Homeಚಳವಳಿಹಿಂದುಳಿದ ವರ್ಗಗಳಿಗೆ ಇನ್ನೂ ಜಾರಿಯಾಗದ ಸಾಂವಿಧಾನಿಕ ಹಕ್ಕು - ಡಾ. ಕಿರಣ್ ಎಂ. ಗಾಜನೂರು

ಹಿಂದುಳಿದ ವರ್ಗಗಳಿಗೆ ಇನ್ನೂ ಜಾರಿಯಾಗದ ಸಾಂವಿಧಾನಿಕ ಹಕ್ಕು – ಡಾ. ಕಿರಣ್ ಎಂ. ಗಾಜನೂರು

- Advertisement -
ಕಣ್ಣಗಾಯನಕ್ಕೊಂದು ಕನ್ನಡಿ
- Advertisement -

ಸರಣಿ ಸಂಪಾದಕರು: ವಿಕಾಸ್ ಆರ್.ಮೌರ್ಯ

ಸಾಮಾಜಿಕ ನ್ಯಾಯ ತತ್ವವನ್ನು ಆಧರಿಸಿರುವ ಮೀಸಲು ನೀತಿಯನ್ನು ಆದರಲ್ಲೂ ಹಿಂದುಳಿದ ವರ್ಗಗಳ ಮೀಸಲು ನೀತಿಯನ್ನು ಆದರ ಹಿಂದಿನ ತಾತ್ವಿಕತೆಯನ್ನು ಅದು ಜಾರಿಗೊಂಡ ಸಾಮಾಜಿಕ ಮತ್ತು ರಾಜಕೀಯ ಹಿನ್ನೆಲೆಯನ್ನು ಈ ಲೇಖನದಲ್ಲಿ ಚರ್ಚಿಸುವ ಪ್ರಯತ್ನ ಮಾಡಲಾಗಿದೆ…

ಭಾರತದಲ್ಲಿನ ಮೀಸಲಾತಿ ನೀತಿಯನ್ನು ಸರಳವಾಗಿ “ಚಾರಿತ್ರಿಕ ಕಾರಣಕ್ಕಾಗಿ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದು ಪ್ರಾತಿನಿಧ್ಯತೆಯಿಂದ ವಂಚಿತವಾದ ಸಮುದಾಯ/ಗುಂಪುಗಳಿಗೆ ಸಮತೆ ಮತ್ತು ಘನತೆಯ ಬದುಕನ್ನು ನಡೆಸಲು ಸಂವಿಧಾನ ಕಾನೂನಾತ್ಮಕವಾಗಿ ಒದಗಿಸಿರುವ ಹಕ್ಕು” ಎಂದು ಅರ್ಥೈಸಿಕೊಳ್ಳಬಹುದು ಅನ್ನಿಸುತ್ತದೆ. ಹೀಗೆ ಅರ್ಥೈಸಿರುವ ಸಂವಿಧಾನದ 15(4), 15(5), 15(6) ಮತ್ತು 16(4), 16(6) ವಿಧಿಗಳು ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಗುಂಪುಗಳ ಸಬಲೀಕರಣಕ್ಕೆ ವಿಶೇಷ ಅವಕಾಶಗಳನ್ನು ಒದಗಿಸಿದೆ.

ಸಂವಿಧಾನ ರಚನಾ ಸಭೆಯಲ್ಲಿ ಮೀಸಲಾತಿಯನ್ನು ಏಕೆ ಮತ್ತು ಯಾರಿಗೆ ಕೊಡಬೇಕು ಎಂಬ ಚರ್ಚೆಯ ಸಂದರ್ಭದಲ್ಲಿ ಬಹಳ ಸ್ಪಷ್ಟವಾಗಿ ಸ್ವತಃ ಈ ದೇಶದಲ್ಲಿ ಅಸ್ತಿತ್ವದಲ್ಲಿರುವ ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆಯ ಕಾರಣಕ್ಕೆ ಸಮಾನ ಪ್ರಾತಿನಿಧ್ಯದಿಂದ ವಂಚಿತರಾದ ಮಹಿಳೆಯರು, ಮಕ್ಕಳು, ದಲಿತರು, ಹಿಂದುಳಿದವರಿಗೆ ಮೀಸಲಾತಿಯನ್ನು ನೀಡುವ ಮೂಲಕ ಅವರಿಗೆ ವ್ಯವಸ್ಥೆಯಲ್ಲಿ ಸಮಾನ ಪ್ರಾತಿನಿಧಿತ್ವಕ್ಕೆ ಅವಕಾಶವನ್ನು ಸಂವಿಧಾನ ಒದಗಿಸಬೇಕು ಎಂಬ ಮೌಲ್ಯಾಧಾರಿತ ಚರ್ಚೆಗಳು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನೇತೃತ್ವದಲ್ಲಿ ನಡೆದಿದ್ದವು.

ಆ ಚರ್ಚೆಗಳ ಪ್ರತಿಫಲವಾಗಿ ಇಂದು ಭಾರತ ಸಂವಿಧಾನದ 15(3)ನೇ ವಿಧಿ ಈ ದೇಶದ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿಗಾಗಿ ಪ್ರಭುತ್ವ ವಿಶೇಷ ನೀತಿಗಳನ್ನು ರೂಪಿಸಲು ಅವಕಾಶ ಕೊಟ್ಟರೆ, 15(4) ವಿಧಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಮುದಾಯಗಳಿಗೆ ವಿಶೇಷ ನೀತಿಗಳನ್ನು ರೂಪಿಸಲು ಪ್ರಭುತ್ವಕ್ಕೆ ಅವಕಾಶವನ್ನು ನೀಡುತ್ತದೆ ಜೊತೆಗೆ 16(4) ವಿಧಿ ಸರ್ಕಾರಿ ನೌಕರಿಗಳಲ್ಲಿ ಪ್ರಾತಿನಿಧ್ಯತೆಯಿಂದ ವಂಚಿತವಾದ ಹಿಂದೂಳಿದ ಸಮುದಾಯಗಳಿಗೆ ಪ್ರಭುತ್ವ ವಿಶೇಷ ಅವಕಾಶಗಳನ್ನು ಸೃಜಿಸುವ ಮೂಲಕ ಅವರ ಪ್ರಾತಿನಿಧಿತ್ವವನ್ನು ಸಂರಕ್ಷಿಸಬೇಕು ಎನ್ನುತ್ತದೆ.

ಸಾಮಾಜಿಕ ನ್ಯಾಯ ತತ್ವವನ್ನು ಆಧರಿಸಿರುವ ಮೀಸಲು ನೀತಿಯನ್ನು ಆದರಲ್ಲೂ ಹಿಂದುಳಿದ ವರ್ಗಗಳ ಮೀಸಲು ನೀತಿಯನ್ನು ಆದರ ಹಿಂದಿನ ತಾತ್ವಿಕತೆಯನ್ನು ಅದು ಜಾರಿಗೊಂಡ ಸಾಮಾಜಿಕ ಮತ್ತು ರಾಜಕೀಯ ಹಿನ್ನೆಲೆಯನ್ನು ಈ ಲೇಖನದಲ್ಲಿ ಚರ್ಚಿಸುವ ಪ್ರಯತ್ನವನ್ನು ನಡೆಸುತ್ತೇನೆ.

1880-1947ರ ಅವಧಿಯಲ್ಲಿ ವಸಾಹತು ಭಾರತ ಹಲವು ಸಾಮಾಜಿಕ ಚಳುವಳಿಗಳಿಗೆ ಸಾಕ್ಷಿಯಾಗಿದೆ, ಅವುಗಳಲ್ಲಿ ಆದರಲ್ಲೂ ದಕ್ಷಿಣ ಭಾರದಲ್ಲಿ ನಡೆದ ಬ್ರಾಹ್ಮಣ, ಬ್ರಾಹ್ಮಣೇತರ ಮತ್ತು ಹಿಂದುಳಿದ ವರ್ಗಗಳ ಹೋರಾಟಗಳು ಚಾರಿತ್ರಿಕವಾದವುಗಳು ಮಹಾರಾಷ್ಟ್ರದ ಜ್ಯೋತಿ ಬಾ ಫುಲೆ, ಮದ್ರಾಸಿನ ಪಿ. ತ್ಯಾಗರಾಜ್ ಚೆಟ್ಟಿ ಮತ್ತು ಪೆರಿಯಾರ್ ರಾಮಸ್ವಾಮಿ ನಾಯ್ಕರ್, ಕೇರಳದ ನಾರಾಯಣಗುರು, ಮೈಸೂರಿನ ಬಸವಯ್ಯ, ಚನ್ನಯ್ಯ ಮತ್ತು ಗುಲಾಮ್ ಅಹ್ಮದ್-ಕಲಾಮಿ, ಕೆ.ಸಿ.ರೆಡ್ಡಿ (ಕಟ್ಟಮಂಚಿ ರಾಮಲಿಂಗಾರೆಡ್ಡಿ) ಮುಖ್ಯವಾದವರು ಹಾಗೆ ನೋಡುವುದಾದರೆ ಹಿಂದುಳಿದ ವರ್ಗಗಳಿಗೆ ಸ್ವಾತಂತ್ರ್ಯಪೂರ್ವದಲ್ಲಿಯೇ ಮೀಸಲಾತಿ ನೀತಿಯನ್ನು ಹಲವು ರಾಜ್ಯಾಡಳಿತಗಳು ಘೋಷಿಸಿದ್ದವು ಛತ್ರಪತಿ ಸಾಹು ಮಹಾರಾಜ್, ಕೊಲ್ಲಾಪುರದ ರಾಜರುಗಳು 1902ಕ್ಕಿಂತ ಹಿಂದಿನಿಂದಲೂ ಸಮುದಾಯಗಳ ಸಾಮಾಜಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗಾಗಿ ಹಲವು ನೀತಿಗಳನ್ನು ಅನುಸರಿಸುತ್ತಿದ್ದರು. 1902ರ ಕಾಲದ ಒಂದು ದಾಖಲೆ ಕೊಲ್ಲಾಪುರದ ಆಡಳಿತ ಹಿಂದುಳಿದ ಸಮುದಾಯಗಳಿಗೆ ಶೇಕಡಾ 50 ಮೀಸಲಾತಿ ನೀಡಿತ್ತು ಎಂಬ ಮಾಹಿತಿಯನ್ನು ನೀಡುತ್ತದೆ.

ಇದನ್ನೂ ಓದಿ: ಮೀಸಲಾತಿ ಮತ್ತು ಆರ್ಥಿಕತೆ : ಡಾ. ಬಿ.ಸಿ ಬಸವರಾಜ್

ಭಾರತದಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿ ಚಳುವಳಿಯ ಮುಖ್ಯ ಘಟ್ಟಗಳನ್ನು ಈ ಕೆಳಗಿನಂತೆ ಗುರುತಿಸಬಹುದಾಗಿದೆ.
1882 – ಹಂಟರ್ ಆಯೋಗ ನೇಮಕ. ಮಹಾತ್ಮಾ ಜ್ಯೋತಿರಾವ್ ಫುಲೆ ಅವರು ಉಚಿತ ಶಿಕ್ಷಣ ಮತ್ತು ಸರ್ಕಾರಿ ಕೆಲಸಗಳಲ್ಲಿ ಅಗತ್ಯ ಮೀಸಲಾತಿ ನೀಡುವಂತೆ, ಅದು ಜಾತಿಗೆ ಸರಾಸರಿ/ಪ್ರಾತಿನಿಧ್ಯ ನೀಡುವಂತೆ ಅವರು ಒತ್ತಾಯಿಸಿದರು.

ನಂತರ 1901-ರಲ್ಲಿ ಮಹಾರಾಷ್ಟ್ರದ ಕೊಲ್ಹಾಪುರ ರಾಜ ಶಾಹು ಮಹಾರಾಜರ ಆಡಳಿತದಲ್ಲಿ ಮೀಸಲಾತಿಗಳನ್ನು ಜಾರಿಗೊಳಿಸಲಾಯಿತು. ಅದಾಗಲೇ ಬರೋಡಾ ಮತ್ತು ಮೈಸೂರು ಸಂಸ್ಥಾನಗಳಲ್ಲಿ ಮೀಸಲಾತಿ ಜಾರಿಯಲ್ಲಿತ್ತು.

1909- ರಲ್ಲಿ ಗವರ್ಮೆಂಟ್ ಆಫ್ ಇಂಡಿಯಾ ಆಕ್ಟ್ 1909ರ ಭಾರತೀಯ ಸರ್ಕಾರದ ಕಾನೂನಿನಲ್ಲಿ ಸವಲತ್ತುಗಳನ್ನು ಕಲ್ಪಿಸಲಾಯಿತು.
ಅದರ ಹಿಂದೆಯೇ 1919 -ರಲ್ಲಿ ಮೊಂಟ್ಯಾಗು- ಚೆಲ್ಮ್ಸ್ ಫೋರ್ಡ್ ರಿಫಾಮ್ರ್ಸ್ ಅಂದರೆ ಚೆಲ್ಮ್ಸ್ ಫೋರ್ಡ್ ಹಿಂದುಳಿದವರ ಸುಧಾರಣೆಗಾಗಿ ಯೋಜನೆಗಳನ್ನು ಜಾರಿಗೊಳಿಸುವ ಘೋಷಣೆ ಮಾಡಿತು.

1921-ರಲ್ಲಿ ಮದ್ರಾಸ್ ಪ್ರೆಸಿಡೆನ್ಸಿ ಕೋಮುಸಮುದಾಯಕ್ಕಾಗಿ ಸರ್ಕಾರಿ ಆದೇಶವೊಂದನ್ನು ಹೊರಡಿಸಿ ಬ್ರಾಹ್ಮಣೇತರರಿಗೆ 44%, ಬ್ರಾಹ್ಮಣರಿಗೆ 16%, 16% ಮುಸ್ಲಿಮ್‍ರಿಗೆ, 16% ಆಂಗ್ಲೊಇಂಡಿಯನ್ಸ/ಕ್ರಿಶ್ಚಿಯನ್ನರಿಗೆ ಮತ್ತು 8% ಪರಿಶಿಷ್ಟ ಜಾತಿಯವರಿಗೆ ಮೀಸಲಾತಿ ಪ್ರಕಟಿಸಿತು.

1942- ರಲ್ಲಿ ಬಿ.ಆರ್.ಅಂಬೇಡ್ಕರ್ ಅವರು ಅಖಿಲ ಭಾರತ ತುಳಿತಕ್ಕೊಳಗಾದ ವರ್ಗಗಳ ಒಕ್ಕೂಟವನ್ನು ರಚಿಸಿ ಪರಿಶಿಷ್ಟ ಜಾತಿಯವರ ಮುಂದುವರಿಯುವಿಕೆಗೆ ಒತ್ತು ನೀಡಿದರು. ಅವರೂ ಕೂಡಾ ಸರ್ಕಾರಿ ಕೆಲಸ-ಸೇವೆಗಳಲ್ಲಿ ಪರಿಶಿಷ್ಟ ಜಾತಿಯವರಿಗೆ ಮೀಸಲಾತಿ ನೀಡುವಂತೆ ಬೇಡಿಕೆಯೊಡ್ಡಿದರು.

1946-ರಲ್ಲಿ 1946 ಕ್ಯಾಬಿನೆಟ್ ಮಿಶನ್ ಟು ಇಂಡಿಯಾ ತನ್ನ ನಿಯೋಗದಲ್ಲಿ ಆಯಾ ಜನಸಂಖ್ಯೆ ಅನುಪಾತಕ್ಕನುಗುಣವಾಗಿ ಪ್ರಾತಿನಿಧ್ಯ ನೀಡಲು ಆಗ್ರಹಿಸಿ ಹಲವಾರು ಶಿಫಾರಸ್ಸುಗಳನ್ನು ಮಾಡಿತು.

ಸ್ವಾತಂತ್ರ್ಯಾನಂತರ 1953-ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರ ಪ್ರಗತಿ ವೀಕ್ಷಣೆಗೆ ಕಾಲೇಕರ್ ಆಯೋಗವನ್ನು ನೇಮಿಸಲಾಯಿತು. ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಬಗೆಗಿನ ವರದಿಯನ್ನು ಸಮ್ಮತಿಸಲಾಯಿತು. ಆದರೆ ಇನ್ನಿತರ ಹಿಂದುಳಿದವರ ಔಃಅ ಶಿಫಾರಸುಗಳನ್ನು ತಿರಸ್ಕರಿಸಲಾಯಿತು.

1956-ಕಾಕಾ ಕಾಲೇಕರ್ ಅವರ ಕಾನೂನು ರೀತ್ಯ ವಿಷಯ ಸೂಚಿ ಪಟ್ಟಿಯನ್ನು ತಿದ್ದುಪಡಿ ಮಾಡಲಾಯಿತು.

1979- ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರ ಪರಿಸ್ಥಿತಿಗಳ ಮಂಡಲ್ ಆಯೋಗವನ್ನು ನೇಮಕ ಮಾಡಲಾಯಿತು. ಈ ಆಯೋಗವು ಉಪ-ಜಾತಿಗಳ ಬಗ್ಗೆ ಅಂದರೆ ಇನ್ನುಳಿದ ಹಿಂದುಳಿದ ವರ್ಗಗಳ (OBC) ಬಗ್ಗೆ ನಿಖರ ಮಾಹಿತಿ ಕಲೆಹಾಕಲು ಸಾಧ್ಯವಾಗಲಿಲ್ಲ. ಅದು 1930 ಜನಗಣತಿಯ ಅಂಕಿಅಂಶಗಳನ್ನು ಅನುಸರಿಸಿ ಮತ್ತೆ 1,257 ಸಮುದಾಯಗಳನ್ನು ಪಟ್ಟಿ ಮಾಡಿ ಒಟ್ಟು ಔಃಅ ಜನಸಂಖ್ಯೆಯು 52%ರಷ್ಟಿದೆ ಎಂದು ಹೇಳಿತು.

1990-ಮಂಡಲ್ ಆಯೋಗದ ಶಿಫಾರಸುಗಳನ್ನು ಅನುಸರಿಸಿ ಸರ್ಕಾರಿ ಸೇವೆಗಳಲ್ಲಿ ಮೀಸಲಾತಿಯನ್ನು ವಿ.ಪಿ.ಸಿಂಗ್ ಅವರು ತಮ್ಮ ಅವಧಿಯಲ್ಲಿ ಅನುಷ್ಟಾನಗೊಳಿಸಿದರು. ವಿದ್ಯಾರ್ಥಿ ಸಂಘಟನೆಗಳು ರಾಷ್ಟ್ರದಾದ್ಯಂತ ಚಳವಳಿ ಹಮ್ಮಿಕೊಂಡವು. ರಾಜೀವ್ ಗೊಸ್ವಾಮಿ – ಡೆಲ್ಹಿ ವಿಶ್ವವಿದ್ಯಾಲಯದ ವಿದ್ಯಾರ್ಥಿಯು ಸ್ವಯಂ-ಆತ್ಮಾಹುತಿಗೆ ಪ್ರಯತ್ನಿಸಿದರು. ಹಲವಾರು ವಿದ್ಯಾರ್ಥಿಗಳು ಇದನ್ನೇ ಅನುಕರಿಸಿದರು.

1992-ರಲ್ಲಿ ಸರ್ವೋಚ್ಚ ನ್ಯಾಯಾಲಯವು ಇಂದಿರಾ ಸಾಹನಿ ಪ್ರಕರಣದಲ್ಲಿ ಇನ್ನಿತರ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ಎತ್ತಿಹಿಡಿಯಿತು.

1998-ಮೊದಲ ಬಾರಿಗೆ ಕೇಂದ್ರ ಸರ್ಕಾರವು ದೊಡ್ಡ ಮಟ್ಟದಲ್ಲಿ ಸರ್ವೇಕ್ಷಣೆ ನಡೆಸಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವಿಕೆಯ ಬಗ್ಗೆ ವಿವಿಧ ಸಾಮಾಜಿಕ ಸಮುದಾಯಗಳನ್ನು ಪಟ್ಟಿ ಮಾಡಿತು.

ಇದನ್ನು ಓದಿ: ಮಹಿಳಾ ಮೀಸಲಾತಿ: ವಾಸ್ತವ ಮತ್ತು ವೈರುಧ್ಯಗಳು – ಭಾರತೀದೇವಿ.ಪಿ

93ನೆಯ ಸಾಂವಿಧಾನಿಕ ತಿದ್ದುಪಡಿ ತಂದು, ಇನ್ನಿತರ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಿತಲ್ಲದೇ ಖಾಸಗಿ ಶೈಕ್ಷಣಿಕ ಸಂಸ್ಥೆಗಳಲ್ಲಿ ಮೀಸಲಾತಿಗೆ ಸೂಚಿಸಿತು. ಇದು ಸರ್ವೋಚ್ಚ ನ್ಯಾಯಾಲಯದ ಆಗಸ್ಟ್ 2005ರ ತೀರ್ಪಿಗೆ ವ್ಯತಿರಿಕ್ತವಾಗಿತ್ತು.

2006-ಸರ್ವೋಚ್ಚ ನ್ಯಾಯಾಲಯದ ಸಾಂವಿಧಾನಿಕ ಪೀಠವು ಎಂ.ನಾಗರಾಜ್ & ಅದರ್ಸ್ ವಿರುದ್ದ ಯುನಿಯನ್ ಆಫ್ ಇಂಡಿಯಾ & ಅದರ್ಸ್ ಸಾಂವಿಧಾನಿಕ ಆರ್ಟ್ 335 ನಿಯಮ 16(4) (A) 16(4)(B) ಗಳಿಗೆ ಸಿಂಧುತ್ವ ನೀಡಿತು.

2006-ರಲ್ಲಿ ಕೇಂದ್ರ ಸರ್ಕಾರದ ಶೈಕ್ಷಣಿಕ ಸಂಸ್ಥೆಗಳಲ್ಲಿ ಇನ್ನಿತರ ಹಿಂದುಳಿದ ವರ್ಗಕ್ಕೆ ಮೀಸಲಾತಿ ಪ್ರಕಟಿಸಲಾಯಿತು. ಒಟ್ಟು ಮೀಸಲಾತಿ 49.5%ಕ್ಕೇರಿತು.

2007-ರಲ್ಲಿ ಸರ್ವೋಚ್ಚ ನ್ಯಾಯಾಲಯವು ಕೇಂದ್ರ ಸರ್ಕಾರದ ಶೈಕ್ಷಣಿಕ ಸಂಸ್ಥೆಗಳಲ್ಲಿನ OBC ಮೀಸಲಾತಿಗೆ ತಡೆ ನೀಡಿತು.

2008- ಭಾರತದ ಸರ್ವೋಚ್ಚ ನ್ಯಾಯಾಲಯವು 2008 ಏಪ್ರಿಲ್ 10ರಂದು ಸರ್ಕಾರದ ನಿಧಿ ಸಹಾಯದಿಂದ ನಡೆಯುತ್ತಿರುವ ಸಂಸ್ಥೆಗಳಲ್ಲಿ 27% ರಷ್ಟು OBC ಮೀಸಲಾತಿ ಪ್ರಮಾಣವನ್ನು ಎತ್ತಿಹಿಡಿಯಿತು. ಅದು ಸ್ಪಷ್ಟವಾಗಿ ಹೇಳಿದ್ದೆಂದರೆ “ಕೆನೆ ಪದರವನ್ನು” ಈ ಮೀಸಲಾತಿ ಪರಿಧಿಯಿಂದ ಹೊರಗಿಡಬೇಕೆಂದು ಸೂಚಿಸಿತು.

ಇಷ್ಟೆಲ್ಲಾ ಚಾರಿತ್ರಿಕ ಹೋರಾಟ ಮತ್ತು ಬೆಳವಣಿಗೆಗಳ ನಂತರವೂ ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ ಇಂದು ಭಾರತದ ಕೇಂದ್ರ ಸೇವೆಯಲ್ಲಿ ಹಿಂದುಳಿದ ವರ್ಗಗಳ ಪ್ರಾತಿನಿಧ್ಯ ಜನವರಿ 1, 2012ರಲ್ಲಿ 16.55% ಇದ್ದರೆ ಜನವರಿ 1, 2016ರಲ್ಲಿ ಆ ಪ್ರಮಾಣ 21.57% ಎಂಬ ಮಾಹಿತಿ ಇದೆ. 1993ರಲ್ಲಿಯೇ ಹಿಂದುಳಿದ ವರ್ಗಗಳ ಮೀಸಲಾತಿ ನೀತಿ ಜಾರಿಯಲ್ಲಿದ್ದರೂ ಅದನ್ನು ಸಮರ್ಪಕವಾಗಿ ಜಾರಿಗೊಳಿಸಲು ಸರ್ಕಾರಗಳು ತೋರಿದ ಅಸಡ್ಡೆಯ ಕಾರಣಕ್ಕೆ ಇಂದಿಗೂ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳಲ್ಲಿ ಇಂದಿಗೂ ಹಿಂದುಳಿದ ವರ್ಗಗಳಿಗೆ ಸೇರಿದ 63,876 ಹುದ್ದೆಗಳು ಖಾಲಿ ಇವೆ. ಮಂಡಲ್ ವರದಿ ಜಾರಿಗೊಂಡು 24 ವರ್ಷಗಳು ತುಂಬಿದ್ದರೂ ಇಂದಿಗೂ ಕೇಂದ್ರ ಸರ್ಕಾರದ ಇಲಾಖೆಗಳಲ್ಲಿ ಎ ದರ್ಜೆಯ ಹುದ್ದೆಗಳಲ್ಲಿ ಹಿಂದುಳಿದವರ ಪ್ರಾತಿನಿಧ್ಯ ಕೇವಲ 17%, ಬಿ ದರ್ಜೆಯಲ್ಲಿ 14%, ಸಿ ಮತ್ತು ಡಿ ದರ್ಜೆಯಲ್ಲಿ ಕ್ರಮವಾಗಿ 11% ಮತ್ತು 10% ಶೇಕಡಾ ಹುದ್ದೆಗಳನ್ನು ಮಾತ್ರ ತುಂಬಲಾಗಿದೆ.

ಇಲ್ಲಿ ಗಮನಿಸಬೇಕಾದ್ದು ಮೇಲಿನ ಅಂಕಿ-ಅಂಶಗಳು ಹಿಂದುಳಿದ ವರ್ಗಗಳ ಪ್ರಾತಿನಿಧ್ಯದ ಪರಿಪೂರ್ಣ ಚಿತ್ರಣವಲ್ಲ. ಏಕೆಂದರೆ ಭಾರತದ ಒಟ್ಟು ಕೇಂದ್ರ ಸೇವೆಯಲ್ಲಿ 91.25 ಶೇಕಡಾ ಹುದ್ದೆಗಳನ್ನು ಹೊಂದಿರುವ ರೈಲ್ವೆ, ರಕ್ಷಣೆ ಇಲಾಖೆ, ಗೃಹ ಇಲಾಖೆಗಳು ತಮ್ಮ ಇಲಾಖೆಗಳಲ್ಲಿ ಇರುವ ಹಿಂದುಳಿದ ವರ್ಗಗಳ ಪ್ರಾತಿನಿಧ್ಯದ ಮಾಹಿತಿಯನ್ನು ಹಂಚಿಕೊಂಡಿಲ. ಈಗ ಸರ್ಕಾರ ನಮ್ಮ ಮುಂದೆ ಇಟ್ಟಿರುವ ಅಂಕಿ-ಅಂಶ ಕೇವಲ 24 ಇಲಾಖೆಗಳ ಮಾಹಿತಿ ಮತ್ತು ಕೆಂದ್ರ ಸರ್ಕಾರದ ಒಟ್ಟು ಉದ್ಯೋಗಗಳಲ್ಲಿ ಶೇಕಡಾ 8.75% ಹುದ್ದೆಗಳ ಮಾಹಿತಿಯನ್ನು ಮಾತ್ರ ಎಂಬ ಅಂಶವನ್ನು ಗಮನಿಸಬೇಕಿದೆ.

ಇಂದಿಗೂ ಸರ್ಕಾರದ ಬಹುತೇಕ ಇಲಾಖೆಗಳು ತಮ್ಮ ಇಲಾಖೆಯಲ್ಲಿನ ಹಿಂದುಳಿದ ವರ್ಗಗಳ ತುಂಬಲಾರದ ಹುದ್ದೆಗಳ ಮಾಹಿತಿಯನ್ನು ನಿರಾಕರಿಸುತ್ತದೆ ಎಂಬ ಆರೋಪವನ್ನು ಚೆನೈ ಮೂಲದ ಮಾಹಿತಿ ಹಕ್ಕು ಹೋರಾಟಗಾರ ಡಾ.ಇ.ಮುರಳಿಧರನ್ ವ್ಯಕ್ತಪಡಿಸುತ್ತಾರೆ. ಈ ಎಲ್ಲಾ ಸಂಗತಿಗಳ ಹಿನ್ನೆಲೆಯಲ್ಲಿ ನಾವು ಹಿಂದುಳಿದ ಸಮುದಾಯಗಳ ಮೀಸಲಾತಿ ನೀತಿ ಮತ್ತು ಅದನ್ನು ಜಾರಿಗೊಳಿಸುವಲ್ಲಿ ನಡೆಯುತ್ತಿರುವ ರಾಜಕಾರಣವನ್ನು ಕುರಿತು ಹೊಸ ಚಳುವಳಿಯನ್ನು ಕಟ್ಟುವ ನಿಟ್ಟಿನಲ್ಲಿ ಯೋಚಿಸಬೇಕಿದೆ ಅನ್ನಿಸುತ್ತದೆ.

ಇದನ್ನು ಓದಿ: ದಲಿತರ ಮೀಸಲಾತಿ: ಬೆಳಕಾಗಬೇಕಾಗಿದೆ ಬೆಂಕಿ – ಡಾ.ರವಿಕುಮಾರ್ ನೀಹ 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...