ರೈತ ಸಂಘಟನೆಗಳ ಒಕ್ಕೂಟ ಸಂಯುಕ್ತ ಕಿಸಾನ್ ಮೋರ್ಚಾ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಶತಾಯುಷಿ ಎಚ್.ಆರ್.ದೊರೆಸ್ವಾಮಿ ಅವರನ್ನು ಸ್ಮರಿಸಿ ಶ್ರದ್ಧಾಂಜಲಿ ಅರ್ಪಿಸಿದೆ. ಮೇ 26 ರಂದು ನಡೆದ ಕರಾಳ ದಿನ ಆಚರಣೆಯಲ್ಲಿ ಸ್ಮರಿಸಲಾಗಿದೆ.
ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರ ಮತ್ತು ಪ್ರಸ್ತುತ ರೈತ ಚಳವಳಿಯ ದೃಢ ಬೆಂಬಲಿಗರಾದ ಶ್ರೀ ಎಚ್.ಎಸ್ ದೊರೆಸ್ವಾಮಿ ಅವರು ತಮ್ಮ 104 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರ ಜೀವಿತಾವಧಿಯಲ್ಲಿ, ದೊರೆಸ್ವಾಮಿ ಅವರು ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದು ಮಾತ್ರವಲ್ಲ, ಸ್ವತಂತ್ರ ಭಾರತದಲ್ಲಿಯೂ ಸಹ ನ್ಯಾಯ, ಸಮಾನತೆ ಮತ್ತು ಅಂಚಿನಲ್ಲಿರುವವರ ಹಕ್ಕುಗಳಿಗಾಗಿ ಕೊನೆಯುಸಿರು ಇರುವವರೆಗೂ ಹೋರಾಡಿದರು ಎಂದು ಸಂಯುಕ್ತ ಕಿಸಾನ್ ಮೋರ್ಚಾ ತಿಳಿಸಿದೆ.
ದೊರೆಸ್ವಾಮಿ ಅವರು ದೇಶದಲ್ಲಿ ಅತ್ಯಂತ ಪ್ರಗತಿಪರ ಧ್ವನಿಯನ್ನು ಪ್ರತಿನಿಧಿಸಿದವರು. ವಿವಾದಿತ ಕೃಷಿ ಕಾನೂನಗಳ ವಿರುದ್ಧದ ರೈತ ಹೋರಾಟದಲ್ಲಿ ಸಕ್ರಿಯವಾಗಿ ಬೆಂಬಲಿಸಿದ್ದ ಅವರ ನಿಧನಕ್ಕೆ ಸಂಯುಕ್ತ ಕಿಸಾನ್ ಮೋರ್ಚಾ ಸದಸ್ಯರು ಸಂತಾಪ ಸೂಚಿಸಿ ಗೌರವಯುತ ಶ್ರದ್ಧಾಂಜಲಿ ಅರ್ಪಿಸುತ್ತಿದ್ದೇವೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಎಚ್ ಎಸ್ ದೊರೆಸ್ವಾಮಿ; ಜೇಬಲ್ಲೇ ಪರಿಹಾರ ಇಟ್ಟುಕೊಳ್ಳುತ್ತಿದ್ದ ಎನರ್ಜಿ ಬೂಸ್ಟರ್
ಹಿರಿಯ ಸ್ವಾತಂತ್ಯ್ರ ಹೋರಾಟಗಾರ ಹೆಚ್.ಎಸ್. ದೊರೆಸ್ವಾಮಿ ಹೃದಯಾಘಾತದಿಂದ ಬೆಂಗಳೂರಿನಲ್ಲಿ ಬುಧವಾರ ನಿಧನರಾಗಿದ್ದರು. ಅವರಿಗೆ 104 ವರ್ಷ ವಯಸ್ಸಾಗಿತ್ತು. ಇತ್ತೀಚೆಗೆ ತಾನೆ ಕೊರೊನಾ ಸೋಂಕಿಗೆ ಒಳಗಾಗಿದ್ದ ಅವರು ಚೇತರಿಸಿಕೊಂಡಿದ್ದರು. ಅದರ ನಂತರ ಉಸಿರಾಟದ ತೊಂದರೆಯಿಂದಾಗಿ ಚಿಕಿತ್ಸೆಗೆ ಜಯದೇವ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.
ರೈತರ ಚಳವಳಿ ದೆಹಲಿಯ ಗಡಿಗಳಲ್ಲಿ ಆರಂಭವಾಗಿ ಮೇ 26ಕ್ಕೆ 6 ತಿಂಗಳು ತುಂಬಿವೆ. ಈ ಐತಿಹಾಸಿಕ, ಶಾಂತಿಯುತ ಪ್ರತಿಭಟನೆಗೆ ದೇಶ- ವಿದೇಶಗಳ ಜನರು ಬೆಂಬಲ ನೀಡಿದ್ದಾರೆ. ರೈತರು ಮೇ 26 ಅನ್ನು ರೈತರಿಗೆ ಕರಾಳ ದಿನವೆಂದು ಆಚರಿಸಲು ಕರೆ ನೀಡಿದ್ದರು. ರೈತರ ಕರೆಗೆ ಲಕ್ಷಾಂತರ ಭಾರತೀಯರು ಸರ್ಕಾರದ ವಿರುದ್ಧ ದೇಶಾದ್ಯಂತ ತಮ್ಮ ಪ್ರತಿರೋಧವನ್ನು ವ್ಯಕ್ತಪಡಿಸಿದ್ದಾರೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ತಿಳಿಸಿದೆ.
ಇದನ್ನೂ ಓದಿ: ‘ದೊರೆಸ್ವಾಮಿ ನನ್ನ ಜೊತೆ ಜಗಳಕ್ಕೆ ನಿಂತಿದ್ದನ್ನು ನಾನು ಮರೆಯಲಾರೆ’- ಸಿದ್ದರಾಮಯ್ಯ ಅವರಿಂದ ಶ್ರದ್ದಾಂಜಲಿ ಬರಹ