ಮೂರು ಅಂತಸ್ತಿನ ಕಮರ್ಷಿಯಲ್ ಕಾಂಪ್ಲೆಕ್ಸ್ ಕಟ್ಟುವ ಸಲುವಾಗಿ ವಾರಣಾಸಿಯ ಬೆನಿಯಾ ಬಾಗ್ನಲ್ಲಿರುವ ಶಹನಾಯ್ ವಿದ್ವಾನ್ ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರ ಮನೆಯನ್ನು ಕೆಡವಲಾಗುತ್ತಿದೆ.
ಈ ಮನೆಯನ್ನು 1936 ರಲ್ಲಿ ಖರೀದಿಸಿದ್ದ ಬಿಸ್ಮಿಲ್ಲಾ ಖಾನ್, ತಮ್ಮ ಜೀವನದುದ್ದಕ್ಕೂ ಅಲ್ಲಿಯೇ ವಾಸಿಸಿದ್ದರು. ಅವರು ಅಮೇರಿಕಾದಲ್ಲಿ ನೆಲೆಸಲು ತಮ್ಮ ಶಿಷ್ಯರು ನೀಡಿದ ಕರೆಯನ್ನು ಸಹ ತಿರಸ್ಕರಿಸಿದ್ದರು.
ಈ ಮನೆ ಈಗ ಬಿಸ್ಮಿಲ್ಲಾಖಾನ್ ಮೊಮ್ಮಕ್ಕಳ ಒಡೆತನದಲ್ಲಿದೆ. ಬಿಸ್ಮಿಲ್ಲಾಖಾನ್ ಅವರ ಐದು ಗಂಡು ಮಕ್ಕಳಲ್ಲಿ ದಿವಂಗತ ಮೆಹ್ತಾಬ್ ಹುಸೇನ್ ಒಬ್ಬರು. ಅವರ ಮಗನಾದ ಮತ್ತು ಖಾನ್ ಮೊಮ್ಮಗನಾದ ಸೂಫಿ, ಆರ್ಥಿಕ ವಿಷಯಕ್ಕಾಗಿ ಮನೆಯನ್ನು ನೆಲಸಮ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
“ಮೂರು ಅಂತಸ್ತಿನ ಕಮರ್ಷಿಯಲ್ ಅಪಾರ್ಟ್ಮೆಂಟ್ ನಿರ್ಮಿಸಲಾಗುವುದು. ಕಟ್ಟಡದ ಒಂದು ಭಾಗದಲ್ಲಿ ನಾವು ಬಿಸ್ಮಿಲ್ಲಾ ಖಾನ್ ಅವರ ವಸ್ತುಸಂಗ್ರಹಾಲಯವನ್ನು ನಿರ್ಮಿಸುತ್ತೇವೆ. ಅವರ ಎಲ್ಲಾ ವೈಯಕ್ತಿಕ ವಸ್ತುಗಳು, ಪ್ರಶಸ್ತಿಗಳು, ಪ್ರಶಂಸೆಗಳು ಇತ್ಯಾದಿಗಳನ್ನು ನಾವು ಈ ವಸ್ತು ಸಂಗ್ರಹಾಲಯದಲ್ಲಿ ಇಡುತ್ತೇವೆ” ಎಂದು ಅವರು ಹೇಳಿದ್ದಾರೆ.
ಖಾನ್ ಅವರ ಶಿಷ್ಯೆ ಮತ್ತು ಸಾಕು ಮಗಳು, ಗಾಯಕಿ ಸೋಮಾ ಘೋಷ್, ಮನೆಯನ್ನು ಕೆಡವುತ್ತಿರುವ ವಿಷಯ ತಿಳಿದು ಆಘಾತಕ್ಕೊಳಗಾಗಿದ್ದೇನೆ ಎಂದು ಹೇಳಿದ್ದಾರೆ.
‘ಬಾಬಾ’ (ಬಿಸ್ಮಿಲ್ಲಾಖಾನ್) ಅವರ ಕೊಠಡಿಯನ್ನು ಕೆಡವಿ, ಅವರ ವಸ್ತುಗಳನ್ನು ಎಸೆಯಲಾಗಿದೆ ಎಂದು ತಿಳಿದಾಗ ನನಗೆ ಆಘಾತವಾಯಿತು. ಅದು ಕೇವಲ ಒಂದು ಕೋಣೆಯಾಗಿರಲಿಲ್ಲ. ಅದು ಸಂಗೀತ ಪ್ರಿಯರಿಗೆ ಪೂಜಾ ಸ್ಥಳವಾಗಿದೆ. ಇದು ಒಂದು ಪರಂಪರೆ. ಅದನ್ನು ಸಂರಕ್ಷಿಸಿ ಎಂದು ನಾನು ಎಲ್ಲರಿಗೂ ಮನವಿ ಮಾಡುತ್ತೇನೆ” ಅವರು ಹೇಳಿದ್ದಾರೆ.
ಆಗಸ್ಟ್ 21 ರಂದು ಬಿಸ್ಮಿಲ್ಲಾ ಖಾನ್ ಅವರ 14ನೇ ನೆನಪಿನ ವಾರ್ಷಿಕೋತ್ಸವದ ಕೆಲವೇ ದಿನಗಳ ಮೊದಲು ಕೆಡವುವಿಕೆಯ ಪ್ರಕ್ರಿಯೆ ಪ್ರಾರಂಭವಾಗಿದೆ. 2006 ರಲ್ಲಿ ನಿಧನರಾದ ಬಿಸ್ಮಿಲ್ಲಾಖಾನ್ ಗೆ 2001 ರಲ್ಲಿ ಭಾರತ್ ರತ್ನ ಪ್ರಶಸ್ತಿ ನೀಡಲಾಗಿತ್ತು.
ಬಿಸ್ಮಿಲ್ಲಾ ಖಾನ್ ಆಗಸ್ಟ್ 15, 1947 ರಂದು ಕೆಂಪು ಕೋಟೆಯಲ್ಲಿ ಶಹನಾಯ್ ಕಾರ್ಯಕ್ರಮ ನೀಡಿ ಗಮನ ಸೆಳೆದಿದ್ದರು. ಇದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.
ರಾಜ್ ಕುಮಾರ್ ಅಭಿನಯದ ‘ಸನಾದಿ ಅಪ್ಪಣ್ಣ’ ಎನ್ನುವ ಕನ್ನಡ ಚಿತ್ರಕ್ಕೆ ಶಹನಾಯ್ ನುಡಿಸಿ ಸಾಕಷ್ಟು ಜನಪ್ರಿಯರಾಗಿದ್ದರು.
2017 ರ ಜನವರಿಯಲ್ಲಿ, ಅವರ ಮೊಮ್ಮಗ ಬಿಸ್ಮಿಲ್ಲಾಖಾನರ ನಾಲ್ಕು ಶಹನಾಯ್ ಗಳನ್ನು ಕದ್ದಿದ್ದು, ಅದರಲ್ಲಿ ಮೂರು ಬೆಳ್ಳಿಯಿಂದ ಮಾಡಲ್ಪಟ್ಟಿತ್ತು. ಅವುಗಳನ್ನು ಸ್ಥಳೀಯ ಆಭರಣ ವ್ಯಾಪಾರಿಗಳಿಗೆ 17,000 ರೂ.ಗೆ ಮಾರಾಟ ಮಾಡಿದ್ದಾನೆ ಎನ್ನಲಾಗಿದೆ.
ಉತ್ತರ ಪ್ರದೇಶದ ಎಸ್ಟಿಎಫ್, ಅವರ ಮೊಮ್ಮಗ ಮತ್ತು ಇಬ್ಬರು ಆಭರಣ ವ್ಯಾಪಾರಿಗಳನ್ನು ಬಂಧಿಸಿ ಕರಗಿದ ಬೆಳ್ಳಿಯನ್ನು ವಶಪಡಿಸಿಕೊಂಡಿತ್ತು. ಮೂರು ಬೆಳ್ಳಿ ಶಹನಾಯ್ ಗಳನ್ನು ಮಾಜಿ ಪ್ರಧಾನಿ ಪಿ.ವಿ. ನರಸಿಂಹ ರಾವ್, ರಾಷ್ಟ್ರೀಯ ಜನತಾದಳದ ಮುಖ್ಯಸ್ಥ ಲಾಲು ಪ್ರಸಾದ್ ಮತ್ತು ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಅವರು ಬಳುವಳಿಯಾಗಿ ನೀಡಿದ್ದರು.
ಇದನ್ನೂ ಓದಿ: ಕೇಂದ್ರ ಸರ್ಕಾರದ ನೇಮಕಾತಿಗಳಿಗೆ ‘ಒಂದೇ’ ಸಾಮಾನ್ಯ ಅರ್ಹತಾ ಪರೀಕ್ಷೆ: ಸಂಸತ್ತು ಒಪ್ಪಿಗೆ