Homeಮುಖಪುಟಕತ್ತಲ ಕಾಲದಲ್ಲಿ ಒಂದಿಷ್ಟು ಬೆಳಕಿನ ಕಥೆಗಳು

ಕತ್ತಲ ಕಾಲದಲ್ಲಿ ಒಂದಿಷ್ಟು ಬೆಳಕಿನ ಕಥೆಗಳು

- Advertisement -
- Advertisement -

1. ಕಾಳಿ ಗುಡಿಯನ್ನು ಮತ್ತೆ ಕಟ್ಟಿದ ಮುಸ್ಲಿಮರು

ಪಶ್ಚಿಮ ಬಂಗಾಳದ ಬಸಪಾರ ಹಳ್ಳಿಯಲ್ಲಿ ರಸ್ತೆ ಅಗಲೀಕರಣಕ್ಕೆಂದು ಕಾಳಿ ಗುಡಿಯನ್ನು ನೆಲಸಮಗೊಳಿಸಲಾಗಿತ್ತು. ಹಳ್ಳಿಯವರೆಲ್ಲ ಕಾಳಿ ಗುಡಿಯನ್ನು ಮತ್ತೆ ಕಟ್ಟಲು ತೀರ್ಮಾನಿಸಿದರು. ಗುಡಿ ಕಟ್ಟಲು ಹೇಗೋ ಹಣ ಹೊಂದಿಸಿ ತುಂಡು ಭೂಮಿ ಕೊಳ್ಳಲಾಯಿತು. ಆದರೆ ಗುಡಿ ಕಟ್ಟಲು ಸುಮಾರು 10 ಲಕ್ಷ ಬೇಕೆಂದು ಅಂದಾಜಿಸಲಾಯಿತು. ಅದೊಂದು ಪುಟ್ಟ ಹಳ್ಳಿಯಾದ್ದರಿಂದ ಹೊರಗಿನವರ ಸಹಾಯ ಅಗತ್ಯವಾಗಿತ್ತು. ಆಗ ಅದೇ ಹಳ್ಳಿಯ ಮುಸ್ಲಿಮರು ಕೈ ಜೋಡಿಸುತ್ತೇವೆಂದು ಭರವಸೆ ನೀಡಿದರು. ಸುತ್ತಮುತ್ತಲಿನ ಹಳ್ಳಿಯಲ್ಲಿರುವ ತಮ್ಮ ಸಂಬಂಧಿಕರನ್ನು ಸಂಪರ್ಕಿಸಿ 7 ಲಕ್ಷ ದೇಣಿಗೆ ನೀಡಿಯೇ ಬಿಟ್ಟರು. ಕಾಳಿ ಗುಡಿ ಕಟ್ಟಲಾಯಿತು. ಈ ಕಾಳಿ ಗುಡಿಯನ್ನು ಅಲ್ಲಿನ ಹಿಂದೂಗಳು ಮುಸ್ಲಿಂ ಮುಖಂಡ ’ನಾಸಿರುದ್ದೀನ್ ಮಂಡಲ್’ ಅವರಿಂದ ಉದ್ಘಾಟಿಸಿದರು. ಈಗ ಅಲ್ಲಿ ನಿತ್ಯ ಕಾಳಿ ಪೂಜೆ.

ತ್ರಿಪುರಾ ರಾಜ್ಯದ ದುರ್ಗಾಪುರ ಹಳ್ಳಿಯಲ್ಲಿ ಹಿಂದೂ ಒಬ್ಬ ಮುಸ್ಲಿಮನಿಗೆ ತನ್ನ ಜಮೀನನ್ನು ಮಾರಾಟ ಮಾಡಿ ಹೊರಟುಹೋದನಂತೆ. ಆ ಜಮೀನಿನಲ್ಲಿ ಕಾಳಿ ಗುಡಿ ಇತ್ತಂತೆ. ಹಾಗಾಗಿ ಇಂದಿಗೂ ಸಹ ಪ್ರತಿವರ್ಷ ಆ ಮುಸ್ಲಿಂ ಮಾಲೀಕ ಕಾಳಿ ಪೂಜೆಯನ್ನು ಮಾಡಿಸುತ್ತಿದ್ದಾನೆ.

2. ಬನಾರಸ್ಸಿನಲ್ಲಿ ಒಟ್ಟಿಗೆ ’ಮಂತ್ರ ಮತ್ತು ಆಜಾನ್’

ಉತ್ತರ ಪ್ರದೇಶದ ಬನಾರಸ್‌ನಲ್ಲಿ ಭೈರವ ಮಂದಿರ ಹಾಗೂ ಮಸೀದಿ ಇದೆ. ಇವೆರಡರ ವಿಶಿಷ್ಟತೆ ಏನೆಂದರೆ ಅವು ಅಕ್ಕಪಕ್ಕದಲ್ಲಿಯೇ ಸ್ಥಾಪನೆಗೊಂಡಿವೆ. ದಿನನಿತ್ಯ ಸಾಯಂಕಾಲ ಭೈರವನಿಗೆ ಸಲ್ಲಿಸುವ ರಾಮಚರಿತಮಾನಸದ ಶ್ಲೋಕವನ್ನು ಹಾಗೂ ಆಜಾನ್‌ನ ಪ್ರಾರ್ಥನೆಯನ್ನು ಒಟ್ಟಿಗೆ ಕೇಳಬಹುದಾಗಿದೆ. ಈ ಕ್ಷಣವನ್ನು ಆಲಿಸಿ ಸಂತೋಷಗೊಳ್ಳಲೆಂದೇ ಹಲವಾರು ಪ್ರವಾಸಿಗರು ಇಲ್ಲಿ ದಿನನಿತ್ಯ ಸೇರುತ್ತಾರೆ. ಈ ಆಚರಣೆಯನ್ನು ಸುಮಾರು 350 ವರ್ಷಗಳಿಂದಲೂ ನೆರವೇರಿಸಿಕೊಂಡು ಬರಲಾಗಿದೆ.

3. ಮುಸ್ಲಿಂ ಹೆಣ್ಣುಮಗಳ ’ಕುಮಾರಿ ಪೂಜೆ’

ಉತ್ತರ ಭಾರತದ ಪ್ರಸಿದ್ಧ ಹಬ್ಬ ದುರ್ಗಾ ಪೂಜೆ. ಎಂಟನೇ ದಿನದ ಪೂಜೆಯಂತ ಬಹಳ ಪವಿತ್ರವಾದದ್ದೆಂದು ಪಶ್ಚಿಮಬಂಗಾಳದ ಜನತೆ ಭಾವಿಸುತ್ತಾರೆ. ಈ ದಿನವನ್ನು ’ಮಹಾಅಷ್ಟಮಿ’ ಎಂದು ಕರೆಯುತ್ತಾರೆ. ಈ ದಿನದಂದು ಹೆಣ್ಣುಮಕ್ಕಳಿಗೆ ದುರ್ಗೆಯ ವೇಷ ತೊಡಿಸಿ ಪೂಜೆ ಮಾಡುವುದು ವಿಶೇಷ. ಇದನ್ನೇ ’ಕುಮಾರಿ ಪೂಜೆ’ ಎನ್ನಲಾಗುತ್ತದೆ. 2013ರಿಂದಲೂ ಕೋಲ್ಕತ್ತಾದ ಕಮಲ್ ದತ್ತಾ ಮತ್ತವರ ಹೆಂಡತಿ ಮೌಶುಮಿ ತಮ್ಮ ಮನೆಯಲ್ಲಿ ಕುಮಾರಿ ಪೂಜೆ ಮಾಡುತ್ತಾ ಬಂದಿದ್ದಾರೆ. ಮೊದಲ ವರ್ಷ ಬ್ರಾಹ್ಮಣ ಹೆಣ್ಣುಮಗಳನ್ನು ಪೂಜಿಸಲಾಗಿತ್ತು ನಂತರದ ವರ್ಷಗಳಲ್ಲಿ ದಲಿತ ಹೆಣ್ಣುಮಕ್ಕಳು ಸೇರಿದಂತೆ ಇತರೆ ಜಾತಿಯ ಹೆಣ್ಣುಮಕ್ಕಳಿಗೂ ಕುಮಾರಿ ಪೂಜೆ ಮಾಡಿದ್ದಾರೆ. 2019ರಲ್ಲಿ ಕುಮಾರಿ ಪೂಜೆಗೆ ಅವರು ಆಹ್ವಾನಿಸಿದ್ದು ಆಗ್ರಾದ ಕಿರಾಣಿ ಅಂಗಡಿಯೊಂದರ ಮಾಲೀಕ ಮಹಮ್ಮದ್ ತಾಹಿರ್ ಮತ್ತು ಬುಶ್ರಾ ಬೀಬಿಯವರ ಮಗಳು ’ಫಾತಿಮಾ’ಳನ್ನು. ಯಾವ ಅಡೆತಡೆಗಳಿಲ್ಲದೆ ಆ ವರ್ಷದ ಕುಮಾರಿ ಪೂಜೆ ನೆರವೇರಿದೆ.

4. ಹಿಂದೂ ದೇಗುಲ ರಕ್ಷಕ ಮೋತಿಬಾರ್ ರಹಮಾನ್

ಅಸ್ಸಾಂ ರಾಜ್ಯದ ಗುವಾಹಟಿಯ ರಂಗಮಹಲ್ ಎಂಬ ಹಳ್ಳಿಯಲ್ಲಿ ಶಿವನ ದೇಗುಲವೊಂದಿದೆ. ಈ ದೇಗುಲಕ್ಕೆ 500 ವರ್ಷಗಳ ಇತಿಹಾಸವಿದೆ ಹಾಗೂ ಸ್ಥಳಪುರಾಣವೂ ಇದೆ. ಸ್ಥಳಪುರಾಣದ ಪ್ರಕಾರ 500 ವರ್ಷಗಳ ಹಿಂದೆ ಈ ಹಳ್ಳಿ ವಾಸಿಯಾಗಿದ್ದ ’ಬೊರ್ಹಾಸ’ ಎಂಬ ಮುಸಲ್ಮಾನನ ಕನಸಲ್ಲಿ ಶಿವ ಪ್ರತ್ಯಕ್ಷನಾದನಂತೆ. ’ನಾನು ಈ ಸ್ಥಳದಲ್ಲಿ ನೆಲೆಸಬೇಕು. ಇಂದಿನಿಂದ ನಿನ್ನ ಕುಟುಂಬವೇ ನನ್ನನ್ನು ಸಲಹಬೇಕೆಂದು’ ಹೇಳಿದನಂತೆ. ಅಂದಿನಿಂದ ಇಂದಿನವರೆಗೂ ಬೊರ್ಹಾಸನ ವಂಶಸ್ಥರು ಶಿವನ ದೇಗುಲದ ನಿರ್ವಹಣೆಯನ್ನು ಮಾಡುತ್ತಿದ್ದಾರೆ. ಈಗ ’ಮೋತಿಬಾರ್ ರಹಮಾನ್’ ಎಂಬ ಬೊರ್ಹಾಸನ ವಂಶಸ್ಥ ಈ ದೇಗುಲದ ನಿರ್ವಹಣೆ ಮಾಡುತ್ತಿದ್ದಾನೆ. ಈ ದೇಗುಲಕ್ಕೆ ಹಿಂದೂ-ಮುಸ್ಲೀಂ ಭಕ್ತರು ಭೇಟಿಕೊಡುತ್ತಾರೆ. ಮರಕ್ಕೆ ಕೆಂಪು ಮತ್ತು ಅರಿಶಿನದ ದಾರ ಕಟ್ಟಿ ಬೇಡಿಕೊಳ್ಳುತ್ತಾರೆ.

5. ಮುಸ್ಲಿಮರಿಂದ ಬ್ರಾಹ್ಮಣನ ಅಂತ್ಯಸಂಸ್ಕಾರ

ಅಬು, ನಾಸಿರ್ ಮತ್ತು ಜುಬೇರ್ ಖುರೇಶಿ ಈ ಮೂವರು ಗುಜರಾತಿನ ಸಹೋದರರು. ದಿನಗೂಲಿ ನೌಕರರಾದ ಇವರು ದಿನಕ್ಕೆ ಐದು ಬಾರಿ ನಮಾಜ್ ಹಾಗೂ ರಂಜಾನ್ ಉಪವಾಸವನ್ನು ಅಪ್ಪಿತಪ್ಪಿಯೂ ತಪ್ಪಿಸದಷ್ಟು ಧಾರ್ಮಿಕರು. ಇವರ ತಂದೆ ’ಭಿಕು ಖುರೇಶಿ’ಯವರ ಆತ್ಮೀಯ ಸ್ನೇಹಿತ ಬ್ರಾಹ್ಮಣ ’ಭಾನುಶಂಕರ್ ಪಾಂಡ್ಯ’ ಎಂದರೆ ಇವರಿಗೆ ಬಹಳಷ್ಟು ಪ್ರೀತಿ. ಭಿಕು ಖುರೇಶಿ ಹಾಗೂ ಭಾನುಶಂಕರ್ ಇಬ್ಬರದ್ದು ಬರೋಬ್ಬರಿ 40 ವರ್ಷಗಳ ಸ್ನೇಹ. ಭಾನುಪ್ರಕಾಶ್ ಸಂಬಂಧಿಕರೆಲ್ಲರನ್ನೂ ಕಳೆದುಕೊಂಡಿದ್ದರು. ಅವರ ಕಾಲು ಮುರಿದ ಮೇಲೆ ತಮ್ಮ ಮುಸ್ಲಿಂ ಸ್ನೇಹಿತನ ಮನೆಯಲ್ಲೆ ಬಂದು ನೆಲೆಸಿದರು. ಖುರೇಶಿ ತಮಗಿಂತ ಮೊದಲೇ ಇಹಲೋಕ ತ್ಯಜಿಸಿದ್ದಕ್ಕೆ ಕಣ್ಣೀರಾಗಿದ್ದರು. ಮೂರು ವರ್ಷಗಳ ನಂತರ ಭಾನುಶಂಕರ್ ಸಹ ಕಣ್ಮುಚ್ಚಿದರು. ಮೂವರು ಮುಸ್ಲಿಂ ಸಹೋದರರು ತಂದಿದ್ದ ಗಂಗಾ ನದಿಯ ನೀರನ್ನು ಗುಟುಕೇರಿಸುತ್ತಲೇ ಭಾನುಶಂಕರ್ ಪ್ರಾಣಬಿಟ್ಟರು. ಊರಿನ ಹಿಂದೂಗಳಲ್ಲಿ ಈ ಮುಸ್ಲೀಂ ಸಹೋದರರು ತಾವೇ ಅಂತ್ಯಸಂಸ್ಕಾರ ಮಾಡುತ್ತೇವೆಂದು ಕೇಳಿಕೊಂಡಾಗ ’ಬ್ರಾಹ್ಮಣರ ವಿಧಿವಿಧಾನದಲ್ಲಿಯೇ ನೆರವೇರಬೇಕು’ ಎಂದು ಹೇಳಿದರು. ’ಜನಿವಾರ ಧರಿಸಲೇಬೇಕೆಂದು’ ತಿಳಿಸಿದರು. ಮುಸ್ಲಿಂ ಸಹೋದರರು ಸ್ವಲ್ಪವೂ ಯೋಚಿಸದೆ ತಲೆಯಾಡಿಸಿ ಜನಿವಾರ ಹಾಕಿಸಿಕೊಂಡರು. ನಾಸಿರ್ ಮಗ ’ಅರ್ಮಾನ್’ ಚಿತೆಗೆ ಬೆಂಕಿ ಹಚ್ಚಿದನು. 12 ದಿನದ ನಂತರ ಅರ್ಮಾನ್‌ನ ಕೇಶಮುಂಡನ ಮಾಡಿಸಲಾಯಿತು. ಗಂಗಾನದಿಯಲ್ಲಿ ಅಸ್ಥಿಯನ್ನು ತೇಲಿಬಿಡಲಾಯಿತು. ನಾಸಿರ್, ಭಾನುಶಂಕರ್ ಅವರನ್ನು ನೆನೆಯುತ್ತ ’ದೊಡ್ಡಪ್ಪ ನಮ್ಮೊಂದಿಗೆ ಬೆರೆತುಹೋಗಿದ್ದರು. ನಮ್ಮ ತಂದೆ ಅವರಿಗಾಗಿ ಸ್ವತಃ ಶುದ್ಧ ಸಸ್ಯಾಹಾರವನ್ನು ಮಾಡಿ ಹಾಕುತ್ತಿದ್ದರು. ದೊಡ್ಡಪ್ಪ ನಮ್ಮೊಂದಿಗೆ ಈದ್ ಆಚರಿಸುತ್ತಿದ್ದರು. ನಮ್ಮ ಮನೆಯ ಸೊಸೆಯಂದಿರು ಅವರ ಕಾಲಿಗೆ ಬಿದ್ದು ನಮಸ್ಕರಿಸಿದಾಗ ಆಶೀರ್ವದಿಸುತ್ತಿದ್ದರು’ ಎಂದು ಹೇಳುತ್ತಾರೆ.

6. ಶಹೀನ್ ಪರ್ವೇಜ್ ಬಾಯಲ್ಲಿ ಹನುಮಾನ್ ಚಾಲಿಸಾ, ಅಯ್ಯಪ್ಪಸ್ವಾಮಿಯ ಮುಸ್ಲಿಂ ಸ್ನೇಹಿತ ವಾವರ್

ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಒರಿಸ್ಸಾದಿಂದ ಅಯ್ಯಪ್ಪಸ್ವಾಮಿ ಮಾಲೆ ಹಾಕಿಕೊಂಡು ಶಬರಿಮಲೆಗೆ ಅಯ್ಯಪ್ಪನ ದರ್ಶನಕ್ಕೆ ಹೋಗಿರುವವರಿಗೆ ’ವಾವರಸ್ವಾಮಿ’ ಹೆಸರಲ್ಲಿ ನಿರ್ಮಿಸಿರುವ ಮಸೀದಿ ಚಿರಪರಿಚಿತ. ಪುರಾಣ ಕಥೆ ಹೇಳುವಂತೆ ಮಹಿಶಿಯೊಡನೆ ಯುದ್ಧ ಮಾಡುವಾಗ ’ವಾವರ್’ ಎಂಬ ಮುಸ್ಲಿಂ ಅಯ್ಯಪ್ಪನಿಗೆ ಸಹಾಯ ಮಾಡಿದ್ದನಂತೆ. ಅಂದಿನಿಂದ ವಾವರ್ ಅಯ್ಯಪ್ಪನಿಗೆ ಸ್ನೇಹಿತನಾದನು. ಅಯ್ಯಪ್ಪ ಮಹಿಶಿಯನ್ನು ಎರುಮೆಲಿಯಲ್ಲಿ ಕೊಂದು ಶಬರಿಮಲೆಗೆ ಹೋಗುವ ಮುನ್ನ ವಾವರ್‌ನಿಗೆ ಅಲ್ಲಿಯೇ ನೆಲೆನಿಲ್ಲಲು ಹೇಳಿದನಂತೆ. ಜೊತೆಗೆ ತನ್ನನ್ನು ನೋಡಲು ಬರುವ ಭಕ್ತಾದಿಗಳು ನನಗೂ ಮುಂಚೆ ವಾವರ್‌ನ ದರ್ಶನ ಪಡೆಯಬೇಕೆಂದು ಹೇಳಿದನಂತೆ. ಅಂದಿನಿಂದ ಶಬರಿಮಲೆಗೆ ಹೋಗುವ ಭಕ್ತರು ಮೊದಲು ವಾವರಸ್ವಾಮಿ ಮಸೀದಿಗೆ ಭೇಟಿ ಕೊಟ್ಟು ತೆಂಗಿನಕಾಯಿ ಹೊಡೆದು ಪ್ರದಕ್ಷಿಣೆ ಹಾಕುತ್ತಾರೆ. ಮುಸ್ಲಿಮರು ದಿನಕ್ಕೆ ಐದು ಬಾರಿ ನಮಾಜ್ ಮಾಡುತ್ತಾರೆ. ಶಬರಿಮಲೆಯಲ್ಲಿ ನಡೆಯುವ ಮಕರಸಂಕ್ರಾಂತಿಯಂದು ಇಲ್ಲಿಯೂ ಉತ್ಸವವನ್ನು ಹಾಗೂ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗುತ್ತದೆ.

7. ಇಲ್ಲಿ ಮುಸ್ಲಿಮರಿಲ್ಲ ಆದರೆ ಮಸೀದಿ ಇದೆ.

ಪಂಜಾಬಿನಲ್ಲಿ ಲೂಧಿಯಾನ ಎಂಬ ಹಳ್ಳಿ ಇದೆ. ಈ ಹಳ್ಳಿಯಲ್ಲಿನ ಸಿಖ್ಖರು ಭಾರತದ ವಿಭಜನೆಯ ಕಥೆಯನ್ನು ನೆನೆದು ಕಣ್ಣೀರಾಗುತ್ತಾರೆ. ಭಾರತ ವಿಭಜನೆ ಆಗುವ ಮೊದಲು ಇಲ್ಲಿದ್ದ 50 ಮುಸ್ಲಿಂ ಕುಟುಂಬ ಪ್ರಾರ್ಥನೆಗಾಗಿ 1920ರಲ್ಲಿ ಮಸೀದಿ ನಿರ್ಮಿಸಿದ್ದವು. 1947ರ ನಂತರ ಭಾರತದ ವಿಭಜನೆಯ ಫಲವಾಗಿ ಮುಸ್ಲಿಮರೆಲ್ಲರೂ ಪಾಕಿಸ್ತಾನಕ್ಕೆ ಹೋಗಬೇಕಾಗಿ ಬಂದಿತು. ಈಗ ಈ ಹಳ್ಳಿಯಲ್ಲಿ ಒಬ್ಬರೂ ಮುಸ್ಲಿಮರಿಲ್ಲ. ಆದರೆ ಅವರು ಕಟ್ಟಿದ್ದ ಮಸೀದಿ ಇಂದಿಗೂ ತಲೆಎತ್ತಿ ನಿಂತಿದೆ. ಹಳ್ಳಿಯ ಹಿರಿಯ ಸಿಖ್ಖರು ಪಾಳಿಯ ಪ್ರಕಾರ ಮಸೀದಿಯನ್ನು ಸ್ವಚ್ಛಗೊಳಿಸಲು ಯುವಕರನ್ನು ನೇಮಿಸಿದ್ದಾರೆ. ಮಸೀದಿಯಲ್ಲಿ ’ಕುರಾನ್’ ಪವಿತ್ರ ಗ್ರಂಥವನ್ನು ಇಡಲಾಗಿದೆ. ದೀಪ ಹಚ್ಚಲಾಗುತ್ತದೆ. ಇದುವರೆಗೂ ಲೂಧಿಯಾನದ ಒಬ್ಬರೂ ಸಹ ಅದನ್ನು ತೆರವುಗೊಳಿಸುವ ಒಂದು ಮಾತನ್ನೂ ಆಡಿಲ್ಲ.

8. ಅಯೋಧ್ಯೆಯ ದೇಗುಲದಲ್ಲಿ ಇಫ್ತಾರ್ ಊಟ

ಅಯೋಧ್ಯೆಯ ತುಂಬಾ ಹಲವಾರು ಸೀತಾರಾಮ ದೇಗುಲಗಳಿವೆ. ಬಾಬರಿ ಮಸೀದಿ ಧ್ವಂಸ ಪ್ರಕರಣದ ನಂತರ ಅಲ್ಲಿನ ಸೀತಾರಾಮ ದೇಗುಲವೊಂದರ ಭಕ್ತರು ಸೌಹಾದತೆಯ ಕಾರ್ಯವೊಂದನ್ನು ಮಾಡಲು ತೀರ್ಮಾನಿಸಿದರು. ಅದೇನೆಂದರೆ ರಂಜಾನ್ ತಿಂಗಳಲ್ಲಿ ಮುಸ್ಲಿಂ ಬಾಂಧವರಿಗೆ ದೇಗುಲದ ಆವರಣದಲ್ಲಿ ಇಫ್ತಾರ್ ಊಟ ಆಯೋಜಿಸುವುದು. ಹಿಂದೂ ಮುಸ್ಲಿಂ ಒಟ್ಟಿಗೆ ಕುಳಿತು ಊಟ ಮಾಡುವುದು. ಇಂದಿಗೂ ಅದು ನಡೆದುಕೊಂಡು ಬರುತ್ತಲೇ ಇದೆ. ದೇಗುಲದ ಪೂಜಾರಿ ಯುಗಲ್ ಕಿಶೋರ್ ’ಈ ಇಫ್ತಾರ್ ಊಟವನ್ನು ನಾವು ಮುಂದುವರೆಸುತ್ತೇವೆ’ ಎಂದೂ ಮುಜಮಿಲ್ ಫಿಜಾ ’ನಾನು ನವರಾತ್ರಿಯನ್ನು ನನ್ನ ಹಿಂದೂ ಸ್ನೇಹಿತರೊಂದಿಗೆ ಆಚರಿಸುತ್ತೇನೆ’ ಎಂದೂ ಹೇಳುತ್ತಾರೆ.

9. ಪುತ್ತೂರಿನ ಸರ್ವೆ ಹಳ್ಳಿಯಲ್ಲಿ ದೇಗುಲ ನಿರ್ಮಿಸುತ್ತಿರುವ ಹಿಂದೂ-ಮುಸ್ಲಿಂ

ಮಂಗಳೂರಿನ ಸರ್ವೆ ಹಳ್ಳಿಯಲ್ಲಿ 800 ವರ್ಷಗಳಷ್ಟು ಹಳೆಯದಾದ ಶ್ರೀ ವಿಷ್ಣುಮೂರ್ತಿ ದೇಗುಲವಿದೆ. ಈ ಹಳ್ಳಿಯ ಮುಸ್ಲಿಮರು ದೇಗುಲದ ಜೀರ್ಣೋದ್ಧಾರ ಮಾಡಬೇಕಾಗಿ ಪದೇ ಪದೇ ಕೇಳಿಕೊಂಡದ್ದರಿಂದ ಈಗ ದೇಗುಲವನ್ನು ನವೀಕರಣಗೊಳಿಸಲು ಸಮಿತಿಯೊಂದನ್ನು ರಚಿಸಲಾಗಿದೆ. ಇದರ ಕಾರ್ಯಕ್ಕೆ ಹಿಂದೂಗಳೊಂದಿಗೆ ಮುಸ್ಲಿಮರೂ ಸಹ ಹಣಸಹಾಯ ಮಾಡಿದ್ದಾರೆ. ಸಮಿತಿಯ ಖಜಾಂಚಿ ಪ್ರಸನ್ನ ರೈ ಹೇಳುವಂತೆ ’ಸಂಪೂರ್ಣ ಹಳ್ಳಿ ಸೌಹಾರ್ದತೆಯಿಂದ ಕೂಡಿದೆ. ನಾವು ಉರುಸ್‌ನಲ್ಲಿ ಭಾಗವಹಿಸುತ್ತೇವೆ. ಮುಸ್ಲಿಮರು ದೇಗುಲದ ಉತ್ಸವಗಳಲ್ಲಿ ಪಾಲ್ಗೊಳ್ಳುತ್ತಾರೆ’ ಎನ್ನುತ್ತಾರೆ.

10. ಇಲ್ಲಿ ಮಠ ಮತ್ತು ದರ್ಗಾ ಎರಡೂ ಒಂದೆಡೆ.

ಕಲಬುರ್ಗಿಯ ಸುರಪುರದ ಬಳಿ ಕೃಷ್ಣಾ ನದಿಯ ದಂಡೆಯಲ್ಲಿ ತಿಂತಿಣಿ ಎಂಬ ಹಳ್ಳಿಯಿದೆ. ಇಲ್ಲಿ ಮೌನೇಶ್ವರ ದೇವಸ್ಥಾನ ಮತ್ತು ದರ್ಗಾ ಇದೆ. ಈ ಕಟ್ಟಡವನ್ನು ನೀವೊಮ್ಮೆ ನೋಡಿದರೆ ಮಂದಿರ-ಮಸೀದಿ ಕಂಡಂತಾಗುತ್ತದೆ. ಹಿಂದೂ ಹಾಗೂ ಮುಸ್ಲಿಂ ವಾಸ್ತುಶಿಲ್ಪ ಎರಡನ್ನೂ ಬೆರೆಸಿ ನಿರ್ಮಿಸಲಾಗಿದೆ. ಇದರೊಳಗೆ ಹೋದರೆ ಎದುರಿಗೆ ಮೌನೇಶ್ವರ ಸ್ವಾಮಿ ಸಾಧು ರೀತಿಯಲ್ಲಿ ಕುಳಿತಿರುವ ಮೂರ್ತಿ ಕಾಣುತ್ತದೆ. ಅದರ ಹಿಂಭಾಗದಲ್ಲಿ ಒಂದು ಬಾಗಿಲಿದೆ. ಆ ಬಾಗಿಲನ್ನು ತೆರೆದರೆ ಹಸಿರು ಚಾದರ ಹೊದ್ದಿರುವ ಸಮಾಧಿ ಕಾಣುತ್ತದೆ. ಈ ಮಠ ಮತ್ತು ದರ್ಗಾಕ್ಕೆ ಹಿಂದೂ ಮುಸ್ಲಿಂ ಇಬ್ಬರೂ ನಡೆದುಕೊಳ್ಳುತ್ತಾರೆ. ಫೆಬ್ರವರಿ ತಿಂಗಳಲ್ಲಿ ಇಲ್ಲಿ ತಿಂತಿಣಿ ಜಾತ್ರೆ ನಡೆಯುತ್ತದೆ. ಭರತ ಹುಣ್ಣಿಮೆಯನ್ನು ಐದು ದಿನಗಳ ಕಾಲ ಇಲ್ಲಿ ಆಚರಿಸಲಾಗುತ್ತದೆ. ಮೊಹರಂ ಆಚರಿಸಲಾಗುತ್ತದೆ. ಹಿಂದೂ-ಮುಸ್ಲಿಂ ಭಕ್ತರೆಲ್ಲರೂ ಪ್ರಸಿದ್ಧ ’ಅಲಿ ಪೀರ್’ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಾರೆ. ಹಿಂದೂಗಳು ’ಇದನ್ನು ಪೀರಲ ಹಬ್ಬ’ ಎಂದು ಕರೆಯುತ್ತಾರೆ. ಉತ್ತರ ಕರ್ನಾಟಕದ ನೂರಾರು ಕಡೆಗಳಲ್ಲಿ ಹಿಂದೂ-ಮುಸ್ಲೀಂ ಇಬ್ಬರೂ ಮೊಹರಂ-ಪೀರಲ ಹಬ್ಬವನ್ನು ಆಚರಿಸುತ್ತಾರೆ.

* ಸಂಗ್ರಹ ಮತ್ತು ನಿರೂಪಣೆ:

ವಿಕಾಸ್ ಆರ್ ಮೌರ್‍ಯ

ವಿಕಾಸ್ ಆರ್ ಮೌರ್‍ಯ
ಕನ್ನಡದಲ್ಲಿ ದಲಿತ ಸೈದ್ಧಾಂತಿಕ ಪ್ರಜ್ಞೆಯನ್ನು ತನ್ನ ಬರಹ ಮತ್ತು ಹೋರಾಟದ ಮೂಲಕ ವಿಸ್ತರಿಸುತ್ತಿರುವ ಹೊಸ ತಲೆಮಾರಿನ ಬರಹಗಾರ ಮತ್ತು ಹೋರಾಟಗಾರ ವಿಕಾಸ್ ಆರ್ ಮೌರ್ಯ. ಗಣಿತ ಸ್ನಾತಕೋತ್ತರ ಪದವಿ ಮುಗಿಸಿರುವ ವಿಕಾಸ್ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ಚಮ್ಮಟಿಕೆ’ ಪ್ರಕಟಿತ ಕೃತಿ


ಇದನ್ನೂ ಓದಿ: ಹಿಜಾಬ್ ವಿವಾದ ವಿಶೇಷ ವರದಿ: ಬಹುತ್ವ ಸಂಸ್ಕೃತಿಯ ಭಾರತದಲ್ಲಿ ಮತೀಯ ರಾಜಕಾರಣ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...