Homeಕರ್ನಾಟಕಅಪರೂಪದ ಕಥೆಗಾರ ಬಸವರಾಜು ಕುಕ್ಕರಹಳ್ಳಿ ಒಡನಾಟದ ಕೆಲವು ನೆನಪುಗಳು

ಅಪರೂಪದ ಕಥೆಗಾರ ಬಸವರಾಜು ಕುಕ್ಕರಹಳ್ಳಿ ಒಡನಾಟದ ಕೆಲವು ನೆನಪುಗಳು

- Advertisement -
- Advertisement -

“ಸರ್ ನಾಲ್ಕು ಕಥಾ ಸಂಕಲನಗಳು ಮತ್ತು ನೀಳ್ಗತೆಯನ್ನೂ ಸೇರಿ ಪುಸ್ತಕ ಮಾಡೋಣ, ನಿಮ್ ಕಥೆಗಳೆಲ್ಲ ಒಟ್ಟಾಗಿ ಸಿಗಬೇಕು ನನಗೆ ಗೊತ್ತಿರುವ ಪ್ರಕಾಶಕರಿದ್ದಾರೆ” ಎಂದು ದೂರವಾಣಿಯಲ್ಲಿ ಹೇಳಿದಾಗ ಒಂದೆರಡು ಸೆಕೆಂಡ್ ಸುಮ್ಮನಿದ್ದು “ಹ್ಞೂಂ ಅಭಿ ’ಸಮಗ್ರ ಕಥೆಗಳು’ ಹೆಸರಿನಲ್ಲಿ ಪ್ರಕಟಿಸೋಣ” ಎಂದರು. “ಸರ್ ನೀವಿನ್ನೂ ಬರೆಯುತ್ತಿರುವುದರಿಂದ ಈವರೆಗಿನ ಕಥೆಗಳು ಎಂಬ ಶೀರ್ಷಿಕೆಯಲ್ಲಿ ತರೋಣ” ಎಂದೆ. ಪ್ರಕಾಶಕರೊಟ್ಟಿಗೆ ಕಾನ್ಪರೆನ್ಸ್ ಕಾಲ್‌ನಲ್ಲಿ ಮಾತನಾಡಿ ಸರಸ್ವತಿಪುರಂನಲ್ಲಿರುವ ತಮ್ಮ ’ನಿಸರ್ಗ’ದಲ್ಲಿ ಕೂತು ಮುಂದಿನ ವಾರ ಮಾತನಾಡೋಣ ಎಂದು ಹೇಳಿ ಫೋನಿಟ್ಟ ಬಸವರಾಜು ಕುಕ್ಕರಹಳ್ಳಿಯವರು ಇಂದು (ನವೆಂಬರ್ 3) ಬಾರದ ಲೋಕಕ್ಕೆ ಹೊರಟಿದ್ದಾರೆ ಎಂದರೆ ನಂಬಲು ಕಷ್ಟವಾಗುತ್ತಿದೆ.

ಎರಡು ಸಾವಿರದ ಒಂಭತ್ತನೆಯ ಇಸವಿ ಇರಬೇಕು; ಆಗ ನಾನು ಪಿ.ಯು.ಸಿಗೆಂದು ಮರಿಮಲ್ಲಪ್ಪ ಶಿಕ್ಷಣ ಸಂಸ್ಥೆಗೆ ಸೇರಿದ್ದೆ; ಗ್ರಂಥಾಲಯದಲ್ಲಿ ಒಳಭಾಗದ ಗಾಜಿನ ಚೇಂಬರಿನೊಳಗೆ ಕೂತು ಮೂಗಿನ ತುದಿಯಲ್ಲಿ ಇನ್ನೇನು ಜಾರಿಬೀಳಬಹುದಾದ ಕನ್ನಡಕದೊಳಗಿನಿಂದ ಏನನ್ನೋ ತಿದ್ದುತ್ತಾ ಕೂತಿರುತ್ತಿದ್ದರು ಬಸವರಾಜು. ಕಂಪ್ಯೂಟರ್ ಲ್ಯಾಬಿಗೆ ಹೋಗುವಾಗ ಇವರ ಚೇಂಬರಿನ ಮುಂದೆಯೇ ಹಾದುಹೋಗಬೇಕಾಗಿದ್ದರಿಂದ ನಿತ್ಯ ಅವರನ್ನು ನೋಡಿಯೇ ಹೋಗುತ್ತಿದ್ದೆ. ಹೀಗೆ ಒಂದುದಿನ ಗ್ರಂಥಾಲಯದಲ್ಲಿ ’ಮೊಕಾರ’ ಎಂಬ ಪುಸ್ತಕವು ಸಿಕ್ಕಿತು. ಹಸುವಿನ ಮುಖವನ್ನು ಹೋಲುವ ಅಸ್ಪಷ್ಟ ಚಿತ್ರದ ಮುಖಪುಟದಿಂದಲೇ ಆ ಕೃತಿ ಗಮನ ಸೆಳೆಯಿತು. ಅದರ ಮೇಲೆ 1996ರ ಸಾಲಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕೃತಿ ಎಂದು ಅಚ್ಚಾಗಿತ್ತು. ಆ ಪುಸ್ತಕವನ್ನು ಎರವಲು ಪಡೆಯುವಾಗಲೇ ಗೊತ್ತಾದದ್ದು ಈ ಪುಸ್ತಕದ ಕೃತಿಕಾರರಾದ ಬಸವರಾಜು ಕುಕ್ಕರಳ್ಳಿ ಮತ್ತು ಅವರೇ ಈ ಗ್ರಂಥಪಾಲಕರು ಎಂದು. ಅಂದಿನಿಂದ ನಮ್ಮ ಒಡನಾಟ ಪ್ರಾರಂಭವಾಯಿತೆನ್ನಬಹುದು. ಅಷ್ಟರಲ್ಲಾಗಲೇ ’ಪುನುಗ’ ಮತ್ತು ’ಜೀವಾಳ’ ಕಥಾಸಂಕಲನಗಳನ್ನು ಪ್ರಕಟಿಸಿದ್ದರು. ಸಮಯವಿದ್ದಾಗ ನಾನೂ ನನ್ನ ಗೆಳೆಯ ಗಜೇಂದ್ರ ಇಬ್ಬರೂ ಅವರ ಅದೇ ಗಾಜಿನ ಚೇಂಬರಿಗೆ ಹೋಗಿ ಅವರ ಕಾಲದ ಕಥೆಗಳನ್ನು ಕೇಳುತ್ತಿದ್ದವು. ಕೆಲವೊಮ್ಮೆ ತರಗತಿಗಳು ಆರಂಭವಾಗಿದ್ದರೂ ಇವರ ಮಾತುಗಳನ್ನು ಕೇಳುತ್ತಲೇ ನಿಂತುಬಿಡುತ್ತಿದ್ದೆವು. ತರಗತಿಗೆ ತಡವಾಗಿಯೂ ಹೋಗಿ ಎಷ್ಟೋ ಬಾರಿ ಸಬೂಬುಗಳನ್ನು ಹೇಳುತ್ತಿದ್ದವು. ಅಷ್ಟರಲ್ಲಾಗಲೇ ಅವರ ಕಥೆಗಳನ್ನು ಓದಿದ್ದ ನಮಗೆ ಕಥೆಗಾರನನ್ನು ಇಷ್ಟು ಹತ್ತಿರದಲ್ಲೇ ನೋಡುತ್ತಿದ್ದ ಖುಷಿಗೆ ಪಾರವೇ ಇರಲಿಲ್ಲ. ಕುಕ್ಕರಹಳ್ಳಿಯ ಬೀದಿಬೀದಿಯನ್ನೂ ತಿರುಗಿದ್ದ ಬಸವರಾಜು ಅವರು ಅಲ್ಲಿಯೇ ಹುಟ್ಟಿ, ಅಲ್ಲಿನ ಜೀವನಕ್ರಮ, ಬದುಕಿನ ಬವಣೆಗಳನ್ನು ಕಥೆಗಳಲ್ಲಿ ಬರೆದು ಕಥೆಗಾರನಾಗಿ ಬೆಳೆದದ್ದು ಒಂದು ರೀತಿಯ ವಿಸ್ಮಯವೇ ಸರಿ. ಬೆರಗುಗಣ್ಣುಗಳಿಂದ ಜೀವನಾನುಭವಗಳನ್ನು ಅನುಭವಿಸಿದ, ಬಡತನದಲ್ಲೇ ಬಾಳುವ ಅನಿವಾರ್ಯತೆಯನ್ನು ರೂಢಿಸಿಕೊಂಡಿದ್ದ ಬಸವರಾಜು ಕುಕ್ಕರಹಳ್ಳಿಯವರು ಹಸಿದು ಮಲಗಿದ್ದು ಎಷ್ಟೋಸಲ.

ಮಹಾರಾಜ ಕಾಲೇಜಿಗೆ ಸೇರಿದ ಹೊಸತು; ಬಹುಭಾಷಾ ಕವಿಗೋಷ್ಠಿಗೆ ಮುಖ್ಯ ಅತಿಥಿಗಳನ್ನು ಕರೆಸುವ ಜವಾಬ್ದಾರಿಯನ್ನು ನನಗೆ ಮತ್ತು ಗಜೇಂದ್ರನಿಗೆ ವಹಿಸಲಾಗಿತ್ತು. ಆಗ ಸಹಪ್ರಾಧ್ಯಾಪಕರಾಗಿದ್ದ ತಿಮ್ಮಯ್ಯನವರಿಗೆ ನಮ್ಮ ಮೇಲೆ ವಿಶ್ವಾಸವಿತ್ತು. ಬಸವರಾಜು ಕುಕ್ಕರಹಳ್ಳಿಯವರನ್ನು ಒಪ್ಪಿಸಿ ಕರೆದುಕೊಂಡು ಬರುತ್ತೇವೆಂದು ತಿಳಿಸಿದಾಗ ಅನುಮತಿ ಕೊಟ್ಟರು. ಆಗ ಬಸವರಾಜು ಕುಕ್ಕರಹಳ್ಳಿಯವರ ಕುರಿತು ಕೆಲವರು ಕೊಂಕು ನುಡಿದರು. ವಾಸ್ತವವಾಗಿ ಕುಕ್ಕರಹಳ್ಳಿಯವರ ಕಥೆಗಳನ್ನು ಓದಿರದಿದ್ದವರು ಹೀಗೆ ನಮ್ಮ ಉತ್ಸಾಹವನ್ನು ಕುಂದುವಂತೆ ಮಾತನಾಡಿದ್ದರು. ನಾವು ಮರಿಮಲ್ಲಪ್ಪ ಸಂಸ್ಥೆಗೆ ಹೋಗಿ ಬಸವರಾಜು ಅವರನ್ನು ಬಹುಭಾಷಾ ಕವಿಗೋಷ್ಠಿಗೆ ತಾವು ಮುಖ್ಯ ಅತಿಥಿಯಾಗಿ ಬರಬೇಕೆಂದು ಹೇಳಿದಾಗ ಅವರು “ಅಯ್ಯೋ ನಾನ್ ಯಾವ್ ಕವಿ ಅಭಿ? ಮೈಸೂರಲ್ಲಿ ಇನ್ನೂ ಎಷ್ಟ್ ದೊಡ್‌ದೊಡ್ ಕವಿಗಳಿದ್ದಾರೆ, ನಾನ್ಯಾಕೆ? ದಯಮಾಡಿ ಬಿಟ್ಟುಬಿಡ್ರಪ್ಪ” ಎಂದರು. ಸಂಕೋಚದ ಸ್ವಭಾವದವರಾಗಿದ್ದ ಬಸವರಾಜು ಅವರಿಗೆ ನಾನೂ ನನ್ನ ಗೆಳೆಯನೂ ದುಂಬಾಲುಬಿದ್ದು ಒಪ್ಪಿಸಿದೆವು. ನಮ್ಮ ಮೇಲಿನ ’ವಿಶ್ವಾಸ’ ಮತ್ತು ’ಪ್ರೀತಿ’ಗೆ ಅವರು ಸೋತಿದ್ದರು. ಬಹುಭಾಷಾ ಕವಿಗೋಷ್ಠಿಯ ದಿನ ಬಂದೇಬಿಟ್ಟಿತ್ತು. ಹೇಳಿದ ಸಮಯಕ್ಕೆ ಮುಂಚಿತವಾಗಿಯೇ ಕನ್ನಡ ವಿಭಾಗಕ್ಕೆ ಬಂದರು. ಪ್ರಾಂಶುಪಾಲರಾಗಿದ್ದ ಸ.ನ ಗಾಯತ್ರಿಯವರು, ಸಹಪ್ರಾಧ್ಯಾಪಕರಾಗಿದ್ದ ತಿಮ್ಮಯ್ಯನವರು, ಉಳಿದ ಅಧ್ಯಾಪಕರು ಅವರನ್ನು ಸ್ವಾಗತಿಸಿದರು. ಕನ್ನಡ ಮತ್ತು ಜಾನಪದ ಸಂಘದ ಯಾವ ಕಾರ್ಯಕ್ರಮಕ್ಕೆ ಬಂದರೂ ಅತಿಥಿಗಳನ್ನು ಕನ್ನಡ ವಿಭಾಗದಲ್ಲೇ ಸತ್ಕರಿಸುವುದು ಹಿಂದಿನಿಂದಲೂ ನಡೆದುಬಂದಿತ್ತು. ರಾಷ್ಟ್ರಕವಿ ಜಿ.ಎಸ್.ಎಸ್ ಅವರು ಕೂಡ ಯಾವಾಗ ಬಂದರೂ ಮೊದಲು ನೇರವಾಗಿ ಕನ್ನಡ ವಿಭಾಗಕ್ಕೇ ಬರುತ್ತಿದ್ದರು. ಬಸವರಾಜು ಅವರಿಗೆ ಚಹಾ, ಬಿಸ್ಕೆಟ್‌ಗಳನ್ನು ನೀಡಿ ಕಾರ್ಯಕ್ರಮ ಆಯೋಜನೆಯಾಗಿದ್ದ ಸ್ಥಳ ಜೂನಿಯರ್ ಬಿ.ಎ. ಹಾಲಿಗೆ ಕರೆತಂದವು. ಹೊಸದಾಗಿ ಕವಿತೆ ಬರೆಯುತ್ತಿದ್ದ ಹುಡುಗರೂ ಉತ್ಸಾಹದಿಂದ ಕವಿಗೋಷ್ಠಿಗೆ ಬಂದಿದ್ದರು. ಜ್ಯೂನಿಯರ್ ಬಿ.ಎ ಹಾಲ್ ತುಂಬಿತ್ತು. ವಿಶಿಷ್ಟವಾಗಿ ಕಾರ್ಯಕ್ರಮವನ್ನು ಉದ್ಘಾಟಿಸಲು ಮುಂಚೆಯೇ ನಾವೆಲ್ಲರೂ ಸೇರಿ ಯೋಜನೆಯನ್ನು ಮಾಡಿದ್ದೆವು. ಕುಕ್ಕರಹಳ್ಳಿಯವರು ತಮ್ಮ ಕವಿತೆಯ ಸಾಲುಗಳನ್ನು ಬರೆಯುವ ಮೂಲಕ ಕವಿಗೋಷ್ಠಿಗೆ ಚಾಲನೆ ನೀಡಲಾಯಿತು.

“ಹಿಟ್ಟು ಮಿದಿಕೆ
ಮುದ್ದು ಮುದ್ದೆಗಾತ್ರ
ಹಸಿವ ಮರೆಸಲು ಹಾಡು ಕಥೆ ಪುರಾಣ
ತಟ್ಟಿ ಮಲಗಿಸುತ್ತಿದ್ದವು ನನ್ನ”
– ಬಸವರಾಜು ಕುಕ್ಕರಹಳ್ಳಿ

ಹೀಗೆ ಅವರು ಬರೆದ ಸಾಲುಗಳನ್ನು ನೋಡಿ ಸಭಾಂಗಣ ಕರತಾಡನದಿಂದ ತುಂಬಿಹೋಯಿತು. ಆಗತಾನೆ ಕವಿತೆ ಬರೆಯಲು ಆರಂಭಿಸಿದ್ದ ನಾನೂ ಒಂದು ಕವಿತೆಯನ್ನು ವಾಚಿಸಿದೆನು. ಎಲ್ಲರೂ ಕಾಯುತ್ತಿದ್ದ ಮುಖ್ಯ ಅತಿಥಿಗಳ ಭಾಷಣ ಆರಂಭವಾಯಿತು. “ಇದೇ ರೂಮಿನಲ್ಲಿ ನಾನು ಕುಳಿತು ಪಾಠ ಕೇಳಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಸೀಟು ತಗೋಬೇಕು ಅಂತ ಹೇಳಿದ್ರೆ ತುಂಬಾ ಕಷ್ಟ ಇರ್ತಿತ್ತು. ಒಳ್ಳೆ ಮಾರ್ಕ್ ಅನ್ನು ಪಡೆದಿದ್ರೆ ಮಾತ್ರ ಸೀಟ್ ಸಿಗುತ್ತೆ, ಅದ್ರಲ್ಲೂ ಆರ್ಟ್ ಸೀಟ್ ತಗೋಬೇಕು ಅಂದ್ರೆ ತುಂಬಾ ಕಷ್ಟ ಇರ್ತಿತ್ತು. ಅಂತಹ ಸಂದರ್ಭದಲ್ಲಿ ಮಹಾರಾಜ ಕಾಲೇಜಲ್ಲಿ ನಾವು ಓದ್ಬೇಕಂತ ಕನಸು ಕಟ್ತಾ ಇದ್ವಿ ಎಂದು ಅಂದಿನ ಕಾಲದ ಸ್ಥಿತಿಯನ್ನು ನೆನಪಿಸಿಕೊಂಡರು. ಬಸವರಾಜು ಅವರು ಮಹಾರಾಜ ಕಾಲೇಜು ಸೇರಿದಾಗ ಕಾಲೇಜಿನ ಭವ್ಯ ಗ್ರಂಥಾಲಯವನ್ನು ಮೊದಲ ಬಾರಿ ನೋಡಿದಾಗ ಅವರಿಗೆ ಪ್ರಾಮಾಣಿಕವಾಗಿ ಹೀಗನ್ನಿಸುತ್ತದೆ: “ನಾನು ಹಳ್ಳಿಯ ಗುಡಿಸಲಿನಿಂದ ಕಾಲೇಜು ಓದಲು ಪಟ್ಟಣಕ್ಕೆ ಬಂದೆ. ಅಲ್ಲಿ ಗ್ರಂಥಾಲಯವೆಂಬ ಭವ್ಯ ಕಟ್ಟಡವನ್ನು ಕಂಡು ಬೆರಗಾದೆ. ಬರೀ ಪುಸ್ತಕಗಳನ್ನಿಡಲು ಇಷ್ಟು ದೊಡ್ಡ ಬಂಗಲೆಯೆ? ಇದು ನಮಗಾದರೂ ಸಿಕ್ಕಿದ್ದರೆ ಊರಿನವರೆಲ್ಲ ದನಕರುಗಳನ್ನು ಕಟ್ಟಿಕೊಂಡು ಗಾಳಿ ಮಳೆಯಿಂದ ರಕ್ಷಿಸಿಕೊಂಡು ಬೆಚ್ಚಗೆ ವಾಸಿಸುತ್ತಿದ್ದವಲ್ಲ. ಎಂಥ ಅನ್ಯಾಯ ಎಂದುಕೊಂಡು ಒಳಕ್ಕೋದೆ. ಒಳಕ್ಕೋದರೆ ಅಲ್ಲಿ ಸಾವಿರಸಾವಿರವಲ್ಲ, ಲಕ್ಷಾಂತರ ಜನರು ವಾಸವಿದ್ದರು. ಅವರೆಲ್ಲ ಸಾಮಾನ್ಯರಲ್ಲ ಅಸಮಾನ್ಯರು. ಜಗತ್ತಿನ ಮೇಧಾವಿಗಳು, ಸಾಹಿತಿಗಳು, ಸಮಾಜೋದ್ಧಾರಕರು, ಇತಿಹಾಸಕಾರರು, ವಿಜ್ಞಾನಿಗಳು, ಕಲಾಕಾರರು, ಸಂಗೀತಗಾರರು, ಶಿಲ್ಪಿಗಳು, ತತ್ವಜ್ಞಾನಿಗಳು- ಅವರೆಲ್ಲರೂ ಪುಸ್ತಕರೂಪ ತಾಳಿ ನನಗಾಗಿ ಕಾಯುತ್ತಿದ್ದರು”. ಮತ್ತೆ ಸಭಾಂಗಣವೆಲ್ಲವೂ ಜೋರಾದ ಚಪ್ಪಾಳೆಗಳಿಂದ ತುಂಬಿಹೋಯಿತು. ಬಸವರಾಜು ಅವರು ಮಹಾರಾಜ ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗ ಗೋಹತ್ಯೆ ಕಾನೂನಿಗೆ ಸಂಬಂಧಿಸಿದ ಚಳವಳಿಯಲ್ಲಿ ವಿದ್ಯಾರ್ಥಿಗಳು ಸಾಂಕೇತಿಕವಾಗಿ ಗೋಮಾಂಸವನ್ನು ಬೇಯಿಸಿ ಕೊಟ್ಟಾಗ ಸ್ವತಃ ಅಧ್ಯಾಪಕರೇ ತಿಂದು ಪ್ರತಿಭಟಿಸಿದ ಘಟನೆಯನ್ನು ನೆನಪಿಸಿಕೊಂಡ ಮಾತುಗಳು ಇನ್ನೂ ಕಿವಿಯಲ್ಲಿ ಅನುರಣಿಸುತ್ತಿವೆ. ಬೇಂದ್ರೆಯವರ ’ಮೂಡಲ ಮನೆಯ ಮುತ್ತಿನ ನೀರಿನ’ ಕವಿತೆಯನ್ನು ಸುಶ್ರಾವ್ಯವಾಗಿ ಹಾಡಿದರು. ಕೊನೆಯಲ್ಲಿ ತಮ್ಮ ’ಅವ್ವ’ ಕವಿತೆಯನ್ನು ವಾಚಿಸಿ ಮುಗಿಸುವಾಗ ವೇದಿಕೆಯಲ್ಲಿದ್ದವರ ಸಹಿತ ಎಲ್ಲರ ಕಣ್ಣಾಲಿಗಳೂ ತುಂಬಿದ್ದವು. ಕುಕ್ಕರಹಳ್ಳಿಯವರನ್ನು ಮುಖ್ಯ ಅತಿಥಿಯಾಗಿ ಕರೆಸಲು ಹೆಸರು ಪ್ರಸ್ತಾಪವಾದಾಗ ಕೊಂಕು ನುಡಿದಿದ್ದವರೂ ನಮ್ಮನ್ನು ಕರೆದು ಪ್ರಶಂಸಿಸಿದ್ದು ಈಗ ಇತಿಹಾಸ.

’ಬಾಳಾಟ’ ಕಥಾ ಸಂಕಲನವು ನಾನು ಎಂ.ಎ. ವಿದ್ಯಾರ್ಥಿಯಾಗಿದ್ದಾಗ ಬಾಬು ಜಗಜೀವನರಾಂ ಸಭಾಂಗಣದಲ್ಲಿ ಬಿಡುಗಡೆಯಾಯಿತು. ಹಿಂದಿನ ಮೂರೂ ಸಂಕಲನಗಳಿಗಿಂತ ಭಿನ್ನವಾದ ಕಥೆಗಳು ಹೆಚ್ಚು ಜನರನ್ನು ತಲುಪಿದವು. ಈ ಸಂಕಲನದ ’ಗೇಟು’ ಕಥೆಯು ಇವರಿಗೆ ಪ್ರಸಿದ್ಧಿ ತಂದುಕೊಟ್ಟಿತು. ಇವರ ನೀಳ್ಗತೆಗಳ ಸಂಕಲನ ’ಕಾಲನೊದ್ದವರು’ ಬಿಡುಗಡೆಯ ಸಮಾರಂಭಕ್ಕೆ ಗಂಗಾಧರ ಚಿತ್ತಾಲರ ’ಹರಿವ ನೀರಿದು’ ಕವನ ಓದಿಸುವ ಮೂಲಕ ನನ್ನಿಂದ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು. ಮುಂದೆ ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕರಾದ ಡಾ.ನೀಲಗಿರಿ ತಳವಾರ್ ಅವರ ಸಂಪಾದಕತ್ವದಲ್ಲಿ ’ಬಸವರಾಜು ಕುಕ್ಕರಹಳ್ಳಿ ಕಥಾಲೋಕ’ ಎಂಬ ವಿಮರ್ಶಾ ಕೃತಿಯನ್ನು ಪ್ರಕಟಿಸಲಾಯಿತು.

ಇದನ್ನೂ ಓದಿ: ನಿದ್ದೆಯಲ್ಲಿ ಮನುಷ್ಯ…!

ಈ ಹಿಂದಿನಿಂದಲೂ ಕಾವ್ಯ ಬರೆಯಿರಿ ಎಂದು ಪೀಡಿಸುತ್ತದ್ದ ನನಗೆ ಕೊರೊನಾ ಸಂದರ್ಭದಲ್ಲಿ ಕರೆ ಮಾಡಿ ಭೇಟಿ ಮಾಡುವಂತೆ ತಿಳಿಸಿದರು. ಖುಷಿಪಟ್ಟು ರಾಮಕೃಷ್ಣ ನಗರದ ಪಾರ್ಕೊಂದರಲ್ಲಿ ಭೇಟಿಯಾದೆ. ಒಂದು ಟೈಪಿಸಿದ ಹಾಳೆಗಳ ಗುಚ್ಚವನ್ನು ನೀಡುತ್ತಾ “ನೋಡಪ್ಪ ಇವು ಕವಿತೆ ಎನಿಸಿದರೆ ಪ್ರಕಟಿಸೋಣ, ಇಲ್ಲವೆಂದರೆ ಬೇಡ” ಎಂದು ಮೌನವಾದರು. ಬಸವರಾಜು ಅವರ ಕವನಗಳೆಲ್ಲವನ್ನು ಒಂದೇ ಓದಿನಲ್ಲಿ ಓದಿ ರಾತ್ರಿಯೇ ಫೋನಾಯಿಸಿದೆ. ಕವನಗಳನ್ನು ಕುರಿತು ಮಾತನಾಡಿದಾಗ “ಹಾಗಾದ್ರೆ ಪ್ರಕಟಿಸ್ಬೋದಪ್ಪ? ನನ್ ಗೆಳೆಯ ಕೆ.ಜಿ ದೇವದಾಸನಿಗೂ ಕೊಟ್ಟಿದ್ದೆ. ಅವ್ನೂ ಖುಷಿಪಟ್ಟ ಕಣಪ್ಪ. ಹಾಗಾದ್ರೆ ಒಂದಿಷ್ಟು ಏನಾದ್ರೂ ಬರ್‍ಕೊಡು” ಎಂದರು. ಒಂದೆರಡು ದಿನದಲ್ಲೇ ಕವನಸಂಕಲನದ ಕುರಿತು ನನ್ನ ಮಿತಿಯಲ್ಲೇ ಐದಾರು ಪುಟ ವಿಮರ್ಶೆಯನ್ನು ಬರೆದೆ. ಮತ್ತೆ ಅದೇ ಪಾರ್ಕು, ಚರ್ಚೆ. ನನ್ನ ವಿಮರ್ಶೆಯ ಬರಹದಲ್ಲಿ ಒಂದಿಷ್ಟು ಸಾಲುಗಳನ್ನೂ, ದೇವದಾಸರವರ ಒಂದೆರಡು ಸಾಲುಗಳನ್ನು ಬೆನ್ನುಡಿಯಲ್ಲಿ ಅಚ್ಚುಮಾಡಿಸಿ, ಮುನ್ನುಡಿಯಿಲ್ಲದೆಯೇ ತಮ್ಮ ಮಾತುಗಳನ್ನು ’ಕಾವು ಕೂತ ಕೋಳಿಯ ಧ್ಯಾನ’ ಎಂಬ ಶೀರ್ಷಿಕೆಯಲ್ಲಿ ಬರೆದು ಕವನ ಸಂಕಲನಕ್ಕೆ ’ಅತೀತತರು’ ಎಂದು ಹೆಸರಿಟ್ಟಿದ್ದರು. ನಂತರ ಅವರೇ ಎಚ್. ಗೋವಿಂದಯ್ಯನವರ ಸಲಹೆಯಂತೆ ’ಅವ್ವ ಬರಲೇ ಇಲ್ಲ’ ಎಂದು ಬದಲಾಯಿಸಿದರು. ನೃಪತುಂಗ ಕನ್ನಡ ಶಾಲೆಯಲ್ಲಿ ಸಾವಯವ ರೈತ ’ಆಲೂರು ಮೂರ್ತಿ’ಯವರು ಬಿಡುಗಡೆಗೊಳಿಸಿದರು. ಎಚ್. ಗೋವಿಂದಯ್ಯನವರು ಕೃತಿಕುರಿತು ಸಮರ್ಥ ಮಾತುಗಳನ್ನಾಡಿದರು. ಆಗಲೂ ಕಾರ್ಯಕ್ರಮದ ನಿರೂಪಣೆಯ ಜವಾಬ್ದಾರಿಯನ್ನು ನನಗೆ ವಹಿಸಿದ್ದರು.

“ಹೊಸಬ್ರು ಮುಂದ್ ಬರ್‍ಬೇಕು ಅಭಿ, ತಗೋ ನಿನ್ ಗೆಳೆಯರಿಗೆ ಕೊಡು” ಎಂದು ಒಂದಿಷ್ಟು ಪುಸ್ತಕಗಳನ್ನು ಕೊಟ್ಟಿದ್ದರು.

“ಆತ್ಮಕಥೆ ಬರೀರಿ ಸರ್” ಎನ್ನುತ್ತಿದ್ದ ನನಗೆ “ಯಾವ್ ದೊಡ್ ಸಾಹಿತಿ ನಾನು ಬಿಡು ಅಭಿ, ಸದ್ಯಕ್ಕೆ ಒಂದಿಷ್ಟ್ ಕಥೆ ಬರೀತಿದ್ದೀನಿ, ಮನೆ ರಿನೋವೇಷನ್ ಆಗ್ತಿದೆ, ಮುಂದಿನ ಬರವಣಿಗೆ ಮೊದಲ ಓದುಗ ನೀನೇ ಕಣಪ್ಪ” ಎಂದಿದ್ದರು. ಪ್ರತಿ ವಾರವೂ ಕರೆಮಾಡುತ್ತಿದ್ದ ಬಸವರಾಜು ಸರ್ ಮತ್ತು ನನ್ನ ಮಾತುಗಳು ಗಂಟೆಗಟ್ಟಳೆ ಸಾಗುತ್ತಿದ್ದವು. ಅಪರೂಪದ ಕಥೆಗಳನ್ನು ಬರೆಯುತ್ತಿದ್ದ ಈ ಕಥೆಗಾರನಿಗೆ ಸಿಕ್ಕ ಮನ್ನಣೆ ಚಿಕ್ಕದಾದರೂ, ಅವರಿಗೆ ಅದರ ಅವಶ್ಯಕತೆಯಾಗಲಿ, ಅದರ ಬಗ್ಗೆ ಕೊರಗಾಗಲಿ ಇಲ್ಲದಿರುವುದು ಅವರ ಮಾತುಗಳಿಂದಲೇ ಸ್ಪಷ್ಟವಾಗುತ್ತಿತ್ತು. ದಲಿತರಲ್ಲೇ ಎಡ-ಬಲ ಬಣಗಳ ಕಿತ್ತಾಟಗಳನ್ನು ಪ್ರಸ್ತಾಪಿಸುತ್ತಾ ಎಷ್ಟೋಬಾರಿ ನೊಂದುಕೊಳ್ಳುತ್ತಿದ್ದರು. ವಿಮರ್ಶಕರ ತಾರತಮ್ಯ ನೀತಿಗಳಿಗೂ ವಿಷಾದ ವ್ಯಕ್ತಪಡಿಸುತ್ತಿದ್ದರು. ಬದುಕಿನುದ್ದಕ್ಕೂ ಸಂಕೋಚಪಟ್ಟುಕೊಂಡೇ ಹಿಂದೆ ಉಳಿಯುತ್ತಿದ್ದ ಬಸವರಾಜು ಅವರ ಇತ್ತೀಚಿನ ಭಾವಚಿತ್ರಗಳನ್ನು ನನ್ನ ಕ್ಯಾಮರಾದಲ್ಲಿ ಸೆರೆಹಿಡಿದಿದ್ದೆ. ನೋಡಿ ಖುಷಿಪಟ್ಟು ’ಅವ್ವ ಬರಲೇ ಇಲ್ಲ’ ಸಂಕಲನದ ಬೆನ್ನುಡಿಯಲ್ಲಿ ಅಚ್ಚು ಹಾಕಿಸಿದ್ದರು. ತಿಂಗಳ ಹಿಂದೆ “ಸಾವಯವ ಕೃಷಿ ಸಂತೆಗೆ ಬಾಪ್ಪ ಅಭಿ” ಎಂದು ಕರೆಮಾಡಿದ್ದರು. ಆಗಲೂ ಅವರೊಂದಿಗೆ ಒಂದಿಷ್ಟು ಚರ್ಚೆ, ಮಾತುಗಳನ್ನಾಡಿದ್ದೆ. ಮತ್ತೆ ಸಾವಯವ ಬದುಕಿನ ಕಡೆ ಮರಳಬೇಕಾದದ್ದು ಅನಿವಾರ್ಯ ಎಂದಿದ್ದು, ಬರಹದಲ್ಲೂ ಈ “ಸಾವಯವ ಗುಣ” ಇರಬೇಕೆಂಬ ಅವರ ಹೊಸ ಪರಿಕಲ್ಪನೆ ನನ್ನನ್ನು ಬಹಳವಾಗಿ ಕಾಡಿದೆ. ’ಕುಕ್ಕರಹಳ್ಳಿಯವರ ಈವರೆಗಿನ ಕಥೆಗಳು’ ಎಂಬ ನಾನು ಆಸೆಪಟ್ಟ ಪುಸ್ತಕ ಮುಂದೊಂದು ದಿನ ’ಸಮಗ್ರ ಕಥೆಗಳು’ ಎಂಬ ಶೀರ್ಷಿಕೆಯಲ್ಲಿ ಬರಬಹುದು. ಕುಕ್ಕರಹಳ್ಳಿಯವರ ಹುಟ್ಟುಹಬ್ಬದ ದಿನ ಅವರಿಗೆ ಶುಭಾಶಯ ತಿಳಿಸಿದ್ದು, ಅವರು ಉತ್ತರಿಸಿದ್ದು, ಚಾಟ್ ಮಾಡಿದ್ದು, ಮಾತನಾಡಿದ್ದ ಕೆಲವು ವಾಯ್ಸ್ ರೆಕಾರ್ಡಿಂಗ್‌ಗಳು ಎಲ್ಲವೂ ಇದೆ. ಆದರೆ ಇಂದು ಕುಕ್ಕರಹಳ್ಳಿಯವರು ನಮ್ಮೊಂದಿಗಿಲ್ಲ. ಅಣ್ಣನ ಮದುವೆಯ ಆಮಂತ್ರಣ ಪತ್ರಿಕೆಯನ್ನು ವಾಟ್ಸಾಪ್‌ನಲ್ಲಿ ಕಳುಹಿಸಿ ಬನ್ನಿ ಸರ್ ಎಂದು ಕಳಿಸಿದ್ದ ಸಂದೇಶ ನೋಡಿ ಕರೆ ಮಾಡಿದ ಅವರು “ಕಣ್ಣಿನ ಆಪರೇಷನ್ ಆಗಿದೆ, ಟ್ರೀಟ್‌ಮೆಂಟ್ ತಗೋತಿದ್ದೀನಿ ಕಣಪ್ಪ, ಗಾಡಿ ಓಡ್ಸಕ್ಕಾಗಲ್ಲ, ಬರಲ್ಲ ಅಂತ ಬೇಜಾರಾಗ್ಬೇಡ ಕಣಪ್ಪ. ನಿನ್ ಮದ್ವೆಗೆ ತೆವ್ಕೊಂಡಾದ್ರೂ ಬತ್ತಿನಿ ಕಣಪ್ಪ.. ನಮ್ ಅಭಿ ಮದ್ವೆಗೆ ಮಿಸ್ ಮಾಡಕ್ಕಾಗುತ್ತಾ” ಎಂದು ಅಂದವ್ರು ನೀವೇನಾ ಸರ್? ಮೋಸ ಮಾಡಿ ಇಷ್ಟ್ ಬೇಗ ಹೋಗ್ಬಾರ್‍ದಿತ್ತು.. ಮಿಸ್ ಯೂ ಸರ್…!

ಕುಕ್ಕರಹಳ್ಳಿಯ ಕಥಾಲೋಕ: ಕನ್ನಡ ಸಾಹಿತ್ಯದ ಗರಿಮೆ

ಕುಕ್ಕರಹಳ್ಳಿ ಬಸವರಾಜು ಅವರ ಕಥಾ ಸಂಕಲನಗಳಾದ ’ಮೊಕಾರ’, ’ಜೀವಾಳ’, ’ಪುನುಗ’, ’ಬಾಳಾಟ’, ’ಕಾಲನೊದ್ದವರು’ ಕನ್ನಡದ ಕಥಾ ಸಾಹಿತ್ಯಕ್ಕೆ ವಿಶಿಷ್ಟ ಕೊಡುಗೆಗಳು. ಡಾ. ಶಾಂತಿನಾಥ ದೇಸಾಯಿಯವರು ಇವರ ಮೊದಲ ಕಥಾ ಸಂಕಲನದ ಮುನ್ನುಡಿಯಲ್ಲಿ, “ಬಸವರಾಜು ಕುಕ್ಕರಹಳ್ಳಿಯವರ ವೈಶಿಷ್ಟ್ಯವೆಂದರೆ ಸಣ್ಣ ಕಥೆಯ ನಿಷ್ಠುರ ಬಂಧವನ್ನು ಆದಷ್ಟು ಸಡಿಲಗೊಳಿಸಿ ಅದರಲ್ಲಿ ಸೂಕ್ಮವಾದ ವಿವರಗಳನ್ನು ತುಳುಕುವಷ್ಟು ತುಂಬುವದು. ’ಕಡಜನಗೂಡು’, ’ಆ ಮನೆ’, ’ಹಬ್ಬ’ ಮುಂತಾದ ಕತೆಗಳಲ್ಲಿ ಒಂದು ಜನಾಂಗದ ಶ್ರದ್ಧೆ, ಸಂಸ್ಕಾರ, ಸಂಸ್ಕೃತಿಗಳ ಜೀವ ರೀತಿಯನ್ನು ಅವರ ಸಂವೇದನೆಯ ಪಾತಳಿಯ ಮೇಲೇ ರೂಪುಗೊಳ್ಳಲು ಸಾಧ್ಯವಾದದ್ದು ಬಂಧದ ಸಡಿಲತೆಯ ಮೂಲಕವೇ. ಬಂಧದ ಸಡಿಲತೆಯ ಜೊತೆಗೆ ಕಥೆಗಳ ಗತಿಯೂ ನಿಧಾನವಾಗಿದೆ. ಈ ಕಥೆಗಳನ್ನು ಓದುವ ಸಹೃದಯರು ನಿಧಾನಗತಿಯಲ್ಲಿ ಓದಿದರೇನೇ ಕಥೆಗಳ ಧ್ವನಿಪೂರ್ಣ ಅನುಭವಗಳಿಗೆ ಸ್ಪಂದಿಸಲು ಸಾಧ್ಯ” ಎಂದು ಕುಕ್ಕರಹಳ್ಳಿಯವರ ಕಥೆಗಳ ಎಳೆಗಳನ್ನು ಬಿಡಿಸಿದ್ದಾರೆ.

ಇವರ ಕಥಾಸಂಕಲನಗಳಲ್ಲೇ ಭಿನ್ನವಾದದ್ದು ಬಾಳಾಟ ಕಥಾಸಂಕಲನ. ಈ ಕಥಾಸಂಕಲನದಲ್ಲೂ ಒಂಭತ್ತು ಕಥೆಗಳಿವೆ. ಈ ಪುಸ್ತಕಕ್ಕೆ ಮುನ್ನುಡಿಯಾಗಿ ಕುಕ್ಕರಹಳ್ಳಿ ಬಸವರಾಜು ಅವರು ತಮ್ಮ ಅವ್ವ ಕವಿತೆಯನ್ನೇ ಬಳಸಿಕೊಂಡಿದ್ದಾರೆ. ಲಂಕೇಶರ ಅವ್ವ ಕವಿತೆಯಷ್ಟೇ ಪ್ರಭಾವಶಾಲಿಯಾಗಿದೆ. ಇಬ್ಬರ ಕವಿತೆಯನ್ನೇನಾದರೂ ನಾನು ತೂಗಿ ನೋಡಿದರೆ ನನಗೆ ಎರಡೂ ಸಮವೇ. ಬದುಕಿನ ಬಾಳಾಟಕ್ಕೂ ಸೃಷ್ಟಿಯ ಸೆಲೆ ಅವ್ವನೇ ಆದ್ದರಿಂದ ಮುನ್ನುಡಿಯಾಗಿ ಈ ಕವಿತೆ ಅಡರಿಕೊಂಡಿರುವುದು ಅರ್ಥಪೂರ್ಣ ಎನಿಸುತ್ತದೆ.

ಇದನ್ನೂ ಓದಿ: ಓಶೋ ಕಂಡಂತೆ ವಿವೇಕಾನಂದರು

ಪ್ರತಿ ಕಥೆಯ ಆರಂಭವೂ ಪುಟ್ಟ ಕವಿತೆಯಿಂದಲೇ ಆರಂಭವಾಗುವುದು ಈ ಸಂಕಲನದ ವಿಶೇಷ. ಬಂಗಲೆ ಕಥೆಯಲ್ಲಿ ಕಷ್ಟದಿಂದ ಓದಿ ಬಂಗಲೆಯನ್ನು ಕಟ್ಟಿಸಿದ ರೋಚಕ ಕಥೆ. ನಾಗೇಶ ಓದುವಾಗ ಕುಪ್ಪಿದೀಪ ಅವನೊಟ್ಟಿಗೆ ಮಾತಾಡುತ್ತದೆ. ಕೂತಲ್ಲಿಯೇ ತೊಳಲಾಡುತ್ತದೆ. ದೇವನೂರರ ಕುಸುಮಬಾಲೆಯ ಜ್ಯೋತಮ್ಮದೀರು ನೆನಪಾಗುತ್ತಾರೆ.

’ಅವ್ವ ಬರಲೇ ಇಲ್ಲ’ ಕೃತಿಯಲ್ಲಿ ತಮ್ಮ ಕವನಗಳನ್ನು ಬಸವರಾಜು ಅವರು ದಾಖಲಿಸಿದರು. ಕನ್ನಡ ಸಾಹಿತ್ಯ ಲೋಕವು ಇವರ ಸಾಹಿತ್ಯವನ್ನು ಮರುಪ್ರವೇಶಿಸಿ, ಅಗಲಿದ ಚೇತನವನ್ನು ಅರ್ಥಪೂರ್ಣವಾಗಿ ನೆನೆಯುವ ಅಗತ್ಯವಿದೆ.

ಅಭಿಷೇಕ್ ವೈ.ಎಸ್

ಅಭಿಷೇಕ್ ವೈ.ಎಸ್
ಯುವ ಕವಿ, ಮೈಸೂರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...