ನ್ಯಾಯಾಂಗದ ಬಂಧುಗಳ ಹಲವು ಪ್ರಯತ್ನಗಳ ಬಳಿಕವೂ ದೆಹಲಿ ಪೊಲೀಸರ ದೌರ್ಜನ್ಯ ಮತ್ತು ಶೋಷಣೆ ಮುಂದುವರೆದಿದೆ. ಮುಗ್ದ ಜನ/ರೈತರ ಮೇಲೆ ಸುಳ್ಳು ಕೇಸುಗಳನ್ನು ಹಾಕಲಾಗುತ್ತಿದೆ ಮತ್ತು ನೂರಾರು ಜನರನ್ನು ಸುಪ್ರೀಂ ಕೋರ್ಟ್ ಮಾರ್ಗಸೂಚಿಯನ್ನು ಮತ್ತು ಕಾನೂನಿನ ನಿಯಮಗಳನ್ನು ಅನುಸರಿಸದೆ ಕಾನೂನು ಬಾಹಿರವಾಗಿ ವಶಕ್ಕೆ ತೆಗೆದುಕೊಳ್ಳಲಾಗುತ್ತಿದೆ ಎಂದು ಆಲ್ ಇಂಡಿಯಾ ಲೀಗಲ್ ಫ್ರಟರ್ನಿಟಿ ಫಾರ್ ಫಾರ್ಮರ್ಸ್ ವೇದಿಕೆ ಹೇಳಿಕೆ ನೀಡಿದೆ.
ರೈತರ ಪರವಾಗಿ ಯಾರೇ ದನಿ ಎತ್ತಿದರೂ ಅವರ ವಿರುದ್ಧ ಸುಳ್ಳು ಕೇಸುಗಳನ್ನು ಹಾಕಲಾಗುತ್ತಿದೆ. ಇದಕ್ಕೆ ಅಂತಾರಾಷ್ಟ್ರೀಯ ವ್ಯಕ್ತಿಗಳು ಹೊರತಾಗಿಲ್ಲ. ಈ ಬೆಳವಣಿಗೆ ದೇಶದ ಪ್ರಜಾಸತ್ತಾತ್ಮಕ ವರ್ಚಸ್ಸಿಗೆ ಧಕ್ಕೆ ಉಂಟು ಮಾಡುತ್ತದೆ ಎಂದು ವೇದಿಕೆಯ ವಕೀಲರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ದೆಹಲಿ ಪೊಲೀಸರು ಮತ್ತು ಕೇಂದ್ರ ಸರ್ಕಾರ ತಮ್ಮ ಈ ಕಾನೂನು ಬಾಹಿರ ನಡೆಗಳಿಂದ ಅಂತಾರಾಷ್ಟ್ರೀಯ ಮಾಧ್ಯಮಗಳಿಗೆ ತಪ್ಪು ಸಂದೇಶವನ್ನು ರವಾನಿಸುತ್ತಿವೆ. ಹಾಗಾಗಿ ವಕೀಲ ಬಂಧುಗಳು ಬಹಿರಂಗವಾಗಿ ರೈತರ ಬೆಂಬಲಕ್ಕೆ ನಿಂತಿದ್ದಾರೆ. ಫೆ. 8ರಂದು ಮಧ್ಯಾಹ್ನ 2 ಗಂಟೆಗೆ ದೆಹಲಿಯ ಪೊಲೀಸ್ ಕೇಂದ್ರ ಕಚೇರಿಯ ಎದುರು ಧರಣಿ ನಡೆಸಲು ತೀರ್ಮಾನಿಸಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಧರಣಿಯಲ್ಲಿ ದೇಶದ ಎಲ್ಲ ವಕೀಲ ಸಂಘಟನೆಗಳು ಪಾಲ್ಗೊಳ್ಳಬೇಕು ಮತ್ತು ಭಾರತದ ರೈತರೊಂದಿಗೆ ನಿಂತು ಒಗ್ಗಟ್ಟು ಪ್ರದರ್ಶಿಸಬೇಕು. ಅಷ್ಟೇ ಅಲ್ಲ, ರೈತರ ಹೋರಾಟದ ವಿಷಯದಲ್ಲಿ ಸತ್ಯ ಪಕ್ಷಪಾತಿಗಳಾಗಿ ಮಾಡಿದ ಮುಕ್ತ ಹಾಗೂ ನಿರ್ಭೀತ ಪತ್ರಕರ್ತರಿಗೂ ಬೆಂಬಲ ಸೂಚಿಸಬೇಕು ಎಂದು ಕರೆ ನೀಡಿದೆ.
ಆಲ್ ಇಂಡಿಯಾ ಲೀಗಲ್ ಫ್ರಟರ್ನಿಟಿ ಫಾರ್ಮರ್ಸ್ನ ಸದಸ್ಯರ ಸಂಪರ್ಕ ಸಂಖ್ಯೆಗಳು ಹೀಗಿವೆ: 98158140429, 9815518528, 7015610207
ಇದನ್ನೂ ಓದಿ: ರೈತ ಹೋರಾಟ: ನಾಳೆಯ ‘ಚಕ್ಕಾ ಜಾಮ್’ ರಸ್ತೆ ತಡೆ ಪ್ರತಿಭಟನೆ ಹೇಗಿರಲಿದೆ?