Homeಮುಖಪುಟಕನ್ನಡದ ಕಣ್ಮಣಿ ಸಾರಾ

ಕನ್ನಡದ ಕಣ್ಮಣಿ ಸಾರಾ

- Advertisement -
- Advertisement -

ಸಾರಾ ಇನ್ನಿಲ್ಲ ಎನ್ನುವ ಸುದ್ದಿ ತಲುಪಿ ಕೆಲವೇ ಗಂಟೆಗಳಲ್ಲಿ ಅವರ ಮನೆಯಲ್ಲಿ ಅವರ ಕೊನೆಯ ದರ್ಶನಕ್ಕೆ ಗೆಳತಿಯರೊಂದಿಗೆ ತೆರಳಿದ್ದೆ. ಹೀಗೆ ಅವರ ಮನೆಯಲ್ಲಿ ಸೇರುವುದು ಇದು ಮೊದಲೇನಲ್ಲ. ಇತ್ತೀಚೆಗೆ ಅವರಿಗೆ ಬರಗೂರು ಸಾಹಿತ್ಯ ಪ್ರಶಸ್ತಿ ಬಂದಿದ್ದಾಗಲೂ ನಾವು ಕೆಲವು ಗೆಳತಿಯರು ಅಲ್ಲಿದ್ದೆವು. ಮಗು ಮನಸ್ಸಿನ ಮುಗ್ಧತೆಯೊಂದಿಗೆ ಚಂದದ ಸೀರೆ ಉಟ್ಟುಕೊಂಡು ವೀಲ್ ಚೇರಿನಲ್ಲಿ ಕುಳಿತು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಲೇಖಕಿಯ ಜೊತೆ ನಾವೂ ಸಂಭ್ರಮಿಸಿದ್ದೆವು. ನಮ್ಮ ನಡುವಿನ ಸಾಕ್ಷಿಪ್ರಜ್ಞೆಯಾಗಿ ಇಷ್ಟು ದಿನ ನಮ್ಮೊಡನೆ ಇದ್ದ ಸಾರಾ ಅವರ ಕೊನೆಯ ಭೇಟಿ ನಮ್ಮೊಳಗಿನ ದುಗುಡವನ್ನು ಉಲ್ಬಣಿಸಿತ್ತು. ಹೌದು ಕಳೆದೊಂದು ವರ್ಷಗಳಿಂದ ಅವರಿಗೆ ಬದುಕು ಕಷ್ಟವೇ ಆಗಿತ್ತು.

ಸದಾ ಚಟುವಟಿಕೆಯಿಂದಿರುತ್ತ, ಬಾಯಿ ತುಂಬಾ ಮಾತನಾಡುತ್ತಿದ್ದ ಸಾರಾರನ್ನು ಅಸಹಾಯಕ ಸ್ಥಿತಿಯಲ್ಲಿ ನೋಡುವಾಗ ನಮಗೂ ಕಷ್ಟವಾಗುತ್ತಿತ್ತು. ಅವರು ನಮ್ಮ ಒಡನಾಟ ಬಯಸುತ್ತಿದ್ದರಾದರೂ ಅವರಿಗೆ ನಾವು ಯಾರು ಎಂದು ಗುರುತು ಹಚ್ಚಲು ಕಷ್ಟವಾಗುತ್ತಿತ್ತು. ನಾವು ಅವರ ಕರಾವಳಿಯ ಗೆಳತಿಯರು ಎಂದ ಕ್ಷಣ ಅವರ ಮುಖದಲ್ಲಿ ನಗು ಅರಳುತ್ತಿತ್ತು. ಕುಳಿತುಕೊಳ್ಳುವಂತೆ ಒತ್ತಾಯಿಸುತ್ತಿದ್ದರು. ಬಂದವರಿಗೆ ಬಾಯಾರಿಕೆ ಕೊಡುವಂತೆ ಸೊಸೆಯಂದಿರಿಗೆ ಆಜ್ಞಾಪಿಸುತ್ತಿದ್ದರು. ಅವರನ್ನು ಆವರಿಸಿದ್ದ ವಿಸ್ಮೃತಿಯಲ್ಲೂ ನಮ್ಮ ಹೆಸರನ್ನು ಮತ್ತೆಮತ್ತೆ ಕೇಳಿ ಪುನರುಚ್ಚರಿಸುತ್ತಿದ್ದರು.

ಸಾರಾ ಬರೆದಂತೆ ಬದುಕಿದವರು. ದೊಡ್ಡ ಲೇಖಕಿ ಎನ್ನುವ ಯಾವುದೇ ಹಮ್ಮುಬಿಮ್ಮುಗಳಿಲ್ಲದೆ ಕಿರಿಯರನ್ನು ಒಳಗೊಳ್ಳುವ, ಬರೆಯುವಂತೆ ಪ್ರೇರೇಪಿಸುವ ಅವರ ಸರಳತೆ, ಸಜ್ಜನಿಕೆ ನನ್ನನ್ನು ಅವರ ಹತ್ತಿರ ಸೆಳೆದಿತ್ತು. ಬೆರಗುಗಣ್ಣುಗಳಿಂದ ಅವರನ್ನು ನೋಡುತ್ತ ಅವರ ಸಾಹಿತ್ಯವನ್ನಷ್ಟೂ ಓದುವ ಅವಕಾಶ ನನಗೆ ಲಭ್ಯವಾದದ್ದು ಸ್ವಪ್ನ ಬುಕ್ ಹೌಸ್‌ಗಾಗಿ ಕರ್ನಾಟಕ ಲೇಖಕಿಯರ ಸಂಘದ ಶ್ರೀಮತಿ ಇಂದಿರಾ ಶಿವಣ್ಣ ಅವರ ಮೂಲಕ ಸಾರಾ ಅವರ ಬಗ್ಗೆ ಬರೆಯುವ ಅವಕಾಶ ಒದಗಿಬಂದಾಗ. ಕರಾವಳಿ ಲೇಖಕಿಯರ-ವಾಚಕಿಯರ ಸಂಘದ ಆಗಿನ ಅಧ್ಯಕ್ಷರಾಗಿದ್ದ ಖ್ಯಾತ ಲೇಖಕಿ ಶ್ರೀಮತಿ ಚಂದ್ರಕಲಾ ನಂದಾವರ ಅವರು ನನಗೆ ಬರೆದುಕೊಡುವಂತೆ ಹೇಳಿದ್ದರು. ’ಅಪರಿಚಿತರು ನನ್ನ ಬಗ್ಗೆ ಬರೆಯುವುದು ಯಾಕೆ, ನನ್ನ ಜೊತೆ ನಿತ್ಯ ಒಡನಾಡುವವರು, ನನ್ನ ಅಂತರಂಗ ತಿಳಿದವರು ಬರೆಯಬೇಕು’ ಎಂದು ಪಟ್ಟುಹಿಡಿದಿದ್ದರು ಸಾರಾ. ಕನ್ನಡ ಸಾಹಿತ್ಯ ಲೋಕದಲ್ಲಿ ಅಪರಿಚಿತಳಾಗಿದ್ದ ನನ್ನನ್ನು ತನ್ನ ಆಪ್ತ ಬಳಗಕ್ಕೆ ಸೇರಿಸಿಕೊಂಡು ತನ್ನ ಬಗ್ಗೆ ಬರೆಯುವುದಕ್ಕೆ ಹಚ್ಚಿದರು. ಈ ಮೂಲಕ ನನಗೆ ಆಪ್ತರಾದರು. ಅವರ ಬರಹಗಳನ್ನಷ್ಟು ಓದಿ ಭಟ್ಟಿ ಇಳಿಸಿಕೊಳ್ಳುತ್ತಿದ್ದ ಆ ಕಾಲದಲ್ಲಿ ಅವರೊಳಗಿನ ಅಪ್ಪಟ ಗೃಹಿಣಿಯೊಬ್ಬಳು ನನ್ನೊಳಗೆ ಇಳಿದಿದ್ದಳು. ಬರಹ ಬೇರೆ ಬದುಕು ಬೇರೆ ಎಂದು ಭಾವಿಸಿದವರಲ್ಲ ಸಾರಾ. ಈ ಕಾರಣಕ್ಕೆ ಅವರ ಕೃತಿಗಳು ನಮಗೆ ಆಪ್ತವಾಗುತ್ತವೆ. ಅವರೇ ಹೇಳುವಂತೆ, ’ಚಂದ್ರಗಿರಿಯ ತೀರದಲ್ಲಿ’ ಕಾದಂಬರಿಯ ನಾಯಕಿ ನಾದಿರಾ ಅವರ ಬಾಲ್ಯಕಾಲದ ಸಖಿ; ಅವಳ ತಂದೆ ಇರಬಹುದು, ಗಂಡ ರಶೀದನಿರಬಹುದು- ಅವರೆಲ್ಲಾ ಜೀವನದಲ್ಲಿ ಒಡನಾಡಿದ ಪಾತ್ರಗಳೇ, ಆದ್ದರಿಂದ ಇವು ನಮ್ಮ ಅಂತರಂಗಕ್ಕೆ ಆಪ್ತವಾಗುವುದು. ಮಾನವೀಯತೆಗಾಗಿ, ಇಲ್ಲಿರುವ ಜೀವಪರ ದನಿಗಾಗಿ ಪ್ರಸಿದ್ಧವಾಗಿರುವ ’ಚಂದ್ರಗಿರಿಯ ತೀರದಲ್ಲಿ’ ಕೃತಿ ಮಲಯಾಳಂ, ತಮಿಳು, ತೆಲುಗು, ಮರಾಠಿ, ಒರಿಯ, ಹಿಂದಿ ಭಾಷೆಗಳಿಗೆ ಭಾಷಾಂತರವಾಗಿದೆ. ಈ ಕೃತಿಯನ್ನು ಬೆಂಗಳೂರು ವಿವಿ, ಮಂಗಳೂರು ವಿವಿ, ಕುವೆಂಪು ವಿಶ್ವವಿದ್ಯಾನಿಲಯಗಳಲ್ಲಿ ಪಠ್ಯಪುಸ್ತಕವಾಗಿಯೂ ಕಿರಿಯರು ಓದಿದ್ದಾರೆ. ’ಸಹನ’, ’ವಜ್ರಗಳು’, ’ಕದನ ವಿರಾಮ’, ’ಸುಳಿಯಲ್ಲಿ ಸಿಕ್ಕವರು’, ’ತಳ ಒಡೆದ ದೋಣಿಯಲ್ಲಿ’, ’ಪ್ರವಾಹ ಸುಳಿ’, ’ಪಂಜರ’, ’ಇಳಿಜಾರು’, ’ಕಾಣಿಕೆ’ ಇವರ ಇತರ ಕಾದಂಬರಿಗಳು.

’ಧರ್ಮ ಬಲೆ ಬೀಸಿದಾಗ’, ’ನಿಯಮ ನಿಯಮಗಳ ನಡುವೆ’ ಮತ್ತು ’ಚಪ್ಪಲಿಗಳು’ ಸಾರಾ ಅವರ ಸ್ತ್ರೀಪರ ಸಂವೇದನೆ ಇರುವ ಕಥೆಗಳಾಗಿ ನಮ್ಮನ್ನು ಸದಾ ಕಾಡುತ್ತವೆ. ಪುರುಷರ ಅಹಂಕಾರವನ್ನು ಪ್ರಶ್ನಿಸುವುದರ ಜೊತೆಗೆ ಎಲ್ಲಾ ಸಮುದಾಯದೊಳಗೂ ಸ್ತ್ರೀಪರ ಸಂವೇದನೆ ಇರಬಹುದಾದ ಪುರುಷರನ್ನೂ ಇವು ಪರಿಚಯಿಸುತ್ತವೆ. ’ಚಪ್ಪಲಿಗಳು’, ’ಅರ್ಧ ರಾತ್ರಿಯಲ್ಲಿ ಹುಟ್ಟಿದ ಕೂಸು’, ’ಖೆಡ್ಡ’, ’ಸುಮಯ್ಯ’, ’ಗಗನಸಖಿ’ ಸಾರಾ ಅವರ ಕಥಾ ಸಂಕಲನಗಳು

ಮಲೆಯಾಳಿಯಿಂದ ’ಮನೋಮಿ’ (ಕಮಲಾ ದಾಸ್), ’ಬಲೆ’ (ಬಿ.ಎಂ. ಸುಹಾರ), ’ನಾನಿನ್ನು ನಿದ್ರಿಸುವೆ’ (ಪಿ ಕೆ ಬಾಲಕೃಷ್ಣನ್), ’ತುರ್ತು ಪರಿಸ್ಥಿತಿಯ ಕರಾಳ ಮುಖ’ (ಈಚರ ವಾರಿಯರ್), ’ಧರ್ಮದ ಹೆಸರಿನಲ್ಲಿ’ ( ಆರ್.ಬಿ. ಶ್ರೀಕುಮಾರ್), ’ವೈಕಂ ಮಹಮದ್ ಬಶೀರ್’ (ಎಂ ಎನ್. ಕಾರಶೇಂ), ’ಮುಸ್ಲಿಂ ಮಹಿಳೆಯರು ಮತ್ತು ತಲಾಖ್’ (ಸೈಯದ್ ಮೆಹಬೂಬ್ ಶಾ ಖಾದ್ರಿ) ಹೀಗೆ ಹಲವಾರು ಪ್ರಸಿದ್ಧ ಲೇಖಕರ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿರುವ ಸಾರಾ ಅವರು ’ತೇಲಾಡುವ ಮೋಡಗಳು’ ಎಂಬ ನಾಟಕವನ್ನು, ’ಐಷಾರಾಮದ ಆಳದಲ್ಲಿ’ ಎಂಬ ಪ್ರವಾಸ ಕಥನವನ್ನು ಬರೆದಿದ್ದಾರೆ.

ಮುಸ್ಲಿಂ ಸಮುದಾಯದೊಳಗೆ ಸಾಕಷ್ಟು ಸಂಚಲನ ಉಂಟುಮಾಡಿದ ಸಾರಾ ಅವರ ಕೃತಿ ’ಚಂದ್ರಗಿರಿಯ ತೀರದಲ್ಲಿ’ ತಮಿಳು ಭಾಷೆಯಲ್ಲಿ ’ಜಮೀಲ’ ಹೆಸರಿನಲ್ಲಿ ಚಲನಚಿತ್ರವಾಗಿಯೂ ತೆರೆಕಂಡಿದೆ. ಈ ಕೃತಿ ಸಾರ ಅವರಿಗೆ ಸಾಕಷ್ಟು ಪ್ರಸಿದ್ಧಿಯನ್ನು ತಂದುಕೊಟ್ಟದ್ದು ಮಾತ್ರವಲ್ಲದೆ, ತಮ್ಮದೇ ಸಮುದಾಯದ ಮೂಲಭೂತವಾದಿಗಳಿಂದ ವಿರೋಧವನ್ನು ಅವರು ಎದುರಿಸುವಂತಾಯಿತು. ಆದರೆ ಈ ವಿರೋಧವನ್ನು ಅವರು ದಿಟ್ಟವಾಗಿ ಎದುರಿಸಿದ್ದು ಬಹಳ ಮುಖ್ಯವಾದ ಸಂಗತಿಯಾಗಿ ಉಳಿಯುತ್ತದೆ.

ಇದನ್ನೂ ಓದಿ: ಸಾಹಿತ್ಯದ ಮೂಲಕ ಸಾಮಾಜಿಕ ಬದಲಾವಣೆಯ ಕನಸು ಕಂಡಿದ್ದ ಸಾರಾ

ಕನ್ನಡಕ್ಕೊಬ್ಬರೇ ಸಾರಾ ಎನ್ನುವಂತೆ ಬದುಕಿದ ಲೇಖಕಿ ಬಿಟ್ಟುಹೋದ ನಿರ್ವಾತ ದೊಡ್ಡದು. 30.6.1936ರಲ್ಲಿ ಕೇರಳದ ಕಾಸರಗೋಡಿನ ಪುದಿಯಾಪುರ ತರವಾಡು ಮನೆಯಲ್ಲಿ ಪಿ.ಅಹಮದ್ ಹಾಗೂ ಜೈನಾಭಿ ದಂಪತಿಗಳ ಆರು ಗಂಡು ಮಕ್ಕಳ ನಡುವೆ ಮುದ್ದಿನ ಮಗಳಾಗಿ ಜನಿಸಿದವರು ಸಾರಾ. ಮಲೆಯಾಳಂ ಮನೆ ಮಾತಾಗಿದ್ದರೂ ವಕೀಲಿ ವೃತ್ತಿಯಲ್ಲಿದ್ದ ತಂದೆಯ ಪ್ರೇರಣೆಯಿಂದ ಕಾಸರಗೋಡಿನ ಕನ್ನಡ ಶಾಲೆಗೆ ಸೇರಿಕೊಂಡು ಎಸ್.ಎಸ್.ಎಲ್.ಸಿ ಮುಗಿಸಿದರು.

ಇಂಜಿನಿಯರ್ ಪದವೀಧರರಾಗಿ ಸರಕಾರಿ ಕೆಲಸದಲ್ಲಿದ್ದ ಎಂ. ಅಬೂಬಕ್ಕರ್ ಅವರನ್ನು ಮದುವೆಯಾಗಿ ಮಂಗಳೂರು ಸೇರಿದ ಸಾರಾ ಅವರು ತಮ್ಮ ಬಾಲ್ಯದಿಂದಲೂ ಅಭ್ಯಾಸವಾಗಿದ್ದ ವರ್ತಮಾನ ಪತ್ರಿಕೆಯನ್ನು ಓದಲು ಗಂಡನ ಮನೆಯಲ್ಲಿ ಪರದಾಡಬೇಕಾಯಿತು. ಮನೆಯ ಪುರುಷರೆಲ್ಲ ಓದಿ ಎಸೆಯುತ್ತಿದ್ದ ದಿನಪತ್ರಿಕೆಯನ್ನು ಜೋಪಾನ ಕಾದಿಟ್ಟು ನಿತ್ಯದ ಕೆಲಸ ಮುಗಿಸಿ ಬಿಡುವಿನಲ್ಲಿ ಓದುತ್ತಿದ್ದರು. ನಂತರ ಗಂಡನ ವೃತ್ತಿ ಸಂಬಂಧ ಬೇರೆಬೇರೆ ಊರುಗಳಿಗೆ ಹೋದಂತೆಲ್ಲಾ ಬುರ್ಖಾದೊಳಗೆ ಬಂಧಿಯಾಗದೆ ಮನೆ ಕೆಲಸದ ಜೊತೆಜೊತೆಗೆ ಸಾರ್ವಜನಿಕ ವಾಚನಾಲಯದ ಸದಸ್ಯರಾದರು. ತಮ್ಮ ಓದುವ ಅಭಿರುಚಿಗೆ ಆಹಾರ ಒದಗಿಸಿಕೊಂಡರು. ಮಹಿಳಾ ಮಂಡಲದ ಸದಸ್ಯೆಯಾಗಿ, ಅಧ್ಯಕ್ಷರಾಗಿ ಲೋಕದ ವಿದ್ಯಾಮಾನಗಳಿಗೆ ಮುಖಾಮುಖಿಯಾದರು. ಸಾರಾ ಅವರ ಕಥಾ ಪಾತ್ರಗಳಾದರೂ ಅವರೇ ಒಡನಾಡಿದ ವ್ಯಕ್ತಿ ಚಿತ್ರಗಳು. ’ಮುಸ್ಲಿಂ ಹುಡುಗಿ ಶಾಲೆ ಕಲಿತದ್ದು’ ಲಂಕೇಶ್ ಪತ್ರಿಕೆಯಲ್ಲಿ ಮೊದಲು ಬೆಳಕು ಕಂಡ ಅವರ ಆತ್ಮಕಥನದ ತುಣುಕು. ಸಾರಾ ಅವರು ಮುಸ್ಲಿಂ ಸಮುದಾಯದೊಳಗಿನ ಶೋಷಿತ, ದಮನಿತ ಮಹಿಳೆಯರ ಪರವಾಗಿ ಬರೆದರು.

ತಮ್ಮ ಬರಹಗಳು ಮುಸ್ಲಿಂ ಸಮುದಾಯದೊಳಗೆ ಬದಲಾವಣೆಗೆ ಕಾರಣವಾಗುತ್ತದೆ ಎಂದು ಸಾರಾ ನಂಬಿದ್ದರು. 40ರ ಹರೆಯದಲ್ಲಿ ಬರೆಯತೊಡಗಿದವರು ಸಾರಾ, “ಅಣೆಕಟ್ಟೆಯಲ್ಲಿ ಬಂಧಿಯಾದ ಜಲರಾಶಿ ಗೇಟ್ ಎತ್ತಿದೊಡನೆ ಧುಮ್ಮಿಕ್ಕಿ ಹರಿಯುವಂತೆ ನನ್ನೊಳಗೆ ಹೊಗೆಯಾಡುತ್ತಾ ನನಗೆ ಉಸಿರುಗಟ್ಟಿಸುತ್ತಿದ್ದ ನನ್ನ ಭಾವನೆಗಳು ನನ್ನ ಲೇಖನಿಯ ಮೂಲಕ ಸರಾಗವಾಗಿ ಹರಿಯಲಾರಂಭಿಸಿತು” ಎನ್ನುವ ಸಾರಾ, ತಮ್ಮ ಬರವಣಿಗೆಯ ಮೂಲಕ ಅಲ್ಲಿಯವರೆಗೆ ಅಂಧಕಾರದಲ್ಲಿದ್ದ ಮುಸ್ಲಿಂ ಮಹಿಳಾ ಜಗತ್ತನ್ನು ಅನಾವರಣ ಮಾಡಿ ಸದ್ದುಮಾಡಿದರು. ಸಾರಾ ಅವರ ಪ್ರಬಂಧಗಳು ಮತ್ತು ಲೇಖನ ಗುಚ್ಚ, ’ಅನಾವರಣ’, ’ಸಾಹಿತ್ಯ ಸಂಸ್ಕೃತಿ ಮತ್ತು ಮಹಿಳೆ’, ’ಚಿಂತೆ-ಚಿಂತನೆ’. ತಾನು ನಂಬಿದ ಮೌಲ್ಯಗಳಿಗೆ ಬದ್ಧವಾಗಿದ್ದುಕೊಂಡು ಅವುಗಳೊಂದಿಗೆ ಎಂದೂ ರಾಜಿ ಮಾಡಿಕೊಳ್ಳದೆ ತನ್ನ ಆತ್ಮಸಾಕ್ಷಿಗೆ ಅನುಗುಣವಾಗಿ ಬರೆದವರು ಸಾರಾ.

ಮಂಗಳೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್, ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ನಾಡೋಜ ಬಿರುದು, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ಸಾರಾ ಅವರನ್ನು ಡಾ.ಬಿ.ಎ. ವಿವೇಕ ರೈ ಗುರುತಿಸಿರುವುದು ಹೀಗೆ “ಧೈರ್ಯ, ಆತ್ಮವಿಶ್ವಾಸ, ಸತ್ವ ಮತ್ತು ಸತ್ಯದ ಪರವಾಗಿ ಹೋರಾಡುವ ಛಲದ ಬೆಂಕಿ ಕೆಂಡವನ್ನು ಸೆರಗಿನಲ್ಲಿ ಕಟ್ಟಿಕೊಂಡವರು ಸಾರಾ.”

ಕರಾವಳಿ ಲೇಖಕಿಯರ-ವಾಚಕಿಯರ ಸಂಘದ ಹುಟ್ಟು ಮತ್ತು ಬೆಳವಣಿಗೆಯ ವಿವಿಧ ಹಂತಗಳಲ್ಲಿ ಜೊತೆಜೊತೆಯಾಗಿದ್ದುಕೊಂಡು ಸಂಘದ ಅಧ್ಯಕ್ಷರೂ ಆಗಿ ದುಡಿದು ಸಂಘಕ್ಕೊಂದು ಸ್ವಂತ ಕಟ್ಟಡವಾಗಬೇಕೆಂದು ಪರಿಶ್ರಮಪಟ್ಟವರಲ್ಲಿ ಸಾರಾ ಅವರೂ ಒಬ್ಬರು. ಮಂಗಳೂರು ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಇವರನ್ನು ಅರಸಿ ಬಂದದ್ದು 1995ರಲ್ಲಿ.

ಬಹುತ್ವ ಭಾರತದ ಜಾತ್ಯತೀತ ಪ್ರಜ್ಞೆಯಾಗಿ ಬದುಕಿದ್ದ ಸಾರಾ ಇಂದು ನಮ್ಮೊಡನಿಲ್ಲ ಎನ್ನುವುದು ಅರಗಿಸಿಕೊಳ್ಳಲಾಗದ ಸತ್ಯ. ಸಮಕಾಲೀನ ವೈಚಾರಿಕ ಪ್ರಜ್ಞೆಯಾಗಿರುವ ಜಿ. ರಾಮಕೃಷ್ಣ ಅವರು ಹೇಳುವಂತೆ, “ಎಲ್ಲಾ ಧರ್ಮಗಳ ಮತ್ತು ಮತಧರ್ಮೀಯರ ಅಂತರಂಗದ ಮೇಲೆ ಬೆಳಕು ಚೆಲ್ಲಿ ಅಲ್ಲಿ ಬಿತ್ತಲಾದ ವಿಷಬೀಜವನ್ನು ಕಿತ್ತೆಸೆಯಬೇಕಾದ ಅನಿವಾರ್ಯತೆ ಹಿಂದೆಂದಿಗಿಂತಲೂ ಇಂದು ಹೆಚ್ಚಾಗಿದೆ. ಆದ್ದರಿಂದ ಸಾರಾ ಮತ್ತು ಅವರಂಥವರು ಹರಿಸುವ ಬೆಳಕು ಇನ್ನೂ ಪ್ರಖರವಾಗಬೇಕಾಗಿದೆ ಮತ್ತು ಅಂಧಕಾರವನ್ನು ತೊಲಗಿಸಬೇಕಾಗಿದೆ”. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯೆಯಾಗಿ, ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ದೂರದರ್ಶನದ ಪ್ರಿವ್ಯೂ ಸಮಿತಿ ಸದಸ್ಯರಾಗಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಾದೇಶಿಕ ಸಲಹಾ ಸಮಿತಿಯ ಸದಸ್ಯೆಯಾಗಿಯೂ ದುಡಿದವರು ಸಾರಾ.

ಒಟ್ಟಿನಲ್ಲಿ ಸಾರಾ ನಮ್ಮ ನಡುವಿನ ಬೆಳಕಾಗಿದ್ದವರು. ಧರ್ಮದ ಮೇಲಿನ ಶ್ರದ್ಧೆ ಎಂದೂ ಅಂಧಶ್ರದ್ಧೆ ಆಗಬಾರದು; ಜೀವಕ್ಕಿಂತ ಜೀವನ ದೊಡ್ಡದು ಎಂದು ನಂಬಿದವರು ಮತ್ತು ಅದರಂತೆ ಬದುಕಿದವರು ಅವರು.

ದೇವಿಕಾ ನಾಗೇಶ್
ಬರಹಗಾರ್ತಿ ಮಂಗಳೂರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗೋಮಾಂಸ ಸಾಗಣೆ ಆರೋಪದ ಮೇಲೆ ವಾಹನ ಮುಟ್ಟುಗೋಲು: ಉತ್ತರ ಪ್ರದೇಶ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್

ಗೋಮಾಂಸ ಸಾಗಣೆ ಮಾಡುತ್ತಿದ್ದಾರೆ ಎಂದು ಕೇವಲ ಅನುಮಾನದ ಮೇಲೆ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವುದು ಕಾನೂನುಬಾಹಿರ ಎಂದು ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯಪಟ್ಟಿದ್ದು, ಅಂತಹ ಯಾವುದೇ ಕ್ರಮ ತೆಗೆದುಕೊಳ್ಳುವ ಮೊದಲು ವೈಜ್ಞಾನಿಕ ದೃಢೀಕರಣ ಅಗತ್ಯ...

ಎಕ್ಸಿಟ್‌ ಪೋಲ್ಸ್‌ಗಳು ‘ಹಣ-ಒತ್ತಡ’ದಿಂದ ಕೂಡಿವೆ; ಟಿಎಂಸಿ 226 ಸ್ಥಾನಗಳನ್ನು ಮೀರಲಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದಲ್ಲಿ ಎರಡನೇ ಹಂತದ ಮತದಾನದ ನಂತರ ಇತ್ತೀಚಿನ ಚುನಾವಣೋತ್ತರ ಸಮೀಕ್ಷೆಗಳ ವಿಶ್ವಾಸಾರ್ಹತೆಯನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಲವಾಗಿ ತಳ್ಳಿಹಾಕಿದ್ದಾರೆ. ಅವರ ಪಕ್ಷವಾದ ತೃಣಮೂಲ ಕಾಂಗ್ರೆಸ್ (ಟಿಎಂಸಿ) 294 ಸದಸ್ಯರ ವಿಧಾನಸಭೆಯಲ್ಲಿ 226...

ಗುಜರಾತ್‌| ರಾಮ ಮಂದಿರ ಕಾರ್ಯಕ್ರಮದಲ್ಲಿ ದಲಿತರಿಗೆ ಪ್ರತ್ಯೇಕ ಊಟದ ವ್ಯವಸ್ಥೆ; ಅಸ್ಪೃಶ್ಯತೆ ಆಚರಣೆ ಆರೋಪ

ಗುಜರಾತ್‌ನ ಜುನಾಗಢ್ ಜಿಲ್ಲೆಯಲ್ಲಿ ಜಾತಿ ತಾರತಮ್ಯದ ಆರೋಪ ಹೊರಿಸಲಾಗಿದ್ದು, ಧಾರ್ಮಿಕ ಕಾರ್ಯಕ್ರಮದ ಸಂದರ್ಭದಲ್ಲಿ ದೇವಾಲಯದ ಆಯೋಜಕರು ಅಸ್ಪೃಶ್ಯತೆ ಆಚರಿಸುತ್ತಿದ್ದಾರೆ ಎಂದು ದಲಿತ ಸಮುದಾಯದ ಸದಸ್ಯರು ಆರೋಪಿಸಿದ್ದಾರೆ. ಭುಟ್ಡಿ ಗ್ರಾಮದ ನಿವಾಸಿ 25 ವರ್ಷದ ಅಜಯ್...

ಕೋಗಿಲು ಬಡಾವಣೆ ಮನೆಗಳ ನೆಲಸಮ: ಹದಿನೈದು ದಿನಗಳೊಳಗೆ ಪುನರ್ವಸತಿ ಕಲ್ಪಿಸದಿದ್ದರೆ ತೀವ್ರ ಹೋರಾಟದ ಎಚ್ಚರಿಕೆ

ಬೆಂಗಳೂರು ಉತ್ತರ ತಾಲ್ಲೂಕಿನ ಯಲಹಂಕ ಪ್ರದೇಶದ ಕೋಗಿಲು ಲೇಔಟ್‌ನ ಫಕೀರ್ ಕಾಲೋನಿ ಮತ್ತು ಮಹಾನಾಯಕ ಅಂಬೇಡ್ಕರ್ ನಗರ (ವಾಸಿಂ ಲೇಔಟ್‌) ಪ್ರದೇಶದ ಬಡ ನಿವಾಸಿಗಳ ಮನೆಗಳನ್ನು 2025 ಡಿಸೆಂಬರ್ 20ರಂದು ಬೆಳಿಗ್ಗೆ ಸುಮಾರು...

ಡಾಲರ್ ಎದುರು ಸಾರ್ವಕಾಲಿಕ ಕನಿಷ್ಠ ಮಟ್ಟ 95.20 ರೂ.ಗೆ ಕುಸಿತ ಕಂಡ ಭಾರತೀಯ ರೂಪಾಯಿ ಮೌಲ್ಯ 

ನವದೆಹಲಿ: ಏಪ್ರಿಲ್ 30ರಂದು ಆರಂಭಿಕ ವಹಿವಾಟಿನಲ್ಲಿ ಭಾರತೀಯ ರೂಪಾಯಿ ಮೌಲ್ಯವು ಅಮೆರಿಕನ್ ಡಾಲರ್ ಎದುರು ಸಾರ್ವಕಾಲಿಕ ಕನಿಷ್ಠ ಮಟ್ಟವಾದ 95.07 ಕ್ಕೆ ಕುಸಿದಿದೆ. ಕರೆನ್ಸಿ 0.4% ಕುಸಿತದೊಂದಿಗೆ 95.2325 ಕ್ಕೆ ಇಳಿದಿದೆ. ಇದು ಮಾರ್ಚ್...

ತಮಿಳುನಾಡು| ದಲಿತ ಯುವಕನ ಶವ ಪತ್ತೆ; ‘ಜಾತಿ ಕಾರಣಕ್ಕೆ ಹತ್ಯೆಯಾಗಿದೆ’ ಎಂದು ಕುಟುಂಬದ ಆರೋಪ

ತಮಿಳುನಾಡಿನ ಪುದುಕ್ಕೊಟ್ಟೈ ಜಿಲ್ಲೆಯ ಕ್ವಾರಿ ಕೆರೆಯ ಬಳಿ 20 ವರ್ಷದ ದಲಿತ ಯುವಕನ ಶವ ಪತ್ತೆಯಾಗಿದ್ದು, ಹಿಂದುಳಿದ ವರ್ಗದ ಯುವತಿಯೊಂದಿಗಿನ ಸಂಬಂಧದಿಂದಾಗಿ ಆತನನ್ನು ಕೊಲ್ಲಲಾಗಿದೆ ಎಂದು ಆತನ ಕುಟುಂಬ ಆರೋಪಿಸಿದೆ. ಆದರೆ, ಈ...

‘ಬಾಲ ಕಾರ್ಮಿಕ’ ಶಂಕೆಯ ಮೇಲೆ 155 ಮುಸ್ಲಿಂ ವಿದ್ಯಾರ್ಥಿಗಳ ಬಂಧನ: ಧಾರ್ಮಿಕ ಗುರುತಿನ ಕಾರಣಕ್ಕೆ ಬಂಧಿಸಿರುವುದಾಗಿ ಪೋಷಕರ ಆರೋಪ

ಮಧ್ಯಪ್ರದೇಶದ ಕಟ್ನಿಯಲ್ಲಿ ಸರ್ಕಾರಿ ರೈಲ್ವೆ ಪೊಲೀಸರು (GRP) 155 ಮುಸ್ಲಿಂ ವಿದ್ಯಾರ್ಥಿಗಳು ಮತ್ತು ಎಂಟು ಶಿಕ್ಷಕರನ್ನು "ಬಾಲ ಕಾರ್ಮಿಕ" ಶಂಕೆಯ ಮೇಲೆ ಬಂಧಿಸಿದ ನಂತರ, ಪೋಷಕರು ಮುಸ್ಲಿಂ ವಿರೋಧಿ ಪಕ್ಷಪಾತವನ್ನು ಹೊಂದಿದ್ದಾರೆಂದು ಆರೋಪಿಸಿದ್ದಾರೆ....

ಜನಿವಾರದ ಹಿಂದೆ ಬಿದ್ದಿರುವ ವಿರೋಧ ಪಕ್ಷ ಮತ್ತು ಮಾಧ್ಯಮಗಳು

ಏಪ್ರಿಲ್ 23, 2026 ರಂದು ನಡೆದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (KCET) ವೇಳೆ ಬೆಂಗಳೂರಿನ ಕೋರಮಂಗಲದಲ್ಲಿರುವ ಕೃಪಾನಿಧಿ ಪಿಯು ಕಾಲೇಜಿನಲ್ಲಿ ಐವರು ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರವನ್ನು ಬಲವಂತವಾಗಿ ತೆಗೆಸಿದ ಘಟನೆ ರಾಜಕೀಯ...

ಒಡಿಶಾ| ಸಾವಿನ ದಾಖಲೆ ಕೇಳಿದ ಬ್ಯಾಂಕ್‌ ಸಿಬ್ಬಂದಿ; ಸಮಾದಿ ಅಗೆದು ಸಹೋದರಿಯ ಅಸ್ಥಿಪಂಜರ ತಂದ ಬುಡಕಟ್ಟು ವ್ಯಕ್ತಿ

ಒಡಿಶಾದ ಕಿಯೋಂಜಾರ್ ಜಿಲ್ಲೆಯಲ್ಲಿ, ಬುಡಕಟ್ಟು ವ್ಯಕ್ತಿಯೊಬ್ಬ ತನ್ನ ಮೃತ ಸಹೋದರಿಯ ಅಸ್ಥಿಪಂಜರವನ್ನು ಅಗೆದು ಗ್ರಾಮೀಣ ಬ್ಯಾಂಕ್‌ಗೆ ತೆಗೆದುಕೊಂಡು ಹೋಗಿದ್ದಾನೆ. ಆಕೆಯ ಸಾವನ್ನು ಸಾಬೀತುಪಡಿಸುವ ಮೂಲಕ ಆಕೆಯ ಖಾತೆಯಲ್ಲಿ ಜಮಾ ಮಾಡಿದ ಹಣವನ್ನು ಪಡೆಯಲು...

ಜಾತಿ ಕಿರುಕುಳಕ್ಕೆ ದಲಿತ ವಿದ್ಯಾರ್ಥಿ ಸಾವು ಪ್ರಕರಣ: ಇಂದು ಸಂಜೆ 6 ರವರೆಗೆ ಕೇರಳ ಬಂದ್

ಜಾತಿ ಆಧಾರಿತ ಕಿರುಕುಳದಿಂದ ಮನನೊಂದಿದ್ದ ಕೇರಳದ ಅಂಚರಕಂಡಿಯ ಕಣ್ಣೂರು ದಂತ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಡಿಎಸ್ ವಿದ್ಯಾರ್ಥಿ ಆರ್.ಎಲ್. ನಿತಿನ್ ರಾಜ್ ಆತ್ಮಹತ್ಯೆಗೆ ರಾಜ್ಯದಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಕಾಲೇಜು ಕಟ್ಟಡದಿಂದ ಹಾರಿ ಆತ್ಮಹತ್ಯೆ...