Homeಮುಖಪುಟಬೀದಿ ನಾಟಕ: ನಾಗಪುರದ ತೊಗಲು ಬೊಂಬೆ ಆಟ

ಬೀದಿ ನಾಟಕ: ನಾಗಪುರದ ತೊಗಲು ಬೊಂಬೆ ಆಟ

- Advertisement -
- Advertisement -

ತೆರೆಯ ಹಿಂದೆ ತೊಗಲು ಬೊಂಬೆ ಆಟಗಾರರು. ತೆರೆಯ ಮೇಲೆ ಬೊಂಬೆಗಳು ಆಡುತ್ತವೆ..

ಹಾಡು :

ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು
ಏನೇ ಬರಲಿ ಯಾರಿಗೂ ಸೋತು ತಲೆಯ ಬಾಗದು
ಎಂದಿಗು ನಾನು ಹೀಗೆ ಇರುವೆ ಎಂದು ನಗುವುದು
ಹೀಗೆ ನಗುತಲಿರುವುದು ಹೀಗೇ ನಗುತಲಿರುವುದು..

(ಬುಡಬುಡಿಕೆಯವನ ಪ್ರವೇಶ)

ಬುಡಬುಡಿಕೆ : ಜಯವಾಗತೈತೆ ಸ್ವಾಮಿ ಜಯವಾಗುತೈತೆ

ಈ ಸಲದ ಚುನಾವಣೆಯಲಿ ಜಯವಾಗುತೈತೆ
ಬುಡಬುಡಿಕೆ ಶಕುನ ನುಡಿಸುತೈತೆ ಸ್ವಾಮಿ

ಈ ಸಲದ ಚುನಾವಣೆಯಲಿ ಗೆಲುವಾಗುತೈತೆ ಸ್ವಾಮಿ
ಗೆಲುವಾಗುತೈತೆ (ಬುಡಬುಡಿಕೆ ನುಡಿಸುವನು)

ಸೂತ್ರಧಾರ : ಏ ಬುಡಬುಡಿಕೆ! ಇಷ್ಟು ದಿನ ಎಲ್ಲೋಗಿದ್ಯೋ?

ಬುಡಬುಡಿಕೆ : ಯಾಕೆ ಸ್ವಾಮಿ? ಹೊಟ್ಟೆ ಪಾಡಿಗೆ ಒಂದು ಊರೆ? ಒಂದು ಕೇರಿನಾ? ಒಂದು ದೇಶನಾ?

ಸೂತ್ರಧಾರ : ಹೌದೌದು! ಏನ್ ಸುಡಾನ್ ದೇಶಕ್ಕೆ ಹೋಗಿದ್ದೇನು? ಬಹಳ ದಿವಸಾತ್ ನೀನು ಬಂದು!

ಬುಡಬುಡಿಕೆ : ಸುಡಾನ್‌ಗೂ ಇಲ್ಲ ಶ್ರೀಲಂಕಾಕ್ಕೂ ಇಲ್ಲ. ನಾಗಪುರಕ್ಕೆ ಹೋಗಿದ್ದೆ.

ಸೂತ್ರಧಾರ : ಅರೆರೆ ಬುಡಬುಡಿಕೆ ನಾಗಪುರಕ್ಕೆ ಯಾಕೋದೋ? ಅಲ್ಲೇನೈತೋ ನೋಡೋಕೆ?

ಬುಡಬುಡಿಕೆ : ಯಾಕೆಂದ್ರೆ ಮಂಕೀಬಾತ್‌ನಲ್ಲಿ ಮೋದಿ ಹೇಳಲಿಲ್ಲವೆ- ನಾಗಪುರ ಎಂದರೆ ತೊಗಲು ಬೊಂಬೆ ತಯಾರಿಕೆಯಲ್ಲಿ ಜಗತ್ಪ್ರಸಿದ್ಧ ಅಂತ, ಆ ಕಾರ್ಯಾಗಾರ ನೋಡಾಕೋಗಿದ್ದೆ.

ಸೂತ್ರಧಾರ: ಏಯ್, ಮಂಕೀಬಾತ್ ಅಲ್ಲೋ ಮನ್ ಕೀ ಬಾತ್! ಮನದ ಮಾತು. ಅದಿರಲಿ ಅಲ್ಲೇನದಲೇ ನೋಡಾಂತದ್ದು?

ಬುಡಬುಡಿಕೆ: ನಾನೂ ಅದೇ ಅಂದ್ಕಂಡಿದ್ದೆ, ನನ್ ಗೆಣೇಕಾರ ಒಬ್ಬ ಬಾರಲೆ ನೋಡಿ ಬರಾನ, ಅದೆಂತ ಚರ್ಮದಲ್ಲಿ ಮಾಡ್ತಾರೆ ಅಂತ ಕರೆದ, ಅವನಿಗೆ ಕಂಪನಿ ಕೊಟ್ಟಿದ್ದೆ.

ಸೂತ್ರಧಾರ: ಸರಿಕಣೋ. ಅಲ್ಲೇನೇನ್ ಕಂಡ್ಯೋ? ಯಾರ್ ತೋರಿಸಿದ್ರು? ಹೆಂಗೆ ಮಾಡ್ತಾರೊ ಆ ತೊಗಲು ಬೊಂಬೆಗಳನ್ನಾ?

ಬುಡಬುಡಿಕೆ: ಅವರಿವರ ಕೈಕಾಲ್ ಕಟ್ಟಿ ಕಾರ್ಯಾಗಾರ ನೋಡಲು ಪರ್ಮಿಷನ್ ತಗೊಂಡ್ವಿ.

ಸೂತ್ರಧಾರ: ಏ ಬುಡಬುಡಿಕೆ, ಗೋವಿನ ಚರ್ಮದಲ್ಲಿ ಆ ಬೊಂಬೆಗಳನ್ನ ಮಾಡ್ತಾರಂತಲ್ಲೊ!

ಬುಡಬುಡಿಕೆ: ಹೌದು, ಇಲ್ಲವಾದರೆ ತೊಗಲು ಬೊಂಬೆಗಳನ್ನು ಮಾಡುವುದು ಹೇಗೆ ಸ್ವಾಮಿ? ತಮಟೆ, ಮೃದಂಗ, ಅರೆ ಇತ್ಯಾದಿ ವಾದ್ಯಗಳನ್ನು ಮಾಡಿದಂತೆಯೇ ಈ ತೊಗಲು ಬೊಂಬೆಗಳನ್ನೂ ಚರ್ಮದಿಂದಲೇ ಮಾಡಬೇಕಲ್ಲ?

ಸೂತ್ರಧಾರ: ಹೆಂಗ್ ಮಾಡ್ತಾರೊ?

ಬುಡಬುಡಿಕೆ: ಮೊದಲು ಆಟಕ್ಕೆ ಬೇಕಾದ ರಾಮ, ಸೀತೆ, ಆಂಜನೇಯ, ಲಕ್ಷ್ಮಣ, ವಾಲಿ, ಸುಗ್ರೀವ, ರಾವಣ, ಕುಂಭಕರ್ಣ, ವಿಭೀಷಣ, ಮಂಡೋದರಿ, ಇಂದ್ರಜಿತು ಇತ್ಯಾದಿ ಪಾತ್ರಗಳ ಆಕಾರಕ್ಕೆ ಸರಿಯಾಗಿ ರೊಟ್ಟಿನ ಮಾಡೆಲ್‌ಗಳನ್ನು ಕತ್ತರಿಸುತ್ತಾರೆ. ಆಮೇಲೆ ಅವಕ್ಕೆ ಹದಮಾಡಿದ ಚರ್ಮವನ್ನು ಹೊದಿಸಿ ಕರೆಕ್ಟಾಗಿ ಕತ್ತರಿಸಿಕೊಳ್ಳುತ್ತಾರೆ.

ಸೂತ್ರಧಾರ: ರೊಟ್ಟಿನ ಮಾದರಿ ಗೊಂಬೆಗಳು ಕೈಕಾಲು ಆಡಿಸುವುದು ಹೇಗೋ?

ಬುಡಬುಡಿಕೆ: ನೀವೇ ಸೂತ್ರಧಾರರಲ್ಲವೆ? ನಮ್ಮ ಶರೀರದ ಅಂಗಾಂಗಗಳು ಹೇಗೆ ಆಡುತ್ತವೊ ಹಾಗೆ. ಕೈ, ಕಾಲು, ಬಾಗು, ಬಳುಕು, ತಲೆ ವಾಲುವಿಕೆ ಇತ್ಯಾದಿಗಳ ಚಲನೆಗೆ ಅನುಕೂಲವಾಗುವಂತೆ ಕೀಲು ಕೀಲಿಗೂ ರಂಧ್ರ ಮಾಡಿ ಸೂತ್ರ (ದಾರ)ಗಳನ್ನು ಹಾಕಿರುತ್ತಾರೆ.

ಸೂತ್ರಧಾರ: ಆಮೇಲೆ?

ಬುಡಬುಡಿಕೆ: ಆಮೇಲೆ, ಆಯಾ ಪಾತ್ರಗಳ ಕಲ್ಪನೆಗೆ ತಕ್ಕಂತೆ ಬಣ್ಣ ಹಚ್ಚುತ್ತಾರೆ, ರಾಮನಿಗೆ ನೀಲವರ್ಣ, ಸೀತೆಗೆ ಬಂಗಾರದ ಬಣ್ಣ, ಆಂಜನೇಯನಿಗೆ ರೋಮ ರೋಮ ಕಾಣುವಂತೆ ಬೂದು ಬಣ್ಣ.. ಲಕ್ಷ್ಮಣ, ಇಂದ್ರಜಿತ್‌ಗೆ ತಾಮ್ರವರ್ಣ.. ಹೀಗೆ ವಿವಿಧ ಪಾತ್ರಗಳಿಗೆ ವಿವಿಧ ವರ್ಣ! ಇಗೋ ಪ್ರದರ್ಶನವನ್ನೇ ನೋಡಿ! ಬೇಕಾದ್ರೆ.

ತೊಗಲು ಬೊಂಬೆ ನಾಟಕ ಆರಂಭ

ತೆರೆಯ ಹಿಂದೆ ಬೊಂಬೆಯಾಟದ ಸೂತ್ರಧಾರ. ಅವನ ಕೈಚಳಕಕ್ಕೆ ಸರಿಯಾಗಿ ನೆರಳು ಬೆಳಕಿನಲ್ಲಿ ಆ ಬೊಂಬೆಗಳು ನರ್ತಿಸುತ್ತವೆ. ಎದುರಿಗೆ ಪ್ರೇಕ್ಷಕ ವರ್ಗ.

ಭಾಗವತನ ಆಲಾಪ: ಆಡುತಾಡುತಾ ಬಂದಾ ರಾಮಾ
ಆಡುತಾಡುತಾ ಬಂದಾ ರಾಮಾ.. (ಪಲ್ಲವಿ)
ಆಡುತ ಪಾಡುತ ನೋಡುತ ಎಡಬಲ
ಆಡುತಾಡುತಾ ಬಂದಾ ರಾಮ. (ಅನು ಪಲ್ಲವಿ)
ಆಡು…ತಾ..ಡು..ತಾ ಬಂದಾ..ರಾ…ಮಾ. ಆಲಾಪ

ಭಾಗವತ: ನಾವು ಈ ದಿನ ಸಂಪೂರ್ಣ ರಾಮಾಯಣ ಎಂಬ ತೊಗಲು ಬೊಂಬೆ ಆಟವನ್ನು ಈ ನಗರದ ಬೀದಿಬೀದಿಗಳಲ್ಲಿ, ಪ್ರದರ್ಶನ ಗಾಡಿಯಲ್ಲಿ ’ರೋಡ್ ಶೋ’ ಮಾಡುತ್ತಿದ್ದೇವೆ. ರಸಿಕಜನ ತಾವಿರುವಲ್ಲಿಯೇ ನೋಡಿ ಆನಂದಿಸಲಿ ಎಂದು.

ಸೂತ್ರಧಾರ: ರೋಡ್ ಶೋ ಪ್ರಯೋಗ ನಮ್ಮ ನಗರದಲ್ಲಿ ಇದೇ ಮೊಟ್ಟ ಮೊದಲನೆಯದು. ನಮ್ಮ ಈ ತೊಗಲು ಬೊಂಬೆ ಆಟವನ್ನು ಜನ ನೋಡಿ ಪ್ರೋತ್ಸಾಹಿಸಬೇಕು ಎಂದು ವಿನಂತಿಸಿಕೊಳ್ಳುತ್ತೇವೆ.

[ಹಿನ್ನೆಲೆ ಸಂಗೀತ, ಧ್ವನಿವರ್ಧಕದಲ್ಲಿ]

ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು
ಏನೇ ಬರಲಿ ಯಾರಿಗೂ ಸೋತು ತಲೆಯ ಬಾಗದು.
ಹಾಡಿನ ಲಯಕ್ಕೆ ಸೀತಾ, ರಾಮ, ಲಕ್ಷ್ಮಣ, ಆಂಜನೇಯ ಬೊಂಬೆಗಳು ಅಭಿನಯಿಸುತ್ತವೆ.

(ಪ್ರದರ್ಶನದ ಟ್ರಕ್ಕು ನಗರದ ಬೀದಿಬೀದಿಗಳಲ್ಲಿ ಕೇಂದ್ರ ವೃತ್ತಗಳಲ್ಲಿ ನಿಂತು ನಿಂತು ಸಾಗುತ್ತದೆ. ಧ್ವನಿವರ್ಧಕದ ಹಾಡಿಗೆ ತಕ್ಕಂತೆ ತೊಗಲು ಬೊಂಬೆಗಳು ಅಭಿನಯಿಸುತ್ತವೆ.)

ಇದನ್ನೂ ಓದಿ: ಒಂದಿಷ್ಟು ಜಪಾನೀ ಹಾಯ್ಕುಗಳು

ಗುಡಿಸಲೆ ಆಗಲಿ ಅರಮನೆಯಾಗಲಿ ಆಟ ನಿಲ್ಲದು
ಹಿರಿಯರೆ ಬರಲಿ ಕಿರಿಯರೆ ಬರಲಿ ಭೇದ ತೋರದು
ಕಷ್ಟವೊ ಸುಖವೊ ಅಳುಕದೆ ಆಡಿ ತೂಗುತಿರುವುದು
ತೂಗುತಿರುವುದು. ಆಡಿಸಿನೋಡು…

ಪ್ರೇಕ್ಷಕ-1: ಯಾವೂರಿನ ಆಟದವರೋ ಮಾರಾಯ ಇವರು?

ಪ್ರೇಕ್ಷಕ-2: ಯಾವೂರು ಆದರೇನು? ಬೊಂಬೆಗಳ ನಟನೆ ನೋಡಿ ಅದ್ಭುತ.

ಪ್ರೇಕ್ಷಕ-3: ಇದು ನಾಗಪುರದ ತೊಗಲು ಬೊಂಬೆ ಆಟದ ಕಂಪನಿಯಂತೆ ಕಂಡ್ರೊ.

ಪ್ರೇಕ್ಷಕ-4: ನಾಗಪುರ ಅಂದ್ರೆ!

ಪ್ರೇಕ್ಷಕ-1: ಅಯೋಧ್ಯೆಯನ್ನೇ, ಹಸ್ತಿನಾವತಿ, ನಾಗಪುರ ಮುಂತಾಗಿ ಕರಿತಾರೆ.

ಪ್ರೇಕ್ಷಕ-4: ಯಾವೂರಾದ್ರೇನು ಇಂಥ ಆಟ ನನ್ನ ಜನ್ಮದಲ್ಲೇ ಕಾಣಲಿಲ್ಲ ಬಿಡೋ.

ಪ್ರದರ್ಶನ ಗಾಡಿ ಮುಂದೆ ಮುಂದೆ ಸಾಗುತ್ತದೆ. ಧ್ವನಿವರ್ಧಕ ಹಾಡುತ್ತದೆ.

ಆಡಿಸುವಾತನ ಕೈ ಚಳಕದಲಿ ಎಲ್ಲ ಅಡಗಿದೆ
ಆತನ ಕರುಣೆಯೆ ಜೀವವ ತುಂಬಿ ಕುಣಿಸಿ ನಗಿಸಿದೆ
ಆ ಕೈ ಸೋತರೆ ಬೊಂಬೆಯ ಕತೆಯು ಕೊನೆಯಾಗುವುದೇ. ಕೊನೆಯಾಗುವುದೇ
ಆಡಿಸಿ ನೋಡು..

ಮುಂದಿನ ಸರ್ಕಲ್‌ನಲ್ಲಿ ಗಾಡಿ ಕೊಂಚ ನಿಲ್ಲುತ್ತದೆ. ಧ್ವನಿವರ್ಧಕ ಹಾಡುತ್ತಲೇ ಇದೆ.

ಒಬ್ಬ ಮುದುಕಿ: ನೋಡವ್ವ ಇದು ತೊಗಲು ಬೊಂಬೆ ಆಟ ಅಂತ ಅನ್ನಿಸುವುದೇ ಇಲ್ಲ. ಜೀವದ ಬೊಂಬೆಗಳು ಹಂಗಿವೆ

ಒಬ್ಬ ತಾಯಿ: ಹೌದಜ್ಜಿ ಈ ತೊಗಲು ಬೊಂಬೆಗಳೇ ನಡೆದಾಡುವ ದೇವರಂತಿವೆ, ಇಷ್ಟು ಜೀವಂತ ಉಂಟೇನಜ್ಜಿ?

ಮಕ್ಕಳ ತಾಯಿ: ಆ ಬೊಂಬೆ ಗಾಡಿ ಎದುರಿಗೆ ತನ್ನ ಕೈಕೂಸನ್ನು ಎತ್ತಿ ನೀವಾಳಿಸಿ ರಸ್ತೆಯಲ್ಲಿ ಅಡ್ಡ ಮಲಗಿಸಿ ತಾನೂ ದೀರ್ಘ ದಂಡ ನಮಸ್ಕರಿಸುತ್ತಾಳೆ.

ಇನ್ನೊಬ್ಬಾಕೆ: ಅವಸರದಿಂದ ಮನೆಯಿಂದ ಈಚೆ ಬಂದವಳೆ ದೇವರ ಗಾಡಿ ಹೋದ ದಾರಿಯ ಧೂಳನ್ನೇ ಎತ್ತಿಕೊಂಡು ಹಣೆಗೆ ಇಟ್ಟುಕೊಳ್ಳುತ್ತಾಳೆ.

ಧ್ವನಿವರ್ಧಕ ಹಾಡುತ್ತದೆ. ಪ್ರದರ್ಶನ ಗಾಡಿ ಮುಂದೆ ಸಾಗುತ್ತದೆ

ಆಡಿಸಿನೋಡು..

ದೃಶ್ಯ ಬದಲು

ಬುಡಬುಡಿಕೆ ಪ್ರವೇಶ: ಶುಭ ನುಡಿಯೆ ಶಕುನದ ಹಕ್ಕಿ ಶುಭನುಡಿಯೆ
ಜಯವಾಗುತೈತೆ ಸ್ವಾಮಿ ಜಯವಾಗುತೈತೆ

ಈ ಸಲದ ಚುನಾವಣೆಯಲಿ ನೀವು ಕೋರಿಕೊಂಡ ಫಲ ಕೈ ಸಾರುತ್ತೆ ಸ್ವಾಮಿ, ಕೈ ಸಾರುತ್ತೆ… ಶುಭ ನುಡಿಯೆ…

ದಿಢೀರನೆ ಸೂತ್ರಧಾರನ ಪ್ರವೇಶ: ಏ ಬುಡಬುಡಿಕೆ, ಇರು ಇರು ಹೋಗಬೇಡ ನೀನ್ ಹೇಳಿದಂಗೆ ನಾಗಪುರದ ತೊಗಲು ಬೊಂಬೆ ಆಟ ಬೊಂಬಾಟ್ ಕಣೋ!

ಬುಡಬುಡಿಕೆ: ಅದಕ್ಕೆ ನಾವು ಹೋಗಿ ಬಂದದ್ದು, ಆ ಕಾರ್ಯಾಗಾರ ನೋಡೋದೆ ಒಂದು ವಿಸ್ಮಯ. ಆ ಸನಾತನ ಕಾರ್ಯಾಗಾರದಲ್ಲಿರುವ ಗುಡಿಕೈಗಾರಿಕೆಯವರ ಕೈ ಚಳಕವೇ ಹಾಗಂತೆ! ಜಗತ್ಪ್ರಸಿದ್ಧ. ಇಂಡಿಯಾ ದೇಶದ ಕೇಂದ್ರ ಬಿಂದು ಅದು.

ಸೂತ್ರಧಾರ: ಕರುನಾಡಿನ ಪುಣ್ಯಕೋಟಿ ಸಂತತಿಯ ಗೋವಿನ ಚರ್ಮ ಕೂಡ ಅಲ್ಲಿಗೆ ಹೋಗುತ್ತದಂತೆ!

ಬುಡಬುಡಿಕೆ: ಗೋವಿನ ಚರ್ಮ ಹೋಗುತ್ತೋ ಅಥವಾ ಜೀವಂತ ಗೋವುಗಳೇ ಹೋಗುತ್ತವೊ ನಮಗೇನೂ ಗೊತ್ತಿಲ್ಲ ಸ್ವಾಮಿ.

ಸೂತ್ರಧಾರ: ಈಗ ಹಂಗೆಲ್ಲ ಜೀವಂತ ಸಾಗಿಸೊ ಹಂಗಿಲ್ಲ- ಖಾಸಗಿ ಗೋರಕ್ಷಕರು ಗಾಡಿ ತಡಿತಾರೆ

ಬುಡಬುಡಿಕೆ: ನಾಗಪುರದ ತೊಗಲು ಬೊಂಬೆ ತಯಾರಿಕೆ ಎಂದ್ರೆ ಯಾರೂ ತಡಿಯಾದಿಲ್ಲ ಬಿಡಿ ಸ್ವಾಮಿ! ಪರವಾನಗಿ ಕೊಡ್ತಾರೆ.

ಸೂತ್ರಧಾರ: ಹೋಗಲಿ, ಬಿಡೋ ನಮಗ್ಯಾಕೆ ಆ ಉಸಾಬರಿ? ಈ ಸಲದ ಚುನಾವಣೆ ಭವಿಷ್ಯ ಏನಾಗುತ್ತೆ ಅಂತ ಹೇಳುತ್ತೇನೊ ನಿನ್ನ ಬುಡಬುಡಿಕೆ ಕಣಿ?

ಬುಡಬುಡಿಕೆ: ಹೇಳ್ತೀನಿ! ಅದಕ್ಕೇ ಅಲ್ವ ನಾನು ಮತ್ತೆ ಬಂದದ್ದು. ಮೊದಲು ಏನಾರ ಕೊಡಿ ಸ್ವಾಮಿ.

ಸೂತ್ರಧಾರ: ಏನ್ ಕೊಡಬೇಕೊ, ಈಗಾಗಲೆ ನಿನ್ನ ಹೆಗಲ ಮೇಲೆ ಅಷ್ಟೊಂದು ಬಟ್ಟೆಬರೆ ಕಂಬಳಿ ಹೊರುವಷ್ಟಿದೆ. ತಲೆ ತುಂಬ ತರಹೇವಾರಿ ಪೇಟ ಹಾಕಿದ್ದೀಯಾ. ಇನ್ನೇನ್ ಬೇಕೊ?

ಬುಡಬುಡಿಕೆ: ಇದೆಲ್ಲ ಉದರ ನಿಮಿತ್ತ ಬಹುಕೃತ ವೇಷ! ನಿಮ್ಮ ರಾಜಕಾರಣಿಗಳೇ ನನಗಿಂತ ಬಹುಕೃತ ವೇಷ ಧರಿಸುತ್ತಾರೆ ರೋಡ್ ಶೋನಲ್ಲಿ. ಸಭೆಗೊಂದು ಡ್ರೆಸ್ಸು. ಕಿರೀಟ, ಹಾರ, ತುರಾಯಿ ಹಾಕ್ಕೊಂಡು ಮಾರೆಮ್ಮಗೆ ಬಿಟ್ಟ ಕೋಣದಂತೆ ಮೆರೀತಾರೆ.

ಸೂತ್ರಧಾರ: ಅವರೇನ್ ಮಾಡ್ತಾರೋ, ಪಾರ್ಟಿಜನ ಕುಣಿಸದ್ದಾಂಗ ಕುಣೀತಾರೆ! ಅಷ್ಟೆ.

ಬುಡಬುಡಿಕೆ: ನಿಜ, ನಿಜ. ಅವರ ವೇಷ ಭೂಷಣ ನೋಡಿದರೆ ನಾಗಪುರದ ತೊಗಲು ಬೊಂಬೆಗಳೂ ನಾಚಿ ನೀರಾಗ್ತವೆ. ಅವರ ಅಭಿನಯ ಕಂಡರೆ ಆಂಜನೇಯ ಕಿಷ್ಕಿಂಧೆಗೆ ಓಟ ಕೀಳುವನು.

ಸೂತ್ರಧಾರ: ಸರಿಸರಿ ಬರೀ ಮಾತೆ ಆಯ್ತು. ನಿನ್ನ ಭವಿಷ್ಯ ಹೇಳೋ. ಕೊಡೋದು ಬಿಡೋದು ಆಮೇಲೆ…

ಬುಡಬುಡಿಕೆ: ಶುಭ ನುಡಿಯೆ ಶಕುನದ ಹಕ್ಕಿ ಶುಭನುಡಿಯೆ….

ಬುಡಬುಡಿಕೆ ನುಡಿಸುತ್ತಾ…

ಈ ಸಲ ಏರುತ್ತಿರುವ ತಾಪಮಾನಕ್ಕೆ ಗಂಗಾ-ಕಾವೇರಿ ನೀರೂ ಬಿಸಿಯಾಗುತ್ತೆ. ’ತಾವರೆ ಹೂ’ ಬಾಡಬಹುದು….
ಈ ಬಿಸಲ ಝಳಕ್ಕೆ ’ಕೈ’ ಅಡ್ಡಲಾಗಿ ಇಟ್ಟವರು ಬಹುಶಃ ಬಚಾವ್….
’ಹುಲ್ಲು ಹೊರೆ ಹೊತ್ತ’ ಹೆಂಗಸಂತೂ ಈ ಸಲದ ಬಿಸಿಲಿಗೆ ಬಸವಳಿದು ಗ್ಯಾನ ತಪ್ತಾಳೆ….
ಶುಭ ನುಡಿಯೇ ಶಕುನದ ಹಕ್ಕಿ ಶುಭ ನುಡಿಯೆ….
ಬುಡಬುಡಿಕೆ ನುಡಿಸುತ್ತಾ ಹೋಗುವನು. ಸೂತ್ರಧಾರ ನೋಡುತ್ತಾ ನಿಲ್ಲುವನು.
-ಹೋಗುವರು-
-ತೆರೆ-

ಪ್ರೊ. ಶಿವರಾಮಯ್ಯ

ಪ್ರೊ.ಶಿವರಾಮಯ್ಯ
ಕನ್ನಡ ಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ ಶಿವರಾಮಯ್ಯನವರು ತಮ್ಮ ಅಧ್ಯಾಪನ ಮತ್ತು ಸಂಶೋಧನಾ ಕಾರ್ಯಗಳ ಜೊತೆಗೆ ಜನಪರ ಹೋರಾಟಗಳಲ್ಲಿ ಗುರುತಿಸಿಕೊಂಡವರು. ಸ್ವಪ್ನ ಸಂಚಯ (ಕವನ ಸಂಕಲನ), ಉರಿಯ ಉಯ್ಯಾಲೆ (ವಿಮರ್ಶಾ ಬರಹಗಳ ಸಂಕಲನ), ದನಿ ಇಲ್ಲದವರ ದನಿ, ಪಂಪಭಾರತ ಭಾಗ-1 &2 (ಸಂಪಾದನೆ ಮತ್ತು ಗದ್ಯಾನುವಾದ) ಅವರ ಪುಸ್ತಕಗಳಲ್ಲಿ ಕೆಲವು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಬೀಬಿ ನೀನು ಅಡಗಿಕೊಳ್ಳಲು ಸಾಧ್ಯವಿಲ್ಲ’: ವಾಷಿಂಗ್ಟನ್‌ ಗೆ ಭೇಟಿ ನೀಡಿದ ನೆತನ್ಯಾಹು ವಿರುದ್ಧ ಜನಾಕ್ರೋಶ: ಐಸಿಸಿ ವಾರಂಟ್ ನಿರ್ಲಕ್ಷಿಸಿ ಟ್ರಂಪ್ ಆತಿಥ್ಯ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಮಾತುಕತೆಗಾಗಿ ವಾಷಿಂಗ್ಟನ್ ಡಿಸಿಗೆ ಭೇಟಿ ನೀಡುತ್ತಿದ್ದಂತೆಯೇ, ರಾಜಧಾನಿಯಾದ್ಯಂತ ಅವರ ವಿರುದ್ಧ ಕಟು ಆಕ್ರೋಶ ಮತ್ತು ಪ್ರತಿಭಟನೆಗಳ ಕಾವು ತೀವ್ರಗೊಂಡಿದೆ. ಅಂತರರಾಷ್ಟ್ರೀಯ...

SIR: ಕರ್ನಾಟಕದಲ್ಲಿ 43 ಲಕ್ಷಕ್ಕೂ ಹೆಚ್ಚು ಜನರಿಂದ ಸಿಗದ ಸಹಿ ಮಾಡಿದ ನಮೂನೆ; ಕರಡು ಪಟ್ಟಿಯಿಂದ ಹೆಸರು ಕೈಬಿಡುವ ಭೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಪ್ರಮುಖ ಮೈಲಿಗಲ್ಲುಗಳನ್ನು ತಲುಪಿದ್ದು, ರಾಜ್ಯಾದ್ಯಂತ ಶೇಕಡಾ 77ರಷ್ಟು ಗಣತಿ ನಮೂನೆಗಳು ಡಿಜಿಟಲೀಕರಣಗೊಂಡಿವೆ. ಆದಾಗ್ಯೂ, ರಾಜ್ಯದ 43.24 ಲಕ್ಷಕ್ಕೂ ಹೆಚ್ಚು ಮತದಾರರು...

ನೀಟ್‌ ಪ್ರತಿಭಟನೆಯಲ್ಲಿ ಉಮರ್ ಖಾಲಿದ್‌ಗೆ ಬೆಂಬಲ; ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ ಗೋವಾ ಪೊಲೀಸರು

ಗೋವಾದ ಪಣಜಿಯಲ್ಲಿ ನಡೆದ ನೀಟ್-ಯುಜಿ ಪ್ರತಿಭಟನೆಯಲ್ಲಿ ಉಮರ್ ಖಾಲಿದ್ ಪರ ಘೋಷಣೆಗಳನ್ನು ಕೂಗಿದ ಕೆಲವು ವಿದ್ಯಾರ್ಥಿಗಳ ಪ್ರತಿಭಟನೆ ಹಿಂದಿನ ಹಣಕಾಸು ಮತ್ತು ಉದ್ದೇಶದ ಬಗ್ಗೆ ಗೋವಾ ಪೊಲೀಸರು ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು...

ಅಸ್ಸಾಂ ಪ್ರವಾಹದ ಭೀಕರತೆ: 78 ಬಲಿ, 3 ಲಕ್ಷ ಜನರ ಬದುಕು ಸಂಕಷ್ಟಕ್ಕೆ: ವ್ಯವಸ್ಥೆಯ ವೈಫಲ್ಯಕ್ಕೆ ಬೆಲೆ ತೆತ್ತುತ್ತಿರುವ ನಾಗರಿಕರು

ಈಶಾನ್ಯ ಭಾರತದ ಗೇಟ್‌ವೇ ಎಂದೇ ಕರೆಯಲ್ಪಡುವ ಅಸ್ಸಾಂನಲ್ಲಿ ಪ್ರವಾಹದ ಅಟ್ಟಹಾಸ ಮುಂದುವರಿದಿದ್ದು, ಸಾವಿನ ಸಂಖ್ಯೆ 78ಕ್ಕೆ ಏರಿಕೆಯಾಗಿದೆ. ಇತ್ತೀಚಿನ ಅಧಿಕೃತ ವರದಿಗಳ ಪ್ರಕಾರ, ಶಿವಸಾಗರ್ ಜಿಲ್ಲೆಯಲ್ಲಿ ಇಬ್ಬರು ಹಾಗೂ ಗೋಲಾಘಾಟ್‌ನಲ್ಲಿ ಒಬ್ಬರು ನೀರಿನಲ್ಲಿ...

ನೀಟ್ ಪ್ರತಿಭಟನೆಯಲ್ಲಿ ಪೆಲೆಟ್ ಗನ್ ಬಳಕೆ ಆರೋಪ; RAF ಮದ್ದುಗುಂಡುಗಳ ದಾಖಲೆ ಕೇಳಿದ ಸುಪ್ರೀಂ ಕೋರ್ಟ್

ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಜಂತರ್ ಮಂತರ್‌ನಲ್ಲಿ ನಿಯೋಜಿಸಲಾಗಿದ್ದ ಕ್ಷಿಪ್ರ ಕಾರ್ಯ ಪಡೆ (RAF) ಯ ಮದ್ದುಗುಂಡುಗಳ ದಾಖಲೆಯನ್ನು ಸಂರಕ್ಷಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ (ಜುಲೈ...

ಕ್ರಿಸ್ತನಿಗಿಂತ ಮೊದಲೇ ಇಲ್ಲಿದ್ದೇವೆ..ನಮಗೆ ಯಾವುದೇ ದಾಖಲೆಗಳು ಬೇಡ : ಎಸ್‌ಐಆರ್ ತಿರಸ್ಕರಿಸಿದ ಜಾರ್ಖಂಡ್‌ನ ಆದಿವಾಸಿಗಳು

ಜಾರ್ಖಂಡ್‌ನ ಖುಂತಿ ಜಿಲ್ಲೆಯ ದಟ್ಟ ಅರಣ್ಯ ಭಾಗದಲ್ಲಿ ವಾಸಿಸುವ ಮುಂಡಾ ಬುಡಕಟ್ಟು ಸಮುದಾಯದ ಒಂದು ವರ್ಗವು ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯನ್ನು ತೀವ್ರವಾಗಿ ವಿರೋಧಿಸಿದ್ದು, ಆಧುನಿಕ...

NICE ನಲ್ಲಿ ಯೋಜನೆಯಲ್ಲಿ ‘ನೈಸ್’ ಎನ್ನುವಂತಹದ್ದು ಏನೂ ಇಲ್ಲ: ರಾಜ್ಯದ ಅತಿದೊಡ್ಡ ಹಗರಣ ಎಂದ ಹೈಕೋರ್ಟ್

ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆ (ಬಿಎಂಐಸಿಪಿ) ಅಥವಾ 'ನೈಸ್' ಯೋಜನೆ ಕರ್ನಾಟಕದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಹಗರಣಗಳಲ್ಲಿ ಒಂದಾಗಿ ಕಾಣಿಸುತ್ತಿದೆ ಎಂದು ಕರ್ನಾಟಕ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್...

ಪ್ರತಿಭಟನೆಗೆ ಹೋಗುವ ಮಹಿಳೆಯರು ಗ್ಯಾಂಗ್‌ರೇಪ್‌ ಆನಂದಿಸುತ್ತಾರೆ ಎಂದಿದ್ದ ಟಿ.ಜಿ. ಮೋಹನ್‌ದಾಸ್‌ ವಿರುದ್ಧ ಎಫ್‌ಐಆರ್‌ ದಾಖಲು

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವವರ ಮೇಲೆ, ನನ್ನ ಕೈಯಲ್ಲಿ ಅಧಿಕಾರವಿದ್ದರೆ ಗುಂಡು ಹಾರಿಸುತ್ತಿದ್ದೆ ಎಂದು ಇತ್ತೀಚಿನ ಯೂಟ್ಯೂಬ್ ವೀಡಿಯೊದಲ್ಲಿ ಹೇಳಿಕೆ ನೀಡಿದ್ದ ಹಿಂದುತ್ವವಾದಿ ಚಿಂತಕ ಟಿ.ಜಿ. ಮೋಹನ್‌ದಾಸ್ ವಿರುದ್ಧ ತಿರುವನಂತಪುರಂ ಸಿಟಿ...

ಫ್ರಾನ್ಸ್‌ನಲ್ಲಿ ಕೆಲಸದ ಸಮಯ ಟ್ರ್ಯಾಕಿಂಗ್ ಲೋಪ: ಇನ್ಫೋಸಿಸ್‌ಗೆ ₹1.9 ಕೋಟಿ ದಂಡ: ನಾರಾಯಣಮೂರ್ತಿಯವರ ‘70 ಗಂಟೆ ಶ್ರಮ’ದ ಮಾದರಿ ಟ್ರೋಲ್

ಭಾರತೀಯ ಐಟಿ ರಫ್ತು ಸೇವಾ ರಂಗದ ಬೃಹತ್ ಸಂಸ್ಥೆಯಾದ ಇನ್ಫೋಸಿಸ್‌ಗೆ ಫ್ರಾನ್ಸ್‌ನಲ್ಲಿ ಹಿನ್ನಡೆಯಾಗಿದೆ. ಉದ್ಯೋಗಿಗಳ ಕೆಲಸದ ಸಮಯವನ್ನು ದಾಖಲಿಸುವ ವ್ಯವಸ್ಥೆಯಲ್ಲಿನ ನ್ಯೂನತೆಗಳು ಹಾಗೂ ಸ್ಥಳೀಯ ಕಾರ್ಮಿಕ ನಿಯಮಾವಳಿಗಳ ಪಾಲನೆಯಲ್ಲಿ ಕಂಡುಬಂದ ಲೋಪಗಳ ಹಿನ್ನೆಲೆಯಲ್ಲಿ...

ವೋಟರ್ ಐಡಿ, ಬ್ಯಾಂಕ್ ಪಾಸ್‌ಬುಕ್, ಆಧಾರ್, ಜಮೀನಿನ ಹಕ್ಕು ಪತ್ರ ಇದ್ದ ಮಾತ್ರಕ್ಕೆ ಭಾರತೀಯ ಪ್ರಜೆಯಾಗಲ್ಲ: ಕಲ್ಕತ್ತಾ ಹೈಕೋರ್ಟ್

ಆಧಾರ್ ಕಾರ್ಡ್, ಪಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಬ್ಯಾಂಕ್ ಪಾಸ್‌ಬುಕ್ ಮತ್ತು ಪಿತ್ರಾರ್ಜಿತ ಜಮೀನಿನ ದಾಖಲೆಗಳು ಭಾರತೀಯ ಪೌರತ್ವವನ್ನು ನಿರೂಪಿಸಲು ಅಂತಿಮ ಅಥವಾ ನಿರ್ಣಾಯಕ ಪುರಾವೆಗಳಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ಮಹತ್ವದ...