ದಶಕದ ಹಿಂದೆ (2015ರಲ್ಲಿ) ನಡೆದಿದ್ದ ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕಿನ ಹುಲಿಹೈದರ ಗ್ರಾಮದ ವಿದ್ಯಾರ್ಥಿ ಯಲ್ಲಾಲಿಂಗ ಅವರ ಸಾವಿನ ಪ್ರಕರಣದ ತೀರ್ಪನ್ನು ಕೊಪ್ಪಳದ ಜಿಲ್ಲಾ ನ್ಯಾಯಾಲಯ ಶುಕ್ರವಾರ (ಅಕ್ಟೋಬರ್ 3) ಪ್ರಕಟಿಸಿದೆ.
ಸೆಪ್ಟೆಂಬರ್ 24ರಂದು ಅಂತಿಮ ವಿಚಾರಣೆ ನಡೆಸಿ ಕಾಯ್ದರಿಸಿದ್ದ ತೀರ್ಪನ್ನು ನ್ಯಾಯಾಲಯ ಪ್ರಕಟಿಸಿದ್ದು, ಸಚಿವ ಶಿವರಾಜ್ ತಂಗಡಗಿ ಅವರ ಆಪ್ತ ಹನುಮೇಶ್ ನಾಯಕ್ ಸೇರಿದಂತೆ ಪ್ರಕರಣದ ಎಲ್ಲಾ 9 ಆರೋಪಿಗಳನ್ನು ಖುಲಾಸೆಗೊಳಿಸಿದೆ.
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಆರೋಪಿಗಳ ಪರ ವಕೀಲರು, “ಒಟ್ಟು 9 ಜನರ ವಿರುದ್ದ ಸಿಐಡಿ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ನ್ಯಾಯಾಲಯ 76 ಸಾಕ್ಷಿಗಳನ್ನು ವಿಚಾರಣೆ ನಡೆಸಿತ್ತು. ಈ ಪೈಕಿ 56 ಜನರು ಪ್ರಾಸಿಕ್ಯೂಷನ್ ಪರವಾಗಿ ಸಾಕ್ಷ್ಯ ನುಡಿದಿಲ್ಲ ಎಂಬುವುದನ್ನು ನ್ಯಾಯಾಲಯ ಪರಿಗಣಿಸಿದೆ ಎಂದಿದ್ದಾರೆ.
ಮುಂದುವರಿದು, ಯಲ್ಲಾಲಿಂಗ ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ಅಣ್ಣ ವೀರಭದ್ರಪ್ಪ ಅವರು ಪೊಲೀಸರ ಮುಂದೆ ಕೊಟ್ಟಿರುವ ಲಿಖಿತ ಹೇಳಿಕೆ ಮತ್ತು ಯಲ್ಲಾಲಿಂಗನ ಮೃತದೇಹದ ಮೇಲಿನ ಗಾಯಗಳು ರೈಲು ಡಿಕ್ಕಿಯಿಂದ ಆಗಿರುವ ಸಾಧ್ಯತೆ ಹೆಚ್ಚಿದೆ ಎಂದು ಮರಣೋತ್ತ ಪರೀಕ್ಷೆ ನಡೆಸಿದ ವೈದ್ಯರು ಕೊಟ್ಟಿರುವ ವರದಿಯನ್ನು ನ್ಯಾಯಾಲಯ ಪರಿಗಣನೆಗೆ ತೆಗೆದುಕೊಂಡಿದೆ ಎಂದು ಹೇಳಿದ್ದಾರೆ.
ಈ ಪ್ರಕರಣದಲ್ಲಿ ಹನುಮೇಶ್ ನಾಯಕ್ ಅವರ ಪಾತ್ರ ಇಲ್ಲ ಎಂಬುವುದು ಗೊತ್ತಿದ್ದರೂ, ಅವರನ್ನು ಸುಖಾಸುಮ್ಮನೆ ಬಂಧಿಸಿ ನ್ಯಾಯಾಂಗ ಬಂಧನದಲ್ಲಿ ಇಡಲಾಗಿತ್ತು. ಇದರ ಹಿಂದೆ ರಾಜಕೀಯ ಷಡ್ಯಂತ್ರ ಇತ್ತು ಎಂದು ಆರೋಪಿಸಿದ್ದಾರೆ.
ಹನುಮೇಶ್ ನಾಯಕ್ ಮಾತನಾಡಿ, “ಶಿವರಾಜ್ ತಂಗಡಗಿ ಅವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಬೇಕು ಎಂದು ನನ್ನನ್ನು ಬಂಧಿಸಿದ್ದರು. ಕಳೆದ 10 ವರ್ಷಗಳಿಂದ ನಾವು ಆರೋಪ ಹೊತ್ತಿದ್ದೆವು. ನ್ಯಾಯಾಲಯದ ತೀರ್ಪಿನಿಂದ ನಾವು ನಿರ್ದೋರ್ಷಿಗಳು ಎಂಬುವುದು ಖಚಿತವಾಗಿದೆ. ನಮ್ಮ ಮೇಲಿನ ಆರೋಪ ಸುಳ್ಳಾಗಿತ್ತು. ಇದೀಗ ನ್ಯಾಯಾಲಯದಲ್ಲೂ ಸಾಬೀತಾಗಿದೆ. ನ್ಯಾಯ ದೇವತೆ ನಮಗೆ ನ್ಯಾಯ ದೊರಕಿಸಿ ಕೊಟ್ಟಿದ್ದಾಳೆ” ಎಂದಿದ್ದಾರೆ.
ನ್ಯಾಯಾಲಯದ ತೀರ್ಪಿನ ಕುರಿತು ಟಿವಿ ವಾಹಿನಿಯೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಯಲ್ಲಾಲಿಂಗ ಅವರ ತಾಯಿ, “ನ್ಯಾಯಾಲಯದ ತೀರ್ಪಿನ ಬಗ್ಗೆ ನನಗೆ ಇನ್ನೂ ಯಾವುದೇ ಮಾಹಿತಿ ದೊರೆತಿಲ್ಲ. ನಾನು ಸರ್ಕಾರಿ ವಕೀಲರನ್ನು ಭೇಟಿಯಾಗುತ್ತೇನೆ, ಮುಂದೆ ಏನು ಮಾಡಬೇಕು ಎಂದು ಚರ್ಚೆ ಮಾಡುತ್ತೇನೆ. ನನ್ನ ಮಗನನ್ನು ಕೊಲೆ ಮಾಡಿರುವುದು ಸತ್ಯ, ನನಗೆ ಸುಳ್ಳು ಹೇಳಲು ಬರುವುದಿಲ್ಲ” ಎಂದು ಕಣ್ಣೀರು ಹಾಕಿದ್ದಾರೆ.
ಮುಂದುವರಿದು, “ಹೋರಾಟಗಳಿಂದ ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತದೆ ಎಂದು ಹೇಳಲಾಗಿತ್ತು. ನಾವು ಸಾಕಷ್ಟು ಹೋರಾಟ ಮಾಡಿದ್ದೇವೆ. ಆದರೆ, ಏನೂ ಪ್ರಯೋಜನ ಆಗಿಲ್ಲ. ದುಡ್ಡಿದ್ದವರು ಏನು ಬೇಕಾದರು ಮಾಡುತ್ತಾರೆ, ನಮ್ಮಂತ ಅಮಾಯಕರು ಏನು ಮಾಡೋದು?” ಎಂದು ನಿರಾಸೆ ವ್ಯಕ್ತಪಡಿಸಿದ್ದಾರೆ.
ನಿಮ್ಮ ಮಗ ವೀರಭದ್ರಪ್ಪ ವ್ಯತಿರಿಕ್ತ ಹೇಳಿಕೆ ಕೊಟ್ಟಿದ್ದಾರಲ್ಲ? ಎಂಬ ಟಿವಿ ವಾಹಿನಿಯವ ಪ್ರಶ್ನೆಗೆ ಉತ್ತರಿಸಿದ ಅವರು, “ಆತನಿಗೆ ಜೀವ ಬೆದರಿಕೆ ಇದೆ. ಅವನಿಗೆ ಏನು ಮಾಡಿದ್ದಾರೆ ಗೊತ್ತಿಲ್ಲ. ಆತನನ್ನೇ ಕೇಳಬೇಕು” ಎಂದಿದ್ದಾರೆ. ಯಾರು ಕೊಲೆ ಮಾಡಿದ್ದಾರೆ ಎನ್ನುವುದು ನಿಮ್ಮ ಆರೋಪ ಎಂದು ಕೇಳಿದಾಗ, “ಹನುಮೇಶ್ ನಾಯಕ್ ಕೊಲೆ ಮಾಡಿದ್ದಾರೆ ಎಂದು ನಾನು ಹೇಳಿದ್ದೆ” ಎಂದಿದ್ದಾರೆ.
ಪ್ರಕರಣದ ಹಿನ್ನೆಲೆ: ಗದಗದಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಕೊಪ್ಪಳದ ಕನಕಗಿರಿಯ ಹುಲಿಹೈದರ ಗ್ರಾಮದ ವಿದ್ಯಾರ್ಥಿ ಯಲ್ಲಾಲಿಂಗ ತನ್ನ ಗ್ರಾಮದ ಅವ್ಯವಸ್ಥೆ ಕುರಿತು ಟಿವಿ ವಾಹಿನಿಯೊಂದರ ಜೊತೆ ಮಾತನಾಡಿದ್ದರು. ಆ ಬಳಿಕ ಅವರಿಗೆ ಬೆದರಿಕೆಗಳು ಬಂದಿತ್ತು ಎಂದು ಹೇಳಲಾಗ್ತಿದೆ. ಇದಾಗಿ ಕೆಲ ದಿನಗಳಲ್ಲಿ, ಅಂದರೆ 2015ರ ಜನವರಿ 11ರಂದು ಅವರ ಶವ ಕೊಪ್ಪಳ ನಗರದ ರೈಲ್ವೆ ನಿಲ್ದಾಣದ ಬಳಿ ಪತ್ತೆಯಾಗಿತ್ತು.
ಆರಂಭದಲ್ಲಿ ಬೆದರಿಕೆ ಅಂಜಿ ಯಲ್ಲಾಲಿಂಗ ಆತ್ಮಹತ್ಯೆ ಮಾಡಿಕೊಂಡಿರಬಹುದು ಅಂದುಕೊಳ್ಳಲಾಗಿತ್ತು. ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಯುಡಿಆರ್ ದಾಖಲಿಸಿಕೊಂಡಿದ್ದರು. ಆದರೆ, ನಂತರ ಕುಟುಂಬಸ್ಥರು ಯಲ್ಲಾಲಿಂಗ ಸಾವಿನ ಕುರಿತು ಧ್ವನಿ ಎತ್ತಿದ್ದರು. ಯಲ್ಲಾಲಿಂಗ ತನಗೆ ಬೆದರಿಕೆ ಇದೆ ಎಂದು ಚೀಟಿಯಲ್ಲಿ ಕೆಲವರ ಹೆಸರು ಬರೆದಿಟ್ಟಿದ್ದರು ಎಂದು ಹೇಳಿದ್ದರು. ಯಲ್ಲಾಲಿಂಗನ ಕೊಲೆಯಾಗಿದೆ ಎಂದು ಆರೋಪಿಸಿದ್ದರು.
ನಂತರ ಈ ಪ್ರಕರಣ ದೇಶದಾದ್ಯಂತ ಸುದ್ದಿಯಾಗಿತ್ತು. ಹಲವೆಡೆ ಪ್ರತಿಭಟನೆಗಳು ನಡೆದಿತ್ತು. ರಾಜಕೀಯ ತಿರುವುಗಳನ್ನೂ ಪಡೆದುಕೊಂಡಿತ್ತು. ಆ ಬಳಿಕ ಪೊಲೀಸರು ಯಲ್ಲಾಲಿಂಗ ಸಾವಿನ ಸಂಬಂಧ ಕುಟುಂಬಸ್ಥರ ದೂರು ದಾಖಲಿಸಿಕೊಂಡಿದ್ದರು.
ಈ ಪ್ರಕರಣದಲ್ಲಿ, ಈಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿರುವ, ಆಗ ಸಣ್ಣ ನೀರಾವರಿ ಇಲಾಖೆ ಸಚಿವರಾಗಿದ್ದ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕನಕಗಿರಿಯ ಕಾಂಗ್ರೆಸ್ ಶಾಸಕ ಶಿವರಾಜ್ ತಂಗಡಗಿ ಅವರ ಆಪ್ತ ಹನುಮೇಶ್ ನಾಯಕ್ ಅವರ ಹೆಸರು ಪ್ರಮುಖವಾಗಿ ಕೇಳಿ ಬಂದಿತ್ತು.
ಒತ್ತಡ ಹೆಚ್ಚಾಗುತ್ತಿದ್ದಂತೆ ಪೊಲೀಸರು ಹನುಮೇಶ್ ನಾಯಕ್ ಅವರ ಮಗ ಮಹಾಂತೇಶ್ ನಾಯಕ್, ಮನೋಜ್ ಪಾಟೀಲ್, ಬಾಳನಗೌಡ, ಕಾಡ ಮಂಜ, ಯಮನೂರಪ್ಪ, ದುರ್ಗಪ್ಪ, ನಂದೀಶ್, ಪರಶುರಾಮ್ ಎಂಬವರ ವಿರುದ್ದ ಪ್ರಕರಣ ದಾಖಲಿಸಿದ್ದರು.
ಆದರೆ, ಎಫ್ಐಆರ್ ದಾಖಲಾಗಿದ್ದರೂ ಆರೋಪಿಗಳ ಬಂಧನ ಆಗಿರಲಿಲ್ಲ. ಆರೋಪಿಗಳನ್ನು ಬಂಧಿಸುವಂತೆ ಆಗಿನ ವಿಪಕ್ಷ ನಾಯಕರಾಗಿದ್ದ ಬಿ.ಎಸ್ ಯಡಿಯೂರಪ್ಪ ಕೊಪ್ಪಳದಲ್ಲಿ ಪ್ರತಿಭಟನೆ ನಡೆಸಿದ್ದರು. ಅಲ್ಲದೆ, ಯಲ್ಲಾಲಿಂಗನ ಸಾವಿನ ಸಂಬಂಧ ವಿಧಾನಮಂಡಲದಲ್ಲೂ ಚರ್ಚೆಯಾಗಿತ್ತು.
ಪ್ರಕರಣದ ಕಾವು ಪಡೆಯುತ್ತಿದ್ದಂತೆ ರಾಜ್ಯ ಸರ್ಕಾರ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿತ್ತು. ಇದೇ ಸಂದರ್ಭದಲ್ಲಿ ವಿಪಕ್ಷಗಳ ಒತ್ತಡಕ್ಕೆ ಮಣಿದು ಸಚಿವ ಶಿವರಾಜ್ ತಂಗಡಗಿ ತನ್ನ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು.
ಪ್ರಕರಣದ ತನಿಖೆ ವಹಿಸಿಕೊಂಡ ಸಿಐಡಿ, ಹನುಮೇಶ್ ನಾಯಕ್ ಸೇರಿದಂತೆ 9 ಜನ ಆರೋಪಿತರನ್ನು ಬಂಧಿಸಿತ್ತು. ಇವರು ಜಾಮೀನು ಕೋರಿ ಸುಪ್ರೀಂ ಕೋರ್ಟ್ವರೆಗೆ ಹೋದರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಜಾಮೀನು ನಿರಾಕರಿಸಲು ಆರೋಪಿಗಳು ಪ್ರಭಾವಿಗಳು ಎಂಬ ಕಾರಣವನ್ನು ನ್ಯಾಯಾಲಯಗಳು ಕೊಟ್ಟಿತ್ತು. ಪರಿಣಾಮ ಸುಮಾರು ಮೂರು ವರ್ಷಗಳ ಕಾಲ ಹನುಮೇಶ್ ನಾಯಕ್ ಸೇರಿದಂತೆ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದರು.
ನಂತರ ಆರೋಪಿಗಳಿಗೆ ನ್ಯಾಯಾಲಯ ಜಾಮೀನು ಕೊಟ್ಟಿತ್ತು. ಈ ನಡುವೆ ಪ್ರಕರಣವನ್ನು ಸಿಬಿಐ ವಹಿಸುವಂತೆ ಯಲ್ಲಾಲಿಂಗನ ತಾಯಿ ಮನವಿ ಮಾಡಿದ್ದರು. ಆದರೆ, ಯಾವುದೇ ಪ್ರಯೋಜನ ಆಗಿರಲಿಲ್ಲ. ನಂತರ ಸಿಐಡಿ ತನ್ನ ತನಿಖೆ ಮುಗಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ನ್ಯಾಯಾಲಯ ವಿಚಾರಣೆ ನಡೆಸಿ ತೀರ್ಪು ನೀಡಿದೆ.
ಜೆಡಿಎಸ್ ‘ಜಾತ್ಯತೀತ’ ಪದವನ್ನು ಕೈಬಿಟ್ಟು ರಾಜಕಾರಣ ಮಾಡಲಿ: ಸಚಿವ ಪ್ರಿಯಾಂಕ್ ಖರ್ಗೆ


