Homeಕರ್ನಾಟಕವಿದ್ಯಾರ್ಥಿ ಯಲ್ಲಾಲಿಂಗ ಸಾವು ಪ್ರಕರಣ: ಎಲ್ಲ 9 ಆರೋಪಿಗಳು ಖುಲಾಸೆ

ವಿದ್ಯಾರ್ಥಿ ಯಲ್ಲಾಲಿಂಗ ಸಾವು ಪ್ರಕರಣ: ಎಲ್ಲ 9 ಆರೋಪಿಗಳು ಖುಲಾಸೆ

- Advertisement -
- Advertisement -

ದಶಕದ ಹಿಂದೆ (2015ರಲ್ಲಿ) ನಡೆದಿದ್ದ ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕಿನ ಹುಲಿಹೈದರ ಗ್ರಾಮದ ವಿದ್ಯಾರ್ಥಿ ಯಲ್ಲಾಲಿಂಗ ಅವರ ಸಾವಿನ ಪ್ರಕರಣದ ತೀರ್ಪನ್ನು ಕೊಪ್ಪಳದ ಜಿಲ್ಲಾ ನ್ಯಾಯಾಲಯ ಶುಕ್ರವಾರ (ಅಕ್ಟೋಬರ್ 3) ಪ್ರಕಟಿಸಿದೆ.

ಸೆಪ್ಟೆಂಬರ್ 24ರಂದು ಅಂತಿಮ ವಿಚಾರಣೆ ನಡೆಸಿ ಕಾಯ್ದರಿಸಿದ್ದ ತೀರ್ಪನ್ನು ನ್ಯಾಯಾಲಯ ಪ್ರಕಟಿಸಿದ್ದು, ಸಚಿವ ಶಿವರಾಜ್ ತಂಗಡಗಿ ಅವರ ಆಪ್ತ ಹನುಮೇಶ್ ನಾಯಕ್ ಸೇರಿದಂತೆ ಪ್ರಕರಣದ ಎಲ್ಲಾ 9 ಆರೋಪಿಗಳನ್ನು ಖುಲಾಸೆಗೊಳಿಸಿದೆ.

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಆರೋಪಿಗಳ ಪರ ವಕೀಲರು, “ಒಟ್ಟು 9 ಜನರ ವಿರುದ್ದ ಸಿಐಡಿ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ನ್ಯಾಯಾಲಯ 76 ಸಾಕ್ಷಿಗಳನ್ನು ವಿಚಾರಣೆ ನಡೆಸಿತ್ತು. ಈ ಪೈಕಿ 56 ಜನರು ಪ್ರಾಸಿಕ್ಯೂಷನ್ ಪರವಾಗಿ ಸಾಕ್ಷ್ಯ ನುಡಿದಿಲ್ಲ ಎಂಬುವುದನ್ನು ನ್ಯಾಯಾಲಯ ಪರಿಗಣಿಸಿದೆ ಎಂದಿದ್ದಾರೆ.

ಮುಂದುವರಿದು, ಯಲ್ಲಾಲಿಂಗ ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ಅಣ್ಣ ವೀರಭದ್ರಪ್ಪ ಅವರು ಪೊಲೀಸರ ಮುಂದೆ ಕೊಟ್ಟಿರುವ ಲಿಖಿತ ಹೇಳಿಕೆ ಮತ್ತು ಯಲ್ಲಾಲಿಂಗನ ಮೃತದೇಹದ ಮೇಲಿನ ಗಾಯಗಳು ರೈಲು ಡಿಕ್ಕಿಯಿಂದ ಆಗಿರುವ ಸಾಧ್ಯತೆ ಹೆಚ್ಚಿದೆ ಎಂದು ಮರಣೋತ್ತ ಪರೀಕ್ಷೆ ನಡೆಸಿದ ವೈದ್ಯರು ಕೊಟ್ಟಿರುವ ವರದಿಯನ್ನು ನ್ಯಾಯಾಲಯ ಪರಿಗಣನೆಗೆ ತೆಗೆದುಕೊಂಡಿದೆ ಎಂದು ಹೇಳಿದ್ದಾರೆ.

ಈ ಪ್ರಕರಣದಲ್ಲಿ ಹನುಮೇಶ್ ನಾಯಕ್ ಅವರ ಪಾತ್ರ ಇಲ್ಲ ಎಂಬುವುದು ಗೊತ್ತಿದ್ದರೂ, ಅವರನ್ನು ಸುಖಾಸುಮ್ಮನೆ ಬಂಧಿಸಿ ನ್ಯಾಯಾಂಗ ಬಂಧನದಲ್ಲಿ ಇಡಲಾಗಿತ್ತು. ಇದರ ಹಿಂದೆ ರಾಜಕೀಯ ಷಡ್ಯಂತ್ರ ಇತ್ತು ಎಂದು ಆರೋಪಿಸಿದ್ದಾರೆ.

ಹನುಮೇಶ್ ನಾಯಕ್ ಮಾತನಾಡಿ, “ಶಿವರಾಜ್ ತಂಗಡಗಿ ಅವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಬೇಕು ಎಂದು ನನ್ನನ್ನು ಬಂಧಿಸಿದ್ದರು. ಕಳೆದ 10 ವರ್ಷಗಳಿಂದ ನಾವು ಆರೋಪ ಹೊತ್ತಿದ್ದೆವು. ನ್ಯಾಯಾಲಯದ ತೀರ್ಪಿನಿಂದ ನಾವು ನಿರ್ದೋರ್ಷಿಗಳು ಎಂಬುವುದು ಖಚಿತವಾಗಿದೆ. ನಮ್ಮ ಮೇಲಿನ ಆರೋಪ ಸುಳ್ಳಾಗಿತ್ತು. ಇದೀಗ ನ್ಯಾಯಾಲಯದಲ್ಲೂ ಸಾಬೀತಾಗಿದೆ. ನ್ಯಾಯ ದೇವತೆ ನಮಗೆ ನ್ಯಾಯ ದೊರಕಿಸಿ ಕೊಟ್ಟಿದ್ದಾಳೆ” ಎಂದಿದ್ದಾರೆ.

ನ್ಯಾಯಾಲಯದ ತೀರ್ಪಿನ ಕುರಿತು ಟಿವಿ ವಾಹಿನಿಯೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಯಲ್ಲಾಲಿಂಗ ಅವರ ತಾಯಿ, “ನ್ಯಾಯಾಲಯದ ತೀರ್ಪಿನ ಬಗ್ಗೆ ನನಗೆ ಇನ್ನೂ ಯಾವುದೇ ಮಾಹಿತಿ ದೊರೆತಿಲ್ಲ. ನಾನು ಸರ್ಕಾರಿ ವಕೀಲರನ್ನು ಭೇಟಿಯಾಗುತ್ತೇನೆ, ಮುಂದೆ ಏನು ಮಾಡಬೇಕು ಎಂದು ಚರ್ಚೆ ಮಾಡುತ್ತೇನೆ. ನನ್ನ ಮಗನನ್ನು ಕೊಲೆ ಮಾಡಿರುವುದು ಸತ್ಯ, ನನಗೆ ಸುಳ್ಳು ಹೇಳಲು ಬರುವುದಿಲ್ಲ” ಎಂದು ಕಣ್ಣೀರು ಹಾಕಿದ್ದಾರೆ.

ಮುಂದುವರಿದು, “ಹೋರಾಟಗಳಿಂದ ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತದೆ ಎಂದು ಹೇಳಲಾಗಿತ್ತು. ನಾವು ಸಾಕಷ್ಟು ಹೋರಾಟ ಮಾಡಿದ್ದೇವೆ. ಆದರೆ, ಏನೂ ಪ್ರಯೋಜನ ಆಗಿಲ್ಲ. ದುಡ್ಡಿದ್ದವರು ಏನು ಬೇಕಾದರು ಮಾಡುತ್ತಾರೆ, ನಮ್ಮಂತ ಅಮಾಯಕರು ಏನು ಮಾಡೋದು?” ಎಂದು ನಿರಾಸೆ ವ್ಯಕ್ತಪಡಿಸಿದ್ದಾರೆ.

ನಿಮ್ಮ ಮಗ ವೀರಭದ್ರಪ್ಪ ವ್ಯತಿರಿಕ್ತ ಹೇಳಿಕೆ ಕೊಟ್ಟಿದ್ದಾರಲ್ಲ? ಎಂಬ ಟಿವಿ ವಾಹಿನಿಯವ ಪ್ರಶ್ನೆಗೆ ಉತ್ತರಿಸಿದ ಅವರು, “ಆತನಿಗೆ ಜೀವ ಬೆದರಿಕೆ ಇದೆ. ಅವನಿಗೆ ಏನು ಮಾಡಿದ್ದಾರೆ ಗೊತ್ತಿಲ್ಲ. ಆತನನ್ನೇ ಕೇಳಬೇಕು” ಎಂದಿದ್ದಾರೆ. ಯಾರು ಕೊಲೆ ಮಾಡಿದ್ದಾರೆ ಎನ್ನುವುದು ನಿಮ್ಮ ಆರೋಪ ಎಂದು ಕೇಳಿದಾಗ, “ಹನುಮೇಶ್ ನಾಯಕ್ ಕೊಲೆ ಮಾಡಿದ್ದಾರೆ ಎಂದು ನಾನು ಹೇಳಿದ್ದೆ” ಎಂದಿದ್ದಾರೆ.

ಪ್ರಕರಣದ ಹಿನ್ನೆಲೆ: ಗದಗದಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಕೊಪ್ಪಳದ ಕನಕಗಿರಿಯ ಹುಲಿಹೈದರ ಗ್ರಾಮದ ವಿದ್ಯಾರ್ಥಿ ಯಲ್ಲಾಲಿಂಗ ತನ್ನ ಗ್ರಾಮದ ಅವ್ಯವಸ್ಥೆ ಕುರಿತು ಟಿವಿ ವಾಹಿನಿಯೊಂದರ ಜೊತೆ ಮಾತನಾಡಿದ್ದರು. ಆ ಬಳಿಕ ಅವರಿಗೆ ಬೆದರಿಕೆಗಳು ಬಂದಿತ್ತು ಎಂದು ಹೇಳಲಾಗ್ತಿದೆ. ಇದಾಗಿ ಕೆಲ ದಿನಗಳಲ್ಲಿ, ಅಂದರೆ 2015ರ ಜನವರಿ 11ರಂದು ಅವರ ಶವ ಕೊಪ್ಪಳ ನಗರದ ರೈಲ್ವೆ ನಿಲ್ದಾಣದ ಬಳಿ ಪತ್ತೆಯಾಗಿತ್ತು.

ಆರಂಭದಲ್ಲಿ ಬೆದರಿಕೆ ಅಂಜಿ ಯಲ್ಲಾಲಿಂಗ ಆತ್ಮಹತ್ಯೆ ಮಾಡಿಕೊಂಡಿರಬಹುದು ಅಂದುಕೊಳ್ಳಲಾಗಿತ್ತು. ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಯುಡಿಆರ್‌ ದಾಖಲಿಸಿಕೊಂಡಿದ್ದರು. ಆದರೆ, ನಂತರ ಕುಟುಂಬಸ್ಥರು ಯಲ್ಲಾಲಿಂಗ ಸಾವಿನ ಕುರಿತು ಧ್ವನಿ ಎತ್ತಿದ್ದರು. ಯಲ್ಲಾಲಿಂಗ ತನಗೆ ಬೆದರಿಕೆ ಇದೆ ಎಂದು ಚೀಟಿಯಲ್ಲಿ ಕೆಲವರ ಹೆಸರು ಬರೆದಿಟ್ಟಿದ್ದರು ಎಂದು ಹೇಳಿದ್ದರು. ಯಲ್ಲಾಲಿಂಗನ ಕೊಲೆಯಾಗಿದೆ ಎಂದು ಆರೋಪಿಸಿದ್ದರು.

ನಂತರ ಈ ಪ್ರಕರಣ ದೇಶದಾದ್ಯಂತ ಸುದ್ದಿಯಾಗಿತ್ತು. ಹಲವೆಡೆ ಪ್ರತಿಭಟನೆಗಳು ನಡೆದಿತ್ತು. ರಾಜಕೀಯ ತಿರುವುಗಳನ್ನೂ ಪಡೆದುಕೊಂಡಿತ್ತು. ಆ ಬಳಿಕ ಪೊಲೀಸರು ಯಲ್ಲಾಲಿಂಗ ಸಾವಿನ ಸಂಬಂಧ ಕುಟುಂಬಸ್ಥರ ದೂರು ದಾಖಲಿಸಿಕೊಂಡಿದ್ದರು.

ಈ ಪ್ರಕರಣದಲ್ಲಿ, ಈಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿರುವ, ಆಗ ಸಣ್ಣ ನೀರಾವರಿ ಇಲಾಖೆ ಸಚಿವರಾಗಿದ್ದ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕನಕಗಿರಿಯ ಕಾಂಗ್ರೆಸ್ ಶಾಸಕ ಶಿವರಾಜ್ ತಂಗಡಗಿ ಅವರ ಆಪ್ತ ಹನುಮೇಶ್ ನಾಯಕ್ ಅವರ ಹೆಸರು ಪ್ರಮುಖವಾಗಿ ಕೇಳಿ ಬಂದಿತ್ತು.

ಒತ್ತಡ ಹೆಚ್ಚಾಗುತ್ತಿದ್ದಂತೆ ಪೊಲೀಸರು ಹನುಮೇಶ್ ನಾಯಕ್ ಅವರ ಮಗ ಮಹಾಂತೇಶ್ ನಾಯಕ್, ಮನೋಜ್ ಪಾಟೀಲ್, ಬಾಳನಗೌಡ, ಕಾಡ ಮಂಜ, ಯಮನೂರಪ್ಪ, ದುರ್ಗಪ್ಪ, ನಂದೀಶ್, ಪರಶುರಾಮ್ ಎಂಬವರ ವಿರುದ್ದ ಪ್ರಕರಣ ದಾಖಲಿಸಿದ್ದರು.

ಆದರೆ, ಎಫ್‌ಐಆರ್ ದಾಖಲಾಗಿದ್ದರೂ ಆರೋಪಿಗಳ ಬಂಧನ ಆಗಿರಲಿಲ್ಲ. ಆರೋಪಿಗಳನ್ನು ಬಂಧಿಸುವಂತೆ ಆಗಿನ ವಿಪಕ್ಷ ನಾಯಕರಾಗಿದ್ದ ಬಿ.ಎಸ್‌ ಯಡಿಯೂರಪ್ಪ ಕೊಪ್ಪಳದಲ್ಲಿ ಪ್ರತಿಭಟನೆ ನಡೆಸಿದ್ದರು. ಅಲ್ಲದೆ, ಯಲ್ಲಾಲಿಂಗನ ಸಾವಿನ ಸಂಬಂಧ ವಿಧಾನಮಂಡಲದಲ್ಲೂ ಚರ್ಚೆಯಾಗಿತ್ತು.

ಪ್ರಕರಣದ ಕಾವು ಪಡೆಯುತ್ತಿದ್ದಂತೆ ರಾಜ್ಯ ಸರ್ಕಾರ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿತ್ತು. ಇದೇ ಸಂದರ್ಭದಲ್ಲಿ ವಿಪಕ್ಷಗಳ ಒತ್ತಡಕ್ಕೆ ಮಣಿದು ಸಚಿವ ಶಿವರಾಜ್ ತಂಗಡಗಿ ತನ್ನ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು.

ಪ್ರಕರಣದ ತನಿಖೆ ವಹಿಸಿಕೊಂಡ ಸಿಐಡಿ, ಹನುಮೇಶ್ ನಾಯಕ್ ಸೇರಿದಂತೆ 9 ಜನ ಆರೋಪಿತರನ್ನು ಬಂಧಿಸಿತ್ತು. ಇವರು ಜಾಮೀನು ಕೋರಿ ಸುಪ್ರೀಂ ಕೋರ್ಟ್‌ವರೆಗೆ ಹೋದರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಜಾಮೀನು ನಿರಾಕರಿಸಲು ಆರೋಪಿಗಳು ಪ್ರಭಾವಿಗಳು ಎಂಬ ಕಾರಣವನ್ನು ನ್ಯಾಯಾಲಯಗಳು ಕೊಟ್ಟಿತ್ತು. ಪರಿಣಾಮ ಸುಮಾರು ಮೂರು ವರ್ಷಗಳ ಕಾಲ ಹನುಮೇಶ್ ನಾಯಕ್ ಸೇರಿದಂತೆ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದರು.

ನಂತರ ಆರೋಪಿಗಳಿಗೆ ನ್ಯಾಯಾಲಯ ಜಾಮೀನು ಕೊಟ್ಟಿತ್ತು. ಈ ನಡುವೆ ಪ್ರಕರಣವನ್ನು ಸಿಬಿಐ ವಹಿಸುವಂತೆ ಯಲ್ಲಾಲಿಂಗನ ತಾಯಿ ಮನವಿ ಮಾಡಿದ್ದರು. ಆದರೆ, ಯಾವುದೇ ಪ್ರಯೋಜನ ಆಗಿರಲಿಲ್ಲ. ನಂತರ ಸಿಐಡಿ ತನ್ನ ತನಿಖೆ ಮುಗಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ನ್ಯಾಯಾಲಯ ವಿಚಾರಣೆ ನಡೆಸಿ ತೀರ್ಪು ನೀಡಿದೆ.

ಜೆಡಿಎಸ್ ‘ಜಾತ್ಯತೀತ’ ಪದವನ್ನು ಕೈಬಿಟ್ಟು ರಾಜಕಾರಣ ಮಾಡಲಿ: ಸಚಿವ ಪ್ರಿಯಾಂಕ್ ಖರ್ಗೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಫೇಕ್ ಮದುವೆ ಜಾಲಕ್ಕೆ ಬಿದ್ದ ಫೇಮಸ್ ಗೋರಕ್ಷಕ ‘ಬಿಟ್ಟು ಬಜರಂಗಿ’

ಹರಿಯಾಣದಲ್ಲಿ "ಲವ್ ಜಿಹಾದ್" ಮತ್ತು ಅಂತರ್ಧರ್ಮೀಯ ವಿವಾಹಗಳ ವಿರುದ್ಧ ನಿರಂತರವಾಗಿ ಹೋರಾಡುತ್ತಾ, ತನ್ನದೇ ಆದ ಸಾರ್ವಜನಿಕ ಪ್ರಭಾವ ಬೆಳೆಸಿಕೊಂಡಿದ್ದ ರಾಜ್ ಕುಮಾರ್ ಅಲಿಯಾಸ್ ಬಿಟ್ಟು ಬಜರಂಗಿಗೆ ತನಗೆ ಇಂತಹದ್ದೊಂದು ಪರಿಸ್ಥಿತಿ ಎದುರಾಗಬಹುದು ಎಂಬ...

ಕರ್ನಾಟಕದ ಎಸ್‌ಐಆರ್ ಪ್ರಕ್ರಿಯೆಯಲ್ಲಿ ‘ಸಾಮೂಹಿಕ ಅಕ್ರಮ’ ಆರೋಪ: ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಿದ ಎನ್‌ಡಿಎ ನಿಯೋಗ

ಬೆಂಗಳೂರು: ಕರ್ನಾಟಕದಲ್ಲಿ ಸದ್ಯ ಚಾಲ್ತಿಯಲ್ಲಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಭಾರಿ ಪ್ರಮಾಣದ ಸಾಂಸ್ಥಿಕ ಅಕ್ರಮಗಳು ನಡೆಯುತ್ತಿವೆ ಎಂದು ಆರೋಪಿಸಿ, ರಾಜ್ಯದ ಪ್ರಮುಖ ವಿರೋಧ ಪಕ್ಷಗಳಾದ ಬಿಜೆಪಿ ಮತ್ತು...

SIR: ಮತದಾರರ ಹಕ್ಕು ರಕ್ಷಣೆಗೆ ಕಣಕ್ಕಿಳಿದ ‘ನಾಗರಿಕ ಮತ ಕಾವಲು ಸಮಿತಿ’

ರಾಜ್ಯದ ಶೋಷಿತ, ಹಿಂದುಳಿದ ಮತ್ತು ಅಂಚಿನಲ್ಲಿರುವ ಸಮುದಾಯಗಳ ಮತದಾನದ ಹಕ್ಕಿಗೆ ಯಾವುದೇ ಚ್ಯುತಿ ಬಾರದಂತೆ ತಡೆಯಲು ಬೂತ್ ಮಟ್ಟದಿಂದ ಹಿಡಿದು ರಾಜ್ಯ ಮಟ್ಟದವರೆಗೆ ‘ನಾಗರಿಕ ಮತ ಕಾವಲು ಸಮಿತಿ’ಯನ್ನು ಅಸ್ತಿತ್ವಕ್ಕೆ ತರಲಾಗಿದೆ. ಎಸ್‌ಐಆರ್...

ಮೋಹನ್‌ಲಾಲ್ ‘ದಂತ’ ಕಥೆ: ಅರಣ್ಯ ಇಲಾಖೆ ಮುಂದೆ 10 ಆನೆ ದಂತ, 13 ಮೂರ್ತಿಗಳ ಅಚ್ಚರಿಯ ಘೋಷಣೆ!

ನಟ ಮೋಹನ್‌ಲಾಲ್ ಅವರು ತಾವೇ ಕಾನೂನುಬಾಹಿರವಾಗಿ ವನ್ಯಜೀವಿ ವಸ್ತುಗಳನ್ನು ಹೊಂದಿರುವ ಆರೋಪದ ಮೇಲೆ ವಿಚಾರಣೆ ಎದುರಿಸುತ್ತಿದ್ದರೂ, ತಮ್ಮ ಬಳಿ 10 ಆನೆ ದಂತಗಳು ಮತ್ತು 13 ದಂತದ ಮೂರ್ತಿಗಳು ಇರುವುದಾಗಿ ಕೇರಳ ಅರಣ್ಯ...

ಅಯೋಧ್ಯೆ ರಾಮಮಂದಿರ ಹಗರಣ: ‘ಕದ್ದ ಹಣ’ ಹಂಚಿಕೆಯ ಮೊಬೈಲ್ ಚಾಟ್‌ಗಳು ಬಹಿರಂಗ; ತೀವ್ರಗೊಂಡ ತನಿಖೆ

ಲಕ್ನೋ: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ನಿಧಿ ದುರುಪಯೋಗ ಮತ್ತು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ಯಂತ ಸ್ಫೋಟಕ ಮಾಹಿತಿ ಹೊರಬಿದ್ದಿದ್ದು, ತನಿಖೆ ತೀವ್ರಗೊಂಡಿದೆ. ಪ್ರಕರಣದ ಪ್ರಮುಖ ಆರೋಪಿಗಳ ಮೊಬೈಲ್ ಫೋನ್‌ಗಳ...

ಅಪ್ರಾಪ್ತ ಬಾಲಕಿಯ ಅತ್ಯಾಚಾರ-ಕೊಲೆ ಆರೋಪ : ಪ. ಬಂಗಾಳದ ಬಾರುಯಿಪುರದಲ್ಲಿ ಹಿಂಸಾಚಾರ ; ಶಂಕಿತ ಆರೋಪಿಯ ಗುಂಪು ಹತ್ಯೆ

ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಬಾರುಯಿಪುರದಲ್ಲಿ ಶನಿವಾರ (ಜು.4) ಮಧ್ಯಾಹ್ನದಿಂದ ನಾಪತ್ತೆಯಾಗಿದ್ದ ಅಪ್ರಾಪ್ತ ಬಾಲಕಿಯೊಬ್ಬಳ ಶವ ಭಾನುವಾರ (ಜು.5) ಬೆಳಿಗ್ಗೆ ಕೆರೆಯಲ್ಲಿ ಪತ್ತೆಯಾಗಿದ್ದು, ಆ ಬಳಿಕ ಅಲ್ಲಿ ತೀವ್ರ ಹಿಂಸಾತ್ಮಕ...

SIR ಬಳಿಕ ಒಡಿಶಾದ ಕರಡು ಮತದಾರರ ಪಟ್ಟಿ ಪ್ರಕಟ : 20 ಲಕ್ಷ ಹೆಸರುಗಳು ಡಿಲೀಟ್

ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್) ಗಣತಿ ಹಂತದ ಬಳಿಕ ಚುನಾವಣಾ ಆಯೋಗ ಭಾನುವಾರ (ಜು.5) ಒಡಿಶಾದ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿದ್ದು, ಇದರಲ್ಲಿ 20 ಲಕ್ಷಕ್ಕೂ ಹೆಚ್ಚು ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ...

SIR: ಟಾರ್ಗೆಟ್ ಮತ್ತು ಒತ್ತಡದ ಕೆಲಸದಿಂದ ಮೂವರು ಸಿಬ್ಬಂದಿ ಸಾವು

ಕರ್ನಾಟಕದಲ್ಲಿ ನಡೆಯುತ್ತಿರುವ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯು ಕೆಳಹಂತದ ನೌಕರರ ಪಾಲಿಗೆ ಮರಣಶಾಸನವಾಗುತ್ತಿದೆಯೇ ಎಂಬ ಗಂಭೀರ ಪ್ರಶ್ನೆಯೊಂದು ಎದ್ದಿದೆ. ಅಧಿಕಾರಿಗಳು ನೀಡುತ್ತಿರುವ ಅತಿಯಾದ ಒತ್ತಡ ಮತ್ತು ಟಾರ್ಗೆಟ್ ಬೆನ್ನತ್ತುವ ಧಾವಂತದಿಂದಾಗಿ...

ಖಮೇನಿ ಅಂತ್ಯಕ್ರಿಯೆ ವೇಳೆ ಟ್ರಂಪ್ ಉದ್ಧಟತನದ ಹೇಳಿಕೆ: “ಇತಿಹಾಸ, ಗೌರವವಿಲ್ಲದ ದೇಶ ಅಮೆರಿಕ” ಎಂದು ಇರಾನ್ ತೀಕ್ಷ್ಣ ತಿರುಗೇಟು

ಟೆಹ್ರಾನ್: ಇರಾನ್‌ನ ಮಾಜಿ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ನಿಧನದ ನಂತರ ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ಭಾರೀ ವಾಕ್ಸಮರ ಉಂಟಾಗಿದೆ. ಖಮೇನಿ ಅವರ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಒಟ್ಟುಗೂಡಿರುವ ಇರಾನ್‌ನ ಇಡೀ...

ಮ್ಯಾಚ್ ಮಧ್ಯೆ ಕಾಂಡೊಮ್ ಜಾಹೀರಾತು: ಬಿಸಿಸಿಐ ವಿರುದ್ಧ ಕಿಡಿಕಾರಿದ ಮಾಜಿ ಕ್ರಿಕೆಟಿಗ, TMC ಸಂಸದ ಕೀರ್ತಿ ಆಜಾದ್

ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ20 ಅಂತರರಾಷ್ಟ್ರೀಯ ಪಂದ್ಯದ ನೇರ ಪ್ರಸಾರದ ವೇಳೆ ಕಾಂಡೊಮ್ ಜಾಹೀರಾತುಗಳನ್ನು ಪ್ರಸಾರ ಮಾಡಿದ್ದನ್ನು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಮತ್ತು ಮಾಜಿ...