ಜನವರಿ 12 ರಂದು ದೆಹಲಿಯ ರೈತ ಹೋರಾಟದಲ್ಲಿದ್ದ 24 ವರ್ಷದ ಪಂಜಾಬ್ ಮೂಲದ ದಲಿತ ಕಾರ್ಮಿಕ ಹೋರಾಟಗಾರ್ತಿ ನೊದೀಪ್ ಕೌರ್ ಅವರನ್ನು ಪೊಲೀಸರು ಬಂಧಿಸಿದ್ದರು. ಅವರಿಗೆ ಫೆಬ್ರವರಿ 2 ರಂದು ಹರಿಯಾಣದ ಸೋನೆಪತ್ನ ಸೆಷನ್ಸ್ ಕೋರ್ಟ್ ಜಾಮೀನು ನಿರಾಕರಿಸಿತ್ತು. ಪ್ರಸ್ತುತ ಹರಿಯಾಣದ ಕರ್ನಾಲ್ ಜೈಲಿನಲ್ಲಿರುವ ಅವರನ್ನು ಹಿಂಸಿಸಲಾಗುತ್ತಿದೆ ಮತ್ತು ಲೈಂಗಿಕ ಕಿರುಕುಳ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಅವರ ವಿರುದ್ದ ಗಲಭೆ, ಕಾನೂನುಬಾಹಿರ ಸಭೆ, ಸರ್ಕಾರಿ ಅಧಿಕಾರಿಗಳಿಗೆ ಕರ್ತವ್ಯ ನಿರ್ವಹಿಸದಂತೆ ತೊಂದರೆ ನೀಡುವುದು, ಸರ್ಕಾರಿ ಅಧಿಕಾರಿ ಮೇಲೆ ಹಲ್ಲೆ, ಸುಲಿಗೆ, ಕೊಲೆ ಯತ್ನ ಸೇರಿದಂತೆ ಭಾರತೀಯ ದಂಡ ಸಂಹಿತೆ ಹಲವು ಪ್ರಕರಣಗಳನ್ನು ಪೊಲೀಸರು ದಾಖಲಿಸಿದ್ದಾರೆ. ಸೋನಿಪತ್ನ ಕುಂಡ್ಲಿ ಪೊಲೀಸ್ ಠಾಣೆಯ ಎಸ್ಎಚ್ಒ ಇನ್ಸ್ಪೆಕ್ಟರ್ ರವಿ ಕುಮಾರ್ ಹೇಳಿಕೆಯ ಆಧಾರದ ಮೇಲೆ ಈ ಪ್ರಕರಣವನ್ನು ದಾಖಲಿಸಲಾಗಿದೆ.
ಇದನ್ನೂ ಓದಿ: ‘ನನಗಿಂತಲೂ ನೊಂದವರಿದ್ದಾರೆ, ಜೈಲೊಳಗಿನ ರೈತರ ಕುರಿತು ವರದಿ ಮಾಡುವೆ’: ಮಂದೀಪ್ ಪುನಿಯಾ
ಅವರ ಜಾಮೀನು ಅರ್ಜಿಯನ್ನು ಸೆಷನ್ಸ್ ನ್ಯಾಯಾಧೀಶ ಯಶ್ವೀರ್ ಸಿಂಗ್ ರಾಥೋರ್ ವಿಚಾರಣೆ ನಡೆಸಿದ್ದರು. ಪ್ರಕರಣದಲ್ಲಿ ಇನ್ಸ್ಪೆಕ್ಟರ್ ರವಿ ಕುಮಾರ್ ಹೇಳಿಕೆಯಂತೆ, “ಜನವರಿ 12 ರಂದು ತನಗೆ ದೂರವಾಣಿ ಕರೆ ಬಂದಿದ್ದು, ಕೈಗಾರಿಕಾ ಪ್ರದೇಶವಾದ ಕುಂಡ್ಲಿಯಲ್ಲಿನ ಕಾರ್ಖಾನೆ ಸಂಖ್ಯೆ 349 ರಲ್ಲಿ ಲಾಠಿಗಳು ಮತ್ತು ದೊಣ್ಣೆಗಳಂತಹ ಆಯುಧದಾರಿ ಜನರು ಬಲವಂತವಾಗಿ ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆ ಕರೆಯಲ್ಲಿ ದೂರಲಾಗಿತ್ತು. ಅಲ್ಲಿಗೆ ತಲುಪಿದಾಗ, 2-3 ಹುಡುಗಿಯರು ಸೇರಿದಂತೆ 50-60 ವ್ಯಕ್ತಿಗಳು ಲಾಠಿಗಳು ಮತ್ತು ದೊಣ್ಣೆಗಳಿಂದ ಶಸ್ತ್ರಸಜ್ಜಿತರಾಗಿರುವ ಗುಂಪೊಂದು ಇತ್ತು. ಈ ಸಶಸ್ತ್ರ ಗುಂಪು ಪೊಲೀಸ್ ಅಧಿಕಾರಿಗಳ ಮೇಲೆ ಲಾಠಿಗಳಿಂದ ಹಲ್ಲೆ ನಡೆಸಿದೆ ಮತ್ತು ಅವರಲ್ಲಿ ಒಬ್ಬರು ಪೊಲೀಸರ ಬಂದೂಕನ್ನು ಮತ್ತು ಕೇಸ್ ಫೈಲ್ಗಳನ್ನು ಕಸಿದುಕೊಳ್ಳಲು ಪ್ರಯತ್ನಿಸಿದ್ದಾರೆ. ಈ ಗುಂಪನ್ನು ನೊದೀಪ್ ಕೌರ್ ಮುನ್ನಡೆಸುತ್ತಿದ್ದರು” ಎಂದು ಹೇಳಿದ್ದಾರೆ.
ಆದರೆ ನೊದೀಪ್ ಅವರ ವಕೀಲರು, ಯಾವುದೇ ಪ್ರಚೋದನೆ ಇಲ್ಲದೆ ಕಾರ್ಖಾನೆಯ ಬಳಿ ನಿಂತಿರುವಾಗ ಪೊಲೀಸರು, ನೊದೀಪ್ ಸೇರಿದಂತೆ ಕಾರ್ಮಿಕರ ಮೇಲೆ ಹಲ್ಲೆ ನಡೆಸಲಾಗಿತ್ತು ಎಂದು ವಾದಿಸಿದ್ದಾರೆ. ನೊದೀಪ್ ಜನಸಮೂಹವನ್ನು ಮುನ್ನಡೆಸುತ್ತಿದ್ದು ಮತ್ತು ಕುಂಡ್ಲಿಯಲ್ಲಿ ರೈತ ಆಂದೋಲನವನ್ನು ನಡೆಸಲು ಕಾರ್ಖಾನೆಯ ಮಾಲಿಕರಿಂದ ಹಣವನ್ನು ಸುಲಿಗೆ ಮಾಡುತ್ತಿದ್ದರು ಎಂದು ಆರೋಪಿಸಿ ಅವರಿಗೆ ಜಾಮೀನು ನೀಡಲು ನ್ಯಾಯಾಲಯವು ನಿರಾಕರಿಸಿದೆ.
ಇದನ್ನೂ ಓದಿ: ಪೊಲೀಸರು ಮುಳ್ಳು ನೆಟ್ಟ ಜಾಗದಲ್ಲಿಯೇ ಹೂವಿನ ಗಿಡ ನೆಟ್ಟ ರೈತನಾಯಕ ರಾಕೇಶ್ ಟಿಕಾಯತ್!
ನೊದೀಪ್ ವಿರುದ್ಧದ ಆರೋಪಗಳು ಗಂಭೀರ ಸ್ವರೂಪದ್ದಾಗಿವೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದ್ದು, ಹಣ ಮತ್ತು ಬೆದರಿಕೆಗಳಿಗೆ ಸಂಬಂಧಿಸಿದಂತೆ ಅವರ ವಿರುದ್ಧ ಮತ್ತೊಂದು ಎಫ್ಐಆರ್ ಬಾಕಿ ಇದೆ ಎಂದು ನ್ಯಾಯಾಲಯ ಹೇಳಿದೆ. ತನಿಖೆ ಇನ್ನೂ ಆರಂಭಿಕ ಹಂತದಲ್ಲಿದೆ ಮತ್ತು ಉಳಿದ ಆರೋಪಿಗಳನ್ನು ಇನ್ನೂ ಬಂಧಿಸಲಾಗಿಲ್ಲ ಮತ್ತು ಅಪರಾಧದ ದೃಷ್ಟಿಯಿಂದ, “ಅರ್ಜಿದಾರಳು ಜಾಮೀನಿಗೆ ಅರ್ಹಳಲ್ಲ ಮತ್ತು ಜಾಮೀನು ಅರ್ಜಿಯನ್ನು ವಜಾಗೊಳಿಸಲಾಗಿದೆ” ಎಂದು ನ್ಯಾಯಾಲಯವು ಹೇಳಿದೆ.
ನ್ಯಾಯಾಲಯದ ಆದೇಶವನ್ನು ಇಲ್ಲಿ ಓದಬಹುದು.ಕೃಪೆ: ಸಬ್ರಂಗ್
ಘಟನೆಯ ಹಿನ್ನಲೆಯೇನು?
24 ವರ್ಷದ ನೊದೀಪ್ ಕೌರ್ ಸುಮಾರು ಒಂದು ತಿಂಗಳಿನಿಂದ ಕರ್ನಾಲ್ ಜೈಲಿನಲ್ಲಿದ್ದು, ಅದೇ ಜೈಲಿನಲ್ಲಿ ಅವರ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಅವರ ಕುಟುಂಬ ಆರೋಪಿಸಿದೆ. ಪಂಜಾಬ್ ಮೂಲದ ಕಾರ್ಮಿಕ ಸಂಘದ ಕಾರ್ಯಕರ್ತೆಯಾಗಿರುವ ದಲಿತೆ ನೊದೀಪ್ ಕೌರ್ ಮಜ್ದೂರ್ ಅಧಿಕಾರ ಸಂಘಟನ್ (ಎಂಎಎಸ್) ನಲ್ಲಿ ಸಕ್ರಿಯವಾಗಿದ್ದಾರೆ. ಅವರು ಡಿಸೆಂಬರ್ 2020 ರಿಂದ ಸಿಂಘು ಗಡಿಯಲ್ಲಿ ರೈತರ ಆಂದೋಲನದಲ್ಲಿ ಭಾಗವಹಿಸುತ್ತಿದ್ದರು.
ರೈತ ಪ್ರತಿಭಟನೆಯನ್ನು ಬೆಂಬಲಿಸಿ ಕುಂಡ್ಲಿ ಕೈಗಾರಿಕಾ ಪ್ರದೇಶದ ಕಾರ್ಖಾನೆಯ ಕಾರ್ಮಿಕರ ಗುಂಪಿನೊಂದಿಗೆ ನೊದೀಪ್ ಕೌರ್ ಸಿಂಘುವಿನಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದರು. ಅವರು, ಕಾರ್ಮಿಕರು ಸಹ ರೈತರಂತೆ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ, ಕಾರ್ಮಿಕರು ಕಾರ್ಖಾನೆಯ ಮಾಲಿಕರಿಂದ ಶೋಷಣೆಗೆ ಒಳಗಾಗಿದ್ದಾರೆ, ಅವರ ವೇತನವನ್ನು ತಡೆಹಿಡಿಯಲಾಗಿದೆ ಮತ್ತು ಅವರನ್ನು ಉದ್ಯೋಗಗಳಿಂದ ಕಿತ್ತು ಎಸೆಯಲಾಗಿದೆ ಎಂದು ಆರೋಪಿಸಿದ್ದರು. ಕಾರ್ಮಿಕರ ಮೇಲಿನ ದೌರ್ಜನ್ಯವು ಕಾರ್ಮಿಕರು ರೈತ ಆಂದೋಲನವನ್ನು ಬೆಂಬಲಿಸಲು ಪ್ರಾರಂಭಿಸಿದಾಗಿನಿಂದ ಹೆಚ್ಚಾಗಿದೆ ಎಂದು ಆರೋಪಿಸಿದ್ದಾರೆ. ಕುಂಡ್ಲಿ ಕೈಗಾರಿಕಾ ಸಂಘ ಮತ್ತು ಹರಿಯಾಣ ಪೊಲೀಸರ ಸಶಸ್ತ್ರ ಕಾವಲುಗಾರರು ಅವರನ್ನು ಗುರಿಯಾಗಿಸಿ ಸುಳ್ಳು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಇದನ್ನೂ ಓದಿ: ದೆಹಲಿ ಗಡಿಯಲ್ಲಿ 50,000 ಪೊಲೀಸರ ನಿಯೋಜನೆ – ಸಂಯಮ ಕಾಪಾಡಿ ಎಂದ ವಿಶ್ವಸಂಸ್ಥೆ
ಜನವರಿ 12, 2021 ರಂದು ಹರಿಯಾಣ ಪೊಲೀಸರು ಸಿಂಘು ಗಡಿಯ ನೊದೀಪ್ ಇದ್ದ ಟೆಂಟ್ಗೆ ಬಂದು ಅವರನ್ನು ಬಂಧಿಸಿದ್ದರು. ಹರಿಯಾಣ ಪೊಲೀಸರು ನೊದೀಪ್ಳನ್ನು ಗುರಿಯಾಗಿಸಿಕೊಂಡು ತನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ನೊದೀಪ್ ಸಹೋದರಿ ರಾಜ್ವೀರ್ ಕೌರ್ ಆರೋಪಿಸಿದ್ದಾರೆ.
“ನಾನು ಆಕೆಯನ್ನು ಬಂಧನವಾದ ಮಾರನೇ ದಿನವೇ ಕರ್ನಲ್ ಜೈಲಿನಲ್ಲಿ ಭೇಟಿಯಾದೆ. ಆಕೆ ತನ್ನ ಮೇಲೆ ನಡೆದ ದೌರ್ಜನ್ಯದ ಕುರಿತು ಹೇಳಿದಳು. ಪುರುಷ ಪೊಲೀಸರು ಭೀಕರವಾಗಿ ಥಳಿಸಿದ್ದರು. ಆಕೆಯ ಗುಪ್ತಾಂಗಗಳ ಮೇಲೂ ಗಾಯದ ಗುರುತುಗಳಿವೆ. ಅವಳಿಗೆ ನಾವು ನೀಡಿರುವ ಔಷಧಿಗಳನ್ನು ಸಹ ಪೊಲೀಸರು ನೀಡಲಿಲ್ಲ. ಠಾಣೆಯ ಎಸ್ಎಚ್ಒ ಅವಳನ್ನು ಗ್ಯಾಂಗ್ ಲೀಡರ್ ಆಗಿ ತೋರಿಸಲು ಬಯಸಿದ್ದಾರೆ” ಎಂದು ರಾಜ್ವೀರ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಸಬ್ರಂಗ್ ವರದಿ ಮಾಡಿದೆ.
“ಆಕೆಗೆ ಕೇವಲ 23 ವರ್ಷ, 12 ನೇ ತರಗತಿ ಪೂರ್ಣಗೊಂಡಿದೆ ಮತ್ತು ದೆಹಲಿ ವಿಶ್ವವಿದ್ಯಾಲಯಕ್ಕೆ ಪದವಿಪೂರ್ವ ವಿದ್ಯಾರ್ಥಿಯಾಗಿ ಅರ್ಜಿ ಸಲ್ಲಿಸಲು ಯೋಜಿಸುತ್ತಿದ್ದಳು. ಅವಳನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಇದರ ವಿರುದ್ದ ಹೋರಾಡುತ್ತೇವೆ” ಎಂದು ರಾಜ್ವೀರ್ ಕೌರ್ ಹೇಳಿದ್ದಾರೆ.
ಇದನ್ನೂ ಓದಿ: ‘ಕಾಣೆಯಾದವರ’ ಪರ ಹೋದವರನ್ನೂ ಸಿಲುಕಿಸುತ್ತಿರುವ ದೆಹಲಿ ಪೊಲೀಸರು: ವಕೀಲರಿಂದ ಫೆ. 8ಕ್ಕೆ ಪ್ರತಿಭಟನೆ
ನೋದೀಪ್ ಕೌರ್ ಬಿಡುಗಡೆಗೆ ಆಗ್ರಹ
ನೋದೀಪ್ ಕೌರ್ ಬಿಡುಗಡೆಗೆ ಆಗ್ರಹಿಸಿ ಸಿಟಿಜನ್ಸ್ ಫಾರ್ ಜಸ್ಟೀಸ್ ಅಂಡ್ ಪೀಸ್ (ಸಿಜೆಪಿ) ಆನ್ಲೈನ್ ಅರ್ಜಿಯನ್ನು ಪ್ರಾರಂಭಿಸಿದೆ. ಸಿಜೆಪಿಯು ತನ್ನ ಅರ್ಜಿಯಲ್ಲಿ ನೊದೀಪ್ ಅವರನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸುವುದಲ್ಲದೆ, ಅವರ ವಿರುದ್ಧದ ಎಲ್ಲಾ ಆರೋಪಗಳನ್ನು ಕೈಬಿಡಬೇಕು ಎಂದು ಆಗ್ರಹಿಸಿದೆ.
ಅರ್ಜಿಗೆ ಸಹಿ ಹಾಕುವವರು, ಕರ್ನಾಲ್ ಜೈಲು ಅಧಿಕಾರಿಗಳಿಗೆ ಪತ್ರ ಬರೆದು ನೊದೀಪ್ ವಿರುದ್ಧದ ದೌರ್ಜನ್ಯವನ್ನು ಪ್ರತಿಭಟಿಸುವಂತೆ ಸಿಜೆಪಿ ಒತ್ತಾಯಿಸಿದೆ. ಚೇಂಜ್.ಆರ್ಗ್ನಲ್ಲಿರುವ ಅರ್ಜಿಯನ್ನು ಇಲ್ಲಿ ಸಹಿ ಮಾಡಬಹುದು.
ಇದನ್ನೂ ಓದಿ: ಬಾಲಿವುಡ್ನಲ್ಲಿರುವವರಿಗಿಂತ ಗಟ್ಟಿಯಾದ ಬೆನ್ನುಮೂಳೆಯಿದೆ – ಗ್ರೇಟಾ ಬಗ್ಗೆ ನಟಿ ರಮ್ಯಾ ಟ್ವೀಟ್