‘ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ಯಿಂದ ರಾಜ್ಯಗಳು ಸ್ವಾಯತ್ತತೆ ಕಳೆದುಕೊಳ್ಳುತ್ತದೆ ಎಂಬ ಭಯ ಈಗ ನಿಜವಾಗಿದೆ’, ಎಂದು ತಮಿಳುನಾಡು ಹಣಕಾಸು ಸಚಿವ ಪಳನಿವೇಲ್ ತ್ಯಾಗ ರಾಜನ್ ಅವರು ಬುಧವಾರ ಹೇಳಿದ್ದಾರೆ. ಅವರು ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (FICCI) ಆಯೋಜಿಸಿದ್ದ, ‘ದಕ್ಷಿಣ ಭಾರತ GST ಕಾನ್ಕ್ಲೇವ್’ನಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡುತ್ತಿದ್ದರು.
“ನನಗೆ ಸ್ಪಷ್ಟವಾದ ಒಂದು ವಿಷಯವೇನೆಂದರೆ, ಸ್ವಾಯತ್ತತೆಯ ಕಳೆದುಕೊಳ್ಳುವ ಭಯದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡಿದ್ದೇನೆ. ತೆರಿಗೆ ವಿಧಿಸುವ ವಿಷಯಗಳಲ್ಲಿ ರಾಜ್ಯಗಳಿಗೆ ಈಗ ಬಹಳ ಕಡಿಮೆ ಸ್ವಾತಂತ್ರ್ಯವಿದೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಬೇಡಿಕೆ ಈಡೇರುವವರೆಗೂ ಜಿಎಸ್ಟಿ ಪಾವತಿಸಬೇಡಿ: ವರ್ತಕರಿಗೆ ಪ್ರಧಾನಿ ಸಹೋದರನ ಸಲಹೆ
“ದೇಶದ ಕಾನೂನಿನ ಪ್ರಕಾರ, ನಮ್ಮ ಕೆಲಸವನ್ನು ಈಗ ದೃಢವಾಗಿ, ವಿಶ್ವಾಸಾರ್ಹವಾಗಿ, ಸಾಧ್ಯವಾದಷ್ಟು ಹೆಚ್ಚಿನ ಉಪಯುಕ್ತತೆಯನ್ನಾಗಿ ಮಾಡಬೇಕು. ಜಿಎಸ್ಟಿಯ ನಿರ್ಬಂಧಗಳ ಒಳಗೆ, ವ್ಯವಸ್ಥೆಗಳ ಸುಧಾರಣೆಯ ವಿಷಯದಲ್ಲಿ ಸಾಕಷ್ಟು ವಿಷಯಗಳು ತಲೆಕೆಳಗಾಗಿದೆ” ಎಂದು ಅವರು ಹೇಳಿದ್ದಾರೆ.
ಕೇರಳ ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲ್ ಅವರು ಕೂಡಾ ತ್ಯಾಗರಾಜನ್ ಅವರ ಹೇಳಿಕೆಯನ್ನೇ ಪ್ರತಿಧ್ವನಿಸಿ, ಜಿಎಸ್ಟಿ ಫೆಡರಲಿಸಂನ ತತ್ವಗಳಿಗೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ. “ಜಿಎಸ್ಟಿ ಬಗ್ಗೆ ನಾವು ಏನು ಅಂದುಕೊಂಡಿದ್ದೆವೋ ಅದುವೆ ಪ್ರಾಯೋಗಿಕವಾಗಿ ಆಗುತ್ತಿದೆ” ಎಂದು ಹೇಳಿದ ಅವರು, ಜಿಎಸ್ಟಿಯಿಂದಾಗಿ ರಾಜ್ಯ ಸರ್ಕಾರಗಳು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿವೆ. 2022 ರ ಜುಲೈ ತಿಂಗಳಿನಿಂದ ಆದಾಯದ ನಷ್ಟಕ್ಕೆ ರಾಜ್ಯಗಳಿಗೆ ಒಕ್ಕೂಟ ಸರ್ಕಾರದಿಂದ ಪರಿಹಾರ ನೀಡಲಾಗುವುದಿಲ್ಲ ಎಂದು ಹೇಳಿದ್ದಾರೆ.
ಒಕ್ಕೂಟ ಸರ್ಕಾರದ ನೀತಿ ಮತ್ತು ರಾಜ್ಯಗಳ ಬಗೆಗಿನ ಧೋರಣೆಯನ್ನು ಸಮಸ್ಯೆಯೆಂದು ದೂಷಿಸಿದ ಅವರು, ಬಲಿಷ್ಠ ಆರ್ಥಿಕತೆಗಾಗಿ ಉದ್ಯಮಗಳು ಮತ್ತು ಸರ್ಕಾರ ಒಟ್ಟಾಗಿ ಕೆಲಸ ಮಾಡುವ ಅಗತ್ಯವನ್ನು ಒತ್ತಿ ಹೇಳಿದ್ದಾರೆ.
ಇದನ್ನೂ ಓದಿ: ಜಿಎಸ್ಟಿ: ಲಾಕ್ಡೌನ್ ನಂತರ ಮೊದಲ ಬಾರಿಗೆ 1.05 ಲಕ್ಷ ಕೋಟಿ ಸಂಗ್ರಹ!
ಕರ್ನಾಟಕ ಕೈಗಾರಿಕಾ ಸಚಿವ ಮುರಗೇಶ್ ನಿರಾಣಿ ಅವರು, “ಜಿಎಸ್ಟಿಯಲ್ಲಿ ಇನ್ನೂ ಕೆಲವು ಪ್ರಮುಖ ಸಮಸ್ಯೆಗಳಿದ್ದು, ಅದನ್ನು ಪರಿಹರಿಸಬೇಕಾಗಿದೆ” ಎಂದು ಹೇಳಿದ್ದಾರೆ. ಆದರೆ, ಜಿಎಸ್ಟಿಯಿಂದಾಗಿ ತೆರಿಗೆ ವ್ಯವಸ್ಥೆಯಲ್ಲಿ ಐತಿಹಾಸಿಕ ಬದಲಾವಣೆ ಉಂಟಾಗಿದೆ. ಇಂತಹ ಪ್ರಮುಖ ತೆರಿಗೆ ಸುಧಾರಣೆಗೆ ನಾಂದಿ ಹಾಡಿದ ಪ್ರಧಾನಿ, ಒಕ್ಕೂಟ ಸರ್ಕಾರದ ಹಣಕಾಸು ಸಚಿವರು ಮತ್ತು ಜಿಎಸ್ಟಿ ಕೌನ್ಸಿಲ್ ಸದಸ್ಯರಿಗೆ ಅವರು ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಎಫ್ಐಸಿಸಿಐ ತೆಲಂಗಾಣ ಅಧ್ಯಕ್ಷ ಟಿ.ಮುರಳೀಧರನ್ ಅವರು ಮಾತನಾಡಿ, “ಈ ಸಭೆಯು ಜಿಎಸ್ಟಿಯಲ್ಲಿ ಒಕ್ಕೂಟ ಸರ್ಕಾರ ಮತ್ತು ರಾಜ್ಯಗಳ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸಲು ಪ್ರಯತ್ನವಾಗಿದೆ. ಜಿಎಸ್ಟಿ ಹಂಚಿಕೆ ಸೂತ್ರದಲ್ಲಿ ದಕ್ಷಿಣದ ರಾಜ್ಯಗಳಿಗೆ ಬೃಹತ್ ಮಟ್ಟದಲ್ಲಿ ಸೋಲುಂಡಿದೆ” ಎಂದು ಹೇಳಿದ್ದಾರೆ.
ಎಫ್ಐಸಿಸಿಐ ಪ್ರಸ್ತುತ ನಡೆದ ಚರ್ಚೆಯ ಆಧಾರದ ಮೇಲೆ ಬಗ್ಗೆ ಒಕ್ಕೂಟ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಲಿದೆ.
ಇದನ್ನೂ ಓದಿ: ಜಿಎಸ್ಟಿ ವಿಚಾರದಲ್ಲಿ ರಾಜ್ಯಗಳನ್ನು ವಂಚಿಸಿದ್ದಕ್ಕೆ ಸಂಭ್ರಮಿಸಬೇಕೆ?: ಕುಮಾರಸ್ವಾಮಿ ಆಕ್ರೋಶ