Homeಮುಖಪುಟಒಕ್ಕಲಿಗರ ರಾಜಧಾನಿಯ ಮೇಲೆ ವೈದಿಕಶಾಹಿಯ ಕಣ್ಣು: ಮಂಡ್ಯಕ್ಕೇನು ಕಾದಿದೆ?

ಒಕ್ಕಲಿಗರ ರಾಜಧಾನಿಯ ಮೇಲೆ ವೈದಿಕಶಾಹಿಯ ಕಣ್ಣು: ಮಂಡ್ಯಕ್ಕೇನು ಕಾದಿದೆ?

- Advertisement -
- Advertisement -

ಮಂಡ್ಯದ ಒಕ್ಕಲಿಗರು ಕುವೆಂಪು ಅವರ ಕಟ್ಟಾ ಅನುಯಾಯಿಗಳೇನೂ ಅಲ್ಲ. ಆದರೆ, ಇಲ್ಲಿನ ಮುಖ್ಯವಾಹಿನಿ ಪ್ರಜ್ಞೆಯು ವೈದಿಕಶಾಹಿಯ ಪದತಲದಲ್ಲಿ ಶರಣಾಗಿಲ್ಲ. ಅದು 30 ವರ್ಷಗಳ ಕೆಳಗೆ ಹೇಗೋ ಇಂದಿಗೂ ಹಾಗೆಯೇ ಇದೆ. ಇದೇ ಮಾತನ್ನು ರಾಜ್ಯದ ಉಳಿದೆಲ್ಲಾ ಜಿಲ್ಲೆಗಳ ವಿಚಾರದಲ್ಲಿ ಹೇಳುವ ಹಾಗಿಲ್ಲ. ಕಳೆದ 30 ವರ್ಷಗಳಲ್ಲಿ ಉಳಿದ ಜಿಲ್ಲೆಗಳ ಅಧ್ಯಾಪಕರು, ಸಾಹಿತಿಗಳ ಒಂದು ವಿಭಾಗ, ಪತ್ರಕರ್ತರು ಮತ್ತಿತರ ಸುಶಿಕ್ಷಿತ ವರ್ಗ ನಿಧಾನಕ್ಕೆ ವೈದಿಕರ ಬಾಲಂಗೋಚಿಗಳಾಗುತ್ತಾ ನಡೆದರು. ಅದರ ಭಾಗವಾಗಿ ಅಲ್ಲಿ ಆರೆಸ್ಸೆಸ್ ಚಿಂತನೆ ಹಾಗೂ ಬಿಜೆಪಿಯೂ ಬೆಳೆಯುತ್ತಾ ಸಾಗಿದವು. ಆದರೆ ಮಂಡ್ಯದಲ್ಲಿ ಇವ್ಯಾವುವೂ ಆಗಿರಲಿಲ್ಲ.

ಒಕ್ಕಲಿಗ ಪ್ರಾಧಾನ್ಯತೆ ಮಂಡ್ಯಕ್ಕೆ ಮಾತ್ರ ಸೀಮಿತವಾದದ್ದೇನಲ್ಲ. ದಕ್ಷಿಣದ ಏಳೆಂಟು ಜಿಲ್ಲೆಗಳಲ್ಲಿ ಒಕ್ಕಲಿಗರು ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ರಾಜಕೀಯವಾಗಿ ಬಲಾಢ್ಯರು. ಹಾಸನ ಮತ್ತು ರಾಮನಗರಗಳು ‘ಒಕ್ಕಲಿಗ ಪಕ್ಷ’ವೆಂದು ಹೆಸರಾದ ಜೆಡಿಎಸ್‍ನ ನಾಯಕರುಗಳನ್ನು ಸತತವಾಗಿ ಆರಿಸಿ ಕಳಿಸಿದ ಜಿಲ್ಲೆಗಳು. ಆದರೂ ಮಂಡ್ಯವೇ ಈ ವಿದ್ಯಮಾನದ ರಾಜಧಾನಿ.

ರಾಜ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ಅಧಿಕಾರ ಹಿಡಿಯಲು ದಕ್ಷಿಣ ಕರ್ನಾಟಕದಲ್ಲಿ ಪ್ರಾಬಲ್ಯ ಬೆಳೆಸಿಕೊಳ್ಳುವುದು ಬಿಜೆಪಿಗೆ ಅನಿವಾರ್ಯ. ಬಿಜೆಪಿ ಪ್ರಬಲವಾಗುವುದೆಂದರೆ ಕೆಲವು ವಿರೋಧ ಪಕ್ಷಗಳ ನಾಯಕರುಗಳನ್ನು ತನ್ನೆಡೆಗೆ ಸೆಳೆದುಕೊಳ್ಳುವುದು ಮಾತ್ರವಲ್ಲಾ. ತನ್ನ ಐಡಿಯಾಲಜಿಯನ್ನೂ ಅಲ್ಲಿ ಸ್ಥಾಪಿಸುವುದು. ಹಾಗೆ ಮಾಡಿದಾಗ ಮಾತ್ರ ಈ ಸಾರಿ ದಕ್ಷಿಣ ಕನ್ನಡದಲ್ಲಿ ಆದಂತೆ ಯಾರನ್ನೇ ಚುನಾವಣೆಗೆ ನಿಲ್ಲಿಸಿದರೂ ಅಲ್ಲಿಂದ ಗೆದ್ದು ಬರುವಂತೆ ಮಾಡಿಕೊಳ್ಳಬಹುದು. ಈ ಎಲ್ಲಾ ದೃಷ್ಟಿಯಿಂದ ಆರೆಸ್ಸೆಸ್‍ಗೆ ತನ್ನ ಚಿಂತನೆಯನ್ನು ಹರಡಲು ಮಂಡ್ಯ ಮತ್ತು ಸುತ್ತಲಿನ ಜಿಲ್ಲೆಗಳು ಬಹುಮುಖ್ಯ. ಕನಕಪುರದಲ್ಲಿ ಏಸು ಪ್ರತಿಮೆಯ ವಿಚಾರದಲ್ಲಿ ಗಲಭೆ ಎಬ್ಬಿಸಲು ಕಲ್ಲಡ್ಕ ಪ್ರಭಾಕರ ಭಟ್ಟರೇ ರಂಗಕ್ಕಿಳಿದಿರುವುದೂ ಆ ಉದ್ದೇಶದಿಂದಲೇ. ಈಗ ‘ಅವರು ಬಂದು ಇಲ್ಲಿ ಏನು ಮಾಡಿಕೊಳ್ಳಲೂ ಸಾಧ್ಯವಿಲ್ಲ’ ಎಂಬಂತೆ ವರ್ತಿಸುತ್ತಿರುವ ಡಿ.ಕೆ.ಬ್ರದರ್ಸ್‍ಗೆ ಇನ್ನು ನಾಲ್ಕೈದು ವರ್ಷಗಳಲ್ಲೇ ಆಘಾತವಾಗುವಂತೆ ಅವರ ವಿರುದ್ಧ ಅಲೆ ಬೀಸುವಂತೆ ಮಾಡುವುದು ಸಂಘಪರಿವಾರಕ್ಕೆ ಕಷ್ಟವಿಲ್ಲ.

ಅದೇ ರೀತಿ ಮಂಡ್ಯದ ಮೇಲೆ ಆರೆಸ್ಸೆಸ್‍ನ ಕಣ್ಣು ಬಿದ್ದಿರುವುದಕ್ಕೂ ಇದೇ ಕಾರಣವಿದೆ. ಮೊದಲು ಅವರು ಗುರಿ ಮಾಡಿಕೊಂಡಿದ್ದು ಆದಿಚುಂಚನಗಿರಿ ಮಠದ ಮೇಲೆ. ಮೂಲತಃ ನಾಥಪರಂಪರೆಗೆ ಸೇರಿದ ಈ ಮಠವು ಅವೈದಿಕ ನೆಲೆಯದ್ದಾಗಿತ್ತು. ಆದರೆ ಎಲ್ಲಾ ಬ್ರಾಹ್ಮಣೇತರ ಜಾತಿಗಳಿಗೂ, ಅದರಲ್ಲೂ ಅಂತಹ ಮಠಗಳಿಗೆ ತಾವು ಬ್ರಾಹ್ಮಣಶಾಹಿಯ ಜೊತೆಗೆ ಗುರುತಿಸಿಕೊಂಡರೇನೇ ಮಾನ್ಯತೆ ಎಂಬ ಭಾವನೆ. ಇದು ಕೀಳರಿಮೆಯಿಂದ ಕೂಡಿದ್ದೋ ಅಥವಾ ಅಧಿಕಾರದ ಹಂಬಲದಿಂದ ಬಂದಿದ್ದೋ ಹೇಳುವುದು ಕಷ್ಟ. ಹೀಗಾಗಿ ಬಾಲಗಂಗಾಧರನಾಥರನ್ನೇ ಆರೆಸ್ಸೆಸ್ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ಮಾಡುವುದು ಕಷ್ಟವಾಗಿರಲಿಲ್ಲ.

ಈಗಂತೂ ಈ ವಿಚಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ. ಗೌರಿ ಲಂಕೇಶ್ ಮರ್ಡರ್ ಕೇಸಿನಲ್ಲಿ ಬಂಧಿತನಾಗಿರುವ ಹೊಟ್ಟೆ ನವೀನನನ್ನು ಸನಾತನ ಸಂಸ್ಥೆಯ ಸುಜಿತ್ ಅಲಿಯಾಸ್ ಪ್ರವೀಣ್ ಮಾತಾಡಿಸಿ ಗೌರಿ ಲಂಕೇಶ್ ಹತ್ಯೆಯ ಯೋಜನೆಯ ಸುದ್ದಿ ತಿಳಿಸಿದ್ದು ವಿಜಯನಗರದ ಆದಿಚುಂಚನಗಿರಿ ಮಠದ ಕಾರ್ಯಕ್ರಮಕ್ಕೆ ಬಂದಿದ್ದಾಗಲೇ. ಅಲ್ಲಿ ಹಿಂದೂ ಜನಜಾಗೃತಿ ಸಮಿತಿ ಎಂಬ ಸನಾತನ ಸಂಸ್ಥೆಯ ಸೋದರ ಸಂಘಟನೆಯ ಕಾರ್ಯಕ್ರಮಗಳು ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ಆರೆಸ್ಸೆಸ್ ಮತ್ತು ಸನಾತನ ಸಂಸ್ಥೆಗಳು ಒಂದಕ್ಕೊಂದು ಸಂಬಂಧವಿಲ್ಲದಂತೆ ತೋರಿಸಿಕೊಂಡರೂ, ಅಸಲೀ ಸತ್ಯ ಗೊತ್ತಿದ್ದವರಿಗೆಲ್ಲಾ ಗೊತ್ತಿದೆ.

ಗೌರಿ ಲಂಕೇಶರ ಹತ್ಯೆಯ ಕೇಸಿನ ವಿಚಾರಣೆಯಲ್ಲಿ ಹೊಟ್ಟೆ ನವೀನನನ್ನು ಇಲ್ಲಿಯೇ ಮಾತಾಡಿಸಲಾಯಿತು ಎಂಬುದು ಚಾರ್ಜ್‍ಶೀಟ್‍ನಲ್ಲಿ ಪ್ರಸ್ತಾಪವಾದ ನಂತರವೂ, ಈ ಮಠದಲ್ಲಿ ಎರಡು ಸಭೆಗಳು ನಡೆದಿವೆ. ಜಯಂತ್ ಬಾಲಾಜಿ ಅತಾವಳೆ ಸನಾತನ ಸಂಸ್ಥೆಯ ಸ್ಥಾಪಕನ ಜಯಂತಿಯು 2019ರ ಮೇ 18ರಂದು ನಡೆಯಿತು ಮತ್ತು ಆ ಕಾರ್ಯಕ್ರಮದಲ್ಲಿ ಮಠದ ಉಸ್ತುವಾರಿ ಸೌಮ್ಯನಾಥ ಸ್ವಾಮೀಜಿಯೂ ಪಾಲ್ಗೊಂಡು ಭಾಷಣ ಮಾಡಿದರು. ಅದರಲ್ಲಿ ಅತಾವಳೆಯನ್ನೂ ಹೊಗಳಿ ಮಾತಾಡಿದರು. ಅವರ ಸಾರ್ಥಕ ಬದುಕು ಮತ್ತು ಮಾರ್ಗದರ್ಶನವು ಹಿಂದೂ ಸಮಾಜಕ್ಕೆ ಬೇಕೆಂದು ಹೇಳಿದರು. ಅಂದ ಹಾಗೆ ಈ ಹೊಟ್ಟೆ ನವೀನ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹುಡುಗ ಮತ್ತು ಇದೀಗ ಪಶ್ಚಾತ್ತಾಪ ಪಡುತ್ತಾ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾನೆ.

ಒಕ್ಕಲಿಗರ ಮೇಲೆ ಕೇಂದ್ರೀಕರಿಸಬೇಕು ಎಂಬ ಉದ್ದೇಶ ಇರುವುದರಿಂದ ಮತ್ತು ಆ ಕೆಲಸವನ್ನು ಇದುವರೆಗೆ ಆರ್.ಅಶೋಕ್ ಯಶಸ್ವಿಯಾಗಿ ಮಾಡಿಲ್ಲ ಹಾಗೂ ಸಿ.ಟಿ.ರವಿ ಮೈಸೂರು ಭಾಗದಲ್ಲಿ ಇದನ್ನು ಮಾಡುವುದು ಸುಲಭವಿಲ್ಲ ಎಂಬ ಕಾರಣದಿಂದಲೇ ಬೆಂಗಳೂರಿನ ಸಿ.ಎನ್.ಅಶ್ವತ್ಥನಾರಾಯಣರನ್ನು ಉಪಮುಖ್ಯಮಂತ್ರಿ ಮಾಡಲಾಗಿದೆ ಎಂಬುದನ್ನೂ ಇಲ್ಲಿ ಗಮನಿಸಬೇಕು.

ಇವೆಲ್ಲದರ ಮುಂದುವರೆದ ಭಾಗವಾಗಿಯೇ ಮಂಡ್ಯದಿಂದ ಕೇವಲ 3 ಕಿ.ಮೀ. ದೂರವಿರುವ ಸಾತನೂರಿನಲ್ಲಿ ಇದೀಗ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಎಂಬ ಸಂಘಪರಿವಾರದ ಅಷ್ಟು ಪ್ರಚಾರದಲ್ಲಿಲ್ಲದ ಅಂಗಸಂಘಟನೆಯೊಂದು ‘ರಾಷ್ಟ್ರೀಯವಾದಿಗಳ ಸಮ್ಮೇಳನ’ವನ್ನು ಆಯೋಜಿಸಿದೆ. ಅದರಲ್ಲಿ ಪೌರತ್ವ ಕಾಯ್ದೆಯ ವಿಚಾರದಿಂದ ಹಿಡಿದು, ಟಿಪ್ಪು ಮತ್ತು ಮೇಲುಕೋಟೆಯ ತನಕ ಹತ್ತು ಹಲವು ಸಂಗತಿಗಳನ್ನು ಚರ್ಚಿಸಲಾಗಿದೆ. ಕಳೆದ ತಿಂಗಳು (ಫೆ.23) ನಡೆದ ಈ ಕಾರ್ಯಕ್ರಮದಲ್ಲಿ ‘ಕಾವೇರಿ ಡಿಬೇಟ್’ ಕುರಿತಾದ ಕ್ರಿಯಾಯೋಜನೆಯನ್ನು ಮಂಡಿಸಲಾಗಿದೆ. ಅಂದರೆ ಕಾವೇರಿ ಬೆಲ್ಟ್‌ಅನ್ನು ಕೇಂದ್ರೀಕರಿಸುತ್ತಿರುವ ಹಿನ್ನೆಲೆಯಲ್ಲಿ ತಮಗೆ ಬೇಕಾದ ಕಥನವನ್ನು ಸೃಷ್ಟಿಸುವ ಕೆಲಸ ಯೋಜಿತವಾಗಿ ಸಾಗಿದೆ ಎಂಬುದರಲ್ಲಿ ಸಂಶಯವೇ ಇಲ್ಲ.

ಸಂಘಪರಿವಾರದ ಬೆಳವಣಿಗೆಗೆ ಬೇಕಾದ ವ್ಯವಸ್ಥಿತ ಯೋಜನೆಯೊಂದು ಸದ್ದಿಲ್ಲದೇ ಜಾರಿಯಾಗುತ್ತಿದೆ ಎಂಬುದನ್ನು ಮೇಲಿನ ಹಲವು ಸಂಗತಿಗಳು ಬಿಚ್ಚಿಡುತ್ತಿವೆ. ಹತ್ತು ಹಲವು ಬಗೆಯಲ್ಲಿ ವಿಘಟಿತವಾಗಿರುವ ‘ಮಂಡ್ಯ ಪ್ರಜ್ಞೆ’ಯ ಪ್ರತಿನಿಧಿಗಳು ಇದನ್ನು ವ್ಯವಸ್ಥಿತವಾಗಿ ಎದುರಿಸಬಲ್ಲರೇ ಎಂಬುದು ಮುಂದಿನ ದಿನಗಳಲ್ಲಿ ತೀರ್ಮಾನವಾಗುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಜಾರಿ ಸರ್ಕಾರದ ಹೊಸ ಸೂತ್ರ

ಕರ್ನಾಟಕದಲ್ಲಿ ಒಳಮೀಸಲಾತಿಯ ’ಸದ್ದು-ಗುದ್ದು’ ಅವಿಭಜಿತ ಆಂಧ್ರಪ್ರದೇಶಕ್ಕಿಂತಲೂ ಹೆಚ್ಚಾಗಿದೆ. ಇದಕ್ಕೆ ಕಾರಣ ಪರಿಶಿಷ್ಟ ಜಾತಿಗಳೊಳಗಿನ ಮೇಲಾಟವೂ ಹೌದು, ಸರ್ಕಾರದ ಬೇಜವಾಬ್ದಾರಿ ನಡೆಗಳೂ ಹೌದು. ಆದರೆ ದಿನಾಂಕ: 24.04.2026ರಂದು ನಡೆದ ಸಚಿವ ಸಂಪುಟ ಸಭೆಯು ಒಳಮೀಸಲಾತಿ...

ಕೊರೋನಾ ಲಸಿಕೆ ಒಳಹೊರಗುಗಳ ಪರಾಮರ್ಶೆಯ ನೋಟ

ಮನುಷ್ಯನ ನೆನಪಿನ ಶಕ್ತಿ ಕಡಿಮೆ ಎಂದು ರಾಜಕಾರಣಿಗಳು, ಅಧಿಕಾರಿಗಳು ಸದಾ ಗುನುಗುತ್ತಿರುತ್ತಾರೆ. ಅದು ಜೀವ ಮತ್ತು ಜೀವನ ಕಳೆದುಕೊಂಡ ವಿಚಾರವನ್ನು ಕೂಡ ಬಹಳ ಬೇಗ ಮರೆವಿನ ತೊಟ್ಟಿಗೆ ತಳ್ಳಿ ಬಿಡುತ್ತದೆ.ಆದರೂ, ಮನುಷ್ಯ ಭೂಮಿಯ...

‘ಮಾವಿನ ಮರ’ ಕಂಡ ಕನಸು

ಪುಸ್ತಕ ಪರಿಚಯ ಸವಾಲಿನ ವಿಷಯ. ಅದರಲ್ಲೂ ಕವಿತೆಗಳ ಕುರಿತು ಮಾತನಾಡುವುದು ಇನ್ನೂ ಸವಾಲು. ಪ್ರತಿಯೊಂದು ಕವಿತೆಯೂ ತನ್ನ ಓದುಗರೊಂದಿಗೆ ಸಂವಾದಿಸುವ ಬಗೆ ವಿಭಿನ್ನವಾಗಿರುತ್ತದೆ. ಅದನ್ನು ಏಕರೂಪೀ ಪರಿಭಾಷೆಯಲ್ಲಿ ಮಂಡಿಸುವುದು ಸರಿಯಲ್ಲ. ’ಮಿಥಿಲೆಯ ಮಾವಿನ...

NEET ರದ್ದು : ಖಿನ್ನತೆ, ಆತಂಕಕ್ಕೆ ಒಳಗಾದ ವಿದ್ಯಾರ್ಥಿಗಳು; ನಾಲ್ಕು ದಿನದಲ್ಲಿ ನಾಲ್ವರು ಸಾವಿಗೆ ಶರಣು

ಈ ವರ್ಷದ (2026) ನೀಟ್-ಯುಜಿ (NEET-UG) ಪರೀಕ್ಷೆ ರದ್ದಾದ ಬಳಿಕ ದೇಶದಾದ್ಯಂತ ಕನಿಷ್ಠ ನಾಲ್ವರು ವಿದ್ಯಾರ್ಥಿಗಳು ತೀವ್ರ ಮಾನಸಿಕ ಒತ್ತಡ ಹಾಗೂ ಹತಾಶೆಯಿಂದ ಸಾವಿಗೆ ಶರಣಾಗಿದ್ದಾರೆ. ರಾಜಸ್ಥಾನದ ಝುಂಜುನು ಜಿಲ್ಲೆಯ 23 ವರ್ಷದ ಪ್ರದೀಪ್...

ಪ್ಯಾಲೆಸ್ಟೀನಿಯನ್ ಕೈದಿಗಳ ಮೇಲೆ ಲೈಂಗಿಕ ದೌರ್ಜನ್ಯ ವರದಿ: ನ್ಯೂಯಾರ್ಕ್ ಟೈಮ್ ವಿರುದ್ಧ ಮೊಕದ್ದಮೆ ದಾಖಲಿಸಿದ ಇಸ್ರೇಲ್ ಕ್ರಮಕ್ಕೆ ಆರ್‌ಎಸ್‌ಎಫ್ ಖಂಡನೆ

ಪ್ಯಾಲೆಸ್ಟೀನಿಯನ್ ಕೈದಿಗಳನ್ನು ಗುರಿಯಾಗಿಸಿಕೊಂಡು ವ್ಯಾಪಕವಾದ ಲೈಂಗಿಕ ದೌರ್ಜನ್ಯವನ್ನು ಬಹಿರಂಗಪಡಿಸಿದ ನಿಕೋಲಸ್ ಕ್ರಿಸ್ಟೋಫ್ ಅವರ  ಅಭಿಪ್ರಾಯ ಅಂಕಣವನ್ನು ಪ್ರಕಟಿಸಿದ ನ್ಯೂಯಾರ್ಕ್ ಟೈಮ್ಸ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿರುವ ಇಸ್ರೇಲಿ ಸರ್ಕಾರದ ನಿರ್ಧಾರವನ್ನು ರಿಪೋರ್ಟರ್ಸ್ ವಿದೌಟ್...

“ಮುಸ್ಲಿಮರಿಗೆ ಯಾವುದೇ ಕೆಲಸ ಮಾಡಲ್ಲ” ಎಂದು ವಿವಾದಾತ್ಮಕ ಶಪಥ ಮಾಡಿದ ಪಶ್ಚಿಮ ಬಂಗಾಳದ ಬಿಜೆಪಿ ಶಾಸಕ ರಿತೇಶ್ ತಿವಾರಿ

ಪಶ್ಚಿಮ ಬಂಗಾಳದಲ್ಲಿ ಸುವೇಂದು ಅಧಿಕಾರಿ ನೇತೃತ್ವದಲ್ಲಿ ಬಿಜೆಪಿ ತನ್ನ ಮೊದಲ ಸರ್ಕಾರವನ್ನು ರಚಿಸಿದ ಕೆಲವೇ ದಿನಗಳಲ್ಲಿ, ಪಕ್ಷದ ಶಾಸಕ ರಿತೇಶ್ ತಿವಾರಿ ಅವರು ಮಾಡಿರುವ ಭಾಷಣವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. "ಪಶ್ಚಿಮ...

’ಎಸ್‌ಐಆರ್’ ವಿರುದ್ಧ ಜನಪರ ಸಂಘಟನೆಗಳಿಂದ ಜನಾಂದೋಲನ ಬಂಗಾಳದ ಜನರ ಜೊತೆಗೆ ನಿಂತ ಕರ್ನಾಟಕ

ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (ಎಸ್‌ಐಆರ್) ಮೂಲಕ ವಿರೋಧ ಪಕ್ಷಗಳ ಮತದಾರರು ಮತ್ತು ಅಲ್ಪಸಂಖ್ಯಾತ ಸಮುದಾಯದ ಲಕ್ಷಾಂತರ ಮತದಾರರನ್ನು ಪಟ್ಟಿಯಿಂದ ಕೈಬಿಡುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕುತಂತ್ರ ಈಗಾಗಲೇ ಬಿಹಾರದಲ್ಲಿ ಜಗಜ್ಜಾಹೀರಾಗಿದೆ....

ನಿರುದ್ಯೋಗಿ ಯುವಕರನ್ನು ಜಿರಳೆಗಳು ಎಂದ ಸಿಜೆಐ: ಇದೆಂತಾ ಮಾತು ನ್ಯಾಯಮೂರ್ತಿಗಳೇ!

‘ಕೆಲವು ನಿರುದ್ಯೋಗಿ ಯುವಕರು ಜಿರಳೆಗಳಂತೆ ಸಮಾಜವನ್ನು ಕಾಡುತ್ತಾರೆ. ಉದ್ಯೋಗ, ಸ್ಥಾನಮಾನ ಸಿಗದೆ ಇದ್ದಾಗ ಅವರು ಎಲ್ಲರ ಮೇಲೆ ದಾಳಿ ಆರಂಭಿಸುತ್ತಾರೆ’ ಇದು ಯಾವುದೋ ರಾಜಕೀಯ ರ‍್ಯಾಲಿಯ ಭಾಷಣವಲ್ಲ ಅಥವಾ ಟಿವಿ ಚಾನೆಲ್‌ಗಳ ಜಗಳವಲ್ಲ,...

ಮುಸ್ಲಿಮರು ಕೇವಲ ವೋಟು ಹಾಕಿಕೊಂಡೇ ಇರಬೇಕಾ..ಹಕ್ಕುಗಳನ್ನು ಕೇಳಬಾರದಾ?: ಕಾಂಗ್ರೆಸ್‌ಗೆ ಮುಸ್ಲಿಂ ಸಮಾವೇಶ ಪ್ರಶ್ನೆ

"ಮುಸ್ಲಿಮರು ಕೇವಲ ವೋಟು ಹಾಕಿಕೊಂಡೇ ಇರಬೇಕಾ? ಯಾವ ಹಕ್ಕನ್ನೂ ಕೇಳಬಾರದು ಎಂದು ನೀವು (ಕಾಂಗ್ರೆಸ್‌ನವರು) ಬಯಸುತ್ತಿದ್ದೀರಾ?" ಎಂದು ಕರ್ನಾಟಕ ಮುಸ್ಲಿಂ ಸಮಾವೇಶ ಖಾರವಾಗಿ ಪ್ರಶ್ನಿಸಿತು. ಬೆಂಗಳೂರಿನ ಪುರಭವನದಲ್ಲಿ ಇಂದು (ಮೇ 16, ಶನಿವಾರ) ನಡೆದ...

“ಸನಾತನ ಬೇರುಗಳಲ್ಲಿರುವ ಅಸಮಾನತೆಗೆ ದ್ರಾವಿಡ ನೆಲದ ಪ್ರತಿರೋಧ”: ಉದಯನಿಧಿ ಹೇಳಿಕೆ ವಿವಾದವಾಗಿದ್ದೇಗೆ..?

ಸನಾತನ ಸಂಸ್ಥೆಗಳನ್ನು ಮತ್ತು ಸನಾತನ ಧರ್ಮವನ್ನು ನಿರ್ಮೂಲನೆ ಮಾಡುವ ಬಗ್ಗೆ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಗಳು ಸದ್ಯ ದೇಶಾದ್ಯಂತ ಸಂಚಲನ ಮೂಡಿಸಿವೆ.  ತಮಿಳುನಾಡು ವಿಧಾನಸಭೆಯಲ್ಲಿ ನೂತನ ಮುಖ್ಯಮಂತ್ರಿಯಾಗಿ ಸಿ. ಜೋಸೆಫ್ ವಿಜಯ್ ಅವರು ಅಧಿಕಾರ...