Homeನ್ಯಾಯ ಪಥಆ ಸಮಾಜಮುಖೀ ಬದುಕಿನ ಹೆಸರು 'ಶೌಕತ್ ಕೈಫಿ' : ಡಿ.ಉಮಾಪತಿಯವರು ಬರೆದ ಪ್ರೇಮಕಥೆ

ಆ ಸಮಾಜಮುಖೀ ಬದುಕಿನ ಹೆಸರು ‘ಶೌಕತ್ ಕೈಫಿ’ : ಡಿ.ಉಮಾಪತಿಯವರು ಬರೆದ ಪ್ರೇಮಕಥೆ

ಅರಸೊತ್ತಿಗೆ ಮತ್ತು ಅನ್ಯಾಯದ ಮೇಲೆ ದಾಳಿ ನಡೆಸಿದ್ದ 'ತಾಜ್' (ಮುಕುಟ) ಎಂಬ ಮತ್ತೊಂದು ಶಕ್ತಿಶಾಲಿ ಕವಿತೆಯನ್ನು ಕೈಫಿ ವಾಚಿಸಿದ್ದರು. ನಿಜಾಮ್ ಆಳ್ವಿಕೆಯ ನಗರದಲ್ಲಿ ಈ ಕವಿತೆ ಓದಲು ಎಂಟೆದೆ ಬೇಕಿತ್ತು ಎಂಬ ಸಂಗತಿಯೇ ಶೌಕತ್ ಅವರನ್ನು ಬಹುವಾಗಿ ಪ್ರಭಾವಿಸಿತ್ತು.

- Advertisement -
- Advertisement -

ಕಳೆದ ವಾರ ಮುಂಬಯಿಯಲ್ಲಿ ನಿಧನರಾದ ಶೌಕತ್ ಕೈಫಿ ಹೈದರಾಬಾದಿನ ಸಂಪ್ರದಾಯವಾದಿ ಮುಸ್ಲಿಂ ಕುಟುಂಬವೊಂದರ ಹುಡುಗಿ. ಪ್ರೇಮಕ್ಕಾಗಿ, ಮೌಲ್ಯಗಳಿಗಾಗಿ, ಸಿದ್ಧಾಂತಗಳಿಗಾಗಿ ಹೂಡಿದ ಬಂಡಾಯ, ಮಾಡಿದ ತ್ಯಾಗ, ತುಳಿದ ಹೊಸ ದಾರಿಯ ಸಂಘರ್ಷದ ಬದುಕು ಅವರದು..

ಪ್ರಗತಿಪರ ರಂಗಭೂಮಿ ಚಳವಳಿಯ ಜೊತೆಜೊತೆಗೆ ಬೆಸಗೊಂಡಿದ್ದವರು.. ಪ್ರೇಮಿಯಾಗಿ ಪತಿಯಾದ ನಂತರವೂ ಪ್ರೇಮಿಯಾಗಿ, ಕಡೆತನಕ ಆತ್ಮೀಯ ಸಖನಾಗಿ ಉಳಿದ ಜನಪರ ಕವಿ ಕೈಫಿ ಆಜ್ಮಿ ಬಗೆಗಿನ ಅವರ ಪ್ರೀತಿಯ ಒರತೆ ತಾವು 93ರ ವಯಸ್ಸಿನಲ್ಲಿ ಕಡೆಯ ಉಸಿರೆಳೆವತನಕ ಬತ್ತಲಿಲ್ಲ.

1947ರ ಫೆಬ್ರವರಿಯಲ್ಲಿ ಹೈದರಾಬಾದಿನಲ್ಲಿ ನಡೆದ ಅಖಿಲ ಭಾರತ ಉರ್ದು ಪ್ರಗತಿಪರ ಬರೆಹಗಾರರ ಸಮ್ಮೇಳನದಲ್ಲಿ ಭಾಗವಹಿಸಲು ಜನಪರ ಕವಿಗಳನೇಕರು ಅಲ್ಲಿ ಸೇರಿದ್ದಾಗ ಶುರುವಾಗಿತ್ತು ಶೌಕತ್ ಪ್ರೇಮಗಾಥೆ. ಹಲವು ಕವಿಗಳನ್ನು ಶೌಕತ್ ಅವರ ಸಮೀಪ ಬಂಧುವಿನ ಮನೆಯಲ್ಲಿ ಉಳಿಸಲಾಗಿತ್ತು. ಈ ಕವಿಗಳ ವಿನಮ್ರತೆ ಎಳೆಹರೆಯದ ಶೌಕತ್ ಅವರನ್ನು ಮಂತ್ರಮುಗ್ಧಗೊಳಿಸಿತ್ತು.

ಯಾದ್ ಕೀ ರೆಹಗುಝಾರ್ ಎಂಬುದು ಅವರ ಆತ್ಮಚರಿತ್ರೆಯ ಹೊತ್ತಿಗೆ. ಅದರ ಇಂಗ್ಲಿಷ್ ಅನುವಾದಿತ ಅವತರಣಿಕೆ ’Kaifi and I’. ಈ ಪುಸ್ತಕದಲ್ಲಿ ತಮ್ಮ ಜೀವನ ಪಯಣದ ವಿವರಗಳನ್ನು ಅವರು ದಾಖಲಿಸಿದ್ದಾರೆ.

ಕೈಫಿ ಅಂದು ಸಂಜೆ ಓದಿದ ಕವಿತೆ ಔರತ್ (ಹೆಣ್ಣು). ಗಂಡಾಳಿಕೆಯನ್ನು ಪ್ರಶ್ನಿಸಿದ್ದ ಕವಿತೆ.

ನಾ ದಹಿಸುವ ಅದೇ ಬೆಂಕಿಯಲ್ಲಿ ಉರಿಯಬೇಕಿದೆ ನಿನಗೆ,
ಎದ್ದೇಳು ಜೀವದರಸಿಯೇ ನನ್ನ ಹೆಜ್ಜೆಯಲ್ಲೇ ಹೆಜ್ಜೆ ಇಡಬೇಕಿದೆ ನಿನಗೆ
(ಜಿಸ್ ಮೇಂ ಜಲ್ತಾ ಹೂಂ ಉಸೀ ಆಗ್ ಮೇ ಜಲ್ನಾ ಹೈ ತುಝೇ
ಉಠ್ ಮೇರೀ ಜಾಂ ಮೇರೇ ಸಾಥ್ ಹೀ ಚಲ್ನಾ ಹೈ ತುಝೇ)

ತನ್ನನ್ನೇ ಕುರಿತು ಕೈಫಿ ಬರೆದಿದ್ದ ಕವಿತೆಯಿದು ಎನ್ನಿಸಿಬಿಟ್ಟಿತ್ತು ಶೌಕತ್‍ಗೆ. ಮಹಿಳೆಯನ್ನು ಗೌರವಿಸುವ ಪುರುಷನೇ ತನಗೆ ಸೂಕ್ತ ಆತ್ಮಸಂಗಾತಿ ಎಂದು ಆ ಎಳೆ ಯುವತಿ ಭಾವಿಸಿದ್ದರು. ಮೊದಲ ನೋಟದಲ್ಲೇ ಅಂಕುರಿಸಿದ ಪ್ರೇಮ ಅದು. ಮುಷಯಿರಾದ ನಂತರ ಕವಿಗಳ ಹಸ್ತಾಕ್ಷರಗಳಿಗಾಗಿ ಬೇಟೆ ನಡೆದಿತ್ತು. ಕೈಫಿ ಆಜ್ಮಿಯ ಮುತ್ತಿದ್ದ ದೊಡ್ಡ ಗುಂಪು ಕರಗಲೆಂದು ಕಾದ ಶೌಕತ್, ಮತ್ತೊಬ್ಬ ಗಣ್ಯ ಕವಿ ಅಲಿ ಸರ್ದಾರ್ ಜಾಫ್ರಿ ಬಳಿ ನಡೆದರು. ಆ ದಿನಗಳಲ್ಲಿ ಜಾಫ್ರಿ ಅವರ ವರ್ಚಸ್ಸು ಯಾವುದೇ ಕ್ರಾಂತಿಕಾರಿಗಿಂತ ಕಡಿಮೆ ಇರಲಿಲ್ಲ. ಶೌಕತ್ ನಡೆಯನ್ನು ಕೈಫಿ ಕಣ್ಣಂಚು ಗಮನಿಸಿತ್ತು.

ಕಡೆಗೂ ತಮ್ಮೆಡೆ ಸಾರಿ ಬಂದ ಶೌಕತ್ ಕೈಯಲ್ಲಿನ ಡೈರಿಯಲ್ಲಿ ಕಳಪೆ ಕವಿತೆಯ ಎರಡು ಪಂಕ್ತಿಗಳನ್ನು ಗೀಚಿದರು ಕೈಫಿ. ಈ ಸಪ್ಪೆ ಸಾಲುಗಳ ಯಾಕೆ ಬರೆದಿರಿ ಎಂದು ಮುಖ ಊದಿಸಿ ಕೇಳಿದ ಶೌಕತ್ ಅವರೆಡೆಗೆ ತುಂಟ ನಗು ಚಿಮ್ಮಿಸಿದರು ಕೈಫಿ. ಮೊದಲೇ ತನ್ನ ಬಳಿಗೆ ಬಾರದೆ ಸರ್ದಾರ್ ಜಾಫ್ರಿ ಕಡೆ ಹೋದೆಯಲ್ಲ ಅದಕ್ಕೆ ಎಂದರು.

ಅರಸೊತ್ತಿಗೆ ಮತ್ತು ಅನ್ಯಾಯದ ಮೇಲೆ ದಾಳಿ ನಡೆಸಿದ್ದ ‘ತಾಜ್’ (ಮುಕುಟ) ಎಂಬ ಮತ್ತೊಂದು ಶಕ್ತಿಶಾಲಿ ಕವಿತೆಯನ್ನು ಕೈಫಿ ವಾಚಿಸಿದ್ದರು. ನಿಜಾಮ್ ಆಳ್ವಿಕೆಯ ನಗರದಲ್ಲಿ ಈ ಕವಿತೆ ಓದಲು ಎಂಟೆದೆ ಬೇಕಿತ್ತು ಎಂಬ ಸಂಗತಿಯೇ ಶೌಕತ್ ಅವರನ್ನು ಬಹುವಾಗಿ ಪ್ರಭಾವಿಸಿತ್ತು.

ಮದುವೆ ಈಗಾಗಲೆ ಗೊತ್ತಾಗಿರುವ ಶೌಕತ್‍ಗೆ ಅಭಿನಂದನೆ ಹೇಳುವಂತೆ ಶೌಕತ್ ಅಕ್ಕ ಕೈಫಿ ಕಾಲೆಳೆದಿದ್ದರು. ಕವಿಯ ಮುಖ ಬಿಳುಚಿಕೊಂಡಿತು. ಕೈಫಿ ವಿವಾಹವೂ ಸಮೀಪಿಸಿತ್ತು. ಮದುವೆಯ ನಂತರ ನನ್ನನ್ನು ಮರೆತುಬಿಡುವಿ ಎಂದು ತಮಾಷೆ ಮಾಡಿದ ಕೈಫಿ ಮುಖ ಒಡನೆಯೇ ಗಂಭೀರವಾಯಿತು. ತಾನೂ ಮದುವೆಯಾಗುವುದಿಲ್ಲ ಎಂದು ಸಾರಿದರು. ಅಂದು ರಾತ್ರಿ ಇಬ್ಬರೂ ನಿದ್ರಿಸಲಿಲ್ಲ.

ಮರುದಿನ ಆಕೆಗೊಂದು ಭಾವತೀವ್ರ ಕವಿತೆ ಬರೆದು ಕಳಿಸಿದರು ಕೈಫಿ. ಅನುಮಾನ ಬಂದ ಶೌಕತ್ ತಾಯಿ ಇಬ್ಬರೂ ಕಲೆಯದಂತೆ ಕಣ್ಣಿಟ್ಟರು. ಭಾರ ಹೃದಯದಿಂದ ಮರುದಿನವೇ ಮುಂಬಯಿಗೆ ತೆರಳಿದರು ಕೈಫಿ. ದುಃಖದಿಂದ ಹುಚ್ಚಳಂತಾದರು ಶೌಕತ್. ಕೂಡಲೇ ಪತ್ರವೊಂದನ್ನು ಬರೆದರು- “ಕೈಫಿ, ಹೋಲಿಸಲಾಗದಷ್ಟು ಪ್ರೀತಿಸುತ್ತೇನೆ ನಿನ್ನನ್ನು. ಆಕಾಶ, ಪರ್ವತಗಳು, ನದಿಗಳು, ಜನರು, ದೇವದೂತರು ಕಡೆಗೆ ಪರಮೇಶ್ವರ ಸೇರಿದಂತೆ ಯಾರೆಂದರೆ ಯಾರೂ ಇದನ್ನು ಬದಲಾಯಿಸಲಾರರು… ನಿಮ್ಮವಳು ಮತ್ತು ಕೇವಲ ನಿಮ್ಮವಳಾದ ಶೌಕತ್”. ಕೈಫಿಯಿಂದ ಮಾರೋಲೆ ಬಂದಿತ್ತು. ತಮ್ಮ ರಕ್ತದಿಂದ ಬರೆದಿದ್ದರು.

ಈ ಉರ್ದು ಕವಿಗಳನ್ನು ನಂಬಬೇಡ ಕಣಮ್ಮ… ಕುರಿ ರಕ್ತದಿಂದಲೂ ಬರೆದಿರಬಹುದು ಎಂದು ಮಗಳ ಮನಸು ಬದಲಾಯಿಸಲು ನೋಡಿದ್ದರು ಶೌಕತ್ ತಂದೆ. ಆದರೆ ಮಗಳು ಜಗ್ಗಲಿಲ್ಲ. ಕಡೆಗೆ ಸೋತ ತಂದೆಯೇ ಯಾರಿಗೂ ಹೇಳದೆ ಮಗಳನ್ನು ಮುಂಬಯಿಗೆ ಕರೆದೊಯ್ದರು.

ಅಲ್ಲಿ ಕಾದಿತ್ತು ತೆರೆದ ತೋಳುಗಳ ಸ್ವಾಗತ. ತಡವಿಲ್ಲದೆ ನಡೆದಿತ್ತು ಮದುವೆ. ಭಾರತೀಯ ಕಮ್ಯುನಿಸ್ಟ್ ಪಾರ್ಟಿಯ (ಸಿಪಿಐ) ವತಿಯಿಂದ ಅದರ ನಾಯಕ ಬಿ.ಟಿ.ರಣದಿವೆ ಅವರು ನೂರು ರೂಪಾಯಿ ಉಡುಗೊರೆ ನೀಡಿದ್ದರು. ಈ ಲೈಲಾ ಮಜ್ನೂ ಜೋಡಿಯ ನಾಟಕ ಆರು ತಿಂಗಳೊಳಗೆ ಕೊನೆಯಾಗಿ ಪಕ್ಷಕ್ಕೆ ನೂರು ರುಪಾಯಿ ನಷ್ಟವಾಗುವಂತೆ ಆಗಕೂಡದು ಎಂಬ ಷರತ್ತನ್ನೂ ಅವರು ವಿಧಿಸಿದ್ದರು.

ಕೈಫಿ ಶಿಯಾ ಮತ್ತು ಶೌಕತ್ ಸುನ್ನಿ ಒಳಪಂಗಡಗಳಿಗೆ ಸೇರಿದ್ದರು. ಮದುವೆಗೆ ಎರಡೂ ಕಡೆಯ ಕಾಜಿಗಳ ಅಗತ್ಯವಿತ್ತು. ಆದರೆ ಇಬ್ಬರಿಗೆ ಕೊಡುವಷ್ಟು ಹಣವಿರಲಿಲ್ಲ. ಕೈಫಿ ತಾನೂ ಸುನ್ನಿ ಎಂದು ಸಾರಿದರು. ಒಬ್ಬ ಕಾಜಿಯೇ ಸಾಕಾಯಿತು. ಹಸಿದವರು, ತುಳಿಸಿಕೊಂಡವರಿಗಾಗಿ ಮಾನವೀಯ ತುಡಿತಗಳ ಹೊಸ ಸಮಾಜವನ್ನು ನಿರ್ಮಿಸಲು ಹೊರಟಿದ್ದ ಮುಂಬಯಿಯ ಅಂದಿನ ಎಲ್ಲ ಪ್ರಗತಿಪರರೂ ಈ ಮದುವೆಗೆ ಸಾಕ್ಷಿಗಳಾದರು.

ಮುರಿದ ಮಂಚ, ಪುಸ್ತಕಗಳು- ಪತ್ರಿಕೆಗಳ ಹರಡಿದ್ದ ಪುಟ್ಟ ಕೋಣೆಯಲ್ಲಿ ಮೊದಲ ರಾತ್ರಿ ಕಳೆಯಿತು. ಸಿಪಿಐ ಪೂರ್ಣಾವಧಿ ಕಾರ್ಯಕರ್ತರಾಗಿದ್ದ ಕೈಫಿಗೆ ತಿಂಗಳಿಗೆ ಸಿಗುತ್ತಿದ್ದ ಖರ್ಚಿನ ಹಣ ನಲವತ್ತೈದು ರೂಪಾಯಿ. ಮೂವತ್ತು ಅವರ ಊಟಕ್ಕೆ, ಹತ್ತು ಅವರ ಓಡಾಟಕ್ಕೆ.

ನಟನೆಯಲ್ಲಿ ತರಬೇತಿ ಇಲ್ಲದ ಶೌಕತ್ ಅವರನ್ನು ಹುರಿದುಂಬಿಸಿ ಪೃಥ್ವೀ ಥಿಯೇಟರ್ ಕಡೆಗೆ ಕಳಿಸಿದವರು ಸಿಪಿಐ ಪ್ರಧಾನಕಾರ್ಯದರ್ಶಿ ಪಿ.ಸಿ.ಜೋಶಿ. ಹಕೀಕತ್, ಉಮ್ರಾವ್ ಜಾನ್, ಬಾಝಾರ್, ಗರಂ ಹವಾ, ಸಲಾಂ ಬಾಂಬೆ ಮುಂತಾದ ಚಿತ್ರಗಳಲ್ಲಿ ಅವರ ಅಭಿನಯ ಜೀವಂತವಾಗಿ ಮೂಡಿತ್ತು.

ಅವರು ಅಭಿನಯಿಸಿದ ಮೊದಲ ನಾಟಕ ಇಸ್ಮತ್ ಚುಗ್ತಾಯಿ ಅವರ ಧಾನಿ ಬಾಂಕೇ. ಹೊಸತಾಗಿ ಜನಿಸಿದ್ದ ಸ್ವತಂತ್ರ ದೇಶದ ಸಾಮಾಜಿಕ ನೇಯ್ಗೆಯನ್ನು ಛಿದ್ರಗೊಳಿಸತೊಡಗಿದ್ದ ಹಿಂದೂ-ಮುಸ್ಲಿಂ ದಂಗೆಗಳು ಅದರ ವಸ್ತು ವಿಷಯ. ಭೀಷ್ಮಸಹಾನಿ, ಪೃಥ್ವೀರಾಜ ಕಪೂರ್, ಉಜ್ರಾ ಭಟ್, ಜೊಹ್ರಾ ಸೆಹಗಲ್ ಮುಂತಾದ ಮಹಾರಥಿಗಳಿದ್ದ IPTA ಆಂದೋಲನದ ಭಾಗವಾದರು.

ರಂಗಭೂಮಿಯ ಹೊಸ ಪರಿಭಾಷೆ ಮತ್ತು ಸೌಂದರ್ಯಪ್ರಜ್ಞೆಯ ಶೋಧನೆಯಲ್ಲಿ ತೊಡಗಿದ್ದ ಪ್ರತಿಬದ್ಧ ಯುವನಟರನ್ನು ಬೆನ್ನಿಗಿರಿಸಿಕೊಂಡು ದೇಶಸಂಚಾರ ಮಾಡಿದರು. ಜಾತಿಧರ್ಮ ಪಂಗಡಗಳ ಮಿತಿಗಳನ್ನು ಮೀರಿದ ಕಲೆಯ ಪ್ರತಿಪಾದಕರಾದರು. ನಾಲ್ಕೂ ನಿಟ್ಟಿನ ಬದಲಾವಣೆಗಳನ್ನು ಗ್ರಹಿಸಿ ಅಳವಡಿಸಿಕೊಂಡರು. ಸಿರಿವಂತ ತೌರನ್ನು ತೊರೆದು ಬಡ ಕಮ್ಯುನಿಸ್ಟ್ ಕವಿಯ ಕೈ ಹಿಡಿದರು. ಧನ ದೌಲತ್ತುಗಳಿಗೆ ಬೆನ್ನು ತೋರಿಸಿ, ಸ್ತ್ರೀಪುರುಷರು ಸಮಾನ ಸಖರೆಂದು ತಿಳಿದು ಸಮಾಜಕ್ಕಾಗಿ ಬದುಕುವ ಹೊಸ ಜಗತ್ತನ್ನು ಪ್ರವೇಶಿಸಿದರು. ಅಭಾವ, ಬಡತನದ ನಡುವೆ ಒಲೆ ಉರಿಸುತ್ತ ಮಕ್ಕಳ ಬೆಳೆಸುತ್ತ ಕವಿತೆ, ಸಾಹಿತ್ಯ, ಕ್ರಾಂತಿಯ ಕುರಿತ ಚರ್ಚೆಗೆ ತೆರೆದುಕೊಂಡರು. ಒಂದು ಪೀಳಿಗೆಯ ಹೆಣ್ಣುಮಕ್ಕಳಿಗೆ ದಾರಿ ತೋರಿದ ಬದುಕನ್ನು ಜೀವಿಸಿದರು.

ಅಂದಹಾಗೆ ಸಮಾಜಮುಖೀ ನಟಿ ಶಬಾನಾ ಆಜ್ಮಿ ಮತ್ತು ಆಕೆಯ ಅಣ್ಣ ಚಲನಚಿತ್ರ ಛಾಯಾಗ್ರಾಹಕ ಬಾಬಾ ಆಜ್ಮಿ ಅವರು ಶೌಕತ್ ಮತ್ತು ಕೈಫಿಯವರ ಮಕ್ಕಳು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾನಪದ ಕಲಾವಿದ ಡಿಂಗ್ರಿ ನರಸಪ್ಪ, ಬೆಂಗಳೂರಿನ ಚಂದ್ರಮ್ಮ ಸೇರಿದಂತೆ ಐದು ಜನರಿಗೆ ಬಾಬು ಜಗಜೀವನ್‌ ರಾಮ್‌ ಪ್ರಶಸ್ತಿ

ಹಿರಿಯ ಜಾನಪದ ಕಲಾವಿದ ಡಿಂಗ್ರಿ ನರಸಪ್ಪ, ಬೆಂಗಳೂರಿನ ಚಂದ್ರಮ್ಮ ಸೇರಿದಂತೆ ಐದು ಜನ ಹಿರಿಯ ಸಾಧಕರು 2026ನೇ ಸಾಲಿನ ಬಾಬು ಜಗಜೀವನ್‌ ರಾಮ್‌ ಪ್ರಶಸ್ತಿಗೆ ಭಾಜನರಾಗಿದ್ದಾರೆ. ರಾಯಚೂರು ಜಿಲ್ಲೆಯ ಹಿರಿಯ ದಲಿತ ಹೋರಾಟಗಾರ...

ಗಾಜಾ; ಗೊಂಬೆಯೊಂದಿಗೆ ‘ಅಂತ್ಯಕ್ರಿಯೆ’ ಆಟ ಆಡುವ ಎಳೆಯ ಮಕ್ಕಳ ವಿಡಿಯೋ ವೈರಲ್; ಸುತ್ತಲಿನ ಘಟನೆಯನ್ನು ಪುನರಾವರ್ತಿಸುವ ಮಕ್ಕಳು

ಅಕ್ಟೋಬರ್ 2023 ರಲ್ಲಿ ಇಸ್ರೇಲಿ ಮಿಲಿಟರಿ ದಾಳಿಯನ್ನು ಪ್ರಾರಂಭಿಸಿದ ನಂತರ ಗಾಜಾದಿಂದ ದುಃಖಕರ ದೃಶ್ಯಗಳು ಹೊರಹೊಮ್ಮುತ್ತಿವೆ. ಇತ್ತೀಚಿನ ಒಂದು ಘಟನೆಯಲ್ಲಿ, ಚಿಕ್ಕ ಮಕ್ಕಳು ಅಂತ್ಯಕ್ರಿಯೆಗಾಗಿ ಗೊಂಬೆಯನ್ನು ಹೊತ್ತುಕೊಂಡು ಹೋಗುವುದನ್ನು ಕಾಣಬಹುದು - ಇದು ಅವರು...

ದೆಹಲಿ| ಆಳವಾದ ಚರಂಡಿಗೆ ಬಿದ್ದು ನೈರ್ಮಲ್ಯ ಕಾರ್ಮಿಕ ಸಾವು; ನ್ಯಾಯಕ್ಕೆ ಆಗ್ರಹಿಸಿದ ಮೃತನ ಕುಟುಂಬ

ಮಾರ್ಚ್ 30 ರಂದು ಪೂರ್ವ ದೆಹಲಿಯ ದಿಲ್ಶಾದ್ ಗಾರ್ಡನ್ ಪ್ರದೇಶದಲ್ಲಿ ಸುರಕ್ಷತಾ ಸಾಧನಗಳಿಲ್ಲದೆ ಆಳವಾದ ಚರಂಡಿ ಸ್ವಚ್ಛಗೊಳಿಸುವ ಸಮಯದಲ್ಲಿ ಯುವ ನೈರ್ಮಲ್ಯ ಕಾರ್ಮಿಕ ರಾಹುಲ್ ಎಂಬುವವರು ಸಾವನ್ನಪ್ಪಿದ್ದಾರೆ. ಮಧ್ಯಾಹ್ನ 2:00 ರ ಸುಮಾರಿಗೆ...

ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಆಸ್ಪತ್ರೆಗೆ ದಾಖಲು; ಕಾರ್ಯಕ್ರಮದಲ್ಲಿ ಏಕಾಏಕಿ ಕುಸಿದು ಬಿದ್ದು ಅಸ್ವಸ್ಥ

ಬೆಂಗಳೂರು: ಕರ್ನಾಟಕದ ನಿವೃತ್ತ ಲೋಕಾಯುಕ್ತ ಎನ್‌.ಸಂತೋಷ್‌ ಹೆಗ್ಡೆ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಭಾಷಣದ ವೇಳೆ ಕುಸಿದು ಬಿದ್ದು ಅಸ್ವಸ್ಥರಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಏಪ್ರಿಲ್ 4ರ, ಶುಕ್ರವಾರ ಬೆಂಗಳೂರಿನ ಕೊಂಡಜಿ ಬಸಪ್ಪ ಸಭಾಂಗಣದಲ್ಲಿ...

ಎಸ್‌ಎಸ್‌ಎಲ್‌ಸಿಯಲ್ಲಿ ತೃತೀಯ ಭಾಷೆಗೆ ಗ್ರೇಡ್: ನಿರ್ಧಾರ ಪರಿಶೀಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದ ರಾಜ್ಯಪಾಲ ಗೆಹ್ಲೋಟ್ 

ಬೆಂಗಳೂರು: 10ನೇ ತರಗತಿ ಪರೀಕ್ಷೆಯಲ್ಲಿ ತೃತೀಯ ಭಾಷೆಯ ವಿಷಯಕ್ಕೆ ಅಂಕಗಳನ್ನು ಬದಲಿಸುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ರಾಜ್ಯ ಸರ್ಕಾರವನ್ನು ಕೇಳಿದ್ದಾರೆ. ಸರ್ಕಾರವು ಈ ನಿರ್ಧಾರವನ್ನು "ಸಮಗ್ರವಾಗಿ ಪರಿಶೀಲಿಸಬೇಕು" ಎಂದು ಲೋಕಭವನವು...

ತಿರುಚ್ಚಿ ಪೂರ್ವದ ಪೆರಂಬೂರಿನಲ್ಲಿ ಟಿವಿಕೆ ಸಂಸ್ಥಾಪಕ ವಿಜಯ್ ಸಲ್ಲಿಸಿದ ಅಫಿಡವಿಟ್‌ಗಳಲ್ಲಿ ಹಲವು ವ್ಯತ್ಯಾಸಗಳಿರುವುದಾಗಿ ವರದಿ  

ಚೆನ್ನೈ: ನಟ ಮತ್ತು ಟಿವಿಕೆ ಸಂಸ್ಥಾಪಕ ವಿಜಯ್ ಸಲ್ಲಿಸಿದ ಎರಡು ಪ್ರತ್ಯೇಕ ಚುನಾವಣಾ ಅಫಿಡವಿಟ್‌ಗಳಲ್ಲಿ ವ್ಯತ್ಯಾಸಗಳು ಕಾಣಿಸಿಕೊಂಡಿದ್ದು, ವಿಧಾನಸಭಾ ಚುನಾವಣೆಗೆ ಮುನ್ನ ಕಾನೂನು ಮತ್ತು ರಾಜಕೀಯ ಪರಿಶೀಲನೆಗೆ ಅವಕಾಶ ನೀಡುವ ಸಾಧ್ಯತೆಯಿದೆ. ಪೆರಂಬೂರು ಮತ್ತು...

ಉತ್ತಮ್ ನಗರದಲ್ಲಿ ಶಾಂತಿ ಕಾಪಾಡುವಲ್ಲಿ ದೆಹಲಿ ಪೊಲೀಸರ ಪ್ರಯತ್ನಗಳನ್ನು ಶ್ಲಾಘಿಸಿದ ಎಪಿಸಿಆರ್

ಈದ್ ಅಲ್-ಫಿತರ್, ರಾಮ ನವಮಿ ಮತ್ತು ಹನುಮಾನ್ ಜಯಂತಿ ಸೇರಿದಂತೆ ಧಾರ್ಮಿಕ ಹಬ್ಬಗಳ ಆಚರಣೆಯ ಸಂದರ್ಭದಲ್ಲಿ ರಾಷ್ಟ್ರ ರಾಜಧಾನಿಯ ಉತ್ತಮ್ ನಗರ ಪ್ರದೇಶದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಕಾಪಾಡಿದ್ದಕ್ಕಾಗಿ ನಾಗರಿಕ ಹಕ್ಕುಗಳ ರಕ್ಷಣಾ...

ದಲಿತ ಸಮುದಾಯಕ್ಕೆ ಕ್ಷಮೆಯಾಚಿಸಿದ ನೇಪಾಳದ ಹೊಸ ಸರ್ಕಾರ

ಪ್ರಧಾನಿ ಬಾಲೇಂದ್ರ ಶಾ ಅವರ ನೇಪಾಳದ ಹೊಸ ಸರ್ಕಾರದ 100 ಅಂಶಗಳ ಸುಧಾರಣಾ ಕಾರ್ಯಸೂಚಿಯಡಿಯಲ್ಲಿ, ಮುಂದಿನ 15 ದಿನಗಳ ಒಳಗೆ ದಲಿತರು ಮತ್ತು ಐತಿಹಾಸಿಕವಾಗಿ ಹೊರಗಿಡಲ್ಪಟ್ಟ ಇತರೆ ಸಮುದಾಯಗಳಿಗೆ 'ಔಪಚಾರಿಕ ಕ್ಷಮೆಯಾಚನೆ' ಕೇಳುವುದಾಗಿ...

‘ಯಾರು ಹೆದರುತ್ತಾನೋ ಅವನು ಸತ್ತಂತೆ’: ರಾಘವ್ ಛಡ್ಡಾಗೆ ತೀವ್ರವಾಗಿ ಪ್ರತಿಕ್ರಿಯೆ ನೀಡಿದ ಎಎಪಿ ನಾಯಕ ಸೌರಭ್ ಭಾರದ್ವಾಜ್ 

ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಮತ್ತು ದೆಹಲಿ ಘಟಕದ ಮುಖ್ಯಸ್ಥ ಸೌರಭ್ ಭಾರದ್ವಾಜ್ ಅವರು ವೀಡಿಯೊ ಸಂದೇಶದಲ್ಲಿ ಆಪ್ ಸಂಸದ ರಾಘವ್ ಛಡ್ಡಾ ಅವರು ಸಂಸತ್ತಿನಲ್ಲಿ "ಸಾಫ್ಟ್ ಪಿಆರ್" ನಲ್ಲಿ ತೊಡಗಿದ್ದಾರೆ...

ಚಂಡೀಗಢ ಬಿಜೆಪಿ ಕಚೇರಿ ಸ್ಫೋಟ: ಪಂಜಾಬ್ ಕೌಂಟರ್ ಇಂಟೆಲಿಜೆನ್ಸ್ ಪಡೆಯಿಂದ ಇಬ್ಬರು ಶಂಕಿತರ ಮನೆಗಳ ಮೇಲೆ ದಾಳಿ

ಚಂಡೀಗಢದಲ್ಲಿರುವ ಪಂಜಾಬ್ ಬಿಜೆಪಿ ಕಚೇರಿಯ ಹೊರಗೆ ಸ್ಫೋಟ ನಡೆಸಿದ ಆರೋಪದ ಮೇಲೆ ಇಬ್ಬರು ಶಂಕಿತರ ಮನೆಗಳ ಮೇಲೆ  ಪಂಜಾಬ್ ಪೊಲೀಸರ ಗುಪ್ತಚರ ನಿಗ್ರಹ ದಳವು ಇಂದು ಮುಂಜಾನೆ ದಾಳಿ ನಡೆಸಿದೆ.  ರೋಪರ್ ಜಿಲ್ಲೆಯ ಮೊರಿಂಡಾ ಪ್ರದೇಶದ...