ಪಿಎಂ ಕೇರ್ಸ್ ವಿಚಾರವಾಗಿ ಮತ್ತು ಪ್ರಧಾನಿ ಮಂತ್ರಿ ಮೋದಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಆರೋಪಿಸಿ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ದೂರು ದಾಖಲಾಗಿದೆ.
ಪ್ರವೀಣ್ ಕೆ.ವಿ ಎಂಬುವವರು ನೀಡಿರುವ ದೂರಿನ ಹಿನ್ನೆಲೆಯಲ್ಲಿ ಸಾಗರ ಟೌನ್ ಪೊಲೀಸ್ ಠಾಣೆಯ ಪೊಲೀಸರು ಸೋನಿಯಾ ಗಾಂಧಿ ವಿರುದ್ಧ FIR ಕೂಡ ದಾಖಲಿಸಿದ್ದಾರೆ.
ಐಎನ್ಸಿ ಇಂಡಿಯಾ ಟ್ವಿಟ್ಟರ್ ಖಾತೆಯನ್ನು ನವದೆಹಲಿಯ ಅಕ್ಬರ್ ರಸ್ತೆಯ ಕಛೇರಿಯಿಂದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರು ನಿರ್ವಹಿಸುತ್ತಿದ್ದು, ಈ ಖಾತೆಯಿಂದ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ, ಭಾರತ ಸರ್ಕಾರದ ವಿರುದ್ಧ ಟ್ವೀಟ್ ಮಾಡಲಾಗಿದೆ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಲಾಗಿದೆ.
ಪಿಎಂ ಕೇರ್ ನಿಧಿಯಿಂದ ಹಣ ದುರುಪಯೋಗವಾಗುತ್ತಿದೆ. ಈ ಹಣ ಬಡವರಿಗೆ ಬಳಕೆಯಾಗುತ್ತಿಲ್ಲ ಮತ್ತು ಪ್ರಧಾನಿಯವರ ವೈಯಕ್ತಿಕ ಬಳಕೆಗೆ ಖರ್ಚು ಆಗುತ್ತಿದೆ ಎಂದು ಟ್ವೀಟ್ ಮಾಡಿರುವುದರಿಂದ ಭಾರತ ಸರ್ಕಾರದ ವಿರುದ್ಧ ಅಪನಂಬಿಕೆ ಉಂಟು ಮಾಡಿ ಪ್ರಧಾನ ಮಂತ್ರಿ ವಿರುದ್ಧ ಸುಳ್ಳು ಸುದ್ದಿ ಹರಡಿದಂತಾಗುತ್ತದೆ. ಇದರಿಂದ ನಾಗರೀಕ ಸಮಾಜವನ್ನು ಎತ್ತಿಕಟ್ಟಿದಂತಾಗುತ್ತದೆ. ಆದ್ದರಿಂದ ಸೋನಿಯಾ ಗಾಂಧಿ ಮತ್ತು ಐಎನ್ಸಿ ಖಾತೆ ನಿರ್ವಹಿಸಿಉವ ನೌಕರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರುದಾರರು ಒತ್ತಾಯಿಸಿದ್ದಾರೆ.
ದೂರಿನೊಂದಿಗೆ ಐಎನ್ಸಿ ಖಾತೆ ಸಂದೇಶಗಳ ಹಲವಾರು ಸ್ಕ್ರೀನ್ ಶಾಟ್ಗಳನ್ನು ಲಗತ್ತಿಸಲಾಗಿದೆ. ಅವುಗಳಲ್ಲಿ ಪಿಎಂ ಕೇರ್ಸ್ ನಿಧಿಗೆ ಇದುವರೆಗೂ ಎಷ್ಟು ಹಣ ಬಂದಿದೆ? ಅದರಲ್ಲಿ ಎಷ್ಟು ಖರ್ಚು ಆಗಿದೆ? ಈ ಬಗ್ಗೆ ಮಾಧ್ಯಮಗಳು ಪ್ರಶ್ನೆ ಕೇಳದಿದ್ದರೂ ಭಾರತೀಯರು ಕೇಳುತ್ತಾರೆ ಎಂದು ಬರೆಯಲಾಗಿದೆ. ಅಲ್ಲದೇ ಪಿಎಂ ಕೇರ್ಸ್ ಹಣ ವಲಸೆ ಕಾರ್ಮಿಕರ ಸಾರಿಗೆಗೆ ಬಳಕೆಯಾಗಿದೆಯೇ? ಆರ್ಥಿಕ ಪ್ಯಾಕೇಜ್ಗೆ ಬಳಕೆಯಾಗಿದೆಯೇ? ಎಂದು ಪ್ರಶ್ನಿಸಲಾಗಿದೆ.
ಇದನ್ನೂ ಓದಿ: ಫ್ಯಾಕ್ಟ್ಚೆಕ್: ವಲಸಿಗರೊಂದಿಗೆ ರಾಹುಲ್ ಸಂವಾದ ನಾಟಕವೇ? ನಂತರ ಕಾರ್ಮಿಕರೆಲ್ಲಾ ಕಾರಿನಲ್ಲಿ ಹೊರಟರೆ?