Homeಮುಖಪುಟ‘ನಿರುತ್ತರ'ದ ರಾಜೇಶ್ವರಿ ನೆನಪು

‘ನಿರುತ್ತರ’ದ ರಾಜೇಶ್ವರಿ ನೆನಪು

- Advertisement -
- Advertisement -

ಒಂದು ದಿನ, ನನ್ನ ತಮ್ಮ ಕಲೀಂ ’ರಾಜೇಶ್ವರಿಯವರನ್ನು ಮಾತನಾಡಿಸಿಕೊಂಡು ಬರೋಣ, ಬರ್ತೀಯಾ’ ಎಂದು ಕೇಳಿದ. ಅವನು ತೇಜಸ್ವಿಯವರ ಕಟ್ಟಾಭಿಮಾನಿ. ಅವರ ಸಾಹಿತ್ಯದ ಮೇಲೇಯೇ ಪಿಎಚ್.ಡಿ., ಮಾಡಿದ. ಅವರಂತೆಯೇ ವೈಲ್ಡ್‌ಲೈಫ್ ಫೋಟೊಗ್ರಫಿಯನ್ನು ಹವ್ಯಾಸವಾಗಿಸಿಕೊಂಡ. ಅವನಿಗೆ ತಾನು ಸಂಗ್ರಹಿಸಿದ ತೇಜಸ್ವಿ ಲೇಖನಗಳನ್ನು ರಾಜೇಶ್ವರಿಯವರಿಗೆ ಕೊಡುವ ಕೆಲಸವೂ ಇತ್ತು.

ಸಾಮಾನ್ಯವಾಗಿ ನಾನು ನನ್ನಿಷ್ಟದ ಲೇಖಕರನ್ನು ಭೇಟಿಮಾಡುವುದಕ್ಕೆ ಮುಂದೊಡಗುವುದಿಲ್ಲ. ಅವರ ಕೃತಿಗಳ ಮೂಲಕವೇ ಸಂಬಂಧ ಇಟ್ಟುಕೊಳ್ಳುವುದಕ್ಕೆ ಬಯಸುತ್ತೇನೆ. ಆದರೂ ತೇಜಸ್ವಿಯವರ
ಸಂದರ್ಶನವನ್ನು ಮಾಡಿ ಪ್ರಕಟಿಸುವ ಆಸಕ್ತಿ ನನಗಿತ್ತು. ಆದರೆ ಮೂಡಿಯಾದ ಅವರು ಹೇಗೆ ವರ್ತಿಸುವರೊ ಎಂಬ ಶಂಕೆಯಿಂದ ಹಿಂಜರಿದುಕೊಂಡಿದ್ದೆ. ಒಮ್ಮೆ ಗುರುಗಳಾದ ಜಿ.ಎಚ್.ನಾಯಕರ ಮನೆಯಲ್ಲಿ ಅವರನ್ನು ಕಾಣುವ ಅವಕಾಶ ಸಿಕ್ಕಿತು. ಹೊಸಬರ ಎದುರು ತೇಜಸ್ವಿ, ಜನಸುಳಿವನ್ನು ಕಂಡೊಡನೆ ವನ್ಯಮೃಗಗಳು ಹಳುವಿನಲ್ಲಿ ನುಸುಳಿ ಮರೆಯಾಗುವಂತೆ, ಸೆನ್ಸಿಟಿವ್ ಆಗಿಬಿಡುತ್ತಾರೆಂದು ತೋರುತ್ತದೆ. ಅಥವಾ ಅವರು ಬಂದು ಬಹಳ ಹೊತ್ತಾಗಿರಬೇಕು. ‘ನಾಯಕರೇ ಬರ್ತೀನಿ’ ಎಂದು ಹೊರಟುಬಿಟ್ಟರು.

ಇದಾದಬಳಿಕ ಬಾಬಾಬುಡನಗಿರಿ ಕುರಿತು ನಾನು ಬರೆದ ಲೇಖನ ಓದಿ ಮೆಚ್ಚಿಕೊಂಡು ಬರೆದಿದ್ದರು. ಶ್ವಾನಪ್ರಿಯರಾದ ಅವರಿಗೆ ಲೇಖನ ಇಷ್ಟವಾಗಿದ್ದು ನನ್ನ ಸಂಶೋಧನ ’ಪ್ರತಿಭೆ’ಯಿಂದಲ್ಲ; ದತ್ತಾತ್ರೇಯನ ಸುತ್ತ ಇರುವ ನಾಲ್ಕು ನಾಯಿಗಳಿರುವ ಚರ್ಚೆಯಿಂದ. ಅವರು ನನ್ನ ಲೇಖನವನ್ನು ಕರ್ನಾಟಕದ ಯುವಕರು ಓದುವಂತೆ ತಮ್ಮ ಬರೆಹದಲ್ಲಿ ಶಿಫಾರಸ್ಸು ಮಾಡಿದ್ದೂ ಉಂಟು. ಒಮ್ಮೆ ತಮ್ಮ ಆಪ್ತರೊಬ್ಬರ ಮೂಲಕ ನನಗೆ ಮನೆಗೆ ಬರಹೇಳಿದ್ದರು. ನನ್ನ ಮಖೇಡಿತನದಿಂದ ದಿನ ದೂಡಿಕೊಂಡಿದ್ದೆ. ಅಷ್ಟರಲ್ಲೇ ಸಾವಿನ ಸುದ್ದಿ ಬಡಿಯಿತು. ಮನಸ್ಸು ಕಲ್ಲೇಟು ತಿಂದ ಹಕ್ಕಿಯಂತೆ ತೇಜಸ್ವಿ ತೇಜಸ್ವಿ ಎಂದು ಚಡಪಡಿಸಿತು. ಈಗವರ ಮನೆಗೆ ಹೋಗುವ ಅವಕಾಶ ಬಂದಿದೆ. ಆದರೆ ಅವರೇ ಇಲ್ಲ.

ಸದಾ ಶಿವ-ಶವಾಣಿಯರಂತೆ ಜತೆಯಲ್ಲಿ ಇರುತ್ತಿದ್ದ ತೇಜಸ್ವಿ-ರಾಜೇಶ್ವರಿಯವರನ್ನು ಮತ್ತೊಮ್ಮೆ ಕಂಡಿದ್ದು, ಕುಪ್ಪಳಿಯಲ್ಲಿ. ಅದು ಕುವೆಂಪು ಜನ್ಮಶತಮಾನೋತ್ಸವದ ಕಾರ್ಯಕ್ರಮ. ಕುವೆಂಪು ಸಮಾಧಿಯನ್ನು ರಾಜಘಾಟಿನ ಸಮಾಧಿಯಂತೆ ಹೂಗಳಿಂದ ಸಿಂಗರಿಸಿದ್ದರು. ಕಾರ್ಯಕ್ರಮಕ್ಕೆ ಮುನ್ನ ಅತಿಥಿಗಳಾದ ನಾವು ಬಿಡಿಹೂವನ್ನು ಸಮಾಧಿಯ ಮೇಲೆ ಚೆಲ್ಲಿ ಶ್ರದ್ಧಾಂಜಲಿ ಸೂಚಿಸುವುದಿತ್ತು. ನಾವು ಹಾಗೆ ಮಾಡುವಾಗ, ತೇಜಸ್ವಿ ಮತ್ತು ರಾಜೇಶ್ವರಿ ಸಂಬಂಧವಿಲ್ಲದಂತೆ ದೂರ ನಿಂತು ನಮ್ಮಲ್ಲಿ ಗಿಲ್ಟ್ ಹುಟ್ಟಿಸುತ್ತಿದ್ದರು. ಇಬ್ಬರೂ ಕುವೆಂಪು ಶತಮಾನೋತ್ಸವ ಕಾರ್ಯಕ್ರಮಕ್ಕೆ ಹಂಪಿಗೆ ಬಂದಾಗಲೂ ಅಷ್ಟೆ. ಸಭೆಯಲ್ಲಿ ಕುಳಿತುಕೊಳ್ಳುವುದಕ್ಕಿಂತ ಹೆಚ್ಚಾಗಿ ದಾರಿತಪ್ಪಿ ಬಂದ ಗಂಧರ್ವರಂತೆ ಕನ್ನಡ ವಿವಿಯ ಕ್ಯಾಂಪಸ್ಸಿನಲ್ಲಿ ಅಡ್ಡಾಡಿಕೊಂಡಿದ್ದರು.


ಎಲ್ಲ ಬಗೆಯ ಫಾರ್ಮಾಲಿಟಿಗಳನ್ನು ತಮ್ಮ ಮಾತು-ವರ್ತನೆಗಳಿಂದ ಗೇಲಿಗೊಳಿಸುವ ತೇಜಸ್ವಿಯವರು ಈಗ ಮನೆಯೊಳಗಿಲ್ಲ ಎಂಬುದು ಧೈರ್ಯವಾದರೆ, ಅವರಿಲ್ಲದ ಮನೆಗೆ ಹೋಗುವುದು ಸಂಕಟವೆನಿಸುತ್ತಿತ್ತು. ವರ್ಷ ಕಳೆದರೂ ಸೂತಕದ ಭಾವವಿನ್ನೂ ಮಲೆನಾಡಿನ ಮಾಗಿಯ ಮಂಜಿನಂತೆ ಆವರಿಸಿಕೊಂಡಿತ್ತು. ಲೇಖಕರಿಗೆ ಜಾತಿಮತಗಳಾಚೆ ನಿರ್ಮಾಣಗೊಳ್ಳುವ ಈ ಬಂಧುತ್ವ ರಕ್ತ ಸಂಬಂಧಕ್ಕಿಂತ ಅದೆಷ್ಟು ಗಾಢ? ಕೈಮರದಲ್ಲಿಳಿದು ‘ನಿರುತ್ತರ’ಕ್ಕೆ ಹೋದೆವು. ಮೊದಲಿಗೆ ಮನೆಯೇ ಕಾಣಲಿಲ್ಲ. ತಾನೇ ದಬ್ಬಿಕೊಂಡು ಹೋಗುವಷ್ಟು ಇಳಿಜಾರಲ್ಲಿ, ಸೊಕ್ಕಿಬೆಳೆದ ಕಾಫಿಗಿಡಗಳ ನಡುವಿದ್ದ ಎರಡು ಪಟ್ಟೆಯ ಜೀಪುದಾರಿಯಲ್ಲಿ ನಡೆದವು. ಕಾಫಿಗಿಡಗಳು ಚಾಚಿದ ತೋಳಗೆಲ್ಲುಗಳಲ್ಲಿ ಕೆಂಪು-ಹಸಿರು ಹಣ್ಣನ್ನು ಕೋದಂತೆ ನಿಂತಿದ್ದವು. ತೋಟ ಹಕ್ಕಿಗಳ ಜಾತ್ರೆಯಂತಾಗಿ ಕಲರವ ಹೊಮ್ಮುತ್ತಿತ್ತು. ಕೊಂಚ ದೂರ ನಡೆದ ಬಳಿಕ ಕೆಂಪ್ಹಂಚಿನ ಮನೆಯ ಮಾಡು ಕಾಣಿಸಿತು. ಮನೆಯ ಸುತ್ತ ನೀಟಾಗಿ ಕತ್ತರಿಸಿ ಬೆಳೆಸಿದ ಅಲಂಕಾರದ ಗಿಡಗಳು. ಹುಲ್ಲುಹಾಸು. ಮನೆಯೊಳಗಿಂದ ರಾಜೇಶ್ವರಿಯವರ ಮಾತು ಕೇಳಿಸಿತು. ಅತಿಥಿಗಳು ಬಂದಿರಬೇಕು. ಅವರು ಹೊರಬಂದ ಮೇಲೆ ಹೋಗೋಣ ಎಂದು, ಪಕ್ಕದಲ್ಲಿದ್ದ ಶೆಡ್ಡಿನತ್ತ ಹೋದೆವು. ಅಲ್ಲಿದ್ದ ಸೌದೆ ಒಟ್ಟಲಿನ ಪಕ್ಕ ತೇಜಸ್ವಿಯವರ ಸ್ಕೂಟರ್ ನಿಂತಿತ್ತು. ರೈಲಿನಲ್ಲಿ ಪಾರ್ಸೆಲ್ ಮಾಡಲು ಪ್ಯಾಕ್ ಮಾಡಿದಂತೆ, ಗೋಣಿಯ ಬ್ಯಾಂಡೇಜನ್ನು ಬಿಗಿಸಿಕೊಂಡಿತ್ತು. ಧೂಳುಹಿಡಿದ ಅದರ ಹ್ಯಾಂಡಲನ್ನು ನವಿರಾಗಿ ಮುಟ್ಟಿದೆ. ಅಲುಗಾಡಿತು. ಶೆಡ್ಡಿನ ಪಕ್ಕದಲ್ಲಿದ್ದ ಕಣದಲ್ಲಿ ವಿವಿಧ ಬಣ್ಣದ ಕಾಫಿಬೀಜ ಒಣ ಹಾಕಲಾಗಿತ್ತು. ಇವನ್ನೆಲ್ಲ ನೋಡುತ್ತ ನಿಂತಿರುವಾಗ ಗಾಜಿನ ಕಿಟಕಿಯ ಮೂಲಕ ನಮ್ಮ ಸುಳಿದಾಟ ಕಂಡವರೇ ರಾಜೇಶ್ವರಿ ತಟ್ಟನೆ ಹೊರಬಂದು ಸ್ವಾಗತಿಸಿದರು. 70 ದಾಟಿದ್ದರೂ ಅಜ್ಜಿಯೆನಿಸದಂತೆ ಚಟುವಟಿಕೆಯಿಂದ ತುಡಿಯುತ್ತಿದ್ದರು. ನಾವು ಬರುವ ವರ್ತಮಾನ ಅವರಿಗೆ ಮೊದಲೇ ಇತ್ತು. ಕುಪ್ಪಳಿಯಲ್ಲಿ ನಡೆದ ಕುವೆಂಪು ಕಾರ್ಯಕ್ರಮದಲ್ಲಿ ನನ್ನ ನೋಡಿದ್ದನ್ನು ನೆನಪಿಸಿಕೊಂಡರು. ಅಲ್ಲಿದ್ದ ಸಸ್ಯವಿಜ್ಞಾನಿ ಮಲಿಕರನ್ನು ಪರಿಚಯಿಸಿದರು. ಅವರ ಚರ್ಚೆಯಿನ್ನೂ ಮುಗಿದಂತಿರಲಿಲ್ಲ. ನಾವು ‘ತೋಟ ಅಡ್ಡಾಡಿ ಬರುತ್ತೇವೆ’ ಎಂದು ಹೊರಟೆವು.

ಮಲಿಕರನ್ನು ಕಳಿಸಿದ ಬಳಿಕ, ರಾಜೇಶ್ವರಿ ನಮ್ಮನ್ನು ಕರೆಯಲು ಹೊರಬಂದರು. ಎಲ್ಲರೂ ಹಾಲಲ್ಲಿ ಕೂತೆವು. ಗಾಜಿನ ಮನೆಯೊಂದನ್ನು ಅನಾಮತ್ತಾಗಿ ತಂದು ದಟ್ಟಕಾಡಿನಲ್ಲಿ ಇಟ್ಟಿರುವಂತೆ ಭಾಸವಾಯಿತು. ನಾನು ಚಕ್ಕೋತ ಮರ ಕಾಣುವಂತೆ ಕೂತೆ. ರಾಜೇಶ್ವರಿ ಅಕ್ಕರೆಯಿಂದ “ಏನು ಕೊಡಲಿ?” ಎಂದರು. ’ಕಾಫಿ’ ಎಂದೆವು. “ತರ್ತೇನೆ. ಅಲ್ಲೀತನಕ ಈ ಹಣ್ಣು ತಿನ್ನಿ. ಇದು ತೇಜಸ್ವಿ ನೆಟ್ಟಮರದ್ದು” ಎನ್ನುತ್ತ ಕಿತ್ತಳೆಯ ಬುಟ್ಟಿಯನ್ನು ಮುಂದಿಟ್ಟರು. ಹಸಿರು ಉಂಡೆಗಳಂತಿದ್ದ ಅವನ್ನು ಸುಲಿದು ತಿಂದೆವು. ತೊಳೆ ಕೊಂಚ ಹುಳಿಯಾಗಿದ್ದವು.

ಕಾಫಿಯ ಜತೆ ಬಂದ ರಾಜೇಶ್ವರಿ ಮಾತಿಗೆ ಕೂತರು. ಒಂದೇ ಸಮನೆ ಮಾತಾಡುತ್ತ ಹೋದರು. ನಾವು ಕೇಳಿಸಿಕೊಳ್ಳುತ್ತ ಹೋದೆವು. ಅರ್ಧಶತಮಾನದ ನೆನಪು ಕಡಲ ಅಲೆಗಳಂತೆ ಉಕ್ಕುಕ್ಕಿ ಬರುತ್ತಿದ್ದವು. ಎಲ್ಲವನ್ನು ಇಸವಿ ಸಮೇತ ಕರಾರುವಾಕ್ಕಾಗಿ ಹೇಳುತ್ತಿದ್ದರು. ಸಿರಿವಂತ ಕುಟುಂಬದಲ್ಲಿ ಹುಟ್ಟಿಬೆಳೆದ ತೇಜಸ್ವಿಯವರ ಸರಳತೆ ಬಗ್ಗೆ ಅವರಿಗೆ ಅಭಿಮಾನ. ಒಮ್ಮೆ ಮದುವೆಗೆ ಮುಂಚೆ ತಮ್ಮ ಮನೆಗೆ ತೇಜಸ್ವಿಯವರು ಬಂದಾಗ, ಅಲ್ಯುಮಿನಿಯಂ ತಟ್ಟೆಯಲ್ಲಿ ಊಟಕೊಟ್ಟರಂತೆ. ಅದರ ಬಗ್ಗೆ ಗಮನವೇ ಇಲ್ಲದೆ ತೇಜಸ್ವಿ ಉಂಡರಂತೆ. ಅದನ್ನು ಕಂಡು ರಾಜೇಶ್ವರಿಯವರಿಗೆ ಈ ವ್ಯಕ್ತಿಗೆ ತಮ್ಮನ್ನು ಸಮರ್ಪಿಸಿಕೊಳ್ಳಬೇಕು ಅನಿಸಿಬಿಟ್ಟಿತಂತೆ.

ತೇಜಸ್ವಿ ಸಾಹಿತ್ಯದ ಗಂಭೀರ ವಿದ್ಯಾರ್ಥಿನಿಯಂತಿದ್ದ ರಾಜೇಶ್ವರಿ, ಸಾಲುಗಳನ್ನೆಲ್ಲ ನೆನಪಿಟ್ಟುಕೊಂಡಿದ್ದರು. ಕೆಲವನ್ನು ಉಲ್ಲೇಖಿಸುತ್ತ ’ಹೀಗೆ ಯೋಚಿಸಲು ಯಾರಿಗೆ ಬರುತ್ತೆ? ನಿಮಗಾಗುತ್ತಾ? ನನಗಾಗುತ್ತಾ?’ ಎನ್ನುತ್ತ ತಮ್ಮ ತೇಜಸ್ವಿ ಎಷ್ಟು ಅನನ್ಯ ಎಂದು ವಿವರಿಸುತ್ತಿದ್ದರು; ಜಗತ್ತಿನ ಯಾವುದೇ ವಿದ್ಯಮಾನದ ಮೇಲೆ ಮಾತಾಡಿದರೂ ಅದು ಬಂದು ತೇಜಸ್ವಿಯವರಿಗೆ ಲಗತ್ತಾಗಿ ಮುಗಿಯುವಂತೆ ಮಾತಾಡುತ್ತಿದ್ದರು. ಹಕ್ಕಿ ಫೋಟೊಗಾಗಿ ಮರಸಿನಲ್ಲಿ ಕೂತಿದ್ದ ತೇಜಸ್ವಿಯವರಿಗೆ ಊಟಕ್ಕೆ ಕೂಗಿ ಕರೆದೊ, ಒಗ್ಗರಣೆಗೆ ಕರಿಬೇವಿನಸೊಪ್ಪು ತರಲೆಂದು ಹೋಗಿ ಹಕ್ಕಿಯನ್ನು ಓಡಿಸಿಯೊ ಬೈಸಿಕೊಂಡಿದ್ದನ್ನು ಪ್ರೀತಿಯಿಂದ ನೆನೆದರು-ಈಗ ಹಾಗೆ ಬೈಯುವವರಿಲ್ಲವಲ್ಲ ಎಂಬ ಕೊರಗಿನಲ್ಲಿ. ಮನೆಯ ಪ್ರೀತಿಯ ನಾಯಿ ಪ್ರಾಣ ಬಿಡುವಾಗ, ತೇಜಸ್ವಿಯವರು ಅದನ್ನು ಮಗುವಿನಂತೆ ತಬ್ಬಿಕೊಂಡು ತೋಟದ ಮೂಲೆಮೂಲೆಗೆ ಒಯ್ದು, ’ನೋಡೊ ನೋಡು, ಇದು ನೀನು ಓಡಾಡಿದ ನೆಲ. ಕೊನೆಯ ಸಲ ನೋಡಿಕೊ’ ಎಂದು ಹುಚ್ಚರಂತೆ ಓಡಾಡಿದ್ದನ್ನು ನೆನೆದರು.

ಈಗವರ ಕಂಠ ತುಂಬಿಬಂದಿತು. ಮಾತು ನಿಂತಿತು. ಬೆರಳುಗಳನ್ನು ಕನ್ನಡಕದೊಳಗೆ ತೂರಿಸಿ ಕಣ್ಣುಗಳ ಮೇಲಿಟ್ಟು ಸುಮ್ಮನಾದರು. ಆದರೆ ಕಣ್ಣುಗಳಿಗೆ ಹರಿವ ಕಂಬನಿ ತಡೆಯಲಾಗಲಿಲ್ಲ. ಅಗಲಿಕೆಯ ನೋವು ಎಷ್ಟು ಹಸಿಯಾಗಿದೆ- ವರ್ಷ ತುಂಬಿದರೂ! ಬಹುಶಃ ಅದು ಮಾಯದ ಗಾಯ. ತೇಜಸ್ವಿ ತಮ್ಮನ್ನು ಅಲೆಮಾರಿ ಎಂದು ಕರೆದುಕೊಂಡರು. ಆದರೆ ಹೆಂಡತಿ ತೋಟದಮನೆ ಬಿಟ್ಟು ಹೊರಗೆ ಹೆಚ್ಚು ಹೋಗದ ಅವರಂತಹ ’ಗೃಹಸ್ತ’ ಬೇರೆಯಿಲ್ಲ. ಅರ್ಧಶತಮಾನ ಕಾಲ ತಾನು ಪ್ರೀತಿಸಿ ಮದುವೆಯಾದ ವ್ಯಕ್ತಿಯ ಜತೆ ನಿರಂತರವಾಗಿ ಸಮಯ ಕಳೆದ ಈ ಜೀವ, ಇದ್ದಕ್ಕಿದ್ದಂತೆ ಅದರಿಂದಗಲಿ ವೇದನೆ ಅನುಭವಿಸುತ್ತಿದೆ-ರಾಮಾಯಣದ ಕ್ರೌಂಚದಂತೆ.

ಮಧ್ಯಾಹ್ನವಾಗುತ್ತಿತ್ತು. ಹೊರಗೆ ಹಕ್ಕಿಗಳ ದನಿಯಿಲ್ಲ. ಅವು ಎಲ್ಲೋ ಅಡಗಿ, ಇಡೀ ವಾತಾವರಣ ಮೌನದಿಂದ ನಿರುತ್ತರವಾಗಿತ್ತು. ಊಟವಾದ ಬಳಿಕ, ಮತ್ತೆ ಮಾತು. ಮತ್ತೆ ಕಾಫಿ. ಹಗಲು ಇಳಿಯತೊಡಗಿತು. ಮಧ್ಯಾಹ್ನದ ನೀರವತೆಯನ್ನು ಮುರಿಯುವಂತೆ, ನಿಸರ್ಗದ ಚಟುವಟಿಕೆ ಮತ್ತೆ ಆರಂಭ. ಚಕ್ಕೋತದ ಮರವನ್ನೇ ನಾನು ನೋಡುತ್ತಿದ್ದರಿಂದ ಇರಬೇಕು, ರಾಜೇಶ್ವರಿ ಮನೆಯೊಳಗೆ ಕತ್ತಲಮೂಲೆಯಲ್ಲಿ ಇಟ್ಟಿದ್ದ ಚಕ್ಕೋತವನ್ನು ಸುಲಿದು ಎಲ್ಲರಿಗೂ ಕೊಡುವಂತೆ ಕೆಲಸದಾಕೆ ದೇವಕಿಗೆ ಕೊಟ್ಟರು. ದೇವಕಿ ಬಾಗುಗತ್ತಿ ತೆಗೆದುಕೊಂಡು, ಗೊಮ್ಮಟನನ್ನು ಕಟೆದು ತೆಗೆವ ಶಿಲ್ಪಿಯಂತೆ, ಚಕ್ಕೋತದ ಹಳದಿ ಸಿಪ್ಪೆಯನ್ನೂ, ಅದಕ್ಕೆ ಹತ್ತಿಕೊಂಡಿದ್ದ ಹತ್ತಿಯಂತಹ ದಪ್ಪನಾದ ಮೆತ್ತೆಯನ್ನೂ ಕತ್ತರಿಸಿ, ಒಂದಕ್ಕೊಂದು ತಬ್ಬಿಕೊಂಡು ಪವಡಿಸಿದ್ದ ತಿಳಿಗುಲಾಬಿ ತೊಳೆಗಳನ್ನು ಅನಾವರಣಗೊಳಿಸಿದಳು. ಅವು ತೇಜಸ್ವಿ ತರಹ ಒಗರಿನಿಂದ ತುಂಬಿದ್ದವು. ಚಕ್ಕೋತವನ್ನು ಗಿಡದಿಂದ ಕಿತ್ತಕೂಡಲೇ ತಿನ್ನಬಾರದಂತೆ. ಅದನ್ನು ಕತ್ತಲಮೂಲೆಯಲ್ಲಿ ಕಳಿಯಲು ಬಿಡಬೇಕಂತೆ.

ಅನುಭವದಿಂದ ಮಾಗಿರುವ ರಾಜೇಶ್ವರಿ, ತೇಜಸ್ವಿ ತೀರಿಕೊಂಡ ಬಳಿಕ ಲೇಖಕಿಯಾಗಿ ಹೊಮ್ಮಿದರು. ತಾರಿಣಿಯವರು ಕುವೆಂಪು ಅವರ ಇನ್ನೊಂದೇ ಮುಖವನ್ನು ಕಟ್ಟಿಕೊಟ್ಟಂತೆ ತೇಜಸ್ವಿಯವರನ್ನು ರಾಜೇಶ್ವರಿ ಕಟ್ಟಿಕೊಟ್ಟರು. ಅವರ ಸರಳವೂ ಮುಗ್ಧವೂ ಆದ ಬರೆಹ ಆಪ್ತವಾಗಿದೆ. ತೇಜಸ್ವಿಯಂತಹ ಕಣ್ಕೋರೈಸುವ ಬೆಳಕಿನ ಜತೆ ಬದುಕಿದ ಅವರಲ್ಲಿ ಸಹಜವಾಗಿ ಅಭಿಮಾನ ತುಳುಕುತ್ತಿದೆ. ಆದರೆ ಅದುವೇ ತೇಜಸ್ವಿ ಚಿತ್ರವು ತನ್ನ ಮಾನುಷ ಸಹಜ ಮಿತಿಗಳ ಸಮೇತ ಮೂಡದಂತೆ ಮಾಡಿದೆಯಾ ಎಂದೂ ಅನಿಸಿತು. ಜೀವಮಾನವೆಲ್ಲ ತೇಜಸ್ವಿಯವರ ಓದುಗರಿಗೂ ಗೆಳೆಯರಿಗೂ ಉಪಚರಿಸಿ ದಣಿದಿರುವ ಅವರಿಗೆ, ಈಗಲೂ ನಮ್ಮಂತಹವರ ಕಾಟ ತಪ್ಪಿಲ್ಲ. ಆದರೆ ತೇಜಸ್ವಿಯವರನ್ನು ಪ್ರೀತಿಸುವ ಜನ ಇರುವೆಗಳಂತೆ ಬರುತ್ತಿದ್ದಾರೆ. ಬರವನ್ನು ತಡೆಯಲಾರರು. ಬಂದವರಿಗೆಲ್ಲ ಉಪಚರಿಸಿಕೊಂಡೂ ಇರಲಾರರು. ಸಂದರ್ಶಕರ ಭೇಟಿಯಿಂದ ತಮಗೆ ಬರೆಹ ಮುಗಿಸಲು ಆಗುತ್ತಿಲ್ಲ ಎಂದು ಸಣ್ಣಗೆ ಅವರು ಚಡಪಡಿಸುತ್ತಿರುವಂತೆ ತೋರಿತು. ಇವತ್ತಂತೂ ಬಹಳ ಮಾತಾಡಿ ಸುಸ್ತಾಗಿದ್ದರು. ಹೊರಳು ಸೂರ್ಯನ ಬೆಳಕಲ್ಲಿ ನಿಂತಿದ್ದ ಅವರಿಗೆ ನಮಿಸಿ ಹೊರಟೆವು. ರಾಜೇಶ್ವರಿ ನಮಗೆ ನಾಲ್ಕೈದು ನವಿಲುಗರಿ ಕೊಟ್ಟರು. ನಾನೊಂದು ಬಳ್ಳಿಯ ಚೂರನ್ನು ಹಿತ್ತಲಲ್ಲಿ ನೆಡಲು ಕೇಳಿ ಪಡೆದುಕೊಂಡೆ.

ಪ್ರೊ. ರಹಮತ್ ತರೀಕೆರೆ

ಪ್ರೊ. ರಹಮತ್ ತರೀಕೆರೆ
ರಹಮತ್ ತರೀಕೆರೆ ಕನ್ನಡನಾಡಿನ ಖ್ಯಾತ ಚಿಂತಕರು. ನಾಥಪಂಥ, ಕರ್ನಾಟಕದ ಸೂಫಿಗಳು, ಗುರುಪಂಥಗಳು ಹೀಗೆ ನಾಡಿನ ಹಲವು ಬಹುತ್ವದ ಪಂಥಗಳು ಮತ್ತು ಸೌಹಾರ್ದ ಬದುಕಿನ ಬಗ್ಗೆ ವಿಶೇಷ ಅಧ್ಯಯನಗಳನ್ನು ಮಾಡಿ ಪುಸ್ತಕ ರಚಿಸಿದ್ದಾರೆ. ಇವರ ವಿಮರ್ಶಾ ಸಂಕಲನ ’ಕತ್ತಿಯಂಚಿನ ದಾರಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಂದಿದೆ


ಇದನ್ನೂ ಓದಿ: ಬಾವುಟಕ್ಕೆ ಬೆಂಕಿ ಇಟ್ಟವರನ್ನು ಶಿಕ್ಷಿಸಿ, ನಮ್ಮ ಧ್ವಜ ಹಿಡಿದ ಭುಜಗಳನ್ನು ರಕ್ಷಿಸಿ: ಡಾ.ಹಂಸಲೇಖ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...