Homeಕರ್ನಾಟಕಶಿರಾ ಉಪಚುನಾವಣೆ : ಹೊಸ ನಾಣ್ಯ ನಡೆಯೋಲ್ಲ ಅಂತಾರೆ ಜನ

ಶಿರಾ ಉಪಚುನಾವಣೆ : ಹೊಸ ನಾಣ್ಯ ನಡೆಯೋಲ್ಲ ಅಂತಾರೆ ಜನ

ನೋಡಿ ಸ್ವಾಮಿ, ಶಿರಾ ಕ್ಷೇತ್ರದಲ್ಲಿ ಹಳೆ ಹುಲಿಗಳು ಇದ್ದರೆ ಮಾತ್ರ ಮತಗಳು ಬೀಳುತ್ತವೆ. ಇಲ್ಲಿ ಹೊಸಬರು ಮತ್ತು ಹೊಸ ನಾಣ್ಯಗಳು ಚಲಾವಣೆಯಾಗುವುದಿಲ್ಲ. ಕ್ಷೇತ್ರದ ಜನ ನಾಮಪತ್ರ ಸಲ್ಲಿಸುವವರೆಗೂ ಸುಮ್ಮನೆ ಲೆಕ್ಕಾಚಾರ ಮಾಡುತ್ತಾರೆ.

- Advertisement -
- Advertisement -

ಶಿರಾ ಕ್ಷೇತ್ರದ ಉಪಚುನಾವಣೆ ಘೋಷಣೆಗೆ ಕೆಲವೇ ದಿನಗಳು ಬಾಕಿ ಇವೆ. ಬಹುತೇಕ ಮುಂದಿನ ವಾರದೊಳಗೆ ದಿನಾಂಕ ಘೋಷಣೆಯಾಗುವ ಸಾಧ್ಯತೆಯಿದೆ. ಶಾಸಕ ಸತ್ಯನಾರಾಯಣ ನಿಧನದಿಂದ ತೆರವಾಗಿರುವ ಈ ಕ್ಷೇತ್ರವನ್ನು ತನ್ನದಾಗಿಸಿಕೊಳ್ಳಲು ಮೂರೂ ಪಕ್ಷಗಳು ತೀವ್ರ ಕಸರತ್ತು ನಡೆಸಿವೆ. ಈ ಹಿನ್ನೆಲೆಯಲ್ಲಿ ಚುನಾವಣೆ ಘೋಷಣೆಗೂ ಮುನ್ನವೇ ಪ್ರಚಾರ ಬಿರುಸಾಗಿಯೇ ಸಾಗಿದೆ. ಮೂರು ಪಕ್ಷಗಳ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಪ್ರಚಾರ ಕಾರ್ಯ ನಡೆಸುತ್ತಿದ್ದು, ಗುಂಪು ಚರ್ಚೆಗೂ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಘೋಷಣೆಯಾಗಿದೆ. ಆದರೆ ಜೆಡಿಎಸ್ ಮತ್ತು ಬಿಜೆಪಿ ಪಕ್ಷದಿಂದ ಯಾರು ಸ್ಪರ್ಧಿಸುತ್ತಾರೆಂಬ ಸ್ಪಷ್ಟ ಚಿತ್ರಣ ಇದುವರೆಗೂ ಗೋಚರಿಸಿಲ್ಲ. ಹೀಗಾಗಿ ಈ ಎರಡೂ ಪಕ್ಷಗಳಿಗೆ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಿನ ವಿಷಯವಾಗಿದೆ. ಬಿಜೆಪಿ ಮತ್ತು ಜೆಡಿಎಸ್ ನಲ್ಲಿ ದಿನಕ್ಕೊಬ್ಬ ಆಕಾಂಕ್ಷಿಗಳ ಹೆಸರು ಚಾಲ್ತಿಗೆ ಬರುತ್ತಲೇ ಇವೆ.

ಬಿಜೆಪಿ ಶಿರಾದ ಮದಲೂರು ಕೆರೆಗೆ ಹೇಮಾವತಿ ನೀರು ಹರಿಸುವ ವಿಷಯವನ್ನು ಮುನ್ನೆಲೆಗೆ ತಂದಿತು. ಅದು ಉರುಳಿಸಿದ ದಾಳ ಬಿಜೆಪಿಗೆ ಮುಳುವಾಯಿತು. ಕ್ಷೇತ್ರದ ಮತದಾರರ ಆಕ್ರೋಶಕ್ಕೆ ಗುರಿಯಾಗಬೇಕಾಯಿತು. ಇದು ಜನರಲ್ಲಿ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ. ಅದೇ ಕಾರಣಕ್ಕಾಗಿಯೇ ಕ್ಷೇತ್ರದ ಜನ ಮೊದಲು ಮದಲೂರು ಕೆರೆಗೆ ನೀರು ಹರಿಸಿ, ಬಳಿಕ ಮತ ಕೇಳಲು ಬನ್ನಿ ಎಂದು ಅಭ್ಯರ್ಥಿಗಳಿಗೆ ಸವಾಲು ಹಾಕಿದ್ದಾರೆ. ಜನರ ಈ ಸವಾಲನ್ನು ಸ್ವೀಕರಿಸಲು ಯಾವ ಅಭ್ಯರ್ಥಿಯೂ ಮುಂದೆ ಬಂದಿಲ್ಲ. ಕೇವಲ ಮತಕ್ಕಾಗಿ ಮದಲೂರು ಕೆರೆಗೆ ನೀರು ಹರಿಸುವ ವಿಷಯವನ್ನು ಪ್ರಸ್ತಾಪಿಸಿದರೆ ಜನ ಕಣ್ಣು ಮುಚ್ಚಿ ಓಟು ಹಾಕುತ್ತಾರೆಂಬ ಭ್ರಮೆಯನ್ನು ಬಿಡಬೇಕು ಎನ್ನುತ್ತಾರೆ ಕ್ಷೇತ್ರದ ಮತದಾರರು.

ಇದನ್ನೂ ಓದಿ: ಶಿರಾದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲ: ಸುರೇಶ್ ಗೌಡ ಹೇಳಿಕೆಗೆ ವ್ಯಾಪಕ ವಿರೋಧ

ಸ್ಥಳೀಯ ಮುಖಂಡ ರಾಚಪ್ಪ ನಾನುಗೌರಿ.ಕಾಂ ಜೊತೆ ವಸ್ತುಸ್ಥಿತಿಯನ್ನು ಹಂಚಿಕೊಂಡರು.”ಬಿಜೆಪಿ ಸರ್ಕಾರದ ಬಗ್ಗೆ ಜನ ಬೇಸತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನರ ಸಮಸ್ಯೆ-ನೋವು ಆಲಿಸುತ್ತಿಲ್ಲ. ನದಿ ಜೋಡಣೆ, ಕಪ್ಪುಹಣ, ಭ್ರಷ್ಟಾಚಾರ ನಿರ್ಮೂಲನೆ ಮೊದಲಾದ ವಿಷಯಗಳನ್ನು ಪ್ರಸ್ತಾಪಿಸಿ ಕಾಂಗ್ರೆಸ್‌ಗೆ 60 ವರ್ಷ ಆಳ್ವಿಕೆಗೆ ಅವಕಾಶ ಕೊಟ್ಟಿದ್ದೀರಿ. ನಮಗೆ 6 ವರ್ಷ ಕೊಡಿ ಎಂದು ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂತು. ಮೋದಿ ಪ್ರಧಾನಿ ಆದರು. ಜನರ ಪರವಾದ ಯೋಜನೆಗಳನ್ನೇ ಜಾರಿಗೊಳಿಸಲಿಲ್ಲ. ಅವರು ಕೊಟ್ಟ ಭರವಸೆಗಳು ನನ್ನ ಕಿವಿಯಲ್ಲಿ ಗುಯ್ ಗುಡುತ್ತಿವೆ. ಏನೂ ಕೆಲಸ ಆಗಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.

“ಶಿರಾ ಕ್ಷೇತ್ರಕ್ಕೆ ಬಿಜೆಪಿ ಏನು ಮಾಡಿದೆ. ಕಳೆದ ಒಂದು ವರ್ಷದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅಭಿವೃದ್ಧಿ ಕೆಲಸಗಳನ್ನೇ ಮಾಡಿಲ್ಲ. ಶಾಸಕ ಬಿ.ಸತ್ಯನಾರಾಯಣ್ ಅವರಿದ್ದಾಗ ಜನರ ಸಮಸ್ಯೆಗಳಿಗೆ ಸ್ಪಂದಿಸಿದರು. ಬಗರ್ ಹುಕುಂ ಸಾಗುವಳಿದಾರರಿಗೆ ಭೂಮಿ ಹಂಚಿಕೆ ಮಾಡಿದರು. ಬಡವರ ನೋವಿಗೆ ಮರುಗುತ್ತಿದ್ದರು. ಕೆಲಸ ಮಾಡಿಕೊಡುತ್ತಿದ್ದರು. ಮಾಜಿ ಸಚಿವ ಟಿ.ಬಿ.ಜಯಚಂದ್ರ ಕೂಡ ಸಾಕಷ್ಟು ಕೆಲಸ ಮಾಡಿದ್ದಾರೆ. ನೀರಾವರಿ ಯೋಜನೆಗಳನ್ನು ಶಿರಾಕ್ಕೆ ತಂದಿದ್ದಾರೆ. ಈಗ ಬಿಜೆಪಿ ಸರ್ಕಾರ ಇದೆ  ನಿಜ. ಹಾಗೆಂದು ಎಸ್.ಆರ್. ಗೌಡಗೆ ಟಿಕೆಟ್ ನೀಡಿದರೆ ಏನು ಕೆಲಸ ಮಾಡಬಲ್ಲ? ಅವರು ಕೇವಲ ಕಳ್ಳಂಬೆಳ್ಳ ಹೋಬಳಿಗೆ ಮಾತ್ರ ಸೀಮಿತರಾಗಿದ್ದಾರೆ” ಎನ್ನುತ್ತಾರೆ ರಾಚಪ್ಪ.

ಇದನ್ನೂ ಓದಿ: ಶಿರಾ ಉಪಚುನಾವಣೆ: ದೇವೇಗೌಡ, ಕುಮಾರಸ್ವಾಮಿ ಸ್ಪರ್ಧಿಸಿದರೂ ಜಯಚಂದ್ರ ಗೆಲುವು ನಿಶ್ಚಿತ- ಕೆ.ಎನ್.ರಾಜಣ್ಣ

ಬಿಜೆಪಿ, ಜೆಡಿಎಸ್ ಪಕ್ಷಗಳು ದೇವಾಲಯಗಳಿಗೆ ಹಣ ನೀಡುತ್ತಿವೆ. ಗೌಡಗೆರೆ ಹೋಬಳಿಯಲ್ಲಿ ಜೆಡಿಎಸ್ ಮುಖಂಡ ಹಾಗೂ ಜಿಲ್ಲಾ ಪಂಚಾಯತ್ ಅಧ್ಯಕ್ಷೆಯ ಪತಿ ಕಲ್ಕೆರೆ ರವಿ ಕುಮಾರ್ ಸುಮಾರು 25 ದೇವಾಲಯಗಳ ಗೋಪುರ ನಿರ್ಮಾಣ, ಪ್ರಾಂಗಣ ನಿರ್ಮಾಣ ಮಾಡಿಸಿಕೊಟ್ಟಿದ್ದಾರೆ. ಜನರ ಒಲವು ಅವರ ಪರವಾಗಿದೆ. ಈಗ ಬಿಜೆಪಿ ದೇವಾಲಯಗಳಿಗೆ ಹಣ ಹಂಚಿಕೆ ಮಾಡುತ್ತಿದೆ ಎಂಬ ಮಾತುಗಳು ಚರ್ಚೆಯಾಗುತ್ತಿವೆ ಎನ್ನುತ್ತಾರೆ ಕ್ಷೇತ್ರದ ಜನ.

“ನೋಡಿ ಸ್ವಾಮಿ, ಶಿರಾ ಕ್ಷೇತ್ರದಲ್ಲಿ ಹಳೆ ಹುಲಿಗಳು ಇದ್ದರೆ ಮಾತ್ರ ಮತಗಳು ಬೀಳುತ್ತವೆ. ಇಲ್ಲಿ ಹೊಸಬರು ಮತ್ತು ಹೊಸ ನಾಣ್ಯಗಳು ಚಲಾವಣೆಯಾಗುವುದಿಲ್ಲ. ಕ್ಷೇತ್ರದ ಜನ ನಾಮಪತ್ರ ಸಲ್ಲಿಸುವವರೆಗೂ ಸುಮ್ಮನೆ ಲೆಕ್ಕಾಚಾರ ಮಾಡುತ್ತಾರೆ. ಆನಂತರವೇ ಯಾರು ಸಮರ್ಥರು ಎಂಬುದನ್ನು ತೀರ್ಮಾನಿಸಿ ಒಮ್ಮತಕ್ಕೆ ಬಂದು ಮತ ಚಲಾಯಿಸುತ್ತಾರೆ. ತಕ್ಷಣವೇ ಈ ಕ್ಷೇತ್ರದ ಜನ ಗುಟ್ಟು ಬಿಟ್ಟುಕೊಡುವುದಿಲ್ಲ. ಬಿಜೆಪಿ ಹೊಸಬರನ್ನು ತಂದು ನಿಲ್ಲಿಸಿದರೆ ಬೀಳುವ ಮತಗಳು ಮತ್ತೊಂದು ಕಡೆ ಚಲಾವಣೆಗೊಳ್ಳುತ್ತವೆ” ಇವು ಕ್ಷೇತ್ರದ ಮತದಾರರ ಆಂತರ್ಯದ ಮಾತುಗಳು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ, ಕಾರ್ಮಿಕ ವಿರೋಧಿ ತಿದ್ದುಪಡಿ ಕಾಯ್ದೆಗಳು ಮತ್ತು ಸುಗ್ರೀವಾಜ್ಞೆಗಳನ್ನು ಅಂಗೀಕರಿಸಿವೆ. ರೈತ, ಕಾರ್ಮಿಕ, ದಲಿತ ಸಂಘಟನೆಗಳು ರೈತ ಕಾರ್ಮಿಕ ಮಸೂದೆಗಳನ್ನು ವಾಪಸ್ ಪಡೆಯುವಂತೆ ಹೋರಾಟ ಮಾಡುತ್ತಿವೆ. ಇದು ಜನರ ಮೇಲೆ ಪರಿಣಾಮ ಬೀರಿದ್ದು ಮತಗಳು ಕೂಡ ಆಡಳಿತ ಪಕ್ಷಕ್ಕೆ ವ್ಯತಿರಿಕ್ತವಾಗಿ ಬೀಳಲಿವೆ ಎಂದು ವಿಶ್ಲೇಷಿಸಲಾಗುತ್ತಿದೆ.


ಇದನ್ನೂ ಓದಿ: ಶಿರಾ ಉಪಚುನಾವಣೆ: ಪಕ್ಷಕ್ಕೆ ಸತ್ವಪರೀಕ್ಷೆಯಾಗಿದ್ದು, ಚುನಾವಣೆ ಗೆಲ್ಲಲೇಬೇಕು -ಎಚ್.ಡಿ.ಕೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...