ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ವಿರುದ್ಧ ಸಾಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರನ್ನು ರದ್ದು ಪಡಿಸುವಂತೆ ಮತ್ತು ದೂರು ದಾಖಲಿಸಿದ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡುವಂತೆ ಆಗ್ರಹಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.
ಸೋನಿಯಾ ಗಾಂಧೀಜಿ ಸಂಸದರಾಗಿರುವುದರಿಂದ ಮತ್ತು ಕಾಂಗ್ರೆಸ್ ಅಧ್ಯಕ್ಷರಾಗಿ ದೇಶದ ಜನರ ಹಿತಕ್ಕಾಗಿ ಪಿಎಂ ಕೇರ್ ನಿಧಿಯನ್ನು ಬಳಸುವಂತೆ ಪ್ರಧಾನ ಮಂತ್ರಿಯನ್ನು ಒತ್ತಾಯಿಸುವ ಉದ್ದೇಶದಿಂದ ಟ್ವೀಟ್ ಮಾಡಿದ್ದರು. ದುರದೃಷ್ಟವಶಾತ್, ಇದನ್ನು ಬಿಜೆಪಿ ನಾಯಕತ್ವ ತಪ್ಪಾಗಿ ಅರ್ಥೈಸಿ ಹಾಗೂ ಸುಳ್ಳು ಮಾಹಿತಿಯ ಆಧಾರದ ಮೇಲೆ ಅವರ ಮೇಲೆ ದೂರು ದಾಖಲಿಸಿದೆ ಎಂದು ಡಿ.ಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದು ಆರೋಗ್ಯಕರ ಟೀಕೆಯನ್ನು ಹತ್ತಿಕ್ಕುವ ಪ್ರಯತ್ನವಾಗಿದ್ದು, ಕಾನೂನಿನ ದುರುಪಯೋಗವಾಗಿದೆ. ಈ ದೂರನ್ನು ರದ್ದುಗೊಳಿಸಿ ನ್ಯಾಯ ಮತ್ತು ಧರ್ಮದ ಹಿತದೃಷ್ಟಿಯಿಂದ ಕಾನೂನಿನ ಪ್ರಕ್ರಿಯೆಯನ್ನು ದುರುಪಯೋಗಪಡಿಸಿಕೊಂಡಿದ್ದಕ್ಕಾಗಿ ಎಫ್ಐಆರ್ ದಾಖಲಿಸಿದ ಪೊಲೀಸ್ ಅಧಿಕಾರಿಯ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಹಾಗೂ ಅವರನ್ನು ಅಮಾನತು ಮಾಡುವಂತೆ ಅವರು ಒತ್ತಾಯಿಸಿದ್ದಾರೆ.
ದೂರು ಸಲ್ಲಿಸಿರುವ ವ್ಯಕ್ತಿಯು ಬಿಜೆಪಿ ಸಕ್ರಿಯ ಸದಸ್ಯರಾಗಿದ್ದಾರೆ. ಅವರು ರಾಜಕೀಯ ಪ್ರೇರಿತವಾಗಿ ನೀಡಿದ ದೂರಿನ ಸತ್ಯಸತ್ಯಾತೆಯನ್ನು ಪರಿಶೀಲಿಸದೆ ಎಫ್ಐಆರ್ ದಾಖಲಿಸಿರುವುದು ಸರಿಯಲ್ಲ, ಸುಳ್ಳಿನಿಂದ ಕೂಡಿರುವ ದೂರನ್ನು ದಾಖಲಿಸಿರುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದ್ದಾರೆ.
A BJP activist has filed a complaint against Smt.Sonia Gandhi with a political motive based on false information.
Have written to CM @BSYBJP demanding withdrawal of the FIR
I also urge him to register a FIR against the police officer for misusing process of law & to suspend him pic.twitter.com/oWpqyFVI4Y
— DK Shivakumar (@DKShivakumar) May 21, 2020
ಪಿಎಂ ಕೇರ್ ನಿಧಿಯಿಂದ ಹಣ ದುರುಪಯೋಗವಾಗುತ್ತಿದೆ. ಈ ಹಣ ಬಡವರಿಗೆ ಬಳಕೆಯಾಗುತ್ತಿಲ್ಲ ಮತ್ತು ಪ್ರಧಾನಿಯವರ ವೈಯಕ್ತಿಕ ಬಳಕೆಗೆ ಖರ್ಚು ಆಗುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಟ್ವೀಟ್ ಮಾಡಿದ್ದರು.
ಇದು ಭಾರತ ಸರ್ಕಾರದ ವಿರುದ್ಧ ಅಪನಂಬಿಕೆ ಉಂಟು ಮಾಡಿ ಪ್ರಧಾನ ಮಂತ್ರಿ ವಿರುದ್ಧ ಸುಳ್ಳು ಸುದ್ದಿ ಹರಡಿದಂತಾಗುತ್ತದೆ. ಇದರಿಂದ ನಾಗರೀಕ ಸಮಾಜವನ್ನು ಎತ್ತಿಕಟ್ಟಿದಂತಾಗುತ್ತದೆ. ಆದ್ದರಿಂದ ಸೋನಿಯಾ ಗಾಂಧಿ ಮತ್ತು ಐಎನ್ಸಿ ಖಾತೆ ನಿರ್ವಹಿಸುವ ನೌಕರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಕಾರ್ಯಕರ್ತ ಹಾಗೂ ವಕೀಲರಾಗಿರುವ ಕೆ.ವಿ.ಪ್ರವೀಣ್ ಕುಮಾರ್ ಎಂಬವರು ದೂರು ದಾಖಲಿಸಿದ್ದರು.
ಓದಿ: ಪ್ರಧಾನಿ ವಿರುದ್ಧ ಟ್ವೀಟ್ : ಸಾಗರದಲ್ಲಿ ಸೋನಿಯಾಗಾಂಧಿ ವಿರುದ್ಧ FIR


