಡಿಕಂಡಿದ್ದಿನಿ ಗೊತ್ತೆ? ಕೊಲೆ ಮಾಡಿ ಜಯಿಸಿಗಂಡೋರು ನನ್ನ ಮನೇಲಿ ಇಸ್ಪೀಟ್ ಆಡ್ತಾ ಅವುರೆ ಗೊತ್ತೆ” ಎಂದು ಅವಾಜ್ ಹಾಕಿದ. ಆತನ ಎದುರು ಜನ ಸೇರತೊಡಗಿದರು. ಇತ್ತ ರೌಡಿಗಳು ಹಿತ್ತಲ ಬಾಗಿಲಿಂದ ಎದ್ದುಬಿದ್ದು ಓಡತೊಡಗಿದರು! ಎಂದಿನಂತೆ ಊರ ಜನಕ್ಕೆ ಆ ಕೊಚ್ಚಿಕೊಂಡ ವ್ಯಕ್ತಿ ಮತ್ತೊಂದು ಸುಳ್ಳು ಹೇಳಿದಂತಾಯ್ತು. ಈಗ ಅಂತಹ ಸ್ಥಿತಿಯಿಲ್ಲ. ಫೈಟರ್ ರವಿ ಕಾರಣಕ್ಕೆ ಬೆಂಗಳೂರು ಕೆಲ ಪುಡಿರೌಡಿಗಳು ಬಂದು ಇಲ್ಲಿನ ತೋಟ ತುಡಿಕೆಯಲ್ಲಿ ಬೇಯುತ್ತಿರುವ ಬಾಡಿಗಾಗಿ ಕಾಯಬಹುದು. ಅಂತೂ ಬಿಜೆಪಿ ಪಾಪದಕೊಡ ರೌಡಿಗಳಿಂದ ತುಂಬತೊಡಗಿದೆಯಂತಲ್ಲಾ, ಥೂತ್ತೇರಿ.
ಇದನ್ನೂ ಓದಿ: ಅನಂತನಾಗ್ ಮೋದಿ ಮೆಚ್ಚಿದ್ದರಲ್ಲಿ ಅಚ್ಚರಿಯೇನಿಲ್ಲ!