Homeಮುಖಪುಟಬೀದಿ ನಾಟಕ: ನಾಗಪುರದ ತೊಗಲು ಬೊಂಬೆ ಆಟ

ಬೀದಿ ನಾಟಕ: ನಾಗಪುರದ ತೊಗಲು ಬೊಂಬೆ ಆಟ

- Advertisement -
- Advertisement -

ತೆರೆಯ ಹಿಂದೆ ತೊಗಲು ಬೊಂಬೆ ಆಟಗಾರರು. ತೆರೆಯ ಮೇಲೆ ಬೊಂಬೆಗಳು ಆಡುತ್ತವೆ..

ಹಾಡು :

ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು
ಏನೇ ಬರಲಿ ಯಾರಿಗೂ ಸೋತು ತಲೆಯ ಬಾಗದು
ಎಂದಿಗು ನಾನು ಹೀಗೆ ಇರುವೆ ಎಂದು ನಗುವುದು
ಹೀಗೆ ನಗುತಲಿರುವುದು ಹೀಗೇ ನಗುತಲಿರುವುದು..

(ಬುಡಬುಡಿಕೆಯವನ ಪ್ರವೇಶ)

ಬುಡಬುಡಿಕೆ : ಜಯವಾಗತೈತೆ ಸ್ವಾಮಿ ಜಯವಾಗುತೈತೆ

ಈ ಸಲದ ಚುನಾವಣೆಯಲಿ ಜಯವಾಗುತೈತೆ
ಬುಡಬುಡಿಕೆ ಶಕುನ ನುಡಿಸುತೈತೆ ಸ್ವಾಮಿ

ಈ ಸಲದ ಚುನಾವಣೆಯಲಿ ಗೆಲುವಾಗುತೈತೆ ಸ್ವಾಮಿ
ಗೆಲುವಾಗುತೈತೆ (ಬುಡಬುಡಿಕೆ ನುಡಿಸುವನು)

ಸೂತ್ರಧಾರ : ಏ ಬುಡಬುಡಿಕೆ! ಇಷ್ಟು ದಿನ ಎಲ್ಲೋಗಿದ್ಯೋ?

ಬುಡಬುಡಿಕೆ : ಯಾಕೆ ಸ್ವಾಮಿ? ಹೊಟ್ಟೆ ಪಾಡಿಗೆ ಒಂದು ಊರೆ? ಒಂದು ಕೇರಿನಾ? ಒಂದು ದೇಶನಾ?

ಸೂತ್ರಧಾರ : ಹೌದೌದು! ಏನ್ ಸುಡಾನ್ ದೇಶಕ್ಕೆ ಹೋಗಿದ್ದೇನು? ಬಹಳ ದಿವಸಾತ್ ನೀನು ಬಂದು!

ಬುಡಬುಡಿಕೆ : ಸುಡಾನ್‌ಗೂ ಇಲ್ಲ ಶ್ರೀಲಂಕಾಕ್ಕೂ ಇಲ್ಲ. ನಾಗಪುರಕ್ಕೆ ಹೋಗಿದ್ದೆ.

ಸೂತ್ರಧಾರ : ಅರೆರೆ ಬುಡಬುಡಿಕೆ ನಾಗಪುರಕ್ಕೆ ಯಾಕೋದೋ? ಅಲ್ಲೇನೈತೋ ನೋಡೋಕೆ?

ಬುಡಬುಡಿಕೆ : ಯಾಕೆಂದ್ರೆ ಮಂಕೀಬಾತ್‌ನಲ್ಲಿ ಮೋದಿ ಹೇಳಲಿಲ್ಲವೆ- ನಾಗಪುರ ಎಂದರೆ ತೊಗಲು ಬೊಂಬೆ ತಯಾರಿಕೆಯಲ್ಲಿ ಜಗತ್ಪ್ರಸಿದ್ಧ ಅಂತ, ಆ ಕಾರ್ಯಾಗಾರ ನೋಡಾಕೋಗಿದ್ದೆ.

ಸೂತ್ರಧಾರ: ಏಯ್, ಮಂಕೀಬಾತ್ ಅಲ್ಲೋ ಮನ್ ಕೀ ಬಾತ್! ಮನದ ಮಾತು. ಅದಿರಲಿ ಅಲ್ಲೇನದಲೇ ನೋಡಾಂತದ್ದು?

ಬುಡಬುಡಿಕೆ: ನಾನೂ ಅದೇ ಅಂದ್ಕಂಡಿದ್ದೆ, ನನ್ ಗೆಣೇಕಾರ ಒಬ್ಬ ಬಾರಲೆ ನೋಡಿ ಬರಾನ, ಅದೆಂತ ಚರ್ಮದಲ್ಲಿ ಮಾಡ್ತಾರೆ ಅಂತ ಕರೆದ, ಅವನಿಗೆ ಕಂಪನಿ ಕೊಟ್ಟಿದ್ದೆ.

ಸೂತ್ರಧಾರ: ಸರಿಕಣೋ. ಅಲ್ಲೇನೇನ್ ಕಂಡ್ಯೋ? ಯಾರ್ ತೋರಿಸಿದ್ರು? ಹೆಂಗೆ ಮಾಡ್ತಾರೊ ಆ ತೊಗಲು ಬೊಂಬೆಗಳನ್ನಾ?

ಬುಡಬುಡಿಕೆ: ಅವರಿವರ ಕೈಕಾಲ್ ಕಟ್ಟಿ ಕಾರ್ಯಾಗಾರ ನೋಡಲು ಪರ್ಮಿಷನ್ ತಗೊಂಡ್ವಿ.

ಸೂತ್ರಧಾರ: ಏ ಬುಡಬುಡಿಕೆ, ಗೋವಿನ ಚರ್ಮದಲ್ಲಿ ಆ ಬೊಂಬೆಗಳನ್ನ ಮಾಡ್ತಾರಂತಲ್ಲೊ!

ಬುಡಬುಡಿಕೆ: ಹೌದು, ಇಲ್ಲವಾದರೆ ತೊಗಲು ಬೊಂಬೆಗಳನ್ನು ಮಾಡುವುದು ಹೇಗೆ ಸ್ವಾಮಿ? ತಮಟೆ, ಮೃದಂಗ, ಅರೆ ಇತ್ಯಾದಿ ವಾದ್ಯಗಳನ್ನು ಮಾಡಿದಂತೆಯೇ ಈ ತೊಗಲು ಬೊಂಬೆಗಳನ್ನೂ ಚರ್ಮದಿಂದಲೇ ಮಾಡಬೇಕಲ್ಲ?

ಸೂತ್ರಧಾರ: ಹೆಂಗ್ ಮಾಡ್ತಾರೊ?

ಬುಡಬುಡಿಕೆ: ಮೊದಲು ಆಟಕ್ಕೆ ಬೇಕಾದ ರಾಮ, ಸೀತೆ, ಆಂಜನೇಯ, ಲಕ್ಷ್ಮಣ, ವಾಲಿ, ಸುಗ್ರೀವ, ರಾವಣ, ಕುಂಭಕರ್ಣ, ವಿಭೀಷಣ, ಮಂಡೋದರಿ, ಇಂದ್ರಜಿತು ಇತ್ಯಾದಿ ಪಾತ್ರಗಳ ಆಕಾರಕ್ಕೆ ಸರಿಯಾಗಿ ರೊಟ್ಟಿನ ಮಾಡೆಲ್‌ಗಳನ್ನು ಕತ್ತರಿಸುತ್ತಾರೆ. ಆಮೇಲೆ ಅವಕ್ಕೆ ಹದಮಾಡಿದ ಚರ್ಮವನ್ನು ಹೊದಿಸಿ ಕರೆಕ್ಟಾಗಿ ಕತ್ತರಿಸಿಕೊಳ್ಳುತ್ತಾರೆ.

ಸೂತ್ರಧಾರ: ರೊಟ್ಟಿನ ಮಾದರಿ ಗೊಂಬೆಗಳು ಕೈಕಾಲು ಆಡಿಸುವುದು ಹೇಗೋ?

ಬುಡಬುಡಿಕೆ: ನೀವೇ ಸೂತ್ರಧಾರರಲ್ಲವೆ? ನಮ್ಮ ಶರೀರದ ಅಂಗಾಂಗಗಳು ಹೇಗೆ ಆಡುತ್ತವೊ ಹಾಗೆ. ಕೈ, ಕಾಲು, ಬಾಗು, ಬಳುಕು, ತಲೆ ವಾಲುವಿಕೆ ಇತ್ಯಾದಿಗಳ ಚಲನೆಗೆ ಅನುಕೂಲವಾಗುವಂತೆ ಕೀಲು ಕೀಲಿಗೂ ರಂಧ್ರ ಮಾಡಿ ಸೂತ್ರ (ದಾರ)ಗಳನ್ನು ಹಾಕಿರುತ್ತಾರೆ.

ಸೂತ್ರಧಾರ: ಆಮೇಲೆ?

ಬುಡಬುಡಿಕೆ: ಆಮೇಲೆ, ಆಯಾ ಪಾತ್ರಗಳ ಕಲ್ಪನೆಗೆ ತಕ್ಕಂತೆ ಬಣ್ಣ ಹಚ್ಚುತ್ತಾರೆ, ರಾಮನಿಗೆ ನೀಲವರ್ಣ, ಸೀತೆಗೆ ಬಂಗಾರದ ಬಣ್ಣ, ಆಂಜನೇಯನಿಗೆ ರೋಮ ರೋಮ ಕಾಣುವಂತೆ ಬೂದು ಬಣ್ಣ.. ಲಕ್ಷ್ಮಣ, ಇಂದ್ರಜಿತ್‌ಗೆ ತಾಮ್ರವರ್ಣ.. ಹೀಗೆ ವಿವಿಧ ಪಾತ್ರಗಳಿಗೆ ವಿವಿಧ ವರ್ಣ! ಇಗೋ ಪ್ರದರ್ಶನವನ್ನೇ ನೋಡಿ! ಬೇಕಾದ್ರೆ.

ತೊಗಲು ಬೊಂಬೆ ನಾಟಕ ಆರಂಭ

ತೆರೆಯ ಹಿಂದೆ ಬೊಂಬೆಯಾಟದ ಸೂತ್ರಧಾರ. ಅವನ ಕೈಚಳಕಕ್ಕೆ ಸರಿಯಾಗಿ ನೆರಳು ಬೆಳಕಿನಲ್ಲಿ ಆ ಬೊಂಬೆಗಳು ನರ್ತಿಸುತ್ತವೆ. ಎದುರಿಗೆ ಪ್ರೇಕ್ಷಕ ವರ್ಗ.

ಭಾಗವತನ ಆಲಾಪ: ಆಡುತಾಡುತಾ ಬಂದಾ ರಾಮಾ
ಆಡುತಾಡುತಾ ಬಂದಾ ರಾಮಾ.. (ಪಲ್ಲವಿ)
ಆಡುತ ಪಾಡುತ ನೋಡುತ ಎಡಬಲ
ಆಡುತಾಡುತಾ ಬಂದಾ ರಾಮ. (ಅನು ಪಲ್ಲವಿ)
ಆಡು…ತಾ..ಡು..ತಾ ಬಂದಾ..ರಾ…ಮಾ. ಆಲಾಪ

ಭಾಗವತ: ನಾವು ಈ ದಿನ ಸಂಪೂರ್ಣ ರಾಮಾಯಣ ಎಂಬ ತೊಗಲು ಬೊಂಬೆ ಆಟವನ್ನು ಈ ನಗರದ ಬೀದಿಬೀದಿಗಳಲ್ಲಿ, ಪ್ರದರ್ಶನ ಗಾಡಿಯಲ್ಲಿ ’ರೋಡ್ ಶೋ’ ಮಾಡುತ್ತಿದ್ದೇವೆ. ರಸಿಕಜನ ತಾವಿರುವಲ್ಲಿಯೇ ನೋಡಿ ಆನಂದಿಸಲಿ ಎಂದು.

ಸೂತ್ರಧಾರ: ರೋಡ್ ಶೋ ಪ್ರಯೋಗ ನಮ್ಮ ನಗರದಲ್ಲಿ ಇದೇ ಮೊಟ್ಟ ಮೊದಲನೆಯದು. ನಮ್ಮ ಈ ತೊಗಲು ಬೊಂಬೆ ಆಟವನ್ನು ಜನ ನೋಡಿ ಪ್ರೋತ್ಸಾಹಿಸಬೇಕು ಎಂದು ವಿನಂತಿಸಿಕೊಳ್ಳುತ್ತೇವೆ.

[ಹಿನ್ನೆಲೆ ಸಂಗೀತ, ಧ್ವನಿವರ್ಧಕದಲ್ಲಿ]

ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು
ಏನೇ ಬರಲಿ ಯಾರಿಗೂ ಸೋತು ತಲೆಯ ಬಾಗದು.
ಹಾಡಿನ ಲಯಕ್ಕೆ ಸೀತಾ, ರಾಮ, ಲಕ್ಷ್ಮಣ, ಆಂಜನೇಯ ಬೊಂಬೆಗಳು ಅಭಿನಯಿಸುತ್ತವೆ.

(ಪ್ರದರ್ಶನದ ಟ್ರಕ್ಕು ನಗರದ ಬೀದಿಬೀದಿಗಳಲ್ಲಿ ಕೇಂದ್ರ ವೃತ್ತಗಳಲ್ಲಿ ನಿಂತು ನಿಂತು ಸಾಗುತ್ತದೆ. ಧ್ವನಿವರ್ಧಕದ ಹಾಡಿಗೆ ತಕ್ಕಂತೆ ತೊಗಲು ಬೊಂಬೆಗಳು ಅಭಿನಯಿಸುತ್ತವೆ.)

ಇದನ್ನೂ ಓದಿ: ಒಂದಿಷ್ಟು ಜಪಾನೀ ಹಾಯ್ಕುಗಳು

ಗುಡಿಸಲೆ ಆಗಲಿ ಅರಮನೆಯಾಗಲಿ ಆಟ ನಿಲ್ಲದು
ಹಿರಿಯರೆ ಬರಲಿ ಕಿರಿಯರೆ ಬರಲಿ ಭೇದ ತೋರದು
ಕಷ್ಟವೊ ಸುಖವೊ ಅಳುಕದೆ ಆಡಿ ತೂಗುತಿರುವುದು
ತೂಗುತಿರುವುದು. ಆಡಿಸಿನೋಡು…

ಪ್ರೇಕ್ಷಕ-1: ಯಾವೂರಿನ ಆಟದವರೋ ಮಾರಾಯ ಇವರು?

ಪ್ರೇಕ್ಷಕ-2: ಯಾವೂರು ಆದರೇನು? ಬೊಂಬೆಗಳ ನಟನೆ ನೋಡಿ ಅದ್ಭುತ.

ಪ್ರೇಕ್ಷಕ-3: ಇದು ನಾಗಪುರದ ತೊಗಲು ಬೊಂಬೆ ಆಟದ ಕಂಪನಿಯಂತೆ ಕಂಡ್ರೊ.

ಪ್ರೇಕ್ಷಕ-4: ನಾಗಪುರ ಅಂದ್ರೆ!

ಪ್ರೇಕ್ಷಕ-1: ಅಯೋಧ್ಯೆಯನ್ನೇ, ಹಸ್ತಿನಾವತಿ, ನಾಗಪುರ ಮುಂತಾಗಿ ಕರಿತಾರೆ.

ಪ್ರೇಕ್ಷಕ-4: ಯಾವೂರಾದ್ರೇನು ಇಂಥ ಆಟ ನನ್ನ ಜನ್ಮದಲ್ಲೇ ಕಾಣಲಿಲ್ಲ ಬಿಡೋ.

ಪ್ರದರ್ಶನ ಗಾಡಿ ಮುಂದೆ ಮುಂದೆ ಸಾಗುತ್ತದೆ. ಧ್ವನಿವರ್ಧಕ ಹಾಡುತ್ತದೆ.

ಆಡಿಸುವಾತನ ಕೈ ಚಳಕದಲಿ ಎಲ್ಲ ಅಡಗಿದೆ
ಆತನ ಕರುಣೆಯೆ ಜೀವವ ತುಂಬಿ ಕುಣಿಸಿ ನಗಿಸಿದೆ
ಆ ಕೈ ಸೋತರೆ ಬೊಂಬೆಯ ಕತೆಯು ಕೊನೆಯಾಗುವುದೇ. ಕೊನೆಯಾಗುವುದೇ
ಆಡಿಸಿ ನೋಡು..

ಮುಂದಿನ ಸರ್ಕಲ್‌ನಲ್ಲಿ ಗಾಡಿ ಕೊಂಚ ನಿಲ್ಲುತ್ತದೆ. ಧ್ವನಿವರ್ಧಕ ಹಾಡುತ್ತಲೇ ಇದೆ.

ಒಬ್ಬ ಮುದುಕಿ: ನೋಡವ್ವ ಇದು ತೊಗಲು ಬೊಂಬೆ ಆಟ ಅಂತ ಅನ್ನಿಸುವುದೇ ಇಲ್ಲ. ಜೀವದ ಬೊಂಬೆಗಳು ಹಂಗಿವೆ

ಒಬ್ಬ ತಾಯಿ: ಹೌದಜ್ಜಿ ಈ ತೊಗಲು ಬೊಂಬೆಗಳೇ ನಡೆದಾಡುವ ದೇವರಂತಿವೆ, ಇಷ್ಟು ಜೀವಂತ ಉಂಟೇನಜ್ಜಿ?

ಮಕ್ಕಳ ತಾಯಿ: ಆ ಬೊಂಬೆ ಗಾಡಿ ಎದುರಿಗೆ ತನ್ನ ಕೈಕೂಸನ್ನು ಎತ್ತಿ ನೀವಾಳಿಸಿ ರಸ್ತೆಯಲ್ಲಿ ಅಡ್ಡ ಮಲಗಿಸಿ ತಾನೂ ದೀರ್ಘ ದಂಡ ನಮಸ್ಕರಿಸುತ್ತಾಳೆ.

ಇನ್ನೊಬ್ಬಾಕೆ: ಅವಸರದಿಂದ ಮನೆಯಿಂದ ಈಚೆ ಬಂದವಳೆ ದೇವರ ಗಾಡಿ ಹೋದ ದಾರಿಯ ಧೂಳನ್ನೇ ಎತ್ತಿಕೊಂಡು ಹಣೆಗೆ ಇಟ್ಟುಕೊಳ್ಳುತ್ತಾಳೆ.

ಧ್ವನಿವರ್ಧಕ ಹಾಡುತ್ತದೆ. ಪ್ರದರ್ಶನ ಗಾಡಿ ಮುಂದೆ ಸಾಗುತ್ತದೆ

ಆಡಿಸಿನೋಡು..

ದೃಶ್ಯ ಬದಲು

ಬುಡಬುಡಿಕೆ ಪ್ರವೇಶ: ಶುಭ ನುಡಿಯೆ ಶಕುನದ ಹಕ್ಕಿ ಶುಭನುಡಿಯೆ
ಜಯವಾಗುತೈತೆ ಸ್ವಾಮಿ ಜಯವಾಗುತೈತೆ

ಈ ಸಲದ ಚುನಾವಣೆಯಲಿ ನೀವು ಕೋರಿಕೊಂಡ ಫಲ ಕೈ ಸಾರುತ್ತೆ ಸ್ವಾಮಿ, ಕೈ ಸಾರುತ್ತೆ… ಶುಭ ನುಡಿಯೆ…

ದಿಢೀರನೆ ಸೂತ್ರಧಾರನ ಪ್ರವೇಶ: ಏ ಬುಡಬುಡಿಕೆ, ಇರು ಇರು ಹೋಗಬೇಡ ನೀನ್ ಹೇಳಿದಂಗೆ ನಾಗಪುರದ ತೊಗಲು ಬೊಂಬೆ ಆಟ ಬೊಂಬಾಟ್ ಕಣೋ!

ಬುಡಬುಡಿಕೆ: ಅದಕ್ಕೆ ನಾವು ಹೋಗಿ ಬಂದದ್ದು, ಆ ಕಾರ್ಯಾಗಾರ ನೋಡೋದೆ ಒಂದು ವಿಸ್ಮಯ. ಆ ಸನಾತನ ಕಾರ್ಯಾಗಾರದಲ್ಲಿರುವ ಗುಡಿಕೈಗಾರಿಕೆಯವರ ಕೈ ಚಳಕವೇ ಹಾಗಂತೆ! ಜಗತ್ಪ್ರಸಿದ್ಧ. ಇಂಡಿಯಾ ದೇಶದ ಕೇಂದ್ರ ಬಿಂದು ಅದು.

ಸೂತ್ರಧಾರ: ಕರುನಾಡಿನ ಪುಣ್ಯಕೋಟಿ ಸಂತತಿಯ ಗೋವಿನ ಚರ್ಮ ಕೂಡ ಅಲ್ಲಿಗೆ ಹೋಗುತ್ತದಂತೆ!

ಬುಡಬುಡಿಕೆ: ಗೋವಿನ ಚರ್ಮ ಹೋಗುತ್ತೋ ಅಥವಾ ಜೀವಂತ ಗೋವುಗಳೇ ಹೋಗುತ್ತವೊ ನಮಗೇನೂ ಗೊತ್ತಿಲ್ಲ ಸ್ವಾಮಿ.

ಸೂತ್ರಧಾರ: ಈಗ ಹಂಗೆಲ್ಲ ಜೀವಂತ ಸಾಗಿಸೊ ಹಂಗಿಲ್ಲ- ಖಾಸಗಿ ಗೋರಕ್ಷಕರು ಗಾಡಿ ತಡಿತಾರೆ

ಬುಡಬುಡಿಕೆ: ನಾಗಪುರದ ತೊಗಲು ಬೊಂಬೆ ತಯಾರಿಕೆ ಎಂದ್ರೆ ಯಾರೂ ತಡಿಯಾದಿಲ್ಲ ಬಿಡಿ ಸ್ವಾಮಿ! ಪರವಾನಗಿ ಕೊಡ್ತಾರೆ.

ಸೂತ್ರಧಾರ: ಹೋಗಲಿ, ಬಿಡೋ ನಮಗ್ಯಾಕೆ ಆ ಉಸಾಬರಿ? ಈ ಸಲದ ಚುನಾವಣೆ ಭವಿಷ್ಯ ಏನಾಗುತ್ತೆ ಅಂತ ಹೇಳುತ್ತೇನೊ ನಿನ್ನ ಬುಡಬುಡಿಕೆ ಕಣಿ?

ಬುಡಬುಡಿಕೆ: ಹೇಳ್ತೀನಿ! ಅದಕ್ಕೇ ಅಲ್ವ ನಾನು ಮತ್ತೆ ಬಂದದ್ದು. ಮೊದಲು ಏನಾರ ಕೊಡಿ ಸ್ವಾಮಿ.

ಸೂತ್ರಧಾರ: ಏನ್ ಕೊಡಬೇಕೊ, ಈಗಾಗಲೆ ನಿನ್ನ ಹೆಗಲ ಮೇಲೆ ಅಷ್ಟೊಂದು ಬಟ್ಟೆಬರೆ ಕಂಬಳಿ ಹೊರುವಷ್ಟಿದೆ. ತಲೆ ತುಂಬ ತರಹೇವಾರಿ ಪೇಟ ಹಾಕಿದ್ದೀಯಾ. ಇನ್ನೇನ್ ಬೇಕೊ?

ಬುಡಬುಡಿಕೆ: ಇದೆಲ್ಲ ಉದರ ನಿಮಿತ್ತ ಬಹುಕೃತ ವೇಷ! ನಿಮ್ಮ ರಾಜಕಾರಣಿಗಳೇ ನನಗಿಂತ ಬಹುಕೃತ ವೇಷ ಧರಿಸುತ್ತಾರೆ ರೋಡ್ ಶೋನಲ್ಲಿ. ಸಭೆಗೊಂದು ಡ್ರೆಸ್ಸು. ಕಿರೀಟ, ಹಾರ, ತುರಾಯಿ ಹಾಕ್ಕೊಂಡು ಮಾರೆಮ್ಮಗೆ ಬಿಟ್ಟ ಕೋಣದಂತೆ ಮೆರೀತಾರೆ.

ಸೂತ್ರಧಾರ: ಅವರೇನ್ ಮಾಡ್ತಾರೋ, ಪಾರ್ಟಿಜನ ಕುಣಿಸದ್ದಾಂಗ ಕುಣೀತಾರೆ! ಅಷ್ಟೆ.

ಬುಡಬುಡಿಕೆ: ನಿಜ, ನಿಜ. ಅವರ ವೇಷ ಭೂಷಣ ನೋಡಿದರೆ ನಾಗಪುರದ ತೊಗಲು ಬೊಂಬೆಗಳೂ ನಾಚಿ ನೀರಾಗ್ತವೆ. ಅವರ ಅಭಿನಯ ಕಂಡರೆ ಆಂಜನೇಯ ಕಿಷ್ಕಿಂಧೆಗೆ ಓಟ ಕೀಳುವನು.

ಸೂತ್ರಧಾರ: ಸರಿಸರಿ ಬರೀ ಮಾತೆ ಆಯ್ತು. ನಿನ್ನ ಭವಿಷ್ಯ ಹೇಳೋ. ಕೊಡೋದು ಬಿಡೋದು ಆಮೇಲೆ…

ಬುಡಬುಡಿಕೆ: ಶುಭ ನುಡಿಯೆ ಶಕುನದ ಹಕ್ಕಿ ಶುಭನುಡಿಯೆ….

ಬುಡಬುಡಿಕೆ ನುಡಿಸುತ್ತಾ…

ಈ ಸಲ ಏರುತ್ತಿರುವ ತಾಪಮಾನಕ್ಕೆ ಗಂಗಾ-ಕಾವೇರಿ ನೀರೂ ಬಿಸಿಯಾಗುತ್ತೆ. ’ತಾವರೆ ಹೂ’ ಬಾಡಬಹುದು….
ಈ ಬಿಸಲ ಝಳಕ್ಕೆ ’ಕೈ’ ಅಡ್ಡಲಾಗಿ ಇಟ್ಟವರು ಬಹುಶಃ ಬಚಾವ್….
’ಹುಲ್ಲು ಹೊರೆ ಹೊತ್ತ’ ಹೆಂಗಸಂತೂ ಈ ಸಲದ ಬಿಸಿಲಿಗೆ ಬಸವಳಿದು ಗ್ಯಾನ ತಪ್ತಾಳೆ….
ಶುಭ ನುಡಿಯೇ ಶಕುನದ ಹಕ್ಕಿ ಶುಭ ನುಡಿಯೆ….
ಬುಡಬುಡಿಕೆ ನುಡಿಸುತ್ತಾ ಹೋಗುವನು. ಸೂತ್ರಧಾರ ನೋಡುತ್ತಾ ನಿಲ್ಲುವನು.
-ಹೋಗುವರು-
-ತೆರೆ-

ಪ್ರೊ. ಶಿವರಾಮಯ್ಯ

ಪ್ರೊ.ಶಿವರಾಮಯ್ಯ
ಕನ್ನಡ ಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ ಶಿವರಾಮಯ್ಯನವರು ತಮ್ಮ ಅಧ್ಯಾಪನ ಮತ್ತು ಸಂಶೋಧನಾ ಕಾರ್ಯಗಳ ಜೊತೆಗೆ ಜನಪರ ಹೋರಾಟಗಳಲ್ಲಿ ಗುರುತಿಸಿಕೊಂಡವರು. ಸ್ವಪ್ನ ಸಂಚಯ (ಕವನ ಸಂಕಲನ), ಉರಿಯ ಉಯ್ಯಾಲೆ (ವಿಮರ್ಶಾ ಬರಹಗಳ ಸಂಕಲನ), ದನಿ ಇಲ್ಲದವರ ದನಿ, ಪಂಪಭಾರತ ಭಾಗ-1 &2 (ಸಂಪಾದನೆ ಮತ್ತು ಗದ್ಯಾನುವಾದ) ಅವರ ಪುಸ್ತಕಗಳಲ್ಲಿ ಕೆಲವು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...