ಚಂಡೀಗಢ ಗುರುದ್ವಾರವೊಂದರ ಬಳಿ ಸಿಖ್ಖರ ಪವಿತ್ರ ಗ್ರಂಥವಾದ ಗುರು ಗ್ರಂಥ ಸಾಹಿಬ್ನ ಕೆಲವು ಪುಟಗಳನ್ನು ಹರಿದು ಹಾಕಿದ ಆರೋಪದಲ್ಲಿ ಶನಿವಾರದಂದು 19 ವರ್ಷದ ಯುವಕನನ್ನು ಥಳಿಸಿ ಹತ್ಯೆ ಮಾಡಿರುವ ಘಟನೆ ಪಂಜಾಬ್ನ ಫಿರೋಝ್ಪುರ್ನಲ್ಲಿ ನಡೆದಿದೆ.
ಪೊಲೀಸ್ ಅಧಿಕಾರಿಗಳ ಪ್ರಕಾರ, ಬಂಡಾಲಾ ಗ್ರಾಮದ ಗುರುದ್ವಾರದ ಆವರಣಕ್ಕೆ ಪ್ರವೇಶಿಸಿದ ತಳ್ಳಿ ಗುಲಾಮ್ ಗ್ರಾಮದ ನಿವಾಸಿ ಬಕ್ಷೀಶ್ ಸಿಂಗ್ ಸಿಖ್ಖರ ಪವಿತ್ರ ಗ್ರಂಥವಾದ ಗುರು ಗ್ರಂಥ ಸಾಹಿಬ್ನ ಕೆಲವು ಪುಟಗಳನ್ನು ಹರಿದು ಹಾಕಿದ್ದಾನೆ. ಈ ಘಟನೆ ಗುರುದ್ವಾರದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದರಿಂದ ಆಕ್ರೋಶಿತ ಗುಂಪು ಆತನಿಗೆ ಥಳಿಸಿ ಹತ್ಯೆ ಮಾಡಿದೆ.
ಸಂತ್ರಸ್ತನ ತಂದೆ ಲಖ್ವಿಂದರ್ ಸಿಂಗ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ತನ್ನ ಮಗ ಬಕ್ಷೀಶ್ಗೆ ಮಾನಸಿಕ ಅಸ್ವಸ್ಥತೆಯಿದ್ದು, ಅದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಪೊಲೀಸರು ಮಗನ ವಿರುದ್ಧ ಅವಹೇಳನದ ಆರೋಪದ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ. ಆದರೆ ತನ್ನ ಮಗನ ಸಾವಿಗೆ ಕಾರಣರಾದವರ ವಿರುದ್ಧ ಪೊಲೀಸರು ಪ್ರಕರಣವನ್ನು ದಾಖಲಿಸಬೇಕು ಎಂದು ಬಕ್ಷೀಶ್ ತಂದೆ ಪೊಲೀಸರನ್ನು ಒತ್ತಾಯಿಸಿದ್ದಾರೆ.
ಪೋಲೀಸರ ಪ್ರಕಾರ, ಬಕ್ಷೀಶ್ ಗುರು ಗ್ರಂಥ ಸಾಹಿಬ್ನ ಕೆಲವು ಪುಟಗಳನ್ನು ಹರಿದು ಪರಾರಿಯಾಗಲು ಪ್ರಯತ್ನಿಸಿದ್ದಾನೆ. ಆತನನ್ನು ಕೆಲವರು ಹಿಡಿದಿದ್ದಾರೆ ಮತ್ತು ಘಟನೆಯ ಸುದ್ದಿ ಹರಡುತ್ತಿದ್ದಂತೆ ಗ್ರಾಮಸ್ಥರು ಗುರುದ್ವಾರದಲ್ಲಿ ಜಮಾಯಿಸಿ ಯುವಕನಿಗೆ ಥಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಆತನನ್ನು ಆಸ್ಪತ್ರೆಗೆ ಸಾಗಿಸಿದರಾದರೂ, ಆತ ಆ ಹೊತ್ತಿಗಾಗಲೇ ಮೃತಪಟ್ಟಿದ್ದ ಎಂದು ಹೇಳಲಾಗಿದೆ.
ಘಟನೆಯ ನಂತರ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸೌಮ್ಯ ಮಿಶ್ರಾ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಗ್ರಾಮಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಗುರು ಗ್ರಂಥ ಸಾಹಿಬ್ ಸತ್ಕಾರ್ ಸಮಿತಿಯ ಅಧ್ಯಕ್ಷ ಲಖ್ವೀರ್ ಸಿಂಗ್ ನೀಡಿದ ದೂರಿನ ಮೇರೆಗೆ ಆರಿಫ್ ಕೆ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 295-ಎ ಅಡಿಯಲ್ಲಿ ಪೊಲೀಸರು ಮೃತ ಬಕ್ಷೀಶ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ಅಕಾಲ್ ತಖ್ತ್ ಜಥೇದಾರ್ ಗಿಯಾನಿ ರಘಬೀರ್ ಸಿಂಗ್ ಫಿರೋಜ್ಪುರದಲ್ಲಿ ಗುರು ಗ್ರಂಥ ಸಾಹಿಬ್ನ ಕೆಲವು ಪುಟಗಳನ್ನು ಹರಿದು ಹಾಕಿದ ಘಟನೆಯನ್ನು ಖಂಡಿಸಿದ್ದಾರೆ. ಹತ್ಯೆಯ ಆರೋಪಿಗಳ ಕುಟುಂಬವನ್ನು ಬಹಿಷ್ಕರಿಸಬೇಕು ಮತ್ತು ಯಾವುದೇ ಗುರುದ್ವಾರದಲ್ಲಿ ಆರೋಪಿಗಳ ಅಂತ್ಯಕ್ರಿಯೆಯನ್ನು ನಡೆಸಲು ಅನುಮತಿಸಬಾರದು, ಇಂತಹ ಯೋಜಿತ ಪಿತೂರಿಗಳು ಹಲವು ಕಾಲದಿಂದ ನಡೆಯುತ್ತಿದೆ, ಫಿರೋಜ್ಪುರದಲ್ಲಿ ನಡೆದ ಘಟನೆಯು ತೀವ್ರ ವಿಷಾದನೀಯ ಮತ್ತು ಸಿಖ್ಖರ ಭಾವನೆಗಳನ್ನು ಘಾಸಿಗೊಳಿಸಿದೆ ಎಂದು ಹೇಳಿಕೊಂಡಿದ್ದಾರೆ.
ಇದನ್ನು ಓದಿ: ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಭಾರತದಲ್ಲಿ ಬಿಕ್ಕಟ್ಟಿನಲ್ಲಿ ಪತ್ರಿಕಾ ಸ್ವಾತಂತ್ರ್ಯ: ವರದಿ