ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸಿದ್ದು ಆರಾಮದಾಯಕ ಬಹುಮತ ಸಾಧಿಸಿದೆ. ಬಿಜೆಪಿ ಪಕ್ಷವು 25 ಸ್ಥಾನಗಳಿಗೆ ಸೀಮಿತಗೊಂಡು ಪ್ರತಿಪಕ್ಷ ಸ್ಥಾನದಲ್ಲಿ ಕೂತಿದೆ. ಬಂಡಾಯ ಪಕ್ಷೇತರ ಅಭ್ಯರ್ಥಿಗಳು 8 ಕಡೆಗಳಲ್ಲಿ ಬಿಜೆಪಿ ಸೋಲಿಗೆ ಕಾರಣವಾದರೆ, ನಾಲ್ಕು ಕಡೆಗಳಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣರಾಗಿದ್ದಾರೆ. ಈ ನಡುವೆಯು ಕೇಂದ್ರ ಸಚಿವ ಅನುರಾಗ್ ಠಾಕೂರ್ ಪ್ರತಿನಿಧಿಸುವ ಹಮೀರ್ಪುರ್ ಲೋಕಸಭೆ ಕ್ಷೇತ್ರದ 5 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಬಿಜೆಪಿ ಸೋಲು ಕಂಡಿರುವುದು ಚರ್ಚೆಗೆ ಗ್ರಾಸವಾಗಿದೆ.
ಚುನಾವಣೆಗೂ ಮುನ್ನವೇ ಹಿಮಾಚಲ ಪ್ರದೇಶದವರೆ ಆದ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ಮತ್ತು ಕೇಂದ್ರ ಸಚಿವ ಅನುರಾಗ್ ಠಾಕೂರ್ ನಡುವೆ ಮನಸ್ಥಾಪವಿತ್ತು. ಅವರಿಬ್ಬರೂ ಪರಸ್ಪರ ಮಾತನಾಡದೇ ಪ್ರತ್ಯೇಕ ಬಣಗಳಾಗಿ ಗುರುತಿಸಿಕೊಂಡಿದ್ದರು. ಚುನಾವಣೆಯ ಫಲಿತಾಂಶದಲ್ಲಿ ಅನುರಾಗ್ ಠಾಕೂರ್ ವಿಫಲರಾದರೆ, ಜೆ.ಪಿ ನಡ್ಡಾ ತನ್ನ ಸ್ವಂತ ಲೋಕಸಭಾ ಕ್ಷೇತ್ರದ ಬಿಲಾಸ್ಪುರ್ನಲ್ಲಿನ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಜಯ ಗಳಿಸುವಂತೆ ಮಾಡುವ ಮೂಲಕ ಮೇಲುಗೈ ಸಾಧಿಸಿದ್ದಾರೆ.
ಅನುರಾಗ್ ಠಾಕೂರ್ ಅವರ ತಂದೆ ಮತ್ತು ಮಾಜಿ ಮುಖ್ಯಮಂತ್ರಿ ಪ್ರೇಮ್ ಕುಮಾರ್ ಧುಮಾಲ್ ಅವರು ಸ್ಪರ್ಧಿಸುತ್ತಿದ್ದ ಸುಜಾನ್ಪುರದಿಂದ ಕಾಂಗ್ರೆಸ್ ಅಭ್ಯರ್ಥಿ 399 ಮತಗಳ ಅಂತರದಿಂದ ಗೆದ್ದಿದ್ದಾರೆ. ಪ್ರೇಮ್ ಕುಮಾರ್ ಧುಮಾಲ್ರವರು 2017ರಲ್ಲಿ ಆ ಕ್ಷೇತ್ರದಲ್ಲಿ ಸೋತ ಕಾರಣ ಅವರಿಗೆ ಈ ಬಾರಿ ಟಿಕೆಟ್ ನೀಡರಲಿಲ್ಲ. ಒಟ್ಟಾರೆ ಹಮೀರ್ಪುರ್ ಲೋಕಸಭಾ ಕ್ಷೇತ್ರದ 5 ಸ್ಥಾನಗಳಲ್ಲಿ ನಾಲ್ಕು ಕಡೆ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದರೆ, ಒಂದು ಕಡೆ ಪಕ್ಷೇತರ ಅಭ್ಯರ್ಥಿ ಜಯ ಸಾಧಿಸಿದ್ದಾರೆ. ಹಾಗಾಗಿ ಅನುರಾಗ್ ಠಾಕೂರ್ ವಿರುದ್ಧ ಬಿಜೆಪಿ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ.
2019ರ ಲೋಕಸಭಾ ಚುನಾವಣೆಯಲ್ಲಿ ಅನುರಾಗ್ ಠಾಕೂರ್ 4 ಲಕ್ಷ ಮತಗಳ ಅಂತರದಿಂದ ಅಲ್ಲಿ ಜಯಗಳಿಸಿದ್ದರು.
ಇನ್ನು ಜೆ.ಪಿ ನಡ್ಡಾರವರು ಪ್ರತಿನಿಧಿಸುವ ಬಿಲಾಸ್ಪುರ್ನಲ್ಲಿನ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಸಣ್ಣ ಅಂತರದಲ್ಲಿ ಜಯ ಸಾಧಿಸಿದ್ದಾರೆ.
ಇದನ್ನೂ ಓದಿ: ಜೆಪಿ ನಡ್ಡಾ v/s ಅನುರಾಗ್ ಠಾಕೂರ್: ಹಿಮಾಚಲ ಪ್ರದೇಶದಲ್ಲಿ ಬಿಜೆಪಿಯೊಳಗೆ ಭಿನ್ನಮತ