Homeಮುಖಪುಟಒಕ್ಕಲಿಗರ ರಾಜಧಾನಿಯ ಮೇಲೆ ವೈದಿಕಶಾಹಿಯ ಕಣ್ಣು: ಮಂಡ್ಯಕ್ಕೇನು ಕಾದಿದೆ?

ಒಕ್ಕಲಿಗರ ರಾಜಧಾನಿಯ ಮೇಲೆ ವೈದಿಕಶಾಹಿಯ ಕಣ್ಣು: ಮಂಡ್ಯಕ್ಕೇನು ಕಾದಿದೆ?

- Advertisement -
- Advertisement -

ಮಂಡ್ಯದ ಒಕ್ಕಲಿಗರು ಕುವೆಂಪು ಅವರ ಕಟ್ಟಾ ಅನುಯಾಯಿಗಳೇನೂ ಅಲ್ಲ. ಆದರೆ, ಇಲ್ಲಿನ ಮುಖ್ಯವಾಹಿನಿ ಪ್ರಜ್ಞೆಯು ವೈದಿಕಶಾಹಿಯ ಪದತಲದಲ್ಲಿ ಶರಣಾಗಿಲ್ಲ. ಅದು 30 ವರ್ಷಗಳ ಕೆಳಗೆ ಹೇಗೋ ಇಂದಿಗೂ ಹಾಗೆಯೇ ಇದೆ. ಇದೇ ಮಾತನ್ನು ರಾಜ್ಯದ ಉಳಿದೆಲ್ಲಾ ಜಿಲ್ಲೆಗಳ ವಿಚಾರದಲ್ಲಿ ಹೇಳುವ ಹಾಗಿಲ್ಲ. ಕಳೆದ 30 ವರ್ಷಗಳಲ್ಲಿ ಉಳಿದ ಜಿಲ್ಲೆಗಳ ಅಧ್ಯಾಪಕರು, ಸಾಹಿತಿಗಳ ಒಂದು ವಿಭಾಗ, ಪತ್ರಕರ್ತರು ಮತ್ತಿತರ ಸುಶಿಕ್ಷಿತ ವರ್ಗ ನಿಧಾನಕ್ಕೆ ವೈದಿಕರ ಬಾಲಂಗೋಚಿಗಳಾಗುತ್ತಾ ನಡೆದರು. ಅದರ ಭಾಗವಾಗಿ ಅಲ್ಲಿ ಆರೆಸ್ಸೆಸ್ ಚಿಂತನೆ ಹಾಗೂ ಬಿಜೆಪಿಯೂ ಬೆಳೆಯುತ್ತಾ ಸಾಗಿದವು. ಆದರೆ ಮಂಡ್ಯದಲ್ಲಿ ಇವ್ಯಾವುವೂ ಆಗಿರಲಿಲ್ಲ.

ಒಕ್ಕಲಿಗ ಪ್ರಾಧಾನ್ಯತೆ ಮಂಡ್ಯಕ್ಕೆ ಮಾತ್ರ ಸೀಮಿತವಾದದ್ದೇನಲ್ಲ. ದಕ್ಷಿಣದ ಏಳೆಂಟು ಜಿಲ್ಲೆಗಳಲ್ಲಿ ಒಕ್ಕಲಿಗರು ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ರಾಜಕೀಯವಾಗಿ ಬಲಾಢ್ಯರು. ಹಾಸನ ಮತ್ತು ರಾಮನಗರಗಳು ‘ಒಕ್ಕಲಿಗ ಪಕ್ಷ’ವೆಂದು ಹೆಸರಾದ ಜೆಡಿಎಸ್‍ನ ನಾಯಕರುಗಳನ್ನು ಸತತವಾಗಿ ಆರಿಸಿ ಕಳಿಸಿದ ಜಿಲ್ಲೆಗಳು. ಆದರೂ ಮಂಡ್ಯವೇ ಈ ವಿದ್ಯಮಾನದ ರಾಜಧಾನಿ.

ರಾಜ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ಅಧಿಕಾರ ಹಿಡಿಯಲು ದಕ್ಷಿಣ ಕರ್ನಾಟಕದಲ್ಲಿ ಪ್ರಾಬಲ್ಯ ಬೆಳೆಸಿಕೊಳ್ಳುವುದು ಬಿಜೆಪಿಗೆ ಅನಿವಾರ್ಯ. ಬಿಜೆಪಿ ಪ್ರಬಲವಾಗುವುದೆಂದರೆ ಕೆಲವು ವಿರೋಧ ಪಕ್ಷಗಳ ನಾಯಕರುಗಳನ್ನು ತನ್ನೆಡೆಗೆ ಸೆಳೆದುಕೊಳ್ಳುವುದು ಮಾತ್ರವಲ್ಲಾ. ತನ್ನ ಐಡಿಯಾಲಜಿಯನ್ನೂ ಅಲ್ಲಿ ಸ್ಥಾಪಿಸುವುದು. ಹಾಗೆ ಮಾಡಿದಾಗ ಮಾತ್ರ ಈ ಸಾರಿ ದಕ್ಷಿಣ ಕನ್ನಡದಲ್ಲಿ ಆದಂತೆ ಯಾರನ್ನೇ ಚುನಾವಣೆಗೆ ನಿಲ್ಲಿಸಿದರೂ ಅಲ್ಲಿಂದ ಗೆದ್ದು ಬರುವಂತೆ ಮಾಡಿಕೊಳ್ಳಬಹುದು. ಈ ಎಲ್ಲಾ ದೃಷ್ಟಿಯಿಂದ ಆರೆಸ್ಸೆಸ್‍ಗೆ ತನ್ನ ಚಿಂತನೆಯನ್ನು ಹರಡಲು ಮಂಡ್ಯ ಮತ್ತು ಸುತ್ತಲಿನ ಜಿಲ್ಲೆಗಳು ಬಹುಮುಖ್ಯ. ಕನಕಪುರದಲ್ಲಿ ಏಸು ಪ್ರತಿಮೆಯ ವಿಚಾರದಲ್ಲಿ ಗಲಭೆ ಎಬ್ಬಿಸಲು ಕಲ್ಲಡ್ಕ ಪ್ರಭಾಕರ ಭಟ್ಟರೇ ರಂಗಕ್ಕಿಳಿದಿರುವುದೂ ಆ ಉದ್ದೇಶದಿಂದಲೇ. ಈಗ ‘ಅವರು ಬಂದು ಇಲ್ಲಿ ಏನು ಮಾಡಿಕೊಳ್ಳಲೂ ಸಾಧ್ಯವಿಲ್ಲ’ ಎಂಬಂತೆ ವರ್ತಿಸುತ್ತಿರುವ ಡಿ.ಕೆ.ಬ್ರದರ್ಸ್‍ಗೆ ಇನ್ನು ನಾಲ್ಕೈದು ವರ್ಷಗಳಲ್ಲೇ ಆಘಾತವಾಗುವಂತೆ ಅವರ ವಿರುದ್ಧ ಅಲೆ ಬೀಸುವಂತೆ ಮಾಡುವುದು ಸಂಘಪರಿವಾರಕ್ಕೆ ಕಷ್ಟವಿಲ್ಲ.

ಅದೇ ರೀತಿ ಮಂಡ್ಯದ ಮೇಲೆ ಆರೆಸ್ಸೆಸ್‍ನ ಕಣ್ಣು ಬಿದ್ದಿರುವುದಕ್ಕೂ ಇದೇ ಕಾರಣವಿದೆ. ಮೊದಲು ಅವರು ಗುರಿ ಮಾಡಿಕೊಂಡಿದ್ದು ಆದಿಚುಂಚನಗಿರಿ ಮಠದ ಮೇಲೆ. ಮೂಲತಃ ನಾಥಪರಂಪರೆಗೆ ಸೇರಿದ ಈ ಮಠವು ಅವೈದಿಕ ನೆಲೆಯದ್ದಾಗಿತ್ತು. ಆದರೆ ಎಲ್ಲಾ ಬ್ರಾಹ್ಮಣೇತರ ಜಾತಿಗಳಿಗೂ, ಅದರಲ್ಲೂ ಅಂತಹ ಮಠಗಳಿಗೆ ತಾವು ಬ್ರಾಹ್ಮಣಶಾಹಿಯ ಜೊತೆಗೆ ಗುರುತಿಸಿಕೊಂಡರೇನೇ ಮಾನ್ಯತೆ ಎಂಬ ಭಾವನೆ. ಇದು ಕೀಳರಿಮೆಯಿಂದ ಕೂಡಿದ್ದೋ ಅಥವಾ ಅಧಿಕಾರದ ಹಂಬಲದಿಂದ ಬಂದಿದ್ದೋ ಹೇಳುವುದು ಕಷ್ಟ. ಹೀಗಾಗಿ ಬಾಲಗಂಗಾಧರನಾಥರನ್ನೇ ಆರೆಸ್ಸೆಸ್ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ಮಾಡುವುದು ಕಷ್ಟವಾಗಿರಲಿಲ್ಲ.

ಈಗಂತೂ ಈ ವಿಚಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ. ಗೌರಿ ಲಂಕೇಶ್ ಮರ್ಡರ್ ಕೇಸಿನಲ್ಲಿ ಬಂಧಿತನಾಗಿರುವ ಹೊಟ್ಟೆ ನವೀನನನ್ನು ಸನಾತನ ಸಂಸ್ಥೆಯ ಸುಜಿತ್ ಅಲಿಯಾಸ್ ಪ್ರವೀಣ್ ಮಾತಾಡಿಸಿ ಗೌರಿ ಲಂಕೇಶ್ ಹತ್ಯೆಯ ಯೋಜನೆಯ ಸುದ್ದಿ ತಿಳಿಸಿದ್ದು ವಿಜಯನಗರದ ಆದಿಚುಂಚನಗಿರಿ ಮಠದ ಕಾರ್ಯಕ್ರಮಕ್ಕೆ ಬಂದಿದ್ದಾಗಲೇ. ಅಲ್ಲಿ ಹಿಂದೂ ಜನಜಾಗೃತಿ ಸಮಿತಿ ಎಂಬ ಸನಾತನ ಸಂಸ್ಥೆಯ ಸೋದರ ಸಂಘಟನೆಯ ಕಾರ್ಯಕ್ರಮಗಳು ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ಆರೆಸ್ಸೆಸ್ ಮತ್ತು ಸನಾತನ ಸಂಸ್ಥೆಗಳು ಒಂದಕ್ಕೊಂದು ಸಂಬಂಧವಿಲ್ಲದಂತೆ ತೋರಿಸಿಕೊಂಡರೂ, ಅಸಲೀ ಸತ್ಯ ಗೊತ್ತಿದ್ದವರಿಗೆಲ್ಲಾ ಗೊತ್ತಿದೆ.

ಗೌರಿ ಲಂಕೇಶರ ಹತ್ಯೆಯ ಕೇಸಿನ ವಿಚಾರಣೆಯಲ್ಲಿ ಹೊಟ್ಟೆ ನವೀನನನ್ನು ಇಲ್ಲಿಯೇ ಮಾತಾಡಿಸಲಾಯಿತು ಎಂಬುದು ಚಾರ್ಜ್‍ಶೀಟ್‍ನಲ್ಲಿ ಪ್ರಸ್ತಾಪವಾದ ನಂತರವೂ, ಈ ಮಠದಲ್ಲಿ ಎರಡು ಸಭೆಗಳು ನಡೆದಿವೆ. ಜಯಂತ್ ಬಾಲಾಜಿ ಅತಾವಳೆ ಸನಾತನ ಸಂಸ್ಥೆಯ ಸ್ಥಾಪಕನ ಜಯಂತಿಯು 2019ರ ಮೇ 18ರಂದು ನಡೆಯಿತು ಮತ್ತು ಆ ಕಾರ್ಯಕ್ರಮದಲ್ಲಿ ಮಠದ ಉಸ್ತುವಾರಿ ಸೌಮ್ಯನಾಥ ಸ್ವಾಮೀಜಿಯೂ ಪಾಲ್ಗೊಂಡು ಭಾಷಣ ಮಾಡಿದರು. ಅದರಲ್ಲಿ ಅತಾವಳೆಯನ್ನೂ ಹೊಗಳಿ ಮಾತಾಡಿದರು. ಅವರ ಸಾರ್ಥಕ ಬದುಕು ಮತ್ತು ಮಾರ್ಗದರ್ಶನವು ಹಿಂದೂ ಸಮಾಜಕ್ಕೆ ಬೇಕೆಂದು ಹೇಳಿದರು. ಅಂದ ಹಾಗೆ ಈ ಹೊಟ್ಟೆ ನವೀನ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹುಡುಗ ಮತ್ತು ಇದೀಗ ಪಶ್ಚಾತ್ತಾಪ ಪಡುತ್ತಾ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾನೆ.

ಒಕ್ಕಲಿಗರ ಮೇಲೆ ಕೇಂದ್ರೀಕರಿಸಬೇಕು ಎಂಬ ಉದ್ದೇಶ ಇರುವುದರಿಂದ ಮತ್ತು ಆ ಕೆಲಸವನ್ನು ಇದುವರೆಗೆ ಆರ್.ಅಶೋಕ್ ಯಶಸ್ವಿಯಾಗಿ ಮಾಡಿಲ್ಲ ಹಾಗೂ ಸಿ.ಟಿ.ರವಿ ಮೈಸೂರು ಭಾಗದಲ್ಲಿ ಇದನ್ನು ಮಾಡುವುದು ಸುಲಭವಿಲ್ಲ ಎಂಬ ಕಾರಣದಿಂದಲೇ ಬೆಂಗಳೂರಿನ ಸಿ.ಎನ್.ಅಶ್ವತ್ಥನಾರಾಯಣರನ್ನು ಉಪಮುಖ್ಯಮಂತ್ರಿ ಮಾಡಲಾಗಿದೆ ಎಂಬುದನ್ನೂ ಇಲ್ಲಿ ಗಮನಿಸಬೇಕು.

ಇವೆಲ್ಲದರ ಮುಂದುವರೆದ ಭಾಗವಾಗಿಯೇ ಮಂಡ್ಯದಿಂದ ಕೇವಲ 3 ಕಿ.ಮೀ. ದೂರವಿರುವ ಸಾತನೂರಿನಲ್ಲಿ ಇದೀಗ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಎಂಬ ಸಂಘಪರಿವಾರದ ಅಷ್ಟು ಪ್ರಚಾರದಲ್ಲಿಲ್ಲದ ಅಂಗಸಂಘಟನೆಯೊಂದು ‘ರಾಷ್ಟ್ರೀಯವಾದಿಗಳ ಸಮ್ಮೇಳನ’ವನ್ನು ಆಯೋಜಿಸಿದೆ. ಅದರಲ್ಲಿ ಪೌರತ್ವ ಕಾಯ್ದೆಯ ವಿಚಾರದಿಂದ ಹಿಡಿದು, ಟಿಪ್ಪು ಮತ್ತು ಮೇಲುಕೋಟೆಯ ತನಕ ಹತ್ತು ಹಲವು ಸಂಗತಿಗಳನ್ನು ಚರ್ಚಿಸಲಾಗಿದೆ. ಕಳೆದ ತಿಂಗಳು (ಫೆ.23) ನಡೆದ ಈ ಕಾರ್ಯಕ್ರಮದಲ್ಲಿ ‘ಕಾವೇರಿ ಡಿಬೇಟ್’ ಕುರಿತಾದ ಕ್ರಿಯಾಯೋಜನೆಯನ್ನು ಮಂಡಿಸಲಾಗಿದೆ. ಅಂದರೆ ಕಾವೇರಿ ಬೆಲ್ಟ್‌ಅನ್ನು ಕೇಂದ್ರೀಕರಿಸುತ್ತಿರುವ ಹಿನ್ನೆಲೆಯಲ್ಲಿ ತಮಗೆ ಬೇಕಾದ ಕಥನವನ್ನು ಸೃಷ್ಟಿಸುವ ಕೆಲಸ ಯೋಜಿತವಾಗಿ ಸಾಗಿದೆ ಎಂಬುದರಲ್ಲಿ ಸಂಶಯವೇ ಇಲ್ಲ.

ಸಂಘಪರಿವಾರದ ಬೆಳವಣಿಗೆಗೆ ಬೇಕಾದ ವ್ಯವಸ್ಥಿತ ಯೋಜನೆಯೊಂದು ಸದ್ದಿಲ್ಲದೇ ಜಾರಿಯಾಗುತ್ತಿದೆ ಎಂಬುದನ್ನು ಮೇಲಿನ ಹಲವು ಸಂಗತಿಗಳು ಬಿಚ್ಚಿಡುತ್ತಿವೆ. ಹತ್ತು ಹಲವು ಬಗೆಯಲ್ಲಿ ವಿಘಟಿತವಾಗಿರುವ ‘ಮಂಡ್ಯ ಪ್ರಜ್ಞೆ’ಯ ಪ್ರತಿನಿಧಿಗಳು ಇದನ್ನು ವ್ಯವಸ್ಥಿತವಾಗಿ ಎದುರಿಸಬಲ್ಲರೇ ಎಂಬುದು ಮುಂದಿನ ದಿನಗಳಲ್ಲಿ ತೀರ್ಮಾನವಾಗುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...