Homeಮುಖಪುಟಒಕ್ಕಲಿಗರ ರಾಜಧಾನಿಯ ಮೇಲೆ ವೈದಿಕಶಾಹಿಯ ಕಣ್ಣು: ಮಂಡ್ಯಕ್ಕೇನು ಕಾದಿದೆ?

ಒಕ್ಕಲಿಗರ ರಾಜಧಾನಿಯ ಮೇಲೆ ವೈದಿಕಶಾಹಿಯ ಕಣ್ಣು: ಮಂಡ್ಯಕ್ಕೇನು ಕಾದಿದೆ?

- Advertisement -
- Advertisement -

ಮಂಡ್ಯದ ಒಕ್ಕಲಿಗರು ಕುವೆಂಪು ಅವರ ಕಟ್ಟಾ ಅನುಯಾಯಿಗಳೇನೂ ಅಲ್ಲ. ಆದರೆ, ಇಲ್ಲಿನ ಮುಖ್ಯವಾಹಿನಿ ಪ್ರಜ್ಞೆಯು ವೈದಿಕಶಾಹಿಯ ಪದತಲದಲ್ಲಿ ಶರಣಾಗಿಲ್ಲ. ಅದು 30 ವರ್ಷಗಳ ಕೆಳಗೆ ಹೇಗೋ ಇಂದಿಗೂ ಹಾಗೆಯೇ ಇದೆ. ಇದೇ ಮಾತನ್ನು ರಾಜ್ಯದ ಉಳಿದೆಲ್ಲಾ ಜಿಲ್ಲೆಗಳ ವಿಚಾರದಲ್ಲಿ ಹೇಳುವ ಹಾಗಿಲ್ಲ. ಕಳೆದ 30 ವರ್ಷಗಳಲ್ಲಿ ಉಳಿದ ಜಿಲ್ಲೆಗಳ ಅಧ್ಯಾಪಕರು, ಸಾಹಿತಿಗಳ ಒಂದು ವಿಭಾಗ, ಪತ್ರಕರ್ತರು ಮತ್ತಿತರ ಸುಶಿಕ್ಷಿತ ವರ್ಗ ನಿಧಾನಕ್ಕೆ ವೈದಿಕರ ಬಾಲಂಗೋಚಿಗಳಾಗುತ್ತಾ ನಡೆದರು. ಅದರ ಭಾಗವಾಗಿ ಅಲ್ಲಿ ಆರೆಸ್ಸೆಸ್ ಚಿಂತನೆ ಹಾಗೂ ಬಿಜೆಪಿಯೂ ಬೆಳೆಯುತ್ತಾ ಸಾಗಿದವು. ಆದರೆ ಮಂಡ್ಯದಲ್ಲಿ ಇವ್ಯಾವುವೂ ಆಗಿರಲಿಲ್ಲ.

ಒಕ್ಕಲಿಗ ಪ್ರಾಧಾನ್ಯತೆ ಮಂಡ್ಯಕ್ಕೆ ಮಾತ್ರ ಸೀಮಿತವಾದದ್ದೇನಲ್ಲ. ದಕ್ಷಿಣದ ಏಳೆಂಟು ಜಿಲ್ಲೆಗಳಲ್ಲಿ ಒಕ್ಕಲಿಗರು ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ರಾಜಕೀಯವಾಗಿ ಬಲಾಢ್ಯರು. ಹಾಸನ ಮತ್ತು ರಾಮನಗರಗಳು ‘ಒಕ್ಕಲಿಗ ಪಕ್ಷ’ವೆಂದು ಹೆಸರಾದ ಜೆಡಿಎಸ್‍ನ ನಾಯಕರುಗಳನ್ನು ಸತತವಾಗಿ ಆರಿಸಿ ಕಳಿಸಿದ ಜಿಲ್ಲೆಗಳು. ಆದರೂ ಮಂಡ್ಯವೇ ಈ ವಿದ್ಯಮಾನದ ರಾಜಧಾನಿ.

ರಾಜ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ಅಧಿಕಾರ ಹಿಡಿಯಲು ದಕ್ಷಿಣ ಕರ್ನಾಟಕದಲ್ಲಿ ಪ್ರಾಬಲ್ಯ ಬೆಳೆಸಿಕೊಳ್ಳುವುದು ಬಿಜೆಪಿಗೆ ಅನಿವಾರ್ಯ. ಬಿಜೆಪಿ ಪ್ರಬಲವಾಗುವುದೆಂದರೆ ಕೆಲವು ವಿರೋಧ ಪಕ್ಷಗಳ ನಾಯಕರುಗಳನ್ನು ತನ್ನೆಡೆಗೆ ಸೆಳೆದುಕೊಳ್ಳುವುದು ಮಾತ್ರವಲ್ಲಾ. ತನ್ನ ಐಡಿಯಾಲಜಿಯನ್ನೂ ಅಲ್ಲಿ ಸ್ಥಾಪಿಸುವುದು. ಹಾಗೆ ಮಾಡಿದಾಗ ಮಾತ್ರ ಈ ಸಾರಿ ದಕ್ಷಿಣ ಕನ್ನಡದಲ್ಲಿ ಆದಂತೆ ಯಾರನ್ನೇ ಚುನಾವಣೆಗೆ ನಿಲ್ಲಿಸಿದರೂ ಅಲ್ಲಿಂದ ಗೆದ್ದು ಬರುವಂತೆ ಮಾಡಿಕೊಳ್ಳಬಹುದು. ಈ ಎಲ್ಲಾ ದೃಷ್ಟಿಯಿಂದ ಆರೆಸ್ಸೆಸ್‍ಗೆ ತನ್ನ ಚಿಂತನೆಯನ್ನು ಹರಡಲು ಮಂಡ್ಯ ಮತ್ತು ಸುತ್ತಲಿನ ಜಿಲ್ಲೆಗಳು ಬಹುಮುಖ್ಯ. ಕನಕಪುರದಲ್ಲಿ ಏಸು ಪ್ರತಿಮೆಯ ವಿಚಾರದಲ್ಲಿ ಗಲಭೆ ಎಬ್ಬಿಸಲು ಕಲ್ಲಡ್ಕ ಪ್ರಭಾಕರ ಭಟ್ಟರೇ ರಂಗಕ್ಕಿಳಿದಿರುವುದೂ ಆ ಉದ್ದೇಶದಿಂದಲೇ. ಈಗ ‘ಅವರು ಬಂದು ಇಲ್ಲಿ ಏನು ಮಾಡಿಕೊಳ್ಳಲೂ ಸಾಧ್ಯವಿಲ್ಲ’ ಎಂಬಂತೆ ವರ್ತಿಸುತ್ತಿರುವ ಡಿ.ಕೆ.ಬ್ರದರ್ಸ್‍ಗೆ ಇನ್ನು ನಾಲ್ಕೈದು ವರ್ಷಗಳಲ್ಲೇ ಆಘಾತವಾಗುವಂತೆ ಅವರ ವಿರುದ್ಧ ಅಲೆ ಬೀಸುವಂತೆ ಮಾಡುವುದು ಸಂಘಪರಿವಾರಕ್ಕೆ ಕಷ್ಟವಿಲ್ಲ.

ಅದೇ ರೀತಿ ಮಂಡ್ಯದ ಮೇಲೆ ಆರೆಸ್ಸೆಸ್‍ನ ಕಣ್ಣು ಬಿದ್ದಿರುವುದಕ್ಕೂ ಇದೇ ಕಾರಣವಿದೆ. ಮೊದಲು ಅವರು ಗುರಿ ಮಾಡಿಕೊಂಡಿದ್ದು ಆದಿಚುಂಚನಗಿರಿ ಮಠದ ಮೇಲೆ. ಮೂಲತಃ ನಾಥಪರಂಪರೆಗೆ ಸೇರಿದ ಈ ಮಠವು ಅವೈದಿಕ ನೆಲೆಯದ್ದಾಗಿತ್ತು. ಆದರೆ ಎಲ್ಲಾ ಬ್ರಾಹ್ಮಣೇತರ ಜಾತಿಗಳಿಗೂ, ಅದರಲ್ಲೂ ಅಂತಹ ಮಠಗಳಿಗೆ ತಾವು ಬ್ರಾಹ್ಮಣಶಾಹಿಯ ಜೊತೆಗೆ ಗುರುತಿಸಿಕೊಂಡರೇನೇ ಮಾನ್ಯತೆ ಎಂಬ ಭಾವನೆ. ಇದು ಕೀಳರಿಮೆಯಿಂದ ಕೂಡಿದ್ದೋ ಅಥವಾ ಅಧಿಕಾರದ ಹಂಬಲದಿಂದ ಬಂದಿದ್ದೋ ಹೇಳುವುದು ಕಷ್ಟ. ಹೀಗಾಗಿ ಬಾಲಗಂಗಾಧರನಾಥರನ್ನೇ ಆರೆಸ್ಸೆಸ್ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ಮಾಡುವುದು ಕಷ್ಟವಾಗಿರಲಿಲ್ಲ.

ಈಗಂತೂ ಈ ವಿಚಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ. ಗೌರಿ ಲಂಕೇಶ್ ಮರ್ಡರ್ ಕೇಸಿನಲ್ಲಿ ಬಂಧಿತನಾಗಿರುವ ಹೊಟ್ಟೆ ನವೀನನನ್ನು ಸನಾತನ ಸಂಸ್ಥೆಯ ಸುಜಿತ್ ಅಲಿಯಾಸ್ ಪ್ರವೀಣ್ ಮಾತಾಡಿಸಿ ಗೌರಿ ಲಂಕೇಶ್ ಹತ್ಯೆಯ ಯೋಜನೆಯ ಸುದ್ದಿ ತಿಳಿಸಿದ್ದು ವಿಜಯನಗರದ ಆದಿಚುಂಚನಗಿರಿ ಮಠದ ಕಾರ್ಯಕ್ರಮಕ್ಕೆ ಬಂದಿದ್ದಾಗಲೇ. ಅಲ್ಲಿ ಹಿಂದೂ ಜನಜಾಗೃತಿ ಸಮಿತಿ ಎಂಬ ಸನಾತನ ಸಂಸ್ಥೆಯ ಸೋದರ ಸಂಘಟನೆಯ ಕಾರ್ಯಕ್ರಮಗಳು ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ಆರೆಸ್ಸೆಸ್ ಮತ್ತು ಸನಾತನ ಸಂಸ್ಥೆಗಳು ಒಂದಕ್ಕೊಂದು ಸಂಬಂಧವಿಲ್ಲದಂತೆ ತೋರಿಸಿಕೊಂಡರೂ, ಅಸಲೀ ಸತ್ಯ ಗೊತ್ತಿದ್ದವರಿಗೆಲ್ಲಾ ಗೊತ್ತಿದೆ.

ಗೌರಿ ಲಂಕೇಶರ ಹತ್ಯೆಯ ಕೇಸಿನ ವಿಚಾರಣೆಯಲ್ಲಿ ಹೊಟ್ಟೆ ನವೀನನನ್ನು ಇಲ್ಲಿಯೇ ಮಾತಾಡಿಸಲಾಯಿತು ಎಂಬುದು ಚಾರ್ಜ್‍ಶೀಟ್‍ನಲ್ಲಿ ಪ್ರಸ್ತಾಪವಾದ ನಂತರವೂ, ಈ ಮಠದಲ್ಲಿ ಎರಡು ಸಭೆಗಳು ನಡೆದಿವೆ. ಜಯಂತ್ ಬಾಲಾಜಿ ಅತಾವಳೆ ಸನಾತನ ಸಂಸ್ಥೆಯ ಸ್ಥಾಪಕನ ಜಯಂತಿಯು 2019ರ ಮೇ 18ರಂದು ನಡೆಯಿತು ಮತ್ತು ಆ ಕಾರ್ಯಕ್ರಮದಲ್ಲಿ ಮಠದ ಉಸ್ತುವಾರಿ ಸೌಮ್ಯನಾಥ ಸ್ವಾಮೀಜಿಯೂ ಪಾಲ್ಗೊಂಡು ಭಾಷಣ ಮಾಡಿದರು. ಅದರಲ್ಲಿ ಅತಾವಳೆಯನ್ನೂ ಹೊಗಳಿ ಮಾತಾಡಿದರು. ಅವರ ಸಾರ್ಥಕ ಬದುಕು ಮತ್ತು ಮಾರ್ಗದರ್ಶನವು ಹಿಂದೂ ಸಮಾಜಕ್ಕೆ ಬೇಕೆಂದು ಹೇಳಿದರು. ಅಂದ ಹಾಗೆ ಈ ಹೊಟ್ಟೆ ನವೀನ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹುಡುಗ ಮತ್ತು ಇದೀಗ ಪಶ್ಚಾತ್ತಾಪ ಪಡುತ್ತಾ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾನೆ.

ಒಕ್ಕಲಿಗರ ಮೇಲೆ ಕೇಂದ್ರೀಕರಿಸಬೇಕು ಎಂಬ ಉದ್ದೇಶ ಇರುವುದರಿಂದ ಮತ್ತು ಆ ಕೆಲಸವನ್ನು ಇದುವರೆಗೆ ಆರ್.ಅಶೋಕ್ ಯಶಸ್ವಿಯಾಗಿ ಮಾಡಿಲ್ಲ ಹಾಗೂ ಸಿ.ಟಿ.ರವಿ ಮೈಸೂರು ಭಾಗದಲ್ಲಿ ಇದನ್ನು ಮಾಡುವುದು ಸುಲಭವಿಲ್ಲ ಎಂಬ ಕಾರಣದಿಂದಲೇ ಬೆಂಗಳೂರಿನ ಸಿ.ಎನ್.ಅಶ್ವತ್ಥನಾರಾಯಣರನ್ನು ಉಪಮುಖ್ಯಮಂತ್ರಿ ಮಾಡಲಾಗಿದೆ ಎಂಬುದನ್ನೂ ಇಲ್ಲಿ ಗಮನಿಸಬೇಕು.

ಇವೆಲ್ಲದರ ಮುಂದುವರೆದ ಭಾಗವಾಗಿಯೇ ಮಂಡ್ಯದಿಂದ ಕೇವಲ 3 ಕಿ.ಮೀ. ದೂರವಿರುವ ಸಾತನೂರಿನಲ್ಲಿ ಇದೀಗ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಎಂಬ ಸಂಘಪರಿವಾರದ ಅಷ್ಟು ಪ್ರಚಾರದಲ್ಲಿಲ್ಲದ ಅಂಗಸಂಘಟನೆಯೊಂದು ‘ರಾಷ್ಟ್ರೀಯವಾದಿಗಳ ಸಮ್ಮೇಳನ’ವನ್ನು ಆಯೋಜಿಸಿದೆ. ಅದರಲ್ಲಿ ಪೌರತ್ವ ಕಾಯ್ದೆಯ ವಿಚಾರದಿಂದ ಹಿಡಿದು, ಟಿಪ್ಪು ಮತ್ತು ಮೇಲುಕೋಟೆಯ ತನಕ ಹತ್ತು ಹಲವು ಸಂಗತಿಗಳನ್ನು ಚರ್ಚಿಸಲಾಗಿದೆ. ಕಳೆದ ತಿಂಗಳು (ಫೆ.23) ನಡೆದ ಈ ಕಾರ್ಯಕ್ರಮದಲ್ಲಿ ‘ಕಾವೇರಿ ಡಿಬೇಟ್’ ಕುರಿತಾದ ಕ್ರಿಯಾಯೋಜನೆಯನ್ನು ಮಂಡಿಸಲಾಗಿದೆ. ಅಂದರೆ ಕಾವೇರಿ ಬೆಲ್ಟ್‌ಅನ್ನು ಕೇಂದ್ರೀಕರಿಸುತ್ತಿರುವ ಹಿನ್ನೆಲೆಯಲ್ಲಿ ತಮಗೆ ಬೇಕಾದ ಕಥನವನ್ನು ಸೃಷ್ಟಿಸುವ ಕೆಲಸ ಯೋಜಿತವಾಗಿ ಸಾಗಿದೆ ಎಂಬುದರಲ್ಲಿ ಸಂಶಯವೇ ಇಲ್ಲ.

ಸಂಘಪರಿವಾರದ ಬೆಳವಣಿಗೆಗೆ ಬೇಕಾದ ವ್ಯವಸ್ಥಿತ ಯೋಜನೆಯೊಂದು ಸದ್ದಿಲ್ಲದೇ ಜಾರಿಯಾಗುತ್ತಿದೆ ಎಂಬುದನ್ನು ಮೇಲಿನ ಹಲವು ಸಂಗತಿಗಳು ಬಿಚ್ಚಿಡುತ್ತಿವೆ. ಹತ್ತು ಹಲವು ಬಗೆಯಲ್ಲಿ ವಿಘಟಿತವಾಗಿರುವ ‘ಮಂಡ್ಯ ಪ್ರಜ್ಞೆ’ಯ ಪ್ರತಿನಿಧಿಗಳು ಇದನ್ನು ವ್ಯವಸ್ಥಿತವಾಗಿ ಎದುರಿಸಬಲ್ಲರೇ ಎಂಬುದು ಮುಂದಿನ ದಿನಗಳಲ್ಲಿ ತೀರ್ಮಾನವಾಗುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

Nepal: ಭೀಕರ ಪ್ರವಾಹಕ್ಕೆ ಸವಾಲೆಸೆದು ನಿಂತ ‘ಗ್ರೀನ್ ಹೌಸ್’ ಸ್ಟೋರಿ

'ನಮ್ಮ ಬದುಕು ಇಷ್ಟಕ್ಕೇ ಅಂತ್ಯವಾಯಿತು ಎನಿಸುವ ಕ್ಷಣಗಳು ಎದುರಾದಾಗ ಮನಸ್ಸಿನಲ್ಲಿ ಏನು ಓಡಬಹುದು? ಪ್ರವಾಹ ಬಂದಾಗ ನನಗೂ ಅದೇ ಅನಿಸಿತ್ತು' ಇದು ನೇಪಾಳದ ನುವಾಕೋಟ್ ಜಿಲ್ಲೆಯ ತ್ರಿಶೂಲಿ ನದಿಯಲ್ಲಿ ಹರಿದುಬಂದ ಭೀಕರ ಪ್ರವಾಹದಿಂದ...

NEET: ದೇಶಾದ್ಯಂತ ಪ್ರತಿಭಟನಾಕಾರರ ವಿರುದ್ದ ದಾಖಲಾಗಿದ್ದ ಎಲ್ಲಾ FIRಗಳನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ಮರುಪರೀಕ್ಷೆ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ಯ (CJP) ಪ್ರತಿಭಟನಾಕಾರರ ವಿರುದ್ಧ ದಾಖಲಾಗಿದ್ದ ಎಲ್ಲಾ FIR ಗಳನ್ನು ಸುಪ್ರೀಂ ಕೋರ್ಟ್ ಮಂಗಳವಾರ ರದ್ದುಗೊಳಿಸಿದೆ. ಕೇಂದ್ರ ಸರ್ಕಾರವು ಈ...

ಚುನಾವಣಾ ಆಯೋಗ ಚಲೋ: ನಟ ಪ್ರಕಾಶ್ ರಾಜ್ ಸೇರಿದಂತೆ ನೂರಾರು SIR ಸಂತ್ರಸ್ತರು, ಹೋರಾಟಗಾರರನ್ನು ವಶಕ್ಕೆ ಪಡೆದ ಪೊಲೀಸರು

ಕರ್ನಾಟಕ ರಾಜ್ಯದ ಅರ್ಹ ಮತದಾರರ ‘ಮತಹರಣ’ ಖಂಡಿಸಿ ‘ಎಸ್‌ಐಆರ್ ವಿರೋಧಿ ಒಕ್ಕೂಟ’ ಹಮ್ಮಿಕೊಂಡಿದ್ದ ‘ಚುನಾವಣಾ ಆಯೋಗ ಚಲೋ’ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಬಹುಭಾಷಾ ನಟ ಪ್ರಕಾಶ್ ರಾಜ್, ಕಿಶೋರ್ ಹಾಗೂ ಪ್ರಮುಖ ನಾಯಕರು ಸೇರಿದಂತೆ...

‘ಚುನಾವಣಾ ಆಯೋಗ ಚಲೋ’: ‘ಮುಚ್ಚಿದ ಬಾಗಿಲಿನ ಮಾತುಕತೆ ಬೇಡ, ಎಲ್ಲವೂ ಸಾರ್ವಜನಿಕರ ಮುಂದೆಯೇ ಇತ್ಯರ್ಥವಾಗಬೇಕು’: ನೂರ್ ಶ್ರೀಧರ್ ಆಗ್ರಹ

ಬೆಂಗಳೂರು: ಕರ್ನಾಟಕದಲ್ಲಿ ನಡೆದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ರಾಜ್ಯದ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಬೃಹತ್ ಕಳವಳವನ್ನು ಸೃಷ್ಟಿಸಿದೆ. ಕೇಂದ್ರ ಚುನಾವಣಾ ಆಯೋಗವು ಬಿಡುಗಡೆ ಮಾಡಿರುವ ನೂತನ ಕರಡು ಮತದಾರರ...

SIR ಎಂಬುದು ಪ್ರಜಾಪ್ರಭುತ್ವವನ್ನು ಹಾಳುಮಾಡುವ ದೊಡ್ಡ ಸಂಚು ಮತ್ತು ಮೋಸ: ಪ್ರಕಾಶ್ ರಾಜ್

"ನಾನು ಸಣ್ಣವನಿದ್ದಾಗ ಮುಕ್ಕೂಟಿ ಕನ್ನಡಿಗರು ಎನ್ನುತ್ತಿದ್ದರು. ದಶಕಗಳ ನಂತರ ಪಂಚಕೋಟಿ ಕನ್ನಡಿಗರಾಗಿ, ಈಗ ಶತಕೋಟಿ ಆಗಬೇಕಿತ್ತು. ಆದರೆ ಮತದಾರರ ಪಟ್ಟಿ ವಿಶೇಷ ಸಾಂದ್ರ ಪರಿಷ್ಕರಣೆ (SIR) ಹೆಸರಿನಲ್ಲಿ ಮತ್ತೆ ಮುಕ್ಕೂಟಿಗೆ ತಂದು ನಿಲ್ಲಿಸಲಾಗುತ್ತಿದೆ....

‘ಚುನಾವಣಾ ಆಯೋಗ ಚಲೋ’: ಎಸ್ಐಆರ್ ಅನ್ಯಾಯವನ್ನು ಪ್ರಶ್ನಿಸಲು ನಾವು ಚುನಾವಣಾ ಆಯೋಗಕ್ಕೆ ಮುತ್ತಿಗೆ ಹಾಕುತ್ತಿದ್ದೇವೆ: ಯೂಸುಫ್ ಕನ್ನಿ

ಬೆಂಗಳೂರು: ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಹೆಸರಿನಲ್ಲಿ ಅರ್ಹ ನಾಗರಿಕರ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ‘ಎಸ್‌ಐಆರ್ ವಿರೋಧಿ ಕರ್ನಾಟಕ’ ವೇದಿಕೆಯು 2026 ಸೆಪ್ಟಂಬರ್ 01, ಮಂಗಳವಾರ ಹಮ್ಮಿಕೊಂಡಿದ್ದ...

SIR:‘ನಾವು ಕಳ್ಳರಲ್ಲ, ಈ ದೇಶದ ಮೂಲ ನಿವಾಸಿಗಳು’ SIR ಸಂತ್ರಸ್ತರ ಜೊತೆ ಪ್ರಕಾಶ್ ರಾಜ್ ಸಂವಾದ

"ನಾವು ಈ ದೇಶದ ನಾಗರಿಕರು, ಕಳ್ಳರಲ್ಲ. ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ ಮಾಡಿ ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ತರಲಾಗುತ್ತಿದೆ. ನಮ್ಮ ಹಕ್ಕನ್ನು ಉಳಿಸಿಕೊಳ್ಳಲು ನಾವು ಹೋರಾಟ ನಡೆಸುತ್ತಿದ್ದೇವೆ," ಎಂದು ಬಹುಭಾಷಾ ನಟ ಹಾಗೂ...

‘ವಿದೇಶದಲ್ಲಿ ಚಿನ್ನ ಖರೀದಿಸಬೇಡಿ, ವಿವಾಹವಾಗಬೇಡಿ’: ಭಾರತೀಯರಿಗೆ ಮೋದಿ ಮನವಿ

ಭಾರತೀಯರು ಅನಗತ್ಯವಾಗಿ ವಿದೇಶಿ ಪ್ರವಾಸ ಕೈಗೊಳ್ಳುವುದನ್ನು, ವಿದೇಶಗಳಲ್ಲಿ ವಿವಾಹವಾಗುವುದನ್ನು ಹಾಗೂ ಅಗತ್ಯವಿಲ್ಲದಿದ್ದರೆ ವಿದೇಶದಿಂದ ಚಿನ್ನ ಖರೀದಿಸುವುದನ್ನು ಸಂಪೂರ್ಣವಾಗಿ ತಪ್ಪಿಸಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. ಸ್ವಾವಲಂಬನೆಗೆ ಉತ್ತೇಜನ ನೀಡುವುದರ...

ಧಾರವಾಡ | ಪ್ರಕಾಶ್ ರಾಜ್ ಭಾಗವಹಿಸಿದ್ದ ಸಮುದಾಯ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನ : ದೂರು ದಾಖಲು

ಭಾನುವಾರ (ಆ.30) ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾ ಭವನದಲ್ಲಿ ಆಯೋಜಿಸಿದ್ದ ಸಮುದಾಯ ಸಂಘಟನೆಯ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನಿಸಿ ಗಲಾಟೆ ಎಬ್ಬಿಸಿದ ಬಿಜೆಪಿ-ಸಂಘಪರಿವಾರದ ಬೆಂಬಲಿಗರ ವಿರುದ್ಧ ದೂರು ದಾಖಲಿಸಲಾಗಿದೆ. ಸಮುದಾಯ ಸಂಘಟನೆಯ ಧಾರವಾಡದ...

ಚಲಿಸುತ್ತಿದ್ದ ಸ್ಲೀಪರ್ ಬಸ್‌ನಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ : ಚಾಲಕ, ಕಂಡಕ್ಟರ್ ಬಂಧನ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 2012ರಲ್ಲಿ ನಡೆದ ನಿರ್ಭಯಾ ಪ್ರಕರಣವನ್ನು ನೆನಪಿಸುವಂತಹ ಆಘಾತಕಾರಿ ಘಟನೆಯೊಂದು ನಡೆದಿದೆ. ಸ್ಲೀಪರ್‌ ಬಸ್‌ನಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. indiatoday.in ವರದಿಯ ಪ್ರಕಾರ, ಈ ಘಟನೆಯು ಆಗಸ್ಟ್ 4ರ...