ಕೇಂದ್ರ ಸರ್ಕಾರದ ಉದ್ಯೋಗಗಳಿಗೆ ಸಾಮಾನ್ಯ ಅರ್ಹತಾ ಪರೀಕ್ಷೆ ನಡೆಸಲು ರಾಷ್ಟ್ರೀಯ ನೇಮಕಾತಿ ಸಂಸ್ಥೆ (ಎನ್ಆರ್ಎ) ರಚಿಸಲು ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದ್ದು, ನೇಮಕಾತಿ ಪ್ರಕ್ರಿಯೆಯಲ್ಲಿ ಇದು ಒಂದು ಮೈಲಿಗಲ್ಲು ಎಂದಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ಸಚಿವ ಪ್ರಕಾಶ್ ಜಾವಡೇಕರ್ ಇದು ಐತಿಹಾಸಿಕ ನಿರ್ಧಾರವಾಗಿದ್ದು, ಉದ್ಯೋಗಾಕಾಂಕ್ಷಿಗಳು ‘ಒಂದು’ ಸಾಮಾನ್ಯ ಪರೀಕ್ಷೆಯನ್ನು ತೆಗೆದುಕೊಳ್ಳುವ ಮೂಲಕ, ಹತ್ತಾರು ಪರೀಕ್ಷೆಗಳನ್ನು ಬರೆಯುವ ಸಮಯವನ್ನು ಉಳಿಸಲು ಅವಕಾಶ ನೀಡುತ್ತದೆ ಎಂದಿದ್ದಾರೆ.
ಇದು ಅನೇಕ ವರ್ಷಗಳಿಂದ ಯುವಕರ ಪ್ರಮುಖ ಬೇಡಿಕೆಯಾಗಿದೆ. ಈಗ ಅದು ಈಡೇರಿದೆ ಎಂದು ಅವರು ಹೇಳಿದರು.
ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಇದನ್ನು ದೇಶದ ಇತಿಹಾಸದಲ್ಲಿ ಒಂದು ಕ್ರಾಂತಿಕಾರಿ ಮತ್ತು ಮೈಲಿಗಲ್ಲು ಎಂದು ಬಣ್ಣಿಸಿದರು.
ಇದು ವಿವಿಧ ಉದ್ಯೋಗಗಳಿಗೆ ಪರೀಕ್ಷೆಗಳನ್ನು ತೆಗೆದುಕೊಳ್ಳಲು ದೂರದ ಪ್ರಯಾಣ ಮಾಡಬೇಕಾದ ಬಡವರಿಗೆ ಮತ್ತು ಮಹಿಳೆಯರಿಗೆ ಸಹಾಯ ಮಾಡುತ್ತದೆ ಎಂದರು.
ಗ್ರೂಪ್ ಬಿ ಮತ್ತು ಗ್ರೂಪ್ ಸಿ (ತಾಂತ್ರಿಕೇತರ) ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಸ್ಕ್ರೀನ್/ಶಾರ್ಟ್ಲಿಸ್ಟ್ ಮಾಡಲು ಎನ್ಆರ್ಎ ಸಾಮಾನ್ಯ ಅರ್ಹತಾ ಪರೀಕ್ಷೆ (ಸಿಇಟಿ) ನಡೆಸಲಿದೆ.
ಎನ್ಆರ್ಎ ನಲ್ಲಿ, ರೈಲ್ವೆ ಸಚಿವಾಲಯ, ಹಣಕಾಸು ಸಚಿವಾಲಯ/ಹಣಕಾಸು ಸೇವೆಗಳ ಇಲಾಖೆ, ಸಿಬ್ಬಂದಿ ಆಯ್ಕೆ ಆಯೋಗ (ಎಸ್ಎಸ್ಸಿ), ರೈಲ್ವೆ ನೇಮಕಾತಿ ಮಂಡಳಿ (ಆರ್ಆರ್ಬಿ) ಮತ್ತು ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ (ಐಬಿಪಿಎಸ್) ಪ್ರತಿನಿಧಿಗಳು ಇರಲಿದ್ದಾರೆ.
ಎನ್ಆರ್ಎ ಕೇಂದ್ರ ಸರ್ಕಾರದ ನೇಮಕಾತಿ ಕ್ಷೇತ್ರದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಉತ್ತಮ ಅಭ್ಯಾಸಗಳನ್ನು ತರುವ ವಿಶೇಷ ಸಂಸ್ಥೆಯಾಗಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ಸದ್ಯಕ್ಕೆ, ಸಾಮಾನ್ಯ ಪರೀಕ್ಷೆಯ ಅಂಕಗಳನ್ನು ಮೂರು ಪ್ರಮುಖ ನೇಮಕಾತಿ ಏಜೆನ್ಸಿಗಳು ಬಳಸುತ್ತವೆ. ಇತರ ಏಜೆನ್ಸಿಗಳನ್ನು ನಿರ್ದಿಷ್ಟ ಅವಧಿಯಲ್ಲಿ ಸೇರಿಸಲಾಗುತ್ತದೆ.
ಇದರ ಸಿಇಟಿ ಅಂಕವನ್ನು ಅನ್ನು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು/ಕೇಂದ್ರಾಡಳಿತ ಪ್ರದೇಶಗಳು, ಸಾರ್ವಜನಿಕ ವಲಯದ ಉದ್ಯಮಗಳು ಮತ್ತು ಖಾಸಗಿ ವಲಯದ ಇತರ ನೇಮಕಾತಿ ಸಂಸ್ಥೆಗಳೊಂದಿಗೆ ಹಂಚಿಕೊಳ್ಳಬಹುದು ಎಂದು ಜಿತೇಂದ್ರ ಸಿಂಗ್ ಹೇಳಿದರು.
ಇದು ನೇಮಕಾತಿಯಲ್ಲಿನ ಖರ್ಚು ಮತ್ತು ಸಮಯವನ್ನು ಉಳಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.
ದೆಹಲಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ರಾಷ್ಟ್ರೀಯ ನೇಮಕಾತಿ ಸಂಸ್ಥೆ (ಎನ್ಆರ್ಎ)ಯನ್ನು ಸ್ಥಾಪಿಸಲು ಸರ್ಕಾರ 1,517.57 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ.
ಇದು ಸರ್ಕಾರದ ಕಾರ್ಯದರ್ಶಿ ಹುದ್ದೆಯ ಅಧ್ಯಕ್ಷರನ್ನು ಹೊಂದಿರುತ್ತದೆ.
ಎನ್ಆರ್ಎ ಸ್ಥಾಪಿಸುವುದರ ಹೊರತಾಗಿ, 117 ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ ಪರೀಕ್ಷಾ ಮೂಲಸೌಕರ್ಯಗಳನ್ನು ಸ್ಥಾಪಿಸಲು ವೆಚ್ಚವಾಗಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಪ್ರಸ್ತುತ, ಸರ್ಕಾರಿ ಉದ್ಯೋಗಗಳನ್ನು ಬಯಸುವ ಅಭ್ಯರ್ಥಿಗಳು ಒಂದೇ ರೀತಿಯ ಅರ್ಹತಾ ಷರತ್ತುಗಳನ್ನು ಹೊಂದಿದ್ದರೂ ಸಹ ವಿವಿಧ ಹುದ್ದೆಗಳಿಗೆ ಬಹು ನೇಮಕಾತಿ ಏಜೆನ್ಸಿಗಳು ನಡೆಸುವ ಪ್ರತ್ಯೇಕ ಪರೀಕ್ಷೆಗಳಿಗೆ ಹಾಜರಾಗಬೇಕಾಗುತ್ತದೆ.
ಅಭ್ಯರ್ಥಿಗಳು ಹೀಗೆ ಅನೇಕ ನೇಮಕಾತಿ ಏಜೆನ್ಸಿಗಳಿಗೆ ಶುಲ್ಕವನ್ನು ಪಾವತಿಸುವುದನ್ನು ಕೊನೆಗೊಳಿಸಿದ್ದು, ಈ ಪರೀಕ್ಷೆಗಳಲ್ಲಿ ಹಾಜರಾಗಲು ದೂರದ ಪ್ರಯಾಣವನ್ನು ಕಡಿಮೆಗೊಳಿಸುತ್ತದೆ.
ಈ ಸಾಮಾನ್ಯ ಪರೀಕ್ಷೆಯನ್ನು ನಡೆಸಲು ದೇಶಾದ್ಯಂತ 1,000 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸುವುದು ಆರಂಭಿಕ ಯೋಜನೆಯಾಗಿದೆ ಎಂದು ಜಿತೇಂದ್ರ ಸಿಂಗ್ ಹೇಳಿದರು.
ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಒಂದು ಪರೀಕ್ಷಾ ಕೇಂದ್ರವಿರುತ್ತದೆ ಮತ್ತು ಈ ಸಾಮಾನ್ಯ ಪರೀಕ್ಷೆಯನ್ನು ತೆಗೆದುಕೊಳ್ಳಲು ಯಾವುದೇ ಅಭ್ಯರ್ಥಿಗಳು ತಮ್ಮ ಜಿಲ್ಲೆಯಿಂದ ಹೊರಹೋಗಬೇಕಾಗಿಲ್ಲ ಎಂದು ಅವರು ಹೇಳಿದರು.
ಈ ಪ್ರತಿಯೊಂದು ಪರೀಕ್ಷೆಯಲ್ಲಿ ಸರಾಸರಿ 2.5 ಕೋಟಿಯಿಂದ 3 ಕೋಟಿ ಅಭ್ಯರ್ಥಿಗಳು ಹಾಜರಾಗುತ್ತಾರೆ.
ಸಾಮಾನ್ಯ ಅರ್ಹತಾ ಪರೀಕ್ಷೆಯನ್ನು ಒಮ್ಮೆ ತೆಗೆದುಕೊಂಡರೆ ಅದು ಉನ್ನತ ಮಟ್ಟದ ಯಾವುದೇ/ಎಲ್ಲಾ ನೇಮಕಾತಿ ಏಜೆನ್ಸಿಗಳಿಗೆ ಅನ್ವಯಿಸುತ್ತದೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಶೋಷಿತರಿಗೆ ಮೀಸಲಾತಿ ಯಾಕೆ ಬೇಕಿದೆ? : ವಿಕಾಸ್ ಆರ್ ಮೌರ್ಯ